ಯಾವುದೇ ಸ್ವಯಂ ಸೇವಾ ಸಂಸ್ಥೆ ಬೇರೆ ಬೇರೆಯವರಿಂದ ಸಹಾಯ ಹಸ್ತ ಚಾಚುವುದು ಸಹಜವಾಗಿದೆ. ಹೀಗೆ ಸಹಾಯ ಬೇಡಲು ಹೋದಾಗ ಎಲ್ಲವೂ ದೊಡ್ಡ ಪ್ರಮಾಣದಲ್ಲಿ ದಾನ ಸಿಗುತ್ತದೆ ಎಂದು ನಿರೀಕ್ಷಿಸುವುದು ಮಾತ್ರ ತಪ್ಪಾಗುತ್ತದೆ. ಎಲ್ಲಾ ರೀತಿಯ ಕೊಡುಗೈ ದಾನಿಗಳು ಇರುತ್ತಾರೆ. ಆದರೆ ಯಾವುದೇ ರೀತಿಯಲ್ಲಿ ಸಿಕ್ಕ ದಾನವನ್ನು (ಅದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ) ಅಚ್ಚು ಕಟ್ಟಾಗಿ ಸದ್ವಿನಿಯೋಗ ಮಾಡಿಕೊಳ್ಳುವ ಜಾಣ್ಮೆ ಇರಬೇಕು. ಅದೇ ರೀತಿ ಒಂದು ಸಂಸ್ಥೆಗೆ ನೀಡಿದ ದಾನವನ್ನು ಹೇಗೆ ಸದ್ಬಳಕೆ ಮಾಡಿದರು, ಅಂದರೆ ಕಸದಿಂದ ರಸ ಮಾಡುವ ಜಾಣ್ಮೆಯ ಕುರಿತಾದ ಒಂದು ಕಥೆ ಇಲ್ಲಿದೆ. ನಮ್ಮ ಸಂಸ್ಥೆಗೆ ಅನೇಕರು ವಿವಿಧ ರೀತಿಯಲ್ಲಿ ದಾನ ಮಾಡುವರು. ಒಬ್ಬ ಬಟ್ಟೆ ವ್ಯಾಪಾರಿ ತನ್ನಲ್ಲಿರುವ ಬಟ್ಟೆಯನ್ನು ದಾನವಾಗಿ ನೀಡುವುದಾಗಿ ತಿಳಿಸಿದ. ಆತ ನಿಗದಿ ಪಡಿಸಿದ ದಿನ ನಾನು ಮತ್ತು ನನ್ನ ಸ್ನೇಹಿತೆ ಆತನ ಅಂಗಡಿಗೆ ಹೋದೆವು. ನಮಗೆ ಆತ್ಮೀಯವಾದ ಸ್ವಾಗತ ದೊರೆಯಿತು. ಕುಡಿಯಲು ಟೀ ನೀಡಿ ಸತ್ಕರಿಸಿದರು. ಬಹಳ ಹೊತ್ತು ನಾವು ಕುಳಿತು, ಆತನು ನೀಡುವ ದಾನದ ಬಗ್ಗೆ ಯೋಚಿಸಿದೆವು. ಆತನ ಆತ್ಮೀಯತೆ, ಸತ್ಕಾರಗಳನ್ನು ನೋಡಿ ನಮಗೆ ದಾನವಾಗಿ ಥಾನ್ ಬಟ್ಟೆಗಳನ್ನೇ ನೀಡಬಹುದೆಂದು ಲೆಕ್ಕಾಚಾರ ಹಾಕಿದೆವು. ಆದರೆ ನಮ್ಮ ಲೆಕ್ಕಾಚಾರ ತಪ್ಪಿತು.
ಬಹಳ ಹೊತ್ತು ನಮ್ಮನ್ನು ಕಾಯಿಸಿದ ನಂತರ, ಒಬ್ಬ ವ್ಯಕ್ತಿ ತುಂಡು ಬಟ್ಟೆಗಳ ಒಂದು ದೊಡ್ಡ ಮೂಟೆಯನ್ನು ಹೊತ್ತು ತಂದು ನಮ್ಮ ಮುಂದೆ ಹಾಕಿದ. ನೋಡಿದರೆ ಮೂಟೆಯಲ್ಲಿ ವಿವಿಧ ಅಳತೆಯ ಒರಟಾದ ತುಂಡು ಬಟ್ಟೆಗಳಿದ್ದವು. ಧರ್ಮಕ್ಕೆ ಕೊಟ್ಟ ಬಟ್ಟೆ, ಮೊಳಹಾಕೋದು ಬೇಡ ಅಂತ ಮನದಲ್ಲಿ ಅಂದುಕೊಂಡು ಮರುಮಾತಿಲ್ಲದೆ ಆ ಮೂಟೆಯನ್ನು ಹೊತ್ತು ತಂದು ಸಂಸ್ಥೆಯ ಒಂದು ಕೋಣೆಯಲ್ಲಿಟ್ಟೆವು. ದಾನ ನೀಡಿದವನ ಯೋಗ್ಯತೆ ಏನೆಂದು ತಿಳಿಯಿತು. ಕೆಲವು ದಿನಗಳ ನಂತರ ನನ್ನ ಪರಿಚಯದವರೊಬ್ಬರು ಒಬ್ಬ ಹೆಂಗಸನ್ನು ನನ್ನ ಬಳಿಗೆ ಕರೆತಂದರು. ಆಕೆ ವಿಧವೆ. ಎರಡು ಹೆಣ್ಣು ಮಕ್ಕಳ ತಾಯಿ. ಹೆತ್ತವರಿಲ್ಲ. ಅಣ್ಣನ ಮನೆಯ ಹಂಗಿನ ಬಾಳು ಇಷ್ಟವಾಗಲಿಲ್ಲ. ವಿಪರೀತ ಮಡಿ ಮಾಡುವ ಹೆಂಗಸು. ಆಕೆಗೆ ತಿಳಿದಿದ್ದ ವಿದ್ಯೆ ಬಟ್ಟೆ ಹೊಲಿಯುವುದು. ಸ್ವತಂತ್ರವಾಗಿ ಜೀವನ ನಡೆಸಲು ಆಕೆಗೆ ಒಂದು ಕೆಲಸ ಬೇಕಾಗಿತ್ತು. ಇಬ್ಬರು ಹೆಣ್ಣು ಮಕ್ಕಳನ್ನು ಬೆಳಸಿ, ಓದಿಸಿ, ಮದುವೆ ಮಾಡುವ ಜವಾಬ್ದಾರಿ ಆಕೆಯ ಹೆಗಲ ಮೇಲಿತ್ತು. ಆಕೆಗೆ ಯಾವ ರೀತಿ ಸಹಾಯ ಮಾಡಬಹುದೆಂದು ಯೋಚಿಸಿದೆ. ಆಗ ನನ್ನ ಮನದಲ್ಲಿ ಒಂದು ಯೋಚನೆ ಹೊಳೆಯಿತು. ಬಟ್ಟೆಯ ವ್ಯಾಪಾರಿ ದಾನವಾಗಿ ನೀಡಿದ್ದ ತುಂಡು ಬಟ್ಟೆಗಳನ್ನು ಉಪಯೋಗಿಸಿ ಸಿದ್ಧ ಉಡುಪುಗಳನ್ನು ತಯಾರಿಸಲು ಆಕೆಗೆ ಹೇಳಿದೆ. ಆಕೆಗೆ ಒಂದು ಜಾಗ ಕೊಟ್ಟು, ಅಲ್ಲಿ ಬಟ್ಟೆ ಹೊಲಿಯುವ ಯಂತ್ರ, ದಾರ, ಸೂಜಿ ಗುಂಡಿಗಳು ಮುಂತಾದವುಗಳನ್ನು ಒದಗಿಸಿ, ಕೆಲಸ ಪ್ರಾರಂಭಿಸಲು ತಿಳಿಸಿದೆ. ಯಾವ ನಮೂನೆಯ ಉಡುಪುಗಳನ್ನು ಹೊಲಿಯಬೇಕೆಂಬುದನ್ನು ತಿಳಿಸಿದೆ. ಆಕೆ ದಿನಕ್ಕೆ ಎಷ್ಟು ಉಡುಪು ಹೊಲಿಯುತ್ತಾಳೋ ಅದಕ್ಕನುಗುಣವಾಗಿ ಕೂಲಿಯನ್ನು ನೀಡಲಾಗುತ್ತಿತ್ತು. ಆಕೆ ಸಿದ್ಧ ಪಡಿಸಿದ ಉಡುಪುಗಳನ್ನು ಮಾರಿದಾಗ ಒಂದಿಷ್ಟು ಪುಡಿಕಾಸು ಸಂಗ್ರಹವಾಯಿತು. ಆಕೆಗೆ ಒಂದು ಕೆಲಸ ಸಿಕ್ಕಂತಾಯಿತು. ಉಡುಪುಗಳನ್ನು ಮಾರಿದ್ದರಿಂದ ಆಕೆಗೆ ನೀಡಿದ ಕೂಲಿಯೂ ಸಂಸ್ಥೆಗೆ ವಾಪಸ್ಸಾಯಿತು. ಆ ತುಂಡು ಬಟ್ಟೆಗಳಿಗೆ ಮೋಕ್ಷ ಸಿಕ್ಕಿತು. ಇದಾದ ನಂತರ ಆಕೆಗೆ ಬೇರಾವ ಕೆಲಸ ನೀಡಬೇಕೆಂಬ ಚಿಂತೆ ಶುರುವಾಯಿತು. ನಮ್ಮ ಸಂಸ್ಥೆಯಲ್ಲಿ ಅನಾಥ ಮಕ್ಕಳಿಗೆ ಆಶ್ರಯ ನೀಡುವ ಒಂದು ವಿಭಾಗವಿದೆ. ಅಲ್ಲಿ ಕೆಲಸ ಮಾಡಲು ಆಕೆಗೆ ಹೇಳಿದಾಗ ಮೊದಲು ಹಿಂಜರಿದಳು. ಜಾತಿ ಕುಲ ಇಲ್ಲದ ಮಕ್ಕಳ ಸೇವೆ ಮಾಡಲು ಆಕೆ ಹಿಂದೆ ಮುಂದೆ ನೋಡಿದಳು. ನಾನು ಆಕೆಗೆ ಬುದ್ಧಿ ಹೇಳಿ, ಆ ಕೆಲಸ ಮಾಡಲು ನಿಯಮಿಸಿದೆ. ನಿಧಾನವಾಗಿ ಆ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಳು. ಆಕೆಯ ಜೀವನಕ್ಕೆ ಒಂದು ದಾರಿಯಾಯಿತು. ಇಬ್ಬರು ಮಕ್ಕಳನ್ನು ಓದಿಸಿ, ಒಳ್ಳೆಯ ಕಡೆ ಮದುವೆಯನ್ನೂಮಾಡಿದಳು. ಆಕೆಯ ಮನಸ್ಸಿಗೆ ಶಾಂತಿ ಸಮಾಧಾನ ಸಿಕ್ಕಿತು. ನನಗೂ ಸಂತೋಷವಾಯಿತು. ಶ್ರೀಮತಿ ಪದ್ಮಾಸುಬ್ಬಯ್ಯ `ಸಂಕಲ್ಪ' 608, 10ನೇ ಅಡ್ಡರಸ್ತೆ, 7ನೇ ಘಟ್ಟ, ಜಯನಗರ (ಪಶ್ಚಿಮ), ಬೆಂಗಳೂರು-560070
0 Comments
Leave a Reply. |
Categories
All
MHR LEARNING ACADEMYGet it on Google Play store
30,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGnIRATHANKA cLUB hOUSEJOB |
HR SERVICES
OTHER SERVICES |
NIRATHANKAPOSHOUR OTHER WEBSITESSubscribe |