Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳು

12/20/2019

0 Comments

 
Picture
ನವೆಂಬರ್ ಎಂದಾಕ್ಷಣ ನಮಗೆ ಮನಸ್ಸಿಗೆ ಬರುವುದು ಮಕ್ಕಳು ಮತ್ತು ಮಕ್ಕಳ ದಿನಾಚರಣೆ. ಮಕ್ಕಳ ದಿನಾಚರಣೆಯಲ್ಲಿ ಮಕ್ಕಳಿಗೆ ಪುಸ್ತಕವೋ, ಪೆನ್ನೋ, ಸಿಹಿತಿಂಡಿಗಳೋ ಎನೋ ಒಂದು ಕೊಟ್ಟು ಜೊತೆಗೆ ಒಂದಷ್ಟು ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಮಕ್ಕಳನ್ನು ಮನೆಗೆ ಕಳುಹಿಸುವುದು ನಮ್ಮಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಇದನ್ನೆ ನಾವು ವರ್ಷಪೂರ್ತಿ ಮಕ್ಕಳಿಗಾಗಿ ನಾವು ಹಾಗೆ ಮಾಡಿದೆವು, ಹೀಗೆ ಮಾಡಿದೆವು ಎಂದುಕೊಳ್ಳುವವರು ಕಡಿಮೆಯೇನಲ್ಲ. ನೀವು ಮಕ್ಕಳ ದಿನಾಚರಣೆಗೆ ಹೋಗುವ ಮುಂಚೆ ಇದನ್ನು ಸ್ವಲ್ಪ ತಿಳಿದುಕೊಳ್ಳಿ... 
ಮಕ್ಕಳೇ ನೀವು ಹೇಗಿದ್ದೀರಾ...? ನಿಮಗೇನಾದರೂ ತೊಂದರೆಗಳಿವೆಯೇನು? ಶಾಲೆಯಲ್ಲೋ, ಆಟದ ಮೈದಾನದಲ್ಲೋ ಅಥವಾ ಊರಿನಲ್ಲೋ ಯಾವುದಾದರೂ ತೊಂದರೆಗಳು ಇವೆಯಾ..? ಹೀಗೆಂದು ಎಂದಾದರೂ ನೀವು ಮಕ್ಕಳ ಹತ್ತಿರವೋ, ಮಕ್ಕಳಿರುವ ಜಾಗಕ್ಕೋ ಹೋಗಿ ಈ ಮೇಲಿನ ಪ್ರಶ್ನೆಗಳನ್ನು ಕೇಳಿದ್ದೀರ...? ಅಥವಾ ನೀವು ಚಿಕ್ಕವರಾಗಿದ್ದಾಗ ನಿಮ್ಮನ್ನು ಯಾರಾದರೂ ದೊಡ್ಡವರೋ, ಪಂಚಾಯತಿಯವರೋ ಈ ಪ್ರಶ್ನೆಗಳನ್ನು ಕೇಳಿದ್ದಾರಾ... ಹೋಗಲಿ ಯಾವಾಗಲಾದರೂ, ಎಲ್ಲಿಯಾದರೂ, ಯಾರಾದರೂ ನಿಮ್ಮ ಸಮಸ್ಯೆಗಳನ್ನು ಹೇಳಲಿಕ್ಕೆ ಅವಕಾಶಗಳನ್ನು ಸೃಷ್ಟಿ ಮಾಡಿದ್ದಾರೇನು?

ಇದೇನಪ್ಪಾ ಇಂತಹ ಪ್ರಶ್ನೆಗಳನ್ನು ಕೇಳ್ತಾ ಇದಾರೆ ಅಂದ್ಕೊಳ್ದೆ ಯೋಚಿಸಿ, ಯೋಚಿಸಿದ್ರ, ಅಯ್ಯೋ ಅಂತಾ ಭಾಗ್ಯ ನಮಗೆಲ್ಲಿತ್ತು, ನಮಗೆ ಇರ್ಲಿಲ್ಲ ಇನ್ನ ನಮ್ಮ ಮಕ್ಕಳಿಗೆ ಎಲ್ಲಿ ಸಿಗುತ್ತೆ ಅಂತಾ ಅಂದ್ಕೋತಾ ಇದೀರ?.... ಬೇಸರ ಪಡದೆ ಮುಂದಿನ ಈ ಮುಂದೆ ಸ್ವಲ್ಪ ಓದಿ.. (ಮತ್ತೆ ಸಿಗೋಣ...)
  • ನಮ್ಮ ಶಾಲೆಗೆ ಶಿಕ್ಷಕರು ಬರುತ್ತಿಲ್ಲ. ಯಾವಾಗೋ ಒಂದು ದಿನ ಬಂದರೆ ಆಯಿತಷ್ಟೆ. ಬಂದವರು ಏನು ಮಾಡಿದರೆಂದು ಕೇಳುವುದಿಲ್ಲ ಇತ್ಯಾದಿ. ಹೇಳಿದ ಮಕ್ಕಳ ಸಮಸ್ಯೆಗೆ ಮರುದಿನದಿಂದಲೇ ಪರಿಹಾರ ಸಿಕ್ಕಿ ಶಾಲೆಗೆ ಬಾರದ ಶಿಕ್ಷಕರನ್ನು ಕರೆಸಿದ ಕೀರ್ತಿ ರಾಯಚೂರು ಜಿಲ್ಲೆಯ ಭೂಪೂರಿನ ಗ್ರಾಮ ಪಂಚಾಯಿತಿಯ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗೆ ಸಲ್ಲುತ್ತದೆ, (10 ಆಗಸ್ಟ್ 09).
  • ಪಂಚಾಯತಿಯಲ್ಲಿ ನೀರು ಬಿಡುವವರು ಬೆಳಗ್ಗೆ 10ಗಂಟೆಗೆ ಬಿಡುತ್ತಿದ್ದರಿಂದ ಶಾಲೆಗೆ ಹೋಗಲಿಕ್ಕಾಗದ ಮಕ್ಕಳ ಸಮಸ್ಯೆಗೆ ಪರಿಹಾರ ಒದಗಿಸಿಕೊಟ್ಟಿದ್ದು, ಜಾಲಿಹಾಳ ಗ್ರಾಮ ಪಂಚಾಯಿತಿಯಲ್ಲಿ ನಡೆದ ಮಕ್ಕಳ ಗ್ರಾಮ ಸಭೆ.
  • ಹಲವಾರು ವರ್ಷಗಳಿಂದ ಅಂಗನಾಡಿ ಕಟ್ಟಡವಿಲ್ಲದೆ ಹಳೇ ಕಟ್ಟಡದಲ್ಲಿದ್ದ ಮಾದಿಗ ಸಮುದಾಯದ ಮಕ್ಕಳಿಗೆ ಅಂಗನವಾಡಿ ಕಟ್ಟಡ ಕಟ್ಟಿಸಿದ ಕೀರ್ತಿ, ಬಾಗಲಕೋಟೆ ಜಿಲ್ಲೆಯ ಮುಧೋಳ್ ತಾಲುಕಿನ ಕುಳಲಿ ಗ್ರಾಮ ಪಂಚಾಯಿತಿಯ ಮಕ್ಕಳ ಗ್ರಾಮಸಭೆಗೆ ಸಲ್ಲುತ್ತದೆ.
  • ಶನಿವಾರ ರಾತ್ರಿ, ಭಾನುವಾರ ಹಗಲು, ರಾತ್ರಿ ನಮ್ಮ ತರಗತಿಗಳ ಮುಂಭಾಗ ಇಸ್ಪೀಟ್ ಕ್ಲಬ್ ಆಗುತ್ತೆ, ಇಲ್ಲಿ ಬೀಡಿ, ಸಿಗರೇಟ್, ಪಾನ್ ಪರಾಗ್ ಪ್ಯಾಕೇಟ್ಗಳು, ಸಾರಾಯಿ ಬಾಟ್ಲು, ಕಾಂಡೋಮ್ ರಬ್ಬರ್ ಚೀಲ, ಅಲ್ಲೇ ಮಾಡಿರುವ ವಾಂತಿ ಇದನ್ನೆಲ್ಲಾ ನಾವು ಶುದ್ದ ಮಾಡ್ಬೇಕ, ಈ ಸೋಮವಾರದ ಕಸ ನಾವು ಶುದ್ದಮಾಡಕ್ಕೆ ಬೇಜಾರು ಎನ್ನುವ ಮಕ್ಕಳ ಸಮಸ್ಯೆಗೆ ಸ್ಪಂದಿಸಿದ ಪಂಚಾಯಿತಿ ಕೂಡಲೇ ಕ್ರಮ ಕೈಗೊಂಡಿತು. ಈಗ ಆ ಶಾಲೆ ಆವರಣ ಬದಲಾಗಿದೆ. ಸೋಮವಾರ ಬಂದ್ರೆ ಮಕ್ಕಳು ನಡುಗಲ್ಲ, ನಗ್ತಾ ನಗ್ತಾ ಬರ್ತಾರೆ (ಬಳ್ಳಾರಿ ಜಿಲ್ಲೆಯ 36 ಮುದ್ದಾಪುರ).
  • ಯಮರಾಯನಂತೆ ಶಾಲಾ ಮೈದಾನದಲ್ಲಿ ನಿಂತಿದ್ದ ಟ್ರಾನ್ಸ್ಪಾರಂಗೆ ಬೇಲಿ ಹಾಕಿದ್ದು, ಮೈದಾನವಿಲ್ಲದ ಶಾಲೆಗಳಿಗೆ ಮೈದಾನ ಒದಗಿಸಿಕೊಟ್ಟಿದ್ದು, ಸೌಲಭ್ಯಗಳಿಂದ ವಂಚಿತರಾದ ಅಂಗವಿಕಲ ಮಕ್ಕಳಿಗೆ ಆರೋಗ್ಯ ಶಿಬಿರದ ಮೂಲಕ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದು, ಟಿ.ಸಿ ಬಾರದ ಮಕ್ಕಳಿಗೆ ಟಿ.ಸಿ ಒದಗಿಸಿಕೊಟ್ಟದ್ದು............. ಹೀಗೇ ಹೇಳುತಾ ಹೋದರೆ ಹಲವಾರು ಸಮಸ್ಯೆಗಳು ಗ್ರಾಮೀಣ ಮಟ್ಟದಲ್ಲಿ ಪರಿಹಾರ ಕಂಡುಕೊಂಡಿದ್ದು ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳಿಂದ.
ಅರೇ!!!! ಮೇಲಿನ ಕಥೆಗಳು ತುಂಬಾ ಚೆನ್ನಾಗಿವೆ, ನಮ್ಮೂರಲ್ಲೀ ಈತರಹದ ಸಮಸ್ಯೆಗಳು ನಮ್ಮ ಮಕ್ಕಳಿಗೆ ಇವೆ. ಏನು ಮಾಡುವುದು? ಇದು ಹೇಗೆ ಸಾಧ್ಯ? ನಮ್ಮ ಮಕ್ಕಳಿಗೆ ಈ ಸೌಲಭ್ಯ ಸಿಗುವುದಿಲ್ಲವೇ? ಎಂಬಿವೇ ಪ್ರಶ್ನೆಗಳು ನಮ್ಮ ಮನದಲ್ಲಿ ಮೂಡುತ್ತಿವೆಯೇ?.

ಈ ಮೇಲಿನ ವಿಚಾರಗಳು ಯಾವುದೋ ಪುಸ್ತಕದ ಪ್ರಸಂಗಗಳಲ್ಲ, ಹಾಗಂತ ಕಟ್ಟು ಕಥೆಗಳೂ ಅಲ್ಲಾ, ಇವೆಲ್ಲಾ ನಮ್ಮ ರಾಜ್ಯದ ವಿವಿಧ ಪಂಚಾಯಿತಿಗಳ ಸಾಧನೆಗಳು ಮತ್ತು ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಗಳ ಫಲಶ್ರುತಿಗಳು.

ಅಬ್ಬಾ!! ನಿಜಕ್ಕೂ ಇವು ಗ್ರಾಮೀಣ ಮಟ್ಟದಲ್ಲಿ ಆಗಿರುವ ವಿಚಾರಗಳಾ? ಗ್ರಾಮಸಭೆಗಳಿಗೆ ಅಷ್ಟು ಶಕ್ತಿ ಇವೆಯೇನು? ಹಾಗಾದರೆ ಸಾಮಾನ್ಯ ಗ್ರಾಮಸಭೆಗಳಿಗೂ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳಿಗೂ ಇರುವ ವ್ಯತ್ಯಾಸವೇನು? ಇಷ್ಟಕ್ಕೂ ಮಕ್ಕಳಿಗೂ ಪಂಚಾಯಿತಿಗೂ ಏನು ಸಂಬಂಧ? ಪಂಚಾಯಿತಿಗಳಲ್ಲಿ ಇಂತಹದೊಂದು ಅವಕಾಶ ನಿಜಕ್ಕೂ ಇದೆಯೇ... ಇದ್ದರೆ ಇದು ಪರಿಣಾಮಕಾರಿಯಾಗಿ ನಡೆಯುತ್ತಿದಿಯೇ? ಇದೆಲ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ಜವಾಬ್ದಾರಿಯಲ್ಲವೇ ಎಂಬ ಹಲವಾರು ವಿಚಾರಗಳು ನಿಮ್ಮಲ್ಲಿ ಮೂಡುತ್ತಿದ್ದರೆ ಖಂಡಿತವಾಗಿಯೂ ಈ ಲೇಖನ ನೀವು ಓದಲೇಬೇಕು.

ಮಕ್ಕಳು ಎಲ್ಲ ಸಮುದಾಯಗಳ ಅವಿಭಾಜ್ಯ ಅಂಗ. ಮಕ್ಕಳ ಉಳಿವು, ಅಭಿವೃದ್ಧಿ ಮತ್ತು ರಕ್ಷಣೆ ಎಲ್ಲ ಸಮುದಾಯಗಳ ಕರ್ತವ್ಯ. ಸರ್ಕಾರಗಳ ಬಹುತೇಕ ಯೋಜಿತ ಮತ್ತು ಯೋಜನೇತರ ಕಾರ್ಯಕ್ರಮಗಳು ಮಕ್ಕಳನ್ನೇ ಉದ್ದೇಶಿಸಿದೆ. ಇಂತಹ  ಕಾರ್ಯಕ್ರಮಗಳ ಜಾರಿ ಆಗುತ್ತಿರುವುದು ತಳಮಟ್ಟದ ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ. ಅದೇ ರೀತಿ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳನ್ನು ಗುರುತಿಸಿ ಅಂತಹವುಗಳನ್ನು ತಡೆದು ಮಕ್ಕಳನ್ನು ರಕ್ಷಿಸುವಲ್ಲಿ ಗ್ರಾಮಪಂಚಾಯಿತಿಗಳಿಗೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಆಹಾರ ವಿತರಣೆ ಮತ್ತು ನಾಗರೀಕ ಸರಬರಾಜು ಇಲಾಖೆ, ಸಮಾಜ ಕಲ್ಯಾಣ ಹೀಗೆ ಮೊದಲಾದ ಎಲ್ಲಾ ಇಲಾಖೆಗಳ ಗುರುತರವಾದ ಜವಾಬ್ದಾರಿಯಾಗಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ದೇಶದಲ್ಲೆ ಮೊದಲ ಬಾರಿಗೆ ಐತಿಹಾಸಿಕ ಸುತ್ತೋಲೆಯನ್ನು ಹೊರಡಿಸುವುದರ ಮೂಲಕ ಭಾರತ ಸರ್ಕಾರ ಸಹಿ ಮಾಡಿರುವ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಬದ್ಧತೆ ದೊರೆಯಿತೆಂದು ಹೇಳಬಹುದು. ಆ ಮೂಲಕ ಮಕ್ಕಳು ಕೇವಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಪಟ್ಟಿರುವುದು ಮಾತ್ರ ಅಲ್ಲ ಎಂಬ ನಂಬಿಕೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತೊಡೆದುಹಾಕಿತು ಎಂದು ಹೇಳಬಹುದು.

ಇಂತಹದೊಂದು ಮಹತ್ವದ ಸುತ್ತೋಲೆ ಬಂದರು ಇಂದಿಗೂ ಇದರ ಬಗ್ಗೆ ಸಾಕಷ್ಟು ಜನರಿಗೆ, ಪಂಚಾಯತಿಗಳಿಗೆ, ಸಂಘ ಸಂಸ್ಥೆಗಳಿಗೆ ತಿಳಿದಿಲ್ಲ, ತಿಳಿದಿದ್ದರೂ ಆ ಸುತ್ತೋಲೆ ಯಾವಾಗ ಬಂದಿತು, ಆ ಸುತ್ತೋಲೆಯಲ್ಲಿ ಸರ್ಕಾರ ಏನು ಹೇಳಿದೆ? ಯಾರ ಜವಾಬ್ದಾರಿಗಳೇನು ಎಂಬ ಮೊದಲಾದ ವಿಚಾರಗಳು ಕಣ್ಮರೆಯಾಗುತ್ತಿವೆ, ಕೆಲವು ಪಂಚಾಯಿತಿಗಳು ಮತ್ತು ಸಂಘ ಸಂಸ್ಥೆಗಳು ಅವರವರ ಕಲ್ಪನೆಗಳಿಗೆ ಬಂದಂತೆ ನಡೆಸುತ್ತಿವೆ.

ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊರಡಿಸಿದ ಸುತ್ತೋಲೆಯ ಪರಿಚಯ, ಅದರಲ್ಲಿರುವ ಮುಖ್ಯ ಅಂಶಗಳು ಏನು, ನಮ್ಮ ನಿಮ್ಮ ಜವಾಬ್ದಾರಿಗಳೇನು ಇವೇ ಮೊದಲಾದವುಗಳನ್ನು ಪರಿಚಯಿಸುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ.

ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯವು ಗ್ರಾಪ 367 ಗ್ರಾಪಂಅ 2006 ದಿನಾಂಕ: 18-9-2006 ಮಕ್ಕಳ ಹಕ್ಕುಗಳನ್ನು ಕುರಿತು ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಮಕ್ಕಳ ಗ್ರಾಮ ಸಭೆ ಏರ್ಪಡಿಸುವ ಕುರಿತು ಮತ್ತು ಸಂಖ್ಯೆ: ಗ್ರಾಅಪ 638 ಗ್ರಾಪಂಅ 2007 ದಿನಾಂಕ: 30-10-2007 ಮಕ್ಕಳ ಗ್ರಾಮ ಸಭೆಯ ರೂಪುರೇಷೆಗಳ  ಬಗ್ಗೆ ಮಾರ್ಗಸೂಚಿ ಕುರಿತು ಕರ್ನಾಟಕದ ಎಲ್ಲಾ ಪಂಚಾಯಿತಿಗಳಿಗೂ ಸುತ್ತೋಲೆಗಳನ್ನು ಹೊರಡಿಸಿದೆ.

ಇದರಂತೆ ಮಕ್ಕಳನ್ನು ಹಾಗೂ ಮಕ್ಕಳ ವಿಚಾರಗಳನ್ನು ಕೇಂದ್ರೀಕರಿಸಿಕೊಂಡು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳು ಪ್ರತಿ ವರ್ಷ ನವೆಂಬರ್ 13ರಿಂದ 30ರವರೆಗೆ ಮಕ್ಕಳ ಹಕ್ಕಗಳ ಸಪ್ತಾಹವನ್ನು ಹಮ್ಮಿಕೊಳ್ಳುವಂತೆ ಹಾಗೂ ಈ ದಿನಗಳಲ್ಲಿ ವಿಶೇಷವಾಗಿ ಒಂದು ದಿನ ಮಕ್ಕಳ ಹಕ್ಕುಗಳ ಬಗ್ಗೆ, ಗ್ರಾಮಸ್ಥರು, ಪಾಲಕರು ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮಕ್ಕಳನ್ನೊಳಗೊಂಡ ಗ್ರಾಮಸಭೆಗಳನ್ನು ಏರ್ಪಡಿಸಲು ಸರ್ಕಾರ ನಿರ್ಧರಿಸಿದೆ.

ಈ ಗ್ರಾಮ ಸಭೆಯಲ್ಲಿ ವಿಶೇಷವಾಗಿ ಕೆಳಕಂಡ ಅಂಶಗಳನ್ನು ಸಹ ಚರ್ಚಿಸಲು ಸೂಚಿಸಲಾಗಿದೆ.
  1. ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೌಷ್ಟಿಕ ಆಹಾರವನ್ನು ಒದಗಿಸುವುದು.
  2. ಮಕ್ಕಳ ಬೌದ್ಧಿಕ ಬೆಳವಣಿಗೆ ಆಟ-ಪಾಠಗಳ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ರೂಪಿಸುವುದು.
  3. ಪ್ರತಿ 3 ವರ್ಷದಿಂದ 6  ವರ್ಷದ ಎಲ್ಲಾ ಮಕ್ಕಳು ಅಂಗನವಾಡಿ ಹಾಗೂ ಶಾಲೆಗಳಲ್ಲಿ ದಾಖಲಾಗಿ ಶಿಕ್ಷಣವನ್ನು ಪ್ರಾರಂಭಿಸುವುದು.
  4. ಜೀತ ಪದ್ಧತಿ ಹಾಗೂ ಕೃಷಿ ಕಾರ್ಮಿಕ ವೃತ್ತಿಯಲ್ಲಿ ಮಕ್ಕಳನ್ನು ತೊಡಗಿಸುವವರ ವಿರುದ್ಧ ಜಾಗೃತಿ ಮೂಡಿಸುವುದು.
  5. ಹೆಣ್ಣು ಮಕ್ಕಳ ಪೋಷಣೆ ಹಾಗೂ ರಕ್ಷಣೆ.
ಮೇಲ್ಕಂಡ ಅಂಶಗಳನ್ನಲ್ಲದೆ ಮಕ್ಕಳ ಪರವಾಗಿ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಯೋಜನೆಯ ಕಾರ್ಯಕ್ರಮಗಳನ್ನು ವಿವರವಾಗಿ ಚರ್ಚಿಸಿ ಗ್ರಾಮಸ್ಥರು ಹಾಗೂ ಪೋಷಕರುಗಳಿಗೆ ಹೆಚ್ಚಿನ ತಿಳುವಳಿಕೆ ನೀಡುವ ಕಾರ್ಯಕ್ರಮವಾಗಿರಬೇಕು. ಈ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗೆ ಆಯಾ ಗ್ರಾಮಪಂಚಾಯ್ತಿ ವ್ಯಾಪ್ತಿಯ ಮಕ್ಕಳು, ಪೋಷಕರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸೂಪರ್ವೈಸರ್ಗಳು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಎಲ್ಲಾ ಶಾಲಾ ಶಿಕ್ಷಕಿಯರು, ಶಿಕ್ಷಕರು, ಪೊಲೀಸ್ ಅಧಿಕಾರಿಗಳು, ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು, ಸ್ಥಳೀಯ ಸ್ವಯಂಸೇವಾ ಸಂಘಗಳ ಪ್ರತಿನಿಧಿಗಳು ಕಡ್ಡಾಯವಾಗಿ ಹಾಜರಾಗಲು ವ್ಯವಸ್ಥೆ ರೂಪಿಸಬೇಕು.

ಎಲ್ಲಾ ಗ್ರಾಮ ಪಂಚಾಯತಿಗಳು ತಮ್ಮ ವ್ಯಾಪ್ತಿಯಲ್ಲಿರುವ ಮಕ್ಕಳ ಬಗ್ಗೆ ಅಂಕಿಸಂಖ್ಯೆ ಹಾಗೂ ಇನ್ನಿತರೆ ಮಾಹಿತಿಯನ್ನು ಕ್ರೋಢೀಕರಿಸಿಕೊಳ್ಳುವ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು. ಎಲ್ಲಾ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವೈಯಕ್ತಿಕವಾಗಿ ಗಮನಹರಿಸಿ ಮಕ್ಕಳ ಹಕ್ಕಿನ ವಿಶೇಷ ಗ್ರಾಮಸಭೆಯನ್ನು ಏರ್ಪಡಿಸಬೇಕೆಂದು ನಿರ್ದೇಶಿಸಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಇದನ್ನು ಮುಂದಿವರೆಸುತ್ತಾ ದಿನಾಂಕ : 30-10-2007ರಲ್ಲಿ ಮಕ್ಕಳ ಗ್ರಾಮಸಭೆಯ ರೂಪುರೇಷೆಗಳ ಬಗ್ಗೆ ಮಾರ್ಗಸೂಚಿ ಕುರಿತು ಕರ್ನಾಟಕದ ಎಲ್ಲಾ ಪಂಚಾಯಿತಿಗಳಿಗೂ ಸುತ್ತೋಲೆಗಳನ್ನು ಹೊರಡಿಸಿದೆ. ಇದರಲ್ಲಿರುವ ಮುಖ್ಯ ವಿಚಾರಗಳೆಂದರೆ.

ಮಕ್ಕಳ ಗ್ರಾಮ ಸಭೆಯ ದಿನಾಂಕ, ಸ್ಥಳ ಮತ್ತು ಸಮಯ ನಿಗದಿ ಮಾಡುವ ಕುರಿತು ಪ್ರಸ್ತಾಪಿಸಿದೆ: ಇಲ್ಲಿ ನಾವು ತಿಳಿಯಲೇಬೇಕಾದ ವಿಚಾರಗಳೆಂದರೆ ಸಾಕಷ್ಟು ಗ್ರಾ.ಪಂಗಳು ತಮಗೆ ಇಷ್ಟ ಬಂದ ದಿನದಂದು ಮಕ್ಕಳ ಗ್ರಾಮಸಭೆಗಳನ್ನು ನಡೆಸಲು ಸೂಚಿಸುತ್ತಾರೆ, ಹೀಗೆ ಸೂಚಿಸುವುದರಿಂದ ಮಕ್ಕಳಿಗೆ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಈ ಗ್ರಾಮಸಭೆಗಳಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರಬಹುದು. ಹೀಗಾಗಿ ಸುತ್ತೋಲೆಯಲ್ಲಿ ಹೇಳಿರುವ ರೀತಿ ಯಾವುದೇ ಗ್ರಾ.ಪಂಗಳು ದಿನಾಂಕ, ಸ್ಥಳ ಮತ್ತು ಸಮಯ ನಿಗದಿ ಮಾಡುವ ಮೊದಲು ಒಂದು ಪೂರ್ವಭಾವಿ ಸಭೆಯನ್ನು 15 ದಿನ ಮುಂಚಿತವಾಗಿ ಕರೆಯಬೇಕಾಗುತ್ತದೆ. ಈ ಸಭೆಗೆ ಗ್ರಾ.ಪಂ ವ್ಯಾಪ್ತಿಗೆ ಬರುವ ವಿವಿಧ ಇಲಾಖೆಗಳ ಪ್ರತಿನಿಧಿಗಳನ್ನು ತಪ್ಪದೆ ಕರೆಯಬೇಕಾಗುತ್ತದೆ. ಇಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಣ ಇಲಾಖೆಯಿಂದ ಶಾಲಾ ಮುಖ್ಯೋಪಾಧ್ಯಾಯರು, ಆರೋಗ್ಯ ಇಲಾಖೆಯಿಂದ ಆ ಪಂಚಾಯಿತಿ ವ್ಯಾಪ್ತಿಗೆ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಎ.ಎನ್.ಎಂ ಮತ್ತು ವೈದ್ಯಾಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಪ್ರತಿನಿಧಿ, ಪೊಲೀಸ್ ಇಲಾಖೆಯ ಪ್ರತಿನಿಧಿ, ತಾಲ್ಲೂಕು ಪಂಚಾಯಿತಿಯಿಂದ ನೇಮಕವಾಗಿರುವ ನೋಡೆಲ್ ಆಫೀಸರ್ ಅಥವಾ ಕಾರ್ಯನಿರ್ವಾಹಕ ಅಧಿಕಾರಿ, ಪಡಿತರ ಮತ್ತು ನಾಗರೀಕ ಸರಬರಾಜು ಇಲಾಖೆಯ ಪ್ರತಿನಿಧಿ, ಕಾರ್ಮಿಕ ಇಲಾಖೆಯ ಪ್ರತಿನಿಧಿ ಇವೇ ಮೊದಲಾದ ಇಲಾಖೆಗಳ ಜೊತೆ ಆ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಘಸಂಸ್ಥೆಗಳಿಂದ ಪ್ರತಿನಿಧಿಗಳನ್ನು ಆಹ್ವಾನಿಸಿ ಎಲ್ಲರ ಸಹಮತದೊಂದಿಗೆ ದಿನಾಂಕ, ಸಮಯ, ಸ್ಥಳ ನಿರ್ಧರಿಸಬೇಕಾಗುತ್ತದೆ.
  • ಮಕ್ಕಳ ಗ್ರಾಮ ಸಭೆಗೆ ಪೂರ್ವ ತಯಾರಿ : ಮಕ್ಕಳ ಗ್ರಾಮಸಭೆಗಳನ್ನು ನಡೆಸುವುದಕ್ಕಿಂತ ಅದನ್ನು ಆಯೋಜಿಸುವುದು ತುಂಬಾ ಗುರುತರವಾದ ಜವಾಬ್ದಾರಿ. ಮುಖ್ಯವಾಗಿ ಇದನ್ನು ಉಸ್ತುವಾರಿ ಮಾಡಬೇಕಿರುವುದು ಗ್ರಾಮ ಪಂಚಾಯಿತಿ. ಮೇಲೆ ಹೇಳಿರುವ ಉದ್ದೇಶಗಳನ್ನು ಪೂರೈಸಲು ಆಯಾ ಗ್ರಾಮಪಂಚಾಯಿತಿಗಳು ಪೂರ್ವಬಾವಿ ಸಭೆಯನ್ನು ಆಯೋಜಿಸಿದ ದಿನದಂದು ಮಕ್ಕಳ ಮಾಹಿತಿ ಸಂಗ್ರಹಿಸಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಇಲ್ಲಿ ಮುಖ್ಯವಾಗಿ ಆ ಗ್ರಾ.ಪಂ ವ್ಯಾಪ್ತಿಗೆ ಬರುವ ಒಟ್ಟು ಮಕ್ಕಳ ಅಂಕಿ ಅಂಶಗಳು (0-18ವರ್ಷವರೆಗೂ), ಮಕ್ಕಳ ವಿವಿಧ ಪರಿಸ್ಥಿತಿಗಳ ಬಗ್ಗೆ (ಅಂಗವಿಕಲತೆ, ಆರೋಗ್ಯ, ರೋಗನಿರೋಧಕಗಳನ್ನು ಪಡೆದಿರುವ ಮಕ್ಕಳ ಪರಿಸ್ಥಿತಿ, ಬಾಲ್ಯವಿವಾಹಗಳು, ಬಾಲ ಕಾರ್ಮಿಕ ಪದ್ಧತಿ, ಶಾಲೆ ಮತ್ತು ಅಂಗನವಾಡಿಗಳ ಸ್ಥಿತಿಗತಿ, ಅಪೌಷ್ಟಿಕತೆ, ಅನಾಥ/ಅರೆಅನಾಥ ಮಕ್ಕಳ ವಿಚಾರಗಳು, ಕಾಣೆಯಾದ ಮಕ್ಕಳು, ಮುಖ್ಯವಾಗಿ ಮರಣದ ವಿಚಾರಗಳು, ಶಿಶುಮರಣ, ತಾಯಂದಿರ ಮರಣ, ಮಕ್ಕಳ ಮರಣ) ಇವೇ ಮೊದಲಾದ ವಿಚಾರಗಳ ಬಗ್ಗೆ ಹಿಂದಿನ ವರ್ಷದ ಅಂಕಿಅಂಶಗಳನ್ನು ಸಂಬಂಧಪಟ್ಟವರಿಂದ ಮಾಹಿತಿ ಕ್ರೋಢೀಕರಣ ಮಾಡಬೇಕಾಗಿದೆ. ಗ್ರಾಮಸಭೆ ಆಯೋಜನೆ ಮಾಡುವ ಸ್ಥಳಕ್ಕೆ ಬೇಟಿ ಕೊಡುವುದು, ಸೂಕ್ತವಾದ ವ್ಯವಸ್ಥೆಗಳನ್ನು ಆಯೋಜಿಸುವುದು, ಬೇರೆ ಊರಿನಿಂದ ಬರುವ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವುದು, ಶಾಲೆಗಳಿಗೆ ಭೇಟಿಕೊಟ್ಟು ಮಕ್ಕಳಿಗೆ ಈ ಮಕ್ಕಳ ಗ್ರಾಮಸಭೆಗಳ ಬಗ್ಗೆ ಮಾಹಿತಿ ನೀಡಿ ತಯಾರು ಮಾಡುವುದು ಮುಖ್ಯವಾದ ಕೆಲಸವಾಗುತ್ತದೆ.
ಈ ಮೇಲ್ಕಂಡ ವಿಚಾರಗಳ ಜೊತೆಯಲ್ಲಿ ಸುತ್ತೋಲೆಯಲ್ಲಿ ಹೇಳಿರುವ ವಿಚಾರಗಳೆಂದರೆ ಮಕ್ಕಳ ಗ್ರಾಮ ಸಭೆಯಲ್ಲಿ ನಡೆಸಬೇಕಾದ ಕಾರ್ಯಕ್ರಮಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರ ಕರ್ತವ್ಯಗಳು, ಗ್ರಾಮ ಪಂಚಾಯಿತಿ ಸದಸ್ಯರ ಕರ್ತವ್ಯಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಯ ಕರ್ತವ್ಯಗಳು, ಕಾರ್ಯನಿರ್ವಹಣಾಧಿಕಾರಿಯ ಕರ್ತವ್ಯಗಳು, ಮಾರ್ಗದರ್ಶಕ ಅಧಿಕಾರಿಯ ಕರ್ತವ್ಯಗಳ ಬಗ್ಗೆ ಹೇಳಿರುವುದು ಶ್ಲಾಘನೀಯ.

ಮಕ್ಕಳ ಗ್ರಾಮ ಸಭೆ ಕಾರ್ಯಕ್ರಮಗಳನ್ನು ಪ್ರತಿ ಗ್ರಾಮ ಪಂಚಾಯಿತಿಯು ತಪ್ಪದೆ ವಿಡಿಯೋ ಚಿತ್ರೀಕರಣ ಮಾಡಿ, ಸಿ.ಡಿ ಯನ್ನು ಕಾರ್ಯನಿರ್ವಾಹಕಾಧಿಕಾರಿಗಳಿಗೆ ಸಲ್ಲಿಸತಕ್ಕದ್ದು.

ಎಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ತಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿನ ಪ್ರತಿ ಗ್ರಾಮ ಪಂಚಾಯಿತಿಯಿಂದ ಮಕ್ಕಳ ಗ್ರಾಮ ಸಭೆ ಬಗ್ಗೆ ತಾಲ್ಲೂಕುವಾರು ವರದಿ ಪಡೆದು ಕ್ರೋಢೀಕರಿಸಿ ವಿಡಿಯೋ ಚಿತ್ರಿಕರಣಕ್ಕೆ ಸಂಬಂಧಿಸಿದಂತೆ, ಒಂದು ಸಿ.ಡಿ ಯನ್ನು ತಯಾರಿಸಿ ಒಂದು ತಿಂಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸತಕ್ಕದ್ದು ಎಂದು ಈ ಸುತ್ತೋಲೆ ಸ್ಪಷ್ಟವಾಗಿ ತಿಳಿಸಿರುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊರಡಿಸುವ ಕರ್ನಾಟಕ ವಿಕಾಸ ಪುಸ್ತಕವನ್ನು ನೋಡಬಹುದು. (ಇದರ ಕಂಪ್ಯೂಟರ್ ಪ್ರತಿಗಳು ವೆಬ್ ಸೈಟ್ ನಲ್ಲಿ ಲಭ್ಯ)
 
ಪ್ರಸ್ತುತ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳ ಹಾದಿಯಲ್ಲಿ ಎದುರಾಗುತ್ತಿರುವ ಸವಾಲುಗಳು :
  • ವ್ಯಾಪಕ ಪ್ರಚಾರದ ಕೊರತೆ : ಸರ್ಕಾರದ  ಪ್ರಯತ್ನಗಳ ಹೊರತಾಗಿಯೂ ಇದರ ಬಗ್ಗೆ ಮಾಹಿತಿ ತೀರ ಕಡಿಮೆ ಎಂದು ಹೇಳಬಹುದು. ಮಕ್ಕಳ ಗ್ರಾಮಸಭೆಗಳನ್ನು ಹೇಗೆ ನಡೆಸಬೇಕು, ಪಂಚಾಯಿತಿಯ ಜವಾಬ್ದಾರಿ ಏನು, ಪೂರ್ವ ತಯಾರಿ, ಇವೇ ಮೊದಲಾದ ವಿಚಾರಗಳು ಇಂದಿಗೂ ಪಂಚಾಯಿತಿಗಳಿಗೆ, ಸಂಘಸಂಸ್ಥೆಗಳಿಗೆ ಮಾಹಿತಿ ಕಡಿಮೆ ಇದೆ. ಈ ನಿಟ್ಟಿನಲ್ಲಿ ಇದರ ಕುರಿತಾದ ಶಿಕ್ಷಣ ತೀರ ಅಗತ್ಯ.
  • ವಿವಿಧ ಇಲಾಖೆಗಳ ಸಹಕಾರದ ಕೊರತೆ: ಮಕ್ಕಳು ಎಂಬುದು ಕೇವಲ ಯಾವುದೋ ಒಂದು ಇಲಾಖೆಯ ಜವಾಬ್ದಾರಿಯಲ್ಲ, ಎಲ್ಲಾ ಇಲಾಖೆಗಳ ಸಹಕಾರ ಇದರ ಯಶಸ್ಸಿಗೆ  ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳಲ್ಲಿ ಎಲ್ಲಾ ಇಲಾಖೆಗಳು ಪಾಲ್ಗೊಂಡು ಮಕ್ಕಳ ಸಮಸ್ಯೆಗಳನ್ನು ಪರಿಹರಿಸಿದಾಗ ಇದರ ಮೂಲ ಉದ್ದೇಶ ನೆರವಾಗುತ್ತದೆ.
  • ಹಣಕಾಸಿನ ಕೊರತೆ: ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳನ್ನು ಆಯೋಜಿಸಲು, ಮತ್ತು ಮಕ್ಕಳು ವಿಶೇಷ ಗ್ರಾಮಸಭೆಗಳಲ್ಲಿ ಪರಿಹರಿಸಲು ಹಣದ ಕೊರತೆ ಕಾಣುತ್ತದೆ ಎಂಬುದು ಹಲವಾರು ಪಂಚಾಯಿತಿ ಪ್ರತಿನಿಧಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮಾತು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಬರುವ ಅನುದಾನಗಳಲ್ಲಿ ಮಕ್ಕಳಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ಅನುದಾನವನ್ನು ಮೀಸಲಿಡಬೇಕು.
  • ಗ್ರಾಮಸಭೆಗಳಲ್ಲಿ ಕೈಗೊಂಡ ನಿರ್ಧಾರಗಳ ಉಸ್ತುವಾರಿ: ಮಕ್ಕಳ ವಿಶೇಷ ಗ್ರಾಮಸಭೆಗಳಲ್ಲಿ ಹಲವಾರು ಸಮಸ್ಯೆ/ವಿಚಾರಗಳು ಚರ್ಚೆಗೆ ಬಂದು ಅವುಗಳನ್ನು ನಡಾವಳಿಗೆ ಸೇರಿಸಿದ ನಂತರ ಅವುಗಳನ್ನು ಮುಂದೆ ಹೇಗೆ ಪರಿಹರಿಸಬೇಕು, ಪಂಚಾಯಿತಿಯ ಯಾವ ಯೋಜನೆಗಳಲ್ಲಿ ಈ ಸಮಸ್ಯೆಗಳನ್ನು ಸೇರಿಸಿ ಪರಿಹರಿಸಬೇಕು ಎಂಬ ವಿಚಾರಗಳು ಇನ್ನೂ ಹಲವಾರು ಪಂಚಾಯಿತಿಗಳಲ್ಲಿ ಗೊಂದಲವನ್ನು ಉಂಟುಮಾಡಿವೆ. ಇವುಗಳ ಉಸ್ತುವಾರಿ ಮಾಡುವ ವಿಧಾನ/ ಉಸ್ತುವಾರಿ ಮಾಡುವ ಜವಾಬ್ದಾರಿ ಯಾರೆದೆಂದು ಇನ್ನೂ ಈ ಸುತ್ತೋಲೆಯಲ್ಲಿ ತಿಳಿಸಬೇಕಾಗಿದೆ.
  • ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳಲ್ಲಿ ಮಕ್ಕಳ ಅಧ್ಯಕ್ಷತೆ: ಇದು ಮಕ್ಕಳಿಗೆ ಸಂಬಂಧಪಟ್ಟ ಗ್ರಾಮಸಭೆಯಾದ್ದರಿಂದ ಮಕ್ಕಳೇ ಇದರ ಅಧ್ಯಕ್ಷತೆಯನ್ನು ವಹಿಸಬೇಕು ಎಂದು ಹಲವಾರು ಪಂಚಾಯಿತಿ/ವ್ಯಕ್ತಿಗಳ ಅಭಿಪ್ರಾಯ. ಹಲವಾರು ಪಂಚಾಯಿತಿಗಳು ಇದನ್ನೆ ಅನುಸರಿಸಿವೆ. ಆದರೆ ಇದು ಕಾನೂನು ಪರವಾಗಿ ಸಿಂಧುಗೊಳ್ಳುವುದಿಲ್ಲ. ಆಯಾ ಗ್ರಾಮ ಪಂಚಾಯಿತಿಗಳ ಅದ್ಯಕ್ಷರು, ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾದ್ಯಕ್ಷರು, ಅವರ ಅನುಪಸ್ಥಿತಿಯಲ್ಲಿ ಯಾವುದಾದರೂ ಸದಸ್ಯರು ಮಾತ್ರ ಯಾವುದೇ ಗ್ರಾಮಸಭೆಗಳ ಅದ್ಯಕ್ಷತೆಯನ್ನು ವಹಿಸಬೇಕು. ಇಲ್ಲದಿದ್ದಲ್ಲಿ ಇದು ಅಸಿಂದು ಎಂದು ಪರಿಗಣಿಸುತ್ತಾರೆ. ಮತ್ತು ಹಿರಿಯರು ಮಕ್ಕಳ ಮೇಲೆ ತಮ್ಮ ಹೊರೆಯನ್ನು ಹೊರಿಸಲು ಪ್ರಯತ್ನಿಸುತ್ತಿರುವುದು ಇಲ್ಲಿ ಕಂಡುಬರುವ ವಿಚಾರ. ಇದರ ಬಗ್ಗೆ ಇರುವ ಗೊಂದಲಗಳನ್ನು ಸರ್ಕಾರ ಕೂಡಲೇ ಪರಿಹರಿಸಬೇಕು.
  • ಆದ್ಯತೆ: ಇನ್ನು ಹಲವಾರು ಪಂಚಾಯತಿಗಳಿಗೂ ಇಂದಿಗೂ ಮಕ್ಕಳು ಆದ್ಯತೆಯಲ್ಲಿ ಇಲ್ಲ. ಈ ಮನೋಭಾವವನ್ನು ಕೂಡಲೇ ಬದಲಾಯಿಸುವ ಅವಶ್ಯಕತೆ ನಮ್ಮ ಮುಂದಿದೆ. ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಎಂಬ ಮನೋಭಾವವನ್ನು ತೊಡಗಿಸಿ ಇಂದಿನ ಮಕ್ಕಳು ಇಂದಿನ ಪ್ರಜೆಗಳು ಎಂಬ ಮನೋಭಾವದಲ್ಲಿ ಮಾಡಿದಾಗ ಈ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಲು ಸಾಧ್ಯ.
  • ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕರು/ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಮಕ್ಕಳ ಗ್ರಾಮಸಭೆಗಳ ಬಗ್ಗೆ ಮತ್ತಷ್ಟು ಕಾಳಜಿ/ಆಸಕ್ತಿ ತೋರುವ ಅವಶ್ಯಕತೆ ಇಂದು ಎಲ್ಲಾ ಕಡೆ ಎತ್ತಿತೋರುತ್ತದೆ. ಮೇಲ್ಮಟ್ಟದಿಂದ ಕೆಳಹಂತದವರೆಗೂ ಉಸ್ತುವಾರಿ ಕ್ರಮಗಳು ಜಾರಿಗೊಂಡಾಗ ಈ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳು ಪರಿಣಾಮಕಾರಿಯಾಗಿ ಮಕ್ಕಳ ಜೀವನಕ್ಕೆ/ರಕ್ಷಣೆಗೆ ಸಹಕಾರಿಯಾಗಲು ಸಾಧ್ಯ.
  • ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳ ಕುರಿತು ಕೆಲಸ ನಿರ್ವಹಿಸುವ ಸಂಸ್ಥೆಗಳ ಕೊರತೆ: ನಮ್ಮ ಕರ್ನಾಟಕದಲ್ಲಿ 5628 ಗ್ರಾಮ ಪಂಚಾಯಿತಿಗಳು ಇವೆ. 176 ತಾಲ್ಲೂಕು ಪಂಚಾಯಿತಿಗಳಿವೆ. ಆದರೆ ಪಂಚಾಯಿತಿ ಮತ್ತು ಮಕ್ಕಳ ಕುರಿತು ಕೆಲಸ ಮಾಡುವ ಸಂಸ್ಥೆಗಳ ಸಂಖ್ಯೆ ತೀರ ಕಡಿಮೆ. ಜಿಲ್ಲೆಗಳಲ್ಲಿ ಒಂದು/ಎರಡು ಸಂಸ್ಥೆಗಳನ್ನು ನೋಡುವುದು ಕಷ್ಟವಾಗಿದೆ. ಕೆಲವೇ ಜಿಲ್ಲೆಗಳಲ್ಲಿ ಸಂಘಸಂಸ್ಥೆಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರೂ, ಇದರ ಕೊರತೆ ಇದೇ ಎಂದೇ ಹೇಳಬಹದು.
ಗೆಳೆಯರೆ ನವೆಂಬರ್ ಬಂದಿದೆ, ನಮ್ಮ ಮೇಲೆ ಸಾಕಷ್ಟು ಜವಾಬ್ದಾರಿಗಳು ಇವೆ, ನವೆಂಬರ್ ಎಂದರೆ ಕೇವಲ ಮಕ್ಕಳ ದಿನಾಚರಣೆಯ ಸಂಭ್ರಮವನ್ನು ಆಚರಿಸುವುದಲ್ಲದೆ, ನಮ್ಮ ಹಳ್ಳಿಗಳಲ್ಲಿ ಎದುರಾಗುತ್ತಿರವ ಮಕ್ಕಳ ಹಲವಾರು ಸಮಸ್ಯೆಗಳನ್ನು ಬದಲಾಯಿಸಲು ಪ್ರಯತ್ನಪಡಬೇಕಾಗಿದೆ. ಇದಕ್ಕೆ ಪೂರಕವಾಗಿ ನಮ್ಮಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ಎನ್ನುವ ಅಸ್ತ್ರ ಇದೆ. ಇದನ್ನು ಬತ್ತಳಿಕೆಯಲ್ಲಿ ತುಕ್ಕುಹಿಡಿಸುವ ಬದಲು ನಮ್ಮ ಗ್ರಾಮಗಳಲ್ಲಿ ಮಕ್ಕಳ ಮೇಲಾಗುತ್ತಿರುವ ಸಮಸ್ಯೆಗಳ ಮೇಲೆ ಪ್ರಯೋಗಿಸೋಣ. ಫಲಾಫಲಗಳನ್ನು ನಂತರ ನೋಡೋಣ.

ಖಂಡಿತಾ ನಿಮ್ಮ ಊರಿನಲ್ಲೂ ಈ ರೀತಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳನ್ನು ಆಯೋಜಿಸುತ್ತೀರ ಅಲ್ವಾ. ಹಾಗಾದರೆ ಇಂದೇ ನಿಮ್ಮ ಗ್ರಾಮ ಪಂಚಾಯಿತಿ ಭೇಟಿಕೊಡಿ, ಈ ವಿಚಾರಗಳನ್ನು ತಿಳಿಸಿ ಮತ್ತು ನಿಮ್ಮ ಪಂಚಾಯಿತಿಯನ್ನು ಮಕ್ಕಳ ಸ್ನೇಹಿ ಪಂಚಾಯಿತಿಯಾಗಿಸಿ.
​
ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯು ಮಕ್ಕಳು ಮತ್ತು ಪಂಚಾಯಿತಿಗಳು ಅಡಿಯಲ್ಲಿ, ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳನ್ನು ಎಲ್ಲೆಡೆ ನಡೆಸುವಂತಾ ಕೆಲಸದಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಇದಕ್ಕೆ ಸಂಬಂಧಪಟ್ಟ ಪೂರಕ ಸಾಮಗ್ರಿಗಳನ್ನು/ಮಾಹಿತಿ ಸಂಪನ್ಮೂಲಗಳನ್ನು, ತರಬೇತಿ, ಕಾರ್ಯಾಗಾರ ಮತ್ತು ಸರ್ಕಾರದ ಜೊತೆ ವಕೀಲಿ, ಸಮಾಲೋಚನೆಗಳನ್ನು ನಡೆಸುತ್ತಾ ಕ್ರಿಯಾತ್ಮಕವಾಗಿ ನಿರ್ವಹಿಸುವುದನ್ನು ಮತ್ತು ಇದರ ಕುರಿತು ಪ್ರಕಟಿಸಿರುವ ಮಾಹಿತಿಗಳನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ.
0 Comments



Leave a Reply.


    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9

    Social Work Foot Prints


    RSS Feed


Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com