Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
    • Videos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
    • Videos
  • Join Our Online Groups
  • Contact Us
Niruta Publications

ನಾನು ಮತ್ತು ನನ್ನ ಸಾಧನೆಗಳು

10/23/2017

0 Comments

 
Picture
ಎಸ್. ಶ್ರೀಕಾಂತ್ ಆದ ನಾನು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಗಂಜಲಗೂಡು ಗ್ರಾಮದಲ್ಲಿ ಶಿವನಂಜೇಗೌಡ ಮತ್ತು ತೋಪಮ್ಮ ದಂಪತಿಗೆ 16.09.1951 ರಂದು ಮಗನಾಗಿ ಜನಿಸಿದೆ. ನನ್ನ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಮುಗಿಸಿ, ನಂತರ ಹೊಳೆನರಸಿಪುರದಲ್ಲಿ ಪ್ರೌಢ ಶಿಕ್ಷಣ, ಹಾಸನದಲ್ಲಿ ವಿಜ್ಞಾನ ಪದವಿ ಹಾಗೂ ಮಂಗಳೂರಿನಲ್ಲಿ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು (1976) ನನ್ನ ವೃತ್ತಿ ಜೀವನವನ್ನು ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ಸಿಬ್ಬಂದಿ ಅಧಿಕಾರಿಯಾಗಿ ಮೂರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದೆ. ಇದರ ಜೊತೆಯಲ್ಲಿಯೇ ಮಹರ್ಷಿ ಮಹೇಶಯೋಗಿಯವರ ಧ್ಯಾನ ತರಬೇತಿ ಪಡೆದು (ಟಿ.ಎಂ) ನೂರಾರು ಜನರಿಗೆ ಧ್ಯಾನ ಬೋಧನೆಯನ್ನು ಮಾಡಿರುವೆನು. ನಾನು ಕೃಷಿಕ ಕುಟುಂಬದಿಂದ ಬಂದವನಾಗಿದ್ದು, ಮಡದಿ ಮತ್ತು ಇಬ್ಬರು ಮಕ್ಕಳೊಡನೆ ಚಿಕ್ಕ ಹುಣಸೂರಿನಲ್ಲಿ ವಾಸವಿದ್ದೇನೆ. ಮಡದಿ ಸಮಾಜ ವಿಜ್ಞಾನದ ಸ್ನಾತಕೋತ್ತರ ಪದವೀಧರೆ. ಮಕ್ಕಳಿಬ್ಬರು ಇಂಜಿನಿಯರ್ ಆಗಿದ್ದಾರೆ. 
1979 ಸೆಪ್ಟೆಂಬರ್ 16ರಂದು ಹುಣಸೂರಿನ ಬಿ.ಎ.ಎಂ. ಸಂಸ್ಥೆಯ ಮೂಲಕ ಆದಿವಾಸಿಗಳ ಕ್ಷೇಮಾಭಿವೃದ್ಧಿಯನ್ನು ಪ್ರಾರಂಭಿಸಿದೆ. ಡಾ. ಜರೀಪೈಸ್ ಮತ್ತು ನಾನು ಇನ್ನಿತರ ಆಸಕ್ತರ ಜೊತೆಗೂಡಿ 1980 ಸೆಪ್ಟೆಂಬರ್ 1ರಂದು ಡೀಡ್ ಸಂಸ್ಥೆಯನ್ನು (ಶಿಕ್ಷಣ ಮುಖೇನ ಪ್ರಗತಿ) ಪ್ರಾರಂಭಿಸಿದೆವು. ಆದಿವಾಸಿಗಳ ಅಸ್ತಿತ್ವ ರಕ್ಷಣೆಗೆ, ಅವರ ಅಸ್ಮಿತಿ ಮತ್ತು ಸ್ವಾಭಿಮಾನ ಉಳಿಸಲು, ಸ್ಥಾನಿಕವಾಗಿ ಆದಿವಾಸಿಗಳ ಸಂಘಟನೆ ಮಾಡಿ ಮುಂದಾಳತ್ವ ರೂಪಿಸಲು, ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಜನರಲ್ಲಿ ಅರಿವು ಮೂಡಿಸಲು, ತಮ್ಮ ಕಳೆದು ಹೋದ ಹಕ್ಕುಗಳನ್ನು ಪುನಃ ಪಡೆದುಕೊಳ್ಳಲು ಹಕ್ಕೊತ್ತಾಯ ಕಾರ್ಯಕ್ರಮವನ್ನು ರೂಪಿಸಲು, ಆದಿವಾಸಿ ಭಾಷೆಯನ್ನು ರಕ್ಷಿಸಲು, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ಆದಿವಾಸಿಗಳನ್ನು ತೊಡಗಿಸಲು, ಆದಿವಾಸಿ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ವಿಚಾರಳಿಗೆ ಒತ್ತು ನೀಡಲು, ಆಹಾರ ಸುರಕ್ಷತೆಗಾಗಿ ಪರ್ಯಾಯವಾಗಿ ಕೃಷಿಯಲ್ಲಿ ಆದಿವಾಸಿಗಳನ್ನು ತೊಡಗಿಸಲು ಹಂತ ಹಂತವಾಗಿ ಜನರ ಸಹಭಾಗಿತ್ವದಲ್ಲಿ ಡೀಡ್ ಸಂಸ್ಥೆಯು ಕಾರ್ಯ ನಿರ್ವಹಿಸಿತು. ಈ ಎಲ್ಲಾ ಹಂತದಲ್ಲೂ ತರಬೇತಿ ಹೊಂದಿದ ಸಮಾಜಕಾರ್ಯಕರ್ತನಾಗಿ ಜನರ ಪಾಲ್ಗೊಳ್ಳುವಿಕೆಯು ಚೆನ್ನಾಗಿ ಆಗಲು ಸುಗಮಗಾರಿಕೆ ವಹಿಸಿದೆ. ಆದಿವಾಸಿಗಳ ಭಾವನೆಗಳನ್ನು, ಅವರ ಸ್ಥಿತಿಗತಿಗಳನ್ನು, ಅವರ ಆಶಯಗಳನ್ನು ಹೊರ ಜಗತ್ತಿಗೆ ಪರಿಚಯಿಸಲು ಹಾಗೂ ತಮ್ಮ ತಮ್ಮ ನಡುವೆ ಚರ್ಚೆಗೊಳಪಡಿಸಲು ಅರಿವು ಮೂಡಿಸಲು 'ಹಂಬಲ' ಮಾಸ ಪತ್ರಿಕೆಯನ್ನು 1981ರಲ್ಲಿ ಪ್ರಾರಂಭಿಸಿದೆವು. 20 ವರ್ಷಗಳ ಕಾಲ ಈ ಪತ್ರಿಕೆಯು ಆದಿವಾಸಿಗಳ ಮುಖವಾಣಿಯಾಗಿ ಕಾರ್ಯ ನಿರ್ವಹಿಸಿತು. ಇದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿರುವ ದಿನಪತ್ರಿಕೆಗಳು, ವಾರ ಪತ್ರಿಕೆಗಳು ಆದಿವಾಸಿಗಳನ್ನು ಕುರಿತು, ಅವರ ಹಕ್ಕೊತ್ತಾಯಗಳ ಆಶಯಗಳನ್ನು ಅರ್ಥ ಮಾಡಿಕೊಂಡು ಹಲವು ಲೇಖನಗಳನ್ನು, ಸುದ್ಧಿಗಳನ್ನು ಕಾಲ ಕಾಲಕ್ಕೆ ಪ್ರಕಟಿಸಿ ಆದಿವಾಸಿಗಳಿಗೆ ಬೆಂಬಲ ನೀಡಿದವು. ಪ್ರಾರಂಭದಲ್ಲಿ ಆದಿವಾಸಿಗಳ ದಿನನಿತ್ಯದ ಬದುಕನ್ನು ಅರಿಯಲು ಹಾಡಿಯೊಂದರಲ್ಲಿ ಹತ್ತು ದಿನಗಳ ಕಾಲ 'ಸಿದ್ಧ'ನಾಗಿ, ಅವರಲ್ಲಿ ಒಬ್ಬನಾಗಿ ಜೀವಿಸಿ ಹಲವು ವಿಷಯಗಳನ್ನು ಕಲಿತೆ. ಆದಿವಾಸಿ ಹಿರಿಯರ ಒಡನಾಟದಲ್ಲಿ ಅವರ ಆಶಯಗಳನ್ನು ಅವರ ಭಯ ಭೀತಿಗಳನ್ನು ಮತ್ತು ಸಂಕಷ್ಟಗಳನ್ನು, ಅರಣ್ಯ ಜೀವನದ ಪದ್ಧತಿಗಳನ್ನು ಅರಿತುಕೊಂಡೆ.

ಭಾರತದಾದ್ಯಂತ 1983 ರಲ್ಲಿ ಪ್ರವಾಸ ಮಾಡಿ ಕೆಲವು ಆದಿವಾಸಿ ಹಾಗೂ ಗ್ರಾಮೀಣ ಪ್ರದೇಶಗಳ ಪರಿಸ್ಥಿತಿಯನ್ನು ಅರ್ಥೈಸಿಕೊಂಡೆ. ಇದರಿಂದ ಆದಿವಾಸಿಗಳ ಚರಿತ್ರೆ ಓದಲು, ಅವರ ಸ್ಥಿತಿಗತಿ ಅರಿಯಲು, ಅವರ ಹಿರಿತನ ತಿಳಿಯಲು, ಅವರ ಸಂಪ್ರದಾಯ, ಆಡಳಿತ ಮತ್ತು ಜೀವನ ನಿರ್ವಹಣೆ ಕಾಣಲು ಸಹಾಯಕವಾಯಿತು. "ನೊಂದವರ ಹಂಬಲದ ಹಾಡುಗಳು" ಕಿರು ಹೊತ್ತಿಗೆ ಪ್ರಕಟಿಸಿ ಅವರ ಆಶಯಗಳನ್ನು, ಕನಸುಗಳನ್ನು, ಸಮಸ್ಯೆಗಳನ್ನು ಹಾಡುಗಳ ಮೂಲಕ ಪ್ರಚಾರ ಮಾಡಿದೆವು. ಆದಿವಾಸಿಗಳಿಗೆ ಹಾಡುವುದೆಂದರೆ ಬಹಳ ಇಷ್ಟ. ಮಕ್ಕಳಿಂದ ದೊಡ್ಡವರಾದಿಯಾಗಿ ಹಾಡುವುದರಲ್ಲಿ, ಚರ್ಚಿಸುವುದರಲ್ಲಿ ಹಾಗೂ ರಚನಾತ್ಮಕ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಲ್ಲಿ ಸಕ್ರಿಯವಾಗಿ ಪಾಲ್ಗೊಂಡೆವು.

ಕೆನಡಾದ ನವಸ್ಕೋಶಿಯ ರಾಜ್ಯದ ಸೆಂಟ್ ಫ್ರಾಕ್ಸಿಸ್ ಜೇವಿಯರ್ ವಿಶ್ವವಿದ್ಯಾಲಯದ ಕೋಡಿ ಅಂತಾರಾಷ್ಟ್ರೀಯ ಇನಿಸ್ಟಿಟ್ಯೂಟ್ನಲ್ಲಿ 1986 ರಲ್ಲಿ ಸಾಮಾಜಿಕ ಅಭಿವೃದ್ಧಿ ಡಿಪ್ಲೊಮಾ ಪದವಿಯನ್ನು ಪಡೆದು, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಮುಂತಾದ ದೇಶಗಳ ಕೆಲವು ಭಾಗಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ಜನಜೀವನ, ಸಾಮಾಜಿಕ ರೀತಿ ನೀತಿಗಳು ಹಾಗೂ ಸಾಮಾಜಿಕ ಹೋರಾಟಗಳನ್ನು ಅರ್ಥಮಾಡಿಕೊಂಡೆ.
​
ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ 2003 ರಲ್ಲಿ ನಡೆದ ಗುಣಮಟ್ಟ ಶಿಕ್ಷಣ ಕುರಿತು ಅಂತಾರಾಷ್ಟ್ರೀಯ ಕಾರ್ಯಾಗಾರದಲ್ಲಿ ಪಾಲ್ಗೊಂಡು ಆದಿವಾಸಿಗಳೊಡನೆ ನಡೆಸಿರುವ ಶೈಕ್ಷಣಿಕ ಪ್ರಯೋಗಗಳನ್ನು ಮಂಡಿಸಿರುವೆ. ಅಂತೆಯೇ 2004 ರಲ್ಲಿ ಪಶ್ಚಿಮ ಆಫ್ರಿಕಾ ದೇಶಗಳಾದ ಟೋಗೋ, ಬುರ್ಕಿನಾಫಸೊದಲ್ಲಿ ಒಂದು ತಿಂಗಳ ಕಾಲ ಪ್ರವಾಸ ಮಾಡಿ ಶಿಕ್ಷಣ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡು ಆದಿವಾಸಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಕುರಿತು ವಿಷಯ ಮಂಡನೆ ಮಾಡಿರುವೆ.
Picture
1980 ರಿಂದ ಈವರಿಗೆ ಆದಿವಾಸಿ ಕ್ಷೇತ್ರದಲ್ಲಿ ಜೀತ ಬಿಡಿಸುವುದು, ವಯಸ್ಕರ ಶಿಕ್ಷಣದಲ್ಲಿ ತೊಡಗಿಸುವುದು. ಅರಣ್ಯ ಹಕ್ಕಿಗಾಗಿ ಪ್ರತಿಪಾದಿಸುವುದು, ಕೃಷಿ ಭೂಮಿಗಾಗಿ ಒತ್ತಾಯಗಳನ್ನು ಮಾಡಿ ಭೂಮಿ ಪಡೆದು ಕೃಷಿಯಲ್ಲಿ ತೊಡಗಿಸುವುದು, ಶಿಶುಪಾಲನೆ ಹಾಗೂ ಪ್ರಾಥಮಿಕ ಶಿಕ್ಷಣಕ್ಕೆ ಆದ್ಯತೆ ನೀಡಿ ಆದಿವಾಸಿ ಹಾಡಿಗಳಿಗೆ ಶಾಲೆಗಳು ಬರುವಂತೆ ಒತ್ತಾಯಿಸುವುದು, ಆದಿವಾಸಿ ಪರ್ಯಾಯ ಶಿಕ್ಷಣಕ್ಕೆ ಜೇನು ಕುರುಬರ ಭಾಷೆ ಅಭಿವೃದ್ಧಿಗೆ ಕಾರ್ಯ ಮಾಡುವುದು. ಸರ್ಕಾರದಿಂದ ಸಿಗಬಹುದಾದ ಎಲ್ಲಾ ನಾಗರೀಕ ಸೌಕರ್ಯಗಳನ್ನು (ಮನೆ, ಕುಡಿಯುವ ನೀರು, ಹಿರಿಯರಿಗೆ ಮತ್ತು ವಿಧವೆಯರಿಗೆ ಮಾಸಿಕ ವೇತನ, ನ್ಯಾಯಬೆಲೆ ಅಂಗಡಿಯಿಂದ ಆಹಾರ ವಿತರಣೆ, ಸಂಚಾರಿ ಆರೋಗ್ಯ ಘಟಕಗಳಿಂದ ಸೇವೆ ಇತ್ಯಾದಿ) ಪಡೆದುಕೊಳ್ಳಲು ಜನಜಾಗೃತಿ ಮೂಡಿಸುವುದು, ಅದಿವಾಸಿ ಸ್ವಯಂ ಆಡಳಿತ ರಕ್ಷಿಸಲು ಗ್ರಾಮಸಭೆಗಳಿಗೆ ಮಹತ್ವ ನೀಡಿ ಆದಿವಾಸಿ ಯಜಮಾನಿಕೆಯನ್ನು ರಕ್ಷಿಸುವುದು, ಶೋಷಕರಿಂದ ದೂರ ಇರುವುದು, ಗಿಡ ಮೂಲಿಕೆಗೆ, ತೋಟಗಾರಿಕೆಗೆ, ಕೃಷಿ ಸಂಬಂಧಿ ಗಿಡ-ಮರಗಳಿಗೆ, ಕೈತೋಟಗಳಿಗೆ ಗಮನಹರಿಸುವುದು. ಸ್ಥಾನಿಕ ಬಹುಮುಖಿ ನಾಯಕತ್ವಕ್ಕೆ ಆದ್ಯತೆ ನೀಡಿ ಆದಿವಾಸಿಗಳಲ್ಲಿ ಸಂಘಟನೆ-ಅರಿವು-ಹಕ್ಕೊತ್ತಾಯಗಳಿಗೆ ಬೆಂಬಲ ನೀಡುವುದು, ಹಕ್ಕು ರಕ್ಷಣೆಗಾಗಿ ಕಾನೂನಿನಡಿ ನ್ಯಾಯಾಲಯಗಳ ಸಹಾಯ ಹಸ್ತ ಪಡೆಯುವುದು ಈ ಮುಂತಾದ ಕೆಲಸ ಕಾರ್ಯಗಳಿಗೆ ಮಹತ್ವ ನೀಡಿ ಪ್ರಜಾಸತ್ತಾತ್ಮಕವಾಗಿ ಕಾರ್ಯ ಮಾಡುವ ಅನುಭವ ಹೊಂದಿದ್ದೇನೆ. ವ್ಯವಸ್ಥೆಯನ್ನು ಆದಿವಾಸಿಗಳ ಪರವಾಗಿ ದುಡಿಸಿಕೊಳ್ಳಲು ಪ್ರಜಾಸತಾತ್ಮಕ ಮಾರ್ಗದಲ್ಲಿ ನಂಬಿಕೆಯಿರಿಸಿ ಸಮುದಾಯದ ವಿಶ್ವಾಸ ಗಳಿಸಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಂಪರ್ಕ ಹೊಂದಿ ಕಾರ್ಯ ಮಾಡಿರುವೆ.

ನಾಗರಹೊಳೆ ರಾಷ್ಟೀಯ ಉದ್ಯಾನವನ ಘೋಷಣೆಯಿಂದ ಆದ ಅನಾಹುತಗಳು, ವಿಶ್ವ ಬ್ಯಾಂಕ್ನ ಭಾರತ ಪರಿಸರ ಅಭಿವೃದ್ಧಿ ಯೋಜನೆಯ ಜಾರಿಯಿಂದ ಆದಿವಾಸಿಗಳಿಗಾದ ಅನ್ಯಾಯ, ಹಿಂದುಳಿದ ಜಾತಿ ಸಮುದಾಯಗಳು ಪರಿಶಿಷ್ಟ ವರ್ಗದ ಹೆಸರಿನಲ್ಲಿ ಮಿಸಲಾತಿಯನ್ನು ದುರುಪಯೋಗಪಡಿಸಿಕೊಂಡು ಆದಿವಾಸಿಗಳಿಗೆ ಎಸಗಿದ ಅನ್ಯಾಯ, ಅರಣ್ಯದಿಂದ ಹೊರದಬ್ಬಿ ಅದಿವಾಸಿಗಳಿಗೆ ಅರಣ್ಯ ಇಲಾಖೆ ಅರಣ್ಯ ಮತ್ತು ವನ್ಯ ಜೀವಿ ಸಂರಕ್ಷಣೆ ಹೆಸರಿನಲ್ಲಿ ಮಾಡಿದ ಅನ್ಯಾಯದ ವಿರುದ್ಧ ಆದಿವಾಸಿ ಸ್ವಯಂ ಆಡಳಿತ ಕಾನೂನಿಗಾಗಿ, ಆದಿವಾಸಿ ಅರಣ್ಯ ಹಕ್ಕಿನ ಕಾನೂನಿಗಾಗಿ, ಭೂಮಿಗಾಗಿ-ಬದುಕಿಗಾಗಿ-ಉಳಿವಿಗಾಗಿ ನಡೆದ ಹೋರಾಟಗಳು, ನಾಗರಹೊಳೆ ಆದಿವಾಸಿಗಳ ಅರಣ್ಯ ನೆಲೆಯಲ್ಲಿ ತಾಜ್ ಪಂಚತಾರ ಹೊಟೇಲ್ ನಿರ್ಮಾಣ ಕುರಿತ ಕಾನೂನು ಹೋರಾಟ-ಇವುಗಳೆಲ್ಲದರಲ್ಲಿಯೂ ಆದಿವಾಸಿ ಸಂಘಟನೆಗಳಾದ ಬುಡಕಟ್ಟು ಕೃಷಿಕರ ಸಂಘ, ವನವಾಸಿ ಗಿರಿಜನ ಮಹಿಳಾ ಸಂಘ ಮತ್ತು ನಾಗರಹೊಳೆ ಬುಡಕಟ್ಟು ಹಕ್ಕು ಸ್ಥಾಪನ ಸಮಿತಿ ಇವುಗಳು ಸಕ್ರಿಯವಾಗಿ ಪ್ರಜಾಸತ್ತಾತ್ಮಕವಾಗಿ ಪಾಲ್ಗೊಳ್ಳಲು ಬೆಂಬಲ ನೀಡಿರುವೆ.

ನಾಗರಹೊಳೆ ರಾಷ್ಟೀಯ ಉದ್ಯಾನವನ ಘೋಷಣೆಯು ಆದಿವಾಸಿಗಳ ಅರಣ್ಯ ಹಕ್ಕನ್ನು ಕಸಿದುಕೊಂಡಿರುವುದರಿಂದ ಇದು ನ್ಯಾಯ ಸಮ್ಮತವಲ್ಲದ ಘೋಷಣೆಯೆಂದು ಪರಿಗಣಿಸಿ ರದ್ದುಪಡಿಸಬೇಕೆಂದು ಕರ್ನಾಟಕದ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಲಾಗಿದೆ. ಈ ಸಂಬಂಧವನ್ನು ಕೋರ್ಟ್‍ ಅರ್ಜಿಯನ್ನು ಸ್ವೀಕರಿಸಿ ಸಮಿತಿಯೊಂದನ್ನು ನೇಮಿಸಿ, ನಾಗರಹೊಳೆ ಉದ್ಯಾನವನದಲ್ಲಿ ವಾಸಿಸುವ ಹಾಗೂ ಈ ಪ್ರದೇಶದಿಂದ ಹೊರಹಾಕಿಸಿಕೊಂಡು ಕಷ್ಟದ ಬದುಕನ್ನು ಅರಣ್ಯದ ಅಂಚುಗಳಲ್ಲಿ ಬದುಕುತ್ತಿರುವ ಆದಿವಾಸಿಗಳ ಸ್ಥಿತಿಗತಿಗಳ ಅಧ್ಯಯನ ಮಾಡಿ ಕೋರ್ಟ್‍ಗೆ ವರದಿ ಸಲ್ಲಿಸಲು ಆದೇಶ ಹೊರಡಿಸಲಾಗಿದೆ. ಸಮಿತಿಯು ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿರುತ್ತದೆ.
​
ರಾಜ್ಯದಲ್ಲಿ ಆದಿವಾಸಿಗಳು ತಮ್ಮ ಹಕ್ಕೊತ್ತಾಯಗಳನ್ನು ಮಾಡಲು, ಕ್ಷೇಮಾಭಿವೃದ್ಧಿಯನ್ನು ಹೊಂದಲು, ಸ್ವಯಂ ಆಡಳಿತ ಪದ್ಧತಿಯನ್ನು ರಕ್ಷಿಸಿಕೊಂಡು ಸ್ವಯಂ ನಿರ್ವಹಣೆಯನ್ನು ಮಾಡಿಕೊಳ್ಳಲು, ಶೋಷಣೆಯಿಂದ ಮುಕ್ತವಾಗಲು, ಯೋಗ್ಯವಾದ ಶಿಕ್ಷಣ ಪಡೆಯಲು, ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು, ಪಶ್ಚಿಮ ಘಟ್ಟ ಜಿಲ್ಲೆಗಳ 26 ತಾಲ್ಲೂಕುಗಳಲ್ಲಿ ಆದಿವಾಸಿಗಳನ್ನು ಸಂಘಟಿಸಲು ಅನುವಾಗುವಂತೆ ಸುಗಮಗಾರಿಕೆಯನ್ನು ವಹಿಸಲು ಕರ್ನಾಟಕ ಗಿರಿಜನ ಕ್ರಿಯಾಕೂಟ ಮತ್ತು ರಾಜ್ಯ ಮೂಲ ನಿವಾಸಿ ವೇದಿಕೆಯನ್ನು ಸ್ಥಾಪಿಸಲು ನೆರವಾಗಿರುವೆ. ಗಿರಿಜನ ಕ್ರಿಯಾಕೂಟದ ಸಂಚಾಲಕನಾಗಿ, ಗ್ರಾಮಾಭಿವೃದ್ಧಿ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿರುವೆ. ಕರ್ನಾಟಕದಲ್ಲಿ ಅದಿವಾಸಿ ಕ್ಷೇತ್ರದಲ್ಲಿ ಹಾಗೂ ಗ್ರಾಮೀಣ ಬಡವರ ಹಳ್ಳಿಗಳಲ್ಲಿ ಸಮುದಾಯ ಸಂಘಟನಾ ಕಾರ್ಯಕ್ಕೆ ಚಾಲನೆ ನೀಡಿರುವೆ. 1996ರ ಅನುಸೂಚಿತ ಪ್ರದೇಶಗಳ ಬುಡಕಟ್ಟು ಪಂಚಾಯಿತಿ ವಿಸ್ತರಣಾ ಕಾಯಿದೆ ಜಾರಿಗೊಳ್ಳಲು (ಮಾನ್ಯ ಹೆಚ್.ಡಿ. ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದಾಗ) ಡಾ. ಬಿ.ಡಿ. ಶರ್ಮರವರ ಜೊತೆಗೂಡಿ ಪ್ರಮುಖ ಪಾತ್ರ ನಿರ್ವಹಿಸಿರುವೆ. ಅಂತೆಯೇ 2006ರ ಆದಿವಾಸಿ ಅರಣ್ಯ ಹಕ್ಕಿನ ಕಾಯಿದೆ ಜಾರಿಗೊಳಿಸಲು ಕಳೆದ 13 ವರ್ಷಗಳಿಂದ ಅರಣ್ಯ ಪ್ರವೇಶದಂತಹ ಅಹಿಂಸಾತ್ಮಕ ಕಾನೂನು ಭಂಗ ಚಳುವಳಿಯನ್ನು ರೂಪಿಸಿ ಜನರು ಸಕ್ರಿಯವಾಗಿ ಪಾಲ್ಗೊಂಡು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಯಶಸ್ವಿಯಾಗಿರುವುದು ಆದಿವಾಸಿ ಕ್ಷೇತ್ರದಲ್ಲಿ ಒಂದು ಮೈಲುಗಲ್ಲು. ಇದರ ಜೊತೆಗೆ ಈ ಕಾನೂನಿನ ಸಂಬಂಧ ನಿಯಮಗಳನ್ನು ರೂಪಿಸಲು ರಚಿಸಿರುವ ಸಮಿತಿಗೆ ಸುದೀರ್ಘ ಮನವಿ ಸಲ್ಲಿಸಿ, ಆದಿವಾಸಿ ಅರಣ್ಯ ಹಕ್ಕಿನ ಕಾಯಿದೆಯನ್ನು ಘನತೆಯಿಂದ ಜಾರಿಗೊಳಿಸಲು ಒತ್ತಾಯಿಸಲಾಗಿದೆ. ಕರ್ನಾಟಕದ 1200 ಆದಿವಾಸಿ ಹಾಡಿಗಳ ಪೈಕಿ 500 ಹಾಡಿಗಳ ಪರಿಚಯವಿದ್ದು ಜನರ ನೇರ ಸಂಪರ್ಕ ಸಾಧಿಸಿರುವೆ. 1000 ಕ್ಕಿಂತ ಹೆಚ್ಚು ಆದಿವಾಸಿ ಮುಂದಾಳುಗಳಿಗೆ ನಾಯಕತ್ವ-ಸ್ವದರ್ಶನ-ಅಸಾಧ್ಯ ಸಾಧ್ಯವೇ, ಮುಂತಾದ ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ನೀಡಿರುವೆ. ಆದಿವಾಸಿ ಶಾಲಾ ಮಕ್ಕಳಿಗೆ ಶಿಕ್ಷಣದಲ್ಲಿ ಆಸಕ್ತಿಹೊಂದಲು ಪ್ರೇರೆಪಿಸುವ ಹಾಡುಗಳನ್ನು ಹಾಡಿರುವೆ. ಆದಿವಾಸಿಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಲು ಹಲವು ಕಾರ್ಯಾಗಾರಗಳನ್ನು, ಪ್ರವಾಸಗಳನ್ನು ಏರ್ಪಡಿಸಿ, ಗ್ರಾಮಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಾಲ್ಗೊಂಡವರಿಗೆ ಬೆಂಬಲ ನೀಡಿರುವೆ. ಇದರಿಂದಾಗಿ ಹುಣಸೂರಿನ ಮೂರು ಆದಿವಾಸಿ ಯುವಕರು ಪಂಚಾಯಿತಿ ಅಧ್ಯಕ್ಷರಾಗಿ, ಆದಿವಾಸಿ ಮಹಿಳೆ ಶ್ರೀಮತಿ. ಜಾಜಿ ತಿಮ್ಮಯ್ಯ ಮೈಸೂರು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿದ್ದಾರೆ. 25ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಸದಸ್ಯರು ಆಯ್ಕೆಯಾಗಿ ಗ್ರಾಮ ಪಂಚಾಯಿತಿ ನಿರ್ವಹಣೆಯ ಅನುಭವ ಹೊಂದಿದ್ದಾರೆ. ಗಿಡಮೂಲಿಕೆ ಔಷಧಿ ತಜ್ಞೆ ಆದಿವಾಸಿ ಮಹಿಳೆ ಶ್ರೀಮತಿ ಮಾಸ್ತಮ್ಮ ಸುವರ್ಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವರು. ಇವರಿಗೆ ಇನ್ನೂ ಹಲವು ನಾಗರಿಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳು ಲಭ್ಯವಾಗಿವೆ. ಇವರ ಈ ಏಳಿಗೆಗೆ ಡೀಡ್ ಸಂಸ್ಥೆ ಬೆಂಬಲ ನೀಡಿ ನಿರಂತರವಾಗಿ ಪ್ರೋತ್ಸಾಹಿಸಿದೆ. ಆದಿವಾಸಿ ಕಲಾತಂಡಗಳನ್ನು ರೂಪಿಸಿ, ಆದಿವಾಸಿ ತನ್ನ ತನವನ್ನು ರಕ್ಷಿಸಿಕೊಳ್ಳುವ ಪ್ರೇರಣೆಗಾಗಿ ಹಾಡುಗಳನ್ನು ಹಾಡಿಸಲಾಗಿದೆ. ಹಕ್ಕೊತ್ತಾಯಗಳಿಗಾಗಿ ಹಲವು ಕಾಲ್ನಡಿಗೆ ಜಾಥಾಗಳು, ಧರಣಿಗಳು ಮತ್ತು ಸತ್ಯಾಗ್ರಹಗಳು ಜರುಗಿವೆ. ಬಲವರ್ದನೆಗಾಗಿ ಸಂಪರ್ಕಜಾಲಗಳನ್ನು ಸೃಷ್ಟಿಸಲಾಗಿದೆ.
Picture
ಪ್ರಕಟಣೆಗಳು ಮತ್ತು ಪ್ರದರ್ಶನಗಳು
ಹಲವು ದಿನಪತ್ರಿಕೆಗಳು ಮತ್ತು ವಾರ ಪತ್ರಿಕೆಗಳಲ್ಲಿ ಆದಿವಾಸಿಗಳ ಕುರಿತು ಲೇಖನಗಳನ್ನು ಬರೆದಿರುವೆ. ಹಂಬಲ ಮಾಸಪತ್ರಿಕೆಯನ್ನು ಆದಿವಾಸಿಗಳ ಮುಖವಾಣಿಯಾಗಿ 20 ವರ್ಷಗಳ ಕಾಲ ಸಂಪಾದಿಸಿ ಪ್ರಕಟಿಸಿರುವೆ. ನೊಂದವರ ಹಂಬಲದ ಹಾಡುಗಳು ಕಿರು ಹೊತ್ತಿಗೆ ಬರೆದು ಪ್ರಕಟಿಸಿರುವೆ. ಇದರಲ್ಲಿನ ಹಾಡುಗಳನ್ನು ಸಭೆ ಸಮಾರಂಭಗಳಲ್ಲಿ ಹಾಡಿ ಜನರನ್ನು ಹುರಿದುಂಬಿಸಲಾಗಿದೆ. ಸಮುದಾಯ ಸಂಘರ್ಷ, ಆದಿವಾಸಿ ಸ್ವಯಂ ಆಡಳಿತ ಪುಸ್ತಕಗಳನ್ನು ಸಂಪಾದಿಸಿ ಪ್ರಕಟಿಸಿರುವೆ. ವನತಾಯಿ ಕಂದಮಾದಯ್ಯ ತಬ್ಬಲಿಯಿಂದು ಜಾನಪದ ಶೈಲಿಯ ಆದಿವಾಸಿ ಕುರಿತು ರೂಪಕವನ್ನು ಬರೆದು 200ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುವೆ. ಆದಿವಾಸಿ ಮಹಿಳಾ ಸಶಕ್ತತೆ ಕುರಿತ ಮೌನನಾಯಕಿ ನಾಟಕವನ್ನು ಬರೆದು 100ಕ್ಕೂ ಹೆಚ್ಚು ಪ್ರದರ್ಶನಗಳನ್ನು ಆದಿವಾಸಿ ಕಲಾಕಾರರಿಂದ ಪ್ರದರ್ಶನ ನೀಡಲಾಗಿದೆ. ಆದಿವಾಸಿ ಬದುಕು ಬವಣೆ ಬೀದಿ ನಾಡಕವನ್ನು ರೂಪಿಸಿ 80 ಹಾಡಿಗಳಲ್ಲಿ ಪ್ರದರ್ಶಿಸಲಾಗಿದೆ. ಶಿಕ್ಷಣ, ಸ್ವಯಂ ಆಡಳಿತ, ವ್ಯಕ್ತಿತ್ವ ವಿಕಸನ, ನೈಸರ್ಗಿಕ ಕೃಷಿ ಕುರಿತ ಹಾಡುಗಳನ್ನು ಬರೆದು, 50 ಕ್ಕೂ ಹೆಚ್ಚು ಶಾಲೆಗಳಲ್ಲಿ, 100 ಕ್ಕೂ ಹೆಚ್ಚು ಹಾಡಿಗಳಲ್ಲಿ, 10 ಕ್ಕೂ ಹೆಚ್ಚು ಸಮ್ಮೇಳನಗಳಲ್ಲಿ ಹಾಡಿ ಪ್ರಚಾರಮಾಡಲಾಗಿದೆ. ಪ್ರೊ.ಸಿ. ಪಾರ್ವತಮ್ಮನವರ ಮೀಸಲಾತಿ: ಒಂದು ಗಗನ ಕುಸುಮ ಮತ್ತು ರಿಸರ್ವೇಶನ್: ಎ ಪೈ ಇನ್ ದಿ ಸ್ಕೈ ಕೃತಿಗಳನ್ನು ಪ್ರಕಟಿಸಿರುವೆ. ಅರಿವಿನ ಅಲೆಗಳು ಹಾಡಿನ ಪುಸ್ತಕ ಪ್ರಕಟಿಸಿರುವೆ. ಪ್ರೊ.ಸಿ. ಪಾರ್ವತಮ್ಮನವರು ಸಂಪಾದಿಸಿ ಪ್ರಕಟಿಸಿರುವ ಆದಿವಾಸಿಗಳ ಬದುಕು ಬವಣೆ ಪುಸ್ತಕಕ್ಕೆ ಜೇನುಕುರುಬ ಆದಿವಾಸಿಗಳ ಕುರಿತು ಸಮಗ್ರ ಲೇಖನ ಬರೆದಿರುವೆ. ಡಾ. ಬೈರೇಗೌಡರವರು ಸಂಪಾದಿಸಿ ಪ್ರಕಟಿಸಿರುವ ಬಾಡಲೊಲ್ಲದ ಕಾಡುಕುಡಿಗಳು ಪುಸ್ತಕಕ್ಕೆ ಆದಿವಾಸಿ ಸ್ವಯಂ ಆಡಳಿತ ಕುರಿತು ಲೇಖನ ಬರೆದಿರುವೆ. ಅಲ್ಪ ಸಮಯದವರೆಗೆ ಗಿರಿಜನ ಮಾಸಪತ್ರಿಕೆ ಮತ್ತು ಜನದನಿ ವಾರಪತ್ರಿಕೆ ಸಂಪಾದಿಸಿರುವೆ. ಸಾಕ್ಷರತ ಚಳುವಳಿಗಾಗಿ ಸಾಕ್ಷರ ಸೈನಿಕ ಪತ್ರಿಕೆ ಹೊರತರಲು ನೆರವಾಗಿರುವೆ. ಆದಿವಾಸಿ ನಾಯಕಿ ಜಾಜಿಯವರನ್ನು ಕುರಿತು ರವೀಂದ್ರಭಟ್‍ರವರು ಬರೆದಿರುವ ಹೆಜ್ಜೇನು ಪುಸ್ತಕವನ್ನು ಪ್ರಕಟಿಸಿರುವೆ. ಬಿ.ಬಿ.ಸಿ.ಯಲ್ಲಿ 1987 ಮತ್ತು 1993ರಲ್ಲಿ ಸಾಮಾಜಿಕ ಅರಣ್ಯ ಮತ್ತು ಆದಿವಾಸಿ ಮಕ್ಕಳ ಸ್ಥಿತಿಗತಿ ಕುರಿತು ಮಾತನಾಡಿರುವೆ. 1992ರಲ್ಲಿ ದೂರದರ್ಶನಕ್ಕಾಗಿ ಆದಿವಾಸಿ ಮಕ್ಕಳ ಅಕ್ಷರ ಕಾಲಿಕೆ ಕಾರ್ಯಕ್ರಮವನ್ನು ನೀಡಿರುವೆ. ಹಲವು ಬಾರಿ ಆದಿವಾಸಿಗಳ ಕುರಿತು ಪತ್ರಿಕಾ ಹೇಳಿಕೆ ನೀಡುವುದಲ್ಲದೆ, ಪತ್ರಿಕಾ ಗೋಷ್ಠಿಗಳನ್ನು ಮಾಡಿರುವೆ. 2004 ಫೆಬ್ರವರಿಯಲ್ಲಿ ಸರ್ವರಿಗೂ ಶಿಕ್ಷಣ ಕುರಿತು ಪ್ಯಾರಿಸ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿರುವೆ. ಗುಣಾತ್ಮಕ ಶಿಕ್ಷಣ ಕುರಿತು ಹಾಗೂ ಆದಿವಾಸಿ ಪರ್ಯಾಯ ಶಿಕ್ಷಣ ಕುರಿತು ನಡೆದ ಅಂತಾರಾಷ್ಟೀಯ ಕಾರ್ಯಾಗಾರದಲ್ಲಿ ಪಾಲ್ಗೊಂಡು ನಮ್ಮ ಕ್ಷೇತ್ರ ಪ್ರಯೋಗಗಳ ಕಲಿಕೆಯನ್ನು ಹಂಚಿಕೊಂಡಿರುವೆ. ಅಜ್ಜಯ್ಯನ ಕಾಡಿನ ಹೊಸ ಹೆಜ್ಜೆ ಇತ್ತೀಚಿಗೆ (2010) ಡೀಡ್ ಪ್ರಕಟಿಸಿದೆ. ಪೂರಿಗಾಲಿ ಮರಡೇಶ ಮೂರ್ತಿಯವರ ಡೀಡ್ ಬೆಂಬಲಿತ ಆದಿವಾಸಿ ಹೋರಾಟದ ಅನುಭವಕಥನ ಇದಾಗಿದೆ.
 
ಲಭಿಸಿರುವ ಪ್ರಶಸ್ತಿಗಳು:-
  • ಪ್ರಜಾಮತ ಬಳಗದಿಂದ ಪ್ರಜಾರತ್ನ ಪ್ರಶಸ್ತಿ
  • ಮಂಡ್ಯದ ಎಸ್.ಡಿ. ಜಯರಾಂ ಪ್ರತಿಷ್ಠಾನದಿಂದ ಸಮಾಜ ಸೇವೆ ಮತ್ತು ಸಾಹಿತಿ ಪ್ರಶಸ್ತಿ
  • ಬೆಂಗಳೂರಿನ ಜಯಪ್ರಕಾಶ್ ನಾರಾಯಣ್ರವರ ಪ್ರತಿಷ್ಠಾನದಿಂದ ಜೆ.ಪಿ. ಸಮಾಜ ರತ್ನ ಪ್ರಶಸ್ತಿ
  • ಹುಣಸೂರಿನ ಸ್ಪಂದನ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಸೇವಾ ಪ್ರಶಸ್ತಿ
 
ಸಂದ ಅಭಿನಂದನೆಗಳು:-
  • ಆದಿವಾಸಿಗಳೊಡನೆ 25 ವರ್ಷ ಸೇವಾ ಕಾರ್ಯ ಮುಗಿದ ಸಂದರ್ಭದಲ್ಲಿ ಆದಿವಾಸಿಗಳಿಂದ ಅಭಿನಂದನೆ
  • ಹುಣಸೂರಿನ ರೋಟರಿ ಸಂಸ್ಥೆಯಿಂದ, ಡೀಡ್ ಸಂಸ್ಥೆಯಿಂದ ಹಾಗೂ ಗಿರಿಜನರ ಕ್ರಿಯಾಕೂಟದಿಂದ ಅಭಿನಂದನೆ
 
ವಿವಿಧ ಹಂತದಲ್ಲಿ ನಿರ್ವಹಸಿದ ಜವಾಬ್ದಾರಿಗಳು:-
  • ಫೆವರ್ಡ-ಕೆ- ಅಧ್ಯಕ್ಷ
  • ಗಿರಿಜನ ಕ್ರಿಯಾಕೂಟದ ಸಂಚಾಲಕ
  • ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ
  • ಆದಿವಾಸಿ ಸ್ವಾಯತ್ತತೆಗಾಗಿ ರಾಷ್ಟೀಯ ರಂಗ ರಾಜ್ಯ ಘಟಕದ ಸಂಚಾಲಕ
  • ಹುಣಸೂರಿನ ಬಳಕೆದಾರರ ಸಂಘದ ಕಾರ್ಯದರ್ಶಿ
  • ಹುಣಸೂರಿನ ಪೃಥ್ವಿ ಫೌಂಡೇಶನ್ ಕಾರ್ಯದರ್ಶಿ
  • ಕರ್ನಾಟಕ ವಿಕಾಸ ವಾಹಿನಿಯ ಸಂಚಾಲಕ
  • ಹುಣಸೂರು ಅಹಿಂದ ಮಹಾಪ್ರಧಾನ ಕಾರ್ಯದರ್ಶಿ
  • ರಾಷ್ಟೀಯ ಸಾಮಾಜಿಕ ಕ್ರಿಯಾ ವೇದಿಕೆ, ಕರ್ನಾಟಕ ರಾಜ್ಯ ಘಟಕ ಸಂಚಾಲಕ
  • ಎಸ್.ಸಿ. ಎಸ್.ಟಿ. ಹಿತರಕ್ಷಣಾ ಸಮಿತಿ, ಮೈಸೂರು, ಮೈತ್ರಿ ಮೈಸೂರು ಇವುಗಳ ಸಕ್ರಿಯ ಸದಸ್ಯ
  • ಕಪಾರ್ಟ್‍ ಸಂಸ್ಥೆ (ಕೇಂದ್ರ ಸರ್ಕಾರ) ಮೌಲ್ಯ ಮಾಪನ ಸಮಿತಿಯಲ್ಲಿ 3 ವರ್ಷದ ಸದಸ್ಯತ್ವ
  • ಬಾಮ್ ಇಂಡಿಯಾ ಸಂಸ್ಥೆಯಲ್ಲಿ ಸಮುದಾಯ ಸಂಘಟಕ
  • ಹುಣಸೂರಿನ ಡೀಡ್ ಸಂಸ್ಥೆಯಲ್ಲಿ ಸಮುದಾಯ ಸಂಘಟಕನಾಗಿ, ಸಂಯೋಜಕನಾಗಿ, ಉಪನಿರ್ದೇಶಕನಾಗಿ ಹಾಗೂ ಯೋಜನಾ ನಿರ್ದೇಶಕನಾಗಿ 1980 ಸೆಪ್ಟಂಬರ್ 1 ರಿಂದ ಈವರೆಗೂ ಅದಿವಾಸಿಗಳ ಕ್ಷೇಮಾಭಿವೃದ್ಧಿ ಮತ್ತು ಹಕ್ಕೊತ್ತಾಯಕ್ಕೆ ಸಂಬಂಧಿಸಿದಂತೆ ವಿವಿಧ ಜವಾಬ್ದಾರಿಗಳಲ್ಲಿ ಕಾರ್ಯನಿರ್ವಹಣೆ.
 
ಪಾಲ್ಗೊಂಡಿರುವ ಚಳುವಳಿಗಳು:-
  • ಪಶ್ಚಿಮ ಘಟ್ಟ ಉಳಿಸಿ ಆಂದೋಲನ
  • ಜೀವ ಉಳಿಸಿ, ನೀರು ಉಳಿಸಿ ಆಂದೋಲನ
  • ಸಾಲು ಮರ ಉಳಿಸಿ ಆಂದೋಲನ
  • ನೆಡದಿರಿ ನೀಲಗಿರಿ ಆಂದೋಲನ
  • ಕಿತ್ತಿಕೊ, ಹಚ್ಚಿಕೊ ಆಂದೋಲನ
  • ಆದಿವಾಸಿ ಅಂತಾರಾಷ್ಟ್ರಿಯ ಆಂದೋಲನ
  • ನಾಗರಹೊಳೆಯಿಂದ ತಾಜ್ ಹೋಟೆಲ್ ತೊಲಗಿಸಿ ಆಂದೋಲನ
  • ನಾಗರಹೊಳೆ ಆದಿವಾಸಿ ಅರಣ್ಯ ಹಕ್ಕಿನ ಆಂದೋಲನ
  • ಆದಿವಾಸಿ ಸ್ವಯಂ ಅಡಳಿತ ಆಂದೋಲನ
  • ವಿಶ್ವಬ್ಯಾಂಕ್ನ ಭಾರತ ಪರಿಸರ ಅಭಿವೃದ್ಧಿ ವಿರೋಧಿ ಆಂದೋಲನ
  • ಬಾಲಕಾರ್ಮಿಕ ಮತ್ತು ಜೀತ ಪದ್ದತಿ ವಿರೋಧಿ ಆಂದೋಲನ
 
ಹೊಸ ಪ್ರಯೋಗ:
'ಶಾಲೆಗಳಲ್ಲಿ ಪ್ರಜಾಪ್ರಭುತ್ವ' ಯೋಜನೆಯಡಿ ತರಗತಿ ಸಭೆಗಳು ಮತ್ತು ಸರ್ಕಾರಿ ಶಾಲೆಗಳಲ್ಲಿ, ನೆರೆಹೊರೆಯ ಮಕ್ಕಳ ಸಂಸತ್, ಪಂಚಾಯತ್ ಮಟ್ಟದ ಮಕ್ಕಳ ಸಂಸತ್ ಏರ್ಪಡಿಸಿ ಮಕ್ಕಳಲ್ಲಿ ಪ್ರಜಾತಂತ್ರ ನಡವಳಿಕೆ, ಅಹಿಂಸಾತ್ಮಕ ನೆರ ಕ್ರಿಯೆಗಳ ಪರಿಚಯ. ಸೃಜನಶೀಲತೆಗೆ ಒತ್ತುಕೊಡಲಾಗಿದೆ. ಸಂವಿಧಾನದ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಇವುಗಳನ್ನು ಎಥಾವತ್ತಾಗಿ ಜಾರಿಗೊಳಿಸಿ ಸ್ವಾಭಿಮಾನ ಸ್ವಾವಲಂಬನೆ ಹಾಗೂ ಸೌಹಾರ್ದತೆಯನ್ನು ಹೊಂದುವ ಪ್ರಯೋಗ ಇದಾಗಿದೆ.
 
ಎಸ್. ಶ್ರೀಕಾಂತ್
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture

    Social Work Learning Academy

    Join WhatsApp Channel

    Niruta Publications

    Social Work Foot Prints

    Leaders Talk

    Ramesha Niratanka

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com