Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ಸರ್ವೋದಯ ಸಮಾಜದ ರೂಪು ರೇಷೆಗಳು

7/6/2017

0 Comments

 
ವಿಶ್ವದಲ್ಲಿ ಪ್ರಚಲಿತವಾಗಿ ಅನೇಕ ಸಿದ್ಧಾಂತಗಳಿವೆ. ಅವೆಂದರೆ, ಬಂಡವಾಳಶಾಹಿ ಪದ್ಧತಿ ಬಹುಜನರ ಹಿತಕಾಯುವ ಪದ್ಧತಿ, ಸರ್ವಾಧಿಕಾರಿ ಪದ್ಧತಿ, ರೈತ, ಕಾರ್ಮಿಕರ ಹಿತಾಸಕ್ತಿಯ ಪದ್ಧತಿ ಮುಂತಾದವು. ಇವುಗಳೆಲ್ಲ ಈಗ Out of Date ಆಗಿರುವ ಪದ್ಧತಿಗಳು. 'ಸರ್ವರಿಗೂ ಸಮಪಾಲು' ಎನ್ನುವ ಸರ್ವೋದಯ ಪದ್ಧತಿ ಜಾರಿಗೆ ತರುವುದು ಗಾಂಧೀಜಿಯ ಗುರಿಯಾಗಿತ್ತು. ಸರ್ವೋದಯ, ಅಂತ್ಯೋದಯದಿಂದ ಆರಂಭವಾಗಬೇಕು. ಕಟ್ಟಕಡೆಯ ಮನುಷ್ಯನ ಅಭ್ಯುದಯಕ್ಕೇ ಆದ್ಯತೆ ಇರಬೇಕು. ಇದು ಸರ್ವೋದಯ ತತ್ತ್ವ.

ಸರ್ವೋದಯ ಸಮಾಜ ರಚನೆ ನಮ್ಮ ಗುರಿಯಾಗಬೇಕು. ಸರ್ವೋದಯ ಸಮಾಜ ರಚನೆಯ ಸೂತ್ರ ಇದಾಗಿದೆ-ಶಾಸನಮುಕ್ತ, ಶೋಷಣ ರಹಿತ, ದಂಡನಿರಪೇಕ್ಷ, ಅಹಿಂಸಕ ಸಮಾಜ ರಚನೆ.

Government is the best that governs the least  ಇದು ಶಾಸನಮುಕ್ತ ಸರ್ವೋದಯ ಸಮಾಜದ ಗುರಿ.

ಶೋಷಣರಹಿತ ಸಮಾಜ ರಚನೆ ನಮ್ಮ ಎರಡನೆಯ ಗುರಿ. ಸ್ವರಾಜ್ಯ ಎಂದರೆ ಪ್ರತಿ ಪ್ರಜೆಯೂ ತನ್ನ ಜವಾಬ್ದಾರಿಯನ್ನು ಅರಿತು ನಡೆಯುವುದು. ದೇಶಕ್ಕೆ ಸ್ವಾತಂತ್ರ್ಯ ಬಂದರೆ ಸಾಲದು, ಪ್ರತಿ ಪ್ರಜೆಯೂ ತನ್ನ ಹೊಣೆಗಾರಿಕೆಯನ್ನು ಅರಿತುಕೊಳ್ಳಬೇಕು. ತನ್ನ ಮೇಲೆ ತನ್ನದೇ ಹತೋಟಿಯನ್ನು ಇಟ್ಟುಕೊಳ್ಳಲಾರದವನು, ಸಮಾಜವನ್ನೇನು ಹತೋಟಿ ಮಾಡಬಲ್ಲನು? ಹೀಗೆ ಪ್ರತಿಯೊಬ್ಬ ಪ್ರಜೆಯೂ ಯಾವಾಗ ತನ್ನ ಕರ್ತವ್ಯವನ್ನರಿತು ನಡೆದುಕೊಳ್ಳುವನೋ ಅಂದು ಪೊಲೀಸರ ಅಗತ್ಯ ಸಮಾಜಕ್ಕೆ ಇರಲಾರದು. ದಂಡಶಕ್ತಿಯ ಬಳಕೆ ಕೂಡಾ ಕನಿಷ್ಠ ಮಟ್ಟದಲ್ಲಿರುತ್ತದೆ.

ಹಿಂಸೆ ಹಾಗೂ ಶೋಷಣೆ ಇಲ್ಲದ ಒಂದು ಅಹಿಂಸಕ ಸಮಾಜ ರಚನೆ ನಮ್ಮ ಗುರಿಯಾಗಬೇಕು.

ದೇಶದ ಪ್ರಕೃತಿ ಸಂಪತ್ತುಗಳಾದ ಭೂಮಿ, ನೀರು, ಗಾಳಿ, ಸೂರ್ಯ, ಆಕಾಶ, ಈ ಪಂಚಭೂತಗಳು ಸರ್ವರಿಗಾಗಿ ಸೃಷ್ಟಿಯಾದವುಗಳು. ಇದು ಪ್ರಕೃತಿಯ ಕೊಡುಗೆ, ದೇವರ ಕೊಡುಗೆ. ಈ ಪಂಚಭೂತಗಳ ಮೇಲಿನ ಒಡೆತನ ಯಾರೋ ಕೆಲವರ ಕೈಲಿರತಕ್ಕದ್ದಲ್ಲ. ಭಗವಂತನ ಸೃಷ್ಟಿಯಾದ ಈ ಪಂಚಭೂತಗಳ ಉಪಯೋಗ ಮಾನವನಿಗೆ ಮಾತ್ರ ಸೀಮಿತವಾಗದೆ ಅವನು ಸೃಷ್ಟಿಸಿರುವ ಖಗಮೃಗಗಳು. ಜಲಚರಗಳು ಎಲ್ಲಕ್ಕೂ ಅಬಾಧಿತವಾಗಿ ಸಿಗುವುದಾಗಬೇಕು.

ಭೂಮಿ ಕಾರ್ನ್‍ವಾಲೀಸ್ ಕಾಲದಲ್ಲಿ ಕೆಲವರ ಸ್ವತ್ತಾಯಿತು. ಅದಕ್ಕೆ ಹಿಂದೆ ಭೂಮಿಗೆ ಮಾಲೀಕತ್ವ ಇರಲಿಲ್ಲ. ಭೂಮಿಯನ್ನು ಮಾರುವ, ಅಡವಿಡುವ ವ್ಯವಸ್ಥೆ ಇರಲಿಲ್ಲ. ಭೂಮಿ ಮಾರಾಟದ ವಸ್ತುವಾಗಿರಲಿಲ್ಲ. ಅದು ಬೆಳೆದು ತಿನ್ನುವ ಸಾಧನ ಮಾತ್ರವಾಗಿತ್ತು. ಬ್ರಿಟಿಷರು ಬಂದ ಮೇಲೆ ಭೂಮಾಲೀಕ ಹುಟ್ಟಿಕೊಂಡ. ಮಾಲೀಕನ ಸೇವೆಗೆ ಭೂರಹಿತ ಕಾರ್ಮಿಕನ ಸೃಷ್ಟಿಯಾಯಿತು. ದುಡಿಸಿಕೊಂಡು ತಿನ್ನುವವನು, ದುಡಿಯುವವನು ಹೀಗೆ ಎರಡು ವರ್ಗಗಳ ಸೃಷ್ಟಿಯಾಯಿತು. ದುಡಿಯದೇ ತಿನ್ನುವವನು ಕಳ್ಳ ಎಂದು ಉಪನಿಷತ್ತು ಹೇಳುತ್ತದೆ.

ಈ ವ್ವವಸ್ಥೆ ಹೋಗಿ ಭೂಮಿ ದುಡಿದು ತಿನ್ನುವವನದಾಗಬೇಕು. ಭೂಮಿಯ ಮಾರಾಟ, ಭೋಗ್ಯ, ಆಧಾರ ಮುಂತಾದ ಕೆಟ್ಟ ಪದ್ಧತಿಗಳ ರದ್ದತಿ ಆಗಬೇಕು. ದುಡಿಮೆ ಮಾಡುವವನಿಗೂ ಭೂಮಿ ದೊರೆಯಬೇಕು. ಈ ನಿಟ್ಟಿನಲ್ಲಿ ಭೂಕ್ರಾಂತಿ ಕಾಯ್ದೆಗಳಾಗಬೇಕು. ಭೂಮಿತಿ ಕಾಯ್ದೆ ರೂಪುಗೊಳ್ಳಬೇಕು. ನಾವು ನಿಜ ಜನಪ್ರತಿನಿಧಿಗಳನ್ನೇ ಚುನಾವಣೆಗೆ ಅಭ್ಯರ್ಥಿಗಳನ್ನಾಗಿ ನೇಮಿಸುವುದಾಗಬೇಕು. ಈಗ ಇರುವ ಪ್ರತಿನಿಧಿಗಳೆಲ್ಲ ಪಕ್ಷ ಪ್ರತಿನಿಧಿಗಳು. ಪಂಚಾಯ್ತಿಗಳಿಂದ ಹಿಡಿದು ಪಾರ್ಲಿಮೆಂಟ್‍ವರೆಗೂ ನಾವೀಗ ಅದಕ್ಕಾಗಿ 'ಮತದಾರರ ಸಂಘಗಳನ್ನು' ರಚಿಸಬೇಕು ಎನ್ನುತ್ತದೆ ಸರ್ವೋದಯ. ಆಯಾ ಕ್ಷೇತ್ರದ ಮತದಾರರೆಲ್ಲ ಈ ಮತದಾರರ ಸಂಘದ ಸದಸ್ಯರು. ಮತದಾರ ಸಂಘಗಳ ಸದಸ್ಯರು ಸಭೆ ನಡೆಸಿ ತಮ್ಮ ಅಭ್ಯರ್ಥಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡುತ್ತಾರೆ. ಇವರನ್ನು ಹೆಸರಿಸಿದವರು ಮತದಾರರ ಸಂಘದ ಸದಸ್ಯರಾದ್ದರಿಂದ, ಅವರು ಮತಗಳನ್ನು ಸಹಜವಾಗಿ ಈ ಅಭ್ಯರ್ಥಿಗೇ ಕೊಟ್ಟು ಗೆಲ್ಲಿಸುತ್ತಾರೆ. ಈ ರೀತಿಯಲ್ಲಿ ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ, ಪಂಚಾಯ್ತಿಯಿಂದ ಹಿಡಿದು ಪಾರ್ಲಿಮೆಂಟ್‍ವರೆಗೆ ನಿಜವಾದ ಜನಪ್ರತಿನಿಧಿಗಳೇ ಸದಸ್ಯರಾಗಿ ಇರುತ್ತಾರೆ. ಮತದಾರ ಸಂಘಗಳು ತಮ್ಮ ಪ್ರತಿನಿಧಿಗಳ ಕರ್ತವ್ಯ ನಿರ್ವಹಣೆಯ ಕ್ರಮವನ್ನು ನಿಯಂತ್ರಿಸುತ್ತವೆ. ದಾರಿತಪ್ಪಿ ನಡೆದವರಿಗೆ ಶಿಕ್ಷೆ ಮಾಡುತ್ತಾರೆ. ಅಗತ್ಯ ಬಿದ್ದರೆ ಅಂತಹ ಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಕಾನೂನನ್ನು ಜಾರಿಗೊಳಿಸಲಾಗುವುದು.

ಆರ್ಥಿಕವಾಗಿ ರೂಢಮೂಲ ಬದಲಾವಣೆಯನ್ನು ತರಲು ಸರ್ವೋದಯ ಬಯಸುತ್ತದೆ. ಇಂದಿನ ಸಮಾಜದಲ್ಲಿ  ಹಣಕ್ಕೆ ಎಲ್ಲಿಲ್ಲದ ಮಹತ್ವ ನೀಡಲಾಗಿದೆ. ಹಣವನ್ನು ವಿನಿಮಯಕ್ಕಾಗಿ ನಾವು ಸೃಷ್ಟಿ ಮಾಡಿಕೊಂಡೆವು. ಈ ನಿರ್ಜೀವ ವಸ್ತು ಈಗ ನಮ್ಮನ್ನೇ ಆಳಲು ಹೊರಟಿದೆ. ಎಲ್ಲ ಭ್ರಷ್ಟಾಚಾರಕ್ಕೂ ಅದು ದಾರಿಮಾಡಿಕೊಟ್ಟಿದೆ. ಈ ನಿರ್ಜೀವಿಯಾದ ಹಣಕ್ಕೆ ಇಷ್ಟೊಂದು ಅಧಿಕಾರ ಕೊಟ್ಟವರು ಯಾರು? ನಾಯಿ ಬಾಲವನ್ನಾಡಿಸುವುದು ಸಹಜ, ಬಾಲವೇ ನಾಯಿಯನ್ನು ಅಲ್ಲಾಡಿಸುವುದು ಎಷ್ಟು ಸರಿ! ನಾವು ನಮ್ಮ ಅನುಕೂಲಕ್ಕಾಗಿ ಸೃಷ್ಟಿಸಿಕೊಂಡ ಹಣ ಇಂದು ನಮ್ಮನ್ನೇ ಕೊಳ್ಳಲು, ನಾಶ ಮಾಡಲು ಹೊರಟಿದೆ.

ಹಣದ ನಿಯಂತ್ರಣಕ್ಕೆ ಸರ್ವೋದಯ ಮಾರ್ಗವನ್ನು ಸೂಚಿಸುತ್ತದೆ. ರೂಪಾಯಿಯನ್ನು ಗುಂಡಗೆ ತಯಾರು ಮಾಡಲಾಗಿದೆ. ಅದು ಸದಾ ಕೈಯಿಂದ ಕೈಗೆ ಸಂಚರಿಸುತ್ತಾ ಇರಬೇಕು. ನೋಟನ್ನು ಕರೆನ್ಸಿ ಎನ್ನುತ್ತೇವೆ. ಕರೆಂಟ್ ಪ್ರವಹಿಸುವಂತೆ ಅದು ಕೈಯಿಂದ ಕೈಗೆ ಚಲಾವಣೆಯಾಗುತ್ತಿರಬೇಕು. ಆದರೆ ಈಗ ಹಣ ಸಣ್ಣ ದೊಡ್ಡ ಹಳ್ಳಗಳಲ್ಲಿ ನೀರಿನಂತೆ ನಿಂತು ಕೊಳೆಯುತ್ತಿದೆ. ಅದು ರೋಗಾಣುಗಳನ್ನು ಉತ್ಪತ್ತಿಮಾಡುತ್ತದೆ. ಸಾಮಾಜಿಕ ರೋಗ ಹರಡಲು ಸಾಧನವಾಗಿದೆ. ಸಾಮಾಜಿಕ ಅಸಮತೋಲನಕ್ಕೆ ಹಣ ನೆರವಾಗುತ್ತಿದೆ.

ಈ ವಿಷ ಸದೃಶ ಹಣವನ್ನು ನಿಯಂತ್ರಿಸಬೇಕು. ಅದು ಎಲ್ಲೂ ಮಡುಗಟ್ಟದಂತೆ ನೋಡಿಕೊಳ್ಳಬೇಕು. ಅದು ಕೈಯಿಂದ ಕೈಗೆ ಪ್ರವಹಿಸುತ್ತಿರಬೇಕು. ಈ ಗುರಿ ಸಾಧನೆಗಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಸರ್ವೋದಯ ಸಾರಿ ಹೇಳುತ್ತದೆ.

ಹಣ ಅಸಮಾನತೆಯನ್ನು ಹೆಚ್ಚಿಸುವ ಸಾಧನವಾಗಿದೆ. ಹಣ ಬಡವ ಬಲ್ಲಿದರನ್ನು ಸೃಷ್ಟಿಮಾಡಿದೆ. ಇವರಿಬ್ಬರ ಮಧ್ಯೆ ಕಂದರವನ್ನುಂಟು ಮಾಡಿದೆ. ಈ ಕಂದರವನ್ನು ಮುಚ್ಚುವ ಕೆಲಸ ಆಗಬೇಕು. ಬಡತನ ನಿವಾರಣೆಗಾಗಿಯೇ ಎರಡು  ಪಾಂಚವಾರ್ಷಿಕ ಯೋಜನೆಗಳನ್ನು ಕೂಡಲೇ ಕೈಗೊಳ್ಳಬೇಕು.

ನಮ್ಮ ಇಂದಿನ ಸಮಾಜವನ್ನು ಜಯಪ್ರಕಾಶರು Human Jungle ಎಂದು ಕರೆದಿದ್ದಾರೆ. ಹುಲಿ ಹುಲ್ಲೆಯನ್ನು ತಿನ್ನುವಂತೆ ಶ್ರೀಮಂತರು ಬಡವರನ್ನು ಶೋಷಣೆ ಮಾಡುತ್ತಾರೆ. ಸರ್ಕಾರದ ಕಾನೂನುಗಳು, ಅಭಿವೃದ್ಧಿ ಕಾರ್ಯಗಳು ಎಲ್ಲವೂ ಶ್ರೀಮಂತರ ಪರವಾಗಿವೆ. ನಡೆದಿರುವ 12 ಪಾಂಚವಾರ್ಷಿಕ ಯೋಜನೆಗಳ ಫಲಶ್ರುತಿಯೂ ಇದೇ ಆಗಿದೆ. ಈ System ಅನ್ನು ಹೂತುಹಾಕಬೇಕಾಗಿದೆ. ಸರ್ವರಿಗೂ ಸಮಪಾಲು ಎಂಬುದನ್ನು ಜಾರಿಗೊಳಿಸಬೇಕಾಗಿದೆ. ಈ ಜಾತಿ ಆ ಜಾತಿ, ಬಡವ, ಬಲ್ಲಿದ, ಶೋಷಕ, ಶೋಷಿತ, ವಿದ್ಯಾವಂತ, ನಿರಕ್ಷರಕುಕ್ಷಿ, ಮುಂತಾದ ಭೇದಾಸುರರನ್ನು ಹತ್ತಿಕ್ಕಬೇಕಾಗಿದೆ. ಈಗಿನ ಸಮಾಜ ಮರಳುದಿಬ್ಬ ಇದ್ದ ಹಾಗಿದೆ. ಒಂದು ಸುಂಟರಗಾಳಿ ಬೀಸಿದರೆ ಮರಳು ಕಣಗಳು ಪ್ರತ್ಯೇಕಗೊಳ್ಳುವಂತೆ, ತೋರಿಕೆಗೆ ಒಂದಾಗಿ ತೋರುವ ಸಮಾಜ, ಸರ್ಕಾರದ ದುರ್ನೀತಿಯ ಜಂಘಾಘಾತದ ಪರಿಣಾಮವಾಗಿ ಛಿದ್ರ ಛಿದ್ರವಾಗಿದೆ. ನಮ್ಮ ಸಮಾಜ ಜೇಡಿಮಣ್ಣಿನ ಸಮಾಜ ಆಗಬೇಕು. ಎಂತಹ ಸುಂಟರಗಾಳಿ ಬೀಸಿದರೂ ಕಣ ಕಣವೂ ಅಂಟಿಕೊಂಡೇ ಇರಬೇಕು. ಬೇರ್ಪಡಬಾರದು. ಇದನ್ನೇ ಸರ್ವೋದಯ ಸಮಾಜ ಎನ್ನುವುದು.

ಶಿಕ್ಷಣ ಈಗ ಮಾರಾಟದ ವಸ್ತುವಾಗಿದೆ. ಸರ್ಕಾರ ಒಂದು ಪಕ್ಷದಿಂದ ಮತ್ತೊಂದು ಪಕ್ಷದ ಕೈಗೆ ಹಸ್ತಾಂತರವಾದಂತೆ ಶಿಕ್ಷಣ ಪದ್ಧತಿ, ಪಕ್ಷದ ಅಭಿರುಚಿಗೆ ತಕ್ಕಂತೆ ಬದಲಾಗುತ್ತಿದೆ. ಇದು ಖಾಸಗೀಕರಣ, ಕೇಸರಿಕರಣಗಳಿಗೆ ಎಡೆಮಾಡಿದೆ. ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಶಿಕ್ಷಣ ನೀತಿಯನ್ನು ರೂಪಿಸುತ್ತಲಿವೆ.

ಶಿಕ್ಷಣದ ಮೇಲಿನ ಈ ದಾಳಿಯನ್ನು ತಪ್ಪಿಸಲು ಸರ್ವೋದಯ ಒಂದು ಮಾರ್ಗ ಸೂಚಿಸುತ್ತದೆ. ಶಿಕ್ಷಣ ನೀತಿಯನ್ನು ರೂಪಿಸಲು ಒಂದು ಪ್ರತ್ಯೇಕ ವ್ಯವಸ್ಥೆ ಅಸ್ತಿತ್ವಕ್ಕೆ ಬರಬೇಕು. ನಿರ್ಭೀತರೂ, ನಿರ್ದಲೀಯರೂ, ನಿರ್ವಿಕಾರಿಗಳೂ ಆದ ಶಿಕ್ಷಣ ತಜ್ಞರ ಹಿಡಿತದಲ್ಲಿ ಈ ಸಮಿತಿ ಇರಬೇಕು. ಅವರು ರೂಪಿಸುವ ಶಿಕ್ಷಣ ನೀತಿಯನ್ನು ಜಾರಿಗೊಳಿಸತಕ್ಕ ಅಧಿಕಾರ ಮಾತ್ರ ಸರ್ಕಾರದ ಕೈಲಿರಬೇಕು.

ಸರ್ವೋದಯ ಸಮಾಜವನ್ನು ಅಸ್ತಿತ್ವಕ್ಕೆ ತರುವುದಕ್ಕೆ ಹೂಡಬೇಕಾದ ಸಮರಕ್ಕೆ ಮಾರ್ಗಗಳು ಯಾವುವು ಎಂಬುದನ್ನು ಕುರಿತು ಚಿಂತಿಸಲಾಗಿದೆ.
​
ಕ್ರಾಂತಿ ಎಂದರೆ ಮೌಲ್ಯಗಳ ಮೂಲಭೂತ ಬದಲಾವಣೆ ಯಾವುದೇ ಕ್ರಾಂತಿ ಆಗಬೇಕಾಗಿದ್ದರೆ ಮೊದಲು ಕ್ರಾಂತಿಯ ಬೀಜಗಳನ್ನು ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಬಿತ್ತಬೇಕು. ಈ ಬಿತ್ತಿದ ಕ್ರಾಂತಿಯ ಬೀಜ ಮೊಳಕೆಯೊಡೆಯಬೇಕು. ಇದನ್ನೇ ವಿಚಾರ ಕ್ರಾಂತಿ ಎನ್ನುವುದು. ವಿಚಾರ ಕ್ರಾಂತಿಯಾದ ಮೇಲೆ ಈ ಕ್ರಾಂತಿಯನ್ನು ಸಾಕಾರಗೊಳಿಸಲು ಜನರ ಸಂಘಟನೆ ಆಗಬೇಕು. ಜನತೆಯ ಸಂಘಟನೆಯಾದ ಮೇಲೆ ಮುಂದೆ ಅಗತ್ಯಬಿದ್ದಲ್ಲಿ ಸಂಘರ್ಷಕ್ಕೆ ಅಣಿಯಾಗಬೇಕು. ಸಂಘರ್ಷದ ಮೂಲಕ ಹೊಸ ಮೌಲ್ಯಗಳನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು.
 
ಎಚ್.ಎಸ್. ದೊರೆಸ್ವಾಮಿ
ಹಿರಿಯ ಸ್ವಾತಂತ್ರ್ಯ ಹೋರಾಟಗಾರರು
0 Comments



Leave a Reply.


    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9

    Social Work Foot Prints


    RSS Feed


Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com