Niruta Publications
  • Home
  • About Us
    • Ramesha's Profile
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Media Mentions
    • Photos
  • Join Our Online Groups
  • Contact Us
Niruta Publications

‘ಆಪರೇಷನ್ ಸುಲೇಮಾನಿ' ಅನ್ನಯಜ್ಞ

6/26/2017

0 Comments

 
Picture
ಪ್ರಶಾಂತ್‍ ನಾಯರ್‍
ಒಂದಾನೊಂದು ಕಾಲದಲ್ಲಿ ಒಬ್ಬ ಒಳ್ಳೆಯ ರಾಜ ಇದ್ದನಂತೆ. ಅವನು, ಅವನ ರಾಜ್ಯದ ಹಸಿದವರಿಗೆ, ಬಡವರಿಗೆ ಆಹಾರ ಒದಗಿಸಲು ಎಲ್ಲೆಂದರಲ್ಲಿ ಅನ್ನ ಛತ್ರಗಳನ್ನು ಸ್ಥಾಪಿಸಿದ್ದನಂತೆ. ಅವನ ರಾಜ್ಯದಲ್ಲಿ ಹಸಿವಿನ ಸೊಲ್ಲು ಸೋತು ಉಡುಗಿತ್ತಂತೆ. ನಾವೆಲ್ಲರೂ ಎಲ್ಲೋ ಕೇಳಿರಬಹುದಾದ ಒಂದು ಜನಪದ ಕಥೆ ಎಂದುಕೊಂಡಿರಾ ? ಊಹುಂ, ಇದು ನಮ್ಮ ಕಾಲದಲ್ಲೇ ಯಾವುದೇ ಅಡೆತಡೆ ಇಲ್ಲದೆ, ಒಂದು ಪವಿತ್ರ ರಿಚ್ಯುವಲ್‍ನಂತೆ ನಡೆಯುತ್ತಿರುವ ಒಂದು ಮಹಾನ್ ಅನ್ನಯಜ್ಞದ ಕಥೆ.
ಕೇರಳದ ಕೋಳಿಕೋಡ್‍ನ ಡಿ.ಸಿ., 36 ವರ್ಷದ ಪ್ರಶಾಂತ್ ನಾಯರ್, 2007ನೇ ಬ್ಯಾಚ್‍ನ ಐ.ಎ.ಎಸ್. ಆಫೀಸರ್. ‘ಆಪರೇಷನ್ ಸುಲೇಮಾನಿ' ಅವರ ಕಲ್ಪನೆಯ ಒಂದು ಮಹತ್ವಾಕಾಂಕ್ಷೆಯ ಯೋಜನೆ. ಆಪರೇಷನ್ ಸುಲೇಮಾನಿ ಎಂದರೆ ಏನು ? ದಿನೇ ದಿನೇ ಗ್ರಾಮಗಳಿಂದ ನಗರಕ್ಕೆ ಅನೇಕ ಕಾರಣಗಳಿಗಾಗಿ ವಲಸೆ ಬರುತ್ತಿರುವ, ಬಡವರಿಗೆ, ಹಸಿದವರಿಗೆ, ಭಿಕ್ಷುಕರಿಗೆ, ಅನಾಥರಿಗೆ, ಗತಿಯಿಲ್ಲದ ವೃದ್ಧರಿಗೆ, ಮನೆ ಮಠ ಇಲ್ಲದ ವಿದ್ಯಾರ್ಥಿಗಳಿಗೆ, ಬೀದಿಬದಿಯ ಬಸುರಿ, ಬಾಣಂತಿಯರಿಗೆ, ಏನೋ ಕಾರಣಕ್ಕೆ ಡಬ್ಬಿ ಮರೆತು ಬಂದ ನೌಕರರಿಗೆ, ಪರ್ಸ್‍ ಕಳೆದುಕೊಂಡ ಅಥವಾ ಪರ್ಸ್‍ನಲ್ಲಿ ಹಣ ಇಲ್ಲದ ಜನಸಾಮಾನ್ಯರಿಗೆ, ಹಾಸ್ಟೆಲ್‍ನಲ್ಲಿ ಮಧ್ಯಾಹ್ನದ ಊಟ ಸಿಕ್ಕದ ವಿದ್ಯಾರ್ಥಿಗಳಿಗೆ, ಪ್ರವಾಸಿಗರಾಗಿ ಹೋದ ನನಗೆ, ನಿಮಗೆ...ಪಟ್ಟಿಯನ್ನು ಎಷ್ಟು ಬೇಕಾದರೂ ಬೆಳಸಬಹುದು-ಇವರೆಲ್ಲರಿಗೂ ಊಟ ದೊರಕಿಸಿಕೊಡುವ ಯೋಜನೆಯೇ ‘ಆಪರೇಷನ್ ಸುಲೇಮಾನಿ'.

ನಾಯರ್ ಈ ಯೋಜನೆಯನ್ನು ಪರಿಕಲ್ಪಿಸಿಕೊಂಡಾಗ, ಅವರ ತಲೆಯಲ್ಲಿದ್ದಿದ್ದು ಒಂದೇ-ತಮ್ಮ ಜಿಲ್ಲೆಯಲ್ಲಿ ಯಾರೂ, ಅದು ಒಂದು ಹೊತ್ತಿನ ಊಟವಾದರೂ ಸರಿಯೇ. ಅದಕ್ಕಾಗಿ ಪಡಿಪಾಟಲು ಪಡಬಾರದು; ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ'ಯೇ ಆದ್ದರಿಂದ ಅದು ಅವರ ಆದ್ಯತೆಯ ವಿಷಯವಾಯಿತು. ಊಟ ಎಲ್ಲರ ಜನ್ಮಸಿದ್ಧ ಹಕ್ಕು ಆಗಿರುವುದರಿಂದ ಅದಕ್ಕಾಗಿ ಯಾರೂ ದೈನ್ಯರಾಗದೇ, ತಮ್ಮ ಘನತೆಯನ್ನು ಕಳೆದುಕೊಳ್ಳದೆ, ಉಸಿರಾಡುವಷ್ಟು ಸಲೀಸಾಗಿ ಎಲ್ಲರಿಗೂ ಊಟ ದೊರಕಿಸಿಕೊಡುವುದು ಹೇಗೆ ಎನ್ನುವುದು ಈ ಡಿ.ಸಿ.ಯ ಸವಾಲಾಗಿತ್ತು. ಹೀಗೆ ಮಾಡುವಾಗಲೇ ಸಾಮುದಾಯಿಕ ಜೀವನದ ಘನತೆ ಮತ್ತು ಮೌಲ್ಯವನ್ನು ಹೆಚ್ಚಿಸುವ ಈ ಕೆಲಸಕ್ಕಾಗಿ ಸಮುದಾಯವನ್ನೇ ತೊಡಗಿಸಿಕೊಳ್ಳುವ, ಅದರ ಮೂಲಕ ಮನುಷ್ಯ ಮತ್ತು ಮನಸ್ಸುಗಳನ್ನು ಮನನೀಯವಾಗಿ ನೇಯುವ ಉದ್ದೇಶ ಕೂಡ ನಾಯರ್‍ಗಿತ್ತು. ಅದು ಕೆರೆಯ ನೀರನು ಕೆರೆಗೆ ಚೆಲ್ಲುವ ಸರಳ ಸಹಜವಾದ ಯೋಗವಾಗಬೇಕಾಗಿತ್ತು.

ಅದಕ್ಕಾಗಿ ನಾಯರ್ ಒಂದು ಉಪಾಯವನ್ನು ಕಂಡು ಹಿಡಿದರು. ಕೋಳಿಕೋಡ್ ಜಿಲ್ಲೆಯನ್ನು 14 ಜೋ಼ನ್‍ಗಳನ್ನಾಗಿ ಮಾಡಿ, ಇಲ್ಲಿನ ಎಲ್ಲಾ ಊರುಗಳ-ಅದು ನಗರ ಆಗಿರಬಹುದು ಅಥವಾ ಗ್ರಾಮ ಆಗಿರಬಹುದು. ಬಸ್‍ಸ್ಟ್ಯಾಂಡ್, ರೈಲ್ವೆ ಸ್ಟೇಷನ್, ಪ್ರಮುಖವಾದ ಅಂಗಡಿಗಳು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕಚೇರಿಗಳಲ್ಲಿ ಊಟದ ಕೂಪನ್ ಲಭ್ಯವಾಗುವಂತೆ ನೋಡಿಕೊಳ್ಳುವುದು. ಯಾರು ಬೇಕಾದರೂ ಈ ಕೂಪನ್‍ಗಳನ್ನು ಪಡೆದುಕೊಳ್ಳಬಹುದು; ಕೂಪನ್ ಕೇಳುವವರಿಗೆ ಯಾರೂ ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ; ನಂತರ ‘ಆಪರೇಷನ್ ಸುಲೇಮಾನಿ'ಯಲ್ಲಿ ನೋಂದಣಿಯಾಗಿರುವ ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಈ ಕೂಪನ್ ಕೊಟ್ಟರೆ ಒಂದು ಸಭ್ಯವಾದ ಊಟ ಸಿಗುತ್ತದೆ. ಇಲ್ಲೂ ಯಾರೂ ಅವರನ್ನು ಅಸಡ್ಡೆ ಮಾಡುವುದಿಲ್ಲ. ಗೌಣವಾಗಿ ನೋಡುವುದಿಲ್ಲ; ಹಣ ಕೊಟ್ಟ ಗ್ರಾಹಕರಿಗೆ ಸಿಗುವ ಮರ್ಯಾದೆಯೇ ಕೂಪನ್ ಕೊಡುವ ವ್ಯಕ್ತಿಗಳಿಗೂ ಸಿಗುತ್ತದೆ. 100ಕ್ಕಿಂತಲೂ ಹೆಚ್ಚು ಹೋಟೆಲ್, ರೆಸ್ಟೋರೆಂಟ್‍ಗಳು ಈ ಯೋಜನೆಯಲ್ಲಿ ಸಂತೋಷದಿಂದ ಸ್ವಯಂಪ್ರೇರಿತರಾಗಿ ಭಾಗವಹಿಸುತ್ತಿವೆ.

ಸರ್ಕಾರದ ಯಾವ ಫಂಡ್‍ನಿಂದ ಇದಕ್ಕೆ ಹಣವನ್ನು ವಿನಿಯೋಗಿಸಲಾಗುತ್ತಿದೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಬಂತೇನು ? ಸರ್ಕಾರ, ಖ್ಯಾತನಾಮರ ಪ್ರಾಯೋಜನೆ ಅಥವಾ ಉಳ್ಳವರ ದಾನದ ದೌಲತ್ತುಗಳನ್ನು ಈ ಯೋಜನೆ ಹತ್ತಿರ ಬಿಟ್ಟುಕೊಳ್ಳುವುದೂ ಇಲ್ಲ. ಜಿಲ್ಲೆಯ ಪ್ರತಿಯೊಂದು ಹೋಟೆಲ್, ರೆಸ್ಟೋರೆಂಟ್ ಮತ್ತು ದರ್ಶಿನಿಗಳಲ್ಲಿ ಸಾರ್ವಜನಿಕರು ತಮಗೆ ಇಷ್ಟ ಬಂದಷ್ಟು ದುಡ್ಡನ್ನು ಹಾಕುವ ಒಂದು ಹುಂಡಿಯಿರುತ್ತದೆ. ಈ ಹುಂಡಿಯ ಹಣವನ್ನು ಜಮಾ ಮಾಡುವುದಕ್ಕೆ ಈ ಯೋಜನೆಯ ಹೆಸರಿನ ಬ್ಯಾಂಕ್ ಅಕೌಂಟ್ ಇರುತ್ತದೆ. ತಿಂಗಳಿಗೊಮ್ಮೆ ಈ ಎಲ್ಲಾ ಹಣವನ್ನು ಸ್ವಯಂ ಸೇವಕರಾದ ಯುವಕರು ಬ್ಯಾಂಕಿಗೆ ಕಟ್ಟಿ, ಕೂಪನ್ ಮುದ್ರಣದ ಖರ್ಚು, ಊಟ ಹಾಕುವ ಹೋಟೆಲ್‍ಗಳ ಖರ್ಚನ್ನು ಚುಕ್ತಾ ಮಾಡುತ್ತಾರೆ. ಸರ್ಕಾರದ ಯಾವುದೇ ವ್ಯವಸ್ಥೆ ನಾಚಿ ನೀರಾಗುವಷ್ಟು ಸಮರ್ಪಕವಾಗಿ ‘ಆಪರೇಷನ್ ಸುಲೇಮಾನಿ' ಕಾರ್ಯ ನಿರ್ವಹಿಸುತ್ತಿದೆ.

ಏಪ್ರಿಲ್ 2015ರಲ್ಲಿ ಪ್ರಾರಂಭವಾದ ಈ ಯೋಜನೆ ಕೆಲವೇ ವಾರಗಳಲ್ಲಿ ಮನೆಮಾತಾಗಿಬಿಟ್ಟಿತು. ಇದರ ಯಶಸ್ಸನ್ನು ಹೈಜಾಕ್ ಮಾಡಲು ‘ದೊಡ್ಡ' ಮನುಷ್ಯರೆಲ್ಲಾ ಮುಗಿಬಿದ್ದರು. ನೋ, ‘ಆಪರೇಷನ್ ಸುಲೇಮಾನಿ' ಯಾರಿಗೂ ಕ್ಯಾರೆ ಅನ್ನಲಿಲ್ಲ. ಈ ಯೋಜನೆ ಪ್ರಾರಂಭವಾದ ಎರಡನೇ ದಿನವೇ ನಾಯರ್‍ಗೆ 1 ಕೋಟಿ ರೂಪಾಯಿಗಳ ಡೊನೇಷನ್ ಬಂತಂತೆ, ನಮ್ಮ ಡಿ.ಸಿ. ಸಾಹೇಬರು ಅದನ್ನು ನಯವಾಗಿ ತಿರಸ್ಕರಿಸಿದರಂತೆ ! ಕೇವಲ ಸ್ವಯಂ ಸೇವಕರು, ಸ್ವಪ್ರೇರಿತ ಉಪಹಾರ ಮಂದಿರಗಳು ಮಾತ್ರ ಈ ಮಾಂತ್ರಿಕವಾದ ‘ಶೋ' ಅನ್ನು ಅಹೋರಾತ್ರಿ ದಣಿವಿಲ್ಲದೆ, ಬದುಕಿನ ಸಾರ್ಥಕ್ಯವನ್ನು ಅನುಭವಿಸುವುದಕ್ಕೆ ನಡೆಸುತ್ತಿವೆಯಂತೆ.

ನಾಯರ್ ಹೊಸ ಅನ್ನಛತ್ರ ನಿರ್ಮಿಸಲಿಲ್ಲ, ಬಾಣಸಿಗರನ್ನು ನೇಮಿಸಿಕೊಳ್ಳಲಿಲ್ಲ. ರೇಷನ್ ಯಾರೋ ಕದ್ದುಕೊಂಡು ಹೋಗುತ್ತಾರೆ ಎನ್ನುವ ಆತಂಕವಿಲ್ಲ. ದಿನಾ ಎಷ್ಟು ಅಡುಗೆ ಮಾಡಬೇಕು, ಎಷ್ಟು ಜನ ಬರುತ್ತಾರೆ ಎಂಬ ಚಿಂತೆಯಿಲ್ಲ. ಸಿದ್ಧಪಡಿಸಿದ ಆಹಾರ ಉಳಿದುಹೋಯಿತು ಎಂಬ ತಲೆನೋವಿಲ್ಲ...ಎಲ್ಲಾ ಅದರ ಪಾಡಿಗೆ ಅದೇ ನಡೆದುಕೊಂಡು ಹೋಗುತ್ತಿದೆಯಂತೆ....

ಇಂಥ ಪ್ರಶಾಂತ್ ನಾಯರ್‍ಗಳ ಸಂತತಿ ಸಾವಿರವಾಗಲಿ. ನಮ್ಮ ಲೂಟಿಕೋರ ರಾಜಕಾರಣಿಗಳಿಗೆ ಇದೊಂದು ಮಾರ್ಗದರ್ಶಿಯಾಗಲಿ.
​
ಇಂದೂಧರ ಹೊನ್ನಾಪುರ
ಕೃಪೆ : ಅಗ್ನಿ
7, ಜುಲೈ, 2016
​ಸಂಪುಟ-19, ಸಂಚಿಕೆ-38
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture
    For more details

    Picture
    For more details

    Picture
    For more details

    Picture
    For more details

    Picture
    For more details

    Picture
    For more details

    Niruta Publications

    Social Work Foot Prints

    Leaders Talk

    Ramesha Niratanka


    Picture

    MHR LEARNING ACADEMY

    Get it on Google Play store
    Download App
    Online Courses

    RSS Feed

Niruta Publications Books (Dec 2025)
File Size: 756 kb
File Type: pdf
Download File



SITE MAP


Site

  • HOME
  • ABOUT US
  • BLOG​
  • HR BLOG
  • PUBLICATION WITH US
  • NIRUTA PRINTS​
  • JOIN OUR ONLINE GROUPS
  • VIDEOS​

NIRATHANKA

  • ​CSR
  • TREE PLANTATION PROJECT
  • MIGRANT WORKER RESIDENTIAL FACILITY & WELFARE MANAGEMENT SERVICES

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
For More Details
Picture
More Details

Copyright Niruta Publications 2021,    Website Designing & Developed by: www.mhrspl.com