Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ಕೋಲಾರದ ಚಿನ್ನದಗಣಿ ಮತ್ತು ಅಲ್ಲಿನ ಕಾರ್ಮಿಕರು

10/11/2017

0 Comments

 
Picture
ಪೀಠಿಕೆ:
ಭಾರತಕ್ಕೆ ಖ್ಯಾತಿ ತಂದಿರುವ ಹಲವಾರು ಹೆಮ್ಮೆಗಳಲ್ಲಿ ಕರ್ನಾಟಕದ ಕೋಲಾರ ಚಿನ್ನದಗಣಿ ಅತ್ಯಂತ ಪ್ರಮುಖವಾದುದು. ಭಾರತದ ಒಟ್ಟಾರೆ ಚಿನ್ನದ ಉತ್ಪಾದನೆಯಲ್ಲಿ ಅತಿ ಹೆಚ್ಚು ಉತ್ಪಾದನೆಯಾಗುತ್ತಿದುದು ಕೋಲಾರದ ಚಿನ್ನದ ಗಣಿಯಿಂದ. ಅಷ್ಟು ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಸಹ ಕೋಲಾರ ಚಿನ್ನದ ಗಣಿ ಅತ್ಯಂತ ಪ್ರಮುಖವಾದುದ್ದು.

ಕೋಲಾರದ ಚಿನ್ನದ ಗಣಿಗೆ ಇಷ್ಟೆಲ್ಲಾ ಪ್ರಾಮುಖ್ಯತೆ ಇದೆ. ಆದರೂ ಕಳೆದ ಹತ್ತು ವರ್ಷಗಳಿಂದ ಅಲ್ಲಿನ ಗಣಿ ಕಾರ್ಮಿಕರ ಬಗ್ಗೆ ಯಾರು ಕಾಳಜಿವಹಿಸದಿರುವುದು ಶೋಚನಿಯ. ಕರ್ನಾಟಕದ ಹಾಗೂ ಭಾರತದ ಹೆಮ್ಮೆಗೆ ನಿಜವಾದ ಕಾರಣಕರ್ತರಾಗಿರುವ ಅಲ್ಲಿನ ಗಣಿ ಕಾರ್ಮಿಕರ ಪರಿಸ್ಥಿತಿ ಚಿಂತಾಜನಕವಾಗಿರುವುದು ಮಾತ್ರ ರಾಜ್ಯದ ಜನತೆಯ ಗಮನಕ್ಕೆ ಸಾಕಷ್ಟು ಬಂದಿಲ್ಲವೆಂದೇ ಹೇಳಬೇಕು. ಕೇಂದ್ರ ಸರ್ಕಾರವು ಫೆಬ್ರವರಿ, 2000ರಂದು ಕೋಲಾರ ಚಿನ್ನದ ಗಣಿಯನ್ನು ಮುಚ್ಚಲಾಗುವುದು ಎಂದು ಘೋಷಿಸಿದ ನಂತರ ಗಣಿ ಉಳಿಸಿಕೊಳ್ಳಲು, ಗಣಿ ಕಾರ್ಮಿಕರು ಹಾಗೂ ಕೆ.ಜಿ.ಎಫ್. ಜನತೆ ನಡೆಸಿದ ಹೋರಾಟದಿಂದಾಗಿ ಚಿನ್ನದ ಗಣಿಯ ನಿಜವಾದ ಪರಿಸ್ಥಿತಿ ಕರ್ನಾಟಕದ ಅರಿವಿಗೆ ಬರತೊಡಗಿತು, ಆದರೂ 2001 ರಲ್ಲಿ ಕೋಲಾರ ಚಿನ್ನದ ಗಣಿಯನ್ನು ಮುಚ್ಚಲಾಯಿತು.
  
ಮಣ್ಣಿನಿಂದ ಚಿನ್ನವನ್ನು ತೆಗೆದುಕೊಟ್ಟು ತಾವು ಮಣ್ಣಾಗಿ ಹೋದವರು, ಇಲ್ಲಿನ ಕಾರ್ಮಿಕರು, ಚಿನ್ನದಂಥ ಬದುಕು ಎಂಬುದು ಒಳ್ಳೆಯ ಬದುಕಿನ ಹರಕೆಯೇ ಆಗಿದ್ದರೂ ಚಿನ್ನ ತೆಗೆಯುವವರ ಬದುಕು ಮಾತ್ರ ದಿನ ನಿತ್ಯ ಸಾವಿನೊಂದಿಗೆ ಸರಸ ಎಂಬುದನ್ನು ಅರ್ಥ ಮಾಡಿಕೊಂಡವರು ಬಹಳ ಕಡಿಮೆ. ವಿಶ್ವದಲ್ಲೇ ಅತಿ ಆಳ (13,000 ಅಡಿಗಳಷ್ಟು)ದ ಗಣಿಗಾರಿಕೆಗೆ ಇದು ಹೆಸರಾಗಿದೆ. ಈ ಗಣಿಯಲ್ಲಿ, ಕಳೆದ 120 ವರ್ಷಗಳಲ್ಲಿ ಆಳುವ ವರ್ಗದ ನಿರ್ಲಕ್ಷ್ಯದಿಂದ ಪಾತಾಳದಿಂದ ಹೊರ ಬರದೇ ಹೋದ ಜೀವಿಗಳು ಸಾವಿರಾರು. ಚಿನ್ನವನ್ನು ಸಂಸ್ಕರಿಸಲು ಸೈನೈಡ್ ಎಂಬ ಘನ ಘೋರ ವಿಷವನ್ನು ಪ್ರಯೋಗಿಸುತ್ತಾ ಚಿನ್ನಕ್ಕಂಟಿದ ಕಸ ತೆಗೆಯಲು ತಾವು ಬಳಸಿದ ರಾಸಾಯನಿಕಗಳಿಂದ ಅವರು ಸಿಲಿಕಾಸಿಸ್ ಎಂಬ ಘೋರ ಖಾಯಿಲೆಗೆ ಬಲಿಯಾದವರೆಷ್ಟೋ.
  
ಚಿನ್ನ ತೆಗೆಯುತ್ತಿರುವ ಕರಿ ನೆರಳಿನ ಬದುಕು ಇದು. ಕಳೆದ 120 ವರ್ಷಗಳಿಂದ ಬ್ರಿಟೀಷರಿಗೆ, ಈ ನಾಡಿನ ಶ್ರೀಮಂತ ರಾಜಕೀಯ ವ್ಯಕ್ತಿಗಳ ಆಡಂಬರದ ಜೀವನಗಳಿಗೆ ತಮ್ಮ ಬದುಕನ್ನು ಸವೆಸುತ್ತಾ ಬಂದ ಕಾರ್ಮಿಕರ ಪರಿಸ್ಥಿತಿ ಇಂದು ಮತ್ತಷ್ಟು ಅತಂತ್ರವಾಗಿದೆ. ಇಲ್ಲಿನ ಕಾರ್ಮಿಕರ ಶ್ರಮವನ್ನು ಅಗ್ಗದ ಬೆಲೆಗೆ ಲೂಟಿ ಮಾಡಿ ಚಿನ್ನವನ್ನು ಸೊರೆ ಹೊಡೆದ ನಂತರ ಕಾರಣವೇ ಇಲ್ಲದೆ ಕೇಂದ್ರ ಸರ್ಕಾರ ಚಿನ್ನದ ಗಣಿಯನ್ನು ಮುಚ್ಚಲು ಮುಂದಾಯಿತು. ಆ ಮೂಲಕ 4500 ಕಾರ್ಮಿಕರನ್ನು, ಅವರನ್ನೇ ನಂಬಿರುವ ಕುಟುಂಬವನ್ನು, ಚಿನ್ನದ ಗಣಿಯನ್ನೇ ಆಧರಿಸಿರುವ ಕೆ.ಜಿ.ಎಫ್. ನಗರವನ್ನು ಬಂಜರು ಮಾಡಲು ಹೊರಟಿದೆ.
  
ಸರ್ಕಾರದ ಪ್ರಕಾರ ಇಲ್ಲಿ ಇನ್ನು ಚಿನ್ನವಿಲ್ಲ. ಆದರೆ ಚಿನ್ನವಿಲ್ಲವೆಂದ ಗಣಿಯನ್ನು ಖರೀದಿಸಲು ಆಸ್ಟ್ರೇಲಿಯಾದ ಖಾಸಗಿ ಕಂಪನಿ ಮಾತ್ರ ಮುಂದೆ ಬಂದಿದ್ದು ಆಶ್ಚರ್ಯವೇ ಸರಿ.
 
ಗಣಿಗಾರಿಕೆ ಎಂದರೇನು?  
ಗಣಿಗಳ ಕಾಯಿದೆ  1952 ಕಲಂ 2(1)(ರಿ) ಪ್ರಕಾರ ಖನಿಜಗಳನ್ನು ದೊರಕಿಸಿಕೊಳ್ಳಲು ನಡೆಸುವ ಭೂಶೋಧನೆ ಮತ್ತು ಪ್ರಾಪ್ತಿಗಾಗಿ ನಡೆಯುತ್ತಿರುವ ಭೂಮಿಯ ಹಗೆತದ ಕೆಲಸ ಹಾಗೂ ಗಣಿಯ (ಭೂಮಿಯ) ಸುರಂಗ ಮಾಡುವ ಕಾರ್ಯಕ್ಕೆ ಗಣಿಗಾರಿಕೆ ಎನ್ನುವರು. ಅಂದರೆ,

ಸಮತೊಲನ ಪ್ರದೇಶಗಳನ್ನು ಮಾಡುವುದು
ಯಂತ್ರ ಸ್ಥಾವರಗಳನ್ನು ಸ್ಥಾಪಿಸುವುದು
ಟ್ರಾಮ್ವೆ ಕಟ್ಟಡಗಳನ್ನು ನಿರ್ಮಿಸುವುದು
ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸುವುದು
ರೈಲ್ವೆ ಕೇಂದ್ರಗಳನ್ನು ಸ್ಥಾಪಿಸಲು ಅನುವುಮಾಡಿಕೊಡುವುದು
  
ಇತ್ಯಾದಿಗಳೆಲ್ಲದಕ್ಕೆ ಅನುಕೂಲ ಮಾಡಿಕೊಡುವ ವ್ಯವಸ್ಥೆ, ಮಾರಾಟ, ಗಣಿ ಉದ್ಯಮಕ್ಕಾಗಿ ಬಳಸಿಕೊಳ್ಳುವ ಪ್ರದೇಶ ಇತ್ಯಾದಿ ಎಲ್ಲಾ ಚಟುವಟಿಕೆಗಳು ಸೇರಿವೆ. ಇದೇ ರೀತಿಯಾಗಿ ಗಣಿ ಕೆಲಸಗಳು ದೇಶದೆಲ್ಲೆಡೆ ನಡೆಯುತ್ತಿದ್ದು ಇದರನ್ವಯ ಕೋಲಾರ ಚಿನ್ನದ ಗಣಿ ಕಾರ್ಖಾನೆಯೂ  ಒಂದು ಉದ್ಯಮವಾಗಿದೆ.
 
ಕೋಲಾರದ ಚಿನ್ನದ ಗಣಿಯ ಚರಿತ್ರೆ
ಕನ್ನಡ ನಾಡು ಚಿನ್ನದ ಬೀಡು ಎಂಬ ಕೀರ್ತಿ ಚಿನ್ನದ ಗಣಿ ಕರ್ನಾಟಕದ ಜನರ ಮನಸ್ಸಿನಲ್ಲಿ ಹೆಮ್ಮೆಯನ್ನು ತರುವಂತದ್ದು. ಸಂಪತ್ಭರಿತ ಕರ್ನಾಟಕಕ್ಕೆ ಕೀರ್ತಿ ಎಂಬ ಬಂಗಾರದ ತಿಲಕವನ್ನಿಟ್ಟದ್ದು ಕೋಲಾರ ಚಿನ್ನದ ಗಣಿ. ಈ ಗಣಿಗೆ 130 ವರ್ಷಗಳ ಚರಿತ್ರೆಯಿದೆ. ಈ ಗಣಿಯಲ್ಲಿ ದುಡಿದ, ಕರ್ನಾಟಕಕ್ಕೆ ಕೀತರ್ಿಯನ್ನು ತಂದ ಕಾರ್ಮಿಕರ ಅನುಭವಗಳಿವೆ.
  
ಈ ಉದ್ದೇಶದಿಂದಲೇ ಬ್ರಿಟೀಷರು ಈಸ್ಟ್ ಇಂಡಿಯ ಕಂಪನಿಯಾಗಿ 1600 ರಲ್ಲಿ ಭಾರತದೂಳಗೆ ಪ್ರವೇಶಿಸಿದರು. ಇವರ ಆಡಳಿತ ಕಾಲದಲ್ಲಿ ಭಾರತದ ನೈಸರ್ಗಿಕ ಲೋಹ ಸಂಪತ್ತುಗಳ ಸರ್ವೇ ಮಾಡಲಾಯಿತು. ಇದರನ್ವಯ ಮದ್ರಾಸ್ ರಾಜ್ಯದ ಪೂರ್ವಗಡಿಯನ್ನು ಸರ್ವೇ ಮಾಡುವ ಜವಾಬ್ದಾರಿಯನ್ನು 1802ರಲ್ಲಿ ಲೆಪ್ಟಿನೆಂಟ್ ವಾರನ್ ಎಂಬುವನಿಗೆ ಒಪ್ಪಿಸಲಾಯಿತು. ಈ ಸಮಯದಲ್ಲೇ ಎರ್ರಗೊಂಡ ಗುಡ್ಡದ (ಕೆ.ಜಿ.ಎಫ್. ನಿಂದ 15 ಕಿ.ಮೀ.) ಬಳಿ ಬಂಗಾರ ಸಿಗುತ್ತೆ ಎಂಬ ಸುದ್ದಿಯನ್ನು ತಿಳಿದು ಅದರ ಬಗ್ಗೆ ವಿವರಗಳನ್ನು ಸಂಗ್ರಹಿಸಿ ‘The Annual Asiatic Register-1804’ ಎಂಬ ಪತ್ರಿಕೆಯಲ್ಲಿ ಬರೆದನು.
  
ಆದರೂ ಹೊಸ ಪ್ರಯತ್ನದಲ್ಲಿ ಗಣಿಗಾರಿಕೆಗೆ ಕಾರಣನಾದವನು ಐರ್ಲೆಂಡ್ ದೇಶದ ಸೈನಿಕನಾದ ಮೈಕೇಲ್ ಲಾವಲ್ ಎಂಬುವನು. ಲಾವಲ್ 1871 ರಲ್ಲಿ ಕೋಲಾರ ಚಿನ್ನದ ಗಣಿಗೆ ಬಂದು ಸಂಶೋಧನೆ ಮಾಡಿ ತನಗೆ ಸಿಕ್ಕಿದ ಮಾಹಿತಿಯನ್ನು ಸಂಗ್ರಹಿಸಿ, ಸಂಶೋಧನೆ ಮಾಡಲು ತನಗೆ ಪರವಾನಿಗೆ ನೀಡಬೇಕೆಂದು ಮೈಸೂರು ಸರ್ಕಾರವನ್ನು ಕೋರಿ ಅನುಮತಿ ಪಡೆದು ಗಣಿ ಕೆಲಸದಲ್ಲಿ ತೊಡಗಿದ.
  
ಕೋಲಾರ ಚಿನ್ನದ ಗಣಿಯಲ್ಲಿ ಚಿನ್ನತೆಗೆಯುವ ಸ್ಥಳೀಯ ವಿಧಾನ ಸಾಮನ್ಯವಾಗಿ ರೂಡಿಯಲ್ಲಿ ಇದ್ದದ್ದನ್ನು 19ನೆಯ ಶತಮಾನದ ಕೊನೆಯ ತನಕ ಕಾಣುತ್ತೇವೆ. 15ನೆಯ ಶತಮಾನದ ಪ್ರಾರಂಭ ಕಾಲದಲ್ಲಿ ಬ್ರಿಟೀಷರು ಸಂಶೋಧನೆಗಳಲ್ಲೇ ಕಳೆದರು. ಈ ಕಾಲವನ್ನೆಲ್ಲಾ  ಒಂದಷ್ಟು ನೂತನ(ಪದ್ಧತಿ) ರೀತಿಯಲ್ಲಿ ಗಣಿ ರಚನೆ ಮಾಡುವ ಪ್ರಯತ್ನಗಳನ್ನು ಮಾಡಿದರು. ಆದರೂ ಅವು ಫಲಕೊಡಲಿಲ್ಲ. ಅದರ ನಂತರ ಸತತ ಪ್ರಯತ್ನದಿಂದ ಜಾನ್ ಟೈಲರ್ ಎಂಬ ವಸಾಹತುವಾದಿ ಉದ್ಯಮಿ ಸಂಶೋಧನೆ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಪಡೆಯುವುದು ಸಾದ್ಯ ಎಂಬುದನ್ನು ಮನಗಂಡ. ಈ ಕಾರಣದಿಂದ 1880 ನ್ನು ಕೋಲಾರ ಚಿನ್ನದ ಗಣಿ ಕೆಲಸದ ಆರಂಭ ಎಂದು ಕರೆಯಲಾಗುತ್ತದೆ. ಜಾನ್ ಟೈಲರ್ ಈ ನೂತನ ವಸಾಹತುಶಾಹಿ ಗಣಿಗಾರಿಕೆಗೆ ಮೂಲ ಕಾರಣನಾದ.
  
ಕ್ರಿ.ಶ.1880 ರಿಂದ 1956 ರ ತನಕ ಸುಮಾರು 76 ವರ್ಷಗಳು ಕೋಲಾರ ಚಿನ್ನದ ಗಣಿ ಬ್ರಿಟೀಷರ ಕೈಯಲ್ಲೇ ಇತ್ತು. 1947 ರಲ್ಲೆ ಬ್ರಿಟೀಷರ ಕೈಯಿಂದ ಭಾರತದ ದಲ್ಲಾಳಿಗಳ ಕೈಗೆ ಅಧಿಕಾರ ಬದಲಾವಣೆಯಾದರೂ 1956 ರ ತನಕವೂ ಕೋಲಾರ ಚಿನ್ನದ ಗಣಿ ಬ್ರಿಟೀಷರ ಹಿಡಿತದಲ್ಲೇ ಇತ್ತು. ನಂತರ 1956 ರಿಂದ 1962 ರ ತನಕ ಮೈಸೂರು ರಾಜ್ಯದ ಅಧೀನದಲ್ಲಿ ಇತ್ತು.
           
​ಚಿನ್ನದಗಣಿ ಬೆಳೆದಂತೆಲ್ಲಾ ಹಲವಾರು ಗಣಿಗಳಾಗಿ ಮಾರ್ಪಟ್ಟವು ಅವುಗಳೆಂದರೆ ಮಾರಿಕುಪ್ಪಮ್ ಮೈಸೂರು ಮೈನ್ಸ್, ನಂದಿದುರ್ಗಮ್ ಮೈನ್ಸ್, ಉರಿಗಾಂ ಮೈನ್ಸ್, ಪಾಲಕ್ಕಾಡು ಮೈನ್ಸ್ ಮತ್ತು ಚಾಂಪಿಯನ್ ರೀಫ್ ಮೈನ್ಸ್, ಎಂಬ ಐದು ಮೈನ್ಸ್‍ಗಳು ಆಯ್ಕೆಯಾಗಿ ಗಣಿ ಕೆಲಸಗಳು ನಡೆದವು. ಗಣಿ ಕೆಲಸಗಳು ನಡೆಯುತ್ತಿದ್ದಂತೆ ಪ್ರಪಂಚದಲ್ಲಿಯೇ ಅತಿ ಆಳಕ್ಕೆ ಕೆಲಸಗಳು ನಡೆದ ಗಣಿಗಳಲ್ಲಿ 2ನೆಯ ಸ್ಥಾನವನ್ನು ಪಡೆದುಕೊಂಡಿವೆ ಚ್ಯಾಂಪಿಯನ್ ರೀಪ್ ಮೈನ್ಸ್ ಆಳ 1919-1920 ರಲ್ಲಿ 6000 ಅಡಿಗಳು ಮುಂದುವರೆಯುತ್ತಾ ಹೋಗಿ 1932-33 ರಲ್ಲಿ ಊರಿಗಂ ಮತ್ತು ಚ್ಯಾಂಪಿಯನ್ ರೀಪ್ ಮೈನ್ಸ್‍ಗಳು 7,200 ಅಡಿಗಳು ದಾಟಿದವು ಆಳದ ಕಡೆಗೆ ಹೋದ ಊರಿಗಂ ಮೈನ್ಸ್ 1936-37 ರಲ್ಲಿ 8000 ಅಡಿಗಳು ಈಗ 2000ಕ್ಕೆ 13,000 ಅಡಿಗಳಷ್ಟು ಆಳಕ್ಕೆ ಹೋಗಿ ಪ್ರಪಂಚದಲ್ಲೇ 2ನೆಯ ಸ್ಥಾನದಲ್ಲಿದೆ.
Picture
ಕಾರ್ಮಿಕರ ಸಂಖ್ಯೆ
ಗಣಿಗಾರಿಕೆಗೆ ತೊಡಗಿದ ಆರಂಭದ ವರ್ಷಗಳಲ್ಲಿ ಅಂದರೆ 1891 ರಲ್ಲಿ 9038 ಕಾರ್ಮಿಕರಿದ್ದು 1905 ರಲ್ಲಿ 25,000 ಕಾರ್ಮಿಕರಿದ್ದರು. ಗಣಿಕೆಲಸ ಮುಂದುವರೆದು 1910 ಕ್ಕೆ 35,000 ಕಾರ್ಮಿಕರು 1930 ರಲ್ಲಿ ಏಷಿಯಾದಲ್ಲಿಯೇ ಹೆಚ್ಚಿನ ಕಾರ್ಮಿಕರನ್ನು ಹೊಂದಿದ್ದ ನಗರವಾಗಿದ್ದು. ಆಗ 18000 ಕಾರ್ಮಿಕರಿದ್ದರು. ಕೊನೆಗಳಿಗೆಯಲ್ಲಿ ಅಂದರೆ, 31 ಡಿಸೆಂಬರ್ 1999 ರಲ್ಲಿ ಈ ಮುಂದಿನಂತೆ ಇದ್ದರು:
  
ಇವರಲ್ಲಿ ತಾಂತ್ರಿಕ ಕಾರ್ಮಿಕರು  2301 ಮತ್ತು ತಾಂತ್ರಿಕೇತರ ಕಾರ್ಮಿಕರು- 2005 ಜನ ಕಾರ್ಯ ನಿರ್ವಹಿಸುತ್ತಿದ್ದರು ಎಂದು 1999-2000ರ ವಾರ್ಷಿಕ ವರದಿ ತಿಳಿಸಿಕೊಡುತ್ತದೆ.
Picture
ಕೋಲಾರ ಚಿನ್ನದ ಗಣಿಯ ಪ್ರಸ್ತುತ ಪರಿಸ್ಥಿತಿ ಹಾಗೂ ಮುಚ್ಚಲು ಕಾರಣಗಳು
B.G.M.L  ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿ ನಡೆಯುತ್ತಿರುವ ಸಾರ್ವಜನಿಕ ಉದ್ದಿಮೆ ಎಂದ ಕೂಡಲೇ ಸಾಮಾನ್ಯವಾಗಿ ಬರುವ ಚಿತ್ರಣ ಹೊಟ್ಟೆ ಬಟ್ಟೆಗೆ ಕೊರತೆ ಇಲ್ಲದೆ ಸಂಬಳ ಕೈಗೆಟುಕುತ್ತದೆ ಎಂದು. ಬದುಕಲು ಯೋಗ್ಯ ವಸತಿ ಮನೆಗಳು, ಆಸ್ಪತ್ರೆ, ಶಾಲೆ, ಸಾರಿಗೆಯ ವ್ಯವಸ್ಥೆ, ಇತ್ಯಾದಿ ಆದರೆ BGML  ಮುಚ್ಚಿದ ನಂತರ ಕಾರ್ಮಿಕರ ಬದುಕಿನಲ್ಲೊಮ್ಮೆ ಇಣುಕಿ ನೋಡಿದರೆ, ಇಂಥ ಅಭಿಪ್ರಾಯಗಳೆಲ್ಲ ಚೂರು ಚೂರಾಗುತ್ತವೆ.

ಕೋಲಾರ ಚಿನ್ನದ ಗಣಿಯನ್ನು ಮುಚ್ಚಿದ ನಂತರ ಅಲ್ಲಿನ ಕಾರ್ಮಿಕರ ಪರಿಸ್ಥಿತಿ ಚಿಂತಾಜನಕವಾಗಿ ಕಾದ ಬಾಣಲೆಯಲ್ಲಿ ಬಿದ್ದಂತಾಗಿದೆ ಎಂಬುದು ಅಲ್ಲಿನ ಕಾರ್ಮಿಕರ ತುಡಿತ. ಅದೆಷ್ಟು ಜನ ಸಿಲಿಕಾಸಿಸ್ ಖಾಯಿಲೆಗೆ ತುತ್ತಾಗಿ ಆರೋಗ್ಯ ಸುದಾರಿಸಲಾಗದೆ ಬಳಲಿದವರೆಷ್ಟು. ಇದೇ ಕಾರ್ಮಿಕರನ್ನು ನಂಬಿದ ಸಂಸಾರಗಳು ಬೀದಿಗೆ ಬಿದ್ದ ಪರಿಸ್ಥಿತಿಗಳೆಷ್ಟು, ಸುಮಾರು ಜನ ವಲಸೆ ಹೋಗಿ ನಾನಾ ಕಡೆಗಳಲ್ಲಿ ಸಂಸಾರ ಮಕ್ಕಳನ್ನು ಬಿಟ್ಟು ದುಡಿಯುವ ಪರಿಸ್ಥಿತಿ ಮತ್ತು ಸರ್ಕಾರ ನಿಗದಿ ಪಡಿಸಿದ ಗಿಖಖ ಹಣ ದೊರಕದಿದ್ದು ಈ ಹಣಕ್ಕಾಗಿ ಕೋರ್ಟು ಕಛೇರಿಗಳನ್ನು ಅಲೆಯುವುದು ಇಲ್ಲಿನ ಕಾರ್ಮಿಕರ ಪ್ರಸ್ತುತ ಪರಿಸ್ಥಿತಿಯಾಗಿದೆ.
  
ಕೋಲಾರ ಚಿನ್ನದ ಗಣಿಯನ್ನು ಮುಚ್ಚಲು ಹಲವಾರು ಕಾರಣಗಳನ್ನು ಸರ್ಕಾರವೇ ನಿಗದಿ ಮಾಡಿದ ಕೆಲವೊಂದು ಸಮಿತಿಗಳು ವರದಿಗಳನ್ನು ನೀಡಿವೆ ಅವು ಈ ಕೆಳಕಂಡಂತೆ ಕಾಣಬಹುದು
  1. K.S.R ಚಾರಿ ವರದಿ - 1985
  2. ಸುಶೀಲಾ ಗೋಪಾಲನ್ ಸಂಸತ್ ಸ್ಥಾಯಿ ಸಮಿತಿ  1994
  3. ನಟರಾಜನ್ ವರದಿ - 1996
  4. ರಾಮದಾಸ್ ಅಗರ್ವಾಲ್ ಸಂಸತ್ ಸ್ಥಾಯಿ ಸಮಿತಿ  2000
  
ಈ ಮೇಲ್ಕಂಡ ವರದಿ ಮತ್ತು ಸ್ಥಾಯಿ ಸಮಿತಿಗಳು ಕೋಲಾರ ಚಿನ್ನದ ಗಣಿ ನಷ್ಟಕ್ಕೆ ಮತ್ತು ಮುಚ್ಚಲಿಕೆ ಕೆಲವೊಂದು ಕಾರಣಗಳನ್ನು ನೀಡಿತು. ಅವು ಹೀಗಿವೆ:
  
ದುಬಾರಿ ವಿದ್ಯುತ್ ಶುಲ್ಕ  ಒಂದು ಯುನಿಟ್ಗೆ 8 ರಿಂದ 14 ಪೈಸೆಯಷ್ಟೆ ಖರ್ಚಾಗುತ್ತದೆ. ಆದರೆ ಕರ್ನಾಟಕ ಸರ್ಕಾರ 4.25 ರೂ ವಸೂಲಿ ಮಾಡುತ್ತಿತ್ತು/ದೆ.
  
ಕೇಂದ್ರ ಸರ್ಕಾರ ಚಿನ್ನದ ಬೆಲೆ ನೀತಿ  ಕೇಂದ್ರ ಸರ್ಕಾರವು BGML ನಿಂದ ಬಂದ ಚಿನ್ನದಿಂದ ಲಾಭ ಪಡೆದು BGML ಗೆ ಹಿಂದಿರುಗಿಸುತ್ತಿರಲಿಲ್ಲ
  
ಕೇಂದ್ರ ಸರ್ಕಾರ ಹೊರಗಡೆ ಮಾರುಕಟ್ಟೆಯಲ್ಲಿ ಮಾರಲು ಅನುಮತಿ ಕೊಟ್ಟರೂ ಆಡಳಿತ ದಲ್ಲಾಳಿಗಳನ್ನು ಇಟ್ಟು 10% ಕಮಿಷನ್ ಕೊಟ್ಟಿದ್ದರಿಂದ ಮತ್ತಷ್ಟು ನಷ್ಟವಾಗಿದೆ.
  
ಚಿನ್ನವನ್ನು ವಿಂಗಡಿಸುವುದರಲ್ಲಿ ನೂತನ ವಿಧಾನಗಳನ್ನು ಉಪಯೋಗಿಸದೆ ಕಡಿಮೆ ಉತ್ಪಾದನೆ ಮಾಡಿ ನಷ್ಟ ಅನುಭವಿಸುತ್ತಿತ್ತು
  
ಚಿನ್ನವನ್ನು ಬೇರ್ಪಡಿಸುವ ಜಾಗದಲ್ಲಿ ಸರಿಯಾದ ರಕ್ಷಣೆ ಇಲ್ಲದೆ ವರ್ಷಕ್ಕೆ 30 ಕೋಟಿ ರೂ ನಷ್ಟ (ಅಧಿಕಾರಿಗಳಿಂದ ಕಳವು)
  
ಚಿನ್ನ ದೊರೆಯುವ ಬಂಡೆಗಳನ್ನು ಕೊರೆಯದೆ ಕಡಿಮೆ ಚಿನ್ನ ಇರುವ ಕಡೆ ಕೆಲಸ ಮಾಡಲು ಅಡಳಿತ ಮಂಡಳಿ ನಡೆದುಕೊಂಡಿದ್ದು
 
ಕೊನೆಯ ಮಾತು
ಪ್ರಸ್ತುತ ಚಿನ್ನದ ಗಣಿ ಸುಮಾರು 2000 ಇಸವಿಯಿಂದ ಅಲ್ಲಿನ ಕಾರ್ಮಿಕರು ನಾನಾ ಹೋರಾಟ, ಧರಣಿ, ಉಪವಾಸ ಕೈಗೊಂಡರೂ ನಮ್ಮ ರಾಜಕೀಯ ನಾಯಕರಿಗೆ, ಸಾರ್ವಜನಿಕರಿಗೆ ಇವರ ಕೂಗು ಕೇಳಲಿಲ್ಲವೇಕೆ.? ಏನೇ ಇರಲಿ ಕನಿಷ್ಠ ಮಾನವೀಯತೆಯಿಂದಾದರೂ ಅವರ ಬಗ್ಗೆ ಕಾಳಜಿವಹಿಸಬಹುದಲ್ಲವೆ? ಇತ್ತೀಚಿನ ಕರ್ನಾಟಕ ಲೋಕಾಯುಕ್ತ ಗಣಿ ವರದಿಯ ಪ್ರಕಾರ ಕರ್ನಾಟಕ ಸರ್ಕಾರ ಸುಮಾರು 16,480 ಸಾವಿರ ಕೋಟಿ ನಷ್ಟವನ್ನುಂಟು ಮಾಡಿದೆ ಎಂಬ ವರದಿಯನ್ನು ಕೇಳಿ ದಂಗಾಗಿ ಹೋದ ಜನರು ಎಷ್ಟು? ಇಲ್ಲಿ ಇನ್ನೊಂದು ವಿಷಯ ಹೇಳಲು ಮನವರಿಕೆಯಾಗಿದೆ, ಏನೆಂದರೆ ಈ ಗಣಿ ಪುನರ್ ನಿರ್ಮಾಣ ಮಾಡಲು ಬೇಕಾಗಿರುವುದು 100 ಕೋಟಿ ಎಂಬ ವರದಿಯನ್ನು ಅಂದಿನ ನಟರಾಜನ್ ವರದಿ ಹೇಳಿತ್ತು. ಇದೇ ಬಂಡವಾಳವನ್ನು ಕರ್ನಾಟಕ ಸರ್ಕಾರ ನೀಡಿ ಚಿನ್ನದ ಗಣಿ ಪುನರ್ ನಿರ್ಮಾಣ ಮಾಡಿ ಅಲ್ಲಿನ ಕಾರ್ಮಿಕರಿಗೆ ಬದುಕು ನೀಡುವ ಕಾರ್ಯ ಮಾಡಬಹುದು. ಇದಕ್ಕಾಗಿ ಸಮಾಜ ಚಿಂತಕರು, ಸಮಾಜಕಾರ್ಯಕರ್ತರು, ಚಳವಳಿಗಾರರು, ಹೋರಾಟಗಾರರು, ಇದಕ್ಕೆ ಕೈಜೋಡಿಸಿದರೆ ಒಳಿತು.
 
ನಾಗೇಶ ಹೆಚ್.ವಿ
ಸಂಶೋಧನಾ ವಿದ್ಯಾರ್ಥಿ, ಸಮಾಜಕಾರ್ಯ ವಿಭಾಗ ಬೆಂಗಳೂರು ವಿಶ್ವವಿದ್ಯಾಲಯ
0 Comments



Leave a Reply.


    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9

    Social Work Foot Prints


    RSS Feed


Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com