ಯಾವಾಗಲಾದರೂ ನಾನು ಅಧಿಕೃತ ಅರ್ಜಿಯನ್ನು ತುಂಬುವಾಗ, ನನ್ನ ಉದ್ಯೋಗವನ್ನು ಅದರಲ್ಲಿ ನಮೂದಿಸುವಾಗ, ನಾನು 'ಸಮಾಜಕಾರ್ಯಕರ್ತ' ಎಂಬ ಶಬ್ದವನ್ನು ಉಪಯೋಗಿಸುತ್ತೇನೆ. ಇಷ್ಟೇ ನನಗಿರುವ ಅಧಿಕಾರ ನಿಮ್ಮ ಮಧ್ಯೆ ನಾನಿರುವುದಕ್ಕೆ. ನಾನು ಸಮಾಜವಿಜ್ಞಾನಿಗಳ ಈ ಶಾಖೆಯ ವಿದ್ಯಾರ್ಥಿಯೂ ಅಲ್ಲ, 'ಸಮಾಜಕಾರ್ಯಕರ್ತ' ಎಂಬ ಶಬ್ದವನ್ನು ನೀವೆಲ್ಲರೂ ಅರ್ಥಮಾಡಿಕೊಂಡಿರುವ ಪ್ರಕಾರ ನಾನು ತಾಂತ್ರಿಕವಾಗಿ ಸಾಮಾಜಕಾರ್ಯಕರ್ತನೂ ಅಲ್ಲ. ಹೆಚ್ಚು ಸೂಕ್ತವಾಗಿ ಹೇಳುವುದಾದರೆ ನನ್ನನ್ನು ನಾನು ರಚನಾತ್ಮಕ ಕಾರ್ಯಕರ್ತನೆಂದು ಕರೆದುಕೊಳ್ಳಬೇಕು. ಗಾಂಧೀಯುಗದಿಂದಲೂ ಸುಪರಿಚಿತವಾದದ್ದು ಈ ಶಬ್ದ; ಆ ಯುಗದ ಅನೇಕ ಶಬ್ದಗಳಂತೆ ಈ ಶಬ್ದವೂ ಅನುಪಯೋಗಿಯಾಗುತ್ತಿದೆಯೆನ್ನಿ ನಾನು ಅರ್ಥಮಾಡಿಕೊಂಡಂತೆ, ಗಾಂಧೀಯ ಪರಿಕಲ್ಪನೆಯ ಸಮಾಜಕಾರ್ಯ ಅಥವಾ ರಚನಾತ್ಮಕ ಕಾರ್ಯ ಇದರ ಬಗ್ಗೆ ನಿಮ್ಮೊಂದಿಗೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸಬಯಸುತ್ತೇನೆ. ಈ ದೇಶದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಚಲಿತದಲ್ಲಿರುವ ಗಾಂಧೀಯ ರಚನಾತ್ಮಕ ಕಾರ್ಯಕ್ಕೂ ತಾಂತ್ರಿಕವಾಗಿ ಅರ್ಥೈಸಲ್ಪಡುವ ಸಮಾಜಕಾರ್ಯಕ್ಕೂ ಸೇತುವೆಯನ್ನು ನಿರ್ಮಿಸಬೇಕೆಂಬ ಆಸಕ್ತಿಯನ್ನು ನಿಮ್ಮಲ್ಲಿ ಕೆಲವರಾದರೂ ಹೊಂದಿ ಈ ಕಾರ್ಯವನ್ನು ಮುಂದುವರಿಸುತ್ತೀರೆಂದು ನಾನು ನಂಬಿದ್ದೇನೆ. ರಾಷ್ಟ್ರೀಯ ಅಂದೋಲನ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ರಚನಾತ್ಮಕ ಕಾರ್ಯಕ್ರಮವು ಗಾಂಧೀಜಿಯವರಿಂದ ರಾಷ್ಟ್ರೀಯ ಕ್ರಾಂತಿಕಾರೀ ಆಂದೋಲನದ ಭಾಗವಾಗಿ ಸೃಷ್ಟಿಸಲ್ಪಟ್ಟು ಪೋಷಿಸಲ್ಪಟ್ಟಿತು. ಅನೇಕ ವೇಳೆ ಇದನ್ನು ರಚನಾತ್ಮಕ ಕಾರ್ಯದ ಮೂಲಕ ನಡೆಸುವ ಸಾಮಾಜಿಕ ಕ್ರಾಂತಿ ಅಥವಾ ರಾಷ್ಟ್ರೀಯ ಕ್ರಾಂತಿ ಎಂದು ನಾವು ಬಗೆಯುತ್ತೇವೆ. ರಾಷ್ಟ್ರೀಯ ಆಂದೋಲನದಲ್ಲಿ ಭಾಗವಹಿಸಿದ ನಮ್ಮಲ್ಲಿನ ಕೆಲವರು ಅದರ ಯಶಸ್ಸಿಗೆ ರಚನಾತ್ಮಕ ಕಾರ್ಯಕ್ರಮ ಅಥವಾ ರಚನಾತ್ಮಕ ಚಟುವಟಿಕೆಗಳ ಕಾರಣ ಅಥವಾ ಕೊನೆಗೆ, ಬಿಡುಗಡೆಯ ಹೋರಾಟದ ಅಹಿಂಸೆಯ ಭಾಗಕ್ಕಾದರೂ ರಚನಾತ್ಮಕ ಕಾರ್ಯಕ್ರಮ ಅಥವಾ ರಚನಾತ್ಮಕ ಚಟುವಟಿಕೆಗಳು ಬಹುಮಟ್ಟಿನ ಕಾಣಿಕೆಯನ್ನು ನೀಡಿದವೆಂದರೆ ನನ್ನೊಡನೆ ನೀವು ದನಿಗೂಡಿಸುತ್ತೀರೆಂಬುದನ್ನು ನಾನು ಬಲ್ಲೆ. ಈ ರಚನಾತ್ಮಕ ಕಾರ್ಯದ ಮೂಲಕವೆ ರಾಷ್ಟ್ರೀಯ ನಾಯಕರಿಗೆ ಭಾರತೀಯ ಜನಸಮ್ಮರ್ದದೊಡನೆ ಸಂಪರ್ಕವನ್ನು ಸ್ಥಾಪಿಸಲು ಸಾಧ್ಯವಾದದ್ದು; ರಚನಾತ್ಮಕ ಕಾರ್ಯದ ಮೂಲಕವೇ ಜನರಿಗೆ ಸೇವೆಯನ್ನು ಒದಗಿಸಲು ಸಾಧ್ಯವಾದದ್ದು; ರಚನಾತ್ಮಕ ಕಾರ್ಯಕ್ರಮವು ನೆರವೇರಿಸಿದ ಶೈಕ್ಷಣಿಕ ಕ್ರಿಯೆಯಿಂದಲೇ ಬೃಹತ್ ಪ್ರಮಾಣದಲ್ಲಿ ಜನರಾಶಿಯನ್ನು ರಾಷ್ಟ್ರೀಯ ಆಂದೋಲನದೆಡೆಗೆ ಆಕರ್ಷಿಸಲು ಸಾಧ್ಯವಾದದ್ದು. ರಾಷ್ಟ್ರೀಯ ಆಂದೋಲನದ ರಾಜಕೀಯ ಅಂಗವು ರಚನಾತ್ಮಕ ಕಾರ್ಯಕರ್ತರ ಮತ್ತು ರಚನಾತ್ಮಕ ಕಾರ್ಯಕ್ರಮದ ಮೇಲೆಯೇ ಬಹುವಾಗಿ ಅವಲಂಬಿತವಾಗಿದ್ದುದು. ಕೆಲವೊಮ್ಮೆ ಅವರಲ್ಲಿ ಕೆಲವರು ರಾಜಕೀಯ ಕಾರ್ಯಕರ್ತರೂ ಆಗಿರುತ್ತಿದ್ದರು; ರಚನಾತ್ಮಕ ಕಾರ್ಯಕರ್ತರೂ ಆಗಿರುತ್ತಿದ್ದರು. ಆದರೆ ಬಹುಮಟ್ಟಿಗೆ ಕಾರ್ಯವಿಭಜನೆಯಿತ್ತು ಅವರವರೊಳಗೆ. ಆದಾಗ್ಯೂ ಅಹಿಂಸೆಯಲ್ಲಿನ ಶಿಸ್ತು ಮತ್ತು ರಚನಾತ್ಮಕ ಕಾರ್ಯದ ಮೂಲಕ ಸಿದ್ಧವಾದ ತಯಾರಿ- ಈ ಎರಡಿಲ್ಲದಿದ್ದರೆ ಜನರಾಶಿಯ ಸತ್ಯಾಗ್ರಹವು ಸಾಧ್ಯವಾಗುತ್ತಲೇ ಇರಲಿಲ್ಲ, ಎಂಬುದು ಅವರೆಲ್ಲರಿಗೂ ಮನವರಿಕೆಯಾಗಿತ್ತು. ಈಗಿನ ಪ್ರಶ್ನೆ ಸ್ವಾತಂತ್ರ್ಯಾನಂತರದಲ್ಲಿ ಒಂದು ಪ್ರಶ್ನೆ ಉದ್ಭವವಾಗಿದೆ. ಸಾಮಾಜಿಕ ಅಭಿವೃದ್ಧಿ, ರಾಷ್ಟ್ರೀಯ ಅಭಿವೃದ್ಧಿ, ರಾಷ್ಟ್ರೀಯ ಪುನರುತ್ಥಾನ, ಆರ್ಥಿಕ ಅಭಿವೃದ್ಧಿ, ಸಾಂಸ್ಕೃತಿಕ ಹಾಗೂ ಮಾನವ ಅಭಿವೃದ್ಧಿ- ಈ ಇಡಿಯ ಕಾರ್ಯದೊಡನೆ ರಚನಾತ್ಮಕ ಕಾರ್ಯಕ್ಕಿರುವ ಸಂಬಂಧವೇನು, ಅದರ ಸ್ಥಾನ ಹಾಗೂ ವ್ಯಾಪ್ತಿಯೇನು, ಇತ್ಯಾದಿ. ಗಾಂಧೀಯವರ ಮರಣಾನಂತರ ಅವರ ಕಾರ್ಯದರ್ಶಿ ಶ್ರೀ ಪ್ಯಾರೇಲಾಲ್ ಗಾಂಧೀಜಿಯವರ ಕೊನೆಯ ಉಯಿಲು ಮತ್ತು ಒಡಂಬಡಿಕೆ, ಎಂದು ವರ್ಣಿಸಲಾಗಿರುವ ಒಂದು ದಾಖಲೆಯನ್ನು ಪ್ರಕಟಿಸಿದ್ದುದು ನಿಮಗೆಲ್ಲರಿಗೂ, ಕೊನೆಗೆ ಭಾರತೀಯ ಪ್ರತಿನಿಧಿಗಳಿಗಾದರೂ ಗೊತ್ತಿದೆ, ಎಂದು ನನಗೆ ಖಾತ್ರಿಯಿದೆ. ಅದನ್ನು ಗಾಂಧೀಜಿಯವರು ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ನಿರ್ಣಯದ ಕರಡು, ಎಂದು ಸಿದ್ಧಗೊಳಿಸಿದ್ದರು; ನಾನಂದುಕೊಳ್ಳುತ್ತೇನೆ, ಅದನ್ನು ಅವರು ಇನ್ನೂ ಪರಿಷ್ಕರಿಸುತ್ತಿದ್ದರು. ಸ್ವಾತಂತ್ರ್ಯೋತ್ತರದ ಸಮಾಜಸೇವೆ ಎನ್ನಿ, ರಚನಾತ್ಮಕ ಕಾರ್ಯವೆನ್ನಿ, ಸಮಾಜಕಾರ್ಯವೆನ್ನಿ, ಯಾವ ಪದಗುಚ್ಛವನ್ನೇ ಉಪಯೋಗಿಸಿರಿ, ಅದರ ಇಡೀ ಪರಿಕಲ್ಪನೆಯನ್ನು ಈ ದಾಖಲೆಯು ಎಷ್ಟು ಸಾಧ್ಯವೊ ಅಷ್ಟು ಕಿರಿದಾಗಿ ನಮ್ಮಿದಿರು ಇರಿಸುತ್ತದೆ. ಅದರ ಆ ಭಾಗವನ್ನು ನಿಮ್ಮಿದಿರು ಓದಿದರೆ ಅದು ಉಪಯೋಗವಾದೀತು, ನಿಮ್ಮ ನೆನಪಿಗೊಂದು ಹೊಗರು ಒದಗೀತು, ಎಂದು ಭಾವಿಸುತ್ತೇನೆ. ಅವರು ಹೇಳಿದರು : ಎರಡು ತುಂಡಾದರೂ ಭಾರತವು ರಾಜಕೀಯ ಸ್ವಾತಂತ್ರ್ಯವನ್ನು ಪಡೆದದ್ದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸಾಧನೆಗಳ ಮೂಲಕ. ಆದರೆ, ತನ್ನ ಇಂದಿನ ರೂಪ ಮತ್ತು ಆಕಾರಗಳಿಂದ, ಅಂದರೆ, ಪ್ರಚಾರದ ಮತ್ತು ಪಾರ್ಲಿಮೆಂಟರಿಯ ಯಂತ್ರವಾಗಿ, ಅದು ಮುಂದುವರಿಯುವುದು ನಿರುಪಯುಕ್ತ. ತನ್ನ ನಗರ ಮತ್ತು ಪಟ್ಟಣಗಳಿಂದ ಪ್ರತ್ಯೇಕವಾಗಿರುವ ಏಳು ಲಕ್ಷ ಹಳ್ಳಿಗಳ ದೃಷ್ಟಿಯಲ್ಲಿ ಭಾರತವು ಸಾಮಾಜಿಕ, ನೈತಿಕ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ಇನ್ನೂ ಪಡೆಯಬೇಕಾಗಿದೆ. ಪ್ರಜಾಪ್ರಭುತ್ವದ ಗುರಿಯೆಡೆಗೆ ಸಾಗುವ ಭಾರತದ ಪ್ರಗತಿಪಥದಲ್ಲಿ ಸೈನಿಕ ಶಕ್ತಿಯ ಮೇಲೆ ನಾಗರಿಕ ಶಕ್ತಿಯು ಪ್ರಭುತ್ವವನ್ನು ಗಳಿಸತಕ್ಕಂಥ ಹೋರಾಟಕ್ಕೆ ಸ್ಥಾನ ದೊರೆಯಬೇಕು. ರಾಜಕೀಯ ಪಕ್ಷಗಳು ಮತ್ತು ಜಾತೀಯ ಸಂಸ್ಥೆಗಳೊಡನೆ ಅದು ಅನಾರೋಗ್ಯಕರವಾದ ಸ್ಪರ್ಧೆಯನ್ನು ಹೂಡಕೂಡದು. ಈ ಮತ್ತು ಇಂತಹ ಕಾರಣಗಳಿಗಾಗಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಸಂಸ್ಥೆಯನ್ನು ವಿಸರ್ಜಿಸಲೂ, ಕೆಳಗೆ ನಮೂದಿಸಿರುವ ನಿಯಮಗಳಿಗೆ ಅನುಗುಣವಾಗಿ ಮತ್ತು ಸಂದರ್ಭಕ್ಕನುಗುಣವಾಗಿ ಮಾರ್ಪಡುವ ಒಂದು ಲೋಕಸೇವಕ ಸಂಘವಾಗಿ ಅರಳಬೇಕೆಂತಲೂ ಏ.ಐ.ಸಿ.ಸಿ.ಯು ನಿರ್ಣಯಿಸುತ್ತದೆ. ಈ ಗಾಂಧೀಯ ಅರ್ಥದಲ್ಲಿ ಸಮಾಜಸೇವೆಯು ('ಲೋಕಸೇವಾ') ಭಾರತೀಯರ ಸಾಮಾಜಿಕ, ನೈತಿಕ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕಿಂತ ಕಡಿಮೆಯಲ್ಲದ ಗುರಿಯನ್ನು ಹೊಂದಿದೆ. ಜೊತೆಗೆ ನಾಗರಿಕ ಶಕ್ತಿಯು ಸೈನಿಕ ಶಕ್ತಿಯ ಮೇಲೆ ಸಾರ್ವಭೌಮತ್ವವನ್ನು ಸ್ಥಾಪಿಸಿರುವಂಥ ಸ್ಥಿತಿಗೆ ಭಾರತವನ್ನು ಕೊಂಡೊಯ್ಯುವ ಗುರಿಯನ್ನೂ ಅದು ಹೊಂದಿದೆ. ನಾನು ಈಗ ತಾನೇ ಓದಿದ ಗಾಂಧೀಜಿಯವರ ಮಾತುಗಳ ಮೇರೆಗೆ ಅವರು ಕಲ್ಪಿಸಿದ್ದುದು ರಾಜಕೀಯ ಕ್ರಿಯೆಯಲ್ಲ. ಆದರೆ ಸಾಮಾಜಿಕ ಕ್ರಿಯೆ, ಅಂದರೆ, ರಚನಾತ್ಮಕ ಕಾರ್ಯ ಅಥವಾ ಸಮಾಜಕಾರ್ಯ, ಇದರ ಮೂಲಕ ಕ್ರಾಂತಿ, ಎಂಬುದೇ ಅವರ ಮಾತಿನ ಅರ್ಥ. ಇದು ಈ ವಿಚಾರ ಸಂಕಿರಣದ ವಿಶೀಷ ಆಸಕ್ತಿ ಆಗಿರಬೇಕಾಗಿದೆ. ಚೈತನ್ಯಹೀನ ಜನ ನಾನೀಗ ಈ ವಿಚಾರಸಂಕಿರಣದ ವಿಷಯದ ಬಗ್ಗೆ, ಅಂದರೆ, ಅಭಿವೃದ್ಧಿಶೀಲ ಆರ್ಥಿಕತೆಯಲ್ಲಿ ಸಮಾಜಕಾರ್ಯದ ಅಥವಾ ಸಮಾಜಕಲ್ಯಾಣದ ಸ್ಥಾನವೇನು, ಎಂಬುದರ ಬಗ್ಗೆ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇಚ್ಛಿಸುತ್ತೇನೆ. ನನ್ನ ಅನುಭವವು ಮುಖ್ಯವಾಗಿ ಹಳ್ಳಿಗಾಡಿಗೆ ಸಂಬಂಧಿಸಿದೆ. ಯಾವ ತೆರನ ಸಹಕಾರೀ ಪ್ರಯತ್ನವೊ ಒಂದಿಷ್ಟೂ ಅಲ್ಲಿ ಕಾಣುತ್ತಿಲ್ಲ. ಆ ಗ್ರಾಮ ಸಮುದಾಯದಲ್ಲಿ ಪ್ರತಿಯೊಂದು ಕುಟುಂಬವೂ ತನ್ನ ಜೀವನ ನಿರ್ವಹಣೆಗಾಗಿ ಕಠಿಣ ಶ್ರಮವಹಿಸುತ್ತಿದೆಯೆಂಬುದೇನೊ ನಿಜವೇ. ಆದರೇ, ಅಲ್ಲಿ ಸಾಮೂಹಿಕ ಅಥವಾ ಸಹಕಾರೀ ಕ್ರಿಯೆಯ ಚೈತನ್ಯ ಇಲ್ಲ. ನಾವು ಸಾಮಾಜಿಕ ಅಭಿವೃದ್ಧಿಯ ಯಾವುದೇ ವಲಯವನ್ನು ದೃಷ್ಟಿಯಲ್ಲಿರಿಸಿಕೊಂಡಿರಲಿ ಈ ದೇಶದಲ್ಲಿ ಸಾಮೂಹಿಕ ಅಥವಾ ಸಹಕಾರೀ ಪ್ರಯತ್ನವನ್ನು ಅಭಿವೃದ್ಧಿಪಡಿಸದೇ ಇದ್ದರೆ ಬಹು ಮುಂದೆ ಸಾಗಲು ಇಂತಿಷ್ಟೂ ಸಾಧ್ಯವಿಲ್ಲ. ಪ್ಲಾಸ್ಟರ್ ಆಫ್ ಪ್ಯಾರಿಸ್ ಕವಚದಲ್ಲಿ ಹುದುಗಿಸಿ ಕಟ್ಟಿ ಬಹುಕಾಲ ಚಲನೆಯಿಲ್ಲದಂತೆ ಇರಿಸಿಕೊಂಡಿರುವ ಮಾನವ ಶರೀರದ ಅಂಗವು ಬತ್ತಿ ಹೋಗುವ ಸ್ಥಿತಿಗೆ ಈ ನಮ್ಮ ದೇಶದ ಸ್ಥಿತಿಯನ್ನು ಅನೇಕ ವೇಳೆ ನಾನು ಹೋಲಿಸುತ್ತೇನೆ. ವ್ಯಕ್ತಿಯ ಬತ್ತಿಹೋದ ಅಂಗವು ಅವನ ಪ್ರಜ್ಞೆಗೆ ಪ್ರತಿ ಸ್ಫಂದಿಸುವುದಿಲ್ಲ. ಅದೇ ತೆರನಾಗಿ ಒಂದು ಶತಮಾನಕ್ಕಿಂತಲೂ ಹೆಚ್ಚು ಸಮಯವಿದ್ದ ರಾಷ್ಟ್ರೀಯ ದಾಸ್ಯವು ಈ ದೇಶದ ಜನರನ್ನು ಚೈತನ್ಯಹೀನರನ್ನಾಗಿಸಿದೆ; ಆದುದರಿಂದಲೇ ಮೇಲಿನಿಂದ ಬರುವ ಆಜ್ಞೆಗಳಿಗೆ ಅವರು ಪ್ರತಿಸ್ಪಂದಿಸುವಲ್ಲಿ ಅಶಕ್ತರಾಗಿದ್ದಾರೆ. ಯೋಜನಾ ಆಯೋಗದ ಮಟ್ಟದಲ್ಲಿ ಅಥವಾ ಕೇಂದ್ರ ಸರಕಾರದ ಹಂತದಲ್ಲಿ, ಅಥವಾ ಸರಕಾರದ, ಜಿಲ್ಲಾ ಪರಿಷತ್ತಿನ ಮತ್ತಿತರ ಮಟ್ಟಗಳಲ್ಲಿ ರೂಪಿಸಿದ ಯಾವ ಧ್ಯೇಯ-ಧೋರಣೆಗಳೇ ಆಗಲೀ, ಯಾವ ಕಾರ್ಯಕ್ರಮಗಳೇ ಆಗಲಿ ಜನರು ಜೊತೆಗೂಡಿ ತಮ್ಮ ಸಾಮಾನ್ಯ ಸಮಸ್ಯೆಗಳನ್ನು ಇದಿರಿಸುವ ಶಕ್ತಿಯನ್ನು ಸಂಪಾದಿಸುವಂಥ ಸಾಮೂಹಿಕ ಯತ್ನವನ್ನು ಅಭಿವೃದ್ಧಿಗೊಳಿಸದಿದ್ದರೆ ಆ ಯಾವ ಧ್ಯೇಯ-ಧೋರಣೆಗಳೂ, ಕಾರ್ಯಕ್ರಮಗಳೂ ಸಂಪೂರ್ಣವಾಗಿ ಮತ್ತು ತೃಪ್ತಿಕರವಾಗಿ ಅನುಷ್ಠಾನಗೊಳ್ಳುವುದಿಲ್ಲ, ಎಂಬುದು ನನಗೆ ಖಾತ್ರಿಯಿದೆ. ಸರಕಾರ ಮತ್ತು ಯೋಜನಾ ಆಯೋಗದ ಮಟ್ಟದಲ್ಲಿ ಸಾರ್ವಜನಿಕ ಸಹಕಾರ, ಸಾರ್ವಜನಿಕ ಸಹಕಾರದ ಅಭಾವ, ಇತ್ಯಾದಿ ಹೇಳಿಕೆಗಳನ್ನು ನಾವೆಲ್ಲ ಕೇಳುತ್ತಿದ್ದೇವೆ. ನನಗನ್ನಿಸಿದಂತೆ, ನಾನೀಗ ಹೇಳಿದ ರೀತಿಯ ಸಮಾಜಕಾರ್ಯವು ಸೇವೆ, ಶಿಕ್ಷಣ ಮತ್ತು ಜನರೊಡನೆ ಸತತವಾಗಿ ಹೊಂದಿದ ಸಂಪರ್ಕದ ಮೂಲಕ ನೀಡುವ ಕಾಣಿಕೆ. ಈ ಯೋಜನೆಯನ್ನೋ ಅಥವಾ ಆ ಯೋಜನೆಯನ್ನೋ ಕಾರ್ಯಗತಗೊಳಿಸಲು ಬರಿಯ ಹಣ ಖರ್ಚುಮಾಡುವುದರಿಂದ, ತಾಂತ್ರಿಕ ಸಲಹೆಯನ್ನು ನೀಡುವುದರಿಂದ ಮತ್ತು ಆಡಳಿತ ಯಂತ್ರವೊಂದನ್ನು ನಿರ್ಮಿಸುವುದರಿಂದ ಈ ಶಕ್ತಿಯನ್ನು ಸೃಜಿಸಲು ಸಾಧ್ಯವಿಲ್ಲ. ಗ್ರಾಮಗಳ ನಡುವೆ ಆದುದರಿಂದ ನಾನು ಹೇಳುತ್ತಿರುವುದು ರಾಷ್ಟ್ರೀಯ ಅಭಿವೃದ್ಧಿಯ ಬುನಾದಿಯಲ್ಲಿಯೇ, ಮುಖ್ಯವಾಗಿ ಎಲ್ಲಿ ಶೇಖಡಾ 82ಕ್ಕಿಂತಲೂ ಹೆಚ್ಚು ಜನರು ವಾಸಿಸುತ್ತಿದ್ದಾರೊ ಅಂಥ ಗ್ರಾಮೀಣ ಕ್ಷೇತ್ರಗಳ ಅಭಿವೃದ್ಧಿಯ ಬುನಾದಿಯಲ್ಲಿಯೇ ಜನರು ಜೊತೆಗೂಡಿ ಆಲೋಚಿಸುವ ಮತ್ತು ಕ್ರಿಯಾಶೀಲರಾಗಿ ದುಡಿಯುವ ಶಕ್ತಿಯನ್ನು ಸೃಜಿಸುವ ಮಹತ್ಕಾರ್ಯ ಇರುವುದು. ಯಾಕೆಂದರೆ ಅಲ್ಲಿನ ಜನರ ಪ್ರಯತ್ನಗಳನ್ನು ಉಪಯೋಗಿಸದೆ, ಅವರ ಸಂಪನ್ಮೂಲಗಳನ್ನು ರೂಢಿಸದೆ, ಅವರ ಸಾಮರ್ಥ್ಯಗಳನ್ನು ವ್ಯವಸ್ಥೆಗೊಳಿಸದೆ ನಾವು ಬಹು ಮುಂದೆ ಹೋಗಲಾರೆವು. ನನ್ನ ನಂಬುಗೆಯ ಪ್ರಕಾರ, ವ್ಯಾಪಕವಾದ ಮತ್ತು ಗಾಢ ತೆರನ ಸಾಮಾಜಿಕ ಅಥವಾ ರಚನಾತ್ಮಕ ಕಾರ್ಯದ ಮತ್ತು ಸೇವೆಯ ಮೂಲಕವೇ ಇದನ್ನು ಸಾಧಿಸಲು ಶಕ್ಯ. ಬೇರೆ ದೇಶಗಳಲ್ಲಿನ ಪರಿಸ್ಥಿತಿಯು- ಇಲ್ಲಿರುವ ನಿಮ್ಮಲ್ಲಿನ ಕೆಲವರು ಬೇರೆಬೇರೆ ದೇಶಗಳಿಂದ ಬಂದಿದ್ದೀರಿ- ಭಿನ್ನವಾಗಿರಬಹುದು. ನಾನರಿಯೆ. ನಾನು ಹೇಳುತ್ತಿರುವ ಶಕ್ತಿಯು ಅಲ್ಲಿ ಈಗಾಗಲೇ ಇದ್ದಿರಬಹುದು. ಅಂಥ ಪರಿಸ್ಥಿತಿಯಲ್ಲಿ ಅಲ್ಪಸ್ವಲ್ಪ ವಿಜ್ಞಾನದ ಉಪಯೋಗದಿಂದ, ಅಲ್ಪಸ್ವಲ್ಪ ಮಾರ್ಗದರ್ಶನದಿಂದ ಆ ಸಮುದಾಯಗಳು ತೀವ್ರಗತಿಯ ಪ್ರಗತಿಯನ್ನು ಸಾಧಿಸಬಹುದು. ಆದರೆ, ನನಗೆ ಖಾತ್ರಿಯಿದೆ ಭಾರತದಲ್ಲಿನ ಸ್ಥಿತಿಯು ಭಿನ್ನವಾಗಿದೆ. ಈ ದೇಶದಲ್ಲಿರುವ ಪರಿಸ್ಥಿತಿಯನ್ನು ಗಮನಿಸಿದರೆ, ಅವರು ಯಾರೇ ಆಗಿರಲಿ, ಅವರು ಜಡಸ್ಥಿತಿಯಲ್ಲಿರುವ ಜನರೆಡೆಗೆ ಹೋಗಬೇಕು. ಸಮಾಜಕಾರ್ಯದ ಮೂಲಕ, ಸೇವೆಯ ಮಾರ್ಗವಾಗಿ, ಶಿಕ್ಷಣದ ಮೂಲಕ, ಅವರ ಜೀವನದೊಡನೆ ಬೆರೆಯುವುದರ ಮೂಲಕ, ಅವರನ್ನು ಚೇತನಗೊಳಿಸಬೇಕು, ಹುರಿದುಂಬಿಸಬೇಕು. ನಾನು ಮೇಲಿಂದ ಮೇಲೆ ಹೇಳುತ್ತಿರುವಂತೆ ಸರಕಾರದಿಂದಾಗಲಿ ಅಥವಾ ಅದರ ವಿಭಾಗಗಳಿಂದಾಗಲಿ ಅಥವಾ ಅದರ ನಿಯೋಗಗಳಿಂದಾಗಲಿ, ರಾಜಕೀಯ ಪಕ್ಷಗಳಿಂದಾಗಲಿ, ಅಥವಾ ರಾಜಕೀಯ ಕ್ರಿಯೆಗಳಿಂದಾಗಲಿ ಈ ಕೆಲಸ ಸಾಧ್ಯವಾಗದು. ಜನರನ್ನು ಹುರಿದುಂಬಿಸಬೇಕು. ಏನಾದರೂ ಕೇಳಲೆಂದು ಅವರನ್ನು ದಿಲ್ಲಿಗೊ ಮತ್ತೆಲ್ಲಿಗೊ ದೌಡಾಯಿಸಿ ತಮಗೆ ಇದನ್ನೊ ಅಥವಾ ಮತ್ತೊಂದನ್ನೊ ಮಾಡಿಕೊಡಬೇಕೆಂದು ಒತ್ತಾಯಿಸಬೇಕೆಂದು ನಾನು ಹೇಳತ್ತಲಿಲ್ಲ. ನಾನು ಹೇಳುತ್ತಿರುವುದು, ಜನರು ತಮಗೆ ತಾವೇ ತಮ್ಮ ಕೆಲಸಗಳನ್ನು ಮಾಡಿಕೊಳ್ಳಬೇಕು, ಎಂಬುದಾಗಿ. ಜನರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಮತ್ತು ಕರ್ತವ್ಯಗಳನ್ನು ತಾವು ತಮ್ಮ ಬುದ್ಧಿ, ಹೃದಯ ಮತ್ತು ಕೈಗಳನ್ನು ಸಂಮೇಳಗೊಳಿಸಿ ದುಡಿಯದಿದ್ದರೆ ಪರಿಹರಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ದೇಶದ ಸಮಾಜಕಾರ್ಯಕರ್ತರ ಮುಂದಿರುವುದು ಈ ಆಹ್ವಾನ. ಅಂದರೆ, ನಾವು ಕರೆಯುತ್ತಿರುವ ಜನಶಕ್ತಿ ಅಥವಾ ಲೋಕಶಕ್ತಿಗಳನ್ನು ಸೃಜಿಸಿ, ಸಮೃದ್ಧಗೊಳಿಸಲು ತೊಡಗಿ ನಿರತರಾಗಿರುವುದು. ಭೂದಾನ ಗಾಂಧೀಜಿಯವರು ಕ್ರಾಂತಿಕಾರೀ ಪರಿಕಲ್ಪನೆಯ ಸಮಾಜಕಾರ್ಯದ ಕಡೆಗೆ ಸ್ವಲ್ಪ ಹಿಂದಿರುಗೋಣ. ಈ ಪರಿಕಲ್ಪನೆಯನ್ನು ಸಾಧಿಸಲು ವಾಸ್ತವವಾಗಿ ಏನು ನಡೆಯುತ್ತಲಿದೆ, ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸಲು ನಿಮ್ಮ ಕ್ಷಮೆ ಕೋರುತ್ತೇನೆ, ಉದಾಹರಣೆಗಾಗಿ, ಭೂಹಿಡುವಳಿ ಅಥವಾ ಭೂ-ಒಡೆತನದ ಮೂಲಕ ಆಗುತ್ತಿರುವ ಶೋಷಣೆಯನ್ನು ಪ್ರತಿಬಂಧಿಸಬೇಕಾದರೆ ಗ್ರಾಮೀಣ ಭಾರತದಲ್ಲಿ ಕೆಲವು ವರ್ಗಗಳ ನಡುವೆ ಈಗ ಅಸ್ತಿತ್ವದಲ್ಲಿರುವ ಕೆಲವು ತೆರನ ಸಂಬಂಧಗಳನ್ನು ನಾವು ಬದಲಿಸಬೇಕು. ಗಾಂಧೀಯ ಪರಿಕಲ್ಪನೆಯ ಸಮಾಜಕಾರ್ಯದ ಮೂಲಕ ಆ ಸಂಬಂಧಗಳಲ್ಲಿ ಪರಿವರ್ತನೆಯನ್ನು ತರಲಾಗುತ್ತಿದೆ. ಇದು ವಿನೋಬಾಜಿಯವರ ಗ್ರಾಮದಾನ ಆಂದೋಲನ; ಇದರ ಮೂಲಕ ವೈಯಕ್ತಿಕ ಭೂಒಡೆತನವನ್ನೇ ಸ್ವಯಂಸ್ಫೂರ್ತಿಯಿಂದ ಸಾಮುದಾಯಿಕ ಒಡೆತನಕ್ಕೆ ಪರಿವರ್ತಿಸಲಾಗುತ್ತಿದೆ. ಈ ಆಂದೋಲನವು ಏನೋ ಮಹತ್ತನ್ನು ಸಾಧಿಸುತ್ತಲಿದೆ ಎಂದು ತೋರಿಸಲು ನಾನು ಇಚ್ಛಿಸುತ್ತಿಲ್ಲ್ಲ; ನನ್ನ ಅಭಿಪ್ರಾಯವನ್ನು ಬಿಂಬಿಸಲು ಇದರ ಪ್ರಸ್ತಾಪವಷ್ಟೇ. ಗ್ರಾಮದಾನ ಆಂದೋಲನವಲ್ಲ; ಅದು ರಚನಾತ್ಮಕ ಆಂದೋಲನ, ಅದು ಸಮಾಜಕಾರ್ಯದ ಆಂದೋಲನ, ಒಂದು ಶೈಕ್ಷಣಿಕ ಆಂದೋಲನ; ಭೂ ರಹಿತರನ್ನಾಗಲಿ, ಸಣ್ಣ ಭೂ-ಹಿಡುವಳಿದಾರರನ್ನಾಗಲಿ ದೊಡ್ಡ ದೊಡ್ಡ ಭೂ ಮಾಲೀಕರ ವಿರುದ್ಧ ಸಂಘಟಿಸುವುದರ ಮೂಲಕ ವೈಯಕ್ತಿಕ ಒಡೆತನದಿಂದ ಸಾಮುದಾಯಿಕ ಒಡೆತನಕ್ಕೆ ಸ್ಥಿತ್ಯಂತರವನ್ನು ಮಾಡಲಾಗುತ್ತಲಿಲ್ಲ. ಇದನ್ನು ಯಾವುದೇ ಸಮಾಜವಾದಿ ಅಥವಾ ಕಮ್ಯುನಿಷ್ಟ್ ರಾಜಕೀಯ ಚಟುವಟಿಕೆಯ ಮೂಲಕವಲ್ಲ. ಆದರೆ, ರಾಜಕೀಯದಲ್ಲಿನ ಮಾರ್ಗದೃಷ್ಟಿಯ ಮತ್ತು ಕ್ರಿಯೆಯ ಮೂಲಕವೇ ಸಾಧಿಸಲಾಗುತ್ತಿದೆ. ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಯೋಜಿಸಿದ, ಮನೋ - ನೈತಿಕ ಮಾರ್ಗದೃಷ್ಟಿಯೆಂದು ಬೇಕಾದರೂ ಇದನ್ನು ನೀವು ಕರೆಯಬಹುದು; ಇದು ಸೇವೆಯ ಮೂಲಕ ನಡೆಯುವ ಮಾರ್ಗದೃಷ್ಟಿ, ಬರಿಯ ಸುತ್ತಾಡುತ್ತಾ ಉಪದೇಶ ಮಾಡುತ್ತ ಪೂರೈಸುವ ಕಾರ್ಯವು ಇದಲ್ಲ. ಆದರೆ, ಜನರಿಗೆ ನೆರೆವಾಗುವುದಕ್ಕೆ ಏನಾದರೂ ಕೈಕೊಳ್ಳುವುದರ ಮೂಲಕ ಹಳ್ಳಿಯಲ್ಲಿನ ಜೀವನವನ್ನು ಹೇಗೆ ಉತ್ತಮವಾಗಿ ವ್ಯವಸ್ಥೆಗೊಳಿಸಬಹುದೆಂಬುದನ್ನೂ ಅಂತಾ ಸಂಘರ್ಷಣೆಗಳನ್ನು ಹೇಗೆ ಹೋಗಲಾಡಿಸಬಹುದು ಅಥವಾ ಸರಳಗೊಳಿಸಬಹುದು ಎಂಬುದನ್ನೂ ಸೇವೆಯ ಮೂಲಕ ಅವರಿಗೆ ತೋರಿಸುವುದು. ಗ್ರಾಮದ ಭೂಮಿಯು ಸಮುದಾಯದ ಸ್ವತ್ತಾದರೆ ಸಹಕಾರೀ ಯತ್ನವು ಸುಲಭ ಸಾಧ್ಯವಾಗುತ್ತದೆ; ಆರ್ಥಿಕ ಅಭಿವೃದ್ಧಿಗೆ ಹಾದಿಮಾಡಿಕೊಡುತ್ತದೆ. ವೈಜ್ಞಾನಿಕ ತರಬೇತಿ ಇದರಲ್ಲಿ ನಿಮಗೆ ಆಸಕ್ತಿಯಿದೆಯೋ, ನನಗೆ ಗೊತ್ತಿಲ್ಲ. ಆದರೆ ನನಗೆ ಇದರಲ್ಲಿ ಆಸಕ್ತಿಯಿದೆ, ಮತ್ತು ಈ ತೆರೆನ ಕೆಲಸದಲ್ಲಿ ವಾಸ್ತವವಾಗಿ ನಿರತರಾಗಿರುವ ಸಹಸ್ರಾರು ಜನರು ಈ ದೇಶದಲ್ಲಿದ್ದಾರೆ. ಆದುದರಿಂದ, ನಾನು ನನ್ನೀ ಮಾತನ್ನು ಮುಗಿಸುವ ಮುನ್ನ ಒಂದು ಪ್ರಶ್ನೆಯನ್ನು ಎತ್ತಲು ಇಚ್ಛಿಸುತ್ತೇನೆ: ನಮ್ಮ ನಿಮ್ಮ ನಡುವೆ, ಅಂದರೆ, ಗಾಂಧೀಕಾರ್ಯಕರ್ತ, ಸಮಾಜಕಾರ್ಯಕರ್ತರ ನಡುವೆ ಯಾವುದಾದರೂ ಒಂದು ರೀತಿಯ ಸೇತುವೆಯು ಇರಲು ಸಾಧ್ಯವಿಲ್ಲವೇ? ಈ ವಿಚಾರ ಸಂಕಿರಣದಲ್ಲಿ ಸಾದರ ಪಡಿಸಿದ ಕೆಲವು ಪ್ರಬಂಧಗಳನ್ನು ನಾನು ಓದುತ್ತಿರುವಂತೆ, ನನಗೆ ಅರಿವಾಗುತ್ತಿದೆ, ಸರ್ವೋದಯ ಅಥವಾ ಗಾಂಧೀ ಕ್ಷೇತ್ರದಲ್ಲಿನ ನಮ್ಮಲ್ಲಿನ ಅನೇಕರಿಗೆ, ಏಕೆ, ನಮ್ಮಲ್ಲಿನ ಯಾರಿಗೂ, ನೀವು ಅತ್ಯಗತ್ಯವೆಂದು ಪರಿಗಣಿಸುತ್ತಿರುವ ವೈಜ್ಞಾನಿಕ ತರಬೇತಿ ಇಲ್ಲ; ಗಾಂಧೀಜಿಯವರು ಅನೇಕ ಸ್ಥಳಗಲ್ಲಿ ರಚನಾತ್ಮಕ ಕಾರ್ಯಕರ್ತರಿಗೆ ವೈಜ್ಞಾನಿಕ ತರಬೇತಿ ಬೇಕು, ಎಂದು ಹೇಳಿದ್ದಾರೆ. ನಮಗೆ ಏನೊಂದೂ ತರಬೇತಿಯಿಲ್ಲ. ಯಾವುದಾದರೂ ಒಂದು ತೆರೆನ ತರಬೇತಿಯನ್ನು ನಾವು ಪಡೆದಿದ್ದರೆ ಅದು ಕೇವಲ ಗಾಂಧೀ ಅಥವಾ ವಿನೋಬಾ ಅಥವಾ ಸರ್ವೋದಯ ತತ್ತ್ವದ ಬಗ್ಗೆ ಯಾವ ತರಬೇತಿಯೂ ಇಲ್ಲ. ಇಲ್ಲಿ ನಿಮ್ಮ ನಮ್ಮ ನಡುವೆ ಒಂದು ಪ್ರಕಾರದ ಸೇತುವೆಯನ್ನು ನಿರ್ಮಿಸುವ ಸಾಧ್ಯತೆ ಇದೆ. ಈ ವೈಜ್ಞಾನಿಕ ತರಬೇತಿಯನ್ನು ನೀವು ನಮಗೆ ಒದಗಿಸಬಹುದು. ಬಹುಶಃ ಇನ್ನೊಂದು ಸೇತುವೆಯ ಸಾಧ್ಯತೆಯಿದೆ; ಅಥವಾ ಇನ್ನೊಂದು ಕೊನೆಯಿಂದ ಸೇತುವೆಯೆಂಬುದನ್ನು ನಿರ್ಮಿಸಲು ಸಾಧ್ಯವಿದೆ. ನಿಮ್ಮಲ್ಲಿ ಕೆಲವರಿಗಾದರೂ ಇಡಿಯ ಗಾಂಧೀಯ ಪರಿಕಲ್ಪನೆಯ ಸಮಾಜಕಾರ್ಯವನ್ನು ಅಥವಾ ರಚನಾತ್ಮಕ ಕಾರ್ಯವನ್ನು ಬರಿಯ ಅದರ ಪರಿಕಲ್ಪನೆಯನ್ನು ಮಾತ್ರವಲ್ಲ, ಆದರೆ, ಅದರ ಅನುಷ್ಠಾನವನ್ನೂ, ಅಭ್ಯಸಿಸುವ ಆಸಕ್ತಿಯಿದ್ದಿರಬಹುದು, ನಿಮಗೆ ಉಪಯೋಗವಾಗುವಂತಹ ನಿರ್ಣಯಗಳಿಗೆ ನೀವು ಬರಬಹುದು. ಇದು ಎಷ್ಟರಮಟ್ಟಿಗೆ ಸಾಧ್ಯವೆಂಬುದು ನನಗೆ ಗೊತ್ತಿಲ್ಲ. ವೃತ್ತಿಪರ ಸಮಾಜಕಾರ್ಯಕರ್ತನಿಗೆ ಸಮಾಜಕಾರ್ಯದ ಮೂಲಕವಾಗಿ ನಡೆಯುವ ಸಾಮಾಜಿಕ ಕ್ರಾಂತಿಯ ತತ್ತ್ವದಲ್ಲಿ ನಿಜವಾದ ಆಸಕ್ತಿ ಇದೆಯೇ, ಎಂಬುದನ್ನು ನಾನರಿಯೆ. ಮೂಲಭೂತ ಬದಲಾವಣೆ ಈ ವಿಚಾರ ಸಂಕಿರಣದ ಕೆಲವು ಸಂಪ್ರಬಂಧಗಳಲ್ಲಿ ಮಾನವನಲ್ಲಿ ತೊಡಗಿಸಿದ ಬಂಡವಾಳ ಮತ್ತು ಮಾನವ ಮೌಲ್ಯಗಳ ಅಭಿವೃದ್ಧಿಯ ಬಗೆಗೆ ನಡೆಸಿದ ಚರ್ಚೆಯ ಪ್ರಸ್ತಾಪವಿದೆ. ರಚನಾತ್ಮಕ ಕಾರ್ಯದ ಮೂಲಕ ನಡೆಸುವ ಸಾಮಾಜಿಕ ಕ್ರಾಂತಿಯ ಇಡಿಯ ಗಾಂಧೀಯ ಪರಿಕಲ್ಪನೆಯು ಆವೊಂದು ಸಿದ್ಧಾಂತದ ಮೇಲೆ ಅವಲಂಬನೆಗೊಂಡಿದೆ. ಹೀಗೆಂದರೆ, ಸಾಮಾಜಿಕ ಪರಿವರ್ತನೆಯನ್ನು ಸಾಧಿಸಬೇಕಾದರೆ, ಬೇಡ, ಕೇವಲ ಒಂದು ಬದಲಾವಣೆಯನ್ನು, ಉದಾಹರಣೆಗೆ, ಭೂ ಒಡೆತನದ ವ್ಯವಸ್ಥೆಯಲ್ಲಿ, ಗೇಣಿ ಪದ್ಧತಿಯಲ್ಲಿ, ಇತ್ಯಾದಿ, ಅಥವಾ ಇಂಥ ಯಾವುದರಲ್ಲಿಯೇ ಆಗಲಿ, ತರಬೇಕಾದರೆ, ಅದಕ್ಕೆ ಮೊದಲು ಸಂಬಂಧಿಸಿದ ಮಾನವರಲ್ಲಿ ಬದಲಾವಣೆ ಆಗಿರಬೇಕು; ಅವರ ಹೃನ್ಮನಗಳಲ್ಲಿ ಪರಸ್ಪರರ ಬಗೆಗೆ ಹಾಗೂ ಭೂಮಿ ಮತ್ತಿತರ ವಸ್ತುಗಳನ್ನೂಳಗೊಡ ಇಡಿಯ ಪರಿಸರದ ಬಗೆಗೆ ಅವರಿಗಿರುವ ಮನೋದೃಷ್ಟಿಗಳಿಲ್ಲಿ ಪರಿವರ್ತನೆಯಾಗಿರಬೇಕು. ಗಾಂಧೀಯ ಸಮಾಜಕಾರ್ಯ ಅಥವಾ ಸಮಾಜಸೇವೆಯು ಪ್ರತಿಕ್ರಿಯೆಯ ಅಂತರಂಗ ಹಾಗೂ ಬಹಿರಂಗ ಪರಿಣಾಮಗಳೆರಡರ ಗುರಿಯನ್ನು ಇರಿಸಿಕೊಂಡಿದೆ. ಅಂದರೆ, ಮಾನವನನ್ನು ಹಾಗೂ ಸಮಾಜವನ್ನು ಪರಿವರ್ತಿಸುವ ಗುರಿಯು ಅದಕ್ಕಿದೆ. ಸಾಂಪ್ರದಾಯಿಕ ಸಮಾಜಕಾರ್ಯವು ಈ ಇಡಿಯ ತತ್ತ್ವವನ್ನು, ಈ ಇಡಿಯ ಕ್ರಿಯಾವಲಯವನ್ನು ತನ್ನಲ್ಲಿ ಅಡಗಿಸಿಕೊಳ್ಳುವಂತೆ, ವಿಸ್ತೃತವಾಗುವುದಾದರೆ ಅದು ಗಾಂಧೀಯ ಮತ್ತು ಪಾಶ್ಚಾತ್ಯ ಪರಿಕಲ್ಪನೆಗಳ ನಡುವೆ ಆದ ವಿವಾಹದಲ್ಲಿ ಪರ್ಯವಸನವಾಗಿರುತ್ತದೆ, ಎಂದು ನಾನು ಊಹಿಸುತ್ತೇನೆ. ನಾನು ಧೈರ್ಯವಾಗಿ ಆಲೋಚಿಸುವಂತೆ ಈ ವಿವಾಹವು ಕೇವಲ ಈ ದೇಶಕ್ಕೆ ಮಾತ್ರವೇ ಅಲ್ಲ, ಬೇರೆ ಇತರ ದೇಶಗಳಿಗೂ ಅತ್ಯಂತ ಫಲಕಾರಿಯಾಗುತ್ತದೆ. ('ಅಭಿವೃದ್ಧಿಯಶೀಲ ಆರ್ಥಿಕತೆಯಲ್ಲಿ ಸಮಾಜ ಕಲ್ಯಾಣ' ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಶ್ರೀ ಜಯಪ್ರಕಾಶ ನಾರಾಯಣ ಅವರು ಮಾಡಿದ ಭಾಷಣದ (26ನೆಯ ಸೆಪ್ಪೆಂಬರ್, 1963, ನವದೆಹಲಿ) ಅನುವಾದ. ಜನವರಿ 1980ರ ಸುಧಾ, ವಾರಪತ್ರಿಕೆಯಲ್ಲಿ ಪ್ರಕಟವಾದದ್ದು.) ಡಾ.ಎಚ್.ಎಂ. ಮರುಳಸಿದ್ಧಯ್ಯ 'ಈಶಕೃಪೆ' ನಂ. 62, ಮಂಜುನಾಥ ಕಾಲನಿ, ಜೆಪಿನಗರ 2ನೆಯ ಹಂತ, ಬೆಂಗಳೂರು-560 078
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
![]()
|
![]()
|
![]()
|
![]()
|
SITE MAP
SitePOSH |
NIRATHANKAOUR OTHER WEBSITESSubscribe |
HR and Employment Law Classes - Every Fortnight
Stay updated and informed by joining our WhatsApp group for HR and Employment Law Classes - Every Fortnight.
The Zoom link for the sessions will be shared directly in the group. |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |