ಹನ್ನೆರಡು ವರ್ಷದ ಮುದ್ದು ಹುಡುಗಿ, ತನ್ನ ಓರಗೆಯವರನ್ನೆಲ್ಲಾ ಒಂದೆಡೆ ಸೇರಿಸಿಕೊಂಡು ತನಗೆ ತಿಳಿದ ಹೊಸ ವಿಷಯಗಳನ್ನು ಅವರಿಗೆ ತಿಳಿಸುತ್ತಾ ಅವರಿಗೆ ತಿಳಿದಿರುವ ವಿಷಯಗಳನ್ನು ಹಂಚಿಕೊಳ್ಳುವಂತೆ ಪ್ರೇರೇಪಿಸುತ್ತಾ ಅವರಲ್ಲಿರುವ ಪ್ರತಿಭೆಯನ್ನು ಹೊಗಳುತ್ತಾ ಅವರನ್ನು ಇನ್ನು ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳುವಂತೆ ಪ್ರೇರೇಪಿಸುವುದು ಅವಳಿಗೆ ತುಂಬಾ ಇಷ್ಟದ ಕೆಲಸ. ಬಾಲ್ಯದಿಂದಲೇ ಉತ್ಸಾಹದ ಚಿಲುಮೆಯಾಗಿದ್ದ ಈ ಮುದ್ದು ಮುಖದ ದಿಟ್ಟ ನಿಲುವಿನ ಹುಡುಗಿಯ ಹೆಸರೇ ವತ್ಸಲಾ. ಇಂದು ಈಕೆಗೆ 76ರ ಹರೆಯ ಇಂದಿಗೂ ಅದೇ ಬತ್ತದ ಉತ್ಸಾಹ, ಯಾವುದಾದರು ಸಾಮಾಜಿಕ ಕಾರ್ಯಕ್ರಮಕ್ಕೆ ಆಮಂತ್ರಿಸಿದರೆ ಮಳೆ, ಬಿಸಿಲು ಯಾವುದಕ್ಕು ಹಿಂಜರಿಯದೆ ಸರಿಯಾದ ಸಮಯಕ್ಕೆ ಅಲ್ಲಿ ಹಾಜರ್! ``ಸುಮ್ಮನೆ ಕುಳಿತು ಕೆಲಸಕ್ಕೆ ಬಾರದ ವಿಷಯದ ಬಗ್ಗೆ ಚರ್ಚಿಸುವುದು ಮತ್ತು ಚಿಂತಿಸುವುದು ಚಿಕ್ಕ ಗಾಯವನ್ನು ಸುಮ್ಮನಿರಲು ಬಿಡದೆ ಕೆರೆದು ಹುಣ್ಣಾಗಿಸುವಂತಹ ಮೂರ್ಖತನ. ಅದರ ಬದಲಿಗೆ ಆ ಸಮಯವನ್ನು ಸಮಾಜದ ಏಳಿಗೆಗೆ ಉಪಯೋಗಿಸಿಕೊಳ್ಳುವುದರಲ್ಲಿ ಜೀವನದ ಸಾರ್ಥಕತೆ ಇದೆ'' ಎನ್ನುವುದು ವತ್ಸಲಾರ ಅಭಿಪ್ರಾಯ. ಜೂನ್ 21 1935 ರಂದು ಉಡುಪಿಯ ಸದಾನಂದ ಕಾಮತ್ ಮತ್ತು ಶಾರದಾ ಕಾಮತ್ ರವರ ಎಂಟು ಮಕ್ಕಳ ಪೈಕಿ 2ನೇ ಮಗಳಾಗಿ ಜನಿಸಿದ ವತ್ಸಲಾರವರು ಮೆಟ್ರಿಕ್ಯುಲೇಷನ್ವರೆವಿಗೆ ಓದಿಕೊಂಡಿದ್ದವರು. ತಮ್ಮ 18ನೇ ವಯಸ್ಸಿನಲ್ಲಿ ಉದ್ಯಮಿ ರಾಮದಾಸ್ ಕಾಮತ್ ರವರ ಕೈಹಿಡಿದು ನಾಲ್ಕು ಮಕ್ಕಳು, ಅತ್ತೆ, ಮಾವ, ಮೈದುನ ಹೀಗೆ ತುಂಬು ಕುಟುಂಬದ ಸಾರಥಿಯಾದರು.
ಮನೆ, ಮಕ್ಕಳು, ಬಿಡುವಾದಾಗ ಒಂದಿಷ್ಟು ಸಾಮಾಜಿಕ ಕಾರ್ಯಕ್ರಮ. ಹೀಗೆ ಸಂಸಾರ ಮತ್ತು ಸಾಮಾಜಿಕ ಆಸಕ್ತಿ ಇವೆರಡನ್ನು ಸರಿದೂಗಿಸುವಲ್ಲಿ ಪತಿ ರಾಮದಾಸ್ ಪ್ರಭುರವರು ನೀಡಿದ ಸಹಕಾರ ಮತ್ತು ಪ್ರೀತಿ ವತ್ಸಲಾರವರನ್ನು ಜೀವನದ ಕಷ್ಟಗಳಿಗೆ ಹೆದರದೆ ಮುನ್ನಡೆಯುವಂತೆ ಮಾಡಿತ್ತು. ತಾನೊಂದು ಬಗೆದರೆ ದೈವವೊಂದು ಬಗೆವುದು ಎನ್ನುವಂತೆ ಪತಿಯ ಆಕಸ್ಮಿಕ ಮರಣ ವತ್ಸಲರವರ ಬಾಳಿನ ಸಮತೋಲನವನ್ನು ಅಲುಗಾಡಿಸಿತ್ತು. ಪತಿಯಿಂದ ಪಡೆದ ಆತ್ಮಸ್ಥೈರ್ಯ, ವ್ಯಾವಹಾರಿಕ ಜ್ಞಾನ ವತ್ಸಲಾರನ್ನು ಧೃತಿಗೆಡದೆ ಮುನ್ನಡೆಯುವಂತೆ ಮಾಡಿತ್ತು. ಪತಿಯ ಅಗಲಿಕೆಯ ನೋವನ್ನು ಅದುಮಿಟ್ಟುಕೊಂಡು ಸಂಸಾರದ ಬಂಡಿಯನ್ನು ಒಬ್ಬಂಟಿಯಾಗಿ ನಡೆಸಲು ಅನುವಾದರು. ಸುಮಾರು ವರ್ಷಗಳ ಕಾಲ ಪತಿಯ ಉದ್ಯಮ, ಮನೆ, ಮಕ್ಕಳ ಭವಿಷ್ಯ ಹೀಗೆ ಎಲ್ಲವನ್ನು ನಿಭಾಯಿಸಿದ ವತ್ಸಲಾರವರು ಇವೆಲ್ಲದರ ಜೊತೆ ಜೊತೆಯಲ್ಲೇ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ವನಿತಾ ಸೇವಾ ಮಂದಿರ ಶಿಕ್ಷಣ ಸಂಸ್ಥೆ, ಆಶಾ ದೀಪ ಬುದ್ಧಿಮಾಂದ್ಯ ಮಕ್ಕಳ ಕಲ್ಯಾಣ ಸಂಸ್ಥೆ, ವನಿತಾ ಜೀವಾನಿಲ ಕೇಂದ್ರ, ಅವೇಕ್ ಭಾರತ ವಿಕಾಸ ಪರಿಷತ್, ವಿಜಯನಗರ ಅಂಗವಿಕಲರ ಕಲ್ಯಾಣ ಸಂಘ, ಇವು ವತ್ಸಲಾರವರು ಕಾರ್ಯ ನಿರ್ವಹಿಸಿದ ಸಂಸ್ಥೆಗಳಲ್ಲಿ ಪ್ರಮುಖವು. ಈ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಮತ್ತು ಸದಸ್ಯರಾಗಿ ವತ್ಸಲಾರವರು ಕಾರ್ಯನಿರ್ವಹಿಸಿದ್ದಾರೆ. ಬುದ್ಧಿಮಾಂದ್ಯ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಆಶಾ ದೀಪ ಬುದ್ಧಿಮಾಂದ್ಯ ಮಕ್ಕಳ ಕಲ್ಯಾಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಕೀರ್ತಿ ವತ್ಸಲಾರವರದು. ಇವರ ಈ ಸಮಾಜಿಕ ಸೇವೆಗಳನ್ನು ಗಮನಿಸಿದ ಸರ್ಕಾರ ಮತ್ತು ಹಲವು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿದೆ. ಅವುಗಳಲ್ಲಿ ಶೇಷಮ್ಮ ಭಾಸ್ಕರ ರಾವ್ ಎಂಡೋಮೆಂಟ್ ಪ್ರಶಸ್ತಿ, ನಮ್ಮ ಬೆಂಗಳೂರು 2009 ಪ್ರಶಸ್ತಿಗಳು ಪ್ರಮುಖವು. ಇವರು ಬರೆದ "ಪ್ರಸಕ್ತ ರಾಜಕಾರಣದಲ್ಲಿ ಮಹಿಳೆಯರ ಪಾತ್ರ" ಲೇಖನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಕೂಡ ಸಂದಿದೆ. ತಮ್ಮ ಸೇವಾವಧಿಯಲ್ಲಿ ಸಿಂಗಾಪುರ, ಹಾಂಕಾಂಗ್, ಮಲೇಶಿಯಾ, ಫಿಲಿಫೈನ್ಸ್, ಹಾಲೆಂಡ್, ಇಂಗ್ಲೆಂಡ್, ಯುರೋಪ್, ಮುಂತಾದ ರಾಷ್ಟ್ರಗಳನ್ನು ಸುತ್ತಿದ ವತ್ಸಲಾರವರು ಆಫ್ರಿಕಾದ ಆಕ್ರಾಕ್ಕೆ ವಿಮೆನ್ ವರ್ಲ್ಡ್ ಬ್ಯಾಂಕಿಂಗ್ ಕಾರ್ಯಾಗಾರದಲ್ಲಿ ಭಾರತದ ಪ್ರತಿನಿಧಿಯಾಗಿ ತೆರಳಿದ್ದಾಗ ಪ್ರಸ್ತುತ ಅಮೇರಿಕಾದ ಅಧ್ಯಕ್ಷ ಬರಕ್ ಒಬಾಮರ ತಾಯಿ ಆ್ಯನ್ ಡನ್ ಹ್ಯಾಂರೊಂದಿಗೆ ಕಳೆದ ಸಮಯವನ್ನು ಇಂದಿಗೂ ಸಂತೋಷದಿಂದ ನೆನಪಿಸಿಕೊಳ್ಳುತ್ತಾರೆ. ಸುಮಾರು ಆರು ದಶಕಗಳಿಂದಲೂ ಒಂದಿಲ್ಲೊಂದು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ವಾತ್ಸಲ್ಯಮಯಿ ಸಮಾಜ ಸೇವಕಿ ಎನಿಸಿ ಕೊಂಡಿರುವ ವತ್ಸಲಾರವರು ಬರಿಯ ವಾತ್ಸಲ್ಯದ ಮೂರ್ತಿಯಲ್ಲ- ಉತ್ತಮ ಆಡಳಿತಗಾರ್ತಿ, ಉತ್ತಮ ನಾಯಕಿಯೂ ಹೌದು. ವನಿತಾ ಸೇವಾ ಮಂದಿರ ಮತ್ತು ಅವೇಕ್ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ ಮತ್ತು ಆಶಾ ದೀಪ ಬುದ್ಧಿಮಾಂದ್ಯ ಮಕ್ಕಳ ಕಲ್ಯಾಣ ಸಂಸ್ಥೆಯ ಸಂಸ್ಥಾಪಕರಾಗಿ ಕೆಲಸ ನಿರ್ವಹಿಸಿದ ದಿನಗಳು ಅವರ ಈ ಗುಣಗಳಿಗೆ ಉತ್ತಮ ಉದಾಹರಣೆ. ನಿರಂತರ ಚಟುವಟಿಕೆಯ, ಹಿಡಿದ ಕಾರ್ಯವನ್ನು ಯಶಸ್ವಿಗೊಳಿಸಬಲ್ಲ, ದಿಟ್ಟ ನಿಲುವಿನ ಶ್ರೀಮತಿ ವತ್ಸಲಾ ಪ್ರಭು ಸಮಾಜ ಕಾರ್ಯಕರ್ತರಿಗೊಂದು ಉತ್ತಮ ನಿದರ್ಶನ. ಶ್ರೀಮತಿ. ಅನಿತ ಅಶೋಕ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |