Niruta Publications
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
Niruta Publications

ಲಂಬಾಣಿ ಸಮುದಾಯದಲ್ಲಿ ಬದಲಾವಣೆ ಮತ್ತು ಅಭಿವೃದ್ಧಿ

6/21/2017

0 Comments

 
Picture
ತಮ್ಮದೇ ಆದ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ಸ್ಥಳೀಯ ಸಮುದಾಯಗಳ ಸಮೂಹವನ್ನು ಬುಡಕಟ್ಟು ಜನಾಂಗ, ಆದಿವಾಸಿ ಸಮಾಜ ಎಂದು ಕರೆಯುತ್ತಾರೆ. ಈ ಸಮುದಾಯಗಳ ಜನರು ತಮ್ಮದೇ ಆದ ಆಚಾರ, ವಿಚಾರ, ಪರಂಪರೆ, ನಂಬಿಕೆಗಳು, ಪದ್ಧತಿಗಳು, ಸಂಪ್ರದಾಯಗಳು, ಸಾಹಿತ್ಯ, ಸಂಗೀತ, ನೃತ್ಯಕಲೆ, ಕುಶಲಕಲೆ ಮುಂತಾದ ಹಲವಾರು ಅಂಶಗಳಿಂದ ಮುಖ್ಯ ಸಾಂಸ್ಕೃತಿಕ ವಾಹಿನಿಯಿಂದ ಭಿನ್ನವಾಗಿರುತ್ತಾರೆ. ಅವರು ಈ ಬುಡಕಟ್ಟು ಜನಾಂಗಗಳಿಗೆ ಅಳವಡಿಸಿಕೊಳ್ಳುವಂತಹ ಅಂತರ ಸಮುದಾಯ ರಚನೆ, ಸಂಸ್ಕಾರಗಳು, ರೀತಿ-ರಿವಾಜು, ವೇಷ-ಭೂಷಣ, ಆಹಾರ-ಪಾನೀಯ ಪದ್ಧತಿಗಳು, ಹವ್ಯಾಸಗಳು, ಅಭ್ಯಾಸಗಳನ್ನು ಹೊಂದಿರುತ್ತಾರೆ. ಈ ಕಾರಣಗಳಿಗಾಗಿ ಅವರು ಇತರೆ ಸಾಂಸ್ಕೃತಿಕ ಸಮುದಾಯಗಳಿಂದ, ಸಮಾಜಗಳಿಂದ ಬೇರೆಯದೇ ಆದ ಜೀವನ ಪದ್ಧತಿಯನ್ನು ಅನುಸರಿಸುತ್ತಾರೆ. ಕರ್ನಾಟಕದಲ್ಲಿ ಇಂತಹ ಅನೇಕ ಸಮುದಾಯಗಳು, ಸಮಾಜಗಳು ಅಲ್ಲಲ್ಲಿ ಕಾಣಸಿಗುತ್ತವೆ. ಅವುಗಳಲ್ಲಿ ಕಾಡುಗೊಲ್ಲರು, ಕೊರಗರು, ಕುರುಬರು, ಜೇನುಕುರುಬರು, ವಡ್ಡರು, ಮ್ಯಾಸನಾಯಕರು ಹೀಗೆ ಅನೇಕ ಬುಡಕಟ್ಟು ಜನಾಂಗಗಳನ್ನು ಗುರುತಿಸಬಹುದಾಗಿದೆ. ಇಂತಹ ಬುಡಕಟ್ಟು ಜನಾಂಗಗಳಲ್ಲಿ ಲಂಬಾಣಿ ಬುಡಕಟ್ಟು ಜನಾಂಗವೂ ಒಂದು.
ಲಂಬಾಣಿಗಳು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಕಂಡುಬರುತ್ತಾರಾದರೂ, ಅವರು ಹೆಚ್ಚಾಗಿ ವಿಜಾಪುರ, ಕಲಬುರ್ಗಿ, ರಾಯಚೂರು, ಬಳ್ಳಾರಿ, ಧಾರವಾಡ, ಬೆಳಗಾವಿ, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿದ್ದಾರೆ. ಅವರು ತಮ್ಮನ್ನು ತಾವು ಗೋರಮಾಟಿ ಅಥವಾ ಗೋರ ಬಂಜಾರಾ ಎಂದು ಕರೆದುಕೊಳ್ಳುತ್ತಾರೆ. ಇವರ ಮೂಲದ ಬಗ್ಗೆ ಸಮಾಜ ವಿಜ್ಞಾನಿಗಳಲ್ಲಿ ಭಿನ್ನಾಭಿಪ್ರಾಯವಿದ್ದು, ಹೆಚ್ಚಿನವರು ಇವರು ಪಶ್ಚಿಮೋತ್ತರ ರಾಜ್ಯಗಳಾದ ರಾಜಸ್ಥಾನ ಮತ್ತು ಗುಜರಾತ್ ಮೂಲದವರು ಎಂದು ನಂಬುತ್ತಾರೆ. ಇವರು ಮೂಲತಃ ರಜಪೂತ ಮತ್ತು ಬ್ರಾಹ್ಮಣ ಸಮುದಾಯಗಳ ಮೂಲದವರಾಗಿದ್ದು, ಉತ್ತರ ಭಾರತದಲ್ಲಿ ಲವಣ ಮತ್ತು ಇತರೆ ಖಾದ್ಯ ಪದಾರ್ಥಗಳ ವ್ಯಾಪಾರವನ್ನು ಕೈಕೊಂಡು, ಉತ್ತರದಿಂದ ದಕ್ಷಿಣಕ್ಕೆ ಬಂದರೆಂದು ತಿಳಿಯಲಾಗಿದೆ. ಇವರು ತಾವು ಸಾಕಿದ ನೂರಾರು ಜಾನುವಾರುಗಳ ಮೇಲೆ ಸಂಬಾರು ಪದಾರ್ಥಗಳನ್ನು ಹಾಗೂ ಮುಸ್ಲಿಂ ಆಡಳಿತಗಾರರಿಗೆ ಬೇಕಾದ ಯುದ್ಧ ಸಾಮಗ್ರಿಗಳನ್ನು ಸಾಗಿಸುತ್ತಿದ್ದರೆಂದು ತಿಳಿದುಬರುತ್ತದೆ. ಇವರು ಸಾರಿಗೆ ಸಂಪರ್ಕಕ್ಕಾಗಿ ಉಪಯೋಗಿಸುತ್ತಿದ್ದ ದನಗಳಿಗೆ ಅನುಕೂಲವಾಗಲು ಪ್ರಮುಖ ನದಿಗಳ ಇಕ್ಕೆಡೆಗಳಲ್ಲಿ ತಮ್ಮ ಬೀಡುಗಳನ್ನು ಬಿಡುತ್ತಿದ್ದರೆಂದು ತಿಳಿದುಬರುತ್ತದೆ. ಹಾಗಾಗಿ ಇವರು ಮಹಾರಾಷ್ಟ್ರ, ಉತ್ತರ ಕರ್ನಾಟಕ, ಆಂಧ್ರಪ್ರದೇಶ ಮತ್ತು ಉತ್ತರ ತಮಿಳುನಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಾರೆ. ಈ ದೇಶದಲ್ಲಿ ರೈಲುಗಾಡಿ ಮತ್ತು ಮೋಟಾರು ಗಾಡಿಗಳು ಪ್ರಾರಂಭಗೊಂಡಂದಿನಿಂದ ಇವರ ವೃತ್ತಿಗೆ ಸಂಚಕಾರ ಬಂತು. ಆ ನಂತರದ ದಿನಗಳಲ್ಲಿ ಲಂಬಾಣಿಗಳು ಅಲ್ಲಲ್ಲೆ ನಿಂತು ಕೃಷಿ, ಕೋಳಿ ಸಾಕಾಣಿಕೆ, ಅರಣ್ಯ ಉತ್ಪನ್ನಗಳ ಮಾರಾಟ, ಮಾದಕ ದ್ರವ್ಯಗಳ ತಯಾರಿಕೆ, ಮುಂತಾದ ಕಸಬುಗಳಲ್ಲಿ ತೊಡಗಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಮಾದಕದ್ರವ್ಯಗಳ ತಯಾರಿಕೆ ಕಾನೂನು ಬಾಹಿರವಾದ್ದರಿಂದ ಅವುಗಳ ತಯಾರಿಯನ್ನು ಅವರಿಂದ ಬಿಡಿಸಲಾಗಿದೆ.

ಲಂಬಾಣಿಗಳು ಒಂದು ಬುಡಕಟ್ಟು ಜನಾಂಗದವರು. ರಾಷ್ಟ್ರಮಟ್ಟದಲ್ಲಿ ಅವರನ್ನು ಬಂಜಾರಿಗಳೆಂದು ಕರೆಯುತ್ತಾರೆ. ಇವರನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆಯಾಗಿಯೇ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು ಜನಾಂಗ, ಇತ್ಯಾದಿ) ಗುರುತಿಸುತ್ತಾರೆ. ಕರ್ನಾಟಕದಲ್ಲಿ ಇವರನ್ನು ಪರಿಶಿಷ್ಟ ಜಾತಿ ಗುಂಪಿಗೆ ಸೇರಿಸಲಾಗಿದೆ.

ಹದಿನೇಳು-ಹದಿನೆಂಟನೇ ಶತಮಾನಗಳಲ್ಲಿ ಇವರ ನದಿ, ಕೆರೆ, ಕಟ್ಟೆ ಮುಂತಾದ ನೀರಿನ ಮೂಲದ ಹತ್ತಿರ ತಮ್ಮದೇ ಆದ ಹಟ್ಟಿಗಳನ್ನು (ತಾಂಡಗಳನ್ನು) ಕಟ್ಟಿಕೊಂಡು ಬದುಕಿದ್ದಾರೆ. ಅರಣ್ಯ ಉತ್ಪಾದನೆಗಳನ್ನು (ಕಟ್ಟಿಗೆ, ಬೀಜ, ಎಲೆ ಇತ್ಯಾದಿ) ಮಾರಾಟ ಮಾಡಿ ಜೀವನ ಸಾಗಿಸಿದ್ದಾರೆ. ಆನಂತರದ ದಿನಗಳಲ್ಲಿ ಕೃಷಿ ಕಲಿತಿದ್ದಾರೆ. ಹೀಗಾಗಿ ಇವರು ಅಭಿವೃದ್ಧಿಯ ಮುಖ್ಯವಾಹಿನಿಯಿಂದ ದೂರ ಉಳಿದಿದ್ದಾರೆ. ಬಡತನ, ಅನಕ್ಷರತೆ, ತಿಳುವಳಿಕೆಯ ಕೊರತೆ, ಸೂಕ್ತ ಮಾರ್ಗದರ್ಶನದ ಕೊರತೆ ಮುಂತಾದ ಕಾರಣಗಳಿಂದ ಇವರು ತುಂಬಾ ಹಿಂದುಳಿದಿದ್ದಾರೆ. ಆರ್ಥಿಕ, ಸಾಮಾಜಿಕ, ಆಡಳಿತ ಮುಂತಾದ ಕ್ಷೇತ್ರಗಳ ನಾಯಕರ ಗಮನದ ಕೊರತೆಯಿಂದ ಅವರಿಗೆ ಪ್ರಗತಿಯು ಒಂದು ಬಿಸಿಲುಗುದುರೆಯಾಗಿದೆ.

ಸ್ವಾತಂತ್ರ್ಯಾನಂತರ, ಸಂವಿಧಾನ ಅಸ್ತಿತ್ವಕ್ಕೆ ಬಂದ ನಂತರ, ಸಮಾನತೆ ಇಂದಿನ ಸಮಾಜದ ಮಂತ್ರವಾದ ನಂತರ ಇವರ ಕಡೆಗೂ ಗಮನ ಹರಿಸಲಾಗಿದೆ. ನಾಗರೀಕ ಹಕ್ಕುಗಳನ್ನು ಇವರಿಗೂ ಅನ್ವಯಿಸಲಾಗಿದೆ. ನಿರ್ದೇಶಕ ತತ್ವಗಳ ಅಡಿಯಲ್ಲಿ ಇವರಿಗೆ ಆದ್ಯತೆಯನ್ನು ಕೊಡಲಾಗಿದೆ. ಇತರೆ ಪರಿಶಿಷ್ಟ ಜಾತಿ (ಪ.ಜಾ.), ಪರಿಶಿಷ್ಟ ಪಂಗಡ (ಪ.ಪಂ.) ಅಭಿವೃದ್ಧಿಗೆ ಅನ್ವಯವಾಗುವಂತೆ ಒಂದು ವಿಶೇಷ ಯೋಜನೆಯನ್ನೇ ರೂಪಿಸಲಾಗಿದೆ. ಇದೇ ವಿಶೇಷ ಘಟಕ ಯೋಜನೆ. ಸರಕಾರಗಳ ವಿವಿಧ ಇಲಾಖೆಗಳು ತಮ್ಮ ಕಾರ್ಯಕ್ಷೇತ್ರಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುತ್ತವೆ. ಆ ಪ್ರಕ್ರಿಯೆಯಲ್ಲಿ ಈ ಹಿಂದುಳಿದ ಜನಾಂಗಗಳಿಗೆ ಆದ್ಯತೆ ಸಿಗಲಿಲ್ಲ. ಹಾಗಾಗಿ ಈ ಜನಾಂಗಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ವಿಶೇಷ ಘಟಕ ಯೋಜನೆಯನ್ನು 1980-81ನೇ ಆರ್ಥಿಕ ವರ್ಷದಿಂದ ಯೋಜಿಸಿ, ಕಾರ್ಯರೂಪಕ್ಕೆ ತರಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಳ್ಳಲಾಗಿದೆ. ಅವರ ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಪರೋಕ್ಷವಾಗಿ ರಾಜಕೀಯ ಪ್ರಗತಿಯನ್ನು ಗಮನದಲ್ಲಿರಿಸಿಕೊಂಡು ಯೋಜನೆಯನ್ನು ಅಳವಡಿಸಿಕೊಳ್ಳಲಾಗಿದೆ. ಈ ಯೋಜನೆಯ ಅನೇಕ ಕಾರ್ಯಕ್ರಮಗಳು ಪ.ಜಾ., ಪ.ಪಂ.ಗಳ ಜನರ ಮೇಲೆ ಪರಿಣಾಮ ಬೀರಿವೆಯೆಂದು ನಂಬಲಾಗಿದೆ. ಇತರ ಪ.ಜಾ. ಜನರ ಮೇಲೆ ಪ್ರಭಾವ/ಪರಿಣಾಮ ಬೀರಿದಂತೆ ಲಂಬಾಣಿಗಳ ಮೇಲೆಯೂ ಈ ಯೋಜನೆ ಪ್ರಭಾವ/ಪರಿಣಾಮ ಬೀರಿರಬಹುದಾಗಿದೆ.
 
ಸಂಶೋಧನೆಯ ಉದ್ದೇಶಗಳು :-
ಇಲ್ಲಿಯವರೆಗೆ ನಡೆಸಿದ ಚರ್ಚೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಸಂಶೋಧನೆಯ ಉದ್ದೇಶಗಳನ್ನು ಈ ಕೆಳಕಂಡಂತೆ ರೂಪಿಸಲಾಗಿದೆ.
  1. ಲಂಬಾಣಿ ಜನಾಂಗದ ಸಮುದಾಯದ ರಚನೆ, ಸ್ವಭಾವ, ಸಂಬಂಧಗಳು, ಕಾರ್ಯತಂತ್ರ ಮತ್ತು ಅವರ ಸಮಸ್ಯೆಗಳನ್ನು ಕಂಡು ಹಿಡಿಯುವುದು.
  2. ವಿಶೇಷ ಘಟಕ ಯೋಜನೆ (ವಿ.ಫ.ಯೋ)ಯನ್ನು ಪ್ರಾರಂಭಿಸಿದ ಹಿನ್ನೆಲೆ, ಪರಿಕಲ್ಪನೆ, ಕಾರ್ಯಕ್ರಮಗಳು, ಕಾರ್ಯತಂತ್ರ ಮುಂತಾದವುಗಳ ಬಗ್ಗೆ ತಿಳಿಯುವುದು.
  3. ವಿ.ಘ. ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳ, ಲಂಬಾಣಿ ನಾಯಕರ, ಫಲಾನುಭವಿಗಳ ಪಾತ್ರವನ್ನು ತಿಳಿಯುವುದು.
  4. ವಿ.ಘ. ಯೋಜನೆಯು ಲಂಬಾಣಿ ಜನಾಂಗದ ರಚನೆ, ಸಂಬಂಧಗಳು, ಅಭಿಪ್ರಾಯಗಳ ಮೇಲೆ ಬೀರಿದ ಪ್ರಭಾವವನ್ನು ಕಂಡು ಹಿಡಿಯುವುದು ಮತ್ತು ಯೋಜನೆ ಲಂಬಾಣಿಗಳ ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಜೀವನದಲ್ಲಿ ತಂದ ಬದಲಾವಣೆ ಮತ್ತು ಅಭಿವೃದ್ಧಿಯನ್ನು ಗುರುತಿಸುವುದು.
  5. ಲಂಬಾಣಿಗಳನ್ನು ಮತ್ತು ವಿ.ಘ. ಯೋಜನೆಯ ಧ್ಯೇಯೋದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು, ಯೋಜನೆಯನ್ನು ಇನ್ನೂ ಹೆಚ್ಚು ಪ್ರಭಾವಯುತವಾಗಿ ಕಾರ್ಯರೂಪಕ್ಕೆ ತರಲು ಸಲಹೆ/ಸೂಚನೆಗಳನ್ನು ಕೊಡುವುದು.
 
ಸಂಶೋಧನೆಯ ಜಗತ್ತು ಮತ್ತು ಸಂಶೋಧನಾ ವಿಧಾನ:-
ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ 104 ತಾಂಡಗಳನ್ನು ಈ ಸಂಶೋಧನಾ ವ್ಯಾಪ್ತಿಗೆ ತರಲಾಗಿದೆ. ಮೊದಲನೇ ಹಂತದಲ್ಲಿ ಈ ತಾಂಡಗಳನ್ನು ತಾಲೂಕುವಾರು ವಿಂಗಡಿಸಲಾಗಿದೆ. ಆ ನಂತರ ಗ್ರಾಮೀಣ ತಾಂಡಗಳು (68), ಒಳನಾಡು ತಾಂಡಗಳು (14) ಮತ್ತು ನಾಗರೀಕ ತಾಂಡಗಳೆಂದು (22) ಬೇರ್ಪಡಿಸಲಾಗಿದೆ. ಆಯಾ ವಿಭಾಗದಲ್ಲಿರುವ ತಾಂಡಗಳ ಸಂಖ್ಯೆಗಳ ಆಧಾರದ ಮೇಲೆ, 10 ಗ್ರಾಮೀಣ, 6 ಒಳನಾಡು ತಾಂಡಗಳು ಮತ್ತು 4 ನಾಗರೀಕ ತಾಂಡಗಳು, ಒಟ್ಟು 16 ತಾಂಡಗಳನ್ನು ಅಭ್ಯಾಸಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಸಂಶೋಧನೆಗೆ ವಿವರಣಾತ್ಮಕ ಹಾಗೂ ವಿಶ್ಲೇಷಣಾತ್ಮಕ ವಿಧಾನವನ್ನು ಬಳಸಲಾಗಿದೆ.

ನಮೂನೆಯನ್ನು ಆರಿಸುವ ಹಂತದಲ್ಲಿ ವಿಭಾಗಿತ ಯದೃಚ್ಛಿಕ ನಮೂನೆ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಒಟ್ಟು 100 ಜನ ಫಲಾನುಭವಿಗಳನ್ನು, 40 ಜನ ಲಂಬಾಣಿ ನಾಯಕರುಗಳನ್ನು, 40 ಜನ ವಿ.ಘ.ಯೋ. ಅಧಿಕಾರಿಗಳನ್ನು, 10 ಜನ ಸಾಮಾನ್ಯ ಯೋಜನೆಗಳ ಅಧಿಕಾರಿಗಳನ್ನು ಮತ್ತು 10 ಜನ ಬ್ಯಾಂಕ್ ಅಧಿಕಾರಿಗಳನ್ನು ಸಂದರ್ಶಿಸಿ, ಅವಶ್ಯಕ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಫಲಾನುಭವಿಗಳನ್ನು ಆರಿಸುವಾಗ ಎಲ್ಲಾ ವಯೋಮಾನದವರು ಪ್ರತಿನಿಧಿಸುವಂತೆ ಗಮನಹರಿಸಲಾಗಿದೆ. ಅತಿ ಸಣ್ಣ, ಸಣ್ಣ ಮತ್ತು ದೊಡ್ಡ ರೈತರನ್ನು ಸಂದರ್ಶಿಸಲಾಗಿದೆ. ಮಹಿಳೆಯರಿಗೆ ಆದ್ಯತೆ ಕೊಡಲಾಗಿದೆ. ಅದರಂತೆಯೇ ಲಂಬಾಣಿ ನಾಯಕರನ್ನು ಸಂದರ್ಶನಕ್ಕಾಗಿ ಆರಿಸುವಾಗ ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಮುಂತಾದ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಗಮನದಲ್ಲಿರಿಸಿ ಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನ ಸಭೆ ಹಾಗೂ ವಿಧಾನ ಪರಿಷತ್ತು ಸದಸ್ಯರನ್ನು, ಅದರಂತೆಯೇ ತಾಂಡದ ಜನಾಂಗೀಯ ನಾಯಕ, ಯುವಕ ಸಂಘದ ಮುಂದಾಳು, ಸಹಕಾರಿ ಸಂಘದ ನಿರ್ದೇಶಕ ಮುಂತಾದವರನ್ನು ಕಂಡು ಚರ್ಚಿಸಲಾಗಿದೆ.

ಹಾಗೆಯೇ ಸರಕಾರಿ ಅಧಿಕಾರಿಗಳನ್ನು ಸಂದರ್ಶಿಸುವಾಗ ಯೋಜಕರನ್ನು, ಆಡಳಿತಗಾರರನ್ನು, ಕ್ಷೇತ್ರಾಧಿಕಾರಿಗಳನ್ನು ಮತ್ತು ಮೇಲ್ವಿಚಾರಕರನ್ನು ಸಂದರ್ಶನ ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯೋಜನೆ ರೂಪಿಸುವಾಗ ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವಾಗ ತಮ್ಮನ್ನು ತೊಡಗಿಸಿಕೊಂಡ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಭೇಟಿ ಮಾಡಲಾಗಿದೆ. ಸಾಮಾನ್ಯ ಯೋಜನೆಗಳ ಅಧಿಕಾರಿಗಳನ್ನು ಸಂದರ್ಶಿಸುವಾಗ ಎಲ್ಲಾ ಹಂತದ, ವಿವಿಧ ಜವಾಬ್ದಾರಿಯುಳ್ಳವರನ್ನು ಕಾಣಲಾಗಿದೆ. ಒಟ್ಟಾರೆ ಪ.ಜಾ., ಪ.ಪಂ. ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎಲ್ಲಾ ಸಂಬಂಧಪಟ್ಟವರನ್ನು ಸಂದರ್ಶಿಸಲಾಗಿದೆ.

ಫಲಾನುಭವಿಗಳನ್ನು, ಲಂಬಾಣಿ ನಾಯಕರನ್ನು, ವಿ.ಘ. ಯೋಜನೆಯ ಅಧಿಕಾರಗಳನ್ನು, ಸಾಮಾನ್ಯ ಕಾರ್ಯಕ್ರಮಗಳ ಅಧಿಕಾರಿಗಳನ್ನು ಮತ್ತು ಬ್ಯಾಂಕ್ ಅಧಿಕಾರಿಗಳನ್ನು ಸಂದರ್ಶಿಸಲು ಪ್ರತ್ಯೇಕವಾದ ಸಂದರ್ಶನ ನಮೂನೆಗಳನ್ನು ಬಳಸಲಾಗಿದೆ. ಅವಶ್ಯಕತೆಗಳಿಗೆ ತಕ್ಕಂತೆ ಪ್ರಶ್ನೆಗಳನ್ನು ಹಾಕಲಾಗಿದೆ. ವಿ.ಘ. ಯೋಜನೆಯ ಬಗ್ಗೆ ಅವರ ತಿಳುವಳಿಕೆ, ಆ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಅವರವರ ಪಾತ್ರ, ಎದುರಿಸಿದ ಸಮಸ್ಯೆಗಳು, ಅವುಗಳನ್ನು ಬಗೆಹರಿಸಲು ಕಂಡುಕೊಂಡ ಮಾರ್ಗ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ವಿ.ಘ. ಯೋಜನೆಯಿಂದ ಆದ ಪ್ರಭಾವ, ಬದಲಾವಣೆ ಮತ್ತು ಅಭಿವೃದ್ಧಿ ಮುಂತಾದ ವಿಷಯಗಳ ಮೇಲೆ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಇವರ ಜೊತೆಗೆ ಈ ಯೋಜನಾ ಕಾರ್ಯಕ್ರಮಗಳಿಂದ ಅವರಿಗೆ ಸಮಾಧಾನ ಆಗಿದೆಯೇ, ಈ ಯೋಜನೆಯನ್ನು ಇನ್ನೂ ಚೆನ್ನಾಗಿ ಕಾರ್ಯರೂಪಕ್ಕೆ ತರಲು ಅವರು ಕೊಡುವ ಸಲಹೆಗಳೇನು, ಹೀಗೆ ಅನೇಕ ವಿಷಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಇದರ ಜೊತೆಗೆ ಅವಲೋಕನಾ ನಮೂನೆಯನ್ನೂ ಬಳಸಲಾಗಿದೆ. ಸಂಗ್ರಹಿಸಿದ ಎಲ್ಲಾ ಮಾಹಿತಿಯನ್ನು ಕೋಷ್ಟಕಗಳಲ್ಲಿ ಅಳವಡಿಸಲಾಗಿದೆ. ಮಾಹಿತಿಯನ್ನು ಗುಂಪುಗಳಲ್ಲಿ ವಿಂಗಡಿಸಿ, ಪ್ರತಿಶತಕ್ಕೆ ಅಳವಡಿಸಿ ಚರ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಂಡುಕೊಂಡ ಮಾಹಿತಿಯ ಆಧಾರದ ಮೇಲೆ ನಿರ್ಣಯಕ್ಕೆ ಬರಲಾಗಿದೆ. ಈ ನಿರ್ಣಯಗಳನ್ನು ಮುಂದಿಟ್ಟುಕೊಂಡು ವಿ.ಘ. ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಎಲ್ಲಾ ಸಂಬಂಧಪಟ್ಟವರಿಗೆ ಸಲಹೆ ಸೂಚನೆಯನ್ನು ನೀಡಲಾಗಿದೆ.
 
ಸಂಶೋಧನಾ ಫಲಗಳು/ಸಾರಾಂಶ :-
ಸಂಶೋಧನಾ ಫಲಿತಾಂಶವನ್ನು ಸಂಕ್ಷಿಪ್ತವಾಗಿ ಈ ಕೆಳಕಂಡಂತೆ ಚರ್ಚಿಸಲಾಗಿದೆ.

ಫಲಾನುಭವಿಗಳು ಮತ್ತು ವಿ.ಘ. ಯೋಜನೆ :-
  1. ಸಂದರ್ಶನ ಮಾಡಿದ ಫಲಾನುಭವಿಗಳಲ್ಲಿ ಹೆಚ್ಚಿನವರು ಮಧ್ಯ ವಯಸ್ಕರು, ಪುರುಷರು, ಅನಕ್ಷರಸ್ಥರು, ರೈತರು, ಪ್ರತಿ ಕುಟುಂಬದಲ್ಲಿ ಒಬ್ಬ ಇಲ್ಲವೆ ಇಬ್ಬರು ದುಡಿಯುವ ವ್ಯಕ್ತಿಗಳನ್ನು ಹೊಂದಿರುವವರು, ರೂ. 5000-ರೂ. 10000/- ಮತ್ತು ರೂ. 10001/- ರೂ. 15000/- ವರಮಾನದ ಗುಂಪಿನಲ್ಲಿರುವವರು. ತಮ್ಮ ಮಾತೃ ಭಾಷೆಯಾದ ಗೋರ್ಬೋಲಿ (ಲಂಬಾಣೀ ಭಾಷೆ)ಯ ಜೊತೆಗೆ ಹೆಚ್ಚಿನವರಿಗೆ ಕನ್ನಡ ಭಾಷೆಯ ಪರಿಚಯವಿದೆ. ಬಹುಮತದ ಕುಟುಂಬಗಳು 6-8 ಜನರಿಂದ ಕೂಡಿವೆ.
  2. ಹೆಚ್ಚಿನ ಫಲಾನುಭವಿಗಳಿಗೆ ವಿ.ಘ.ಯೋ. ಧ್ಯೇಯೋದ್ದೇಶಗಳು, ಸೇವೆಗಳು, ಯೋಜನೆಯ ಅಧಿಕಾರಿಗಳ ಬಗ್ಗೆ ತಿಳುವಳಿಕೆ ಇಲ್ಲ. ಆರ್ಥಿಕ ಮತ್ತು ಸಾಮಾಜಿಕ ಕಾರ್ಯಕ್ರಮಕ್ಕಿಂತ ಶೈಕ್ಷಣಿಕ ಕಾರ್ಯಕ್ರಮಗಳು ಅವರಿಗೆ ಹೆಚ್ಚು ಪರಿಚಿತ. ಮೂರನೇ ಒಂದು ಭಾಗದಷ್ಟು ಫಲಾನುಭವಿಗಳಿಗೆ ಕೃಷಿ ಮತ್ತು ಕೃಷಿಗೆ ಸಂಬಂಧಪಟ್ಟ ಸೇವೆಗಳ ಬಗ್ಗೆ ಗೊತ್ತಿದೆ. ಅರ್ಧಕ್ಕಿಂತ ಹೆಚ್ಚಿನ ಫಲಾನುಭವಿಗಳು ಯೋಜನೆಗಳ ಪೂರ್ವ ಮಾಹಿತಿ ಪಡೆಯದೇ ಯೋಜನೆಯ ಫಲವನ್ನಷ್ಟೇ ಪಡೆದಿದ್ದಾರೆ.
  3. ಸ್ವಲ್ಪ ಹೆಚ್ಚು ಕಡಿಮೆ ಎಲ್ಲಾ ಫಲಾನುಭವಿಗಳಿಗೂ ವಿ.ಘ.ಯೋ. ಪ.ಜಾತಿಯ ಅಭಿವೃದ್ಧಿಗೆ ರೂಪಿಸಿದ್ದಾರೆಂದು ತಿಳಿದಿದೆ. ಆದರೆ ಯೋಜನೆ ವಿವರಗಳು ಗೊತ್ತಿಲ್ಲ. ಫಲಾನುಭವಿಗಳನ್ನು ಆರಿಸಲು ಬ್ಯಾಂಕ್ ಅಧಿಕಾರಿಗಳನ್ನೊಳಗೊಂಡಂತೆ ಒಂದು ಸಮಿತಿ ಇದೆಯೆಂದು ಗೊತ್ತಿಲ್ಲ. ಹೆಚ್ಚಿನ ಫಲಾನುಭವಗಳು ರೂ. 10000/- ಕ್ಕಿಂತ ಕಡಿಮೆ ಹಣವನ್ನು ಯೋಜನೆಯಡಿ ಸಾಲವಾಗಿ ಪಡೆದಿದ್ದಾರೆ.
 
ಬದಲಾವಣೆ ಕಂಡ ಕ್ಷೇತ್ರಗಳು :-
1. ಆರ್ಥಿಕ ಬದಲಾವಣೆ
  1. ವಿ.ಘ. ಯೋಜನೆಯ ಪ್ರಾರಂಭದ ದಿನಗಳಲ್ಲಿ ಸಂದರ್ಶನ ಮಾಡಿದ 100 ಜನ ಫಲಾನುಭವಿಗಳಲ್ಲಿ 74 ಜನ ಸ್ವಂತಭೂಮಿಯನ್ನು ಹೊಂದಿದ್ದವರು. 1994-95 ಹೊತ್ತಿಗೆ ಈ ಸಂಖ್ಯೆ 84ಕ್ಕೆ ಏರಿದೆ. ಈ ಅವಧಿಯಲ್ಲಿ ನೀರಾವರಿ ಭೂಮಿ ಮತ್ತು ಖುಷ್ಕಿ ಭೂಮಿ ಎರಡೂ ಪ್ರಕಾರದಲ್ಲಿ ಏರಿಕೆ ಕಂಡಿದೆ. ಈ ಸಮಯದಲ್ಲಿ ಸುಮಾರು 1/6 ರಷ್ಟು ಜನ ಹೊಸದಾಗಿ ಭೂಮಿಯನ್ನು ಕೊಂಡಿದ್ದಾರೆ. ಯೋಜನೆಯ ಮೊದಲಿನ ದಿನಗಳಲ್ಲಿ 3 ಜನ ಮಾತ್ರ ಗುತ್ತಿದೆ ಆಧಾರದ ಮೇಲೆ ಸಾಗುವಳಿ ಮಾಡುತ್ತಿದ್ದರು. 1994-95ರ ಹೊತ್ತಿಗೆ ಈ ಸಂಖ್ಯೆ 10ಕ್ಕೆ ಹೆಚ್ಚಿದೆ. ಬಹುಮತದ ಫಲಾನುಭವಿಗಳ ಭೂಮಿ ಅವರ ಮನೆಗಳಿಂದ 2 ಕಿಲೋಮೀಟರ್ ವಲಯದಲ್ಲೇ ಇವೆ.
  2. ಈ ಅವಧಿಯಲ್ಲಿ ಜಾನುವಾರುಗಳ ಸಾಕುವಿಕೆಯಲ್ಲಿ ಹೆಚ್ಚಿದ ಪ್ರಗತಿಯನ್ನು ನೋಡಬಹುದಾಗಿದೆ. ಇದರಲ್ಲಿ ಸರಕಾರದಿಂದ ಕೊಟ್ಟ ಜಾನುವಾರುಗಳು ಸೇರಿದೆ. ಫಲಾನುಭವಿಗಳು ತಮ್ಮ ಉಳುಮೆಗೆ, ಗೊಬ್ಬರಕ್ಕೆ, ವ್ಯಾಪಾರಕ್ಕೆ ಉಪಯೋಗವಾಗುವ ಜಾನುವಾರುಗಳನ್ನೇ ಸಾಕಿದ್ದಾರೆ.
  3. ಫಲಾನುಭವಿಗಳು ಜೋಳ, ರಾಗಿ, ನವಣೆ, ಮೆಕ್ಕೆಜೋಳ ಮತ್ತು ಭತ್ತವನ್ನು ಅನುಕ್ರಮವಾಗಿ ಮುಖ್ಯ ಬೆಳೆಯಾಗಿ ಬೆಳೆಯುತ್ತಾರೆ. ಸದ್ರಿ ಅವಧಿಯಲ್ಲಿ ಇವುಗಳ ಉತ್ಪಾದನೆಯ ಹೆಚ್ಚಳವನ್ನು ಸ್ವಲ್ಪ ಪ್ರಮಾಣದಲ್ಲಿ ಕಾಣಬಹುದಾಗಿದೆ. ತೊಗರಿ, ಹುರುಳಿ ಮತ್ತು ಹೆಸರು ಬೇಳೆ ಕಾಳುಗಳನ್ನು ಅವರು ಬೆಳೆಯುತ್ತಿದ್ದು ಉತ್ಪಾದನಾ ಹೆಚ್ಚಳ ಸ್ವಲ್ಪಮಟ್ಟಿಗಿದೆ. ಹೆಚ್ಚಿನ ಫಲಾನುಭವಿಗಳು ಶೇಂಗಾ ಬೆಳೆಯುತ್ತಿದ್ದು ಉತ್ಪಾದನಾ ಹೆಚ್ಚಳವೂ ಆಶಾದಾಯಕವಾಗಿದೆ. ಸೂರ್ಯಕಾಂತಿ ಬೆಳೆಯುವ ರೈತರಲ್ಲಿ ಹೆಚ್ಚಳವಾಗಿದೆ. ಕಬ್ಬು ಬೆಳೆಯುವವರಲ್ಲಿಯೂ ರೈತರು ಈ ಅವಧಿಯಲ್ಲಿ ಆಸಕ್ತಿ ತೋರಿದ್ದಾರೆ. ಉತ್ಪಾದನಾ ಹೆಚ್ಚಳವೂ ತೃಪ್ತಿಕರವಾಗಿದೆ.
  4. ಫಲಾನುಭವಿಗಳು ಈ ಪರಿಶೀಲನಾ ಅವಧಿಯಲ್ಲಿ ಹೆಚ್ಚಿಗೆ ಕೃಷಿಯೋಪಕರಣಗಳನ್ನು ಉಪಯೋಗಿಸಿದ್ದಾರೆ. ಈ ಅವಧಿಯಲ್ಲಿ ಹೆಚ್ಚಿನ ರೈತರು ಎತ್ತು-ಗಾಡಿಗಳನ್ನು ಮಾಡಿಕೊಂಡಿದ್ದಾರೆ.
  5. ವಿ.ಘ. ಯೋಜನೆಯ ಪೂರ್ವದ ದಿನಗಳಿಗಿಂತ ಈ ಅವಧಿಯಲ್ಲಿ ಫಲಾನುಭವಿಗಳಿಗೆ ಬ್ಯಾಂಕುಗಳಿಂದ ಮತ್ತು ಸಹಕಾರಿ ಸಂಘಗಳಿಂದ ಸಾಲ ಸೌಲಭ್ಯ ಹೆಚ್ಚಾಗಿದೆ. ಆಶ್ಚರ್ಯಕರವಾಗಿ ಖಾಸಗಿಯಾಗಿ ಸಾಲ ಕೊಡುವವರೂ ಈ ಅವಧಿಯಲ್ಲಿ ಹೆಚ್ಚಾಗಿರುವುದು ಕಂಡುಬರುತ್ತದೆ.
  6. ಫಲಾನುಭವಿಗಳಲ್ಲಿ ರಾಸಾಯನಿಕ ಗೊಬ್ಬರ ಉಪಯೋಗಿಸುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಜೊತೆಗೆ ರೈತರು ಉಪಯೋಗಿಸುವ ರಾಸಾಯನಿಕ ಗೊಬ್ಬರದ ಪ್ರಮಾಣವೂ ಹೆಚ್ಚಾಗಿದೆ.
  7. ಅರ್ಧದಷ್ಟು ಫಲಾನುಭವಿಗಳು ತಮ್ಮ ಉತ್ಪಾದನೆಯನ್ನು ಮಧ್ಯಂತರ ವ್ಯಾಪಾರಿಗಳ ದ್ವಾರ ಮಾರಾಟ ಮಾಡುತ್ತಾರೆ. ಆದರೆ 1/6 ರಷ್ಟು ಫಲಾನುಭವಿಗಳು ತಮ್ಮ ಉತ್ಪಾದನೆಯನ್ನು ಮಾರಾಟ ಮಾಡಲು ಗ್ರಾಮೀಣ ಮಾರುಕಟ್ಟೆ, ಉಪ-ಮಾರುಕಟ್ಟೆ ಮತ್ತು ಮಾರುಕಟ್ಟೆಗಳನ್ನು ಉಪಯೋಗಿಸುತ್ತಾರೆ. ಈ ವಿಷಯದಲ್ಲಿ ಬದಲಾವಣೆ ಅಲ್ಪ ಪ್ರಮಾಣದ್ದಾಗಿದೆ.
  8. ಫಲಾನುಭವಿಗಳು ಕೃಷಿ ಮತ್ತು ಕೂಲಿಯಿಂದ ತಮ್ಮ ಹೆಚ್ಚಿನ ಆದಾಯವನ್ನು ಪಡೆಯುತ್ತಾರೆ ಮತ್ತು ಇದೇ ಹೆಚ್ಚಿಗೆ ಪ್ರಸಿದ್ದಿಗೆ ಬಂದ ಅವರ ಆದಾಯ ಮೂಲಗಳಾಗಿವೆ. ಆನಂತರ ಅರಣ್ಯ ಉತ್ಪಾದನೆಗಳ ಮಾರಾಟ, ವ್ಯಾಪಾರ ಮತ್ತು ಉದ್ಯೋಗ ಮುಂತಾದವು ಅವರ ಇತರೆ ಆದಾಯಮೂಲಗಳಾಗಿವೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ.
  9. ಫಲಾನುಭವಿಗಳು ತಮ್ಮ ಆದಾಯವನ್ನು ಆಹಾರ, ಬಟ್ಟೆ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ಔಷಧಿ, ಮನೆ, ಮದ್ಯಪಾನ, ತಂಬಾಕು ಸೇವನೆಗಳಲ್ಲಿ ಖರ್ಚು ಮಾಡುತ್ತಾರೆ. ಶಿಕ್ಷಣ, ಮನೋರಂಜನೆ, ಚಪ್ಪಲಿಗಳ ಖರೀದಿ ಮುಂತಾದವುಗಳು ಅವರ ಇತರ ಖರ್ಚಿನ ಬಾಬತ್ತುಗಳಾಗಿವೆ. ಪರಿಶೀಲನಾ ಅವಧಿಯಲ್ಲಿ ಖರ್ಚಿನ ವೈಖರಿ, ಆಹಾರ ಮತ್ತು ಬಟ್ಟೆ ವಿಚಾರದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಇತರೆ ವಿಷಯಗಳಲ್ಲಿ ಆದ್ಯತೆಗಳು ಬದಲಾಗಿವೆ.
  10. ಫಲಾನುಭವಿಗಳಲ್ಲಿ ಉಳಿತಾಯ ಮಾಡುವ ಹವ್ಯಾಸವಿಲ್ಲ. ಬೆರಳೆಣಿಕೆಯಷ್ಟು ಜನ ಬ್ಯಾಂಕ್ಗಳಲ್ಲಿ ಹಾಗೂ ಜೀವವಿಮೆಯಲ್ಲಿ ಹಣ ಹಾಕಿದ್ದಾರೆ. ಉಳಿದಂತೆ ಯಾರೂ ಉಳಿತಾಯ ಮಾಡಿಲ್ಲ. ಉಳಿತಾಯ ಮಾಡುವದರಲ್ಲಿ ಬಹಳ ಸ್ವಲ್ಪ ಬದಲಾವಣೆ ಕಂಡಿದೆ.

2. ಸಾಮಾಜಿಕ ಬದಲಾವಣೆ :
  1. ಬಹುಮತದ ಫಲಾನುಭವಿಗಳು ತಾಂಡಾ ರಚನೆಯಲ್ಲಿ ಏನೂ ಬದಲಾವಣೆ ಆಗಿಲ್ಲವೆಂದು ಅಭಿಪ್ರಾಯ ಪಡುತ್ತಾರೆ. ಪ್ರತಿಶತ 25ರಷ್ಟು ಫಲಾನುಭವಿಗಳು ಬದಲಾವಣೆ ಆಗಿದೆಯೆಂದು ಹೇಳುತ್ತಾರೆ. ಇದರಲ್ಲಿ ಹೆಚ್ಚಿನವರು ಬದಲಾವಣೆ ಯೋಜನಾಬದ್ಧವೆಂದು ತಿಳಿಸುತ್ತಾರೆ.
  2. ತಾಂಡಾಗಳನ್ನು ಅಡಿವಿಯಲ್ಲಿ ಇಲ್ಲವೆ ಅಡವಿ ಹತ್ತಿರ ಅಥವಾ ನೀರಿನ ಮೂಲಗಳ ಹತ್ತಿರ ಕಟ್ಟಿಕೊಳ್ಳುತ್ತಿದ್ದರೆಂದು ಅಭಿಪ್ರಾಯ ಪಡುತ್ತಾರೆ. ಅರಣ್ಯ ಉತ್ಪಾದನೆಗಳಿಂದ ಉರುವಲು ಕಟ್ಟಿಗೆ, ದನದ ಮೇವು ಮತ್ತು ಕೃಷಿಭೂಮಿ ಇವುಗಳ ಸಲುವಾಗಿ ತಾಂಡಾಗಳನ್ನು ಈ ಸಂಪನ್ಮೂಲಗಳ ಹತ್ತಿರ ಕಟ್ಟಿಕೊಂಡಿದ್ದಾರೆಂದು ಒಪ್ಪಿಕೊಳ್ಳುತ್ತಾರೆ.
  3. ಪರಿವೀಕ್ಷಣಾ ಅವಧಿಯಲ್ಲಿ ನಿವೇಶನ ಮತ್ತು ಮನೆಗಳ ಒಡೆತನದಲ್ಲಿ ಹೆಚ್ಚಿನ ಬದಲಾವಣೆಯನ್ನು ಕಂಡಿಲ್ಲ. 1980-81ರಲ್ಲಿ ಪ್ರತಿಶತ 4 ಜನ ಸರಕಾರಿ ಮನೆಗಳನ್ನು ಪಡೆದಿದ್ದರೆ 1994-95 ರಲ್ಲಿ ಪ್ರತಿಶತ 11 ಜನಕ್ಕೆ ಸರಕಾರಿ ಮನೆಗಳು ಮಂಜೂರಾಗಿವೆ.
  4. ವಿ.ಘ. ಯೋಜನೆಯ ಅವಧಿಯಲ್ಲಿ ಹೆಚ್ಚು ಫಲಾನುಭವಿಗಳು ಒಳ್ಳೆ ಗುಣಮಟ್ಟದ ಸಾಮಾನುಗಳಿಂದ ತಮ್ಮ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಗುಡಿಸಲುಗಳು ಕಡಿಮೆಯಾಗಿವೆ. ಮಣ್ಣಿನ ಮನೆಗಳು, ಷೀಟ್ ಮನೆಗಳು, ಹಂಚಿನ ಮನೆಗಳು ಜಾಸ್ತಿಯಾಗಿವೆ. ಒಂದೇ ಕೋಣೆಯ ಮನೆಗಳು ಪ್ರಾರಂಭದ ದಿನಗಳಲ್ಲಿದ್ದು ಯೋಜನಾವಧಿಯಲ್ಲಿ ಎರಡು, ಮೂರು ಕೋಣೆಗಳುಳ್ಳ ಮನೆಗಳಾಗಿ ಪರಿವರ್ತಿಸಲ್ಪಟ್ಟಿವೆ.
  5. ಯೋಜನೆಯ ಪ್ರಾರಂಭದ ದಿನಗಳಲ್ಲಿ 8 ಜನ ಫಲಾನುಭವಿಗಳು ಪ್ರತ್ಯೇಕ ಸ್ನಾನದ ಕೋಣೆಗಳನ್ನು ಕಟ್ಟಿಕೊಂಡಿದ್ದು ಆ ಸಂಖ್ಯೆ ಪರಿವೀಕ್ಷಣಾ ಅವಧಿಯ ಕೊನೆಯ ಹೊತ್ತಿಗೆ 28 ಆಗಿರುತ್ತದೆ. ಆದರೆ ಲಂಬಾಣಿ ಫಲಾನುಭವಿಗಳು ಪಾಯಿಖಾನೆ ಉಪಯೋಗಿಸುವಲ್ಲಿ ತುಂಬಾ ಹಿಂದುಳಿದಿದ್ದಾರೆ. ಯೋಜನೆಯ ಪ್ರಾರಂಭದ ದಿನಗಳಲ್ಲಿ ಒಬ್ಬ ಫಲಾನುಭವಿ ಈ ಅನುಕೂಲ ಹೊಂದಿದ್ದರೆ ಪರಿವೀಕ್ಷಣಾ ಅವಧಿಯ ಕೊನೆ ಹೊತ್ತಿಗೆ ಇನ್ನೊಬ್ಬ ಫಲಾನುಭವಿ ಪಾಯಿಖಾನೆ ಉಪಯೋಗಿಸುವುದನ್ನು ಕಲಿತಿದ್ದಾರೆ. ಉಳಿದವರು ತಮ್ಮ ನೈಸರ್ಗಿಕ ಅವಶ್ಯಕತೆಗಳಿಗೆ ತಾಂಡಾಗಳ ಸುತ್ತಮುತ್ತಲಿರುವ ಬಯಲನ್ನೇ ಉಪಯೋಗಿಸುತ್ತಾರೆ.
  6. 1980-81 ರಲ್ಲಿ 10 ಜನ ಫಲಾನುಭವಿಗಳು ತಮ್ಮ ಮನೆಗಳಲ್ಲಿ ವಿದ್ಯುಚ್ಛಕ್ತಿಯನ್ನು ಹೊಂದಿದ್ದರು. ಈ ಸಂಖ್ಯೆ 1994-95 ರಲ್ಲಿ 72 ಕ್ಕೆ ಏರಿದೆ. ಇದರಲ್ಲಿ ಭಾಗ್ಯಜ್ಯೋತಿ ಫಲಾನುಭವಿಗಳೂ ಸೇರಿದ್ದಾರೆ. ಮನೆಗಳಲ್ಲಿ ಗಾಳಿ ಬೆಳಕು ಸರಿಯಾಗಿಲ್ಲ. ಮನರಂಜನಾ ಪರಿಕರಗಳಲ್ಲಿ (ರೇಡಿಯೋ ಇತ್ಯಾದಿ, ಟಿ.ವಿ. ಅಲ್ಲ) ಸ್ವಲ್ಪ ಹೆಚ್ಚಳ ಕಾಣಸಿಗುತ್ತದೆ. ಪೀಠೋಪಕರಣಗಳಲ್ಲಿ ಹೆಚ್ಚಿನ ಪ್ರಗತಿ ಇಲ್ಲ.
  7. ಕುಡಿಯುವ ನೀರಿನ ಸಂಪನ್ಮೂಲಗಳಲ್ಲಿ (ಕೊಳವೆ ಭಾವಿ, ಕುಡಿಯುವ ನೀರಿನ ಯೋಜನೆ, ಚಿಕ್ಕ ನೀರಿನ ಯೋಜನೆ) ಅದ್ಭುತವಾದ ಬದಲಾವಣೆಯನ್ನು ನೋಡಲಾಗಿದೆ. ಎಲ್ಲಾ ತಾಂಡಗಳಲ್ಲಿಯೂ ಒಂದಲ್ಲಾ ಒಂದು ನೀರಿನ ಮೂಲ ಇದೆ. ಆದರೆ ಸ್ವಚ್ಛವಾದ ನೀರು ಎಲ್ಲಾ ಕಡೆ ಸಿಗುತ್ತಿಲ್ಲ.
  8. ಪರಿವೀಕ್ಷಣಾ ಅವಧಿಯಲ್ಲಿ ಹೆಚ್ಚೆಚ್ಚು ದೊಡ್ಡ ಮತ್ತು ಮುಂದುವರಿದ ಕುಟುಂಬಗಳು ಚಿಕ್ಕ ಕುಟುಂಬಗಳಾಗಿ ಮಾರ್ಪಾಟಾಗುತ್ತಿವೆ. ಮನೆ ಮಗ ಮದುವೆಯಾದ ತಕ್ಷಣ ಬೇರೆಯಾಗುತ್ತಾನೆ.
  9. 1980-81 ರಲ್ಲಿ ಪ್ರತಿಶತ 95 ಜನ ಫಲಾನುಭವಿಗಳು ಏಕ ಪತ್ನಿತ್ವ / ಏಕ ಪತಿತ್ವ ವಿವಾಹ ಪದ್ಧತಿಯನ್ನು ಮತ್ತು 5 ಜನ ಫಲಾನುಭವಿಗಳು ಬಹುಪತ್ನಿತ್ವ ವಿವಾಹ ಪದ್ಧತಿಯನ್ನು ಅನುಸರಿಸುತ್ತಿದ್ದರು. ಹೆಚ್ಚಿದ ಬದಲಾವಣೆ ಸದ್ರಿ ಪರಿವೀಕ್ಷಣಾ ಅವಧಿಯಲ್ಲಿ ಕಂಡುಬಂದಿಲ್ಲ.
  10. ಪರಿವೀಕ್ಷಣಾ ಅವಧಿಯ ಪ್ರಾರಂಭದಲ್ಲಿ ಹೆಚ್ಚು ಮಕ್ಕಳನ್ನು ಅಪೇಕ್ಷೆ ಪಡುತ್ತಿದ್ದ ಫಲಾನುಭವಿಗಳು 1994-95 ರ ಹೊತ್ತಿಗೆ ಇಬ್ಬರು ಮಕ್ಕಳನ್ನು ಪಡೆಯಲು ಇಚ್ಛಿಸುತ್ತಾರೆ.
  11. ಲಂಬಾಣಿ ಪುರುಷರಲ್ಲಿ ವೇಷಭೂಷಣದಲ್ಲಿ ಹೆಚ್ಚಿನ ಬದಲಾವಣೆಯನ್ನು ಕಂಡಿಲ್ಲ. ಆದರೆ ಲಂಬಾಣಿ ಮಹಿಳೆಯರು, ಹುಡುಗಿಯರು ಮತ್ತು ಹುಡುಗರು ಬದಲಾವಣೆಯನ್ನು ಅಪೇಕ್ಷಿಸುತ್ತಾರೆ. ಮೂರನೇ ಒಂದು ಭಾಗದ ಮಹಿಳೆಯರು ತಮ್ಮ ಸಾಂಸ್ಕೃತಿಕ ಪೋಷಾಕನ್ನು (ಲಹಂಗ, ಪೇಂಟಿಯಾ, ಕಾಂಚಳಿ) ಬಿಟ್ಟು ಸೀರೆ-ಕುಪ್ಪಸ ತೊಡಲು ಪ್ರಾರಂಭಿಸಿದ್ದಾರೆ. ಹುಡುಗಿಯರು ಹಿಂದಿನ ದಿನಕ್ಕಿಂತ ಹೆಚ್ಚಾಗಿ ಲಂಗ ಕುಪ್ಪಸ-ಪೈಟಾ ಹಾಕಲು ಇಷ್ಟಪಡುತ್ತಾರೆ. ಅದರಂತೆಯೇ ಹುಡುಗರು ಹೆಚ್ಚಾಗಿ ಪ್ಯಾಂಟನ್ನು ಧರಿಸಲು ಇಷ್ಟಪಡುತ್ತಾರೆ.
  12. ಲಂಬಾಣಿ ಮಹಿಳೆಯರು ಕಸೂತಿ ಹಾಕಿದ ಬಟ್ಟೆಗಳನ್ನು ತೊಡುವುದನ್ನು ಕಡಿಮೆ ಮಾಡಿದ್ದಾರೆ. ಸೀರೆ-ಕುಪ್ಪಸ ತೊಡುವವರು ಕಸೂತಿಯನ್ನು ಉಪಯೋಗಿಸುತ್ತಲೇ ಇಲ್ಲ.
  13. ಹೆಚ್ಚಿನ ಲಂಬಾಣಿ ಮಹಿಳೆಯರು ತಮ್ಮ ದೇಹದ ಮೇಲೆ (ತೋಳು, ಮುಂಗೈ, ಮುಖ, ಕಾಲು ಇ) ಹಚ್ಚೆ ಹಾಕಿಸುತ್ತಿದ್ದು, 1994-95ರ ಹೊತ್ತಿಗೆ ಕೇವಲ 45 ಜನ ಮಾತ್ರ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ.
  14. ಲಂಬಾಣಿಗಳು ಮಾಂಸಾಹಾರವನ್ನು ಇಷ್ಟಪಡುತ್ತಾರೆ. ಆದರೆ ದೈನಂದಿನವಾಗಿ ಅವರು ಹೆಚ್ಚಾಗಿ ಶಾಕಾಹಾರಿಗಳಾಗಿದ್ದಾರೆ. ಪರಿಶೀಲನಾ ಅವಧಿಯಲ್ಲಿ ಹೆಚ್ಚಿನ ಬದಲಾವಣೆಯನ್ನು ಕಂಡಿಲ್ಲ. ಮೊದಲು ದಿನಕ್ಕೆ 2 ಬಾರಿ ಊಟ ಮಾಡುತ್ತಿದ್ದು, ಅವಧಿಯ ಕೊನೆಗೆ ಮೂರುಬಾರಿ ಊಟ ಮಾಡುತ್ತಿದ್ದಾರೆ. ಫಲಾನುಭವಿಗಳು ಉಪಹಾರ, ಟೀ ಕಾಫಿ ಸೇವಿಸುವುದನ್ನು ಸದ್ರಿ ಅವಧಿಯಲ್ಲಿ ಹೆಚ್ಚು ಮಾಡಿದ್ದಾರೆ.
  15. ಲಂಬಾಣಿಗಳಲ್ಲಿ ಹೆಚ್ಚು ಮದ್ಯ ಸೇವಿಸುವವರು ಕಾಣಸಿಗುತ್ತಾರೆ. ತಂಬಾಕು, (ಬೀಡಿ, ಸಿಗರೇಟು) ಸೇವಿಸುವವರೂ ಇದ್ದಾರೆ. ಈ ವಿಷಯದಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ.
  16. ಲಂಬಾಣಿಗಳಲ್ಲಿ ಗಂಡುಮಕ್ಕಳಿಗೆ ಹೆಚ್ಚಿನ ಪ್ರಾಶಸ್ತ್ಯ. ಈ ಅಭಿಪ್ರಾಯದಲ್ಲಿ ಬದಲಾವಣೆಯಾಗಿಲ್ಲ. ಹಾಗಾಗಿ ಕೆಲವರನ್ನು ಹೊರತುಪಡಿಸಿ ಆಸ್ತಿ ಗಂಡು ಮಕ್ಕಳಲ್ಲೇ ಹಂಚಿಕೆಯಾಗುತ್ತಿದೆ.
 
3. ಜಾತಿ ಪಂಚಾಯಿತಿಯ ಕಾರ್ಯವೈಖರಿಯಲ್ಲಿ ಬದಲಾವಣೆ
ಲಂಬಾಣಿಗಳು ತಮ್ಮದೇ ಆದ ಜಾತಿ (ಗೋರ್) ಪಂಚಾಯಿತಿಯನ್ನು ಹೊಂದಿರುತ್ತಾರೆ. ಕೌಟುಂಬಿಕ ಜಗಳಗಳು, ತಾಂಡದಲ್ಲಿ ಕಿತ್ತಾಟ, ಕಳವು ಮುಂತಾದ ಸಮಸ್ಯೆಗಳಿಗೆ ಈ ಗೋರ್ ಪಂಚಾಯಿತಿಯಲ್ಲಿ ಪರಿಹಾರ ಕಂಡುಕೊಳ್ಳುತ್ತಾರೆ. ಗೋರ್ ಪಂಚಾಯಿತಿಯಲ್ಲಿ ನಾಯಕ ಕಾರಭಾರಿ (ಕಾರ್ಯದರ್ಶಿ), ದಾಸ ಉಪನಾಯಕ, ದಾಲಿಯ-ಸುದ್ದಿಪ್ರಚಾರಕ, ದಾಡಿ-ವೃತ್ತಿಗಾಯಕ ಮತ್ತು ನಾವಿ-ಸಹಾಯಕ ತಮ್ಮ ತಮ್ಮ ಕಾರ್ಯನಿರ್ವಹಿಸುತ್ತಾರೆ. ಪರಿಶೀಲನಾ ಅವಧಿಯಲ್ಲಿ ಈ ವಿಷಯಗಳಿಗೆ ಸಂಬಂಧಪಟ್ಟಂತೆ ಕಂಡುಕೊಂಡ ಅಂಶಗಳನ್ನು ಇಲ್ಲಿ ಕೊಡಲಾಗಿದೆ.
  1. ಒಂದು ಎರಡು ತಾಂಡಗಳನ್ನು ಹೊರತುಪಡಿಸಿ ಎಲ್ಲಾ ತಾಂಡಾಗಳಲ್ಲಿ ನಾಯಕ, ಕಾರಭಾರಿ, ದಾವೊ, ದಾವಸಾನಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವೇ ತಾಂಡಗಳಲ್ಲಿ ಧಾಡಿ ಮತ್ತು ನಾವಿಗಳಿದ್ದಾರೆ. ಉಳಿದ ತಾಂಡಗಳು ಅವರಿಲ್ಲದೆ ಕೆಲಸ ಮಾಡುತ್ತವೆ. ಇನ್ನು ಕೆಲವು ತಾಂಡಗಳಲ್ಲಿ ಹತ್ತಿರದ ತಾಂಡಗಳ ಧಾಡಿ ಮತ್ತು ನಾವಿಗಳನ್ನು ಬಳಸುತ್ತಾರೆ. ಕೆಲವು ತಾಂಡಗಳಲ್ಲಿ ಒಂದಕ್ಕಿಂತ ಹೆಚ್ಚು ಗೋರ್ ಪಂಚಾಯಿತಿಗಳು ಅಸ್ತಿತ್ವದಲ್ಲಿವೆ.
  2. ಕೆಲವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಈ ಮದಾಳುಗಳನ್ನು ವಂಶಪಾರಂಪರ್ಯವಾಗಿ ನಿಶ್ಚಯಿಸುತ್ತಾರೆ. ತೀರಾ ಅನಿವಾರ್ಯವಾದರೆ ಮಾತ್ರ ಆರಿಸುತ್ತಾರೆ. ಇದೊಂದು ಹೆಚ್ಚಿಗೆ ಬದಲಾಗದ ವಿಷಯ.
  3. ಗೋರ್ ಪಂಚಾಯಿತಿಯ ಕಾರ್ಯವೈಖರಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹೆಚ್ಚೆಚ್ಚು ಕೌಟುಂಬಿಕ ಸಮಸ್ಯೆಗಳು, ಗುಂಪುಗಳಲ್ಲಿ ಮತ್ತು ತಾಂಡಗಳಲ್ಲಿ ಘರ್ಷಣೆ ಮುಂತಾದವುಗಳು ಪಂಚಾಯಿತಿಗೆ ತೀರ್ಮಾನಕ್ಕಾಗಿ ಬರುತ್ತವೆ. ಶಿಕ್ಷಾಪದ್ಧತಿ, ಜುರ್ಮಾನೆಗಳಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತದೆ. ಇತ್ತೀಚಿಗೆ ಬೇರೆ ಜಾತಿ ಜನಾಂಗದೊಂದಿಗೆ ಘರ್ಷಣೆ, ಮತ ಚಲಾವಣೆಯ ಬಗ್ಗೆ ನಿರ್ಣಯ, ಚುನಾವಣೆ ಉಮೇದುವಾರರನ್ನು ಆರಿಸುವುದು, ಫಲಾನುಭವಿಗಳನ್ನು ಆರಿಸುವುದು ಮುಂತಾದ ಹೊಸ ವಿಷಯಗಳು ಗೋರ್ ಪಂಚಾಯಿತಿಯಲ್ಲು ಚರ್ಚೆಗೊಂಡು ತೀರ್ಮಾನಿಸಲ್ಪಡುತ್ತವೆ.
 
4. ಧಾರ್ಮಿಕ ಮತ್ತು ಸಾಂಪ್ರದಾಯಿಕ ವಿಷಯಗಳಲ್ಲಿ ಬದಲಾವಣೆ :-
ಲಂಬಾಣಿಗಳು ರಾಮ, ಕೃಷ್ಣ, ವೆಂಕಟೇಶ್ವರ, ಶಿವ, ಆಂಜನೇಯ, ಶಕ್ತಿ ಮುಂತಾದ ದೇವರುಗಳ ಜೊತೆಗೆ ತಮ್ಮದೇ ಆದ ಧಾರ್ಮಿಕ ನಾಯಕರನ್ನು (ಸೇವಾಲಾಲ್ ಇತ್ಯಾದಿ) ಪೂಜಿಸುತ್ತಾರೆ. ಅವರು ತಮ್ಮದೇ ಆದ ಸಂಪ್ರದಾಯ ಪದ್ಧತಿಗಳನ್ನು ಅನುಸರಿಸುತ್ತಾರೆ. ಈ ಕ್ಷೇತ್ರದಲ್ಲಿ ಸ್ವಲ್ಪ ಬದಲಾವಣೆಯನ್ನು ಗುರುತಿಸಲಾಗಿದೆ.
  1. ಹೆಚ್ಚಿನ ಫಲಾನುಭವಿಗಳು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪ್ರೀತಿಯಿಂದ ಕಂಡರೂ, ಆಸ್ತಿ ಹಂಚುವಾಗ ಗಂಡು ಮಕ್ಕಳಿಗೆ ಆದ್ಯತೆ ಕೊಡುವಲ್ಲಿ ಬದಲಾವಣೆಯಾಗಿಲ್ಲ.
  2. 1980-81 ರಿಂದ 1994-95 ಅವಧಿಯಲ್ಲಿ ಶಿಶುಗಳ ಮರಣ ಆಗಿಲ್ಲವೆಂಬುದು ಸಮಾಧಾನದ ವಿಷಯ.
  3. ಲಂಬಾಣಿಗಳು ತಮ್ಮ ಮನೆಯಲ್ಲಿ ಗಂಡು ಮಗುವಾದರೆ ತಾಂಡದಲ್ಲಿ ತಪ್ಪಡಿಯನ್ನು ಮತ್ತು ಹೆಣ್ಣು ಮಗುವಾದರೆ ತಾಂಬಾಣವನ್ನು ಬಡಿಸುತ್ತಾರೆ. ಕೆಲವರು ಮಾತ್ರ ಗಂಡು ಜನನವಾದರೂ ಕಂಚಿನ ತಾಂಬಾಣವನ್ನು ಬಾರಿಸುತ್ತಾರೆ. ಇದರಿಂದ ತಾಂಡದಲ್ಲಿ ಯಾವ ಮಗು ಹುಟ್ಟಿದೆ ಎಂದು ತಿಳಿಯಲು ಸಹಾಯವಾಗುತ್ತದೆ. ಈ ಪದ್ಧತಿಯಲ್ಲಿ ಬದಲಾವಣೆಯಾಗಿಲ್ಲ.
  4. ಬಹು ಹೆಚ್ಚಿನ ಫಲಾನುಭವಿಗಳು ತಮ್ಮ ಸಾಂಪ್ರದಾಯಿಕ ಪದ್ಧತಿಗಳಾದ ಧಲವ ಧೋಕ್ಯಾರೋ (ವರಪೂಜೆ). ವಧಾಯಿ (ಮುಂಜಿ), ವಯಾ ಬಾಂಧೇರೋ (ಮದುವೆ) ಮತ್ತು ಹವೇಲಿ (ಬೀಳ್ಕೊಡಿಗೆ) ಮುಂತಾದುವುಗಳನ್ನು ಯಾವ ಬದಲಾವಣೆ ಇಲ್ಲದೆ ಆಚರಿಸುತ್ತಾರೆ. ಇವು ಅವರ ಗಟ್ಟಿ ಸಂಪ್ರದಾಯಗಳಿದ್ದು ತಲ ತಲಾಂತರಗಳಿಂದ ಆಚರಿಸಿಕೊಂಡು ಬಂದಿದ್ದಾರೆ.
  5. ಲಂಬಾಣಿ ಜನಾಂಗದಲ್ಲಿ ಹುಡುಗಿಯರು ಋತುಮತಿಯಾದರೆ ಅವರನ್ನು ಮೂರು ದಿನ ಬೇರೆ ಮನೆಯಲ್ಲಿ (ಒಂದು ಮೂಲೆಯಲ್ಲಿ ಇಲ್ಲದೆ ಬೇರೆ ಮನೆಯಲ್ಲಿ) ಕೂಡಿಸುತ್ತಾರೆ. ಈ ಸಂಪ್ರದಾಯ ಹಾಗೆ ಮುಂದುವರೆದುಕೊಂಡು ಬಂದಿದೆ.
  6. ಲಂಬಾಣಿಗಳಲ್ಲಿ ಮೊದಲು ಮದುವೆಗಳನ್ನು ಬಹು ಸಂಭ್ರಮದಿಂದ 10 ದಿನಗಳ ತನಕ ಮಾಡುತ್ತಿದ್ದರು. 1994-95ರಲ್ಲಿ ಆರ್ಥಿಕ ಕಾರಣಗಳಿಗಾಗಿ ಎರಡು ದಿನಗಳ ಮದುವೆ ಹೆಚ್ಚಾಗಿವೆ.
  7. ಎಲ್ಲಾ ಫಲಾನುಭವಿಗಳು ತಮ್ಮ ಕುಟುಂಬಗಳಲ್ಲಿ ಹಿರಿಯರು ತೀರಿಕೊಂಡರೆ ದಹನ ಮಾಡುತ್ತಾರೆ ಮತ್ತು ಮಕ್ಕಳು ತೀರಿದರೆ ಹೂಳುತ್ತಾರೆ. ಈ ಸಂಪ್ರದಾಯದಲ್ಲಿ ಬದಲಾವಣೆ ಇಲ್ಲ.
  8. ಹೆಚ್ಚಿನ ಲಂಬಾಣಿ ಮಹಿಳೆಯರು ವಿಧವೆಯಾದಾಗ ಘುಂಗ್ರಿ, ಕಚೊಲಿ ಕಾವ್ಯಾ ಇತ್ಯಾದಿಗಳನ್ನು ತೆಗೆಯುತ್ತಾರೆ. ಬೇರೆ ಸಮುದಾಯದಲ್ಲಿರುವಂತೆ, 1/3 ರಷ್ಟು ಲಂಬಾಣಿಯ ಮಹಿಳೆಯರು ತಾಳಿ ಕಟ್ಟಿಕೊಳ್ಳುತ್ತಿದ್ದು ವಿಧವೆಯರಾದಾಗ ಅದನ್ನು ತೆಗೆಯುತ್ತಾರೆ. ಈ ಪದ್ಧತಿಯನ್ನು ಹಾಗೇ ಉಳಿಸಿಕೊಂಡಿದ್ದಾರೆ.
  9. ಮೃತರ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿ ಆಚರಿಸುವ ಮೂರನೇ ಮತ್ತು ಹನ್ನೆರಡನೇ ದಿನಗಳಲ್ಲಿ ಮಾಡುವ ಅಪರ ಕರ್ಮಗಳಲ್ಲಿ ಯಾವ ಬದಲಾವಣೆಯನ್ನೂ ಮಾಡದೆ ಆಚರಿಸುತ್ತಾರೆ.
 
5. ಧಾರ್ಮಿಕ ಉತ್ಸವಗಳಲ್ಲಿ ಬದಲಾವಣೆ
  1. ಲಂಬಾಣಿಗಳು ತಮ್ಮದೇ ದೇವರುಗಳಾದ ಸೇವಾಲಾಲ್, ಮರಿಯಮ್ಮ, ಭವಾನಿ, ಲುಕ್ಕೆಡ ಮುಂತಾದ ದೇವರುಗಳ ಪೂಜೆಯನ್ನು ಇನ್ನೂ ಮುಂದುವರೆಸಿಕೊಂಡು ಬಂದಿದ್ದಾರೆ. ಇದರ ಜೊತೆಗೆ ವೆಂಕಟೇಶ್ವರ, ರಾಮ, ಕೃಷ್ಣ, ಮಂಜುನಾಥ, ಹನುಮಾನ್, ನಂದಿ, ರಾಘವೇಂದ್ರ ಮುಂತಾದ ದೇವರು, ಗುರುಗಳನ್ನು ಪೂಜಿಸುತ್ತಾರೆ. ಇವರು ಮೊಹರಂ ಆಚರಣೆಯಲ್ಲಿ ಭಾಗವಹಿಸುತ್ತಾರೆ. ಲಂಬಾಣಿಗಳು ತಮ್ಮ ಪೂಜಾ ಸಂಪ್ರದಾಯಗಳನ್ನು ಬಿಡದೆ ಮತ್ತು ಬದಲಾಯಿಸದೆ ಆಚರಿಸುತ್ತಾರೆ.
  2. ಧಾರ್ಮಿಕ ಉತ್ಸವಗಳನ್ನು ಬಿಡದೆ ಆಚರಿಸುತ್ತಾರೆ. ಆದರೆ ಆರ್ಥಿಕ ಕಾರಣಗಳಿಗಾಗಿ ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಿಕೊಳ್ಳಲಾಗಿದೆಯೆಂಬುದನ್ನು ಬಹುಮತದ ಫಲಾನುಭವಿಗಳು ಒಪ್ಪುತ್ತಾರೆ.
 
6. ರಾಜಕೀಯ ವಿಷಯಗಳಲ್ಲಿ ಬದಲಾವಣೆ
  1. ಎಲ್ಲಾ ಫಲಾನುಭವಿಗಳು ಪ್ರತಿಬಾರಿ ತಪ್ಪದೇ ಮತ ಚಲಾಯಿಸುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ.
  2. ಮತ ಚಲಾವಣೆಯ ವೈಖರಿ ಬದಲಾಗಿದೆ. ತಂಡದ ನಾಯಕ ಮತ್ತು ರಾಜಕೀಯ ಪಕ್ಷದ ಮುಖಂಡರು ಹೇಳಿದ ಅಭ್ಯರ್ಥಿಗೆ ಮತ ಹಾಕುವುದಿಲ್ಲ. ಬದಲಾಗಿ ಅವರ ಕೆಲಸ ಕಾರ್ಯಗಳನ್ನು ಮಾಡಿ ಕೊಡುವವರಿಗೆ ಮತ ಕೊಡುತ್ತೇವೆಂದು ಹೇಳುವವರು ದ್ವಿಗುಣಗೊಂಡಿದ್ದಾರೆ.
  3. ಲಂಬಾಣಿ ಮಹಿಳೆಯರಲ್ಲಿಯೂ ಮತ ಹಾಕುವ ಪದ್ಧತಿ ಬದಲಾಗಿದೆ. ಆದರೂ ಗಂಡಸರಂತೆ ಅವರ ಅಭಿವೃದ್ಧಿಗೆ ಶ್ರಮಿಸುವವರಿಗೆ ಮತ ಹಾಕುತ್ತಾರೆ.
  4. ಹೆಚ್ಚಿನ ಫಲಾನುಭವಿಗಳು ಯಾವ ರಾಜಕೀಯವನ್ನೂ ಪಡೆದಿಲ್ಲ. ಅವರಿಗೆ ರಾಜಕೀಯ ಲಾಭಕ್ಕಿಂತ ಯೋಜನಾ ಫಲಗಳ ಬಗ್ಗೆ ಹೆಚ್ಚು ಆಸಕ್ತಿ. ಅರ್ಧದಷ್ಟು ಫಲಾನುಭವಿಗಳು ರಾಜಕೀಯವನ್ನು ತಮ್ಮ ಸಮಾಜೊ ಆರ್ಥಿಕ ಬದುಕಿಂದ ದೂರವಿಡಲು ಬಯಸುತ್ತಾರೆ. ಆದರೂ ಅನೇಕ ಲಂಬಾಣಿಗಳು ವಿವಿಧ ಹಂತದ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
  5. ಬಹಳ ಫಲಾನುಭವಿಗಳು ರಾಜಕೀಯ ಪಕ್ಷಗಳಿಂದ ಗೋರ್ ಪಂಚಾಯಿತಿಯನ್ನು ಮತ್ತು ಗೋರ್ ಪಂಚಾಯಿತಿಯಿಂದ ಪಕ್ಷಗಳ ಕಾರ್ಯವೈಖರಿಯಲ್ಲಿ ಅಡೆತಡೆಯಾಗಿಲ್ಲವೆಂದು ಅಭಿಪ್ರಾಯ ಪಡುತ್ತಾರೆ.
 
ಬದಲಾವಣೆಯ ಬಗ್ಗೆ ಅಭಿಪ್ರಾಯ
  1. ಅತಿ ಹೆಚ್ಚಿನ ಫಲಾನುಭವಿಗಳು ವಿ.ಘ. ಯೋಜನೆಯಿಂದ ಅವರ ಬದುಕಿನಲ್ಲಿ ಸಾಕಷ್ಟು ಬದಲಾವಣೆ ಆಗಿದೆಯೆಂದು ಒಪ್ಪಿಕೊಳ್ಳುತ್ತಾರೆ. ಅದರಲ್ಲಿ ಅರ್ಧದಷ್ಟು ಫಲಾನುಭವಿಗಳು ಬದಲಾವಣೆ ತುಂಬಾ ಗಣನೀಯ ಪ್ರಮಾಣದಲ್ಲಿ ಆಗಿದೆಯೆಂದು ಅಭಿಪ್ರಾಯ ಪಡುತ್ತಾರೆ.
  2. ಅತೀ ಹೆಚ್ಚಿನ ಫಲಾನುಭವಿಗಳು ಸದ್ರಿ ಅವಧಿಯಲ್ಲಿ ಆದ ಸಾಮಾಜಿಕ ಬದಲಾವಣೆಯನ್ನು, ಶೈಕ್ಷಣಿಕ ಬದಲಾವಣೆಯನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಬದಲಾವಣೆಯ ಪ್ರಮಾಣ ಬೇರೆ ಬೇರೆಯೆಂದು ತಿಳಿಸುತ್ತಾರೆ.
  3. ಬಹುತೇಕ ಎಲ್ಲಾ ಫಲಾನುಭವಿಗಳು ಲಂಬಾಣಿಗಳ ಬದಲಾವಣೆಯ ಕ್ಷೇತ್ರ ಮತ್ತು ಪ್ರಮಾಣಗಳನ್ನು ತಿಳಿದುಕೊಳ್ಳಲು ಇಂತಹ ಸಂಶೋಧನೆಗಳು ಸಹಾಯವಾಗುತ್ತವೆಯೆಂದು ಒಪ್ಪುತ್ತಾರೆ.
 
ಲಂಬಾಣಿ ನಾಯಕರು ಮತ್ತು ವಿ.ಘ. ಯೋಜನೆ
ಲಂಬಾಣಿಯ ನಾಯಕರಿಗೆ ಫಲಾನುಭವಿಗಳು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ಉಪಯೋಗ ಪಡೆದುಕೊಂಡಿರುವುದು ಗೊತ್ತಿದೆ. ಅದರಂತೆ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಪಡೆದ ಅನುಕೂಲಗಳ ಬಗ್ಗೆ ಸಾಕಷ್ಟು ಮಾಹಿತಿಯಿದೆ. ಹೆಚ್ಚಿನ ನಾಯಕರಿಗೆ ಸೇವೆ ಸಲ್ಲಿಸುವ ಇಲಾಖೆಗಳು, ಅಧಿಕಾರಿಗಳು ಮತ್ತು ಫಲಾನುಭವಿಗಳನ್ನು ಆರಿಸುವಾಗ ಗಮನಿಸುವ ಅಂಶಗಳ ಬಗ್ಗೆ ತಿಳುವಳಿಕೆಯಿದೆ. ಹೆಚ್ಚಿನವರು ಆರಿಸುವ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸಾಲ ವಿಲೇವಾರಿ ಮಾಡುವಲ್ಲಿ ವಿಳಂಬ, ಅನರ್ಹ ಫಲಾನುಭವಿಗಳ ಆಯ್ಕೆ, ಗ್ರಾಮ ಸಭೆ ಮಾಡದೆ ಇರುವುದು, ಮುಂತಾದ ಸಮಸ್ಯೆಗಳು ಅವರನ್ನು ಕಾಡಿದ್ದಿವೆ. ಸಮಸ್ಯೆಗಳು ಸಾಲ ವಿತರಣೆ ಮಾಡುವ ಸಮಯಕ್ಕಿಂತ ಹೆಚ್ಚಾಗಿ ಫಲಾನುಭವಿಗಳನ್ನು ಆರಿಸುವಾಗ ಮತ್ತು ಸಾಲ ಮರು ಪಾವತಿ ಮಾಡುವಾಗ ಬಂದಿದ್ದಿವೆ. ಅವರ ಅಭಿಪ್ರಾಯದಲ್ಲಿ ನಾಯಕರಿಗಿಂತ ಮತ್ತು ಫಲಾನುಭವಿಗಳಿಗಿಂತ ಹೆಚ್ಚಾಗಿ ಸರಕಾರಿ ಮತ್ತು ಬ್ಯಾಂಕ್ ಅಧಿಕಾರಿಗಳೇ ಸಮಸ್ಯೆಗಳನ್ನು ತಂದೊಡ್ಡುತ್ತಾರೆ. ಈ ನಾಯಕರನ್ನು ಆಯಾ ಸಮುದಾಯಗಳು ಒಪ್ಪಿಕೊಂಡಿವೆ.

ಇವರ ಅಭಿಪ್ರಾಯದಂತೆ ಯೋಜನೆಯಿಂದ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ಫಲಾನುಭವಿಗಳ ಬದಲಾವಣೆಯಾಗಿದೆ. ತೋಟಗಾರಿಕೆ ಮತ್ತು ರೇಶ್ಮೆ ಕೃಷಿ ಬದಲಾಗಿಲ್ಲ. ಸಾಮಾಜಿಕವಾಗಿಯೂ (ಸಾಮಾಜಿಕ ಸಂಬಂಧಗಳು, ವೇಷಭೂಷಣಗಳು, ಶಿಕ್ಷಣ ಇ) ಲಂಬಾಣಿಗಳು ಪ್ರಗತಿಯಾಗಿದ್ದಾರೆಂದು ನಾಯಕರು ಅಭಿಪ್ರಾಯ ಪಡುತ್ತಾರೆ. ಸರಕಾರಿ ಅನುಕೂಲ ಪಡೆದುಕೊಂಡು ಕೆಲ ಫಲಾನುಭವಿಗಳು ಕೆಟ್ಟ ಅಭ್ಯಾಸಗಳನ್ನು (ಮದ್ಯಪಾನ) ಕಲಿತಿದ್ದಾರೆಂದು ಅಭಿಪ್ರಾಯ ಪಡುತ್ತಾರೆ. ಅವರ ಅಭಿಪ್ರಾಯದಂತೆ ಫಲಾನುಭವಿಗಳು ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು.
 
ಅಧಿಕಾರಿಗಳು ಮತ್ತು ವಿ.ಘ. ಯೋಜನೆ
ಅಧಿಕಾರಿಗಳಿಗೆ ಯೋಜನೆಯ ಒಂದಲ್ಲ ಒಂದು ಉದ್ದೇಶಗಳು ಗೊತ್ತಿವೆ. ಎಲ್ಲಾ ಉದ್ದೇಶಗಳನ್ನು ತಿಳಿದಿರುವವರು ಬಹಳ ಸ್ವಲ್ಪ. ಹೆಚ್ಚಿನ ಅಧಿಕಾರಿಗಳಿಗೆ ತಮ್ಮ ಇಲಾಖೆಯಿಂದ ಕೊಡುವ ಫಲಗಳ ಬಗ್ಗೆ ಗೊತ್ತಿದೆ. ಆದರೆ ಅವರಿಗೆ ಇನ್ನೊಂದು ಇಲಾಖೆಯಿಂದ ಕೊಡುವ ಫಲಗಳ ಬಗ್ಗೆ ಗೊತ್ತಿಲ್ಲ ಮತ್ತು ತಿಳಿದುಕೊಳ್ಳುವ ಆಸಕ್ತಿಯಿಲ್ಲ. ಇದಕ್ಕೆ ವಿನಾಯಿತಿ ಎಂಬಂತೆ ಕೆಲವರು ಆ ಬಗ್ಗೆ ತಿಳಿದುಕೊಂಡಿದ್ದಾರೆ. ಹೆಚ್ಚಿನ ಅಧಿಕಾರಿಗಳಿಗೆ ಫಲಾನುಭವಿಗಳನ್ನು ಆರಿಸುವ ವಿಧಾನ ಮತ್ತು ಅರ್ಹತೆಯ ಬಗ್ಗೆ ತಿಳುವಳಿಕೆ ಇದೆ. ವೈಯಕ್ತಿಕ ಮತ್ತು ಗುಂಪು ಫಲಾನುಭವಿಗಳನ್ನು ಗ್ರಾಮ ಸಭೆಯಲ್ಲಿಯೂ ಮತ್ತು ಸಮುದಾಯಗಳನ್ನು ಅಲ್ಲಿನ ಪರಿಶಿಷ್ಟ ಜಾತಿ ಮತ್ತು ಸಾಮಾಜಿಕ ಹಿಂದುಳಿಯುವಿಕೆಯ ಆಧಾರದ ಮೇಲೆ ಆರಿಸುತ್ತಾರೆ. ಸಭೆಗಳು, ಭಿತ್ತಿಪತ್ರಗಳು, ಗೋಡೆ ಪತ್ರಗಳು ಮುಂತಾದ ಮಾಧ್ಯಮಗಳನ್ನು ತಮ್ಮ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಬಳಸುತ್ತಾರೆ. ಸರಕಾರಿ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆಗಳ ಮಧ್ಯದ ಸಹಕಾರ ಉಲ್ಲೇಖಿಸುವಷ್ಟು ಚೆನ್ನಾಗಿಲ್ಲ.

ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮಪಂಚಾಯಿತಿ ಮಟ್ಟದಲ್ಲಿನ ಅಧಿಕಾರಿಗಳು ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಫಲಾನುಭವಿಗಳ ಆಯ್ಕೆ ಮತ್ತು ಸಾಲ ಮರುಪಾವತಿ ಸಮಯದಲ್ಲಿ ಸಮಸ್ಯೆಗಳು ಹೆಚ್ಚು. ಆಡಳಿತ, ಸಹಕಾರ, ಹಣಕಾಸು ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಸಮಸ್ಯೆಗಳಿವೆ. ಫಲಾನುಭವಿಗಳ ಆಯ್ಕೆ ಮತ್ತು ಸಾಲ ವಿತರಣೆ ಸಮಯದಲ್ಲಿ ಅಧಿಕಾರಿಗಳು ಮತ್ತು ಸಾಲ ಮರುಪಾವತಿ ಮಾಡುವಾಗ ಫಲಾನುಭವಿಗಳು ಮತ್ತು ನಾಯಕರು ಸಮಸ್ಯೆಗಳನ್ನೊಡ್ಡಿರುತ್ತಾರೆ. ಸಭೆ, ಚರ್ಚೆ ಮುಂತಾದ ಮಾರ್ಗಗಳ ಮೂಲಕ ತಮ್ಮ ಸಮಸ್ಯೆಗಳನ್ನು ಅವರು ಬಗೆಹರಿಸಿಕೊಳ್ಳುತ್ತಾರೆ.

ಫಲಾನುಭವಿಗಳು ತಮ್ಮ ಆರ್ಥಿಕ ಮತ್ತು ಸಾಮಾಜಿಕ ಬದುಕಿನಲ್ಲಿ ಪ್ರಗತಿ ಕಂಡಿದ್ದಾರೆಂದು ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ. ಫಲಾನುಭವಿಗಳು ಯೋಜನೆಯ ಉಪಯೋಗ ಪಡೆದುಕೊಂಡು ದುರಭ್ಯಾಸಗಳನ್ನು ಕಲಿತಿರುವ ಬಗ್ಗೆಯೂ ಪ್ರಸ್ತಾಪ ಮಾಡುತ್ತಾರೆ. ಅಧಿಕಾರಿಗಳಿಗೆ ತಮ್ಮ ಪಾತ್ರದ ಬಗ್ಗೆ ತೃಪ್ತಿಯಿದೆ. ಆದರೆ ಅಧಿಕಾರಿಗಳಿಗೆ ವಿ.ಘ. ಯೋಜನೆಯ ಜೊತೆಗೆ ಸಾಮಾನ್ಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಮಾಡಿಕೊಡಬೇಕಾಗುತ್ತದೆ.
 
ಬ್ಯಾಂಕ್ ಅಧಿಕಾರಿಗಳು ಮತ್ತು ವಿ.ಘ. ಯೋಜನೆ
ಸರಕಾರಿ ಅಧಿಕಾರಿಗಳಂತೆಯೇ, ಬ್ಯಾಂಕ್ ಅಧಿಕಾರಿಗಳಿಗೂ ಯೋಜನೆಯ ಎಲ್ಲಾ ಉದ್ದೇಶಗಳು ಸರಿಯಾಗಿ ತಿಳಿದಿಲ್ಲ. ಸಮಾಜ ಕಲ್ಯಾಣ ಇಲಾಖೆ ಮತ್ತು ಪ.ಜಾ. ಮತ್ತು ಪ.ಪಂ. ಅಭಿವೃದ್ಧಿ ನಿಗಮ ಮತ್ತು ಅವುಗಳ ಅಧಿಕಾರಿಗಳು ಇವರಿಗೆ ಹೆಚ್ಚು ಪರಿಚಿತರು. ಎಲ್ಲಾ ಅಧಿಕಾರಿಗಳಿಗೆ ಯೋಜನೆಯ ಫಲಾನುಭವಿಗಳ ಆಯ್ಕೆ ವಿಧಾನ ಗೊತ್ತಿದೆ. ಆದರೆ ಅವರು ಗ್ರಾಮಸಭೆಯಲ್ಲಿ ಭಾಗವಹಿಸದೆ ಸರಕಾರಿ ಅಧಿಕಾರಿಗಳು ಕೊಟ್ಟ ಪಟ್ಟಿಯನ್ನು ಒಪ್ಪಿಕೊಳ್ಳುತ್ತಾರೆ. ಕೃಷಿ, ನೀರಾವರಿ ಮತ್ತು ಹೈನುಗಾರಿಕೆಗೆ ಹೆಚ್ಚಿಗೆ ಸಾಲ ಕೊಟ್ಟಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಫಲಾನುಭವಿಗಳನ್ನು ಆರಿಸುವಾಗ ಮತ್ತು ಸಾಲ ವಸೂಲಾತಿ ಮಾಡುವಾಗ ಸಮಸ್ಯೆಗಳನ್ನು ಎದುರಿಸಿದ್ದಾರೆ. ಸರಕಾರಿ ಅಧಿಕಾರಿಗಳಿಂದ ಸಹಕಾರದ ತೊಂದರೆಯನ್ನು ಅನುಭವಿಸಿದ್ದಾರೆ. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದಿದ್ದರೂ ಹೆಚ್ಚಿನವನ್ನು ಚರ್ಚೆ ಮತ್ತು ಸಂಧಾನಗಳ ಮುಖಾಂತರ ಬಗೆಹರಿಸಿಕೊಳ್ಳುತ್ತಾರೆ.
​
ಬ್ಯಾಂಕ್ ಅಧಿಕಾರಿಗಳ ಪ್ರಕಾರ ನಾಯಕರಿಗೆ ಯೋಜನೆಯ ಉದ್ದೇಶಗಳು, ಇಲಾಖೆಗಳು ಮತ್ತು ಅಧಿಕಾರಿಗಳ ತಿಳುವಳಿಕೆಯಿದೆ. ಅದರ ಜೊತೆಗೆ ಅವರ ಸಹಕಾರವೂ ಇದೆ. ಫಲಾನುಭವಿಗಳ ಬಗ್ಗೆ ಅವರು ಇದೇ ಅಭಿಪ್ರಾಯವನ್ನು ತಳೆದಿದ್ದಾರೆ. ಲಂಬಾಣಿಗಳು ಯೋಜನೆಯ ಫಲದಿಂದ ತಮ್ಮ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಕಂಡುಕೊಂಡಿದ್ದಾರೆ. ಅದರ ಜೊತೆಗೆ ದುರಭ್ಯಾಸಗಳನ್ನು ಕಲಿತುಕೊಂಡಿದ್ದಾರೆ. ಬ್ಯಾಂಕ್ ಅಧಿಕಾರಿಗಳಿಗೆ ತಮ್ಮ ಕೆಲಸದ ಬಗ್ಗೆ ತೃಪ್ತಿ ಇದೆ. ಆದರೆ ಅವರಿಗೆ ಯೋಜನೆಯ ತಿಳುವಳಿಕೆಯ ಕೊರತೆ ಇದೆ.
 
ಸಲಹೆಗಳು
ಸಂಶೋಧನೆಯಿಂದ ಕಂಡುಕೊಂಡ ಸತ್ಯಾಂಶಗಳ ಆಧಾರದ ಮೇಲೆ ಅಧಿಕಾರಿಗಳಿಗೆ, ನಾಯಕರಿಗೆ, ಫಲಾನುಭವಿಗಳಿಗೆ ಯೋಜನೆಯನ್ನು ಇನ್ನೂ ಹೆಚ್ಚು ಪ್ರಭಾವಯುತವಾಗಿ ಕಾರ್ಯರೂಪಕ್ಕೆ ತರಲು ಈ ಕೆಳಗಿನ ಸಲಹೆಗಳನ್ನು ಕೊಡಲಾಗಿದೆ.
 
ಅಧಿಕಾರಿಗಳಿಗೆ ಮತ್ತು ನಾಯಕರಿಗೆ ಸಲಹೆಗಳು
  1. ಸ್ಥಳೀಯ ನೈಸರ್ಗಿಕ ಮತ್ತು ಮಾನವೀಯ ಸಂಪನ್ಮೂಲಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅವಶ್ಯಕತೆಗಳ ಆಧಾರದ ಮೇಲೆ ಯೋಜನೆಯನ್ನು ತಯಾರಿಸಬೇಕು. ಸಂಖ್ಯೆ ಆಧಾರದ ಮೇಲೆ ಪ್ರಗತಿಯನ್ನು ಅಳೆಯುವ ಯೋಜನೆಗಳನ್ನು ಕೈಬಿಡಬೇಕು.
  2. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸಿ ಅವುಗಳನ್ನು ಗ್ರಾಮಾಂತರ ಮತ್ತು ಸಮುದಾಯ ಮಟ್ಟದಲ್ಲಿ ಕಾರ್ಯರೂಪಕ್ಕೆ ತರುವ ಪದ್ಧತಿಯನ್ನು ಬದಲಾಯಿಸಬೇಕು. ಫಲಾನುಭವಿಗಳ ಬೇಕು ಬೇಡಿಕೆಗಳ ಬಗ್ಗೆ ಸಮೀಕ್ಷೆ ಮಾಡಿ ಪ್ರಾದೇಶಿಕ ಮತ್ತು ಸಮುದಾಯಿಕ ಸಮಸ್ಯೆಗಳ ಆಧಾರದ ಮೇರೆಗೆ ಅಭಿವೃದ್ಧಿ ಪ್ರಕ್ರಿಯೆಯ ಸ್ಥಳೀಯ ಯೋಜನೆಗಳನ್ನು ತಯಾರಿಸಬೇಕು.
  3. ಜನಪ್ರತಿನಿಧಿಗಳು ಯೋಜನೆಯ ಹಂತದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಅಧಿಕಾರಿಗಳು ತಯಾರಿಸಿದ ಯೋಜನೆಯನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳಬಾರದು.
  4. ಫಲಾನುಭವಿಗಳು ಯೋಜನೆಗಳ ಧ್ಯೇಯೋದ್ದೇಶ, ಇಲಾಖೆಗಳು, ಅಧಿಕಾರಿಗಳು ಮುಂತಾದವುಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಯೋಜನೆಯ ಫಲವನ್ನು ಒಂದು ದಾನ ಅಥವಾ ಅನುದಾನ ಎಂದು ಪಡೆದಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಜಾಗ್ರತೆಯಿಂದ ಯೋಜನೆಯ ಉದ್ದೇಶ ಮತ್ತು ಫಲ ಪಡೆಯುವ/ಪ್ರಗತಿಯ ಹೊಂದುವ ಬಗ್ಗೆ ಸರಿಯಾದ ಮಾಹಿತಿ ಮಾಡಿಕೊಡಬೇಕು. ಆಗಿಂದಾಗ್ಗೆ ತರಬೇತಿ ಶಿಬಿರಗಳನ್ನು ಏರ್ಪಡಿಸಬೇಕು.
  5. ಫಲಾನುಭವಿಗಳಿಗೆ ಒಬ್ಬಿಬ್ಬರನ್ನು ಹೊರತುಪಡಿಸಿ ಯೋಜನೆಯ ಅಧಿಕಾರಿಗಳ ಪರಿಚಯ ಇಲ್ಲ. ಯೋಜನಾಧಿಕಾರಿಗಳಿಗೆ ಫಲಾನುಭವಿಗಳ ನಿರಂತರ ಸಂಪರ್ಕವಿಟ್ಟುಕೊಳ್ಳುವಂತೆ ಆದೇಶ ಹೊರಡಿಸಬೇಕು. ಇದರಿಂದ ದುರುಪಯೋಗ ತಪ್ಪುತ್ತದೆ.
  6. ಫಲಾನುಭವಿಗಳನ್ನು ಆರಿಸುವ ವಿಧಾನ ವೈಜ್ಞಾನಿಕವಾಗಿರಬೇಕು. ಯಾವ ಶಿಫಾರಸುಗಳಿಗೆ ಮಣಿಯಬಾರದು. ಅರ್ಹರಿಗೆ ಯೋಜನೆಗಳ ಫಲ ಸಿಗುವಂತಾಗಬೇಕು.
  7. ಫಲಾನುಭವಿಗಳನ್ನು ಆರಿಸುವ ವಿಧಾನವನ್ನು ಮತ್ತು ಆಧಾರಾಂಶಗಳನ್ನು ಆಗಿಂದಾಗ್ಗೆ ಅವಶ್ಯಕತೆಗಳಿಗೆ ತಕ್ಕಂತೆ ಬದಲಾಯಿಸಬೇಕು. ಪರಿಶಿಷ್ಟ ಜಾತಿಯ ಎಲ್ಲರೂ ಅರ್ಹರೆನ್ನುವ ಕಾರಣದಿಂದ ಹಣವಂತ ಲಂಬಾಣಿಗಳಿಗೂ ಸಾಲ ಸಿಗುವಂತಾಗಿದೆ. ಹೀಗಾಗಿ ತುಂಬಾ ಬಡವರು ಇದರಿಂದ ವಂಚಿತರಾಗುತ್ತಿದ್ದಾರೆ. ಇದು ಬದಲಾಗಬೇಕು.
  8. ಫಲಾನುಭವಿಗಳ ಆಯ್ಕೆ ಸಮಿತಿಯಲ್ಲಿ ಲಂಬಾಣಿ ನಾಯಕರನ್ನು ಸೇರಿಸಬೇಕು. ಹಾಗಾದಾಗ ಅವರ ಆಯ್ಕೆ ಪ್ರಕ್ರಿಯೆಯಲ್ಲಿ ಇವರು ಭಾಗವಹಿಸುತ್ತಾರೆ ಮತ್ತು ತೀರಾ ಅವಶ್ಯ ಇರುವವರಿಗೆ ಯೋಜನೆಯ ಫಲ ದೊರೆಯುತ್ತದೆ.
  9. ನಾಯಕರು ಯೋಜನೆಯ ಅನುಷ್ಠಾನದಲ್ಲಿ ಸಂಪೂರ್ಣವಾಗಿ ಭಾಗವಹಿಸಬೇಕು. ಅದಕ್ಕೆ ಅವರಿಗೆ ಯೋಜನೆಯ ವಿವರಗಳು ತಿಳಿದಿರಬೇಕು. ಅದಕ್ಕೆ ಅವರಿಗೆ ತರಬೇತಿ ಹಮ್ಮಿಕೊಳ್ಳಬೇಕು.
  10. ಯೋಜನೆಯ ಧ್ಯೇಯೋದ್ದೇಶಗಳು, ಫಲಾನುಭವಿಗಳ ಆಯ್ಕೆಯ ಮಾನದಂಡ, ವಿಧಾನ ಮುಂತಾದವುಗಳ ಬಗ್ಗೆ ಅಧಿಕಾರಿಗಳಿಗೆ ಹೆಚ್ಚಿಗೆ ಮಾಹಿತಿಯಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೂ ತರಬೇತಿಯ ವ್ಯವಸ್ಥೆಯಾಗಬೇಕು
  11. ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮುನ್ನ ಸಂಬಂಧಪಟ್ಟವರಿಗೆ ತರಬೇತಿ ಅವಶ್ಯಕವೆಂದು ಆದೇಶ ಹೊರಡಿಸಬೇಕು.
  12. ಅಧಿಕಾರಿಗಳು ಗ್ರಾಮಸಭೆ ಒಂದು ತಲೆನೋವು ಎಂದು ಪರಿಗಣಿಸಬಾರದು. ಅವರು ಒಂದು ಉದ್ದೇಶ ಮತ್ತು ಅಭಿರುಚಿ ಇಟ್ಟುಕೊಂಡು ಭಾಗವಹಿಸಬೇಕು. ಅರ್ಹ ಫಲಾನುಭವಿಗಳನ್ನು ಆರಿಸಬೇಕು. ಯಾವ ಒತ್ತಡಕ್ಕೂ ಮಣಿಯಬಾರದು.
  13. ಯೋಜನಾಧಿಕಾರಿಗಳು ಮತ್ತು ಪ್ರಚಾರ ಇಲಾಖೆ ಅಧಿಕಾರಿಗಳು ಇನ್ನೂ ಹೆಚ್ಚಿನ ಸಹಕಾರದಿಂದ ಯೋಜನೆ ಪ್ರಚಾರ ಕೈಗೊಳ್ಳಬೇಕು. ಪ್ರಚಾರದ ಎಲ್ಲಾ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು.
  14. ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ತಮ್ಮ ಇಲಾಖೆಯನ್ನು ಬಿಟ್ಟು ಬೇರೆ ಇಲಾಖೆಗಳಲ್ಲಿ ಕಾರ್ಯರೂಪಕ್ಕೆ ತರುವ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿಗೆ ಗೊತ್ತಿಲ್ಲ. ನಿಯತಕಾಲಿಕವಾಗಿ ಮತ್ತು ಒಂದು ಹೊಸ ಕಾರ್ಯಕ್ರಮ ಬಂದಾಗ ಪರಿಚಯಾತ್ಮಕ ಸಭೆಗಳನ್ನು ತಪ್ಪದೇ ಕರೆದು ಎಲ್ಲರಿಗೂ ಮಾಹಿತಿ ಕೊಡಬೇಕು.
  15. ಸೋಮಾರಿ ಮತ್ತು ಲಂಚಕೋರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು.
  16. ವಾಹನ ಸೌಕರ್ಯ ಇರದ ಅಧಿಕಾರಿಗಳಿಗೆ ಯೋಜನೆಯ ಮೇಲ್ವಿಚಾರಣೆಗೆ ನಿಯತಕಾಲಿಕವಾಗಿ ವಾಹನಗಳನ್ನು ಒದಗಿಸಬೇಕು.
 
ಪ್ರಾದೇಶಿಕ ಭಿನ್ನತೆಗೆ ವಿಶೇಷ ಸಲಹೆಗಳು :-
  1. ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳಲ್ಲಿ ಖುಷ್ಕಿ ಭೂಮಿ ಹೆಚ್ಚು. ಆ ಪ್ರದೇಶದಲ್ಲಿ ನೀರಾವರಿ ಯೋಜನೆಗಳನ್ನು ಹೆಚ್ಚು ಹೆಚ್ಚಾಗಿ ಕಾರ್ಯರೂಪಕ್ಕೆ ತರಬೇಕು.
  2. ಹೆಚ್ಚಿನ ಕೃಷಿ ಉತ್ಪಾದನೆಗೆ ಒಳ್ಳೆಯ ಬೀಜ, ರಸಾಯನಿಕ ಗೊಬ್ಬರ, ಕ್ರಿಮಿ ಕೀಟನಾಶಗಳನ್ನು, ಸಿಂಪರಣೆ ಮತ್ತು ಧೂಳೀಕರಣ ಸಾಧನೆಗಳನ್ನು ಅಗ್ಗದ ದರಗಳಲ್ಲಿ ಒದಗಿಸಬೇಕು.
  3. ಲಂಬಾಣಿಗಳು ಆಹಾರ ಬೆಳೆಗಳನ್ನೇ ಬೆಳೆಯುತ್ತಿದ್ದಾರೆ. ಅವರು ವಾಣಿಜ್ಯ ಬೆಳೆಗಳನ್ನು ಬೆಳೆಯಲು ಹುರಿದುಂಬಿಸಬೇಕು.
  4. ಕೃಷಿ, ಕೃಷಿ ಕೂಲಿ, ಅರಣ್ಯ ಉತ್ಪಾದನೆಗಳ ಮಾರಾಟ, ಸಣ್ಣ ಪ್ರಮಾಣದ ವ್ಯಾಪಾರ ಇವು ಲಂಬಾಣಿಗಳಿಗೆ ಗೊತ್ತಿರುವ ವೃತ್ತಿಗಳು. ಅವರು ಸಣ್ಣ ಕೈಗಾರಿಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಆಹಾರ ಸಂಸ್ಕರಣ ಘಟಕ, ಕುಶಲತೆ ಕಲೆ ಮುಂತಾದ ವೃತ್ತಿಗಳು ಪ್ರಾರಂಭಿಸಲು ಸಹಾಯ ಮಾಡಬೇಕು.
  5. ಲಂಬಾಣಿಗಳ ಉತ್ಪಾದನೆಯನ್ನು ಮಾರಾಟ ಮಾಡಲು ಮಧ್ಯಸ್ಥಿಕೆದಾರರು (ವ್ಯಾಪಾರಸ್ಥರು) ಹೆಚ್ಚಿನ ಪಾತ್ರ ವಹಿಸಿ ಲಾಭವನ್ನು ತಮ್ಮ ಜೇಬಿಗೆ ಹಾಕಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಮಾರುಕಟ್ಟೆ, ಉಪಮಾರುಕಟ್ಟೆ ಮತ್ತು ಗ್ರಾಮಾಂತರ ಮಾರುಕಟ್ಟೆಗಳನ್ನು ಪ್ರಾರಂಭಿಸಿ ಅವರಿಗೆ ಮಧ್ಯಸ್ಥಿಕೆದಾರರಿಂದ ಆಗುವ ತೊಂದರೆಯನ್ನು ತಪ್ಪಿಸಬೇಕು.
  6. ಲಂಬಾಣಿಗಳಲ್ಲಿ ಉಳಿತಾಯ ಬಹಳ ಕಡಿಮೆ. ಒಬ್ಬ ಫಲಾನುಭವಿ ಮಾತ್ರ ಬಲವಂತವಾಗಿ ಉಳಿತಾಯ ಮಾಡುತ್ತಿದ್ದಾರೆ. ಅವರಲ್ಲಿ ಉಳಿತಾಯದ ಪ್ರವೃತ್ತಿಯನ್ನು ಬೆಳೆಸಬೇಕು.
  7. ಅವರ ಸಾಮಾಜಿಕ ಜೀವನ ಮಟ್ಟ ಸುಧಾರಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಅವರಿಗೆ ಸ್ನಾನದ ಕೋಣೆ, ಪಾಯಿಖಾನೆ, ಶುದ್ಧ ಕುಡಿಯುವ ನೀರು, ಆರೋಗ್ಯ ಸೇವೆಗಳು ಇವುಗಳನ್ನು ಒದಗಿಸುವ ಕಾರ್ಯಕ್ರಮಗಳು ಅವರ ತಾಂಡಗಳನ್ನು ಮುಟ್ಟಬೇಕು.
  8. ಒಂದು ವಿಶೇಷ ಕಾರ್ಯಕ್ರಮವನ್ನು ಪ್ರಾರಂಭಿಸಿ ಅವರನ್ನು ಮದ್ಯಪಾನ ಮತ್ತು ತಂಬಾಕು (ಗುಟಖಾ ಇತ್ಯಾದಿ) ಸೇವನೆಯಿಂದ ಮುಕ್ತಗೊಳಿಸಬೇಕು.
  9. ತಾಂಡಾಗಳನ್ನು ಕಟ್ಟಲು ಪ್ರತ್ಯೇಕ ಭೂಮಿ, ನಿವೇಶನಗಳ ಸರಿಯಾದ ಹಂಚಿಕೆ, ರಸ್ತೆ, ಅಂಚೆ ಕಛೇರಿ, ನ್ಯಾಯಬೆಲೆ ಅಂಗಡಿ ಮುಂತಾದವುಗಳನ್ನು ಲಂಬಾಣಿಗಳಿಗೆ ಒದಗಿಸಬೇಕು.
  10. ಗೋರ್ ಪಂಚಾಯಿತಿ ಲಂಬಾಣಿಗಳ ಬದುಕಿನ ಮೇಲೆ ಇನ್ನೂ ಪ್ರಭಾವ ಬೀರುವ ಸಂಸ್ಥೆಯಾಗಿದೆ, ಇವುಗಳನ್ನು ಇನ್ನೂ ಸಬಲಗೊಳಿಸಬೇಕು.
  11. ಲಂಬಾಣಿಗಳ ಸಾಂಸ್ಕೃತಿಕ ಬದುಕನ್ನು ಪುಷ್ಟೀಕರಿಸುವ ಕಲೆ ಮತ್ತು ಕಸೂತಿಗಳನ್ನು ಉಳಿಸಿ ಬೆಳೆಸಬೇಕು.
 
ಬ್ಯಾಂಕ್ ಅಧಿಕಾರಿಗಳಿಗೆ ಸಲಹೆಗಳು :
  1. ಬ್ಯಾಂಕ್ ಮತ್ತು ಇತರೆ ಹಣಕಾಸು ಸಂಸ್ಥೆಗಳು, ಖಾಸಗಿ ಸಾಲ ವಿತರಿಸುವವರನ್ನು ದೂರವಿಡಲು ಲಂಬಾಣಿಗಳಿಗೆ ಹೆಚ್ಚು ಸಾಲ ಸೌಲಭ್ಯ ಒದಗಿಸಬೇಕು. ಗ್ರಾಮೀಣ ಬ್ಯಾಂಕ್ಗಳ ಶಾಖೆಗಳನ್ನು ಅವಶ್ಯವಿದ್ದ ಕಡೆ ತೆರೆಯಬೇಕು.
  2. ಬ್ಯಾಂಕ್ ಅಧಿಕಾರಿಗಳಿಗೂ ಯೋಜನೆಯ ಎಲ್ಲಾ ವಿವರಗಳು ಸರಿಯಾಗಿ ತಿಳಿದಿಲ್ಲ. ಅವರಿಗೂ ತರಬೇತಿ ಸಿಗುವಂತಾಗಬೇಕು.
  3. ಇವರಿಗೂ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮತ್ತು ತಾಲ್ಲೂಕು ಅಭಿವೃದ್ಧಿ ಅಧಿಕಾರಿಗಳನ್ನು ಹೊರತುಪಡಿಸಿ ಇತರೆ ಅಧಿಕಾರಿಗಳ ಪರಿಚಯ ಕಡಿಮೆ. ಅದಕ್ಕಾಗಿ ಯೋಜನೆಯ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳ ಪರಿಚಯ ಸಭೆಗಳನ್ನು ನಡೆಸಬೇಕು. ಅಧಿಕಾರಿಗಳ ಮಧ್ಯೆ ಸಹಕಾರ ಏರ್ಪಡುವಂತೆ ನೋಡಿಕೊಳ್ಳಬೇಕು.
  4. ಬ್ಯಾಂಕ್ ಅಧಿಕಾರಿಗಳು ಗ್ರಾಮಸಭೆಯಲ್ಲಿ ಭಾಗವಹಿಸುವಂತಾಗಬೇಕು. ಅವರು ಸರಕಾರಿ ಅಧಿಕಾರಿಗಳು ತಯಾರಿಸಿದ ಪಟ್ಟಿಯನ್ನು ಒಪ್ಪಿಕೊಳ್ಳುವಂತಾಗಬಾರದು.
  5. ಕೃಷಿಸಾಲ ಸಮಯಕ್ಕೆ ಸರಿಯಾಗಿ ಬರುವುದಿಲ್ಲವೆಂದು ಫಲಾನುಭವಿಗಳು ಪೇಚಾಡುತ್ತಾರೆ. ಅವರಿಗೆ ಸಾಲಸೌಲಭ್ಯ ಸರಿಯಾದ ಸಮಯಕ್ಕೆ ಸಿಗುವಂತಾಗಬೇಕು.
  6. ಬ್ಯಾಂಕ್ ಮತ್ತು ಸರಕಾರಿ ಅಧಿಕಾರಿಗಳು ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಒಬ್ಬರಿಗೊಬ್ಬರು ಸಹಕಾರದಿಂದ ವರ್ತಿಸಬೇಕು.
  7. ಸರಕಾರಿ ಅಧಿಕಾರಿಗಳು ಸಾಲವಸೂಲಾತಿ ಸಮಯದಲ್ಲಿ ಬ್ಯಾಂಕ್ ಅಧಿಕಾರಿಗಳಿಗೆ ಸಹಾಯ ಮಾಡಬೇಕು.
  8. ಅಭಿವೃದ್ಧಿ ಕಾರ್ಯಕರ್ತರಿಗೆ ತರಬೇತಿ, ಫಲಾನುಭವಿಗಳ ಆಯ್ಕೆ, ಸಾಲ ವಿತರಣೆ ಮತ್ತು ಮರುಪಾವತಿ ಸಮಯಗಳಲ್ಲಿ ಅಲ್ಲಿನ ಪ್ರಾದೇಶಿಕ ಸಂಸ್ಥೆಗಳನ್ನು ಅಧಿಕಾರಿಗಳು ತೊಡಗಿಸಿಕೊಳ್ಳಬೇಕು.
 
ಆಕರ ಗ್ರಂಥಗಳು
  1. ಕರ್ನಾಟಕ ಸರಕಾರ. (1980-81, 82-83, 83-84, 85-86). `ವಿಶೇಷ ಘಟಕ ಯೋಜನೆ, ಸಮಾಜಕಲ್ಯಾಣ ಇಲಾಖೆ.
  2. ಕರ್ನಾಟಕ ಸರಕಾರ. (1983-87). `ಐದು ವರ್ಷದ ಸಾಧನೆ, ವಾರ್ತಾ ಮತ್ತು ಪ್ರಚಾರ ಇಲಾಖೆ.
  3. ಕರ್ನಾಟಕ ಸರಕಾರ. (1988-89, 89-90, 91-92, 92-93, 93-94). `ವಿಶೇಷ ಘಟಕ ಯೋಜನೆ, ಸಮಾಜಕಲ್ಯಾಣ ಇಲಾಖೆ.
  4. ಕರ್ನಾಟಕ ಸರಕಾರ. (90-95, 92-97). `ಪರಿಶಿಷ್ಟ ಜಾತಿಯವರ ಕಲ್ಯಾಣ, ಸಮಾಜಕಲ್ಯಾಣ ಇಲಾಖೆ.
  5. ಮೈಸೂರು ಸರಕಾರ. (1972). ಮೈಸೂರು ರಾಜ್ಯದ ಗೆಜೆಟಿಯರ್, ಬಳ್ಳಾರಿ ಜಿಲ್ಲೆ.
  6. ಖಂಡೋಬಾ ಪಿ.ಕೆ. (1991). `ಕರ್ನಾಟಕದ ಲಂಬಾಣಿಗಳು, ತೇಜಸಿಂಗ್ ರಾಥೊಡ್ ಮೆಮೋರಿಯಲ್ ಟ್ರಸ್ಟ್, ಗುಲಬರ್ಗಾ.
  7. ನಾಯಕ್ ಡಿ.ಬಿ. (1994). `ಲಂಬಾಣಿ ಸಂಸ್ಕೃತಿ, ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು.
  8. ಚಿದಾನಂದ ಮೂರ್ತಿ. (1970). `ಸಂಶೋಧನಾ ತರಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.
  9. ಜಿಲ್ಲಾ ವಾರ್ತಾ ಮತ್ತು ಪ್ರಚಾರಾಧಿಕಾರಿ. (1997). ಬಳ್ಳಾರಿ ಜಿಲ್ಲಾ ಅಂಕಿಅಂಶಗಳ ನೋಟ, 1991-96, ಜಿಲ್ಲಾ ಪಂಚಾಯತ್, ಬಳ್ಳಾರಿ.
  10. ಜಿಲ್ಲಾ ಪಂಚಾಯತ್. (93-94). ವಿವಿಧ ಯೋಜನೆಗಳ ವಿವರದ ಕೈಪಿಡಿ, ಜಿಲ್ಲಾ ಪಂಚಾಯತ್, ಬಳ್ಳಾರಿ

ಸಿ.ಆರ್. ಗೋಪಾಲ್
ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸ್ಮಯೋರ್ (SMIORE)
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9



    Six-Days
    Labour Laws & Labour Codes Certification Program

    Know More

    Picture
    Know More

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    30,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    Social Work Foot Prints


    RSS Feed


SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • EDITOR'S BLOG
  • HR BLOG
  • PUBLICATION WITH US
  • TRANSLATION & TYPING
  • VIDEOS

TRAINING

  • CERTIFICATE TRAINING COURSES
  • TRAINING PROGRAMMES

nIRATHANKA cLUB hOUSE

  • NIRATHANKA CLUB HOUSE

JOB

  • CURRENT JOB OPENINGS
  • FIND FREELANCE JOBS​
  • FREELANCE SPOKEN ENGLISH TRAINER
  • FREELANCE TRANSLATOR

HR SERVICES

  • ​COMPLIANCE SUPPORT
  • CONSULTING
  • CONTRACT LABOUR
  • CONTRACT LABOUR LICENCE & CONSULTING
  • DOMESTIC ENQUIRY
  • DRAFTING OF LEGAL DOCUMENTS
  • HR AND COMPLIANCE AUDIT
  • HUMAN RESOURCE PROCESS AND POLICY FORMULATION
  • ISO CERTIFICATION​
  • LEGAL ASSISTANCE
  • ORGANISATIONAL AND JOB DESIGNS
  • PAYROLL
  • RECRUITMENT & STAFFING SERVICES
  • STAFFING - WHITE & BLUE COLLAR
  • ​STANDING ORDERS CERTIFICATION
  • ​TRADEMARK

OTHER SERVICES

  • ​APARTMENT RESIDENTS WELFARE ASSOCIATION REGISTRATION
  • LICENCES AND NOCs FROM FIRE, AGRICULTURE, STATE EXCISE DEPARTMENTS
  • MSME REGISTRATION
  • ​NGO / TRUST / SOCIETY / ASSOCIATION, COOPERATIVE SOCIETY & PVT. LTD. COMPANY REGISTRATION
  • ​SHOPS & ESTABLISHMENT REGISTRATION​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe



JOIN OUR ONLINE GROUPS


JOIN WHATSAPP BROADCAST


ONLINE STORE


Copyright Niruta Publications 2021,    Website Designing & Developed by: www.mhrspl.com