Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಬೆಂಗಳೂರು ನಗರ ಜಿಲ್ಲೆಯ ಪರಿಸರ ಸಂರಕ್ಷಣೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ

12/20/2019

0 Comments

 
Picture
ಪೀಠಿಕೆ :
ಲೋಕಾ: ಸಮಸ್ತಾ: ಸುಖಿನೋ ಭವಂತು ಎಂಬ ವೇದೋಕ್ತಿ ನಮ್ಮ ಋಷಿ ಮುನಿಗಳ ಚಿಂತನೆ ಚರಾಚರ ಪ್ರಕೃತಿಯ ಭವ್ಯ ಕಲ್ಪನೆಗೆ ಅದ್ಬುತ ಸಾಕ್ಷಿ, ಅವರು ಪ್ರಕೃತಿಯೊಡನೆ ಸಾಮರಸ್ಯದಿಂದ ಬದುಕಿ, ಸತ್ಯಾನ್ವೇಷಣದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದರು. ಪ್ರಕೃತಿಯೆಂದರೆ ಅಸಂಖ್ಯಾತ ವೈವಿಧ್ಯತೆಯ ದೃಷ್ಠಿ; ಗೋಚರ, ಅಗೋಚರ, ಸಸ್ಯ ಮತ್ತು ಪ್ರಾಣಿ ಜೀವರಾಶಿಗಳಿಂದ ಕೂಡಿದ ಕಾಡು, ನದಿ, ಭಾವಿ, ಸರೋವರ, ಸಾಗರಗಳಲ್ಲಿ ಕಾಣುವ ಜೀವಕೋಟಿಯ ಸಂಜೀವಿನಿ, ನೀರು ಹಾಗೂ ಇವುಗಳನ್ನು ಆವರಿಸಿದ ಜೀವನದ ಉಸಿರು ಗಾಳಿ, ಶಕ್ತಿ ಮೂಲ ಸೂರ್ಯನನ್ನೊಳಗೊಂಡ ಭೂಮಿ, ಇಂತಹ ಭೂಮಂಡಲ ಇಂದು ಬರಿದಾಗುತ್ತಿದೆ. ಗ್ರಾಮೀಣ ಭಾಗಗಳು ನಗರಗಳಾಗುತ್ತಿವೆ. ನಗರಗಳು ಬದಲಾವಣೆಯ ಶರವೇದದಲ್ಲಿ ತಮ್ಮ ಮೂಲ ನೆಲೆಯನ್ನು ಕಳೆದುಕೊಳ್ಳುತ್ತಿದೆ, ಅಂತಹ ನಗರಗಳಲ್ಲಿ ಬೆಂಗಳೂರು ಸಹ ಒಂದು.
ಕರ್ನಾಟಕ ರಾಜ್ಯದ ರಾಜಧಾನಿ, ಉದ್ಯಾನವನಗಳ ನಗರವೆಂದು ಖ್ಯಾತಿ ಪಡೆದ ಬೆಂಗಳೂರು ನಗರವು ರಾಜ್ಯ ಆಡಳಿತದ ನೀತಿ ನಿರೂಪಣೆಯ ಕೇಂದ್ರಸ್ಥಾನವಾಗಿದೆ.  ಈ ಜಿಲ್ಲೆಗೆ ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ, ಸೈಬರ್ ಸಿಟಿ, ಸೈಯನ್ಸ್ ಸಿಟಿ, ಎಂಬ ಹಲವು ಹೆಸರುಗಳಿಂದ ಕೂಡಿದೆ. ಬೆಂಗಳೂರು ಜಿಲ್ಲೆ ಸುಮಾರು 850 AD ರಿಂದ ಅಸ್ತಿತ್ವದಲ್ಲಿರುತ್ತದೆ. ಬೆಂದಕಾಳೂರು ಎಂಬುದು ಬೆಂಗಳೂರಾಗಿ ಮರು ನಾಮಕರಣಗೊಂಡಿದೆ. ಈ ಜಿಲ್ಲೆಯನ್ನು ಕೆಂಪೇಗೌಡರು 1537 ರಲ್ಲಿ ಡಿಸೈನ್ ಮಾಡಿದ್ದರು, ಈ ಮೊದಲು ಬೆಂಗಳೂರು ಜಿಲ್ಲೆಯು ಒಟ್ಟು 11 ತಾಲ್ಲೂಕುಗಳಿಂದ ಕೂಡಿದ್ದ ಜಿಲ್ಲೆಯಾಗಿತ್ತು. ಆದರೆ ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾದಂತೆ ಹಲವಾರು ಸಮಸ್ಯೆಗಳು ಪ್ರಾರಂಭವಾಗತೊಡಗಿದವು. ಅಭಿವೃದ್ಧಿಯ ದೃಷ್ಟಿಯಿಂದ ಆಡಳಿತ ನಡೆಸಲು ಕಠಿಣವಾದಾಗ ಆಡಳಿತಾತ್ಮಕ ದೃಷ್ಟಿಯಿಂದ 1986ರಲ್ಲಿ ಬೆಂಗಳೂರನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಾಗಿ ವಿಂಗಡನೆ ಮಾಡಲಾಯಿತು.

ಪ್ರಸ್ತುತ ಬೆಂಗಳೂರು ನಗರ ಜಿಲ್ಲೆಯಲ್ಲಿ 2011 ಜನಗಣತಿಯ ಪ್ರಕಾರ 699 ಗ್ರಾಮಗಳಿವೆ, ಅವುಗಳಲ್ಲಿ 668 ಜನವಸತಿಯಿರುವ ಹಾಗೂ 31 ಜನವಸತಿ ಇಲ್ಲದ ಗ್ರಾಮಗಳು ಜಿಲ್ಲೆಯಲ್ಲಿವೆ. ಒಟ್ಟು 489 ಕಂದಾಯ ಗ್ರಾಮಗಳಿರುತ್ತವೆ. ಜೊತೆಗೆ ಒಂದು ಬೃಹತ್ ಮಹಾನಗರ ಪಾಲಿಕೆ, ಒಂದು ಪುರಸಭೆ, ಅಸ್ತಿತ್ವದಲ್ಲಿವೆ. ಜಿಲ್ಲೆಯ ಒಟ್ಟು ಜನಸಂಖ್ಯೆ 2011ರ ಜನಗಣತಿಯ ಪ್ರಕಾರ 96.21.551 ಲಕ್ಷ ಇದ್ದು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಪ್ರತಿ ಚದುರ ಕಿ.ಮೀಗಳಿಗೆ 4381 ಜನಸಾಂದ್ರತೆಯನ್ನು ಹೊಂದಿರುವ ನಗರವು ಗುಣಲಕ್ಷಣಗಳಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗಿಂತ ವಿಶೇಷತೆಯಿಂದ ಕೂಡಿದೆ. ಜಿಲ್ಲೆಯ ಒಟ್ಟು 96.21 ಲಕ್ಷ ಜನಸಂಖ್ಯೆಯಲ್ಲಿ 50.22 ಲಕ್ಷ ಪುರುಷರು ಹಾಗೂ 45.18 ಲಕ್ಷ ಸ್ತ್ರೀಯರಿದ್ದಾರೆ. 2001-2011 ರ ದಶಕದ ನಡುವಿನ ಬೆಳವಣಿಗೆ ದರವು ಶೇಕಡ 47.18ರಷ್ಟಿದ್ದು ರಾಜ್ಯದ ಬೆಳವಣಿಗೆ ದರಕ್ಕೆ ಹೋಲಿಸಿದಾಗ ಶೇ 31.58 ರಷ್ಟು ಹೆಚ್ಚಾಗಿರುತ್ತದೆ. 2011ರ ಜನಗಣತಿ ಪ್ರಕಾರ ಜಿಲ್ಲೆಯ ಶೇ 9.06ರಷ್ಟು ಜನರು ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಾರೆ. 2012-13 ನೇ ಸಾಲಿನ ಜಿಲ್ಲೆಯ ವಾರ್ಷಿಕ ಋತು ಮತ್ತು ಬೆಳೆಗಳ ಅಂಕಿ ಅಂಶಗಳ ವರದಿ ಪ್ರಕಾರ ಜಿಲ್ಲೆಯ ಒಟ್ಟು ಭೌಗೋಳಿಕ ವಿಸ್ತೀರ್ಣ 2.17 ಲಕ್ಷ ಹೆಕ್ಟೇರ್ ಇದೆ. ಇದರಲ್ಲಿ 5.055 ಹೆಕ್ಟೇರ್ ಅರಣ್ಯ ಪ್ರದೇಶ, 1.15.852 ಹೆಕ್ಟೇರು ವ್ಯವಸಾಯೇತರ ಉಪಯೋಗ, 4.911 ಹೆಕ್ಟೇರು ಬಂಜರು ಪ್ರದೇಶ, 3.863 ಹೆಕ್ಟೇರು, ಸಾಗುವಳಿಗೆ ಯೋಗ್ಯವಾದ ಬಂಜರು ಪ್ರದೇಶ 5.674 ಹೆಕ್ಟೇರು ಖಾಯಂ ಗೋಮಾಳ, 7530 ಹೆಕ್ಟೇರು ವೃಕ್ಷ ಮತ್ತು ತೋಪುಗಳು, 18.640 ಹೆಕ್ಟೇರು ಬೀಳು ಭೂಮಿ, ಹಾಗೂ 50.478 ಹೆಕ್ಟೇರು ನಿವ್ವಳ ಬಿತ್ತನೆ ಪ್ರದೇಶವನ್ನು  ಒಳಗೊಂಡಿರುತ್ತದೆ. 

ಹೀಗೆ ತನ್ನದೆ ಆದ ಇತಿಹಾಸವನ್ನು ಹೊಂದಿರುವ ಬೆಂಗಳೂರು ಇಂದು ಜನಸಂಖ್ಯಾ ಹೆಚ್ಚಳ, ನಿರುದ್ಯೋಗ ಸಮಸ್ಯೆ, ವಾಯು ಮಾಲಿನ್ಯ, ಜಲಮಾಲಿನ್ಯ, ಕೈಗಾರಿಕೆಗಳಿಂದ ಹೊರ ಸೂಸುವ ಹೊಗೆ, ನಗರೀಕರಣದ ಹೆಸರಿನಲ್ಲಿ ಪರಿಸರ ನಾಶ ಮಾಡುತ್ತಿರುವುದರಿಂದ ಬೆಂಗಳೂರಿನಲ್ಲಿ ವಾಸಿಸುವ ಪ್ರತಿಯೊಬ್ಬರು ಹಲವು ಸಮಸ್ಯೆಗಳಿಂದ ನರಳುತ್ತಿದ್ದಾರೆ. ಅಂದು ಸಮೃದ್ದವಾಗಿದ್ದ ಪರಿಸರ ಇಂದು ನಶಿಸುತ್ತಿದೆ. ನಶಿಸುತ್ತಿರುವ ಪರಿಸರವನ್ನು ಸಂರಕ್ಷಿಸಲು ಇಂದು ಹಲವರು ಶ್ರಮಿಸುತ್ತಿದ್ದಾರೆ. ಅವುಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಸಹ ಇವೆ. ಬೆಂಗಳೂರು ಪರಿಸರ ಸಂರಕ್ಷಣೆಯಲ್ಲಿ  ಅದಮ್ಯ ಚೇತನ, ಬಿಎಸ್ಎಸ್ ಟ್ರಸ್ಟ್, ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್, ಗ್ರೀನ್ ಪೀಸ್, ಹೀಡ್, ಸಮರ್ಥನಂ, ಮುಂತಾದ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ,  ಅಂತಹ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಪ್ರಮುಖವಾಗಿ ಅದಮ್ಯ ಚೇತನ ಮತ್ತು ಬಿಎಸ್ಎಸ್ ಟ್ರಸ್ಟ್ ಕುರಿತು ಅಧ್ಯಯನ ಮಾಡಲಾಗಿದೆ.
 
ಅಧ್ಯಯನದ ಉದ್ದೇಶಗಳು :
  1. ಪ್ರಸ್ತುತ ಬೆಂಗಳೂರು ನಗರ ಜಿಲ್ಲೆಯ ಪರಿಸರ ಸಂರಕ್ಷಣೆಯ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲುವುದು.
  2. ಪರಿಸರ ಸಂರಕ್ಷಣೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆ ತಿಳಿಯುವುದು.
  3. ಸ್ವಯಂ ಸೇವಾ ಸಂಸ್ಥೆಗಳಲ್ಲಿ ಆಯ್ದ ಸಂಸ್ಥೆಗಳ ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸುವುದು.
  4. ಅವಶ್ಯ ಕಂಡಲ್ಲಿ ಸೂಕ್ತ ಸಲಹೆಗಳನ್ನು ಕೊಡುವುದು.
 
ಸಂಶೋಧನಾ ವಿಧಾನಗಳು :
ಬೆಂಗಳೂರು ನಗರ ಜಿಲ್ಲೆಯ ಪರಿಸರ ಸಂರಕ್ಷಣೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ  (ಅದಮ್ಯ ಚೇತನ ಮತ್ತು ಬಿ.ಎಸ್.ಎಸ್ ಟ್ರಸ್ಟ್ ಕುರಿತಂತೆ) ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಲು ಏಕಘಟಕ ಅಧ್ಯಯನ ವಿಧಾನದ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ.
 
ಸ್ವಯಂ ಸೇವಾ ಸಂಸ್ಥೆಗಳು :
ಸ್ವಯಂಸೇವಾ ಸಂಸ್ಥೆಗಳೆಂದರೆ ಸರ್ಕಾರೇತರ ಸಂಸ್ಥೆಗಳು, ಸರ್ಕಾರದಿಂದ ಆರ್ಥಿಕ ಸಹಾಯ ಧನವನ್ನು ಪಡೆಯದೆ ಕೆಲಸ ಮಾಡುವುದು ಅಥವಾ  ಸರ್ಕಾರದಿಂದ ಯಾವುದೇ ಸವಲತ್ತುಗಳನ್ನು ಪಡೆಯದೆ ತಾವೇ ಸ್ವತಃ ಮುಂದೆ ಬಂದು ಹಣಕಾಸು ಅಥವಾ ಮಾನವ ಸಂಪನ್ಮೂಲವನ್ನು ಕ್ರೋಢೀಕರಿಸಿ, ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳುವುದು. ಈ ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರದ ಕಾರ್ಯಕ್ರಮವನ್ನು ಸರಿಯಾದ ರೀತಿಯಲ್ಲಿ ಜನರಿಗೆ ತಲುಪಿಸುವ ದೃಷ್ಠಿಯಿಂದ ಜನರ ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ. ಸರ್ಕಾರೇತರ ಸಂಸ್ಥೆಗಳು ಪ್ರವೇಶಿಸದ ಕ್ಷೇತ್ರವಿಲ್ಲ ಎನ್ನಬಹುದು. ಶಿಕ್ಷಣ, ಪರಿಸರ, ಆರೋಗ್ಯ, ವೃದ್ದರು, ಗುಡಿಸಲು ನಿವಾಸಿಗಳ ಮಕ್ಕಳು, ಅಂಗವಿಕಲರು, ಬೀದಿಮಕ್ಕಳು, ಲೈಂಗಿಕ ಕಾರ್ಯಕರ್ತರು, ಹೀಗೆ ವಿವಿಧ ರೀತಿಯ ಜನರ ಸಬಲೀಕರಣಕ್ಕಾಗಿ ದೇಶದಲ್ಲಿ ಸಹಸ್ರಾರು ಸರ್ಕಾರೇತರ ಸಂಸ್ಥೆಗಳು ದುಡಿಯುತ್ತಿವೆ, ಸರ್ಕಾರೇತರ ಸಂಸ್ಥೆಗಳು ಟ್ರಸ್ಟಿ, ಸೊಸೈಟಿ ಮತ್ತು  ಸಂಘದ ಅಡಿಯಲ್ಲಿ  ಕಾನೂನು ಪ್ರಕಾರ ನೊಂದಾವಣಿಯಾಗುತ್ತವೆ. ಇಂತಹ ಟ್ರಸ್ಟಿಗಳಲ್ಲಿ ಟ್ರಸ್ಟಿಗಳು ಹಾಗೂ ಮ್ಯಾನೇಜಿಂಗ್ ಟ್ರಸ್ಟಿಗಳು ಇರುತ್ತಾರೆ. ಸಲಹಾ ಮಂಡಳಿಯನ್ನು ರಚಿಸಿಕೊಳ್ಳುತ್ತಾರೆ. ಸೊಸೈಟಿ ಅಥವಾ ಸಂಘ ಎಂದು ನೋಂದಣಿ ಮಾಡಿಸಿಕೊಂಡಿದ್ದಾಗ ಸಾಮಾನ್ಯವಾಗಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಜಂಟಿಕಾರ್ಯದರ್ಶಿ, ಖಜಾಂಚಿ, ಸದಸ್ಯರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತದೆ.

ಸ್ವಯಂ ಸೇವಾ ಸಂಸ್ಥೆಗಳು ಭಾರತದಲ್ಲಿ ಸುಮಾರು 3.3 ಮಿಲಿಯನ್ಗಿಂತಲೂ ಅಧಿಕವಾಗಿದ್ದು ಪ್ರತಿಯೊಂದು ಸಂಸ್ಥೆಯು ಒಂದೊಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸಮಾಜ ಕಲ್ಯಾಣ ಕೆಲಸಗಳನ್ನು ಕೈಗೊಳ್ಳುತ್ತಿವೆ. ಇವುಗಳಲ್ಲಿ ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ  ಅತಿ ಹೆಚ್ಚಿನ ಸಂಸ್ಥೆಗಳು ಕಾರ್ಯನಿರ್ವಹಿಸಿತ್ತಿವೆ, ಉದಾಹರಣೆಗೆ ಬಾಸ್ಕೋ, ಹೀಡ್, ವಿದ್ಯಾನಿಕೇತನ್, ಸ್ಟೇಪ್ಸ್, ಹಸಿರುಸೇನೆ, ವಿಶ್ವ ಪರಿಸರ ಸಂರಕ್ಷಣಾ ವೇದಿಕೆ, curds, ಚಿಗುರು, ಗ್ರೀನ್ ಪೀಸ್, ಭಾರತೀಯ ಸಾಮಾಜ ಸೇವಾ ಟ್ರಸ್ಟ್, ಉಸಿರು, ಎನ್ವಿರಾನ್ಮೆಂಟ್ ಗ್ರೂಪ್, ಸದ್ಭಾವನ, ಪರಸ್ಪರ, ಮುಂತಾದ ಸ್ವಯಂ ಸೇವಾ ಸಂಸ್ಥೆಗಳು ಮಾನವ, ನೈಸರ್ಗಿಕ ಸಂಪನ್ಮೂಲಗಳನ್ನು ಕ್ರೋಢೀಕರಣಗೊಳ್ಳುವುದರ ಮೂಲಕ ಕೆಲಸಮಾಡುತ್ತಿವೆ.
 
ಸ್ವಯಂ ಸೇವಾ ಸಂಸ್ಥೆಗಳ ಪರಿಚಯ ಮತ್ತು ಕಾರ್ಯವೈಖರಿ
ಅದಮ್ಯ ಚೇತನ :
ಅದಮ್ಯ ಚೇತನ ಸಂಸ್ಥೆಯು ಸಾಮಾಜಿಕ ಅಭಿವೃದ್ಧಿಯ ಕ್ಷೇತ್ರದಲ್ಲಿ ಸಾಮೂಹಿಕ ಸಂಘಟನಾ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಯಾಗಿದೆ. ಕೇಂದ್ರ ಸಚಿವರಾಗಿದ್ದ ದಿವಂಗತ ಶ್ರೀ ಅನಂತಕುಮಾರ್ರವರು ತನ್ನ ತಾಯಿಯಾದ ಶ್ರೀಮತಿ ಗಿರಿಜಾಶಾಸ್ತ್ರಿಯವರ ಸವಿನೆನಪಿಗಾಗಿ 1998ರಲ್ಲಿ ಈ ಸಂಸ್ಥೆಯನ್ನು ಪ್ರಾರಂಭಿಸಿದರು. ಪ್ರಾರಂಭದ ದಿನಗಳಲ್ಲಿ ಬಡ ಮತ್ತು ಹಿಂದುಳಿದ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ, ಕಂಪ್ಯೂಟರ್ ತರಬೇತಿ, ರಕ್ತದಾನ ಶಿಬಿರ, ಆಟ ಪಾಟ ಮುಂತಾದ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದರ ಮೂಲಕ ಜನಸೇವೆಯಲ್ಲಿ ತೊಡಗಿಕೊಂಡರು, ಪ್ರಸ್ತುತ ದಿನಗಳಲ್ಲಿ ಅಕ್ಷರ ದಾಸೋಹದಂತಹ ಮಹಾನ್ ಕಾರ್ಯವು ಈ ಸಂಸ್ಥೆಯಲ್ಲಿ ನಡೆಯುತ್ತಿದೆ.

ಬೆಂಗಳೂರು ನಗರದಲ್ಲಿ ಪ್ರಸ್ತುತ ಏಳು ಜನರಿಗೆ ಒಂದು ಮರವಿದ್ದು [7:1] ಉತ್ತಮ ಗಾಳಿ, ದೊರೆಯದೆ ಜನರು ಹಲವು ಖಾಯಿಲೆಗೆ ತುತ್ತಾಗಿ ನರಳುತ್ತಿದ್ದಾರೆ. ಅಂರ್ತಜಲ ಕುಸಿಯುತ್ತಿದೆ, ಮಾನವನ ಆಯಸ್ಸು ಕಡಿಮೆಯಾಗುತ್ತಿದೆ, ಮುಂದಿನ ದಿನಗಳಲ್ಲಿ ನೀರಿನ ಹಾಹಾಕಾರ ತಲೆದೋರುತ್ತದೆ ಎಂಬುದನ್ನು ಅರಿತು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ರವರು ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೊಂದು ಮರವಿರುವಂತೆ ಜಾಗೃತರಾಗೋಣವೆಂದು ಸುಮಾರು 1 ಕೋಟಿ ಸಸಿ ನೆಡುವ ಹಸಿರು ಭಾನುವಾರ ಎಂಬ ಯೋಜನೆಗೆ 2016 ರಲ್ಲಿ ಚಾಲನೆ ನೀಡಿದರು. ಅಂದಿನಿಂದ ಇಂದಿನವರೆಗೂ ಸುಮಾರು ಒಂದು ಲಕ್ಷಕ್ಕೂ ಅಧಿಕ ಸಸಿಗಳನ್ನು, ಒಟ್ಟು 137 ಹಸಿರು ಭಾನುವಾರ ಕಾರ್ಯಕ್ರಮಗಳನ್ನು ನಿರಂತರವಾಗಿ ಮುಂದುವರೆಯಿಸಿಕೊಂಡು ಬಂದಿರುತ್ತಾರೆ. ಪ್ರತಿ ಭಾನುವಾರ ಸಸಿ ನೆಡುವ ಕಾರ್ಯಕ್ರಮದಲ್ಲಿಯೂ ತೇಜಸ್ವಿನಿ ಅನಂತಕುಮಾರ್ ರವರು ಭಾಗವಹಿಸುತ್ತಾರೆ. ಈ ಸಂಸ್ಥೆಯು ಪ್ರತಿ ಭಾನುವಾರ ಬೆಂಗಳೂರು ಜಿಲ್ಲೆಯಲ್ಲಿ ಆಯ್ದ ಕೆಲವು ಸ್ಥಳಗಳಲ್ಲಿ ಸುಮಾರು 50-100 ಸಸಿಗಳನ್ನು ನೆಟ್ಟು ಅಕ್ಕಪಕ್ಕದವರಿಗೆ ವಹಿಸುತ್ತಾರೆ. ಜೊತೆಗೆ ಅದಮ್ಯ ಚೇತನ ಸಂಸ್ಥೆಯು ಬೆಳೆಸಿ ಪೋಷಿಸುತ್ತಿದೆ.

ಅದಮ್ಯ ಚೇತನ ಸಂಸ್ಥೆಯು ಸಸಿ ನೆಡುವುದರ ಜೊತೆಗೆ ಜನರಲ್ಲಿ ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ತಮ್ಮ ಕಛೇರಿಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ತಮ್ಮ ಅನ್ನ ದಾಸೋಹ ಕಾರ್ಯಕ್ರಮ, ಸ್ವಚ್ಚತೆಯ ಬಗ್ಗೆ ಮಾಹಿತಿ ನೀಡುತ್ತಾರೆ. ಕಾಂಪೋಸ್ಟ್ ಗೊಬ್ಬರಗಳ ತಯಾರಿಗೆಯ ಬಗ್ಗೆ ಅರಿವು, ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಅದಮ್ಯ ಚೇತನ ಸಂಸ್ಥೆಯು ಹಸಿರು ಭಾನುವಾರ ಹೆಸರಿನಲ್ಲಿ ಸಸಿ ನೆಡುವ ಕಾರ್ಯಕ್ರಮ ಯಶಸ್ವಿಯಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಡುವುದರ ಜೊತೆಗೆ ಪ್ರತಿ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ನಾಯಕರುಗಳಿಗೆ, ಅಕ್ಕಪಕ್ಕದವರಿಗೆ ಮಾಹಿತಿ ತಿಳಿಸಿ ಪರಿಸರ ಸಂರಕ್ಷಣೆಯಿಂದಾಗುವ ಯೋಜನೆಗಳನ್ನು ರೂಪಿಸಲು ಪ್ರೇರಕರಾಗಿದ್ದಾರೆ.

ಪ್ರತಿ ವಾರ ಅರ್ಧ ದಿವಸ ಪರಿಸರ ಸಂರಕ್ಷಣಾ ಕಾರ್ಯಕ್ಕೆ ತಮ್ಮ ಸಮಯ ಮೀಸಲಿಡುತ್ತಾರೆ. ಈ ಸಮಯದಲ್ಲಿ ಶಾಲಾ  ಕಾಲೇಜಿನ ಎನ್ ಎಸ್ ಎಸ್, ಕನ್ನಡ ಸಂಘ, ಎನ್ ಸಿ ಸಿ  ಹಾಗೂ ಪ್ರೇರಿತ ಆಸಕ್ತ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಿಸುವ ತಿಳುವಳಿಕೆಯ ಪ್ರವಚನ ನಡೆಯುತ್ತದೆ. ವಾರದಿಂದ ವಾರಕ್ಕೆ ಬೇರೆ ಬೇರೆ ವಿದ್ಯಾರ್ಥಿ ಮತ್ತು ಸ್ಥಳೀಯರಿಗೆ ಜಾಗೃತಿ ಮೂಡಿಸುತ್ತಾರೆ.
​
ಹೀಗೆ ಅದಮ್ಯ ಚೇತನ ಸಂಸ್ಥೆಯು ಬೆಂಗಳೂರು ನಗರದಲ್ಲಿ ಪರಿಸರವನ್ನು ಪುನರ್ ಸ್ಥಾಪಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಇದಕ್ಕೆ ಸ್ಥಳೀಯರ ಸಹಾಯವನ್ನು ಪಡೆಯುತ್ತಿದ್ದಾರೆ. ಮುಖ್ಯವಾಗಿ ಯುವ ಪೀಳಿಗೆಯವರಲ್ಲಿ ಪರಿಸರದ ಅರಿವು ಮೂಡಿಸುತ್ತಿರುವುದು ಎಲ್ಲರಿಗೂ ಸಂತೋಷದ ವಿಷಯವಾಗಿದೆ.

Picture
ಭಾರತೀಯ ಸಮಾಜ ಸೇವಾ ಟ್ರಸ್ಟ್ :
 ಖ್ಯಾತ ಪರಿಸರವಾದಿ ಎಂದೆ ಗುರಿತಿಸಿಕೊಂಡಿರುವ ಶಿವಮಲ್ಲುರವರು ಪರಿಸರದಲ್ಲಿ ಮಾಲಿನ್ಯತೆಯನ್ನು ನಿಯಂತ್ರಿಸುವ ಮೂಲಕ ಪರಿಸರವನ್ನು ಹಾಗೂ ಇಲ್ಲಿನ ಜೀವ ಜಗತ್ತನ್ನು ಸಂರಕ್ಷಿಸಬೇಕೆಂದು ನಿರ್ಧರಿಸಿ ತಮ್ಮ ತಾಯಿಯ ಸ್ಮರಣಾರ್ಥ 19.7.2000 ರಂದು ಭಾರತೀಯ ಸಮಾಜ ಸೇವಾ ಟ್ರಸ್ಟ್ ಎಂಬ ಹೆಸರಿನ ಪರಿಸರ ಸಂರಕ್ಷಣಾ ಜೀವ ರಕ್ಷಕ ಶಾಂತಿದಾಯಕ ಸೇವಾ ಸಂಸ್ಥೆಯನ್ನು ಸ್ಥಾಪಿಸಿದರು. ಶ್ರೀಯುತರ ಜ್ಞಾನ ಚಿಂತನೆಯ ಫಲವಾಗಿ ಸ್ಥಾಪಿಸಲ್ಪಟ್ಟ ಈ ಸಂಸ್ಥೆಗೆ ಶಿವಮಲ್ಲುರನ್ನೇ ಗೌರವಾನ್ವಿತ ಸಂಸ್ಥಾಪಕ ಅಧ್ಯಕ್ಷರನ್ನಾಗಿ ಮಾಡಿ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಲು ಚಾಲನೆ ನೀಡಲಾಯಿತು.

ಪ್ರಪ್ರಥಮವಾಗಿ ಪರಿಸರವನ್ನು ಮಾಲಿನ್ಯತೆಯಿಂದ ತಡೆಗಟ್ಟಲು ಹಸಿರು ಗಿಡಮರಗಳನ್ನು ಉಳಿಸಿ ಬೆಳೆಸಿ ಸಂರಕ್ಷಿಸಬೇಕೆಂದು ಚಿಂತಿಸಿ, ಈ ನಿಟ್ಟಿನಲ್ಲಿ 2001 ರಲ್ಲಿ ಪರಿಸರದಲ್ಲಿನ ಗಿಡಮರಗಳ ಹಸಿರು ನಮ್ಮ ಬದುಕಿಗೆ ಉಸಿರು, ಪರಿಸರ ಉಳಿಸಿ ಮರಗಳನ್ನು ಬೆಳೆಸಿ ಆಂದೋಲನದ ಅಂಗವಾಗಿ ಸಾರ್ವಜನಿಕವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಟ್ರಸ್ಟ್ ಪರಿಸರ ಸಂರಕ್ಷಣಾ ಸೇವೆಗೆ ಚಾಲನೆ ನೀಡಲಾಯಿತು.

ಶಿವಮಲ್ಲುರವರು ಪರಿಸರ ಕಾಳಜಿಯಿಂದ ಮುಂದೆ ಯಾವ ಯಾವ ರೀತಿಯಲ್ಲಿ ಟ್ರಸ್ಟ್  ಪರಿಸರ ಸಂರಕ್ಷಣೆಗೆ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಮತ್ತು ಯಾವ ರೀತಿಯ ಜನರಲ್ಲಿ ಜಾಗೃತಿ ಮೂಡಿಸಿದರೆ ಪರಿಸರ ಸಂರಕ್ಷಿಸಲು ಸಾಧ್ಯ ಎಂಬುದನ್ನು ಅರಿಯಲು ನಾಡಿನ ಹೆಸರಾಂತ ಕೆಲವು ನಾಯಕರುಗಳು ಮತ್ತು ಪರಿಸರವಾದಿಗಳನ್ನು ಭೇಟಿ ಮಾಡಿ ಮಾಹಿತಿಯನ್ನು ಸಂಗ್ರಹಿಸಿದರು. ಸಮಾಜದ ವಿವಿಧ ಪ್ರಾಜ್ಞರುಗಳನ್ನೊಳಗೊಂಡು ಸಾಂದರ್ಭಿಕವಾಗಿ ಬರುವ ಸಂಬಂಧಪಟ್ಟ ವಿಷಯಗಳ ಬಗ್ಗೆ ವಿಚಾರ ಚಿಂತನೆ ನಡೆಸಿ ಸಾಮಾನ್ಯ ಜ್ಞಾನವೇ ವಿಶ್ವಶಾಂತಿಗೆ ನಾಂದಿಯಾಗಲಿದೆ ಎಂದು ತಿಳಿದು ತಮ್ಮದೇ ಆದ ಜ್ಞಾನಾರ್ಜನೆಯ ಆಧಾರದ ಮೇಲೆ ಪ್ರಾಜ್ಞರನ್ನೊಳಗೊಂಡ ವಿಚಾರ ಸಂಕೀರಣಗಳನ್ನು ಹಮ್ಮಿಕೊಂಡು, ಚಿಂತನ ಮಂಥನ ನಡೆಸಿ, ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿದರು. ಆಯಾಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಸೇವಾ ಕಾರ್ಯಕ್ರಮಗಳನ್ನು ರೂಪಿಸಿ, ಸೇವಾ ಕಾರ್ಯಕ್ರಮದ ಮೂಲಕ ಇಂದಿನ ಜಾಗೃತಿಯೇ ನಾಳಿನ ಕಾರ್ಯಪ್ರವೃತ್ತಿ ಎಂಬ ಜಾಗೃತಿ ಮೂಲಕ ಸೇವೆಯನ್ನು ಪ್ರಾರಂಭಿಸಿದ್ದಾರೆ. ಪರಿಸರ ಸಂರಕ್ಷಣಾ ಕಾರ್ಯಪ್ರವೃತ್ತಿಗೆ ಶಿಕ್ಷಣ, ಸಾರ್ವಜನಿಕ ಮತ್ತು ಮಹಿಳಾ ಸಮುದಾಯಗಳನ್ನು ಪ್ರೇರೇಪಿಸಿ ಕಾರ್ಯನ್ಮುಖರನ್ನಾಗಿಸಿ ವ್ಯಕ್ತಿಗಳ ಆರೋಗ್ಯ ಶಾಂತಿ ಸಮಾಧಾನವೇ ಕುಟುಂಬದ, ರಾಜ್ಯದ, ರಾಷ್ಟ್ರದ ಅಷ್ಟೇ ಏಕೆ ವಿಶ್ವದ ಆರೋಗ್ಯ ಶಾಂತಿ ಸಮಾಧಾನವೆಂದು ಸಮಾಜದ ಉದ್ದಗಲಕ್ಕೂ ಪರಿಸರವಾದಿ ಶಿವಮಲ್ಲುರವರ ನೇತೃತ್ವ ಸಾರಥ್ಯ ಹಾಗೂ ಅಧ್ಯಕ್ಷತೆಯಲ್ಲಿ 27ಕ್ಕೂ ಹೆಚ್ಚು ವಿವಿಧ ಆಂದೋಲನಗಳಡಿಯಲ್ಲಿ 1500 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಗುತ್ತಾ ಇಂದಿಗೂ ಪರಿಸರ ಸಂರಕ್ಷಣಾ ಸೇವೆಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಈ ನಿಟ್ಟಿನಲ್ಲಿ ಸಮಾಜವನ್ನು ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಕಾರ್ಯಪ್ರವೃತ್ತರನ್ನಾಗಿಸುವ ಸದುದ್ದೇಶದಿಂದ ಕಳೆದ ಹಲವಾರು ವರ್ಷಗಳಿಂದ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ನಾನಾ ರೀತಿಯ ಆಂದೋಲನಗಳಲ್ಲಿ ಅನೇಕ ರೀತಿಯ ವಿಚಾರ ಸಂಕಿರಣಗಳನ್ನು ಆಯೋಜಿಸಿದ್ದಾರೆ. ಪ್ರಾತ್ಯಕ್ಷಿಕೆ ಮತ್ತು ಕಾರ್ಯಪ್ರವೃತ್ತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಸರ ಸಂರಕ್ಷಣೆಯತ್ತ ಸೇವೆಸಲ್ಲಿಸುತ್ತಿದ್ದಾರೆ. ಮುಂದೆ ಸಾಗುತ್ತಿರುವ ಹಿನ್ನೆಲೆಯ ಪರಿಸರ ಸಂರಕ್ಷಣಾ ಜೀವ ರಕ್ಷಕ ಶಾಂತಿದಾಯಕ ಸಮಾಜ ಸೇವಾ ಕಾರ್ಯಪ್ರವೃತ್ತಿಯ ಪ್ರಾತ್ಯಕ್ಷಿಕೆಯ ಪ್ರಮುಖ ಕಾರ್ಯಕ್ರಮಗಳ ಪಕ್ಷಿನೋಟದ ಕಿರು ಪರಿಚಯ ಈ ಕೆಳಕಂಡಂತಿದೆ.
  1. ಪರಿಸರದಲ್ಲಿನ ಗಿಡಮರಗಳ ಹಸಿರು ನಮ್ಮ ಬದುಕಿಗೆ ಉಸಿರು - ಪರಿಸರ ಉಳಿಸಿ ಮರಗಳನ್ನು ಬೆಳಸಿ ಆಂದೋಲನದ ಅಂಗವಾಗಿ ಸಾರ್ವಜನಿಕ ಸಸಿ ನೆಡುವ ಕಾರ್ಯಕ್ರಮ,
  2. ಪರಿಸರ ಸಂರಕ್ಷಣೆ ವಿಚಾರ ಸಂಕಿರಣ,
  3. ಶಿಕ್ಷಣದಲ್ಲಿ ಪರಿಸರ ಸಂರಕ್ಷಣೆ  ಆಂದೋಲನದ ಅಂಗವಾಗಿ ಶಾಲಾ ಕಾಲೇಜುಗಳಲ್ಲಿ ಪರಿಸರ ಸಂರಕ್ಷಣೆ ಕಾರ್ಯಕ್ರಮ,
  4. ಪರಿಸರ ಮಾಲಿನ್ಯತೆಯ ಬಗ್ಗೆ ಜಾಗೃತಿ, ಪರಿಸರ ಸಂರಕ್ಷಣೆಯ ಬಗ್ಗೆ ಕಾರ್ಯಪ್ರವೃತ್ತಿ, ಆಂದೋಲನದ ಅಂಗವಾಗಿ ಸಾರ್ವಜನಿಕ ಪರಿಸರ ಸಂರಕ್ಷಣಾ ಜಾಗೃತಿಯ ಉಚಿತ ಕರಪತ್ರ ವಿತರಿಸುವ ಕಾರ್ಯಕ್ರಮ,
  5. ಮನೆಯಂಗಳದಲ್ಲಿ ಪರಿಸರ ಸಂರಕ್ಷಣೆ ಆಂದೋಲನದ ಅಂಗವಾಗಿ ಸಸಿ ನೆಡಿ - ಹಿತ ನುಡಿ ಕಾರ್ಯಕ್ರಮ,
  6. ಬಡಾವಣೆಯಲ್ಲಿ ಪರಿಸರ ಸಂರಕ್ಷಣೆ ಅಂದೋಲನದ ಅಂಗವಾಗಿ ಪರಿಸರ ಸ್ವಚ್ಚತಾ ಜಾಗೃತಿ ಕಾರ್ಯಕ್ರಮ,
  7. ಒಬ್ಬ ಒಂದು ಮರ ಬೆಳೆಸಿದರೆ ಆಗುವುದು ದೇಶದಲ್ಲಿ ಕೋಟ್ಯಾಂತರ ಮರ ಆಂದೋಲನದ ಅಂಗವಾಗಿ ಸಸಿ ನೆಡಿ ನಾಡಿನೆಲ್ಲರ ಭವಿಷ್ಯಕ್ಕೆ ಹಿತನುಡಿ ಕಾರ್ಯಕ್ರಮ,
  8. ನೈಸರ್ಗಿಕ ಪರಿಸರ ವೀಕ್ಷಣೆ ಆಂದೋಲನದ ಅಂಗವಾಗಿ ಅರಣ್ಯ ಮತ್ತು ಉದ್ಯಾನವನಗಳನ್ನು ಸಂರಕ್ಷಿಸಿ ನಾಡನ್ನು ಮತ್ತು ಜೀವ ಜಗತ್ತನ್ನು ರಕ್ಷಿಸಿ ಎಂಬ ಅರಣ್ಯ ಹಾಗೂ ಉದ್ಯಾನವನಗಳ ಪ್ರಾತ್ಯಕ್ಷಿಕೆಯ ಕಾರ್ಯಕ್ರಮ,
  9. ನೀರು ಜೀವಕೋಟಿಯ ಸಂಜೀವಿನಿ ಆಂದೋಲನದ ಅಂಗವಾಗಿ ನೀರನ್ನು ಉಳಿಸಿ ಜೀವ ಜಗತ್ತನ್ನು ರಕ್ಷಿಸಿ ಎಂಬ ನೀರನ್ನು ಕುರಿತ ಪ್ರಾತ್ಯಕ್ಷಿಕೆ ಕಾರ್ಯಕ್ರಮ,
  10. ಮಹಿಳೆಯರಿಂದ ಪರಿಸರ ಸಂರಕ್ಷಣೆ ಆಂದೋಲನದ ಅಂಗವಾಗಿ ಪರಿಸರ ವಠಾರ ಕಾರ್ಯಕ್ರಮ,
  11. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ನಾಟಕ ಪ್ರದರ್ಶನ,
  12. ಪರಿಸರ ಸಂರಕ್ಷಣೆ ವೇಷಭೂಷಣ ಸ್ಪರ್ಧೆ,
  13. ಪರಿಸರ ಗೀತ ಗಾಯನ ಕಾರ್ಯಕ್ರಮ,
  14. ದಿನಬಳಕೆ ಪ್ಲಾಸ್ಟಿಕ್ ತ್ಯಜಿಸಿ ಕಾಗದ ಬಳಸಿ ಕಾರ್ಯಕ್ರಮ,
  15. ಹಸಿರು ರಕ್ಷಾ ಕವಚದಲ್ಲಿ ಉಸಿರು ಸೇವಾ ಯೋಜನೆಯ ಪಕ್ಷಿ ನೋಟ,
  16. ಹಸಿರಾಗಿಸಿ ನಿಮ್ಮ ಊರನ್ನು ಹಸಿರಾಗಿಸಿ ಭಾರತದೆಲ್ಲರ ತನುಮನವನ್ನು ಆಂದೋಲನ ಕಾರ್ಯಕ್ರಮ.
ಹೀಗೆ ಬಿ.ಎಸ್.ಎಸ್ ಟ್ರಸ್ಟ್ನ ಪರಿಸರವಾಗಿ ಶಿವಮಲ್ಲುರವರು ನಾಡಿನ ಖ್ಯಾತ ಚಿಂತಕರುಗಳ ಮಾರ್ಗದರ್ಶನದಂತೆ, ಅದರಲ್ಲೂ ವಿಶೇಷವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಪ್ರೊ. ತಿಮ್ಮಪ್ಪರವರ ಮಾರ್ಗದರ್ಶನದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಸರ ರಕ್ಷಿಸುವಲ್ಲಿ ಕಾರಣೀಭೂತರಾಗುತ್ತಿದ್ದಾರೆ.

Picture
Picture
ಸಲಹೆಗಳು :
ಬೆಂಗಳೂರು ನಗರ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ ಕಾಪಾಡಲು ಕೆಲವು ಅಂಶಗಳು ಮುಖ್ಯ. ಅಂತಹ ಕೆಲವು ವಿಷಯಗಳನ್ನು ನಮ್ಮ ಕ್ಷೇತ್ರಕಾರ್ಯದ ಸಮಯದಲ್ಲಿ ಕೂಲಂಕುಶವಾಗಿ ಅವಲೋಕಿಸಲಾಗಿದೆ, ಈ ಅವಲೋಕನದಂತೆ ಕೆಲವು ಸಲಹೆಗಳನ್ನು ನೀಡಲಾಗಿದೆ. ಅವುಗಳೆಂದರೆ;
  1. ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸಬೇಕು.
  2. ಸರ್ಕಾರ, ಎನ್‍ ಜಿ ಒಗಳು ಮತ್ತು ಸಾರ್ವಜನಿಕ ಸಹಯೋಗದಲ್ಲಿ ಪರಿಸರ ಆಂದೋಲನಕ್ಕೆ ಕ್ರಮ ಕೈಗೊಳ್ಳಬೇಕು.
  3. ನಗರ ಪ್ರದೇಶಗಳಲ್ಲಿ ಮನೆ ಮಾಲೀಕರು ತಮ್ಮ ಮನೆ ಮುಂದೆ ಸಸಿ ನೆಟ್ಟು 3 ವರ್ಷ ಆ ಸಸಿಗಳನ್ನು ಬೆಳೆಸಿ ಪೋಷಿಸಿದರೆ ಸರ್ಕಾರದ ವತಿಯಿಂದ ತೆರಿಗೆ ವಿನಾಯಿತಿ ನೀಡುತ್ತೇವೆ ಎಂದು ಸರ್ಕಾರ ಘೋಷಣೆ ಮಾಡಬೇಕು.
  4. ಪ್ಲಾಸ್ಟಿಕ್ ಮುಕ್ತ ಯೋಜನೆಯನ್ನು ಕಟ್ಟುನಿಟ್ಟಿನ ಕ್ರಮ ಜರುಗಿಸುವುದು.
  5. ಬೆಂಗಳೂರು ನಗರದಲ್ಲಿ ಸುಮಾರು 2000 ಕ್ಕಿಂತಲೂ ಅಧಿಕ ಸಂಘಸಂಸ್ಥೆಗಳಿವೆ. ಅವುಗಳನ್ನು ಬಳಸಿಕೊಂಡು ನಗರ ಸ್ವಚ್ಚತೆ ಕಾಪಾಡಬೇಕು.
  6. ಮುಖ್ಯವಾಗಿ ಶಾಲಾ- ಕಾಲೇಜುಗಳಲ್ಲಿ ಜಾಗೃತಿ ಮೂಡಿಸಿ, ಅವರಿಂದ ನಂತರ ಕುಟುಂಬದ ಸದಸ್ಯರಿಗೆ ಮಕ್ಕಳಿಂದಲೇ ಜಾಗೃತಿ ಮೂಡಿಸುವಂತೆ ಮಾಡಿ ಪರಿಸರ ಸಂರಕ್ಷಿಸಬೇಕು.
 
ಉಪಸಂಹಾರ :
1939-1944  2ನೇ ಮಹಾಯುದ್ದದ ನಂತರ ಕಾಡಿನ ನಾಶ ವಿನಾಶದ ಮಟ್ಟ ಮುಟ್ಟಿ ಮುಂದಿನ ಪೀಳಿಗೆಯ ಹಿತ ಡೋಲಾಯಮಾನವಾಯಿತು. ಕೈಗಾರಿಕಾ ಅಭಿವೃದ್ದಿಯಲ್ಲಿ ಕಾರ್ಖಾನೆಗಳು ಮತ್ತು ನಗರೀಕರಣದಿಂದ ಶುದ್ದವಾಗಿದ್ದ ಪರಿಸರದಲ್ಲಿಂದು ಮಾಲಿನ್ಯತೆ ಮರುಕಳಿಸುಂವಂತಾಗಿ ಅನೇಕಾನೇಕ ರೀತಿಯ ರೋಗರುಜೀನಗಳು, ಹವಾಗುಣ  ವ್ಯತ್ಯಾಸ ಹೀಗೆ ಹತ್ತು ಹಲವಾರು ರೀತಿ ತೊಂದರೆಗಳು ಪರಿಸರದಲ್ಲಿ ಕಾಣಿಸಿಕೊಂಡು, ಮನುಕುಲದ ಮಾನಸಿಕ ತೊಂದರೆಗೂ ಈ ಪರಿಸರ ಮಾಲಿನ್ಯ, ಮುಖ್ಯ ಕಾರಣವಾಗಿರುವುದಲ್ಲದೆ, ಮನುಕುಲ ಸಸ್ಯ, ಮತ್ತು ಪ್ರಾಣಿ  ಸಂಕುಲಗಳ ಅವನತಿಗೂ ಕಾರಣವಾಗಿದೆ. ಇಂತಹ ದಾರುಣ ಪರಿಸ್ಥಿತಿಯಲ್ಲಿ ಇಂದು ಹೆಮ್ಮರವಾಗಿ ಬೆಳೆದ ಅದಮ್ಯ ಮತ್ತು ಬಿ.ಎಸ್.ಎಸ್. ಟ್ರಸ್ಟ್ ಸಂಸ್ಥೆಗಳು ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೆ, ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರೆ ತಪ್ಪಾಗಲಾರದು.
 
ಆಧಾರ ಗ್ರಂಥಗಳು
  1. Ashok Kumar, (2008), Kar : NGOS and Globalization-(Development and organization of facts).:- sarkar-Rawat Publications, Page no:-158-170.
  2. Dr. M.N Narasaiah, (2005), NGOS and Rural Poverty, Discovery Publication house- New Delhi, “Page no-1to11”.
  3. Raj Kumar, (2006), Environmental Pollution, Edited by- Anmol Publications Pvt.Ltd, New Delhi, Page no 1-302.
  4. ಕೆ ಗಣೇಶ್ ಬಾಬು, (2012), ಎನ್.ಜಿ.ಒ ಮತ್ತು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು - ಡಿಸ್ಕವರಿ ಪಬ್ಲಿಕೇಷನ್ ಹೌಸ್ ಪ್ರೈ.ಲಿ, ನವದೆಹಲಿ.
  5. ರಾಜಾರಾಮ ಹೆಗಡೆ, (2002), ಕೆರೆ ನೀರಾವರಿ ನಿರ್ವಹಣೆ ಚಾರಿತ್ರಿಕ ಅಧ್ಯಯನ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ.
  6. ಡಾ. ಚಂದ್ರಶೇಖರ್, ಅಭಿವೃದ್ದಿ ಪಥದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು, ಕಾಲೇಜ್ ಬುಕ್ ಹೌಸ್, ಬೆಂಗಳೂರು:
  7. ದೇವದಾಸ್, (07/08/2017), ನಮ್ಮ ಒಳಿತಿಗಾಗಿ ಪರಿಸರದ ಉಳುವಿನ ಚಿಂತನೆ, ವಿಜಯ ಕರ್ನಾಟಕ, ಮಾತುಮಂಥನ ವಿಭಾಗ.
  8. ಪರಿಸರವಾದಿ ಶಿವಮಲ್ಲು, ಪರಿಸರ ಮಾಲಿಕೆ 01, ಇನ್ನೆಲ್ಲಿಯ ಜೀವನ ?, ಭಾರತೀಯ ಸಮಾಜ ಸೇವಾ ಟ್ರಸ್ಟ್ ಪ್ರಕಾಶನ, ಬೆಂಗಳೂರು. ಪುಟ ಸಂಖ್ಯೆ - xxii to xxxv.
  9. ಕ್ಷೇತ್ರಕಾರ್ಯದ ಮಾಹಿತಿ, [ದಿನಾಂಕ 15.07.2018, ಸಮಯ 1.30 ರಿಂದ 3.00 ಗಂಘೆಯವರೆಗೆ, ಭಾರತೀಯ ಸಮಾಜ ಸೇವಾ ಟ್ರಸ್ಟ್ ಸ್ಥಾಪಕ ಗೌರವಾಧ್ಯಕ್ಷರೊಂದಿಗೆ].
  10. ಮಾರ್ಚ್ ತಿಂಗಳ ನಾಲ್ಕು ವಾರಗಳಲ್ಲಿ ನಡೆದ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಭಾಗಿ, [ಸ್ಥಳದಲ್ಲಿಯೇ ಅದಮ್ಯ ಚೇತನ ಸಂಸ್ಥೆಯ ಶ್ರೀಮತಿ ತೇಜಸ್ವಿನಿ ಅನಂತ್ಕುಮಾರ್ ರವರೊಂದಿಗೆ ಸಂದರ್ಶನ, ಸಮಯ ಬೆಳಿಗ್ಗೆ 9.30 ರಿಂದ 11.30ರವರೆಗೆ. 
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture

    Social Work Learning Academy

    Join WhatsApp Channel

    Niruta Publications

    Social Work Foot Prints

    Leaders Talk

    Ramesha Niratanka

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com