Niruta Publications
  • Home
  • About Us
    • Ramesha's Profile
  • List Your Book for Free
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • List Your Book for Free
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಯೋಜನಾಬದ್ಧವಾಗಿ ಬದುಕಲು ಕಲಿಯದೆ ಜಾಹೀರಾತು ಒತ್ತಡದಲ್ಲಿ ಸಿಲುಕಿ ನರಳುತ್ತಿರುವ ಅಕ್ಕಸಾಲಿಗ

10/16/2017

0 Comments

 
ಪ್ರಪಂಚದ ವೃತ್ತಿಗಳಲ್ಲಿ ಅಕ್ಕಸಾಲಿಗ ವೃತ್ತಿಯು ಅತ್ಯಂತ ಪ್ರಾಚೀನವಾದ ವೃತ್ತಿ. ಅದರಲ್ಲೂ ಭಾರತದ ಅಕ್ಕಸಾಲಿಗ ವೈವಿಧ್ಯಮಯವಾದ ಸೃಜನಾತ್ಮಕ ಕುಶಲ ಕಲೆಯಿಂದ ಬಂಗಾರದಲ್ಲಿ ಹಸ್ತಶಿಲ್ಪವನ್ನು ಸೃಷ್ಟಿಸಿ ಸಂಸ್ಕೃತಿಯ ವಿಕಾಸಕ್ಕೆ, ಭವ್ಯತೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾನೆ. ಅದರಲ್ಲೂ ಕರ್ನಾಟಕ ಶೈಲಿಯ ಆಭರಣ ತಯಾರಿಕೆ ತನ್ನದೇ ಆದ ವಿಶಿಷ್ಟ ಸ್ಥಾನಮಾನವನ್ನು ಆಭರಣ ಕ್ಷೇತ್ರದಲ್ಲಿ ಉಳಿಸಿಕೊಂಡು ಬಂದಿದೆ. ಒಂದು ಕಾಲಕ್ಕೆ ನಮ್ಮ ಸಮಾಜದಲ್ಲಿ ಬಹಳ ಶ್ರೇಷ್ಠ ಮನ್ನಣೆಯನ್ನೂ, ಆಧಾರವನ್ನೂ ಅಕ್ಕಸಾಲಿಗ ಪಡೆಯುತ್ತಿದ್ದ. ತನ್ನ ನಂಬಿಕೆ, ಪ್ರಾಮಾಣಿಕತೆ ಮತ್ತು ಕುಶಲತೆಯಿಂದ ಕರ್ನಾಟಕದ ಅಕ್ಕಸಾಲಿಗನನ್ನು ರಾಜಾಶ್ರಯ ಪಡೆಯುವಂತೆ ಮಾಡಿದ್ದು ಇತಿಹಾಸ. 
ಕಾಲಕಳೆದಂತೆ ಆಧುನಿಕ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಅನೇಕ ಯಂತ್ರೋಪಕರಣಗಳು ಮತ್ತು ಮಾರುಕಟ್ಟೆ ವಿಧಾನಗಳು ಆವಿಷ್ಕಾರವಾಗಿ ಆಚರಣೆಗೆ ಬಂದಿವೆ. ಇದರಲ್ಲೀಗ ಪ್ರಮುಖವಾಗಿ ಇಡೀ ವ್ಯಾಪಾರ ಮತ್ತು ವಹಿವಾಟನ್ನು ಜಾಹೀರಾತು ಕ್ಷೇತ್ರ ಆವರಿಸಿಕೊಂಡಿದೆ. ಇತರೆ ಕ್ಷೇತ್ರಗಳಂತೆ ಆಭರಣ ಕ್ಷೇತ್ರದಲ್ಲೂ ಇಂದು ವರ್ಣರಂಜಿತವಾದ, ಆಕರ್ಷಕವಾದ ಜಾಹೀರಾತುಗಳನ್ನು ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳಲ್ಲಿ ನಾವು ನೋಡಬಹುದಾಗಿದೆ. ಮಾಹಿತಿ ತಂತ್ರಜ್ಞಾನದ ಈ ದಿನಗಳಲ್ಲೂ ಬಂಗಾರದ ಆಭರಣದ ಆಕರ್ಷಣೆ ಕಡಿಮೆಯಾಗಿಲ್ಲ. ಅಲ್ಲದೆ ಇಂದು ಬಂಗಾರದ ಬಳಕೆ ಕೇವಲ ಆಭರಣಗಳಿಗೆ ಮಾತ್ರ ಸೀಮಿತವಾಗದೆ ಕೃತಕ ದಂತ ತಯಾರಿಕೆ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳನ್ನೊಳಗೊಂಡ ಹಲವಾರು ಕ್ಷೇತ್ರಗಳಲ್ಲಿ ಇದರ ಬಳಕೆ ವಿಸ್ತರಣೆಯಾಗಿದೆ. ಈಗಂತೂ ಬದಲಾದ ಜಾಗತಿಕ ಸ್ಥಿತಿಗತಿಗನುಸಾರವಾಗಿ ಭಾರತ ಸರ್ಕಾರವು ಆಭರಣಗಳ ಬಗ್ಗೆ ಮುಕ್ತ ಧೋರಣೆ ತಳೆದಿದೆ. ತನ್ನ ನಿರ್ಬಂಧಗಳನ್ನು ಸಡಿಲಿಸಿದೆ.

ಇದರ ಪರಿಣಾಮವಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಆಭರಣ ತಯಾರಕರು, ಕೆಲಸಗಾರರು ವಲಸೆ ಬರುತ್ತಿದ್ದಾರೆ. ನಮ್ಮ ದೇಶದಲ್ಲಿ ಚಿನ್ನಾಭರಣಗಳನ್ನು ಹೊಂದಿಲ್ಲದ ಕುಟುಂಬಗಳೇ ಇಲ್ಲವೆಂದು ಹೇಳಿದರೆ ತಪ್ಪಾಗಲಾರದು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಅನೇಕ ವಿಧದ ಆಭರಣಗಳನ್ನು ಸೃಜನಾತ್ಮಕವಾಗಿ ರೂಪಿಸುವುದು ಸುಲಭದ ಕೆಲಸವೇನಲ್ಲ. ಇದಕ್ಕೆ ಅಪಾರವಾದ ಏಕಾಗ್ರತೆ ಮತ್ತು ಕುಶಲತೆಯ ಆವಶ್ಯಕತೆಯಿದೆ. ಹಿಂದಿನ ಕಾಲದಿಂದಲೂ ಅಕ್ಕಸಾಲಿಗ ವೃತ್ತಿಯನ್ನು ಮನೆಯಲ್ಲಿಯೇ ಕುಟುಂಬದ ಹಿರಿಯ ಸದಸ್ಯರ ಜೊತೆಸೇರಿ ಕಲಿಯುವ ಪರಿಪಾಠವಿತ್ತು.

ಇಂದು ಈ ಅಕ್ಕಸಾಲಿಗ ವೃತ್ತಿಯನ್ನು ಕಾಲೇಜುಗಳಲ್ಲಿ ಪದವಿ ವಿಷಯವಾಗಿ ಬೋಧಿಸುವ ಮಟ್ಟಿಗೆ ಬದಲಾವಣೆಯಾಗಿದೆ. ಇಂದಿನ ಮಾರುಕಟ್ಟೆ ಯುಗದ ಪ್ರಮುಖ ಆಕರ್ಷಣೆ ಜಾಹೀರಾತು. ಆಭರಣ ಕ್ಷೇತ್ರದ ದೊಡ್ಡದೊಡ್ಡ ಬಂಡವಾಳಶಾಹಿ ಕಂಪನಿಗಳು, ಸಂಸ್ಥೆಗಳು ಮತ್ತು ವ್ಯಾಪಾರಿಗಳು ಬಗೆಬಗೆಯ ಆಭರಣಗಳನ್ನು ತಯಾರಿಸುವ ವಿವಿಧ ಯಂತ್ರಗಳನ್ನು ಹೊಂದಿದ್ದಾರೆ. ಇದರಿಂದ ರೆಡಿಮೇಡ್ ಆಭರಣಗಳನ್ನು ತಯಾರಿಸಿಕೊಂಡು ತಮ್ಮ ಮಳಿಗೆಯ ದಾಸ್ತಾನು ಯಾವಾಗಲೂ ಹೆಚ್ಚಿಗೆ ತುಂಬಿಕೊಂಡಿರುವಂತೆ ಕಾಪಾಡಿಕೊಂಡು ಬಂದಿದ್ದಾರೆ. ಇದರ ಪರಿಣಾಮವಾಗಿ ಇದನ್ನು ಮಾರಾಟ ಮಾಡುವ ಅನಿವಾರ್ಯತೆ, ಬಂಡವಾಳಶಾಹಿ ವ್ಯಾಪಾರಸ್ಥರಿಗೆ ಉಂಟಾಗಿದೆ. ಆದ್ದರಿಂದ ತಮ್ಮ ಆಭರಣಗಳನ್ನು ಮಾರಾಟ ಮಾಡಲು ಪ್ರತಿದಿನ ಗ್ರಾಹಕರನ್ನು ಸೆಳೆಯುವ ವಿವಿಧ ಡಿಸ್ಕೌಂಟ್ ಯೋಜನೆಗಳನ್ನು ರೂಪಿಸಿಕೊಂಡು ವ್ಯಾಪಾರಿಗಳು ಜಾಹೀರಾತು ನೀಡುತ್ತಿದ್ದಾರೆ. ಈ ಜಾಹೀರಾತಿನ ಪ್ರಭಾವಕ್ಕೆ ಒಳಗಾಗುವ ಗ್ರಾಹಕನು ತನ್ನ ಮೂಲ ಆಭರಣ ಪೂರೈಕೆದಾರನಾದ ಅಕ್ಕಸಾಲಿಗನನ್ನು ಮರೆತು ಆಕರ್ಷಣೆಗೊಳಗಾಗಿ ಆಧುನಿಕ ಮಳಿಗೆಗಳಿಂದ ಆಭರಣ ಖರೀದಿಸುವ ಮನಃಸ್ಥಿತಿಯನ್ನು ಬೆಳೆಸಿಕೊಂಡಿದ್ದಾನೆ.

ಇದು ಪ್ರಚಾರದ ಯುಗ, ಎಫ್.ಎಂ. ರೇಡಿಯೋನಲ್ಲಿಯೂ ವಿವಿಧ ಟಿ.ವಿ. ಮಾಧ್ಯಮಗಳಲ್ಲಿ ದಿನನಿತ್ಯದ ವಾರ್ತಾಪತ್ರಿಕೆಯಲ್ಲಾಗಲೀ, ಜಾಹೀರಾತುಗಳು ಇಲ್ಲದೇ ಇರುವುದಿಲ್ಲ. ಈ ಜಾಹೀರಾತುಗಳ ಪ್ರಭಾವದ ಬಲೆಗೆ ಗ್ರಾಹಕರು ತಮಗೆ ಅರಿವಿಲ್ಲದೆಯೇ ಸಿಲುಕಿಬಿದ್ದಿದ್ದಾರೆ. ಆದ್ದರಿಂದಲೇ ಜಾಹೀರಾತುಗಳು ಬಹು ನಾಜೂಕಾಗಿಯೂ, ಆಕರ್ಷಕವಾಗಿಯೂ, ಧ್ವನಿಪೂರ್ಣವಾಗಿರುತ್ತವೆ. ಈ ಬಗೆಯ ಜಾಹೀರಾತುಗಳು ಆಭರಣೋದ್ಯಮದಲ್ಲೂ ಹರಡಿಕೊಂಡು ಗ್ರಾಹಕರನ್ನು ತನ್ನ ಕಡೆಗೆ ಸೆಳೆಯುವ ಪ್ರಯತ್ನದಲ್ಲಿ ಅಕ್ಕಸಾಲಿಗರನ್ನು ಅಪ್ರಾಮಾಣಿಕರಂತೆ ಬಿಂಬಿಸಲು ಗಾದೆ ಮಾತಿನ ಸಾಲನ್ನೇ ಬಳಸಿಕೊಂಡಿರುವುದನ್ನು ನಾವು ಕಾಣಬಹುದು. ಉದಾಹರಣೆಗೆ, ಕನ್ನಡದ ಜನಪ್ರಿಯ ದಿನಪತ್ರಿಕೆಯೊಂದರಲ್ಲಿ ಒಂದು ಆಭರಣ ಮಾರಾಟ ಕಂಪನಿಯು ತನ್ನ ಜಾಹೀರಾತನ್ನು ಅಕ್ಕನ ಚಿನ್ನ ಕದಿಯುವ ಅಕ್ಕಸಾಲಿಗರಂತೆ ನಾವಲ್ಲ, ಬೇಕಿದ್ದರೆ ನಿಮ್ಮ ತಾಯಿಯನ್ನು ಕೇಳಿ ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಿತ್ತು. ಅದರಡಿಯಲ್ಲಿ ಆ ಕಂಪನಿಯು ಮಾರಾಟ ಮಾಡುತ್ತಿದ್ದ ವಿವಿಧ ಆಭರಣಗಳ ಫೋಟೋ ಹಾಕಲಾಗಿತ್ತು. ಅದರ ಜೊತೆಯಲ್ಲಿ ಕಂಪನಿಯ ಹೆಸರು ಮಾತ್ರವೇ ಇತ್ತು. ಈ ಜಾಹೀರಾತಿನಲ್ಲಿ ಒಂದೇ ವಾಕ್ಯ ಬಳಸಿದ್ದರೂ, ಇದರ ಪ್ರಭಾವ ಧ್ವನಿಯು ಬಹುವಾಗಿತ್ತು. ಮೊದಲಿಗೆ ನಿಮ್ಮ ಅಕ್ಕಸಾಲಿಗರನ್ನು ನಂಬಬೇಡಿ, ಅವರು ಅಪ್ರಾಮಾಣಿಕರು, ಅದಕ್ಕೆ ಗಾದೆಯ ಮಾತೇ ಸಾಕ್ಷಿ ಎನ್ನುವಂತೆ ಬಿಂಬಿಸಿ, ಮುಂದೆ ನಾವು ನಿಮ್ಮ ತಾಯಿಯ ಕಾಲಕ್ಕೆ ಪ್ರಖ್ಯಾತ ಆಭರಣ ಮಾರಾಟಗಾರರು, ಆಕೆಯೂ ನಮ್ಮ ಕಂಪನಿಯ ಆಭರಣಗಳನ್ನು ಮೆಚ್ಚಿ ಬಳಸುತ್ತಿದ್ದಳು ಎಂಬ ಹೆಗ್ಗಳಿಕೆ ಮತ್ತು ನಮ್ಮ ಬಗ್ಗೆ ನಿಮ್ಮ ನೆಚ್ಚಿನ ತಾಯಿಯೇ ಒಳ್ಳೆಯ ಮಾತನ್ನು ಹೇಳುತ್ತಾರೆ ಎನ್ನುವಾಗ, ಬೇರೆ ಯಾರು ಏನು ಹೇಳಬೇಕಾಗಿದೆ? ಎಂಬ ಧೋರಣೆ ಆಭರಣ ತಯಾರಿಕೆಯಲ್ಲಿ, ಮಾರಾಟದಲ್ಲಿ ಅನುಭವ, ಖ್ಯಾತಿ, ಗುಣಮಟ್ಟ ಎಲ್ಲಕ್ಕೂ ಮಿಗಿಲಾಗಿ ನಿಮ್ಮ ತಾಯಿಯೂ ನಮ್ಮ ತಯಾರಿಕೆಯನ್ನು ಮೆಚ್ಚಿದ್ದಾಳೆಂಬ ದೃಢವಿಶ್ವಾಸ ಎಂತಹ ಗ್ರಾಹಕರಿಗಾದರೂ ಬಹು ಅಪೂರ್ವವೆನಿಸದೇ ಇರುವುದಿಲ್ಲ. ಇಂತಾಗಿ ಆ ಕಂಪನಿಯ ಆಭರಣಗಳು ಗ್ರಾಹಕರಿಗೆ ಸುಪರಿಚತವೆನಿಸುತ್ತವೆ.
  
ಬಹುಕಾಲ ಬಾಳಿಕೆಗೆ ಬರುವಂತಹ ಗುಣಮಟ್ಟದ ತಯಾರಿಕೆಯೊಂದು ಕೂಡಲೇ ನೆನಪಿಗೆ ಬರುತ್ತವೆ. ನೂರು ಮಾತುಗಳಿಗಿಂತಲೂ ಈವೊಂದು ವಾಕ್ಯ ಬಹುಪರಿಣಾಮಕಾರಿಯಾಗಿರುತ್ತವೆ. ಜಾಹೀರಾತಿನಲ್ಲಿ ಸದಾ ಪ್ರತಿಸ್ಪರ್ಧಿಗಳಿಗಿಂತ ತಾನು ಉತ್ತಮವೆಂಬುದನ್ನು ತೋರ್ಪಡಿಸಿಕೊಳ್ಳಲು ಪ್ರಯತ್ನಿಸುವುದನ್ನು ಎಲ್ಲರೂ ಬಲ್ಲರು. ಆದರೆ ನೇರವಾಗಿ ಒಂದು ಜಾತಿಯನ್ನು ಖಂಡಿಸುವುದು ತಪ್ಪಾಗುತ್ತದೆ ಮತ್ತು ಸಾಮಾಜಿಕ ಅವಹೇಳನ ಮಾಡುವುದು ದೌರ್ಜನ್ಯವಾಗುತ್ತದೆ.
 
ಈ ರೀತಿಯ ಜಾಹೀರಾತುಗಳನ್ನು ನೀಡಿ ಅಕ್ಕಸಾಲಿಗನನ್ನು ಅಪ್ರಾಮಾಣಿಕನಂತೆ ಬಿಂಬಿಸುವ ಕೆಲಸ ಸಾಕಷ್ಟು ನಡೆಯುತ್ತಿದೆ. ಈ ಬಗ್ಗೆ ಧ್ವನಿಯೆತ್ತಿ ಮಾತನಾಡುವ ಸ್ಥಿತಿಯಲ್ಲಿ ಬಡ ಅಕ್ಕಸಾಲಿಗನಿಲ್ಲ. ಆರ್ಥಿಕವಾಗಿ ಹಿಂದುಳಿದಿರುವ ಕಾರಣ ತಾನು ಇದಕ್ಕೆ ಸರಿಸಮನಾದ ಜಾಹೀರಾತನ್ನು ಪ್ರಕಟಿಸಲು ಸಾಧ್ಯವಿಲ್ಲವಾಗಿದೆ. ಇದಕ್ಕೆ ಮತ್ತೊಂದು ಕಾರಣವೆಂದರೆ ಅಕ್ಕಸಾಲಿಗರಲ್ಲಿ ಸಂಘಟನೆಯ ಕೊರತೆ ಎದ್ದು ಕಾಣುತ್ತಿದೆ. ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಮಟ್ಟದಲ್ಲಿ ಯಾವ ಅಕ್ಕಸಾಲಿಗರ ಸಂಘಟನೆಯೂ ಬೆಳೆದುಬಂದಿಲ್ಲ. ಅಕ್ಕಸಾಲಿಗರು ತಮ್ಮ ಉದ್ದಿಮೆಯ ಬಗ್ಗೆ ಜಾಹೀರಾತು ಕೊಡುವುದಿರಲಿ, ಕೆಲವು ಅಂಗಡಿಗಳಿಗೆ ನಾಮಫಲಕಗಳೇ ಇಲ್ಲ, ಕೆಲವರ ಬಳಿ ವಿಸಿಟಿಂಗ್ ಕಾರ್ಡ್ ಸಹ ಇಲ್ಲ, ಕೆಲವರ ಬಳಿ ತಮ್ಮ ಉದ್ದಿಮೆಯ ವಿಳಾಸದ ರಬ್ಬರ್ ಸ್ಟಾಂಪೂ ಇಲ್ಲದೆ ಸರಿಯಾದ ಪ್ರಚಾರ ದೊರಕದೆ ಅಂಧಕಾರದಲ್ಲಿ ವೃತ್ತಿಜೀವನ ನಡೆಸುತ್ತಿದ್ದಾರೆ. ಅಕ್ಕಸಾಲಿಗರ ಏಕೈಕ ಪ್ರಚಾರ ಮಾಧ್ಯಮವೆಂದರೆ ತಮ್ಮ ಬಳಿ ಆಭರಣ ಪಡೆದ ಗ್ರಾಹಕರು ಬಾಯಿಂದ ಬಾಯಿಗೆ ಪ್ರಚಾರ ಮಾಡುವ ವಿಧಾನವೊಂದೇ ಆಗಿದೆ. ಈ ಪ್ರಚಾರವು ದೊಡ್ಡ ಪ್ರಮಾಣದ ಉದ್ಯಮಿಗಳ ಅಥವಾ ಕಂಪನಿಗಳ ಉತ್ಕೃಷ್ಟ ಜಾಹೀರಾತುಗಳ ಮುಂದೆ ತುಂಬಾ ನೀರಸವಾಗಿ ಪ್ರತಿಕ್ರಿಯಿಸುತ್ತದೆ.

ಪ್ರಸ್ತುತ ಲೇಖನದ ಅಧ್ಯಯನಕ್ಕಾಗಿ ಬೆಂಗಳೂರು ನಗರದಲ್ಲಿ ಹೆಚ್ಚು ಅಕ್ಕಸಾಲಿಗರಿರುವ ರಸ್ತೆಯನ್ನು ಆಯ್ಕೆಮಾಡಿ ಅಲ್ಲಿನ ಅಕ್ಕಸಾಲಿಗರನ್ನು ಸಂದರ್ಶಿಸಿ ಜಾಹೀರಾತಿನ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು.
Picture
ಮೇಲ್ಕಂಡ ಪಟ್ಟಿಯಲ್ಲಿ ಕಾಣುವಂತೆ ನಾಮಫಲಕವಿಲ್ಲದ ಅಕ್ಕಸಾಲಿಗರ ಸಂಖ್ಯೆ 229 ಆಗಿದ್ದು, ವಿಸಿಟಿಂಗ್ ಕಾರ್ಡ್‍ ಇಲ್ಲದ ಅಕ್ಕಸಾಲಿಗರು 176, ವಿಳಾಸದ ರಬ್ಬರ್ ಸ್ಟಾಂಪ್ ಇರದ ಅಕ್ಕಸಾಲಿಗರು 228 ಆಗಿರುತ್ತದೆ. ಆದರೆ ಇವುಗಳೆಲ್ಲಕ್ಕಿಂತಲೂ ಪ್ರಚಾರದ ಪ್ರಭಾವದ ಬಗ್ಗೆ ಅರಿವಿಲ್ಲದ ಅಕ್ಕಸಾಲಿಗರ ಸಂಖ್ಯೆ 467 ಇದ್ದು ಶೇಕಡಾನ್ವಯ ಹೆಚ್ಚಿರುತ್ತದೆ. ಯಾವುದೇ ವ್ಯಾಪಾರದಲ್ಲಿ ಪ್ರಚಾರವು ಆಮ್ಲಜನಕವಿದ್ದಂತೆ. ಇದರ ಅರಿವು ಅಕ್ಕಸಾಲಿಗರಲ್ಲಿ ಇಲ್ಲದೇ ಇರುವುದು ಇವರ ಉದ್ದಿಮೆಯ ಅಭಿವೃದ್ಧಿಗೆ ಬಹುಮುಖ್ಯ ಹಿನ್ನಡೆಯಾಗಿದೆ. ಬೆಳಗಾಗುತ್ತಿರುವಂತೆಯೆ ಪ್ರಾರಂಭವಾಗುವ ಜಾಹೀರಾತುಗಳ ಪೈಪೋಟಿಯು ದಿನವೆಲ್ಲಾ ನಡೆಯುತ್ತಲೇ ಇರುತ್ತದೆ. ಇವುಗಳ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಸಾಧಾರಣ ಸಂಗತಿಯಲ್ಲ. ಪ್ರತಿಕ್ಷಣವೂ ಅವು ನೆರಳಿನಂತೆ ಗ್ರಾಹಕರನ್ನು ಅನುಸರಿಸಿ ಅವರ ಅಭಿರುಚಿಗಳನ್ನು ಬಡಿದೆಬ್ಬಿಸಿ ಅವುಗಳಿಂದ ಗ್ರಾಹಕರನ್ನು ತನ್ನ ಸ್ವತ್ತನ್ನಾಗಿ ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತವೆ. ಇದರಿಂದಲೇ ಉದ್ದಿಮೆಯ ಬೆನ್ನೆಲುಬಿನಂತೆ ಜಾಹೀರಾತು ಕಾರ್ಯನಿರ್ವಹಿಸುತ್ತದೆ. ಇದರ ಅರಿವು, ಇದರ ಪ್ರಾಮುಖ್ಯತೆಯನ್ನು ಅಕ್ಕಸಾಲಿಗರು ಅರಿತಾಗ ಮಾತ್ರ ಅವರ ಅಭಿವೃದ್ಧಿ ಸಾಧ್ಯವಾಗುತ್ತದೆ.

ಕಷ್ಟಗಳು ಬಂದರೆ ಜೊತೆಜೊತೆಯಾಗಿಯೇ ಬರುವಂತೆ ಇಂದು ಅಕ್ಕಸಾಲಿಗರಿಗೆ ತಮ್ಮ ವಂಶಪಾರಂಪರ್ಯವಾದ ವೃತ್ತಿಬದುಕು ಕೈಕೊಟ್ಟಂತೆಯೇ ಆಗಿದೆ. ಜೊತೆಗೆ ಪಾರಂಪರಿಕವಾಗಿ ನಂಬಿದ್ದ ಗ್ರಾಹಕರೂ ಕೈಬಿಡಲಾರಂಭಿಸಿದ್ದಾರೆ. ಇದರ ಪರಿಣಾಮವಾಗಿ ಅಕ್ಕಸಾಲಿಗರು ಕನಿಷ್ಠ ಜೀವನ ನಿರ್ವಹಣೆಗೂ ಪರದಾಡುತ್ತಿದ್ದು, ಯಾವುದೇ ಪರ್ಯಾಯ ಉದ್ಯೋಗವನ್ನು ಅರಿಯದ ಕಾರಣ ಅಕ್ಕಸಾಲಿಗನು ಇಂದು ಅಧೋಗತಿಗಿಳಿಯುತ್ತಿದ್ದಾನೆ. ಇದರ ಪರಿಣಾಮವಾಗಿ ಕೈಸಾಲಗಳನ್ನು ಮಾಡಿಕೊಂಡು ಸಾಲದ ಹೊರೆಯನ್ನು ಹೊರಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿಯನ್ನು ತಲುಪಿದ್ದಾನೆ. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಇದಕ್ಕೆ ಕಾರಣ ಸ್ವತಃ ಅಕ್ಕಸಾಲಿಗನೇ ಆಗಿದ್ದಾನೆ ಎಂದರೆ ತಪ್ಪಾಗಲಾರದು. ಏಕೆಂದರೆ, ಯಾವುದೇ ಪ್ರಾಥಮಿಕ ವಿದ್ಯಾಭ್ಯಾಸವಿಲ್ಲದೆ, ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದಿದ್ದು ಒಂದು ಕಾರಣವಾದರೆ, ಅತಿ ಸಣ್ಣ ವಯಸ್ಸಿನಲ್ಲಿಯೇ ದಿನಕ್ಕೆ ನೂರಾರು ರೂಪಾಯಿಗಳ ಸಂಪಾದನೆ ಮಾಡುವ ಪರಿಸ್ಥಿತಿ ಇದ್ದುದರಿಂದ ಮನರಂಜನೆ ಮತ್ತು ಶೋಕಿ ಜೀವನಕ್ಕೆ ತನ್ನನ್ನು ತಾನು ಒಪ್ಪಿಸಿಕೊಂಡು, ದುಂದುವೆಚ್ಚ ಮಾಡಿದ್ದರ ಪರಿಣಾಮವಾಗಿ ಆರ್ಥಿಕ ಭದ್ರತೆಯನ್ನು ಕಳೆದುಕೊಂಡಿದ್ದು ಮತ್ತೊಂದು ಕಾರಣವಾಗಿದೆ. ಮುಖ್ಯವಾಗಿ ವ್ಯಾಪಾರಿ ಸಮೂಹವು ತಮ್ಮ ಜೀವನ ಕ್ರಮವನ್ನು ಯೋಜನಾ ಬದ್ಧವಾದ ಜೀವನ ಕ್ರಮವನ್ನಾಗಿ ಬದಲಾಯಿಸಿಕೊಂಡು ಪ್ರತಿಯೊಂದನ್ನೂ ಯೋಜಿಸಿ, ಅದರಂತೆ ತಮ್ಮ ವೈಯಕ್ತಿಕ ಬದುಕನ್ನೂ, ವ್ಯಾಪಾರವನ್ನೂ ನಡೆಸಿಕೊಂಡು ಬಂದ ಪರಿಣಾಮವಾಗಿ ಈ ವರ್ಗದ ಜನ ಬಂಡವಾಳಶಾಹಿಗಳಾಗಿ ಯಾವುದೇ ಪರಿಸ್ಥಿತಿಯನ್ನೆದುರಿಸುವ ಸಾಮಥ್ರ್ಯವನ್ನು ಹೊಂದಿದ್ದಾರೆ.

ಆದರೆ, ಅಕ್ಕಸಾಲಿಗರು ಯೋಜನಾಬದ್ಧವಾದ ಜೀವನ ನಿರ್ವಹಣೆಯನ್ನು ಬೆಳೆಸಿಕೊಳ್ಳದಿದ್ದುದರ ಪರಿಣಾಮವಾಗಿ ಇಂದು ವ್ಯಾಪಾರಿ ವರ್ಗದ, ಅಂದರೆ ಆಭರಣ ತಯಾರಿಸುವ ಕೆಲಸಕೊಡುವ ಅಂಗಡಿಯ ಎದುರು ಕೆಲಸಕ್ಕಾಗಿ ಗಂಟೆಗಟ್ಟಲೆ ಕಾಯುವ ದಯನೀಯ ಸ್ಥಿತಿಯುಂಟಾಗಿದೆ. ಬಂಡವಾಳಶಾಹಿಗಳ ಯಾವುದೇ ಅವಹೇಳನವನ್ನು ಮರುಪ್ರಶ್ನಿಸದೆ ಮಾನಸಿಕವಾಗಿ ಅವಮಾನವನ್ನನುಭವಿಸುವಂತಹ ಪರಿಸ್ಥಿತಿಯುಂಟಾಗಿದೆ. ಗ್ರಾಹಕರು ತಮ್ಮ ಬದಲಾದ ಮನಃಸ್ಥಿತಿಯಿಂದ ಹಿಂದಿನಂತೆ ಅಕ್ಕಸಾಲಿಗರಿಗೆ ತಾವೇ ಆರ್ಡರ್ಕೊಟ್ಟು ಆಭರಣ ಮಾಡಿಸುವ ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ಥಳುಕಿನ ಜಾಹೀರಾತಿನ ಮೋಡಿಗೊಳಗಾಗಿ ರೆಡಿಮೇಡ್ ಆಭರಣಗಳನ್ನೇ ಹೆಚ್ಚು ಇಷ್ಟಪಡುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಅಕ್ಕಸಾಲಿಗ ತನ್ನ ಬಗ್ಗೆ ತಾನು ಜಾಹೀರಾತು ನೀಡುವ ಸಾಮಥ್ರ್ಯವನ್ನು ಹೊಂದಿಲ್ಲ. ಇದರ ಸಂಪೂರ್ಣ ಲಾಭವನ್ನು ವ್ಯಾಪಾರಿಗಳು ಪಡೆದುಕೊಳ್ಳುತ್ತಿದ್ದಾರೆ. ಅಕ್ಕಸಾಲಿಗರ ಕುಟುಂಬದ ಯುವಕರು ತಮ್ಮ ಪಾರಂಪರಿಕ ವೃತ್ತಿಯನ್ನು ಅವಲಂಬಿಸದೆ ಬೇರೆ ಉದ್ಯೋಗಗಳತ್ತ ಒಲವು ತೋರಿಸುತ್ತಿದ್ದಾರೆ.

ಇದಕ್ಕೆ ಕಾರಣ ಅಕ್ಕಸಾಲಿಗ ವೃತ್ತಿಯು ಆರ್ಥಿಕ ಭದ್ರತೆಯನ್ನು ಹೊಂದಿಲ್ಲವೆಂಬುದಾಗಿದೆ. ಆದರೆ ವಾಸ್ತವಿಕವಾಗಿ ಎಲ್ಲಾ ಅಕ್ಕಸಾಲಿಗರೂ ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ಹೊಂದಿ ವೈಯಕ್ತಿಕ ಜೀವನ ಮತ್ತು ವೃತ್ತಿ ಬದುಕುಗಳನ್ನು ಯೋಜನಾಬದ್ಧವಾಗಿ ರೂಪಿಸಿಕೊಂಡು ಇತರೆ ವ್ಯಾಪಾರಿ ವರ್ಗಗಳಿಗೆ ಪೈಪೋಟಿಯನ್ನು ನೀಡುವ ಮಟ್ಟಿಗೆ ಬದಲಾದರೆ ತನ್ನ ಎಲ್ಲಾ ಸಮಸ್ಯೆಗಳಿಂದ ಹೊರಬಂದು ಸ್ವತಂತ್ರ ಸ್ವಾಭಿಮಾನಿ ಬದುಕನ್ನು ರೂಪಿಸಿಕೊಳ್ಳಬಹುದಾಗಿದೆ. ಏಕೆಂದರೆ, ಯಾವುದೇ ಯಂತ್ರಗಳು ಸೃಜನಾತ್ಮಕ, ಕ್ರಿಯಾತ್ಮಕ, ಹಸ್ತನೈಪುಣ್ಯದ ಆಭರಣಗಳನ್ನು ತಯಾರಿಸುವುದು ಅಸಾಧ್ಯ. ಈ ರೀತಿಯ ಆಭರಣಗಳನ್ನು ತಯಾರಿಸುವುದು ಒಂದು ಉತ್ಕೃಷ್ಟ ಕಲೆ. ಈಗಲೂ ಹಸ್ತ ತಯಾರಿಕಾ ಆಭರಣಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಅಕ್ಕಸಾಲಿಗರು ಸಂಘಟಿತರಾಗಿ ಸಹಕಾರ ಸಂಘಗಳನ್ನು ಸ್ಥಾಪಿಸಿಕೊಂಡು ತಾವು ತಯಾರಿಸಿದ ಆಭರಣಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುವುದರೊಂದಿಗೆ ವ್ಯಾಪಾರದ ಅಭಿವೃದ್ಧಿಗೆ ಜಾಹೀರಾತು ಇಂದಿನ ಸಮಾಜಕ್ಕೆ ಅಗತ್ಯವೆಂಬುದನ್ನು ಮನಗಂಡು ತಾವೂ ಜಾಹೀರಾತು ನೀಡುವುದರೊಂದಿಗೆ ಇತರೆ ಬಂಡವಾಳಶಾಹಿ ವ್ಯಾಪಾರಸ್ಥರಿಗೆ ಆರೋಗ್ಯಕರ ಪೈಪೋಟಿಯನ್ನು ನೀಡಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದಾಗಿದೆ.
 
ಬಿ.ರಾಮಾಚಾರಿ
ಸಂಶೋಧನಾ ವಿದ್ಯಾರ್ಥಿ, ಸಮಾಜಶಾಸ್ತ್ರ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ.
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture
    For more details

    Picture
    For more details

    Picture
    For more details

    Picture
    For more details

    Picture
    For more details

    Picture
    For more details

    Social Work Books


    HR Books


    Niruta Publications

    Social Work Foot Prints

    Leaders Talk

    Ramesha Niratanka


    Picture

    MHR LEARNING ACADEMY

    Get it on Google Play store
    Download App
    Online Courses


    RSS Feed

Niruta Publications Books
File Size: 741 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG​
  • HR BLOG
  • PUBLICATION WITH US
  • NIRUTA PRINTS
  • ONLINE STORE
  • JOIN OUR ONLINE GROUPS
  • VIDEOS​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
For More Details
Picture
More Details

Copyright Niruta Publications 2021,    Website Designing & Developed by: www.mhrspl.com