Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಕುಲಾಲ ಸಮುದಾಯದ ಒಳಜಾತಿಯಲ್ಲಿನ ಮೂಢನಂಬಿಕೆಯ ಬಗೆಗಿನ ಒಂದು ಅಧ್ಯಯನ

6/21/2017

0 Comments

 
Picture
ಸಾರಾಂಶ
ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗಳ ವಾಸ್ತವ್ಯವಿರುವ ಕುಲಾಲರ ಯಾನೆ ಮೂಲ್ಯರ ಬಗೆಗಿನ ಒಂದು ಅಧ್ಯಯನವು ಇದಾಗಿದೆ. ಕುಲಾಲ ಸಮುದಾಯದಲ್ಲಿ ಒಳಜಾತಿಗಳಿದ್ದು ಅವು ಅವುಗಳದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಅದರಲ್ಲಿ ಶೋಷಣೆಗೊಳಪಟ್ಟ ಉಪ್ಯಾನ್ ಒಳಜಾತಿಯ ಬಗೆಗೆ ನಡೆಸಿದ ಅಧ್ಯಯನವು ಇದಾಗಿದ್ದು, ಕುಲಾಲ ಸಮಾಜದ ತಪ್ಪು ಕಲ್ಪನೆಯನ್ನು ಹೊಡೆದೋಡಿಸುವಲ್ಲಿ ಈ ಅಧ್ಯಯನದ ಪಾತ್ರ ಪ್ರಮುಖವಾದುದೂ, ಕುಲಾಲ ಸಮುದಾಯದ ಹಿರಿಯರಲ್ಲಿ, ಮುಖಂಡರಲ್ಲಿ ಹಾಗೂ ಕುಲಾಲ ಸಮಾಜದ ಉಪ್ಯಾನ್ ಒಳಜಾತಿಯ ಹೆಣ್ಣು ಮಕ್ಕಳಿಂದ ಅಧ್ಯಯನಕ್ಕೆ ಬೇಕಾದ ಮಾಹಿತಿಯನ್ನು ಸಂದರ್ಶಕ ಸ್ನೇಹಿ ಸಂದರ್ಶನದ ಮೂಲಕ ಸಂಗ್ರಹಿಸಲಾಗಿದೆ. ಈ ಅಧ್ಯಯನವು ಮುಂದಿನ ಅಧ್ಯಯನಕ್ಕೆ ಪೂರಕವಾದ ಪ್ರಶ್ನೆ ಮತ್ತು ವೇದಿಕೆಯನ್ನು ಒದಗಿಸಿರುವುದರಿಂದ ಇದರ ಅಧ್ಯಯನ ವ್ಯಾಪ್ತಿ ವಿಶಾಲವಾದುದಾಗಿದೆ. ಮೂಢನಂಬಿಕೆಯನ್ನು ಮೀರಿದ ಕೆಲವು ಕುಲಾಲ ಕುಟುಂಬಗಳು ಈಗಲೂ ಉತ್ತಮ ಜೀವನವನ್ನು ನಡೆಸುತ್ತಿರುವುದರಿಂದ ಮುಂದೆ ಈ ಮೌಢ್ಯತೆಯು ತೆರೆಮರೆಗೆ ಸರಿಯಬಹುದೆಂದು ಲೇಖಕರ ಅಭಿಪ್ರಾಯದಾಗಿದೆ.
​
ಪ್ರಮುಖ ಪದಗಳು:- ಒಳಜಾತಿ, ಉಪ್ಯಾನ್ ಬರಿ, ಉಪ್ಪು, ಸಾಧುಸ್ವಭಾವ, ತುಳು
ಪೀಠಿಕೆ
ಪ್ರಾಚೀನ ಕಾಲದಲ್ಲಿ ಸಮಾಜದಲ್ಲಿ ಮೇಲು ಕೀಳುಗಳೆಂಬ ಭಾವನೆ ಬಲವಾಗಿ ಬೇರೂರಿತ್ತು. ಆಗಿನ ಕಾಲದಲ್ಲಿ ಮೇಲುಜಾತಿಯವರೆನಿಸಿದ್ದ ಜೈನರು, ಪೂಜೆ ಮಾಡುವ ಸ್ಥಾನದಲ್ಲಿ ಬ್ರಾಹ್ಮಣರಿಗೂ, ಅಡುಗೆ ಕೆಲಸವನ್ನು ಕುಂಬಾರರಿಗೂ, ಅಂಗಳದ ಕೆಲಸವನ್ನು ಕೊಟ್ಟಾರಿಯರಿಗೂ, ದನದ ಕೊಟ್ಟಿಗೆಯ ಕೆಲಸವನ್ನು ಹರಿಜನರಿಗೂ ಹಂಚಿದರು. ಕಾಲಕ್ರಮೇಣ ಅಡುಗೆ ಮಾಡಲು ಬೇಕಾದ ಮಡಕೆಯನ್ನು ತಯಾರಿಸಲು ತೊಡಗಿದ ಕುಂಬಾರರಿಗೆ ಅದೇ ಕುಲಕಸುಬಾಯಿತು. ಪ್ರಾಚೀನ ಕಾಲದಲ್ಲಿ ಕುಂಬಾರರೆಂದು ಕರೆಸಿಕೊಳ್ಳುತ್ತಿದ್ದರೂ, ಕಾಲಕ್ರಮೇಣ ತುಳುವಿನಲ್ಲಿ ಓಡಾರಿಗಳು, ಮೂಲ್ಯರು ಹಾಗೂ ಇದೀಗ ಅವರು ಕುಲಾಲರೆಂದೂ ಕರೆಯಲ್ಪಡುತ್ತಿದ್ದಾರೆ. ಕುಲಾಲ ಸಮಾಜದಲ್ಲಿ ಪ್ರತಿ ಕುಟುಂಬಗಳಿಗೂ ಒಳಜಾತಿ (ಬರಿ) ಎಂಬ ಕಟ್ಟುಪಾಡಿದೆ. ಕುಲಾಲ ಸಮಾಜದ ಆಡುಭಾಷೆ ತುಳುವಾಗಿರುವುದರಿಂದ ಒಳಜಾತಿಗಳೆಲ್ಲವೂ ತುಳುವಿನಲ್ಲೇ ಪ್ರಚಲಿತವಾಗಿದೆ. ಕೆಲವು ಒಳಜಾತಿಗಳು ಯಾವುದೆಂದರೆ, ಬಂಗೇರ, ಗುಂಡೇರ್, ಗುಜರನ್. ಕರ್ಮರನ್, ಹರಿಕೆನ್ನ, ಬಂಜನ್, ಸಿರಿಯಾನ್, ಕುಂದರನ್, ಸಾಲ್ಯಾನ್, ಅಂಚನ್, ಉಪ್ಯಾನ್ ಬರಿ ಇತ್ಯಾದಿಗಳು (ಚೈತ್ರಾ ವಿಟ್ಲ, 2009).

ಶತಶತಮಾನಗಳಿಂದ ಕುಂಬಾರಿಕೆಯನ್ನು ಕುಲವೃತ್ತಿಯಾಗಿ ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದ ಕುಲಾಲ ಸಮಾಜ ಕಳೆದೆರಡು ದಶಕಗಳ ಹಿಂದೆ ತೀವ್ರ ಸಂಕಷ್ಟದಲ್ಲಿತ್ತು. ಜಾಗತೀಕರಣ ಮತ್ತು ನಗರೀಕರಣದ ಸುಳಿಗೆ ಸಿಕ್ಕು ಕುಂಬ್ಯೋದ್ಯಮವನ್ನೇ ನೆಚ್ಚಿದ್ದ ಮಂದಿ ಅತಂತ್ರ ಸ್ಥಿತಿಯಲ್ಲಿದ್ದರು. ಇವೆಲ್ಲದರ ಜೊತೆಗೆ ಭೂ ಸುಧಾರಣೆಯ ಕಾನೂನು ಜಾರಿಯಾದ ನಂತರದ ದಿನಗಳ ಭೂವ್ಯಾಜ್ಯಗಳೂ ಕೂಡಾ ಈ ಜನರನ್ನು ಹೈರಾಣಾಗಿಸಿತ್ತು, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದ ನಮ್ಮ ಯುವಕರಲ್ಲಿ ಆತ್ಮಸ್ಥೈರ್ಯ ತುಂಬಿ ಸಮಾಜದ ಮುಖ್ಯವಾಹಿನಿಯಲ್ಲಿ ಸೇರುವಂತೆ ಪ್ರೇರೇಪಿಸಲು ಸಂಘಟನೆಯೊಂದರ ಅವಶ್ಯಕತೆ ಇದೆ. (ರಮಾನಾಥ, ವಿಟ್ಲ, 2009)

ಕುಲಾಲ ಸಮುದಾಯದ ಜನರು ಕುಂಬಾರಿಕೆಯ ಮೂಲಕ ಸಮಯಕ್ಕೆ ಸರಿಯಾಗಿ ತಮ್ಮ ಜೀವನವನ್ನು ಬದಲಾಯಿಸುತ್ತಾ ಬರುವಲ್ಲಿ ಎಡವಿದರು. ಹಿಂದಿನ ಜೀವನಕ್ರಮ ಮತ್ತು ಕಟ್ಟುಪಾಡುಗಳ ಆಚರಣೆಯಿಂದ ಕುಲಾಲ ಸಮುದಾಯದ ಮಹಿಳೆಯರು ಆಧುನಿಕ ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾದರು, ಈಗಲೂ ಹೆಣ್ಣು ಮಕ್ಕಳು ಋತುಮತಿಯಾದಾಗ ಅವರ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವ ಕೆಲವು ಕುಟುಂಬಗಳನ್ನು ನೋಡಬಹುದು (ಕಜೆಕಾರ್, 2001). ಶರ್ಮ, (1986) ಅವರ ಅಭಿಪ್ರಾಯದಂತೆ, ಕುಂಬಾರರ ಬಗೆಗಿನ ಅಧ್ಯಯನವು ತುಂಬಾ ಮೃದು ಧೋರಣೆಯಿಂದ ಕೂಡಿದ್ದರೂ ಕರ್ನಾಟಕ ಅಥವಾ ಬೇರೆ ರಾಜ್ಯಗಳಲ್ಲಿ ಕುಂಬಾರರನ್ನು ಕುಲಾಲ ಸಮುದಾಯವೆಂದು ಒಪ್ಪಿಕೊಳ್ಳುವುದನ್ನು ಕಾಣಬಹುದಾಗಿದೆ.

ಕುಲಾಲ ಸಮುದಾಯದವರು ಮೊದಲು ಕುಂಬಾರಿಕೆಯನ್ನು ಸಂಪ್ರದಾಯಬದ್ಧ ವೃತ್ತ್ತಿಯನ್ನಾಗಿ ಸ್ವೀಕರಿಸಿದ್ದರು. ಹಾಗಾಗಿ ಕುಲಾಲ ಸಮುದಾಯದವರು ಕುಂಬಾರರೆಂದು ಕರೆಯಲ್ಪಡುತ್ತಿದ್ದರು. ಕುಂಬಾರ ಎನ್ನುವ ಪದವು ಸಂಸ್ಕೃತ ಭಾಷೆಯ ಕುಂಬಾರ ಪದದಿಂದ ಉಗಮಗೊಂಡಿದೆ. ಕುಂಬಾಕಾರ ಅನ್ನುವ ಪದವು ಮಣ್ಣಿನಿಂದ ಮಡಕೆ ಮಾಡುವವನು ಅನ್ನೋ ಅರ್ಥವನ್ನ ಕೊಡುತ್ತದೆ (ಥರ್ಸ್ಟನ್ 1975). ಕುಂಬಾರ ಮತ್ತು ಕುಶಾವರರು ಮೂಲತಃ ಒಂದೇ ಜಾತಿಯವರಾಗಿದ್ದು ಇದೀಗ ಎರಡು ಮತಗಳಾಗಿ ವಿಭಜನೆಗೊಂಡಿದ್ದಾರೆ. ಈಗ ಅವರನ್ನು ಕುಶಾನರು ಮತ್ತು ಉತ್ತರ ತಮಿಳು ಜನರೆಂದು ಕರೆಯುತ್ತಿದ್ದಾರೆ. ಇವರ ಆಚಾರ-ವಿಚಾರ ಹಾಗೂ ಸಂಪ್ರದಾಯಗಳು ಒಂದೇ ಆಗಿದ್ದರೂ ಇವರ ಮಧ್ಯೆ ವಿವಾಹಗಳು ಮಾತ್ರ ನಿಷಿದ್ದ ಎಂದು ಇತಿಹಾಸಕಾರರಾದ ಸ್ಟುವರ್ಟ್‍ ಅಭಿಪ್ರಾಯ ಪಡುತ್ತಾರೆ.

ಪ್ರಸ್ತುತ ಅಧ್ಯಯನವು ಕುಲಾಲ ಸಮುದಾಯದ ಒಳಜಾತಿಗಳ ಬಗ್ಗೆ, ಅದರಲ್ಲೂ ಉಪ್ಯಾನ್ ಬರಿ ಅನ್ನೋ ಒಳಜಾತಿಯ ಹೆಣ್ಣು ಮಕ್ಕಳ ಬಗೆಗೆ ಸಮುದಾಯವು ಹೊಂದಿರುವ ತಪ್ಪು ಕಲ್ಪನೆ, ಮೂಢನಂಬಿಕೆ ಮತ್ತು ಆ ಒಳಜಾತಿಯ ಪ್ರಸ್ತುತ ಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ.
 
ಅಧ್ಯಯನದ ಮುಖ್ಯ ಉದ್ದೇಶಗಳು:
  1. ಕುಲಾಲ ಸಮುದಾಯದ ಒಳಜಾತಿಗಳ ಬಗ್ಗೆ ತಿಳಿಯುವುದು.
  2. ಉಪ್ಯಾನ್ ಬರಿಯ ಕುರಿತು ಮಾಹಿತಿಯನ್ನು ಸಂಗ್ರಹಿಸುವುದು.
  3. ಉಪ್ಯಾನ್ ಬರಿಯ ಹೆಣ್ಣುಮಕ್ಕಳ ಬಗೆಗಿನ ತಪ್ಪು ಕಲ್ಪನೆಯನ್ನು ಅರಿಯುವುದು.
  4. ಉಪ್ಯಾನ್ ಒಳಜಾತಿಯ ಹೆಣ್ಣುಮಕ್ಕಳ ಪ್ರಸ್ತುತ ಸ್ಥಿತಿಯನ್ನು ತಿಳಿಯುವುದು.
  5. ಕುಲಾಲ ಸಮುದಾಯದ ಈ ಮೂಢನಂಬಿಕೆಯ ಸಾಧಕ ಭಾಧಕದ ಬಗ್ಗೆ ತಿಳಿದುಕೊಂಡು, ಅದು ತಪ್ಪು ಎಂಬುದನ್ನು ಎತ್ತಿ ತೋರಿಸುವುದು.
 
ಅಧ್ಯಯನದ ಕಾರ್ಯ ವಿಧಾನ
ಪ್ರಸ್ತುತ ಅಧ್ಯಯನವು ಭಾರತ ದೇಶದ ಕರ್ನಾಟಕ ರಾಜ್ಯದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ವಾಸಿಸುತ್ತಿರುವ ಕುಲಾಲ ಸಮುದಾಯದ ಒಳಜಾತಿ ಹಾಗೂ ಉಪ್ಯಾನ್ ಬರಿಯ ಮೂಢನಂಬಿಕೆಯ ಮೇಲೆ ಬೆಳಕು ಚೆಲ್ಲುತ್ತದೆ. ಈ ಅಧ್ಯಯನವು ಮಾನವ ಅಭಿವೃದ್ಧಿಯ ಸಿದ್ಧಾಂತದ ಮೇಲೆ ಅವಲಂಭಿತವಾಗಿದ್ದು, ಕುಲಾಲ ಸಮುದಾಯದ ಅಭಿವೃದ್ಧಿಗೆ ಒತ್ತುನೀಡುವಲ್ಲಿ ಸಹಕಾರಿಯಾಗಿದೆ. ಈ ಅಧ್ಯಯನವು ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿದ್ದು ಸಂದರ್ಶಕ ಸ್ನೇಹಿ (convenient interview) ಸಂದರ್ಶನದ ಮೂಲಕ ಮಾಹಿತಿಯನ್ನು ಕಲೆಹಾಕಲಾಗಿದೆ. ಈ ಅಧ್ಯಯನವು ವಿವರಣಾತ್ಮಕ ಗುಣಸ್ವಾಭಾವವನ್ನು (Descriptive nature) ಹೊಂದಿದ್ದು ಅಧ್ಯಯನದ ವಿಷಯ ವಸ್ತುವಿನ ಮೇಲೆ ಬೆಳಕು ಚೆಲ್ಲುತ್ತದೆ. ಸಂದರ್ಶನಕ್ಕೆ ಕುಲಾಲ ಸಮುದಾಯದ ಹಿರಿಯರನ್ನು ಆಯ್ಕೆ ಮಾಡಲಾಗಿದ್ದು, ಅವರ ಅನುಭವದ ಮಾಹಿತಿಯನ್ನು ಅಧ್ಯಯನದಲ್ಲಿ ಕಲೆಹಾಕಲಾಗಿದೆ.

ಅಧ್ಯಯನದ ವಸ್ತು ವಿಷಯ:
ಈ ಅಧ್ಯಯನವು ಭಾರತ ದೇಶದ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಎರಡು ಜಿಲ್ಲೆಗಳಲ್ಲಿ ವಾಸ್ತವ್ಯವಿರುವ ಕುಲಾಲರ ಯಾನೆ ಮೂಲ್ಯರ ಜೀವನ ಕ್ರಮದ ಮೇಲೆ ಬೆಳಕು ಚೆಲ್ಲುತ್ತದೆ. ಕುಲಾಲ ಸಮುದಾಯದವರು ಪ್ರಾಮಾಣಿಕರು ಹಾಗೂ ಸಹನಾ ಶೀಲರು ಎಂಬ ನಂಬಿಕೆಯು ಸಮಾಜದಲ್ಲಿ ಬೇರೂರಿದ್ದೂ, ಆ ಸಮುದಾಯದಲ್ಲಿ ನಡೆಯುವ ಒಳಜಾತಿಯಲ್ಲಿನ ಮೌಢ್ಯತೆಯು ಈ ಅಧ್ಯಯನದಲ್ಲಿ ಚರ್ಚಿತವಾಗಿದೆ. ಹೆಣ್ಣಿಗೆ ಅತೀ ಹೆಚ್ಚು ಗೌರವಯುತವಾದ ಸ್ಥಾನವನ್ನು ಕೊಡುವ ಕುಲಾಲ ಸಮುದಾಯವು ಉಪ್ಯಾನ್ ಒಳಜಾತಿಯ ಹೆಣ್ಣು ಮಕ್ಕಳಿಗೆ ಅನ್ಯಾಯವೆಸಗುತ್ತಿದೆ. ತಂಗಿ, ಅಕ್ಕ, ತಾಯಿ ಸ್ಥಾನಕ್ಕೆ ಮಹತ್ವ ಮತ್ತು ಗೌರವ ಸ್ಥಾನ ನೀಡುವ ಕುಲಾಲ ಸಮುದಾಯವು ಉಪ್ಯಾನ್ ಒಳಜಾತಿಯ (ಬರಿ) ಹೆಣ್ಣುಮಕ್ಕಳನ್ನು ಸಮುದಾಯದಲ್ಲಿ ನೋಡುವ ದೃಷ್ಟಿಯು ವಿಭಿನ್ನವಾಗಿದೆ. ಹಾಗಂತ ಅವರ ಮೇಲೆ ಗೌರವವಿಲ್ಲವೆಂದರ್ಥವಲ್ಲ. ಅವರಿಗೂ ತಾಯಿ, ಅಕ್ಕ, ತಂಗಿಯ ಸ್ಥಾನವನ್ನು ನೀಡಿ ಗೌರವದಿಂದ ನೋಡಿಕೊಳ್ಳುತ್ತಿದ್ದಾರೆ. ಆದರೆ ವಿವಾಹದ ವಿಷಯ ಬಂದಾಗ ಉಪ್ಯಾನ ಬರಿಯ ಹೆಣ್ಣುಮಕ್ಕಳಿಗೆ ಯಾವುದೇ ಪ್ರಾಶಸ್ತ್ಯ ನೀಡುವುದಿಲ್ಲ. ಈಗಲೂ ಸಮಾಜದಲ್ಲಿ ನಡೆಯುವ ಒಂದು ಮೂಢನಂಬಿಕೆಯ ಸೆಲೆ ಉಪ್ಯಾನ್ ಬರಿಯ ಹೆಣ್ಣುಮಕ್ಕಳಿಗೆ ನುಂಗಲಾರದ ತುತ್ತಾಗಿದೆ. ಹಾಗಾಗಿ ಈ ವಿಷಯ ಕುರಿತು ಮತ್ತು ಈಗ ಇರುವ ಸ್ಥಿತಿಗತಿಗಳ ಕುರಿತು ಕುಲಾಲ ಸಮುದಾಯದ ಹಿರಿಯ ವ್ಯಕ್ತಿಗಳನ್ನು ಸಂದರ್ಶನ ಮಾಡುವಾಗ ಸಿಕ್ಕಂತಹ ಮಾಹಿತಿ ಈ ಲೇಖನದ ವಸ್ತು ವಿಷಯವಾಗಿದೆ.
 
ಕುಲಾಲ ಸಮುದಾಯದ ಒಳಜಾತಿ(ಬರಿ)ಗಳು :-
ಕುಲಾಲ ಸಮುದಾಯದ ಜನರು ಕರ್ನಾಟಕ ರಾಜ್ಯದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ವಾಸ್ತವ್ಯವಿರುವುದು ಕಂಡುಬರುತ್ತಿದೆ. ಅವರ ಮಾತೃಭಾಷೆ ತುಳುವಾಗಿದ್ದು ಒಳಜಾತಿಗಳು ಕೂಡಾ ತುಳುಭಾಷೆಯಿಂದಲೇ ಕರೆಯಲ್ಪಡುತ್ತವೆ. ಕೆಲವೊಂದು ಒಳಜಾತಿಗಳು ಯಾವುದೆಂದರೆ ಬಂಗೇರ, ಗುಂಡೇರ್, ಗುಜರನ್, ಕರ್ಮೆರನ್, ಹರಿಕೆನ್ನ, ಬಂಜನ್, ಸಿರಿಯನ್, ಕುಂದರನ್, ಸಾಲ್ಯಾನ್, ಅಂಚನ್, ಉಪ್ಯಾನ್ ಬರಿ ಇತ್ಯಾದಿಗಳು (ಚೈತ್ರಾ ವಿಟ್ಲ 2009). ಈ ಒಂದೊಂದು ಹೆಸರು ಬರಲು ಒಂದೊಂದು ಕಥೆಗಳು ಕಾರಣವಾಗಿದ್ದು, ಉದ್ದೇಶಪೂರ್ವಕವಾಗಿ ವಿಂಗಡನೆ ಮಾಡಿದ್ದಲ್ಲ. ಒಂದು ಒಳಜಾತಿಯವರ ಮನೋಭಾವ, ಕಟ್ಟುಪಾಡು, ಮತ್ತು ಅವರ ಆಚಾರ ವಿಚಾರಗಳನ್ನು ಅನುಸರಿಸಿ ಒಳಜಾತಿಯನ್ನು (ಬರಿ) ರೂಪಿಸಲಾಗಿದೆ. ಆದರೆ ಈ ಒಳಜಾತಿಗಳು, ಪ್ರಭಾವ ಬೀರುವುದು ವೈವಾಹಿಕ ಸಂಬಂಧದಲ್ಲಿ ಮಾತ್ರ. ಬರಿ ತಪ್ಪಿ ಮದುವೆ ನಡೆಯದು. ಒಂದೇ ಒಳಜಾತಿಯ ಮಕ್ಕಳು ಅಣ್ಣ, ತಮ್ಮ, ಅಕ್ಕ, ತಂಗಿ ಅನ್ನುವ ಕಲ್ಪನೆಯಿದ್ದು; ಇದಕ್ಕೆ ಪೂರಕವಾಗಿ ಬಹಳಷ್ಟು ಸನ್ನಿವೇಶಗಳು ನಮಗೆ ಕಾಣಸಿಗುತ್ತದೆ, ವೈಜ್ಞಾನಿಕವಾಗಿ ಕುಲಾಲ ಸಮುದಾಯದವರು ಎಷ್ಟು ಮುಂದುವರಿದಿದ್ದಾರೆ ಅನ್ನೋ ವಿಷಯ ಕುಲಾಲ ಪೂರ್ವಕರು ಒಳಜಾತಿಯನ್ನು ವಿಂಗಡಿಸುವಾಗಿನ ರೀತಿಯನ್ನು ನೋಡಬಹುದು. ಒಂದುವೇಳೆ ಒಳಜಾತಿ (ಬರಿ) ಯನ್ನು ಮೀರಿ ಮದುವೆಯಾದಲ್ಲಿ ಅವರ ಮಕ್ಕಳು ಬುದ್ಧಿಮಾಂದ್ಯರಾಗಿ ಹುಟ್ಟುವುದನ್ನು ನಾವು ಸಮಾಜದಲ್ಲಿ ನೋಡಬಹುದು. ಅಂದರೆ ಒಂದೇ ವಂಶವಾಹಿನಿಯಲ್ಲಿ ಮದುವೆಯಾದಲ್ಲಿ ಒಂದೇ ರಕ್ತದ ಗುಣವಿರುವ ದಂಪತಿಯ ಮಗುವಿಗೆ ವಂಶವಾಹಿನಿ ರೋಗ ಅಥವಾ ಮಗುವಿನ ಬೆಳವಣಿಗೆಯಲ್ಲಿ ಕುಂಠಿತವನ್ನು ಕಾಣಬಹುದು. ಇದು ವೈದ್ಯಕೀಯ ಲೋಕದಲ್ಲಿ ದೃಢಪಟ್ಟ ವಿಷಯವೂ ಆಗಿರುವುದರಿಂದ ಕುಲಾಲ ಸಮಾಜದ ಪೂರ್ವಿಕರ ಜ್ಞಾನವೇನು ಎಂಬುದು ಇದರಿಂದ ವೇದ್ಯವಾಗುತ್ತದೆ. ಒಳಜಾತಿಗಳಿಗೆ ಶೋಷಣೆ ಎಂಬುದು ಇಲ್ಲ, ಆದರೆ ವಿವಾಹ ಸಂದರ್ಭದಲ್ಲಿ ಒಳಜಾತಿಗಳಿಗೆ ಬಹಳ ಮಹತ್ವದ ಸ್ಥಾನವನ್ನು ಕೊಡಲಾಗುತ್ತದೆ. ಈ ಸಂದರ್ಭದಲ್ಲಿ ಉಪ್ಯಾನ್ ಒಳಜಾತಿಯ ಹೆಣ್ಣುಮಕ್ಕಳನ್ನು, ಯಾವುದೋ ಮೂಢನಂಬಿಕೆಗೆ ಬಲಿಯಾಗಿ ಅವರನ್ನು ಮದುವೆಯಾಗಲು ತಿರಸ್ಕರಿಸುವ ಸಂಸ್ಕೃತಿಯನ್ನು ನಾವು ನೋಡಬಹುದಾಗಿದೆ, ಹಾಗಾಗಿ ಇದರ ಮರ್ಮವೇನು ಅವರ ಯೋಜನೆಯಲ್ಲಿ ಇರುವ ತಪ್ಪುಗಳೇನು ಎಂಬುದರ ಕುರಿತು ಈ ಅಧ್ಯಯನದಲ್ಲಿ ಪ್ರಮುಖವಾಗಿ ಚರ್ಚಿಸಲಾಗಿದೆ.
 
ಉಪ್ಯಾನ್ ಬರಿಯ ಕುರಿತು ಒಂದು ನೋಟ
ಕುಲಾಲ ಸಮುದಾಯದಲ್ಲಿ ಎಲ್ಲಾ ಒಳಜಾತಿಗಳಂತೆ (ಬರಿ) ಉಪ್ಯಾನ್ ಬರಿಯು ಒಂದು. ಈ ಒಳಜಾತಿಗೆ ನಿಷೇಧವಿಲ್ಲ. ಎಲ್ಲಾ ಒಳಜಾತಿಗಳ ಜನರಂತೆ ಇವರಿಗೂ ಸಮಾನ ಹಕ್ಕು, ಅಧಿಕಾರವಿದೆ. ಪ್ರತಿಯೊಂದು ಕುಲಾಲ ಜನರು ಏನೆಲ್ಲಾ ಸವಲತ್ತು, ಸೌಲಭ್ಯ ಸಮಾಜದಿಂದ ಪಡೆಯುತ್ತಾರೋ ಉಪ್ಯಾನ್ ಬರಿಗೂ ಇದು ದೊರೆಯುತ್ತದೆ. ವಿವಾಹ ವಿಷಯದಲ್ಲಿ ಮಾತ್ರ ಎಲ್ಲಾ ಒಳಜಾತಿಗಳಂತೆ ಇವರನ್ನು ನೋಡುವುದಿಲ್ಲ. ಹಾಗಂತ ಈ ಬರಿಗೆ ಯಾವುದೇ ಅಸ್ಪೃಶ್ಯತೆಯ ಗಂಧಗಾಳಿಯೂ ಇಲ್ಲ. ಈ ಒಳಜಾತಿಯ ಬಗೆಗಿರುವ ತಪ್ಪುಕಲ್ಪನೆ ಮಾತ್ರ ಹೆಣ್ಣು ಮಕ್ಕಳಿಗೆ ಶಾಪವಾಗಿದೆ. ಆದರೆ ಉಪ್ಯಾನ್ ಬರಿಯ ಗಂಡುಮಕ್ಕಳಿಗೆ ಈ ರೀತಿಯ ತಾರತಮ್ಯವಿಲ್ಲ. ಅವರಿಗೆ ಉಳಿದ ಬರಿಯವರು ತಮ್ಮ ಹೆಣ್ಣುಮಕ್ಕಳನ್ನು ವಿವಾಹ ಮಾಡಿಕೊಡುತ್ತಾರೆ. ಅಂದರೆ ಒಳಜಾತಿಯಲ್ಲಿ ಯಾವುದೇ ತಪ್ಪು ಕಲ್ಪನೆಗಳಿಲ್ಲ. ಉನ್ನತ ಮಟ್ಟದ, ಉನ್ನತ ವರ್ಗದ ಹೆಣ್ಣುಮಗಳನ್ನು ಉಪ್ಯಾನ್ ಬರಿಯ ಗಂಡುಮಕ್ಕಳಿಗೆ ಕೊಟ್ಟು ವಿವಾಹಮಾಡಿಕೊಡುತ್ತಾರೆ. ಆದರೆ ಉಪ್ಯಾನ್ ಒಳಜಾತಿಯ ಹೆಣ್ಣುಮಗಳನ್ನು ಸೊಸೆ ಮಾಡಿಕೊಳ್ಳಲು ಉಳಿದ ಒಳಜಾತಿಯ ಮನೆಯವರು ಒಪ್ಪಿಕೊಳ್ಳುವುದಿಲ್ಲ ಹಾಗಂತ ಅವರು ಅಶುಭ ಲಕ್ಷಣದವರು ಅಂತ ಅರ್ಥವಲ್ಲ. ಕುಲಾಲ ಸಮಾಜದಲ್ಲಿ ಬಲವಾಗಿ ನೆಲೆಯೂರಿರುವ ಒಂದು ಸಂಗತಿಯೆಂದರೆ ಉಪ್ಯಾನ್ ಬರಿಯ ಹೆಣ್ಣು ಮಕ್ಕಳಿಗೆ ಮನೆಯ ಅಧಿಕಾರವನ್ನ ನೀಡಬೇಕು, ಇಲ್ಲದಿದ್ದಲ್ಲಿ ಮನೆಯ ಎಲ್ಲಾ ಸಂತೋಷ, ಸಂಪತ್ತು, ನೆಮ್ಮದಿ ಉಪ್ಪು ಕರಗಿದಾಗೆ ಕರಗಿ ಬಿಡುತ್ತದೆ ಎಂಬ ನಂಬಿಕೆ. ಈ ನಂಬಿಕೆ ಎಷ್ಟು ಸರಿ ಎಂದು ಕೇಳಿದರೆ ಯಾರೊಬ್ಬರೂ ಉತ್ತರ ನೀಡುವುದಿಲ್ಲ. ಆದರೆ ನಂಬಿಕೆ ತಲೆಮಾರುಗಳಿಂದ ಇವತ್ತಿಗೂ ತನ್ನ ಆಸ್ತಿತ್ವವನ್ನು ಹಾಗೆಯೇ ಉಳಿಸಿಕೊಂಡಿದೆ. ಉಪ್ಯಾನ್ ಬರಿಯ ಹೆಣ್ಣು ಮಗಳನ್ನು ಸೊಸೆಯಾಗಿ ತಂದರೆ, ಜೀವ ಅಪಾಯವೇನೂ ಇಲ್ಲ, ಆದರೆ ಅತ್ತೆ ತನ್ನ ಮನೆಯ ಅಧಿಕಾರವನ್ನು ಸೊಸೆಗೆ ನೀಡಲು ಹಿಂದೆ ಮುಂದೆ ನೋಡುವುದೇ ಈ ಒಳಜಾತಿಯಲ್ಲಿನ ಮರ್ಮ. ಉಪ್ಯಾನ್ ಬರಿಯ ಸೊಸೆಗೆ ಮನೆಯ ಆಡಳಿತ ನೀಡಿದರೆ, ಒಳ್ಳೆಯದಾಗುತ್ತೆ, ಹಾಗೂ ಆ ಮನೆಯ ಎಲ್ಲರೂ ಸಮೃದ್ಧಿ, ಸುಖ ನೆಮ್ಮದಿಯಿಂದ ಬದುಕುತ್ತಾರೆ ಎನ್ನುವುದಕ್ಕೆ ಎಷ್ಟೋ ಉದಾಹರಣೆಗಳನ್ನು ನಾವು ಸಮಾಜದಲ್ಲಿ ಕಾಣಬಹುದು. ಆದರೆ ಉಪ್ಯಾನ್ ಬರಿಯ ಸೊಸೆಗೆ ಮನೆಯ ಆಡಳಿತ ಕೊಡದೆ ಉಪ್ಪು ಕರಗಿದ ಹಾಗೆ, ಮನೆತನವು ಕರಗಿ ಸರ್ವನಾಶವಾದ ಒಂದೇ ಒಂದು ಕುಟುಂಬ ಸಮಾಜದಲ್ಲಿ ಇದುವರೆಗೂ ಕಂಡುಬಂದಿಲ್ಲ. ಎಲ್ಲಾ ನೆಮ್ಮದಿಯಿಂದಲೇ ಜೀವನ ನಡೆಸುತ್ತಿದ್ದಾರೆ. ಹಾಗಾದರೆ ಈ ಒಂದು ಮೂಢನಂಬಿಕೆ ಯಾಕೆ ಅಸ್ತಿತ್ವಕ್ಕೆ ಬಂತು ಅನ್ನುವುದರ ಬಗ್ಗೆ ಸಮಾಜದ ಹಿರಿಯರಲ್ಲಿ ಉತ್ತರವಿಲ್ಲ. ಅವರು ಹೇಳುವುದು ಇಷ್ಟೇ ನಮ್ಮ ಹಿರಿಯರು ನಮಗೆ ಹೇಳ್ತಾ ಇದ್ದರು, ನಾವು ನಮ್ಮ ಮಕ್ಕಳಿಗೆ ಹೇಳ್ತಾ ಇದ್ದೇವೆ ಮತ್ತು ಅದರ ಬಗ್ಗೆ ನಮಗೆ ಎಳ್ಳಷ್ಟೂ ಜ್ಞಾನವಿಲ್ಲ, ಆದರೆ ಹೌದಂತೆ. ಈ ರೀತಿಯ ಅಂತೆ ಕಂತೆಗಳ ವಿಚಾರಗಳು ಕುಲಾಲ ಸಮಾಜದಲ್ಲಿ ಉಪ್ಯಾನ್ ಬರಿಯ ಹೆಣ್ಣುಮಕ್ಕಳಿಗೆ ಕಂಟಕವಾಗಿ ಪರಿಗಣಿಸಲ್ಪಟ್ಟಿರುವುದು ಸುಳ್ಳಲ್ಲ. ಹಾಗಂತ ಬರೀ ಉಪ್ಯಾನ್ ಬರಿ ಮಾತ್ರವೇ ಈ ರೀತಿಯ ಗೊಂದಲವನ್ನು ಇಟ್ಟುಕೊಂಡಿಲ್ಲ. ಬಂದ್ಯಾನ್, ಸಾಲ್ಯಾನ್, ಅಂಚನ್ ಮುಂತಾದ ಒಳಜಾತಿಗಳಲ್ಲಿ ಕೂಡ ಬೇರೆ ಬೇರೆ ರೀತಿಯಲ್ಲಿ ಶಾಪ ಅಂಟಿಕೊಂಡಿತ್ತು. ಆದರೆ ಕೆಲವು ವಿಷಯಗಳಲ್ಲಿ ಈ ವಿಚಾರಗಳು ಅಳಿಸಿಹೋಗಿ ಈ ಒಳಜಾತಿಗಳು ತಮ್ಮ ಸ್ಥಾನವನ್ನು ಕುಲಾಲ ಸಮಾಜದಲ್ಲಿ ಭದ್ರಪಡಿಸಿಕೊಂಡವು. ಹಾಗೆಯೇ ಉಪ್ಯಾನ್ ಬರಿಯು ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡು ಉತ್ತಮ ಜೀವನವನ್ನು ನಡೆಸುವುದನ್ನು ನಾವು ಕಾಣಬಹುದು. ಕೇರಳ ರಾಜ್ಯ, ಶಿಕ್ಷಣದಲ್ಲಿ ಮುಂದುವರಿದಿದೆ ಅನ್ನುವುದೇ ಇದಕ್ಕೆ ಕಾರಣ. ಮುಂದೆ ದಕ್ಷಿಣಕನ್ನಡ ಜಿಲ್ಲೆಯೂ ಕೂಡಾ ಈ ನಿಟ್ಟಿನಲ್ಲಿ ಮುಂದುವರಿಯುತ್ತದೆ ಅನ್ನುವ ನಂಬಿಕೆ ಲೇಖಕರದ್ದು.
 
ಕುಲಾಲ ಸಮಾಜದಲ್ಲಿ ತಪ್ಪುಕಲ್ಪನೆ
ಉಪ್ಯಾನ್ ಬರಿಯ ಹೆಣ್ಣುಮಕ್ಕಳ ಬಗೆಗೆ ಇರುವ ಕೆಲವೊಂದು ತಪ್ಪುಕಲ್ಪನೆಯನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು. ಅವುಗಳು ಯಾವುದೆಂದರೆ,
  1. ಮನೆಯ ಆಡಳಿತವನ್ನ ಅತ್ತೆ ಸೊಸೆಗೆ ನೀಡಬೇಕೆಂಬ ಕಲ್ಪನೆ. ಒಬ್ಬ ಉಪ್ಯಾನ್ ಬರಿಯ ಯುವತಿ ಸೊಸೆಯಾಗಿ ಬಂದರೆ ಆಕೆಗೆ ಮನೆಯ ಆಡಳಿತ, ಅಂದರೆ ಮನೆಯ ಪೂರ್ತಿ ಉಸ್ತುವಾರಿ ಕೊಡಬೇಕೆಂಬ ನಂಬಿಕೆಯಿಂದ ಎಷ್ಟೋ ಅತ್ತೆಯಂದಿರು ತಮ್ಮ ಮಗನಿಗೆ ಉಪ್ಯಾನ್ ಬರಿಯ ಸೊಸೆಯನ್ನು ತರಲು ವಿರೋಧಿಸುತ್ತಾರೆ. ಆದರೆ ಉಪ್ಯಾನ್ ಸೊಸೆಗೆ ಅಧಿಕಾರ ನೀಡದೆ, ಕೆಟ್ಟು ಹೋದ ಮನೆತನ ಯಾವುದು ಇದೆ ಅಂದರೆ ಕುಲಾಲ ಸಮಾಜ ಬಾಂಧವರಲ್ಲಿ ಉತ್ತರವಿಲ್ಲ. ಆದರೂ ಮನೆಯ ಆಡಳಿತವನ್ನು ಕೊಡಲು ಒಪ್ಪದ ಅತ್ತೆಯಂದಿರು ತಮಗೆ ಉಪ್ಯಾನ್ ಸೊಸೆ ಬೇಡವೆಂದು ಹೇಳುವುದು ಪ್ರತಿ ಮನೆಯಲ್ಲೂ ನಾವು ಕಾಣಬಹುದಾಗಿದೆ.
  2. ಉಪ್ಯಾನ್ ಬರಿಯ ಹೆಣ್ಣುಮಗಳನ್ನು ಸೊಸೆಯಾಗಿ ತಂದರೆ ಮಗ ಹಾಳಾಗಿ ಹೋದ ಎಂದು ಯಾರೂ ಹೇಳುವುದನ್ನು ಕೇಳಲ್ಲ, ಮನೆಯ ಮಾವನಿಗಾಗಲಿ ಅತ್ತೆಗಾಗಲಿ ಯಾವುದೇ ರೋಗ ರುಜುನ ಶಾಶ್ವತವಾಗಿ ಕಾಡಿದ್ದು ಎಲ್ಲೂ ಕಂಡುಬಂದಿಲ್ಲ. ಆದರೆ ಉಪ್ಯಾನ್ ಸೊಸೆಯ ಮಕ್ಕಳು ಚೆನ್ನಾಗಿ ವಿದ್ಯಾವಂತರಾಗಿ ಡಾಕ್ಟರ್, ಇಂಜಿನಿಯರ್ ಆಗಿರುವುದನ್ನು ನಾವು ನೋಡಬಹುದು. ಅಂದರೆ ಮನೆ ಒಳ್ಳೆಯದಾಗುತ್ತದೆ ಎನ್ನುವುದು ಇದರಿಂದ ವೇದ್ಯವಾಗುತ್ತದೆ. ಆದರೆ ಒಂದು ದುರಂತವೆಂದರೆ, ಉಪ್ಯಾನ್ ಸೊಸೆಯ ಹೆಣ್ಣುಮಕ್ಕಳು ಮತ್ತದೇ ಸಂಕೋಲೆಯಲ್ಲಿ ಸಿಕ್ಕಿ ಬೀಳುವುದು ಮಾತ್ರ ವಿಪರ್ಯಾಸ.
  3. ಉಪ್ಯಾನ್ ಸೊಸೆಗೆ ಮನೆಯ ಅಧಿಕಾರ ನೀಡದಿದ್ದರೂ, ಮನೆಯ ನೆಮ್ಮದಿ, ಸಂತೋಷ, ಸಂಪತ್ತು ಉಪ್ಪು ಕರಗಿದ್ಹಾಗೆ ಖಾಲಿಯಾಗುತ್ತದೆ ಅನ್ನುವ ಮೂಢನಂಬಿಕೆ ಕುಲಾಲ ಸಮಾಜದ್ದು. ಅಂದರೆ ಸೊಸೆಯ ಮನಸ್ಸಿಗೆ ನೋವಾದರೆ ಮನೆಯಲ್ಲಿ ಶಾಂತಿ ನೆಮ್ಮದಿ ಇರುವುದಿಲ್ಲ ಎಂಬ ಕಲ್ಪನೆ. ಆದರೆ ಉಪ್ಯಾನ್ ಸೊಸೆ ಕೆಲಸ ಮಾಡುವುದಿಲ್ಲ, ಮನೆಯನ್ನು ಶುಚಿಯಾಗಿ ನೋಡಿಕೊಳ್ಳುವುದಿಲ್ಲ ಹಾಗೂ ರುಚಿಯಾದ ಅಡುಗೆ ಮಾಡಿ ಹಾಕುವುದಿಲ್ಲ ಅನ್ನುವ ದೂರು ಇದುವರೆಗೂ ಬಂದಿಲ್ಲ. ಅಂದರೆ ಮನೆಯ ಆಡಳಿತವನ್ನು ಅತ್ತೆಯ ಒಪ್ಪಿಗೆಯಂತೆ, ಓರಣ ಮಾಡುವುದು ಆಕೆಗೆ ಹುಟ್ಟಿನಿಂದ ಬಂದ ಗುಣ. ಹಾಗಾಗಿ ಉಪ್ಯಾನ್ ಬರಿಯ ಹೆಣ್ಣುಮಗಳನ್ನು ಸೊಸೆ ಮಾಡಿಕೊಳ್ಳುವಲ್ಲಿ ಯಾವುದೇ ರೀತಿಯ ಸಮಸ್ಯೆಯೂ ಇಲ್ಲ. ಆದರೆ ಅಂತೆಕಂತೆಗಳ ಕತೆಗಳನ್ನು, ಗಾಳಿಸುದ್ದಿಯನ್ನು ನಂಬಿ, ಒಂದು ಉತ್ತಮ ಸೊಸೆಯನ್ನು ಮನೆ ತುಂಬಿಸಿಕೊಂಡು. ಬಾಳ್ವೆ ಮಾಡುವ ಭಾಗ್ಯ ಉಳಿದ ಅತ್ತೆಯಂದಿರಿಗೆ ಸಿಗುವುದಿಲ್ಲ ಅನ್ನುವುದೇ ಬೇಜಾರಿನ ವಿಷಯ.
 
ಉಪ್ಯಾನ್ ಹೆಣ್ಣು ಮಕ್ಕಳ ಈಗಿನ ಸ್ಥಿತಿಗತಿ:
ಕುಲಾಲ ಸಮಾಜದಲ್ಲಿ ಈಗ ಉಪ್ಯಾನ್ ಹೆಣ್ಣು ಮಗಳದೇ ಕಾರುಬಾರು. ಅಂದರೆ ಅಧಿಕಾರ ನಡೆಸಿ ಅದರಲ್ಲಿ ಸೈ ಅನ್ನಿಸಿಕೊಳ್ಳುವುದು ಆಕೆಗೆ ಜನ್ಮದತ್ತ ವರ. ಹಾಗಾಗಿ ಉಪ್ಯಾನ್ ಹೆಣ್ಣು ಮಗಳ ತಂದೆ ತಾಯಿಯರು ಅವಳನ್ನು ಚೆನ್ನಾಗಿ ಓದಿಸಿ ವಿದ್ಯಾವಂತೆಯನ್ನಾಗಿ ರೂಪಿಸಿ, ಸರ್ಕಾರಿ ಉದ್ಯೋಗವನ್ನು ಪಡೆದು ಜೀವನದಲ್ಲಿ ಯಶಸ್ವಿಯಾಗಲು ಅವಕಾಶ ಕೊಡಬೇಕು.
  1. ಉಪ್ಯಾನ್ ಬರಿಯ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ಪ್ರಸ್ತುತ ವಿಷಯ ನೋಡುವುದಾದರೆ, ಉತ್ತಮ ಶಿಕ್ಷಣ ಮತ್ತು ಉದ್ಯೋಗದಲ್ಲಿ ಇರುವ ಕುಲಾಲ ಹೆಣ್ಣು ಮಕ್ಕಳೆಂದರೆ ಉಪ್ಯಾನ್ ಬರಿಯ ಹೆಣ್ಣು ಮಕ್ಕಳು. ಹಾಗಾಗಿ ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಅವರ ಶಿಕ್ಷಣಕ್ಕೆ ಕೊಡುವ ಬೆಲೆಯನ್ನು ಕಾಣಬಹುದು. ಉಪ್ಯಾನ್ ಬರಿಯ ಹೆಣ್ಣು ಮಕ್ಕಳನ್ನು ಕಾಸರಗೋಡು ಜಿಲ್ಲೆಯಲ್ಲಿನವರು ಮೊದಲ ಪ್ರಾಶಸ್ತ್ಯ ಕೊಟ್ಟು ವಿವಾಹವಾಗುತ್ತಿದ್ದಾರೆ. ಅಂದರೆ ಅವರಿಗೆ ಸಿಕ್ಕಿರುವ ಶಿಕ್ಷಣ ಅವರನ್ನು ಆ ರೀತಿಯಾಗಿ ಬದಲಾಯಿಸಿವೆ. ಹಾಗಾಗಿ ಉಪ್ಯಾನ್ ಬರಿಯ ಹೆಣ್ಣು ಮಕ್ಕಳ ತಂದೆ-ತಾಯಿ ಅವರಿಗೆ ಉತ್ತಮ ಶಿಕ್ಷಣವನ್ನು ನೀಡಿ ಅವರ ಜೀವನವನ್ನು ಸುಧಾರಿಸಬಹುದು.
  2. ಈಗ ನಗರೀಕರಣ ಪ್ರಭಾವದಿಂದ ಅವಿಭಕ್ತ ಕುಟುಂಬಗಳು ಮಾಯವಾಗಿ ವಿಭಕ್ತ ಕುಟುಂಬಗಳು ಕಾಣಸಿಗುತ್ತವೆ. ಹಾಗಾಗಿ ಅತ್ತೆ-ಸೊಸೆ ಅನ್ನುವ ಪ್ರಸ್ತಾಪವೇ ಬರುವುದಿಲ್ಲ. ಹಾಗಾಗಿ ಬಂದ ಸೊಸೆ ಮನೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುವುದಿಲ್ಲ ಎಂದು ದೂರುವ ಬದಲು ಮನೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎಂಬ ಹಣೆಪಟ್ಟಿ ಹೊತ್ತಿರುವ ಉಪ್ಯಾನ್ ಬರಿಯ ಹೆಣ್ಣು ಮಗಳನ್ನು ಸೊಸೆ ಮಾಡಿಕೊಳ್ಳುವುದು ಜಾಣತನವಲ್ಲವೆ.
  3. ಉಪ್ಯಾನ್ ಬರಿಯು ಕುಲಾಲ ಸಮಾಜಕ್ಕೆ ಅಂಟಿದ ಶಾಪವಲ್ಲ.  ಆದರೆ ಅತ್ತೆಯಂದಿರ ಪಾತ್ರ ಅದನ್ನು ಶಾಪವಾಗಿ ಪರಿಗಣಿಸುತ್ತಿದೆ. ತನ್ನ ಮಗನಿಗೆ ಉಪ್ಯಾನ್ ಬರಿ ಬೇಡವೆಂದು ಆಕೆ ನೆರೆಹೊರೆಯ ಹೆಂಗಸರಲ್ಲಿ ಅಭಿಪ್ರಾಯ ಕೇಳಿ ನಿರ್ಧಾರ ಮಾಡುತ್ತಾಳೆ. ಆದರೆ ತನ್ನ ಮನೆಯಿಂದ ಹೋದ ಮಗಳನ್ನು ಉಪ್ಯಾನ್ ಅತ್ತೆಯು ಯಾವುದೇ ತೊಂದರೆ ಕೊಡದೆ, ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳುತ್ತಾಳೆ. ಹಾಗಾಗಿ ಈ ರೀತಿಯ ಆಲೋಚನೆಗಳನ್ನು ನಿಯಂತ್ರಿಸಿ ಬದುಕನ್ನು ರೂಪಿಸುವ ಕರ್ತವ್ಯ ಕುಲಾಲ ಅತ್ತೆಯಂದಿರದು.
  4. ಎಷ್ಟೋ ತಾಯಿಯಂದಿರು ಉಪ್ಯಾನ್ ಬರಿಯ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಾರೆ, ಪ್ರಚಲಿತದಲ್ಲಿರುವ ನಂಬಿಕೆ ಸುಳ್ಳೆನ್ನುತ್ತಾರೆ. ಆದರೆ ತಮ್ಮ ಮನೆಗೆ, ತನ್ನ ಮಗನಿಗೆ ಉಪ್ಯಾನ್ ಬರಿಯ ಹೆಣ್ಣುಮಗಳು ಬೇಡವೆಂದು ಜಾರಿಕೊಳ್ಳುತ್ತಾರೆ. ಅಂದರೆ ಶುಭ ಸಮಾರಂಭಕ್ಕೆ ತನ್ನ ಮನೆಗೆ ಉಪ್ಯಾನ್ ಬರಿ ಸೊಸೆ ಬೇಡವೆಂಬ ಧೋರಣೆ ಮತ್ತು ಅವರ ಅಂಜಿಕೆಯ ಮನೋಭಾವ.
  5. ಸಮಸ್ಯೆ ಇಷ್ಟು ಗಂಭೀರವಿದ್ದರೂ ಉಪ್ಯಾನ್ ಬರಿಯ ಹೆಣ್ಣುಮಕ್ಕಳು ಸೊಸೆಯಾಗಿ ಹೋದ ಮನೆಗಳೆಲ್ಲಾ ಯಾವುದೇ ಸಮಸ್ಯೆಯಿಲ್ಲದೆ, ಅಭಿವೃದ್ಧಿಯಾಗುತ್ತಿರುವುದು ಸಂತೋಷದ ವಿಚಾರ. ಹಾಗೆಯೇ ಉಪ್ಯಾನ್ ಬರಿ ಬೇಡವೆಂದು ಹೇಳಿ ಬೇರೆ ಒಳಜಾತಿಯ ಸೊಸೆಯನ್ನು ತಂದು ಕಷ್ಟದಲ್ಲಿ ಸಿಲುಕಿಕೊಂಡ ಅತ್ತೆಯನ್ನು ಇದರ ಬಗ್ಗೆ ಕೇಳಿದಾಗ, ಅವರ ಮಾತು ಇಷ್ಟೇ; ಅದು ನಮ್ಮ ನಮ್ಮ ಹಣೆಬರಹ. ಹಾಗೆಯೇ ಆಗಬೇಕು ಅಂಥ ಬರೆದಿತ್ತೋ ಏನೋ. ಹಾಗಾದರೆ ನೀವು ಯಾಕೆ ಉಪ್ಯಾನ್ ಬರಿಯನ್ನು ದೂರಿದ್ದೀರಿ ಅಂದಾಗ ಉತ್ತರವಿಲ್ಲ,
 
ಅಧ್ಯಯನದಲ್ಲಿ ಕಂಡುಕೊಂಡ ವಿಚಾರ:
  1. ಉಪ್ಯಾನ್ ಬರಿಯ ಸೊಸೆ ಬಂದರೆ ಮನೆಯ ನೆಮ್ಮದಿ, ಸಂತೋಷ, ಸಂಪತ್ತು, ಉಪ್ಪುಕರಗುವಂತೆ ಕರಗುತ್ತದೆ ಎಂಬ ನಂಬಿಕೆ ಸುಳ್ಳು ಎನ್ನುವುದು ಅಧ್ಯಯನದಿಂದ ವೇದ್ಯವಾಗುತ್ತದೆ.
  2. ಉಪ್ಯಾನ್ ಸೊಸೆಯು ಮನೆವಾರ್ತೆಗಳನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎನ್ನುವುದು ಅಧ್ಯಯನದಿಂದ ರುಜುವಾತಾಗಿದೆ.
  3. ಉಪ್ಯಾನ್ ಸೊಸೆಯಾದ ಮನೆಯಲ್ಲಿ ಸುಖ, ನೆಮ್ಮದಿ ಇವೆ ಹಾಗೂ ಅವರ ಮಕ್ಕಳು ಚೆನ್ನಾಗಿ ಓದಿ ವಿದ್ಯಾವಂತರಾಗಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ ಎನ್ನುವುದು ಅಧ್ಯಯನದಿಂದ ತಿಳಿದುಬರುತ್ತದೆ.
  4. ಉಪ್ಯಾನ್ ಸೊಸೆಯು ಅತ್ತೆ, ಮಾವ, ಗಂಡನಿಗೆ ಒಳ್ಳೆಯದನ್ನ ಮಾಡುವ ಹಾಗೂ ಮನೆಯಲ್ಲಿ ಉತ್ತಮ ಗೃಹಿಣಿಯಾಗಿ ಕಾರ್ಯನಿರ್ವಹಿಸುವ ವಿಚಾರವು ಈ ಅಧ್ಯಯನದಿಂದ ಕಂಡುಕೊಳ್ಳಲಾಗಿದೆ.
  5. ಉಪ್ಯಾನ್ ಸೊಸೆಯು ಮುಂದೆ ಉತ್ತಮ ಅತ್ತೆಯೂ ಆಗಬಲ್ಲಳು ಎಂಬುವುದು ಅಧ್ಯಯನದಿಂದ ವೇದ್ಯವಾದ ಸಂಗತಿ.
  6. ಹಿಂದಿನ ತಲೆಮಾರಿನವರಿಂದ ಯಾವುದೇ ಒಂದು ವಿಚಾರದಲ್ಲಿ ಬಂದ ಮಾಹಿತಿ ತಪ್ಪಾಗಿ ಅರ್ಥೈಸಲ್ಪಟ್ಟು ಉಪ್ಯಾನ್ ಬರಿಯ ಹೆಣ್ಣು ಮಗಳಿಗೆ ಶಾಪವಾಗಿ ಪರಿಗಣಿತವಾಗಿರುವುದು ಬೇಸರದ ಸಂಗತಿ. ಹಾಗಾಗಿ ವಿದ್ಯಾವಂತರಾದ ಸಮಾಜದ ಹಿರಿಯರು ತಮ್ಮ ಸಮಾಜದ ಮೂಢನಂಬಿಕೆಯನ್ನು ತೊಡೆದು ಹಾಕಲು ಪ್ರಯತ್ನಿಸಬೇಕು.
 
ಉಪಸಂಹಾರ
ಕುಂಬಾರ ಯಾನೆ ಕುಲಾಲರ ಸಮುದಾಯವು ಬಹಳ ಸಾಧು ಹಾಗೂ ಪ್ರಾಮಾಣಿಕತೆ, ತಾಳ್ಮೆಗೆ ಹೆಸರುವಾಸಿಯಾಗಿದೆ. ಯಾರಿಗೂ ತೊಂದರೆಯನ್ನುಂಟು ಮಾಡದೇ ತಾವಾಯ್ತು, ತಮ್ಮ ಕೆಲಸವಾಯಿತು ಎನ್ನುವ ಮನೋಭಾವ ಕುಲಾಲರದ್ದು. ಸಣ್ಣ ಕೆಲಸವಾದರೂ ಪ್ರಾಮಾಣಿಕತೆಯಿಂದ ಮಾಡಿ ತಮಗೆ ದೊರಕಿದ ಪ್ರತಿಫಲಕ್ಕೆ ತೃಪ್ತಿಪಟ್ಟುಕೊಳ್ಳುವ ಜನ. ತುಳುನಾಡಿನಲ್ಲಿ ಬೇರೆ ಬೇರೆ ಜಾತಿಗಳ ನಡುವೆ ಸಹಿಷ್ಣುತೆಯಿಂದ ಆರಾಮವಾಗಿ ಜೀವನ ಮಾಡುವುದು ಕುಲಾಲ ಸಮುದಾಯದವರ ವೈಷಿಷ್ಟ್ಯ. ರಾಜಕೀಯದಲ್ಲಿ ಅಷ್ಟೇನೂ ಭಾಗವಹಿಸದೆ ತಮಗೆ ದೊರೆತ ಸವಲತ್ತುಗಳಿಂದ ಸಮಾಧಾನ ಹೊಂದಿ ಸಂತೋಷಪಡುವರು. ಈ ಅಧ್ಯಯನದಲ್ಲಿ ಕುಲಾಲ ಸಮಾಜದ ಒಳಜಾತಿಗಳ ವಿಂಗಡನೆ, ಅದರಲ್ಲಿರುವ ಉಪ್ಯಾನ್ ಒಳಜಾತಿಯ ಹೆಣ್ಣುಮಕ್ಕಳ ಬಗೆಗಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕುಲಾಲ ಸಮಾಜದ ಈ ಮೂಢನಂಬಿಕೆಯು ಕಳಚಿ, ಒಳಜಾತಿಗಳಿಗೆ ಒಂದೇ ರೀತಿಯ ಸಮಾನ ಹಕ್ಕು ಹಾಗೂ ಅವುಗಳ ಬಗೆಗಿನ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ ಸದೃಢ ಸಮಾಜದ ನಿರ್ಮಾಣವಾಗುತ್ತದೆ ಅನ್ನುವುದು ಲೇಖಕರ ಅಭಿಪ್ರಾಯವಾಗಿದೆ. ಈಗಾಗಲೇ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಆದಂತಹ ಕ್ರಾಂತಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದರೆ ಈ ಸಮಸ್ಯೆಯು ಖಂಡಿತ ಮರೆಯಾಗುತ್ತದೆ.
 
ಆಧಾರ ಗ್ರಂಥಗಳು
  1. Chaithra. (2009). a Vidhiya Aata Ballavararo? In K. S. Vitla, Dashaamulya (pp. 11-13). Vittal: Hanumaan Printers.
  2. Kajekar, D. (2001). Kulals in Dakshina Kannada: A Sociological study (Ph. D. Thesis). Mangalore : Mangalore University, pp17-20.
  3. Kapadia. K. M. (1982). Marriage and Family in India. Calcutta: Oxford University.
  4. Singhe, B. P. (2015). Political resentation among the Beedi rolling women of Kulal community: A case study conducted in Dakshina Kannada District. THEMATICS Journal of Social Sciences , 28-38.
  5. Singhe, B. P. (2015). Women of Kulal community: Effect of Domestic Violence on Beedi rolling Occupation. Research Express , 94-101.
  6. Vitla, R. (2009). Dashamoolya. Vitla: Kulala Sangha Vitla.
  7. M. A. Sherring. (2003). The Tribes and Castes of the Madras Presidency. ISBN 8170203910: 9788170203919.
  8. Singh, Y. (1980). Social Stratification and Change in India. New Delhi: Manohar Publication.
  9. Stuart, A. H. (1894). Manual of North Arcot District. North Arcot India: Government Press.
  10. Singhe, B. P. (2015). A study on the Harassment of Kulal beedi rolling women in day to day life and Defence Mechanism. Social Science Reporter, 22-31.
  11. Singhe, B. P. (2014). A study on the influencing factors on the Occupational changes among Beedi rolling women in Kulal community. Social Science Reporter , 74-90.
  12. Singhe, B. P. (2015). A study on the Perception of Kulal Beedi rolling women towards The Law education of their children. IJCRSS , 18-25.
  13. Thurston, E. (1909). Castes and Tribes of Southern India. Delhi: Cosmo Publications. pp. 112-117.
  14. Vitla, R. (2009). Manada Nudi. In K. S. Vitla, Dashaamoolya (pp. 01-02). Vittal: Hanuman Printers.
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture

    Social Work Learning Academy

    Join WhatsApp Channel

    Niruta Publications

    Social Work Foot Prints

    Leaders Talk

    Ramesha Niratanka

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com