ಸಮಾಜಕಾರ್ಯಕರ್ತರು ಸಮುದಾಯಗಳ ರಚನೆ, ಕ್ರಿಯಾಶೀಲತೆ, ಸಮುದಾಯದ ವೈಲಕ್ಷಣಗಳು, ಸಮುದಾಯದ ಪ್ರಕಾರಗಳನ್ನು ತಿಳಿದುಕೊಂಡ ನಂತರ ಸಮುದಾಯಗಳಲ್ಲಿರುವ ಸಮಸ್ಯೆಗಳ ಬಗ್ಗೆಯೂ ಸ್ವಲ್ಪಮಟ್ಟಿಗೆ ತಿಳಿಯುವುದು ಒಳಿತು. ಇಲ್ಲಿ ಪಟ್ಟಿ ಮಾಡಿದ ಸಮಸ್ಯೆಗಳು ಎಲ್ಲಾ ಸಮುದಾಯಗಳಲ್ಲಿ ಇರುತ್ತವೆ ಎಂದು ಹೇಳಲಾಗುವುದಿಲ್ಲ. ಆದರೆ ಅಂತಹ ಸಮಸ್ಯೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇದ್ದರೆ, ಸಮಾಜಕಾರ್ಯಕರ್ತರು ತಾವು ಕೆಲಸ ಮಾಡುವ ಸಮುದಾಯಗಳಲ್ಲಿ ಸಮಸ್ಯೆ ಎದುರಾದಾಗ, ವಿಚಲಿತಗೊಳ್ಳದೆ, ತಮ್ಮ ಕಾರ್ಯವೈಖರಿಯನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ, ನಗರ ಮತ್ತು ಬುಡಕಟ್ಟು ಸಮುದಾಯಗಳ ಕೆಲವು ಆಯಾ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಲಾಗಿದೆ. ಇಲ್ಲಿ ವಿವರಿಸಲಾದ ಸಮಸ್ಯೆಗಳಲ್ಲಿ ಕೆಲವನ್ನು ಎಲ್ಲಾ ಪ್ರಕಾರದ ಸಮುದಾಯಗಳಲ್ಲಿ ಕಾಣಬಹುದು. ಇನ್ನೂ ಕೆಲವನ್ನು ಒಂದು ಇಲ್ಲವೇ ಎರಡು ತರಹದ ಸಮುದಾಯಗಳಲ್ಲಿ ಕಾಣಬಹುದು. ಕೆಲವು ಸಮಸ್ಯೆಗಳು ಒಂದು ಪ್ರಕಾರದ ಸಮುದಾಯಗಳಲ್ಲಿ ಪ್ರಮುಖವಾದರೆ, ಇನ್ನೊಂದು ತರಹದ ಸಮುದಾಯದಲ್ಲಿ ಅವು ಅಂಥಹ ದೊಡ್ಡ ಸಮಸ್ಯೆಯಾಗಿ ಪರಿಣಮಿಸುವುದಿಲ್ಲ. ಕೆಲವು ಸಮಸ್ಯೆಗಳು ಕೆಲವೇ ಸಮುದಾಯಗಳನ್ನು ಕಾಡುತ್ತಿರುತ್ತವೆ. ಆದರೆ ಅವು ಬೇರೆ ಅಂತಹುದೇ ಸಮುದಾಯಗಳಲ್ಲಿ ಸಮಸ್ಯೆಯೇ ಆಗಿರುವುದಿಲ್ಲ. ಅದಕ್ಕೆ ಅನೇಕ ಕಾರಣಗಳನ್ನು ಕೊಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಸಮಸ್ಯೆಗಳನ್ನು ಸಮಾಜಕಾರ್ಯಕರ್ತರು ಪರಿಗಣಿಸಬೇಕು.
ಗ್ರಾಮೀಣ ಸಮುದಾಯದ ಸಮಸ್ಯೆಗಳು ನಾವು ಈಗಾಗಲೇ ನೋಡಿದ ಹಾಗೆ ಗ್ರಾಮೀಣ ಸಮುದಾಯಗಳು ಹೆಚ್ಚಾಗಿ ಧಾರ್ಮಿಕ, ಜಾತಿ ಆಧಾರಿತ, ಸಾಂಸ್ಕೃತಿಕ ಮತ್ತು ಕೃಷಿ ಹಿನ್ನೆಲೆ ಇರುವಂತಹವುಗಳಾಗಿರುತ್ತವೆ. ಹಾಗಾಗಿ ಆ ಸಮುದಾಯಗಳ ಸಮಸ್ಯೆಗಳು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಕ್ಷೇತ್ರಗಳಲ್ಲಿ ಅಜ್ಞಾನ ಮೂಢನಂಬಿಕೆ, ಸಮುದಾಯಗಳ ರಚನೆ, ಕ್ರಿಯಾಶೀಲತೆ, ದುವ್ರ್ಯವಸ್ಥೆ, ಸೂಕ್ತ ಕ್ರಮಗಳ ಕೊರತೆ, ಸಂಯೋಜನೆ, ಸಹಕಾರ, ಆಡಳಿತದ ನ್ಯೂನತೆ ಮುಂತಾದ ಅಂಶಗಳಿಂದ ಕೂಡಿರುತ್ತವೆ. ಆರ್ಥಿಕ ಕ್ಷೇತ್ರದಲ್ಲಿ ಹೆಚ್ಚಾಗಿ ಕೃಷಿ ಮತ್ತು ಕೃಷಿ ಸಂಬಂಧಿ ಚಟುವಟಿಕೆಗಳಿಗೇ ವ್ಯಾಪಿಸಿಕೊಂಡಿರುತ್ತವೆ. ಇವುಗಳಲ್ಲದೆ ಸಾಮಾಜಿಕ ಕ್ಷೇತ್ರಕ್ಕೂ ಸಂಬಂಧಪಟ್ಟಂತೆ ಸಮಸ್ಯೆಗಳಿರುತ್ತವೆ. ಅವುಗಳನ್ನು ಒಂದೊಂದಾಗಿ ನೋಡಬಹುದು. ಕೃಷಿ ನಮ್ಮ ದೇಶ ಕೃಷಿ ಪ್ರಧಾನ ಎಂದು ಬೀಗುತ್ತೇವೆ. ಇತ್ತೀಚಿನ ಒಂದು ಅಂದಾಜಿನಂತೆ ಪ್ರತಿಶತ ಅರವತ್ತೈದರಿಂದ ಎಪ್ಪತ್ತು ಜನ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಅವರಲ್ಲಿ ಹೆಚ್ಚಾಗಿ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆ, ಮುಂತಾದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರೆ. ಉಳಿದವರು ಕೃಷಿಗೆ ಪೂರಕವಾದ ಕಮ್ಮಾರಿಕೆ, ಕುಂಬಾರಿಕೆ, ಬಡಗಿ ಕೆಲಸ, ಪುಟ್ಟ-ಚಾಪೆ-ಹಗ್ಗ ಹೆಣ್ಣೆಯುವುದು, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಮೀನು ಸಾಕಾಣಿಕೆ, ಚಿಕ್ಕ ಅಂಗಡಿ ವ್ಯಾಪಾರ, ಮುಂತಾದ ವೃತ್ತಿಗಳಲ್ಲಿ ತೊಡಗಿರುತ್ತಾರೆ. ಹಾಗಾಗಿ ಕೃಷಿ ಸಮಸ್ಯೆಗಳು ಈ ಕೃಷಿ ಸಂಬಂಧಿ ಕೆಲಸ ಮಾಡುವವರನ್ನೂ ಬಾಧಿಸುತ್ತವೆ. ಕೃಷಿಸಂಬಂಧಿ ಸಮಸ್ಯೆಗಳನ್ನು ಹೀಗೆ ಪಟ್ಟಿ ಮಾಡಬಹುದು. 1. ಆಧುನಿಕ ಕೃಷಿ ಪದ್ಧತಿಯ ಅನುಕರಣೆ ತೃಪ್ತಿಕರವಾಗಿಲ್ಲ. ಬಹುತೇಕ ರೈತರು ಕೃಷಿಯನ್ನು ವಂಶಪಾರಂಪರ್ಯವಾಗಿ ಮಾಡುತ್ತಿದ್ದಾರೆ. ಅವರಿಗೆ ತಮ್ಮ ಹಳೆಯ ಕೃಷಿ ಪದ್ಧತಿಗಳ ಬಗ್ಗೆ ಒಲವು ಜಾಸ್ತಿ. ಬದಲಾವಣೆಯನ್ನು ಬೇಗನೆ ಒಪ್ಪಿಕೊಳ್ಳುವುದಿಲ್ಲ. ಭೂಮಿ :- ಕೆಲವು ಗ್ರಾಮಗಳಲ್ಲಿ ಮಣ್ಣಿನ ರಚನೆ ಮತ್ತು ಫಲವತ್ತತೆ ತೃಪ್ತಿದಾಯಕವಾಗಿರುವುದಿಲ್ಲ. ಮಣ್ಣಿನ ಆಮ್ಲ ಮತ್ತು ಕ್ಷಾರ ಸಮಪ್ರಮಾಣದಲ್ಲಿದ್ದು, ಮಣ್ಣಿನ ರಚನೆ ಸರಿಯಾಗಿದ್ದರೆ, ಅದಕ್ಕೆ ಹಟ್ಟಿಗೊಬ್ಬರ, ಕಾಂಪೋಷ್ಟ್ ಗೊಬ್ಬರ, ರಸಾಯನಿಕ ಗೊಬ್ಬರ ಮುಂತಾದವುಗಳನ್ನು ತುಂಬಿ ಫಲವತ್ತತೆಯನ್ನು ಹೆಚ್ಚಿಸಬಹುದು. ರಚನೆ ಸರಿಯಾಗಿರದಿದ್ದರೆ, ನೀರನ್ನು ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳುವ ಗುಣವಿರದಿದ್ದರೆ, ಅಂತಹ ಮಣ್ಣನ್ನು ಪರೀಕ್ಷಿಸಬೇಕಾಗುತ್ತದೆ. ಇಂತಹ ಮಣ್ಣು ಪರೀಕ್ಷಾ ಪ್ರಯೋಗಾಲಯಗಳ ಲಭ್ಯತೆ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರಾ ಇದೆ. ಇಂತಹ ಕೇಂದ್ರಗಳು ತಾಲ್ಲೂಕು, ಹೊಟ್ಟು ಮಟ್ಟದಲ್ಲಿ ಪ್ರಾರಂಭವಾಗಬೇಕು. ರೈತರು ತಮ್ಮ ಭೂಮಿಯ ಮಣ್ಣನ್ನು ಪರೀಕ್ಷಿಸಿಕೊಳ್ಳಬೇಕು. ಹೀಗೆ ಮಣ್ಣನ್ನು ಪರೀಕ್ಷೆಗೆ ತೆಗೆಯುವಾಗ ಒಂದು ವಿಧಾನವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಅದನ್ನು ರೈತರು ತಿಳಿದಿರಬೇಕು. ಕೃಷಿ ಮತ್ತು ಪ್ರಯೋಗಾಲಯದ ಅಧಿಕಾರಿಗಳು ವರದಿ ಕೊಟ್ಟಾಗ, ಅವರು ಶಿಫಾರಸು ಮಾಡಿದ ಕ್ರಮಗಳನ್ನು ಕೈಕೊಳ್ಳಬೇಕು. ಸುಧಾರಿತ ತಳಿಯ ಬೀಜ :- ನಿಷ್ಠಾವಂತ ರೈತರಿಗೆ ಎದುರಾಗುವ ಇನ್ನೊಂದು ಸಮಸ್ಯೆ ಸುಧಾರಿತ ತಳಿಯ ಬೀಜಗಳ ಅಥವಾ ಹೈಬ್ರಿಡ್ ತಳಿಯ ಬೀಜಗಳ ಅಲಭ್ಯತೆ. ಕೃಷಿ ಅಧಿಕಾರಿಗಳ ಪ್ರತಿವರ್ಷ ಬೆಳೆಯುವ ಬೆಳೆಗಳ ಆಧಾರದ ಮೇಲೆ ಸುಧಾರಿತ ತಳಿಯ ಬೀಜಗಳ ಅಥವಾ ಹೈಬ್ರಿಡ್ ತಳಿಗಳ ಬೀಜಗಳ ಒಂದು ಅಂದಾಜನ್ನು ಮಾಡಿರುತ್ತಾರೆ. ಅಂತಹ ಅಂದಾಜನ್ನು ಆಧರಿಸಿ ಬೀಜ ವಿತರಣಾ ಕೇಂದ್ರಗಳ ಮುಖಾಂತರ ಇಲ್ಲವೇ ಖಾಸಗಿ ಬೀಜ ಮಾರುವ ವ್ಯಾಪಾರಿಗಳಿಂದ ಬೀಜಗಳ ಸರಬರಾಜನ್ನು ಮಾಡಿರುತ್ತಾರೆ. ಕೆಲವೊಮ್ಮೆ ಇವು ಸಾಲುವುದಿಲ್ಲ ಇಲ್ಲವೇ ಕಳಪೆ ಗುಣಮಟ್ಟದ್ದಾಗಿರುತ್ತದೆ. ಇಂತಹ ವ್ಯವಸ್ಥೆಯಿಂದ ರೈತರು ತೊಂದರೆಗೆ ಈಡಾಗುತ್ತಾರೆ. ಕೆಲವು ಕಡೆ ಕೆಲವು ಕೃಷಿ ಕಂಪನಿಗಳು ಪ್ರತಿವರ್ಷ ಬೀಜ ಸರಬರಾಜು ಮಾಡುತ್ತಾರೆ. ಅಲ್ಲಿಯೂ ಕೆಲವೊಮ್ಮೆ ಗುಣಮಟ್ಟ ತುಂಬಾ ಕಳಪೆಯಾದ ಉದಾಹರಣೆಗಳೂ ಇವೆ. ಈ ಎಲ್ಲಾ ಅವ್ಯವಸ್ಥೆಗಳು ಅಂತಿಮವಾಗಿ ರೈತನಿಗೆ ಮುಳುವಾಗುತ್ತವೆ. ಗೊಬ್ಬರಗಳು ಉತ್ತಮ ಫಸಲನ್ನು ಪಡೆಯಲು ರೈತರು ಹಟ್ಟಿಗೊಬ್ಬರ, ಕಾಂಪೋಷ್ಟ್ ಗೊಬ್ಬರ, ಹಸುರೆಲೆಗೊಬ್ಬರ ಹಾಗೂ ರಾಸಾನಿಯಕ ಗೊಬ್ಬರಗಳನ್ನು ಉಪಯೋಗಿಸಬೇಕಾಗುತ್ತದೆ. ರೈತರು ತಮಗೆ ಬೇಕಾಗುವಷ್ಟು ಸಾವಯವ ಗೊಬ್ಬರಗಳನ್ನು ಮುಂಚಿತವಾಗಿ ಆಲೋಚಿಸಿ, ಯೋಜಿಸಿ, ತಯಾರಿಸಿಕೊಂಡಿರುವುದಿಲ್ಲ. ಇಲ್ಲವೇ ಆ ಗೊಬ್ಬರ ಹಳ್ಳಿಗಳಲ್ಲಿ ಕೊಂಡುಕೊಳ್ಳಲು ಸಿಗುವುದಿಲ್ಲ. ಇದರ ಜೊತೆಗೆ ಬೆಳೆಗಳಿಗೆ ಸೂಕ್ತ ಮತ್ತು ಸಿಫಾರಸು ಮಾಡಿದ ರಸಾಯನಿಕ ಗೊಬ್ಬರ ಗ್ರಾಮಗಳಲ್ಲಿರುವ ರೈತರ ಸಹಕಾರ ಸಂಘಗಳಲ್ಲಿ ಸಿಗುವುದಿಲ್ಲ. ಕೆಲವೊಮ್ಮೆ ಖಾಸಗಿ ವ್ಯಾಪಾರಸ್ಥರ ಹತ್ತಿರ ಸಿಗುತ್ತಿದ್ದರೂ ದುಪ್ಪಟ್ಟು ಹಣ ಕೊಡಬೇಕಾಗುತ್ತದೆ. ಸಣ್ಣ ರೈತರು ಹಾಗೂ ಅತಿ ಸಣ್ಣ ರೈತರ ಹತ್ತಿರ ಇಂತಹ ರಸಾಯನಿಕ ಗೊಬ್ಬರಗಳನ್ನು ಖರೀದಿಸಲು ಹಣ ಇರುವುದಿಲ್ಲ. ಸಾಲು ಕೊಡಲು ಗ್ರಾಮೀಣ ಬ್ಯಾಂಕುಗಳು ಎಲ್ಲಾ ಹಳ್ಳಿಯಲ್ಲಿಯೂ ಇರುವುದಿಲ್ಲ. ಸಾಲ ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ. ಹೀಗೆ ರೈತರ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತವೆ. ಔಷಧಗಳು ರೈತರಿಗೆ ನಿರೀಕ್ಷಿತ ಇಳುವರಿ ಬರಬೇಕಾದರೆ ತಮ್ಮ ಬೆಳೆಗಳಿಗೆ ಬೆಳೆಗಳನ್ನು ಬಾಧಿಸುವ ಕೀಟಗಳನ್ನು ನಿಯಂತ್ರಿಸಬೇಕು, ಬೆಳೆಗಳಿಗೆ ಬರುವ-ಬರಬಹುದಾದ ರೋಗಗಳನ್ನು ತಡೆಯಬೇಕು. ಇದಕ್ಕೆ ಉತ್ತಮ ಗುಣಮಟ್ಟದ ಕೀಟನಾಶಕಗಳು, ರೋಗನಾಶಕಗಳು ಹಳ್ಳಿಗಳಲ್ಲಿ ಸಿಗುವಂತಾಗಬೇಕು. ರೈತರು ಅವುಗಳ ಅವಶ್ಯಕತೆಯನ್ನು ಮನಗಂಡು ಉಪಯೋಗಿಸುವಂತಾಗಬೇಕು. ಕೆಲವೊಮ್ಮೆ ಒಮ್ಮೆ ಹೊಡೆದ ಔಷಧಕ್ಕೆ ಕೆಲವು ಕೀಟಗಳು ಸಾಯುತ್ತವೆ. ಉಳಿದ ಕೀಟಗಳು ಆ ಔಷಧಕ್ಕೆ ಹೊಂದುಕೊಂಡು ಬಿಡುತ್ತದೆ. ಅಂತಹ ಸಂದರ್ಭಗಳಲ್ಲಿ ರೈತರು ಕೃಷಿತಜ್ಞರಿಂದ ಸಲಹೆ ಪಡೆದು ಅದರಂತೆ ಮಾಡಬೇಕು. ಸಮಯಕ್ಕೆ ಸರಿಯಾಗಿ ಔಷಧೋಪಚಾರ ಮಾಡದಿದ್ದರೆ ಬೆಳೆಯ ನಾಶ ಖಚಿತ ಮತ್ತು ರೈತರ ಆದಾಯದಲ್ಲಿ ಕುಸಿತ ಉಂಟಾಗುತ್ತದೆ. ಕೃಷಿಯ ಯಾಂತ್ರೀಕರಣ :- ಸಾಮಾನ್ಯವಾಗಿ ರೈತರು, ಅದರಲ್ಲೂ ಸಣ್ಣ ರೈತರು ಹಾಗೂ ಅತಿಸಣ್ಣ ರೈತರು, ತಮ್ಮ ಕೃಷಿ ಚಟುವಟಿಕೆಗಳಿಗೆ ಟ್ರಾಕ್ಟರ್, ಒಕ್ಕಲು ಯಂತ್ರ ಮುಂತಾದ ಯಂತ್ರೋಪಕರಣಗಳನ್ನು ಬಳಸುವುದಿಲ್ಲ. ಟ್ರ್ಯಾಕ್ಟರ್ನಿಂದ ಉಳುಮೆ ಮಾಡದೆ ತಮ್ಮ ಹಿಂದಿನ ಮಡಿಕೆಯನ್ನು (ನೇಗಿಲು) ಉಪಯೋಗಿಸುತ್ತಾರೆ. ಅಂತಹ ದುಡಿಕೆಯಿಂದ ಆಳವಾಗಿ ಉಳುಮೆ ಆಗದೆ ಭೂಮಿಯ ತಯಾರಿ ವೈಜ್ಞಾನಿಕವಾಗಿ ಆಗುವುದಿಲ್ಲ. ಅದರಂತೆಯೇ ಬಿತ್ತನೆ, ಕಳೆ ತೆಗೆಯುವುದು ಮುಂತಾದ ಕೆಲಸಗಳಿಗೆ ತಾವು ಹಿಂದಿನಿಂದ ಬೆಳಸಿಕೊಂಡು ಬಂದಂತಹ ಕೂರಿಗೆ, ಕುಂಟೆ ಮುಂತಾದ ಉಪಕರಣಗಳನ್ನು ಬಳಸುತ್ತಾರೆ. ಒಟ್ಟಾರೆಯಾಗಿ ಕೃಷಿಯನ್ನು ಒಂದು ಉದ್ಯಮ ಎಂದು ಪರಿಗಣಿಸಿ, ಅದನ್ನು ಯಾಂತ್ರೀಕರಣ ಮಾಡಿಲ್ಲ ಎಂಬ ಆಪಾದನೆ ಇದೆ. ಇದು ಭಾಗಶಃ ಸತ್ಯ. ಕೃಷಿಯ ಯಾವೆಲ್ಲಾ ಕೆಲಸಗಳಿಗೆ ಯಂತ್ರಗಳನ್ನು ಬಳಸಬೇಕು ಮತ್ತು ಇನ್ನೂ ಉಳಿದ ಚಟುವಟಿಕೆಗಳಿಗೆ ಹಿಂದಿನ ಉಪಕರಣಗಳನ್ನು ಬಳಸಬೇಕೆಂಬ ವಿಷಯಗಳ ಬಗ್ಗೆ ಕೃಷಿವಿಜ್ಞಾನಿಗಳು ಮಾರ್ಗದರ್ಶನ ಮಾಡಬೇಕು. ಇದು ಗಂಭೀರ ಸಮಸ್ಯೆ ಅಲ್ಲದಿದ್ದರೂ, ಇದು ಗಣನೀಯ ಪ್ರಮಾಣದಲ್ಲಿ ರೈತರನ್ನೂ, ಕೃಷಿತಜ್ಞರನ್ನು ಹಾಗೂ ಯೋಜಕರನ್ನು ಚಿಂತಿಗೆ ಈಡುಮಾಡಿದೆ. ಸಣ್ಣ ಹಿಡುವಳಿ :- ಕೃಷಿ ಕೇತ್ರದಲ್ಲಿ ಗಂಭೀರವಾಗಿ ಆಲೋಚಿಸಬೇಕಾದ ಇನ್ನೊಂದು ಸಮಸ್ಯೆ ಎಂದರೆ ಸಣ್ಣ ಹಿಡುವಳಿಗಳು. ಅರ್ಧ ಹೆಕ್ಟೇರ್ಗಿಂತ ಕಡಿಮೆ ಭೂಮಿ ಇರುವ ಒಂದು ಕೃಷಿ ಘಟಕವನ್ನು ಸಣ್ಣ ಹಿಡುವಳಿ ಎಂದು ಪರಿಗಣಿಸಲಾಗುತ್ತಿದೆ. ನಮ್ಮ ಸಮಾಜದಲ್ಲಿ ಇಂದಿನ ಪರಿಸ್ಥಿತಿಯಲ್ಲಿ ಸಣ್ಣ ರೈತರೇ ಹೆಚ್ಚು. ಅವರಿಗೆ ಮಕ್ಕಳೂ ಬಹಳ. ಇದ್ದ ಆಸ್ತಿಯನ್ನು ಮಕ್ಕಳಿಗೆ ಹಂಚಿದಾಗ ಎಲ್ಲರಿಗೂ ಬರಬಹುದಾದ ಭೂಮಿ ಅರ್ಧ ಎಕರೆ, ಇಂತಹ ತುಂಡು ಭೂಮಿಗಳು ಕೃಷಿಗಾಗಿ ಉಪಯೋಗಿಸಲು ಆರ್ಥಿಕವಾಗಿ ಕಾರ್ಯಸಾಧ್ಯವಲ್ಲದ ಪ್ರಸ್ಥಾವನೆಯಾಗುತ್ತದೆ. ಆದರೂ ಹೆಚ್ಚಿನ ಸಣ್ಣ ಹಾಗೂ ಅತಿಸಣ್ಣ ರೈತರು ತಮಗಿರುವ ಅಷ್ಟು ಚಿಕ್ಕ ಹಿಡುವಳಿಗಳಲ್ಲೇ ಕೃಷಿ ಮಾಡುತ್ತಿದ್ದಾರೆ. ಇದು ರೈತರನ್ನು ಕಾಡುತ್ತಿರುವ ಸಮಸ್ಯೆ. ಅಸ್ಥಿರ ಮಳೆ :- ಉತ್ತಮ ಕೃಷಿ ಚಟುವಟಿಕೆಗಳಿಗೆ, ಲಾಭದಾಯಕ ಇಳುವರಿಗೆ, ಭೂಮಿಯಷ್ಟೇ ಅವಶ್ಯಕವಾಗಿರುವ ಇನ್ನೊಂದು ಅಂಶ ನೀರಾವರಿ ಸೌಲಭ್ಯ, ಜಲಾಶಯ, ಕಾಲುವೆ, ಕೊಳವೆ ಭಾವಿ ಮುಂತಾದ ಮೂಲಗಳಿಂದ ತಮ್ಮ ರೈತರು ಕೃಷಿ ಚಟುವಟಿಕೆಗಳಿಗೆ ಬೇಕಾದ ನೀರನ್ನು ಪಡೆಯುತ್ತಾರೆ. ಆದರೆ ಈ ಅನುಕೂಲ ಇರುವುದು ಮೂರನೇ ಒಂದು ಭಾಗದ ರೈತರಿಗೆ ಮಾತ್ರಾ. ಅಂದರೆ ಉಳಿದ ಮೂರನೇ ಎರಡು ಭಾಗದಷ್ಟು ರೈತರು ತಮ್ಮ ವ್ಯವಸಾಯಕ್ಕೆ ಮಳೆಯನ್ನೇ ಅವಲಂಬಿಸಿದ್ದಾರೆ. ಪ್ರತಿವರ್ಷ ಸರಾಸರಿ 30-40 ಇಂಚು ಮಳೆ ಬರುವ, ಅದೂ ಬಿಟ್ಟು ಬಿಟ್ಟು ಬರುವ, ಪ್ರದೇಶಗಳಲ್ಲಿ ಇದು ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಾರಂಭದಲ್ಲಿ ಮಳೆ ಚೆನ್ನಾಗಿ ಬಂದು, ಆನಂತರದ ದಿನಗಳಲ್ಲಿ ಮಳೆ ಬಾರದೆ ಫಲಗಳು ಒಣಗಿಹೋದ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ. ಇಂತಹ ಪರಿಸ್ಥಿತಿ ಎದುರಾಗದಂತೆ ಪರಿಸರ ತಜ್ಞರು, ಯೋಜನೆಗಳನ್ನು ರೂಪಿಸುವವರು ಹಾಗೂ ದೇಶ/ನಾಡನ್ನು ಆಳುವವರು, ನೋಡಿಕೊಳ್ಳಬೇಕಾಗಿದೆ. ದಾಸ್ತಾನು ಹಾಗೂ ಮಾರುಕಟ್ಟೆ :- ಮೇಲೆ ತಿಳಿಸಿದ ಎಲ್ಲಾ ಸಮಸ್ಯೆಗಳ ಫಲವಾಗಿ ಕೃಷಿ ಉತ್ಪಾದನೆ ಕಡಿಮೆ ಆಗುವುದು ಒಂದು ಸಮಸ್ಯೆ ಆದರೆ, ಅಂತಹ ಉತ್ಪಾದನೆಯನ್ನು ಯೋಗ್ಯ ಬೆಲೆ ಸಿಗುವ ದಾಸ್ತಾನು ಮಾಡಲು ಗ್ರಾಮಗಳಲ್ಲಿ ಸೂಕ್ತ ಅನುಕೂಲಗಳಿಲ್ಲ. ಕೆಲವು ಗ್ರಾಮಗಳಲ್ಲಿ ರೈತರ ಸಹಕಾರಿ ಸಂಘಗಳ ಗೋದಾಮುಗಳಿದ್ದರೂ ಅವು ತೃಪ್ತಿದಾಯಕವಾಗಿಲ್ಲ. ಹಾಗೆ ದಾಸ್ತಾನು ಇಡುವ ವ್ಯವಸ್ಥೆಗೆ ಹೆಚ್ಚು ಪ್ರಚಾರವಿಲ್ಲ. ನಾಲ್ಕೈದು ಹಳ್ಳಿಗಳಿಗೆ ಸೇರಿ ಒಂದು ಸಹಕಾರ ಸಂಘ. ಅದರ ಒಂದು ಗೋದಾಮು ಇದ್ದರೂ ಅದು ಸಾಲದು. ರೈತರ ಬೆಳೆಯನ್ನು ಯೋಗ್ಯ ಬೆಲೆಗೆ ಮಾರಲು ಗ್ರಾಮಾಂತರ ಪ್ರದೇಶದಲ್ಲಿ ಸೂಕ್ತ ಗ್ರಾಮಾಂತರ ಮಾರುಕಟ್ಟೆ ಇಲ್ಲ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಆಗಬೇಕು. ಅಲ್ಲಿ ರೈತ ಸ್ನೇಹಿ ಸೂಕ್ತ ಹಾಗೂ ಉಪಯುಕ್ತ ಮಾರುಕಟ್ಟೆ ವ್ಯವಸ್ಥೆ ಇರಬೇಕು. ಇದಕ್ಕೆ ಕೆಲವು ಅಪವಾದಗಳೂ ಇವೆ. ರೈತರ ಉತ್ಪಾದನೆಗೆ ಸೂಕ್ತ ಬೆಲೆಗಳನ್ನು ಸರಕಾರಗಳು ಆಗಾಗ್ಗೆ ಪರಿಷ್ಕರಿಸಿ ಪ್ರಕಟಿಸುತ್ತಿರಬೇಕು. ಉತ್ಪಾದನಾ ಗುಣಮಟ್ಟದ ಆಧಾರದ ಮೇಲೆ ಪದಾರ್ಥಗಳ ವರ್ಗೀಕರಣ, ತೂಕ, ಬೆಲೆ, ವಂಚನೆ ರಹಿತ ವ್ಯವಸ್ಥೆ ಮಾರುಕಟ್ಟೆಯಲ್ಲಿ ಸಿಗುವಂತಾಗಬೇಕು. ಹಾಗಾಗದೆ ಇರುವುದೇ ರೈತರ ಸಮಸ್ಯೆ. ರೈತರ ಉತ್ಪಾದನೆಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದರಿಂದ, ರೈತರು ತಮ್ಮ ಜರೂರತ್ತಿಗಾಗಿ ಖಾಸಗಿ ವ್ಯಾಪಾರಿಗಳಿಗೆ, ಅಗ್ಗದ ಬೆಲೆಗಾಗಿ ಮಾರಾಟ ಮಾಡಬೇಕಾಗುತ್ತದೆ. ಪರಿಣಾಮವಾಗಿ ರೈತನಿಗೆ ಉಳಿಯಬೇಕಾದ ನಿವ್ವಳ ಆದಾಯ-ಲಾಭ ವ್ಯಾಪಾರಿಗಳ ಪಾಲಾಗುತ್ತದೆ. ಇದು ಸಮಸ್ಯೆ. ಸಾರಿಗೆ-ಸಂಪರ್ಕಗಳ ಕೊರತೆ:- ಗ್ರಾಮ ಸಮುದಾಯಗಳಲ್ಲಿ ಸಾರಿಗೆ ಸಂಪರ್ಕಗಳ ಕೊರತೆ ಸಾಕಷ್ಟಿದ್ದು ರೈತರಿಗೆ ತಂದರೆಯಾಗುತ್ತಿದೆ. ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಅವಶ್ಯವಿರುವ ಬೀಜ, ಗೊಬ್ಬರ, ಕೃಷಿ ಉಪಕರಣಗಳನ್ನು ತೆಗೆದುಕೊಂಡು ಹೋಗಲು ಹಾಗೂ ಕೃಷಿ ಉತ್ಪಾದನೆಯನ್ನು ಕೃಷಿ ಮಾರುಕಟ್ಟೆಗೆ, ಪಟ್ಟಗಳಿಗೆ ಸಾಗಿಸಲು ರಸ್ತೆಗಳು ಚೆನ್ನಾಗಿರಬೇಕು. ಸಾರಿಗೆಗೆ ವಾಹನಗಳ ಲಭ್ಯತೆ ಇರಬೇಕು. ಇವು ಸೂಕ್ತ ಬೆಲೆಗೆ ಸಿಗಬೇಕು. ಹಾಗಾಗದೆ ರೈತ ಸಮುದಾಯಕ್ಕೆ ತೊಂದರೆಯುಂಟಾಗುತ್ತಿದೆ. ರೈತರ ಆತ್ಮಹತ್ಯೆ :- ಪ್ರಾರಂಭದಿಂದ ಇಲ್ಲಿಯತನಕ ರೈತ ಸಮುದಾಯ ಎದುರಿಸುತ್ತಿರುವ ಮುಖ್ಯವಾದ ಸಮಸ್ಯೆಗಳನ್ನು ನೋಡಿದ್ದೇವೆ. ಇವುಗಳ ಜೊತೆಗೆ, ಹವಾಮಾನ ವೈಪರೀತ್ಯ, ಮಳೆ ಅಭಾವ, ಪ್ರವಾಹ, ಸಣ್ಣ ಹಿಡುವಳಿ, ರೈತರ ಉತ್ಪಾದನೆಗೆ ಬೆಂಬಲ ಬೆಲೆ ನಿಗದಿ ಆಗದೆ ಇರುವುದು ಮುಂತಾದ ಕಾರಣಗಳಿಗಾಗಿ ರೈತರು ಕಂಗಾಲಾಗಿದ್ದಾರೆ. ವಿವಿಧ ಕಾರಣಗಳಿಗಾಗಿ ರೈತನಿಗೆ ಸಮೃದ್ಧ ಉತ್ಪಾದನೆ ಮತ್ತು ಲಾಭದಾಯಕ ಆದಾಯ ಬರುತ್ತಾ ಇಲ್ಲ. ಆದರೆ ಇನ್ನೊಂದೆಡೆ ಬ್ಯಾಂಕ್ ಅಧಿಕಾರಿಗಳು ಕೊಟ್ಟ ಸಾಲ ಬೆಳೆಯುತ್ತಿದೆ. ಉದಾರೀಕರಣ, ಜಾಗತೀಕರಣ, ಹೊಸ ಆರ್ಥಿಕ ನೀತಿಗಳು ಇವುಗಳು ರೈತರ ಮೇಲೆ ಋಣಾತ್ಮಕ ಪರಿಣಾಮವನ್ನೂ ಬೀರುತ್ತಿವೆ. ಒಂದು ಕಾಲದಲ್ಲಿ ಸ್ವಾವಲಂಬಿಗಳಾದ ರೈತರು ಇಂದು ಬೀಜ, ಗೊಬ್ಬರ, ಔಷಧ, ಉಪಕರಣಗಳು, ಸಾಲ, ಸಾರಿಗೆ, ಮಾರುಕಟ್ಟೆ, ಬೆಲೆ, ತಾಂತ್ರಿಕ ಜ್ಞಾನ ಮುಂತಾದ ಕಾರಣಗಳಿಗಾಗಿ ಪರಾವಲಂಬಿಗಳಾಗುತ್ತಿದ್ದಾರೆ. ರೈತರು ತಮ್ಮ ತಪ್ಪಲ್ಲದ ಕಾರಣಕ್ಕಾಗಿ ಕಷ್ಟ-ನಷ್ಟಗಳನ್ನು ಎದುರಿಸುವಂತಾಗಿದೆ. ರೈತರ ಸ್ಥಿತಿ ಚಿಂತಾಜನಕವಾಗಿದೆ. ರೈತರ ಈ ದುರ್ವಿಧಿಗೆ ಇನ್ನೊಂದು ಕಾರಣವಿದೆ. ಒಂದು ಕಾಲ ಇತ್ತು. ರೈತರು, ರೈತ ಮಕ್ಕಳು ಕೃಷಿ ಮತ್ತು ಕೃಷಿ ಸಂಬಂಧಿತ ವೃತ್ತಿಗಳಿಂದ ನಷ್ಟವನ್ನು ಅನುಭವಿಸಿ, ಬೇರೆ ದಾರಿ ಕಾಣದೆ, ತಮ್ಮ ಬದುಕಿನ ಸಲುವಾಗಿ ಪಟ್ಟಣಗಳನ್ನು/ನಗರಗಳನ್ನು ಸೇರುತ್ತಿದ್ದರು. ತಮ್ಮ ವಿದ್ಯಾರ್ಹತೆ, ಶಕ್ತಿ, ಧೈರ್ಯ, ಪರಿಚಯ ಮುಂತಾದ ಅಂಶಗಳನ್ನು ಆಧರಿಸಿ ಒಂದು ಸ್ವಂತ ಉದ್ಯೋಗವನ್ನೊ, ಇಲ್ಲವೇ ಒಂದು ಕೆಲಸವನ್ನೊ ಮಾಡುತ್ತಿದ್ದರು. ಕೊನೆಯ ಪಕ್ಷ ಒಂದು ಕೂಲಿ ಕೆಲಸವನ್ನಾದರೂ ಹುಡುಕಿಕೊಂಡು ಬದುಕುತ್ತಿದ್ದರು. ಆದರೆ ಇತ್ತೀಚಿಗೆ ಪಟ್ಟಣ/ನಗರ ಪ್ರದೇಶಗಳು, ಗ್ರಾಮಾಂತರ ಪ್ರದೇಶದಿಂದ ಬಂದಂತಹ ಇಂತಹ ಜನರಿಂದ ತುಂಬಿ ತುಳುಕುತ್ತಿವೆ. ನಗರೀಕರಣ, ಉದಾರೀಕರಣ ಮುಂತಾದ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದರ ಪರಿಣಾಮವಾಗಿ ನಗರ ಮತ್ತು ಗ್ರಾಮೀಣ ಸಮುದಾಯಗಳ ಆರ್ಥಿಕ-ಸಾಮಾಜಿಕ ಚಿತ್ರಣವೇ ಬೇರೆಯಾಗಿದೆ. ಈಗ ನಗರ ಪ್ರದೇಶಗಳಲ್ಲಿಯೂ ವೃತ್ತಿ ಸ್ಪರ್ಧೆ ತಾರಕ್ಕೇರಿದೆ. ಕಟ್ಟಡ ಕೆಲಸ, ರಸ್ತೆ ಕೆಲಸ, ಸೇತುವೆ ಕೆಲಸ, ಒಳಚರಂಡಿ ಕೆಲಸಗಳು, ಹಡಗುಕಟ್ಟೆ ನಿರ್ಮಾಣ, ರೈಲು ಮಾರ್ಗ ನಿರ್ಮಾಣ, ಮುಂತಾದ ಕೆಲಸಗಳಲ್ಲಿಯೂ ವೃತ್ತಿ ಕೌಶಲ ಹೆಚ್ಚಾಗುತ್ತಿದೆ. ಈ ಹಿಂದೆ ಅಂತಹ ಕೆಲಸಗಳನ್ನು ಅಕುಶಲ ಕಾರ್ಮಿಕರು ಮಾಡುತ್ತಿದ್ದರು. ಈಗ ಅವರಲ್ಲಿಯೂ ವೃತ್ತಿ ನೈಪುಣ್ಯತೆ ಜಾಸ್ತಿಯಾಗಿ, ಅವರಲ್ಲಿಯೇ ಬಹುಕುಶಲ, ಕುಶಲ, ಅರೆಕುಶಲ ಹಾಗೂ ಅಕುಶಲ ಎಂಬ ವರ್ಗೀಕರಣ ಮಾಡಲಾಗಿದೆ. ಪರಿಣಾಮವಾಗಿ ಗ್ರಾಮಾಂತರ ಪ್ರದೇಶಗಳಿಂದ ಬಂದ ರೈತರು ನಗರಗಳಲ್ಲಿಯೂ ಕೆಲಸ ಸಿಗದೆ ಒದ್ದಾಡುವಂತಾಗಿದೆ. ಹಾಗೂ ನಗರ ಪ್ರದೇಶಗಳಲ್ಲಿ ಕೆಲಸ ಸಿಗುವ ಅವಕಾಶಗಳು ಕ್ಷೀಣಿಸುತ್ತಿವೆ. ಗ್ರಾಮಾಂತರ ಪ್ರದೇಶಗಳಲ್ಲಿ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಒಕ್ಕಲುತನ ಮಾಡುವುದು ಕಷ್ಟವಾಗಿದೆ. ಸಾಲ ಹಾಗೂ ಬಡ್ಡಿ ಬೆಳೆಯುತ್ತಿದೆ. ಇದನ್ನು ಸಮರ್ಥವಾಗಿ ಎದುರಿಸಲು ರೈತರಿಗೆ ಧೈರ್ಯ, ಶಕ್ತಿ ಸಾಲದಾಗಿದೆ. ಪರಿಣಾಮವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿಗಂತೂ ರೈತರಲ್ಲಿ ಈ ಪ್ರವೃತ್ತಿ ಜಾಸ್ತಿಯಾಗುತ್ತಿದೆ. ಒಂದು ಅಂದಾಜಿನ ಪ್ರಕಾರ, 2002 ರಿಂದ ಈಚಿಗೆ ದೇಶದಲ್ಲಿ ಪ್ರತಿ ಅರ್ಧ ತಾಸಿಗೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇದು ಎಲ್ಲರನ್ನೂ ವ್ಯಾಕುಲಗೊಳಿಸಿದೆ. ಸರಕಾರಗಳ ಹಾಗೂ ಅಧಿಕಾರಿಗಳ ಮೇಲ್ವಿಚಾರಣೆಯ ಕೊರತೆ :- ಕೇಂದ್ರ, ರಾಜ್ಯ ಹಾಗೂ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿ ಸರಕಾರಗಳನ್ನು ಹಾಗೂ ಪಂಚಾಯಿತಿ ರಾಜ್ಯದ ಸಂಸ್ಥೆಗಳನ್ನು ನಡೆಸುವ ರಾಜಕಾರಣಿಗಳು, ಶಾಸಕರು, ಮಂತ್ರಿ ಮಹೋದಯರು, ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವವರು, ಅಧಿಕಾರಿಗಳು, ಬ್ಯಾಂಕ್ ಇತ್ಯಾದಿ ಸಂಸ್ಥೆಗಳ ಮುಂದಾಳುಗಳು, ಆಯಾ ಪ್ರದೇಶಗಳ ಸಮಸ್ಯೆಗಳಿಗೆ ತಕ್ಕಂತೆ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ರೂಪಿಸುತ್ತಿಲ್ಲ. ಪ್ರಾದೇಶಿಕ ಸಮಸ್ಯೆಗಳ ಭಿನ್ನತೆಯನ್ನು ಗುರುತಿಸುತ್ತಿಲ್ಲ ಎಂಬ ಆಪಾದನೆ ಇದೆ. ಭಾಗಶಃ ಅದು ವಸ್ತುಸ್ಥಿತಿಯೂ ಹೌದು. ಸರಕಾರಗಳು ರೈತರಿಗೆ ಬೇಕಾದ ಬೀಜ, ಗೊಬ್ಬರ ಇತ್ಯಾದಿ ಅವಶ್ಯ ವಸ್ತುಗಳನ್ನು ಪೂರೈಸಲು ಮುಂಗಡವಾಗಿಯೇ ಕ್ರಮ ಕೈಗೊಳ್ಳುವುದಿಲ್ಲ. ಅಧಿಕಾರಿಗಳು, ವಿಷಯ ತಜ್ಞರು ಸರಕಾರ ನಡೆಸುವವರ ಕೈಗೊಂಬೆಯಾಗಿದ್ದಾರೆ. ಅವರು ಸರಕಾರಗಳಿಗೆ ಸೂಕ್ತ ಸಲಹೆಗಳನ್ನು ಸಮಯಕ್ಕೆ ಸರಿಯಾಗಿ ನೀಡುವುದಿಲ್ಲ. ಸಹಕಾರಿ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ನಿರೀಕ್ಷಿತ ಮಟ್ಟದಲ್ಲಿ ನಿರ್ವಹಿಸುತ್ತಿಲ್ಲ. ಇವೆಲ್ಲವುಗಳ ಪರಿಣಾಮವಾಗಿ ರೈತರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ನಿರೀಕ್ಷಿತ ಇಳುವರಿ ಬರುತ್ತಿಲ್ಲ. ಪ್ರತೀಕ್ಷಿತ ಆದಾಯ ಬರುತ್ತಿಲ್ಲ. ರೈತರು ಕಂಗಾಲಾಗಿದ್ದಾರೆ. ಆರ್ಥಿಕ ಸಮಸ್ಯೆಗಳು ಗ್ರಾಮಾಂತರ ಪ್ರದೇಶಗಳಲ್ಲಿ, ಕೃಷಿಯನ್ನು ಹೊರತುಪಡಿಸಿ, ಇತರ ಆರ್ಥಿಕ ಚಟುವಟಿಕೆಗಳನ್ನು ಎರಡು ಗುಂಪುಗಳಾಗಿ ವಿಭಾಗಿಸಬಹುದು. ಮೊದಲನೆಯದು, ಕೃಷಿ ಸಂಬಂಧಿ ಗುಡಿ ಕೈಗಾರಿಕೆಗಳು, ಇದರಲ್ಲಿ ಕಮ್ಮಾರಿಕೆ, ಬಡಗಿತನ, ಕುಂಬಾರಿಕೆ, ಪುಟ್ಟ, ತಟ್ಟ, ಚಾಪೆ, ಹಗ್ಗ, ರೇಷ್ಮೆ ಗೂಡು ಸಂಸ್ಕರಣೆ, ಹಣ್ಣು-ತರಕಾರಿ ಮಾರುವುದು, ಹೈನುಗಾರಿಕೆ, ಕೊಳಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಮೀನು ಬೆಳೆಸುವುದು, ಬೆಲ್ಲ ತಯಾರಿಕೆ ಮುಂತಾದ ಚಟುವಟಿಕೆಗಳನ್ನು ಸೇರಿಸಬಹುದು. ಎರಡನೆಯ ಗುಂಪಿಗೆ ಮಗ್ಗ, ಖಾದಿ ಮತ್ತು ಗ್ರಾಮೋದ್ಯೋಗ, ಜೇನು, ಅಗರಬತ್ತಿ, ಬೇಕರಿ, ಬೆಂಕಿಪೊಟ್ಟಣ, ಕಾಗದ, ಅಂಟು, ಹೊಲಿಗೆ, ಸಿದ್ಧ ಉಡುಪುಗಳ ತಯಾರಿ, ಕಸೂತಿ, ಬಣ್ಣ ಹಾಕುವುದು, ಸೋಪು, ಮೂರ್ತಿಗಳನ್ನು ತಯಾರಿಸುವುದು, ಬೆತ್ತದ ಕುರ್ಚಿ ಇತ್ಯಾದಿ ತಯಾರಿಕೆ, ಹಪ್ಪಳ, ಸಂಡಿಗೆ, ಬಿಸ್ಕತ್ತು, ಉಪ್ಪಿನಕಾಯಿ, ಅಂಗಡಿ ಮುಂತಾದ ನೂರಾರು ಗುಡಿ ಕೈಗಾರಿಕೆಗಳನ್ನು ಈ ಪಟ್ಟಿಗೆ ಸೇರಿಸಬಹುದು. ಈ ಪ್ರತಿಯೊಂದು ಗುಡಿಕೈಗಾರಿಕೆಯಲ್ಲಿಯೂ ತಮ್ಮದೇ ಆದ ಸಮಸ್ಯೆಗಳು ಇರುತ್ತವೆ. ಕೆಲವು ಗುಡಿಕೈಗಾರಿಕೆಗಳಿಗೆ ಬಂಡವಾಳ ಒದಗಿಸಿಕೊಳ್ಳುವ ಸಮಸ್ಯೆ ಇದ್ದರೆ, ಇನ್ನೂ ಕೆಲವು ಗುಡಿ ಕೈಗಾರಿಕೆಗಳಿಗೆ ಕಚ್ಚಾ ಸಾಮಗ್ರಿ ಯೋಗ್ಯಬೆಲೆಗೆ ಸಿಗುವುದಿಲ್ಲ. ಕೆಲವು ಗುಡಿ ಕೈಗಾರಿಕೆಗಳಿಗೆ ಸ್ಪರ್ಧೆ, ತಂತ್ರಜ್ಞಾನಗಳ ತೆಂದರೆಗಳಿದ್ದರೆ ಇನ್ನೂ ಹಲವು ಗುಡಿಕೈಗಾರಿಕೆಗಳಲ್ಲಿ ಮಾರಾಟದ್ದೇ ಜಂಜಾಟ. ಕೆಲವು ಗುಡಿಕೈಗಾರಿಕೆಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವುದರಲ್ಲಿಯೇ ಸಮಯ ಕಳೆಯಬೇಕಾಗುತ್ತದೆ. ಇನ್ನೂ ಕೆಲವು ಘಟಕಗಳಲ್ಲಿ ತರಬೇತಿ ಪಡೆದ, ನುರಿತ ಕಾರ್ಮಿಕರಿರುವುದಿಲ್ಲ. ಪ್ರತಿಯೊಂದು ಘಟಕದಲ್ಲೂ ಬಂಡವಾಳ, ಸಾಲ ಸೌಲಭ್ಯ, ಕಚ್ಚಾ ಸಾಮಗ್ರಿಗಳ ಕೊರತೆ, ಸ್ಪರ್ಧೆ, ತಾಂತ್ರಿಕ ಜ್ಞಾನ, ತರಬೇತಿ, ಕಾರ್ಮಿಕರು, ಮಾರುಕಟ್ಟೆ ವ್ಯವಸ್ಥೆ, ಆಡಳಿತ ನಿರ್ವಹಣೆ ಮುಂತಾದ ಕ್ಷೇತ್ರಗಳಲ್ಲಿ ಒಂದಲ್ಲಾ ಒಂದು ಸಮಸ್ಯೆಗಳು ಇವೆ. ಇವೆಲ್ಲಾ ಸಮಸ್ಯೆಗಳಿಗೆ ಗರಿಯಿಟ್ಟಂತೆ ಗುಡಿಕೈಗಾರಿಕೆಗಳನ್ನು ನಡೆಸುವವರು, ದೊಡ್ಡ ಪ್ರಮಾಣದಲ್ಲಿ ದಿನಬಳಕೆ ವಸ್ತುಗಳನ್ನು ತಯಾರಿಸುವ, ವಿತರಿಸುವ, ಮಾರಾಟ ಮಾಡುವ ಕಂಪನಿಗಳೊಂದಿಗೆ ಸ್ಪರ್ಧೆಗೆ ಇಳಿಯಬೇಕಾಗುತ್ತದೆ. ಗುಡಿ ಕೈಗಾರಿಕೆಗಳು ಇಂದು ಎದುರಿಸುತ್ತಿರುವ ಸಮಸ್ಯೆಗಳು ಇವು : ಸಾಮಾಜಿಕ ಸಮಸ್ಯೆಗಳು ಗ್ರಾಮ ಸಮುದಾಯಗಳು, ನಾವು ಈಗಾಗಲೇ ನೋಡಿದ ಹಾಗೆ ಹೆಚ್ಚಾಗಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮುಗ್ಧ ಲಕ್ಷಣಗಳನ್ನು ಹಾಗೂ ಸ್ವಭಾವಗಳನ್ನು ಉಳ್ಳಂತಹವು. ಗ್ರಾಮೀಣ ಸಮುದಾಯಗಳನ್ನು ಅರ್ಥೈಸಿಕೊಳ್ಳುವಾಗ ಈ ಹಿನ್ನೆಲೆಯ ಬಗ್ಗೆ ತಿಳುವಳಿಕೆ ಇರಬೇಕು. ಮೂಢ ನಂಬಿಕೆ, ಅಸ್ಪೃಶ್ಯತೆ, ಸಂಪ್ರದಾಯ ಶರಣತೆ, ಜೀತದಾಳುಗಳ ಸಮಸ್ಯೆ, ಮದ್ಯಪಾನ, ನಿರುದ್ಯೋಗ, ಮಹಿಳಾ ಅಸಮಾನತೆ, ನಾಗರೀಕ ಸೌಲಭ್ಯಗಳ ಕೊರತೆ, ನಿರಕ್ಷರಣೆ, ಅನಾರೋಗ್ಯ, ಬಾಲಕಾರ್ಮಿಕರು, ರಸ್ತೆಗಳು, ಜನಸಂಖ್ಯೆ ಏರಿಕೆ, ಜೂಜುಗಾರಿಕೆ, ವ್ಯಭಿಚಾರ, ಅವಿಭಕ್ತ ಕುಟುಂಬಗಳ ಕೊರತೆ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಗ್ರಾಮ ಸಮುದಾಯಗಳಲ್ಲಿ ಕಾಣಬಹುದು. ಅವುಗಳ ಪರಿಚಯ ಸಮಾಜಕಾರ್ಯಕರ್ತರಿಗೆ ಸಂಕ್ಷಿಪ್ತವಾಗಿ ಆದರೂ ಇರಬೇಕಾಗುತ್ತದೆ. 1. ಮೂಢನಂಬಿಕೆ :- ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಗ್ರಾಮೀಣ ಸಮುದಾಯಗಳು ರೂಪುಗೊಂಡಿರುವುದರಿಂದ, ಆ ಪರಿಕಲ್ಪನೆಗಳಿಗೆ ತುಂಬಾ ಹತ್ತಿರದಲ್ಲೇ ಇರುವ ಸಮಸ್ಯೆ ಎಂದರೆ ಮೂಢನಂಬಿಕೆ. ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನಲೆ ಇರುವ ವ್ಯಕ್ತಿಗಳು ಮೂಢನಂಬಿಕೆಯಿಂದ ಕೂಡಿರುವುದಿಲ್ಲ. ಅವರಲ್ಲಿ ಗಣನೀಯ ಪ್ರಮಾಣದ ಜನ ಮೂಢನಂಬಿಕೆಯಿಂದ ಕೂಡಿರುತ್ತಾರೆ. ಮೂಢನಂಬಿಕೆ ಒಂದು ಸಾಪೇಕ್ಷ ಪರಿಕಲ್ಪನೆ. ಒಂದೇ ಸಮುದಾಯದಲ್ಲಿ, ಒಬ್ಬ ವ್ಯಕ್ತಿಗೆ ಒಂದು ವಿಚಾರ ಹಾಗೂ ಪದ್ಧತಿ ಮೂಢನಂಬಿಕೆಯಿಂದ ಕೂಡಿದೆ ಎಂದು ಅನ್ನಿಸಿದ್ದು, ಅದೇ ಸಮುದಾಯದ ಇನ್ನೊಬ್ಬ ವ್ಯಕ್ತಿಗೆ ಮೂಢನಂಬಿಕೆ ಅನ್ನಿಸಲಾರದು. ಅಂತಹವುಗಳನ್ನು ಹೊರತುಪಡಿಸಿ, ಒಂದು ಸಮುದಾಯದಲ್ಲಿ ಹೆಚ್ಚಿನ ಸದಸ್ಯರು ಯಾವ ವಿಚಾರ ಹಾಗೂ ಪದ್ಧತಿಗಳನ್ನು ಮೂಢ ಎಂದು ಪರಿಗಣಿಸುತ್ತಾರೊ ಅಂತಹ ವಿಚಾರ ಹಾಗೂ ಪದ್ಧತಿಗಳು ಮೂಢನಂಬಿಕೆಗಳಾಗುತ್ತವೆ. ಯಾವ ಪರಿಕಲ್ಪನೆಗಳು, ವಿಚಾರಗಳು, ಪದ್ಧತಿಗಳು ವೈಚಾರಿಕ ನೆಲೆಯಲ್ಲಿ ಎಂದು ಪರಿಗಣಿಸುವುದು ವಾಡಿಕೆ. ಇಲ್ಲಿ ನಾವು (ಸಮಾಜಕಾರ್ಯಕರ್ತರು) ಪರಿಗಣಿಸಬೇಕಾಗಿರುವುದು ಮೂಢನಂಬಿಕೆಗಳು ಶೋಷಣೆಗೆ ಕಾರಣವಾಗುತ್ತಿದೆ ಎಂಬ ಅಂಶವನ್ನು, ಇವು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಂಡು, ಅವನನ್ನು ಶೋಷಣೆಗೆ ಈಡು ಮಾಡುತ್ತವೆ ಎಂಬ ಕಾರಣದಿಂದ, ಮೂಢನಂಬಿಕೆಗಳಿಗೆ ಅನೇಕ ಕಾರಣಗಳನ್ನು ಕೊಡಬಹುದಾಗಿದೆ. ಅನಕ್ಷರತೆ, ಅಜ್ಞಾನ, ಬಡತನ, ಜೀವನದಲ್ಲಿ ಎದುರಿಸಿದ ದುರಂತಗಳು, ಕಂಡುಂಡ ಕಷ್ಟ-ನಿಷ್ಟೂರಗಳು, ರೋಗರುಜಿನಗಳು, ಕುಟುಂಬದಲ್ಲಿಯ ಸಾವುಗಳು, ಮಳೆಯ ಅಭಾವ, ಪ್ರವಾಹಗಳ ಹಾವಳಿ, ಬೆಂಕಿಯ ಅನಾಹುತ, ಅಸಹಕಾರ, ವೈಮನಸ್ಯ, ದ್ವೇಷ ಮುಂತಾದ ಅನೇಕ ಘಟನೆಗಳು, ಆಕಸ್ಮಿಕಗಳು ಮೂಢನಂಬಿಕೆಗೆ ಪ್ರೇರಣೆಯಾಗುವ ಸಾಧ್ಯತೆಗಳಿವೆ. ಈ ಘಟನೆಗಳು ಮತ್ತು ಮೂಢನಂಬಿಕೆ ಕಾರ್ಯಕಾರಣ ಸಂಬಂಧ ಹೊಂದಿದವುಗಳಾಗಿವೆ. ಶಿಕ್ಷಣ, ವೈಜ್ಞಾನಿಕ ಪ್ರವೃತ್ತಿ, ಆರ್ಥಿಕ ಪ್ರಗತಿ, ಆರೋಗ್ಯ ಸುಧಾರಣೆ, ಆಧುನಿಕ ಮನೋಭಾವ ಮುಂತಾದ ಅಸ್ತ್ರಗಳಿಂದ ಮೂಢನಂಬಿಕೆಯನ್ನು ಎದುರಿಸಬಹುದಾಗಿದೆ. 2. ಅಸ್ಪೃಶ್ಯತೆ :- ಗ್ರಾಮೀಣ ಸಮುದಾಯಗಳಲ್ಲಿ ಕಂಡುಬರುವ ಇನ್ನೊಂದು ಸಾಮಾಜಿಕ ಸಮಸ್ಯೆ ಅಸ್ಪೃಶ್ಯತೆ. ಇದೊಂದು ಸಾಮಾಜಿಕ ಕಳಂಕ. ಭಾರತೀಯ ವರ್ಣವ್ಯವಸ್ಥೆಯಲ್ಲಿ ತುಂಬಾ ಕೆಳಮಟ್ಟದಲ್ಲಿದ್ದ ಮತ್ತು ಉಳಿದ ಮೂರು ಮೇಲ್ವರ್ಗದ ಸದಸ್ಯರಿಗೆ ಸಹಾಯ ಮಾಡುತ್ತಿದ್ದ, ಸೇವೆ ಮಾಡುತ್ತಿದ್ದ ಒಂದು ವರ್ಗವನ್ನು ಶೂದ್ರ ಎಂದು ಕರೆಯಲಾಯಿತು. ಅವರಲ್ಲಿಯೂ ಕೆಲವರು ಗ್ರಾಮ ಸಮುದಾಯಗಳಲ್ಲಿ ಸತ್ತ ಪ್ರಾಣಿಗಳನ್ನು ತೆಗೆದು ದೂರಹಾಕುವ, ಚರ್ಮ ಹದ ಮಾಡುವ, ಗ್ರಾಮಗಳಲ್ಲಿ ಸ್ವಚ್ಛತಾ ಕೆಲಸಗಳನ್ನು ಮಾಡುವ, ಗ್ರಾಮದ ಹೊಲಸನ್ನು ತೆಗೆದುಹಾಕುವ ಹಾಗೂ ಇಂತಹ ಅಸ್ವಚ್ಛ ವ್ಯಕ್ತಿಗಳಲ್ಲಿ ತೊಡಗಿಕೊಂಡವರನ್ನು ಮೇಲ್ವರ್ಗದ ಕೆಲವರು ಮಡಿ, ಪಾವಿತ್ರ್ಯ, ಪಾವನ ಮುಂತಾದ ಪರಿಕಲ್ಪನೆಗಳನ್ನೊಡ್ಡಿ ಅವರನ್ನು ಮುಟ್ಟಬಾರದು ಎಂಬೆಲ್ಲಾ ಪದ್ಧತಿಗಳನ್ನು ಜಾರಿಗೆ ತಂದಂತೆ ಕಾಣುತ್ತದೆ. ಈ ಪದ್ಧತಿ ಮುಂಬರುವ ದಿನಗಳಲ್ಲಿ, ಬದುಕಿನ ಬೇರೆ ಬೇರೆ ಆಯಾಮಗಳನ್ನೂ ಪಡೆದುಕೊಂಡು, ಬೃಹದಾಕಾರವಾಗಿ ಬೆಳೆಯಿತು. ಭಾರತೀಯ ಸಮಾಜದಲ್ಲಿ ಇದರ ವ್ಯಾಪ್ತಿ ಜಾಸ್ತಿಯಾಗಿ ತುಂಬಾ ಅಸಹ್ಯಕರ ಮಟ್ಟವನ್ನು ತಲುಪಿತು. ಅಸ್ಪೃಶ್ಯ ಎಂದು ಪರಿಗಣಿಸಿದವರನ್ನು ನೋಡಬಾರದು, ಮುಟ್ಟಿಸಿಕೊಳ್ಳಬಾರದು, ಅವರಿಗೆ ಹೋಟಲ್ಲು, ದೇವಸ್ಥಾನ, ಬಸ್ ನಿಲ್ದಾಣ, ನೀರು ಸೇದುವ ಭಾವಿ ಮುಂತಾದ ಸ್ಥಳಗಳಲ್ಲಿ ಪ್ರವೇಶ ನಿಷೇಧಿಸಿದರು. ಬರಬರುತ್ತಾ ಇದು ಅಮಾನವೀಯ ಮಟ್ಟಕ್ಕೆ ಬೆಳೆಯಿತು. ಹಾಗಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಅನೇಕ ಸಮಾಜ ಸುಧಾರಕರು ತಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಅಸ್ಪೃಶ್ಯತಾ ನಿವಾರಣೆಯನ್ನು ಸೇರಿಸಿಕೊಂಡು, ಸಮಾಜದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದರು. ಅದರಲ್ಲಿಯೂ ಗಾಂಧೀಜಿ, ಅಂಬೇಡ್ಕರ್, ವಿನೋಬಾಜಿ, ಜೆಪಿ ಮುಂತಾದ ಮಹನೀಯರು ಈ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದರು. ಪರಿಣಾಮವಾಗಿ ಸಮಾಜದಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆಯನ್ನು ನೋಡುವಂತಾಯಿತು. ಸ್ವಾತಂತ್ರ್ಯಾನಂತರ ಅಸ್ಪೃಶ್ಯರೇ ಶಿಕ್ಷಣ, ಸಮಾಜ ಸುಧಾರಣೆ ಮುಂತಾದ ಕ್ಷೇತ್ರಗಳಲ್ಲಿ ಸಂಘ-ಸಂಸ್ಥೆಗಳನ್ನು ಪ್ರಾರಂಭಿಸಿ, ಆ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸಿದರು. ಇದಕ್ಕೆ ಪೂರಕವಾಗಿ ಸಂವಿಧಾನ ಪ್ರವರ್ತಕರು ಸಂವಿಧಾನದಲ್ಲಿ ಅನುಚ್ಛೇದ 17ನ್ನು ಸೇರಿಸಿದರು. ಸದ್ರಿ ಅನುಚ್ಛೇದದ ಪ್ರಕಾರ ಯಾವುದೇ ಧರ್ಮ, ಪಂಗಡ, ಜಾತಿ ಅಥವಾ ಲಿಂಗಬೇಧಗಳ ಆಧಾರದ ಮೇಲೆ ಪಕ್ಷಪಾತ ಮಾಡುವಂತಿಲ್ಲ. ಅಂಗಡಿಗಳಿಗೆ, ಭೋಜನ ಗೃಹಗಳಿಗೆ, ಸಾರ್ವಜನಿಕ ಮನರಂಜನೆಯ ಸ್ಥಳಗಳಿಗೆ ಅವಕಾಶ ನಿರಾಕರಿಸುವಂತಿಲ್ಲ. ಬಾವಿ, ಕೆರೆ, ರಸ್ತೆ, ಸಾರ್ವಜನಿಕ ಸ್ಥಳಗಳು, ಮುಂತಾದವುಗಳಿಗೆ ಪ್ರವೇಶ ಅಲ್ಲಗಳೆಯುವಂತಿಲ್ಲ. ಒಟ್ಟಾರೆಯಾಗಿ ಅಸ್ಪೃಶ್ಯತೆಯನ್ನು ರದ್ದುಗೊಳಿಸಲಾಗಿದೆ ಮತ್ತು ಯಾವುದೇ ರೂಪದಲ್ಲಿ ಅದರ ಆಚರಣೆಯನ್ನು ನಿಷೇಧಿಸಲಾಗಿದೆ. ಇದು ತತ್ವ ಮತ್ತು ಆದರ್ಶ. ಆದರೆ ಸಮುದಾಯಗಳಲ್ಲಿ ಅಸ್ಪೃಶ್ಯತೆ ಇನ್ನೂ ಉಳಿದುಕೊಂಡಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಗಳನ್ನು ನೋಡುತ್ತೇವೆ. ಅಸ್ಪೃಶ್ಯತೆ ಸಮುದಾಯಗಳಲ್ಲಿ ಯಾವುದೊ ರೂಪದಲ್ಲಿದ್ದು, ಅದರಿಂದ ತೊಂದರೆ ಆಗುತ್ತಿರಬಹುದು. ಸಮಾಜಕಾರ್ಯಕರ್ತ ಇಂತಹವುಗಳ ಬಗ್ಗೆ ತುಂಬಾ ಜಾಗ್ರತೆಯಿಂದ ಇರಬೇಕಾಗುತ್ತದೆ, ವಿರೋಧಿಸಬೇಕಾಗುತ್ತದೆ. 3. ಸಂಪ್ರದಾಯಿಕತೆ ಮತ್ತು ಪ್ರತಿಗಾಮಿ ಧೋರಣೆ :- ಗ್ರಾಮೀಣ ಸಮುದಾಯದ ಸದಸ್ಯರು ಸಂಪ್ರದಾಯ ಶರಣರು. ಸಾಂಸ್ಕೃತಿಕ ಪರಂಪರೆಗೆ ವಿಶೇಷವಾದ ಗೌರವವನ್ನು ತೋರಿಸುತ್ತಾರೆ. ಆರ್ಥಿಕ ಪ್ರಗತಿಯನ್ನು ಬಲಿಕೊಟ್ಟಾದರೂ ಸಂಪ್ರದಾಯವನ್ನು ಉಳಿಸಿಕೊಳ್ಳುತ್ತಾರೆ. ಅವರು ಪ್ರತಿಗಾಮಿ ಧೋರಣೆಯನ್ನು ತಳೆದಿರುವುದು ಸಂಪ್ರದಾಯವನ್ನು ಗೌರವಿಸುವುದಕ್ಕಾಗಿ. ಪ್ರಾಚೀನ ಪರಂಪರೆಯಲ್ಲಿ ನಂಬಿಕೆ ಉಳ್ಳವರನ್ನು ಸಂಪ್ರದಾಯ ಶರಣರು ಎಂದು ಕರೆಯುವುದು ರೂಢಿ. ಕಾಲ ಹಾಗೂ ದೇಶಕ್ಕೆ ಮತ್ತು ಆಯಾ ಸಮುದಾಯಕ್ಕೆ ಅನುಸರಿಸಿ ಸಂಪ್ರದಾಯ, ಆಚಾರ, ವಿಚಾರ, ಪದ್ಧತಿಗಳು ಪ್ರಾರಂಭವಾಗಿರುತ್ತವೆ. ಕಾಲ ಸರಿದಂತೆ ಅಂತಹ ಸಂಪ್ರದಾಯ, ಪದ್ಧತಿ ಇತ್ಯಾದಿಗಳಲ್ಲಿ ಬದಲಾವಣೆ ತರುವುದುಂಟು. ಪರಿಸ್ಥಿತಿ ಬದಲಾದಂತೆ ಸಮುದಾಯದಲ್ಲಿ ಬದಲಾವಣೆಗಳು ಆಗುತ್ತವೆ. ಹಿಂದಿನ ಆಚಾರ ವಿಚಾರಗಳು ಇಂದಿಗೆ ಸರಿಹೊಂದುವುದಿಲ್ಲ. ಆಗ ಬದಲಾವಣೆ ಅನಿವಾರ್ಯ. ಪರಿಸ್ಥಿತಿ ಬದಲಾದರೂ ಆಚಾರ, ವಿಚಾರ, ಪದ್ಧತಿಗಳು ಬದಲಾಗದಿದ್ದರೆ ಅದನ್ನು ಸಂಪ್ರದಾಯ ಶರಣತೆ ಎಂದು ಕರೆಯುತ್ತಾರೆ. ತಮ್ಮ ಹಿರಿಯರ ಮೇಲಿನ ಅಭಿಮಾನದಿಂದ ಅವರು ಹಾಗೆ ಮಾಡಿರುತ್ತಾರೆ. ಇಂತಹ ಸಂಪ್ರದಾಯ ಶರಣತೆ ಸಮುದಾಯಗಳ ಪ್ರಗತಿಗೆ ಮಾರಕವಾಗಬಾರದು, ಸಮುದಾಯದ ಸದಸ್ಯರ ಒಳಿತಿಗೆ ಪೂರಕವಾಗುವಂರತಿರಬೇಕು. ಹೆಚ್ಚಾಗಿ ಉತ್ತರ ಭಾರತದಲ್ಲಿ ಇದ್ದ ಸತಿ ಪದ್ಧತಿ, ಬಾಲ್ಯವಿವಾಹ, ಹತ್ತಿರದ ಬಂಧುಗಳಲ್ಲಿ ವಿವಾಹ, ಮುಸಲ್ಮಾನರಲ್ಲಿ ಇರುವ ಬುರ್ಖಾ ಪದ್ಧತಿ, ದೇವದಾಸಿ ಪದ್ಧತಿ ಮುಂತಾದ ವ್ಯವಸ್ಥೆಗಳು, ಏರ್ಪಾಟುಗಳನ್ನು ಸಂಪ್ರದಾಯ ಶರಣತೆಗೆ ಉದಾಹರಿಸಬಹುದಾಗಿದೆ. ಇವು ಒಂದೊಂದು ಸಮಸ್ಯೆಗಳೂ ಬೃಹತ್ ಸಮಸ್ಯೆಗಳಾಗಿದ್ದು ಅವುಗಳನ್ನು ಬೇರೆಬೇರೆಯಾಗಿಯೇ ಪರಿಶೀಲಿಸಬೇಕಾಗುತ್ತದೆ. ಪ್ರತಿಯೊಂದು ಸಮಸ್ಯೆಗೂ ಹತ್ತಾರು ಕಾರಣಗಳಿರುತ್ತವೆ. ಅವುಗಳ ಆಳ, ವ್ಯಾಪ್ತಿ ಸರಿಯಾಗಿ ತಿಳಿದುಕೊಂಡು, ಪರಿಹಾರದ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಅಂತಹ ಯೋಜನೆಗಳನ್ನು ರೂಪಿಸಿಕೊಂಡು ಅನುಷ್ಠಾನಕ್ಕೆ ತರಬೇಕಾಗುತ್ತದೆ. ಶಿಕ್ಷಣದ ಅವಶ್ಯಕತೆ ಇದ್ದರೆ ಅದನ್ನು ಕೊಡಿಸಬೇಕಾಗುತ್ತದೆ. ಪುನರ್ವಸತಿ ಬೇಕಾದರೆ ಅದಕ್ಕೆ ಪ್ರಯತ್ನಿಸಬೇಕಾಗುತ್ತದೆ. ಸಮಸ್ಯೆಗೆ ತಕ್ಕಂತೆ ಪರಿಹಾರ. ಇನ್ನು ಪ್ರಗತಿಗೆ ಮಾರಕವಾಗುವ ಧೋರಣೆಯನ್ನು ತಾಳುವುದೇ ಪ್ರತಿಗಾಮಿ ಧೋರಣೆ. ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ, ಆಧುನೀಕರಣ, ಬದಲಾವಣೆ, ಅನುಕರಣೆ ಮುಂತಾದವುಗಳಿಗೆ ತಮ್ಮನ್ನು ಒಡ್ಡಿಕೊಂಡಿದ್ದರೂ, ಅಲ್ಲಿನ ಜನತೆ ಧಾರ್ಮಿಕ, ಸಾಂಸ್ಕೃತಿಕ, ಜನಾಂಗಿಕ ವಿಷಯಗಳು ಪ್ರಸ್ಥಾಪಗೊಂಡಾಗ, ಹೆಚ್ಚಾಗಿ ಪ್ರತಿಗಾಮಿ ನಿಲುವುಗಳಿಗೇ ಕಟ್ಟುಬೀಳುವುದು ಹೆಚ್ಚು. ಹಾಗಾಗಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬೆಂಬಲ ಕೊಡದೆ ಇರಬಹುದು. 4. ಜೀತದಾಳುಗಳ ಸಮಸ್ಯೆ :- ಗ್ರಾಮೀಣ ಸಮುದಾಯಗಳಲ್ಲಿ, ಜನಸಾಮಾನ್ಯರ ಬದುಕನ್ನು ಕಂಗಾಲಾಗಿಸುವ ಇನ್ನೊಂದು ಸಮಸ್ಯೆ ಎಂದರೆ ಜೀತದಾಳುಗಳ ಸಮಸ್ಯೆ. ಭೂಮಾಲಿಕ ತನ್ನ ಹೊಲ-ಮನೆಗಳಲ್ಲಿ ಕೆಲಸ ಮಾಡಲು, ಬಡ ಕೂಲಿಕಾರರಿಗೆ, ಅವರ-ಅವರ ಮಕ್ಕಳ ಮದುವೆಗೊ, ಗುಡಿಸಲು ಕಟ್ಟಿಕೊಳ್ಳಲೊ, ಅನಾರೋಗ್ಯದಿಂದ ನರಳುತ್ತಿರುವಾಗಲೊ, ಉತ್ತರ ಕ್ರಿಯೆಗೋ ಅಥವಾ ಅಂತಹುದೇ ಯಾವುದೊ ಒಂದು ಕಷ್ಟ ಎದುರಿಸುತ್ತಿರುವಾಗಲೊ ಅವರಿಗೆ ಆರ್ಥಿಕ ಸಹಾಯ ಮಾಡಿ, ಅವರನ್ನೊ ಇಲ್ಲವೇ ಅವರ ಮಕ್ಕಳನ್ನೊ ಬಲವಂತದ ದುಡಿಮೆಗೆ ಹಾಗೂ ಬಂಧನದ ದುಡಿಮೆಗೆ ನಿಯೋಜಿಸಿಕೊಳ್ಳುವುದೇ ಜೀತ ವ್ಯವಸ್ಥೆ. ಜೀತ ಪದ್ಧತಿ ಗುಲಾಮಗಿರಿಯ ದ್ಯೋತಕ. ಜೀತದಾಳು ತನ್ನ ಮಾಲಿಕನ ಆಜ್ಞೆಗಳನ್ನು ಬಲವಂತವಾಗಿ ಅನುಸರಿಸುತ್ತಾನೆ. ಜೀತದಾಳು ಅಸ್ವಾತಂತ್ರ್ಯ. ಅವನಿಗೆ ಬೇಕೊ-ಬೇಡವೊ, ನ್ಯಾಯವೊ-ಅನ್ಯಾಯವೊ, ಸಮಂಜಸವೊ-ಅಸಮಂಜಸವೊ, ಮಾಲಿಕ ಹೇಳಿದ್ದನ್ನು ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಈ ಪದ್ಧತಿ ಇನ್ನೂ ಅಲ್ಲಲ್ಲಿ ಯಾರಿಗೂ ಗೊತ್ತಾಗದೇ ಸಾಗುತ್ತಿರುತ್ತದೆ. ಈ ಬೃಹದಾಕಾರದ ಸಮಸ್ಯೆಯನ್ನು ಗುರುತಿಸಿ ಕೇಂದ್ರ ಸರಕಾರ, ರಾಜ್ಯ ಸರಕಾರ ಜೀತಪದ್ಧತಿ ನಿರ್ಮೂಲನಾ ಕಾನೂನನ್ನು ರೂಪಿಸಿ ಜಾರಿಗೆ ತಂದಿದೆ. ಜೀತಪದ್ಧತಿಯ ವ್ಯಾಖ್ಯೆ, ವ್ಯಾಪ್ತಿ, ಈ ಪದ್ಧತಿಯನ್ನು ಅನುಸರಿಸಿದರೆ ಸಂಬಂಧಪಟ್ಟವರಿಗೆ ಕೊಡುವ ಶಿಕ್ಷೆ, ಜೀತದಾಳುಗಳನ್ನು ವಿಮುಕ್ತಿಗೊಳಿಸಿದ ನಂತರ ಅಂತಹವರಿಗೆ ಒದಗಿಸಬೇಕಾದ ಪುನರ್ವಸತಿ, ಸ್ವತಂತ್ರವಾಗಿ ಒಂದು ವೃತ್ತಿ ಕೈಕೊಳ್ಳಲು ಸಾಲದ ವ್ಯವಸ್ಥೆ, ಸಹಾಯಧನ, ಕಡಿಮೆ ಬಡ್ಡಿ, ಅಜ್ಞಾನವನ್ನು ದೂರಮಾಡಲು ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಯೋಜನೆ-ಕಾರ್ಯಕ್ರಮಗಳನ್ನು ಯೋಜಿಸಿ ಕಾರ್ಯರೂಪಕ್ಕೆ ತರಲಾಗಿದೆ. ಆದರೂ ಕೆಲವೊಮ್ಮೆ ಹಣದ ದುರುಪಯೋಗ ಆದ ಬಗ್ಗೆ ಅಲ್ಲಲ್ಲಿ ಕೇಳಿಬರುತ್ತಿದೆ. ಈ ಕ್ಷೇತ್ರದಲ್ಲಿ ಬಹಳ ದೊಡ್ಡ ಸಮಸ್ಯೆಯೆಂದರೆ ಯಾವುದೊ ರೂಪದಲ್ಲಿರುವ ಜೀತದಾಳುಗಳನ್ನು ಗುರುತಿಸುವುದು. 5. ಮದ್ಯಪಾನ :- ಗ್ರಾಮೀಣ ಸಮುದಾಯಗಳನ್ನು ಪೀಡಿಸುತ್ತಿರುವ ಸಮಸ್ಯೆಗಳಲ್ಲಿ ಪ್ರಮುಖವಾದದ್ದು ಮದ್ಯಪಾನ ಪ್ರಾರಂಭದ ಹಂತದಲ್ಲಿ ಷೋಕಿಗಾಗಿ ಪ್ರಾರಂಭವಾಗುವ ಈ ಚಟ ಹಂತ ಹಂತವಾಗಿ ಬೆಳೆಯುತ್ತಾ ನಡೆದು, ವ್ಯಕ್ತಿಗೆ, ಕುಟುಂಬಕ್ಕೆ ಹಾಗೂ ಸಮುದಾಯಕ್ಕೆ ಕಂಟಕಪ್ರಾಯವಾಗಿ ಪರಿಣಮಿಸುತ್ತದೆ. ಬಡತನ, ಅಜ್ಞಾನ, ಶ್ರಮ ಜೀವನ, ಅಶಿಸ್ತು, ಜೀವನ, ನಿರ್ಲಕ್ಷ ಮನೋಭಾವ, ಅನಕ್ಷರತೆ, ಸಾಲಬಾಧೆ, ಕುಟುಂಬದಲ್ಲಿ ಸಾವು ನೋವು, ತನ್ನ ನಿಸ್ಸಹಾಯಕ ಪರಿಸ್ಥಿತಿಯಲ್ಲಿ ಸಮಾಜದ ಮೇಲಿನ ಸಿಟ್ಟು, ಕೆಟ್ಟ ಸಹವಾಸ ಮುಂತಾದ ಕಾರಣಗಳಿಗಾಗಿ ವ್ಯಕ್ತಿ ಕುಡಿತಕ್ಕೆ ಬಲಿಯಾಗುತ್ತಾನೆ. ಹಿಂದುಳಿದ ಜಾತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮುಂತಾದ ಜಾತಿ, ಜನಾಂಗಗಳಲ್ಲಿ ಕುಡಿತದ ಚಟ ಹೆಚ್ಚು. ಕೆಲವು ಜಾತಿ, ಜನಾಂಗಗಳಲ್ಲಿ ಸಭೆ ಸಮಾರಂಭಗಳಲ್ಲಿ ಕುಡಿಯುವುದೇ ಸ್ವೀಕೃತ ನಡತೆ, ಮರ್ಯಾದೆಯ ಲಕ್ಷಣ. ಹೆಚ್ಚು ದೈಹಿಕ ಶ್ರಮಕ್ಕೆ ಒಳಗಾಗುವವರು, ಸಮಸ್ಯೆಗಳು ಬಂದಾಗ ಅವುಗಳನ್ನು ತಿಳುವಳಿಕೆ, ಧೈರ್ಯಗಳಿಂದ ಎದುರಿಸದೆ ಅಸ್ಥಿರಗೊಳ್ಳುವವರು, ಮುಂತಾದ ಜನ ಈ ಚಟಕ್ಕೆ ಬಲಿಯಾಗುವುದು ಕಂಡುಬರುತ್ತದೆ. ಮದ್ಯ ಇಳಿಸುವವರು, ಅನೈತಿಕ ಮಧ್ಯ-ಕಳ್ಳಭಟ್ಟಿ ತಯಾರಿಸುವವರು, ಅಸ್ವಚ್ಛ ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರು, ಮುಂತಾದ ಜನಗಳು ಈ ದುರಾಭ್ಯಾಸವನ್ನು ಬಹಳ ಬೇಗನೇ ಕಲಿತುಕೊಂಡು ಬಿಡುತ್ತಾರೆ. ಕುಡಿತದ ದುಷ್ಪರಿಣಾಮಗಳು ಅನೇಕ. ಕುಡಿತಕ್ಕೆ ಒಳಗಾದವರ ಮೇಲೆ ವೈಯಕ್ತಿಕವಾಗಿ, ಕೌಟುಂಬಿಕವಾಗಿ ಹಾಗೂ ಸಾಮುದಾಯಿಕವಾಗಿ ಕೆಟ್ಟ ಪರಿಣಾಮವನ್ನು ಶಾಶ್ವತವಾಗಿ ಬೀರುತ್ತದೆ. ಖುಷಿಗಾಗಿ ಪ್ರಾರಂಭವಾದ ಚಟ, ದುಶ್ಚಟವಾಗಿ, ವಿಕೋಪಕ್ಕೆ ಹೋಗಿ ಮಧ್ಯಪಾನ ಮಾಡುವವರು ಮದ್ಯವ್ಯಸನಿಯ ಹಂತಕ್ಕೆ ಹೋಗುತ್ತಾರೆ. ಮೊದಲೇ ಬಡತನ, ಅನಂತರ ಮದ್ಯಪಾನ, ಬಡತನದ ಪರಿಣಾಮವಾಗಿ ಮದ್ಯಪಾನ ಮಾಡಿದ ನಂತರ ಪೌಷ್ಟಿಕ ಆಹಾರ ಸ್ವೀಕರಿಸುವುದಿಲ್ಲ. ಈ ಚಟ ಹೀಗೇ ಮುಂದುವರೆದು ಆರೋಗ್ಯವನ್ನು ಹಾಳು ಮಾಡುತ್ತದೆ. ಕುಡಿತ ಮಿತಿ ಮೀರಿದರೆ ಪಿತ್ತಜನಕಾಂಗ, ಹೃದಯ, ಮೆದುಳು, ನರಮಂಡಲ ಮುಂತಾದ ದೈಹಿಕ ಅಂಗಗಳು ಕೆಡುತ್ತಾ ಹೋಗುತ್ತದೆ. ಆಗಲೂ ನಿರ್ಲಕ್ಷಿಸಿದರೆ ಸಾವೇ ಗತಿ. ಕುಡಿತದ ಉಗ್ರ ಪರಿಣಾಮ ಕುಟುಂಬದ ಮೇಲೆಯೂ ಬೀಳುತ್ತದೆ. ಪ್ರತಿಯೊಂದು ಕುಟುಂಬ ತನ್ನ ಸಮುದಾಯದಲ್ಲಿ ಒಂದು ಸ್ಥಾನಮಾನವನ್ನು ಗಳಿಸಿಕೊಂಡಿರುತ್ತದೆ. ಒಂದು ಗೌರವವನ್ನು ಕಾಪಾಡಿಕೊಂಡಿರುತ್ತದೆ. ಕುಟುಂಬದ ಯಾವುದೇ ಒಬ್ಬ ಸದಸ್ಯ ಮದ್ಯವ್ಯಸನಿ ಆದರೆ ಕುಟುಂಬದ ಮರ್ಯಾದೆ ಬೀದಿ ಪಾಲಾಗುತ್ತದೆ. ಆ ಕುಟುಂಬದ ಸದಸ್ಯನ ಮಾತಿಗೆ ಆ ಸಮುದಾಯದಲ್ಲಿ-ಸಮಾಜದಲ್ಲಿ ಬೆಲೆ ಸಿಗುವುದಿಲ್ಲ. ಅಂತಹ ಮದ್ಯವ್ಯಸನಿ ಕುಟುಂಬದ ಯಜಮಾನ, ಯಜಮಾನಿ, ಹಿರಿಯರಾಗಿದ್ದರಂತೂ, ದುಡಿಯುವ ವ್ಯಕ್ತಿ ಆಗಿದ್ದರಂತೂ ಇಡೀ ಕುಟುಂಬದ ಆರ್ಥಿಕ ಪರಿಸ್ಥಿತಿ ಅಲ್ಲೋಲಕಲ್ಲೋಲವಾಗುತ್ತದೆ. ಕುಟುಂಬದಲ್ಲಿನ ಶಿಸ್ತು, ನಿಯಂತ್ರಣಗಳು ಮಾಯವಾಗುತ್ತದೆ. ಕುಟುಂಬದ ಯಜಮಾನ ಮದ್ಯವ್ಯಸನಿಯಾದರೆ, ಕುಡಿದು ಬಂದು ಹೆಂಡತಿಯನ್ನು, ಮಕ್ಕಳನ್ನು ಹೊಡೆಯಬಹುದು / ಹೊಡೆಯುತ್ತಾನೆ. ಮನೆಯಲ್ಲಿ ಜಗಳ, ಭಿನ್ನಾಭಿಪ್ರಾಯ, ಆದಾಯದಲ್ಲಿ ಕುಸಿತ ಮುಂತಾದವುಗಳು ಉಂಟಾಗಿ ಕುಟುಂಬಗಳು ಒಡೆಯಬಹುದು. ಮದ್ಯವ್ಯಸನಿ ಸಾಯಬಹುದು. ಕುಟುಂಬದ ನೆಮ್ಮದಿ ಹಾಳಾಗಿ, ಅತಂತ್ರ್ಯ ಸ್ಥಿತಿಗೆ ತಲುಪಬಹುದು. ಇಂತಹುದೇ ಕೆಟ್ಟ ಪರಿಣಾಮ ಸಮುದಾಯದ ಮೇಲೆಯೂ ಆಗುತ್ತದೆ. ಮದ್ಯಪಾನದ ಈ ದುಷ್ಪರಿಣಾಮಗಳು ಗ್ರಾಮೀಣ ಸಮುದಾಯದ ಸದಸ್ಯರನ್ನು ಕಾಡುವಂತೆಯೇ ನಗರಗಳ ನಿವಾಸಿಗಳನ್ನೂ ಹಿಂಸಿಸುತ್ತದೆ. ಕುಡಿತದ ಈ ಕೆಟ್ಟ ಪರಿಣಾಮಗಳನ್ನು ಗಮನಿಸಿ ಪಾನನಿಷೇಧ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಮದ್ಯದಿಂದ ಬರುವ ತೆರಿಗೆ ರೂಪದ ಆದಾಯದ ಸಲುವಾಗಿ ಸರಕಾರಗಳು, ಒಂದು ರೀತಿಯ ಮದ್ಯವನ್ನು ನಿಷೇಧಿಸಿದರೆ, ಅದರ ಬೆನ್ನಲ್ಲೇ ಇನ್ನೊಂದು ರೀತಿಯ ಮದ್ಯವನ್ನು ತಯಾರಿಸಲು ಪರವಾನಿಗೆ ಕೊಟ್ಟ ಉದಾಹರಣೆಗಳಿವೆ. ಹಾಗಾಗಿ ಮದ್ಯವ್ಯಸನಿಗಳಿಗೆ ಒಂದಿಲ್ಲದಿದ್ದರೆ ಇನ್ನೊಂದು ಮದ್ಯ ಮಾರುಕಟ್ಟೆಯಲ್ಲಿ ಸಿಗುವಂತಾಗಿದೆ. ಮದ್ಯಪಾನದ ಹಾವಳಿ ಎಷ್ಟು ಜಾಸ್ತಿಯಾಗಿದೆ ಎಂದರೆ ಶಾಲೆಗಳು ಇಲ್ಲದ ಗ್ರಾಮೀಣ ಸಮುದಾಯಗಳು ಇರಬಹುದೇನೊ, ಆದರೆ ಮದ್ಯದಂಗಡಿ ಇರದ ಗ್ರಾಮಗಳು ಇಲ್ಲ ಎನ್ನುವಂತಾಗಿದೆ. ಮದ್ಯಪಾನದ ದುಷ್ಪರಿಣಾಮಗಳನ್ನು ಬಿಂಬಿಸುವ ಚಳುವಳಿಗಳು ಅಲ್ಲಲ್ಲಿ ನಡೆದಿವೆ. ದೇಶದಲ್ಲಿ ಸಾಕ್ಷರಣಾ ಆಂದೋಲನ ನಡೆಯುತ್ತಿದ್ದ ಕಾಲದಲ್ಲಿ ಈ ವಿಷಯದ ಬಗ್ಗೆ ಹಾಡುಗಳು, ಬೀದಿ ನಾಟಕಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಾಕ್ಷರತಾ ಪಠ್ಯಗಳಲ್ಲಿ ಇದರ ವಿರುದ್ಧ ಪಾಠವೊಂದನ್ನು ಸೇರಿಸಲಾಯಿತು. ಇಂತಹ ಚಳುವಳಿಗಳನ್ನು ಆಗಿಂದಾಗ್ಗೆ ಹಮ್ಮಿಕೊಳ್ಳಬೇಕಾಗುತ್ತದೆ. ಸ್ವಯಂ ಸೇವಾ ಸಂಸ್ಥೆಗಳು ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಉತ್ಸಾಹವನ್ನು ತೋರಿಸಬೇಕಾಗುತ್ತದೆ. 6. ನಿರುದ್ಯೋಗ :- ಗ್ರಾಮೀಣ ಸಮುದಾಯಗಳನ್ನು ಅವಿರತವಾಗಿ ಕಾಡುತ್ತಿರುವ ಇನ್ನೊಂದು ಸಮಸ್ಯೆ ನಿರುದ್ಯೋಗ. ಯಾವುದೇ ವ್ಯಕ್ತಿ ಒಂದು ಕೆಲಸವನ್ನು ಮಾಡಲು ಅರ್ಹನಿದ್ದು, ಕೆಲಸ ಮಾಡಲು ದೈಹಿಕ ಶಕ್ತಿ ಹಾಗೂ ಇಚ್ಛೆ ಇದ್ದು ಅವಕಾಶ ಇಲ್ಲದೆ ಇದ್ದರೆ ಅದನ್ನು ನಿರುದ್ಯೋಗ ಎಂದು ಕರೆಯಬಹುದಾಗಿದೆ. ನಿರುದ್ಯೋಗ ಗ್ರಾಮೀಣ, ನಗರ ಹಾಗೂ ಬುಡಕಟ್ಟು ಸಮುದಾಯಗಳ ಸಮಸ್ಯೆಯಾಗಿರದೆ, ಇಡೀ ದೇಶದ ಜ್ವಲಂತ ಸಮಸ್ಯೆಗಳಲ್ಲಿ ಒಂದಾಗಿದೆ. ಅದರಂತೆಯೇ ನಿರುದ್ಯೋಗಕ್ಕೆ ಅನೇಕ ಮುಖಗಳಿವೆ. ಮೊದಲನೆಯದು ವೇಷಾಂತರ ನಿರುದ್ಯೋಗ (ರೂಪಾಂತರ - ಮಾರುವೇಷದ ನಿರುದ್ಯೋಗ). ಇಲ್ಲಿ ನಿರುದ್ಯೋಗ ಇರುತ್ತದೆ. ಆದರೆ ಅದು ನಿರುದ್ಯೋಗದಂತೆ ಕಾಣುವುದಿಲ್ಲ. ನಿರುದ್ಯೋಗ ಮರೆಮಾಚಿಕೊಂಡಿರುತ್ತದೆ. ಒಂದು ಕೆಲಸ ಮಾಡಲು ಇಬ್ಬರು ಬೇಕಾಗಿದ್ದ ಜಾಗದಲ್ಲಿ ನಾಲ್ಕು ಜನ ಕೆಲಸ ಮಾಡುತ್ತಿರಬಹುದು. ಹಾಗಾದಾಗ ಇಬ್ಬರಿಗೆ ಮಾತ್ರ ಕೆಲಸಕ್ಕೆ ಅವಕಾಶ ಇದ್ದು, ಇನ್ನಿಬ್ಬರು ಹೆಚ್ಚುವರಿಯಾಗಿ ಇದ್ದಾರೆ ಮತ್ತು ಅದೇ ಕೆಲಸ ಹಂಚಿಕೊಂಡು ಮಾಡುತ್ತಾರೆ. ಇಲ್ಲಿ ನಿರುದ್ಯೋಗ ಇದೆ, ಆದರೆ ವೇಷ ಮರೆಸಿಕೊಂಡಿದೆ. ನಿರುದ್ಯೋಗದ ಇನ್ನೊಂದು ರೂಪ ಅರೆ ಉದ್ಯೋಗ. ಇಲ್ಲಿ ವ್ಯಕ್ತಿಗೆ ಎಂಟರಿಂದ ಹತ್ತು ತಾಸು ಕೆಲಸ ಮಾಡುವ ಶಕ್ತಿ ಇದೆ. ಆದರೆ ನಾಲ್ಕರಿಂದ ಆರು ತಾಸು ಮಾತ್ರ ಕೆಲಸ ಮಾಡಲು ಅವಕಾಶವಿದೆ. ಉಳಿದ ಉತ್ಪಾದನಾ ಸಮಯ ಯಾವ ಉತ್ಪಾದನಾ ಚಟುವಟಿಕೆ ಇಲ್ಲದೆ ಅನುತ್ಪಾದಕವಾಗಿ ಕಳೆದುಹೋಗುತ್ತದೆ. ಮತ್ತೊಂದು ಋತುಮಾನದ ನಿರುದ್ಯೋಗ. ಗ್ರಾಮೀಣ ಸಮುದಾಯಗಳಲ್ಲಿ ಮಳೆ ಆಧಾರಿತ ವ್ಯವಸಾಯವೇ ಹೆಚ್ಚು. ಸಾಮಾನ್ಯವಾಗಿ ಮಳೆಗಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾರೆ. ಪರಿಣಾಮವಾಗಿ ನಾಲ್ಕರಿಂದ ಆರು ತಿಂಗಳು ರೈತರಿಗೆ ಕೆಲಸ ಇರುತ್ತದೆ. ಉಳಿದ ಆರು ತಿಂಗಳು ಕೆಲಸ ಇರುವುದಿಲ್ಲ. ಇದನ್ನು ಋತುಮಾನದ ನಿರುದ್ಯೋಗ ಎಂದು ಕರೆಯುತ್ತಾರೆ. ಕೆಲವು ಗುಡಿಕೈಗಾರಿಕೆಗಳಲ್ಲಿಯೂ ಋತುಮಾನದ ನಿರುದ್ಯೋಗ ಇರುತ್ತದೆ. ಇನ್ನುಳಿದ ಕೆಲವು ಗುಡಿಕೈಗಾರಿಕೆಗಳಲ್ಲಿ ಕೆಲಸ ನಿರಂತರವಾಗಿ ಇರುತ್ತದೆ. ಆದರೆ ಅವರ ಉತ್ಪಾದನೆಗಳಿಗೆ ಮಾರುಕಟ್ಟೆ ಇರುವುದಿಲ್ಲ. ಅಂತರಾಷ್ಟ್ರೀಯ ಕಂಪನಿಗಳು, ಒಳ್ಳೆ ಗುಣಮಟ್ಟದ ದಿನಬಳಕೆ ವಸ್ತುಗಳನ್ನು ಇನ್ನೂ ಅಗ್ಗದ ಬೆಲೆಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಸಿಗುವಂತೆ ಮಾಡಿದಾಗ, ಗೃಹ ಕೈಗಾರಿಕೆಯಲ್ಲಿ ಉತ್ಪಾದನೆಯಾದ ವಸ್ತುಗಳನ್ನು ಕೊಳ್ಳುವವರು ಸಿಗದಂತಾಗಿದ್ದಾರೆ. ಈ ಸ್ಥಿತಿ ಗ್ರಾಮೀಣ ಪ್ರದೇಶಗಳಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ. ಗ್ರಾಮಾಂತರ ಸಮುದಾಯಗಳಲ್ಲಿ ವಿದ್ಯಾವಂತ ಯುವಕರಿಗೆ ಉದ್ಯೋಗದ ಅವಕಾಶಗಳು ತುಂಬಾ ಸೀಮಿತ. ಹಾಗಾಗಿ ಇಂದಿನ ಯುವಕರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ನಿರುದ್ಯೋಗದ ಸಮಸ್ಯೆಗೆ ಅನೇಕ ಕಾರಣಗಳನ್ನು ಕೊಡಬಹುದಾಗಿದೆ. ಜನಸಂಖ್ಯೆಯಲ್ಲಿ ಹೆಚ್ಚಳ, ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಕೊರತೆ, ಕೃಷಿ ಚಟುವಟಿಕೆಗಳಿಗೆ ನೀರಾವರಿ ಸೌಲಭ್ಯಗಳ ಕೊರತೆ, ಬದಲಿ ಉದ್ಯೋಗಗಳ ಅಭಾವ, ಕೃಷಿಯ ಯಾಂತ್ರೀಕರಣ, ದೋಷಪೂರ್ಣ ಸರಕಾರಿ ಯೋಜನೆಗಳು, ಕೆಲವೇ ಪ್ರಮುಖ ಉದ್ಯೋಗಗಳಿಗೆ ಹೆಚ್ಚಿನ ಆದ್ಯತೆ ಮುಂತಾದ ಅಸಂಖ್ಯ ಕಾರಣಗಳನ್ನು ಗುರುತಿಸಬಹುದಾಗಿದೆ. ನಿರುದ್ಯೋಗದ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು, ಕೇಂದ್ರ ಮತ್ತು ರಾಜ್ಯ ಸರಕಾರಗಳು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯೂ ಸೇರಿದಂತೆ, ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಇಂತಹ ಯೋಜನೆಗಳಿಗೆ ಮುಖ್ಯವಾಗಿ ಎರಡು ಉದ್ದೇಶಗಳನ್ನು ಗಮನದಲ್ಲಿರಿಸಿಕೊಳ್ಳಲಾಗಿದೆ. ಮೊದಲನೆಯದಾಗಿ ಗ್ರಾಮೀಣ ಜನತೆಗೆ, ಒಂದು ನಿಗದಿತ ಸಮಯಕ್ಕೆ (ಕನಿಷ್ಟ 100 ದಿನಗಳು), ಉದ್ಯೋಗವನ್ನು ಒದಗಿಸುವುದು. ಎರಡನೆಯದಾಗಿ ಯೋಜನೆಯಡಿ ಬಳಸಲ್ಪಟ್ಟ ಮಾನವ ದಿನಗಳನ್ನು ಉಪಯೋಗಿಸಿಕೊಂಡು, ಗ್ರಾಮಗಳಿಗೆ ಅವಶ್ಯವಿರುವ, ಆಸ್ತಿ-ಸ್ವತ್ತನ್ನು ಸೃಷ್ಟಿಸುವುದು. ಇಂತಹ ಯೋಜನೆಗಳು ಅನುಷ್ಠಾನಗೊಳ್ಳುತ್ತಿರುವುದು ನಿಜವಾದರೂ, ಅದರಲ್ಲಿ ಭ್ರಷ್ಟತೆ ಹೆಚ್ಚಿದೆಯೆಂಬ ಕೂಗು ಕೇಳಿಬರುತ್ತಿದೆ. ಒಳ್ಳೆಯ ಉದ್ದೇಶಗಳನ್ನಿಟ್ಟುಕೊಂಡು ಪ್ರಾರಂಭಗೊಂಡ ಇಂತಹ ಯೋಜನೆಗಳು ಪ್ರಾಮಾಣಿಕವಾಗಿ ಕಾರ್ಯಾನುಷ್ಠಾನಕ್ಕೆ ಬರುತ್ತಿಲ್ಲ ಎಂಬ ಕೂಗಿದೆ. 7. ಮಹಿಳಾ ಅಸಮಾನತೆ :- ಜಗತ್ತಿನ ಬಹುತೇಕ ಸಂಸ್ಕೃತಿಗಳಲ್ಲಿ ಮಹಿಳೆಯರನ್ನು ಗೌರವದಿಂದ ಕಂಡಿಲ್ಲ, ಸಮಾನತೆಯಿಂದ ನೋಡಿಲ್ಲ. ಫ್ರಾನ್ಸ್, ಅಮೇರಿಕಾ, ಡೆನ್ಮಾರ್ಕ್, ರಷ್ಯಾ, ಸ್ಪೇನ್, ಇರಾನ್, ಭಾರತ ಮುಂತಾದ ರಾಷ್ಟ್ರಗಳಲ್ಲಿ ವ್ಯವಸ್ಥೆಗೊಂಡಿದ್ದ ಮಹಿಳಾ ಹೋರಾಟಗಳೇ ಇದಕ್ಕೆ ಸಾಕ್ಷಿ. ಇದರ ಜೊತೆ ಜೊತೆಗೆ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಮಹಿಳೆಯರನ್ನು ಗೌರವದಿಂದ, ಆದರದಿಂದ ಕಂಡಿದ್ದಿದೆ. ಇವೆರಡು ವಿರೋಧಾಭಾಸದಂತೆ ಕಂಡರೂ ಅದೇ ವಸ್ತುಸ್ಥಿತಿಯಾಗಿದೆ. ಭಾರತದಲ್ಲಿ ವೇದ, ಬ್ರಾಹ್ಮಣ, ಉಪನಿಷತ್ತುಗಳ ಕಾಲದಲ್ಲಿ ಮಹಿಳೆಯರಿಗೆ ಸಮಾನ ಅವಕಾಶವಿತ್ತು. ವೇದೋಪನಿಷತ್ತನ್ನು ಓದಲು, ಯಜ್ಞಯಾಗಾದಿಗಳನ್ನು ಮಾಡಲು ಅವಕಾಶವಿತ್ತು. ಅದಕ್ಕೆ ಪೂರಕವಾಗಿ ಅನೇಕ ವೇದ ಮಂತ್ರಗಳನ್ನು ಉದಾಹರಿಸಬಹುದಾಗಿದೆ. ಆನಂತರ ಮಧ್ಯಯುಗದಲ್ಲಿ ಸ್ತ್ರೀಯರ ಸ್ವಾತಂತ್ರ್ಯಕ್ಕೆ ಧಕ್ಕೆ ಒದಗಿದಂತೆ ಕಾಣುತ್ತದೆ. ಕೆಲವು ಮಂತ್ರಗಳನ್ನು ಅರ್ಥೈಸಿಕೊಳ್ಳುವಲ್ಲಿ ತಪ್ಪಾದಂತೆ ಕಾಣುತ್ತದೆ. ರಾಜರ ಕಾಲದಲ್ಲಿಯೂ ಇದು ಮುಂದುವರೆದಂತೆ ಕಾಣುತ್ತದೆ. ಆದಿಶ್ರೀ ಶಂಕರಾಚಾರ್ಯ, ಶ್ರೀ ರಾಮಾನುಜಾಚಾರ್ಯ ಹಾಗೂ ಶ್ರೀ ಮಧ್ವಾಚಾರ್ಯರು ಸ್ತ್ರೀಯರ ಬಗ್ಗೆ ಪ್ರಸ್ತಾಪಿಸುತ್ತಾ, ಅವರಿಗೆ ಶಾಸ್ತ್ರಾಭ್ಯಾಸಕ್ಕೆ ಅವಕಾಶ ಇದೆಯೆಂದು, ತಿಳಿಸಿದ ಉಲ್ಲೇಖಗಳಿವೆ. ಹನ್ನೆರಡನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರೂ ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಧ್ವನಿ ಎತ್ತಿದ್ದಾರೆ. ಆದರೂ ಬ್ರಿಟಿಷರು ಈ ದೇಶ ಪ್ರವೇಶಿಸುವ ಹೊತ್ತಿಗೆ ಸ್ತ್ರೀಯರ ಸ್ಥಿತಿ ತುಂಬಾ ಕೆಟ್ಟಿತ್ತು ಎಂದು ಹೇಳಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗಿವೆ. ಅವರನ್ನು ಹಿಂಸೆಗೆ ಒಳಪಡಿಸಲಾಗಿದೆ. ಅವರ ಮೇಲೆ ಅತ್ಯಾಚಾರ, ಅನಾಚಾರ ಮಾಡಿದ ಪ್ರಕರಣಗಳು ದಾಖಲಾಗಿವೆ. ಅವರನ್ನು ಶಿಕ್ಷಣ, ಸಮಾನತೆ, ಸಮಾನ ಅವಕಾಶಗಳಿಂದ ವಂಚಿಸಲಾಗಿದೆ. ಅವರಿಗೆ ಸಮಾನ ವೇತನ ಕೊಡುವಲ್ಲಿ ಕಡೆಗಣಿಸಲಾಗಿದೆ. ಅವರೊಡನೆ ಮನೆ, ಕಛೇರಿ, ಹೊಲ, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸಲಾಗಿದೆ. ಇದು ಸುಸಂಸ್ಕೃತ ಸಮಾಜದ ಲಕ್ಷಣವಲ್ಲ.2 ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಮತ್ತು ಅದರಂತೆ ನಡೆದುಕೊಳ್ಳುವುದು ಸಂಸ್ಕಾರಗೊಂಡ ಪ್ರತಿಯೊಬ್ಬ ವಿದ್ಯಾವಂತನ ಕರ್ತವ್ಯ. ಮನೆಯಲ್ಲಿ, ಕಛೇರಿಗಳಲ್ಲಿ, ಬಸ್ ನಿಲ್ದಾಣ, ರೈಲು ನಿಲ್ದಾಣ, ವಿಮಾನ ನಿಲ್ದಾಣ, ಅಂಗಡಿಗಳು, ಬಸ್ಸುಗಳು, ಹೊಲಗದ್ದೆಗಳು, ಚಿತ್ರಮಂದಿರಗಳು, ಉಪಾಹಾರ ಗೃಹಗಳು, ಸಭೆ ಸಮಾರಂಭಗಳು, ತೇರುಜಾತ್ರೆಗಳು ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಸ್ತ್ರೀಯರನ್ನು ಗೌರವಿಸುವಂತಾಗಬೇಕು. ಅವರ ದುಡಿಮೆಗೆ ಅವಕಾಶ, ಸ್ವಾತಂತ್ರ್ಯ ಇರಬೇಕು. ಅವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗಬೇಕು. ಅವರಿಗೆ ರಕ್ಷಣೆ ಸಿಗಬೇಕು. ಈ ಆದರ್ಶ ವಿದ್ಯಾವಂತ ಸಮಾಜದ ಆಶಯವಾಗಬೇಕು. ಸ್ತ್ರೀಯರ ಸಮಸ್ಯೆಗಳು :- ಮಹಿಳಾ ಅಸಮಾನತೆಯ ವಿವಿಧ ಮುಖಗಳನ್ನು ಮೇಲೆ ನೋಡಿದ್ದೇವೆ. ಅವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರೆ ಅವರ ಅಸಮಾನತೆಯ ಅಂಶಗಳು ಇನ್ನಷ್ಟು ಸ್ಪಷ್ಟವಾಗುತ್ತವೆ. ವೇದಕಾಲದಿಂದ ಸ್ವಾತಂತ್ರ್ಯೋತ್ತರದವರೆಗೆ ಸ್ತ್ರೀಯನ್ನು ನಡೆಸಿಕೊಂಡ ಬಗೆಯನ್ನು ಸಂಕ್ಷಿಪ್ತವಾಗಿ ನೋಡಲಾಗಿದೆ. ಒಂದೇ ಕಾಲಕ್ಕೆ ಸ್ತ್ರೀಯರನ್ನು ತುಂಬಾ ಗೌರವದಿಂದ ಕಾಣಲಾಗಿದೆ ಮತ್ತು ಅವರನ್ನು ಕಾರಣಾಂತರಗಳಿಂದ ವಿಧವಿಧವಾಗಿ ತೊಂದರೆಗೆ ಈಡುಮಾಡಲಾಗಿದೆ. ಹದಿನೆಂಟು-ಹತ್ತೊಂಬತ್ತನೇ ಶತಮಾನದಲ್ಲಿ ಸತಿ ಪದ್ಧತಿ, ದೇವದಾಸಿ ಪದ್ಧತಿ ಅಥವಾ ದೇವರನ್ನು ಹೊರಿಸುವ ವ್ಯವಸ್ಥೆ, ಮುಸಲ್ಮಾನ ಮಹಿಳೆಯರಲ್ಲಿ ಪರ್ದಾ ಪದ್ಧತಿ, ವಿಧವಾ ವಿವಾಹ ನಿರಾಕರಣೆ, ಬಾಲ್ಯ ವಿವಾಹ, ಮುಂತಾದ ಸಮಸ್ಯೆಗಳು ಭಾರತೀಯ ನಾಗರೀಕರನ್ನು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ತಲೆ ತಗ್ಗಿಸುವಂತೆ ಮಾಡಿತ್ತು. ರಾಜಾರಾಮ್ ಮೋಹನ್ರಾಯ್, ದಯಾನಂದ ಸರಸ್ವತಿ, ಗಾಂಧೀಜಿ ಮುಂತಾದ ಸಮಾಜ ಸುಧಾರಕರ ನಿರಂತರ ಪ್ರಯತ್ನದಿಂದ ಸಮಸ್ಯೆಗಳು ತಮ್ಮ ಪ್ರಖರತೆಯನ್ನು ಕಳೆದುಕೊಳ್ಳತೊಡಗಿದವು. ಜನಸಾಮಾನ್ಯರಲ್ಲಿ, ಸ್ತ್ರೀಯರಲ್ಲಿ ಜಾಗೃತಿ ಮೂಡಲಾರಂಭಿಸಿತು. ಇಂತಹ ಅನಿಷ್ಟ ಪದ್ಧತಿಗಳಿಗೆ ವಿರೋಧವಾಗಿ ಬಹಿಷ್ಕಾರ, ಸಭೆ ಸಮಾರಂಭಗಳು ನಡೆದವು. ಇವೆಲ್ಲವುಗಳ ಪರಿಣಾಮವಾಗಿ ಗಣನೀಯ ಪ್ರಮಾಣದಲ್ಲಿ ಬದಲಾವಣೆಯನ್ನು ಕಾಣುವಂತಾಯಿತು. ಈಗ ಸತಿಪದ್ಧತಿಯನ್ನು ಯಾರೂ ಅನುಸರಿಸುವುದಿಲ್ಲ. ಬಾಲ್ಯವಿವಾಹ ಸಂಪೂರ್ಣವಾಗಿ ನಿಂತಿದೆ ಎಂದು ಹೇಳಲಾಗದಿದ್ದರೂ, ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ. ತುಂಬಾ ಕ್ವಚಿತ್ತಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಆಗುವುದುಂಟು. ಅದರಂತೆಯೇ ಇಂದಿನ ಯುವಕರು ವಿಧವೆಯರನ್ನು ಮದುವೆಯಾಗಲು ಮುಂದೆ ಬರುತ್ತಿದ್ದಾರೆ. ಪರ್ದಾ ಪದ್ಧತಿ, ದೇವದಾಸಿ ಪದ್ಧತಿ ಕಡಿಮೆಯಾಗುತ್ತಿದೆ. ಇಷ್ಟೆಲ್ಲಾ ಆದರೂ ಸ್ತ್ರೀಯರು ಸಂತೋಷವಾಗಿಯೇನೂ ಇಲ್ಲ. ಕುಟುಂಬ, ಶಿಕ್ಷಣ, ಆರೋಗ್ಯ, ವೃತ್ತಿ, ಸಾಮಾಜಿಕ ಸ್ಥಳಗಳು, ರಾಜಕೀಯ, ಧರ್ಮ ಮುಂತಾದ ಕ್ಷೇತ್ರಗಳಲ್ಲಿ ಸ್ತ್ರೀಯರು ದಿನನಿತ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳನ್ನು ಸಂಕ್ಷಿಪ್ತವಾಗಿ ತಿಳಿಯಲು ಪ್ರಯತ್ನಿಸೋಣ. ಲಿಂಗತಾರತಮ್ಯ :- ಪ್ರತಿಯೊಂದು ಸಮಾಜದಲ್ಲಿ, ಅವರ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯಲ್ಲಿ, ಸ್ತ್ರೀ ಹಾಗೂ ಪುರುಷರ ಜೈವಿಕ ಭಿನ್ನತೆಯನ್ನು ಗುರುತಿಸಿ, ಅವರಿಗೆ ಮಹತ್ವವನ್ನು ಕೊಡುವ ಪದ್ಧತಿ ರೂಢಿಯಲ್ಲಿದೆ. ಸ್ತ್ರೀ-ಪುರುಷರೀರ್ವರೂ ಬದುಕೆಂಬ ಎತ್ತಿನಗಾಡಿಯ ಜೋಡಿಗಾಲಿಗಳು ಎಂಬ ಮಾತನ್ನು ಒಪ್ಪಿದರೂ, ಕೆಲವು ವಿಷಯಗಳಲ್ಲಿ ಸ್ತ್ರೀ ಪ್ರಾಮುಖ್ಯತೆಯನ್ನು ಪಡೆದರೆ, ಇನ್ನೂ ಕೆಲವು ವಿಚಾರಗಳಲ್ಲಿ ಪುರುಷ ಮುಂದಾಳತ್ವವನ್ನು ವಹಿಸಬೇಕು. ಆಗ ಬದುಕು ಸರಾಗವಾಗಿ ಸಾಗುತ್ತದೆ. ಆದರೂ ಬೇರೆ ದೇಶಗಳಲ್ಲಿರುವಂತೆ ಭಾರತದಲ್ಲಿಯೂ ಶತಮಾನಗಳಿಂದಲೂ ಲಿಂಗ ತಾರತಮ್ಯ ಮಾಡಲಾಗಿದೆ. ಭಾರತದ ಸಂವಿಧಾನದ ಭಾಗ 3, ಅನುಚ್ಛೇದ 16 (2) ರ ಅನ್ವಯ ಧರ್ಮ, ಮೂಲವಂಶ, ಜಾತಿ, ಲಿಂಗ ಅಥವಾ ಜನ್ಮ ಸ್ಥಳದ ಆಧಾರಗಳ ಮೇಲೆ ತಾರತಮ್ಯವನ್ನು ಮಾಡುವಂತಿಲ್ಲ. ಅದರನ್ವಯ ಸ್ತ್ರೀಯರ ರಕ್ಷಣೆಗಾಗಿ ಅನೇಕ ಕಾನೂನುಗಳನ್ನು ರೂಪಿಸಲಾಗಿದೆ. ಅವುಗಳನ್ನು ಜಾರಿಗೊಳಿಸಲು ಪ್ರಯತ್ನಿಸಲಾಗಿದೆ. ಸ್ತ್ರೀಯರನ್ನು ತಾರತಮ್ಯದಿಂದ ನೋಡಿದರೆ ಸಮಾನತೆಯಿಂದ ಕಾಣದಿದ್ದರೆ ಅಂತಹವರಿಗೆ ಶಿಕ್ಷೆ ಕಾದಿದೆ. ಇಷ್ಟೆಲ್ಲಾ ವ್ಯವಸ್ಥೆ, ರಕ್ಷಣೆ ಇದ್ದರೂ ಸ್ತ್ರೀಯರು ಸುರಕ್ಷಿತವಾಗಿಲ್ಲ. ನಿರಂತರ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸ್ತ್ರೀಯರು ತಮ್ಮ ಜೀವಮಾನದ ಪ್ರತಿಯೊಂದು ಹಂತದಲ್ಲಿಯೂ ಪ್ರತಿಯೊಂದು ಕ್ಷೇತ್ರದಲ್ಲಿಯೂ ಲಿಂಗತಾರತಮ್ಯವನ್ನು ಎದುರಿಸಬೇಕಾಗಿದೆ. ಗರ್ಭದಲ್ಲಿರುವ ಶಿಶು ಹೆಣ್ಣು ಎಂದು ಗೊತ್ತಾದರೆ, ಭ್ರೂಣಾವಸ್ಥೆಯಲ್ಲೇ ಶಿಶುವನ್ನು ಹತ್ಯೆ ಮಾಡಿದ ಉದಾಹರಣೆಗಳಿವೆ. ಪ್ರಸವದ ನಂತರ ಮಗು ಹೆಣ್ಣು ಎಂದು ತಿಳಿದ ಮೇಲೆ ಹತ್ಯೆ ಮಾಡಿದ ನಿದರ್ಶನಗಳಿವೆ. ಮಕ್ಕಳಿಗೆ ಆಹಾರ ಕೊಡುವಲ್ಲಿ, ಶಿಕ್ಷಣವನ್ನು ಒದಗಿಸುವಲ್ಲಿ ಗಂಡು ಮಕ್ಕಳಿಗೆ ಪ್ರಾಶಸ್ತ್ಯವನ್ನು ಕೊಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಟುಂಬದಲ್ಲಿ ಮಗಳು, ಗಂಡಸರೆಲ್ಲಾ ಊಟ ಮಾಡಿದ ನಂತರ, ತಾಯಿಯ ಜೊತೆ ಅಳಿದುಳಿದ ಆಹಾರವನ್ನು ಹಂಚಿಕೊಂಡು ಉಣ್ಣಬೇಕಾಗಿದೆ. ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗೋ ಹುಡುಗಿ ಅಂತ ಶಿಕ್ಷಣವನ್ನು ಕೊಡಿಸುವಲ್ಲಿ ವಂಚಿಸಲಾಗುತ್ತಿದೆ. ಶಾಲೆಗಳಲ್ಲಿ ಪ್ರತ್ಯೇಕ ಮೂತ್ರಾಲಯ, ಪಾಯಿಖಾನೆಗಳಿಲ್ಲದೆ ಹುಡುಗಿಯರು ಶಾಲೆ ಬಿಡುವ ಪರಿಸ್ಥಿತಿ ಒದಗಿದೆ. ಬಾಲಕಾರ್ಮಿಕರ ಸಮಸ್ಯೆ ಹೆಚ್ಚಾಗಿ ತಟ್ಟುವುದು ಹೆಣ್ಣು ಮಕ್ಕಳಿಗೆ, ಅದೂ ಮನೆಯಲ್ಲಿ. ಸಂಬಳರಹಿತ ಅವಿಶ್ರಾಂತ ದುಡಿತ. ಹೆಣ್ಣು ಮಕ್ಕಳನ್ನು ಗಂಡನ ಮನೆಯಲ್ಲಿ ಜೀತದಾಳುವಿನಂತೆ ನಡೆಸಿಕೊಳ್ಳಲಾಗುತ್ತಿದೆ. ಗ್ರಾಮೀಣ ಹಾಗೂ ಬುಡಕಟ್ಟು ಸಮುದಾಯಗಳಲ್ಲಿ ಹುಡುಗಿಯರ ಅಪಹರಣ ಮತ್ತು ಮಾರಾಟ ಯಾರಿಗೂ ಗೊತ್ತಾಗದ ಹಾಗೆ ಇತ್ತೀಚಿನವರೆಗೆ ನಡೆಯುತ್ತಿತ್ತು. ಹೆಣ್ಣು ಮಕ್ಕಳಿಗೆ ವೈದ್ಯಕೀಯ ಸೌಲಭ್ಯಗಳ ಕೊರತೆ ಇದೆ. ಹೆಣ್ಣು ಮಕ್ಕಳೂ ತಮ್ಮ ಆರೋಗ್ಯದ ಸಮಸ್ಯೆಗಳನ್ನು ಹೆಚ್ಚಾಗಿ ಹೇಳಿಕೊಳ್ಳುವುದಿಲ್ಲ. ವೃತ್ತಿಗಳಲ್ಲಿ, ಸಾಮಾಜಿಕ ಸಭೆ, ಸಮಾರಂಭಗಳಲ್ಲಿ, ಜಾಹೀರಾತು, ಚಲನಚಿತ್ರಗಳಲ್ಲಿ ಲೈಂಗಿಕ ದುರ್ಬಳಕೆ, ಶೋಷಣೆ ಅವ್ಯಾಹತವಾಗಿ ನಡೆಯುತ್ತಿದೆ. ಗ್ರಾಮಸಮುದಾಯಗಳಲ್ಲಿ ಅದರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜನಾಂಗಗಳಲ್ಲಿ, ದೇವದಾಸಿ ಪದ್ಧತಿ ಇನ್ನೂ ಸಂಪೂರ್ಣವಾಗಿ ನಿಂತಿಲ್ಲ. ವರದಕ್ಷಿಣೆ ಸಾವು, ಗಂಡು ಮಕ್ಕಳನ್ನು ಹಡೆದಿಲ್ಲಾಂತ ಸೊಸೆಯನ್ನು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುವುದು, ಹೀಗೆ ಲಿಂಗ ತಾರತಮ್ಯ ಸ್ತ್ರೀ ಗರ್ಭಾವಸ್ಥೆಯಿಂದ ಜೀವನದುದ್ದಕ್ಕೂ ಎದುರಿಸುವಂತಾಗಿದೆ. ಕುಟುಂಬದಲ್ಲಿ : ಹುಟ್ಟುವ ಮಗು ಹೆಣ್ಣಾದರೆ ಆ ಮಗುವು ನಮಗೆ ಬೇಡವೇ ಬೇಡ ಎಂದು ಹೆಣ್ಣು ಬ್ರೂಣ ಹತ್ಯೆ ಮಾಡುವವರನ್ನು ನಾವು ನೋಡುತ್ತಿದ್ದೇವೆ. ಇದಕ್ಕೆ ಕೆಲವು ವೈದ್ಯರ ಸಹಕಾರವೂ ಇದೆ. ಗ್ರಾಮೀಣ ಭಾಗದ ಹಿಂದುಳಿದ ಸಮುದಾಯಗಳಲ್ಲಿ ಹೆಣ್ಣು ಮಕ್ಕಳನ್ನು ಕೊಂದ ವರದಿ ಪತ್ರಿಕೆಗಳಲ್ಲಿ ಆಗಾಗ ಬರುತ್ತವೆ. ಮನೆಯಲ್ಲಿ ಮಕ್ಕಳನ್ನು ಬೆಳೆಸುವಲ್ಲಿಯೂ ತಾರತಮ್ಯವಿದೆ. ಗಂಡು ಹುಡುಗರಿಗೆ ಧೈರ್ಯ, ಸಾಹಸ ಮುಂತಾದ ಮೌಲ್ಯಗಳ ಬಗ್ಗೆ ಹೇಳಿಕೊಡುತ್ತಾ, ಹುಡುಗಿಯರಿಗೆ ಹೇಗೆ ತಗ್ಗಿ ಬಗ್ಗಿ ನಡೆಯಬೇಕು, ಮನೆಯಲ್ಲಿ ಹಿರಿಯರನ್ನು ಹೇಗೆ ಗೌರವಿಸಬೇಕು ಎಂದೆಲ್ಲಾ ಹೇಳಿಕೊಡುತ್ತಾ ತಾರತಮ್ಯ ಮಾಡುತ್ತೇವೆ. ಹುಡುಗರಿಗೆ ಪೌಷ್ಟಿಕ ಆಹಾರ (ಹಾಲು, ಮೊಸರು, ಬೆಣ್ಣೆ, ತುಪ್ಪ, ಹಣ್ಣು ಇತ್ಯಾದಿ) ವನ್ನು ಕೊಡುತ್ತಾ, ಉಳಿದದ್ದನ್ನು ಹುಡುಗಿಯರಿಗೆ ಹಂಚುವುದನ್ನು ನೋಡಿದ್ದೇವೆ. ಹುಡುಗರಿಗೆ ಹೇಳದ ಮನೆಕೆಲಸಗಳನ್ನು ಹುಡುಗಿಯರು ಅವ್ಯಾಹತವಾಗಿ ಮಾಡಿಕೊಂಡು ಬರುತ್ತಿದ್ದಾರೆ. ವರದಕ್ಷಿಣೆ ತಂದಿಲ್ಲ ಎಂತಲೊ, ಮಗನನ್ನು ಹೆತ್ತು ಕೊಡಲಿಲ್ಲ ಎಂತಲೊ ಸ್ತ್ರೀಯರನ್ನು ಪರಿತ್ಯಜನೆ ಮಾಡಲಾಗುತ್ತಿದೆ. ಗಂಡ ಹೆಂಡತಿ ಬೇರೆ ಬೇರೆ ವಾಸವಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ. ಇದು ವಿವಾಹ ವಿಚ್ಛೇದನಕ್ಕೆ ದಾರಿ ಮಾಡಿಕೊಡುತ್ತದೆ. ಬಡಕುಟುಂಬಗಳಲ್ಲಿ ಅಂತಹ ಪರಿತ್ಯಕ್ತ ಸ್ತ್ರೀಯರನ್ನು ವೇಶ್ಯಾವಾಟಿಕೆಗೆ ನೂಕಲಾಗುತ್ತದೆ. ವರದಕ್ಷಿಣೆ ತಂದಿಲ್ಲ ಅಥವಾ ತಂದಿದ್ದು ಸಾಕಾಗಿಲ್ಲ ಅಂತಲೊ ಹೆಣ್ಣು ಮಕ್ಕಳನ್ನು ಗುಟ್ಟಾಗಿ ಹತ್ಯೆ ಮಾಡಲಾಗುತ್ತಿದೆ. ಕುಟುಂಬದಲ್ಲಿ ಅಧಿಕಾರ, ಆಸ್ತಿ ಹಂಚಿಕೆಯಾಗುವಾಗ ಗಂಡು ಮಕ್ಕಳಿಗೆ ಆದ್ಯತೆಯನ್ನು ಕೊಡಲಾಗಿದೆ. ಸ್ಥಿರಾಸ್ತಿ ಹೆಣ್ಣು ಮಕ್ಕಳಿಗೆ ಬರುವುದು ಅಪರೂಪವಾಗಿಬಿಟ್ಟಿದೆ. ಕುಟುಂಬದಲ್ಲಿ ಯಾವಾಗಲೂ ಅಧಿಕಾರ ಗಂಡಸರದೇ. ಇದಕ್ಕೆ ಕೆಲವು ಮಾತೃಪ್ರಧಾನ ಕುಟುಂಬಗಳನ್ನು ಮಾತ್ರಾ ಹೊರತುಪಡಿಸಬಹುದಾಗಿದೆ. ಕುಟುಂಬದಲ್ಲಿ ಸ್ತ್ರೀಯರ ಸ್ಥಾನ ಎರಡನೆಯದ್ದು. ಅದೂ ನಿಶ್ಚಿತ ಇಲ್ಲ. ಹೀಗೆ ಕುಟುಂಬದ ಹಂತದಿಂದಲೇ ತಾರತಮ್ಯದ ಪರಿಚಯ ಮಾಡಿ, ಅವರ ಉತ್ಸಾಹ, ವ್ಯಕ್ತಿತ್ವವನ್ನು ಕುಗ್ಗಿಸಲಾಗಿದೆ. ಶಿಕ್ಷಣ :- ಶಿಕ್ಷಣ ಕ್ಷೇತ್ರದಲ್ಲಿಯೂ ಸ್ತ್ರೀಯರನ್ನು ಕಡೆಗಣಿಸಲಾಗಿದೆ. `ಹುಡುಗಿಯರಿಗ್ಯಾಕೆ ಓದು ಎಂದು ಅವರಿಗೆ ಸಿಗಬೇಕಾದ ಪ್ರೋತ್ಸಾಹ ಸಿಗುತ್ತಿಲ್ಲ. ಕಡ್ಡಾಯ ದಾಖಲಾತಿ ಪರಿಕಲ್ಪನೆ ಅನುಷ್ಠಾನಕ್ಕೆ ಬರುವತನಕ ಹುಡುಗಿಯರನ್ನು ಶಾಲೆಗೆ ದಾಖಲಿಸುವುದು ತೃಪ್ತಿದಾಯಕ ಆಗಿದ್ದಿಲ್ಲ. ನಗರ ಪ್ರದೇಶಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ (ಎಲ್ಕೆಜಿ, ಯುಕೆಜಿ ಇತ್ಯಾದಿ)ಕ್ಕೆ ಆದ್ಯತೆ ಇದೆ. ಆದರೆ ಇದು ಕೊಳೆಗೇರಿ ಹೆಣ್ಣು ಮಕ್ಕಳಿಗೆ ಲಭ್ಯವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚಿನವರೆಗೆ ಹುಡುಗಿಯರ ದಾಖಲಾತಿ ಪೂರ್ಣ ಪ್ರಮಾಣದಲ್ಲಿ ಆಗುತ್ತಿದ್ದಿಲ್ಲ. ಹಳ್ಳಿಗಳಲ್ಲಿ ಅಂಗನವಾಡಿ ಕೇಂದ್ರಗಳು ಪ್ರಾರಂಭಗೊಂಡಾಗಿನಿಂದ, ಆ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ, ಹಾಲು ಇತ್ಯಾದಿಗಳನ್ನು ಕೊಡಲು ಪ್ರಾರಂಭಿಸಿದಾಗಿಂದ ಹೆಣ್ಣು ಶಿಶುಗಳ ದಾಖಲಾತಿ ಆಗುತ್ತಿದೆಯೆಂದು ಹೇಳಲಾಗಿದೆ. ಶಾಲೆಗಳಲ್ಲಿಯೂ ಕಡ್ಡಾಯ ದಾಖಲಾತಿಯ ಪರಿಣಾಮವಾಗಿ ಎಲ್ಲಾ ಮಕ್ಕಳು (ಹೆಣ್ಣು ಮಕ್ಕಳೂ ಸೇರಿ) ಶಾಲೆ ಸೇರುವಂತಾಗಿದೆ. ಆದರೆ ಅವರು ಅಲ್ಲಿ ಉಳಿಯುವುದು ಕಡಿಮೆಯಾಗಿದೆ. ಮಧ್ಯದಲ್ಲಿ ಶಾಲೆ ಬಿಡುವವರ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳೇ ಜಾಸ್ತಿ ಎಂದು ವರದಿಗಳು ಹೇಳುತ್ತವೆ. ಹೆಣ್ಣು ಮಕ್ಕಳಿಗೆ ಅನೇಕ ಶಾಲೆಗಳಲ್ಲಿ ಪ್ರತ್ಯೇಕವಾಗಿ ಮೂತ್ರಾಲಯ, ಪಾಯಿಖಾನೆಗಳಿಲ್ಲ. ಇದ್ದ ಕಡೆ ನೀರು ಬರುವುದಿಲ್ಲ. ಹೆಣ್ಣು ಮಕ್ಕಳು ಪ್ರೌಢಶಾಲೆಗೆ ಬರುವ ಹೊತ್ತಿಗೆ ಸಮಸ್ಯೆಗಳು ಹೆಚ್ಚಾಗುತ್ತವೆ. ಮಾಸಿಕ ಋತುಸ್ರಾವದ ಸಮಯದಲ್ಲಿ ಉಪಯೋಗಿಸುವ ರಜೋವಸ್ತ್ರ, ನೀರು ಮುಂತಾದವು ಇಲ್ಲದೆ ಒದ್ದಾಡುತ್ತಾರೆ. ಸಮರ್ಪಕ ನೀರು, ನೈರ್ಮಲ್ಯ ಪರಿಕರಗಳ ಅಲಭ್ಯತೆಯಿಂದ ಹೆಣ್ಣು ಮಕ್ಕಳು ಸೊಂಕು, ಚರ್ಮವ್ಯಾಧಿ, ಬಿಳಿಹೋಗುವುದು ಮುಂತಾದ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಪರದಾಡಬೇಕಾಗುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಮನೆಗೆ ತುಂಬಾ ದೂರದಿಂದ ನೀರು ತರಬೇಕೆಂದು ಶಾಲೆ ಬಿಟ್ಟ ಹುಡುಗಿಯರ ಉದಾಹರಣೆಯಾಗಿದೆ. ಇನ್ನು ಪಠ್ಯಕ್ರಮದಲ್ಲಿಯೂ ತಾರತಮ್ಯವಿದೆಯೆಂಬ ಮಹಿಳಾ ಹೋರಾಟಗಾರ್ತಿಯರು ಧ್ವನಿ ಎತ್ತಿದ್ದಾರೆ. ಚರಿತ್ರೆಯಲ್ಲಿ ಹಾಗೂ ವರ್ತಮಾನದಲ್ಲಿ ಅನೇಕ ಧೀಮಂತರ ಹಾಗೂ ಧೈರ್ಯಶಾಲಿ ಮಹಿಳೆಯರಿದ್ದರೂ, ಅವರ ವಿವರಗಳನ್ನು-ಆದರ್ಶಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸಿಲ್ಲ, ಪಠ್ಯೇತರ ಚಟುವಟಿಕೆಗಳಲ್ಲಿ ಸೇರಿಸಿಲ್ಲ ಇಲ್ಲವೇ ನಿರೀಕ್ಷಿತ ಪ್ರಮಾಣದಲ್ಲಿ ಸೇರಿಸಿಲ್ಲ ಎಂಬ ತಕರಾರಿದೆ. ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಂಗೀತ, ಸಾಹಿತ್ಯ, ನೃತ್ಯ, ಕಲೆ, ಚಿತ್ರೋದ್ಯಮ, ಕ್ರೀಡೆ ಮುಂತಾದ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪಠ್ಯದಲ್ಲಿ ಸೇರಿಸಲು ಆಗ್ರಹವಿದೆ. ಪದವಿ, ಸ್ನಾತಕೋತ್ತರ, ತಾಂತ್ರಿಕ, ಉನ್ನತ ಶಿಕ್ಷಣ ಮುಂತಾದವುಗಳು ಸ್ತ್ರೀಯರಿಗೆ ಸುಲಭವಾಗಿ ಸಿಗುತ್ತಿಲ್ಲ ಎಂಬ ಮಾತೂ ಇದೆ. ಸ್ತ್ರೀಯರಿಗೆ ತಮ್ಮ ಐಚ್ಛಿಕ ವಿಷಯದ ಬಗ್ಗೆ ಶಿಕ್ಷಣ ಪಡೆಯಲು ಸ್ವಾತಂತ್ರ್ಯವಿಲ್ಲ ಎಂಬ ಆಪಾದನೆಯೂ ಇದೆ. ಶಿಕ್ಷಣ ಕ್ಷೇತ್ರದಲ್ಲಿನ ಹಾಗೂ ಸಮಾಜದಲ್ಲಿನ ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸಿ ಮಹಿಳೆ ವಿದ್ಯಾವಂತಳಾಗಬೇಕಾದ ಪರಿಸ್ಥಿತಿ ಮೂಡಿದೆ. ಉದ್ಯೋಗ :- ಉದ್ಯೋಗ ಕ್ಷೇತ್ರದಲ್ಲಂತೂ ಸ್ತ್ರೀ ಶೋಷಣೆ, ವೇತನ ತಾರತಮ್ಯ ಮುಂತಾದ ಸಮಸ್ಯೆಗಳು ತಾಂಡವವಾಡುತ್ತಿವೆ. ಉದ್ಯೋಗದಾತರು ಅಧಿಕಾರಿಗಳನ್ನು, ಉದ್ಯೋಗಿಗಳನ್ನು ಆರಿಸುವಾಗ ಅನೇಕ ಕಾರಣಗಳನ್ನೊಡ್ಡಿ ಪುರುಷರನ್ನೇ ಆರಿಸುತ್ತಾರೆ. ಉದ್ಯೋಗಿಗಳನ್ನು ಬೇರೆ ಬೇರೆ ಕೆಲಸಗಳಿಗೆ ನಿಯೋಜಿಸುವಾಗ, ಅದರಲ್ಲೂ ಸಂಘಟನಾ ಕೆಲಸಗಳಿಗೆ ನಿಯುಕ್ತಗೊಳಿಸುವಾಗ ಪುರುಷರಿಗೇ ಹೆಚ್ಚಿನ ಆದ್ಯತೆಯನ್ನು ಕೊಡುತ್ತಾರೆ. ಹಾಗಾಗಿ ಪುರುಷರು ಕೆಲಸ ಕಲಿಯಲು, ಕಾರ್ಯಕ್ರಮಗಳನ್ನು ಸಂಘಟಿಸಲು ಕಲಿಯುತ್ತಾರೆ. ಒಳ್ಳೆಯ ಹೆಸರು, ಉದ್ಯೋಗದಲ್ಲಿ ಮುಂಬಡ್ತಿ, ವೇತನದಲ್ಲಿ ಹೆಚ್ಚಳ, ಹೆಚ್ಚಿನ ಅನುಕೂಲಗಳನ್ನು ಪಡೆಯುತ್ತಾರೆ. ಇಂತಹ ಅವಕಾಶಗಳು ಸ್ತ್ರೀಯರಿಗೆ ಸಿಗುವುದು ಕಷ್ಟಸಾಧ್ಯವಾಗುತ್ತದೆ. ಸರಕಾರಿ ಉದ್ಯೋಗಗಳು, ಬ್ಯಾಂಕು, ಜೀವವಿಮೆ, ಮಾಹಿತಿ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಸ್ತ್ರೀಯರು ಪುರುಷರಿಗೆ ಸಮಸಮವಾಗಿ ಕೆಲಸ ಮಾಡುತ್ತಾರೆ. ಆದರೆ ಉಳಿದ ಕಡೆ, ಕೆಲವು ಖಾಸಗಿ ಕಂಪನಿಗಳಲ್ಲಿ ಈ ನಿಟ್ಟಿನಲ್ಲಿ ಇನ್ನೂ ಬೆಳವಣಿಗೆ ಆಗಬೇಕಾಗಿದೆ. ಕೃಷಿ, ಕೈಗಾರಿಕೆ, ಗಣಿ, ಮುಂತಾದ ವಲಯಗಳಲ್ಲಿ ವೇತನ ತಾರತಮ್ಯ ಇನ್ನೂ ಇದೆ. ಸರಕಾರಗಳು ಎಷ್ಟೇ ಕಾನೂನುಗಳನ್ನು ರೂಪಿಸಿ, ಜಾರಿಗೆ ತಂದರೂ ನಿರೀಕ್ಷಿತ ಫಲ ಸಿಗುತ್ತಿಲ್ಲ. ಕೆಲವು ಕೈಗಾರಿಕೆಗಳಲ್ಲಿ, ಕೆಲಸಗಳಲ್ಲಿ ಸ್ತ್ರೀಯರನ್ನೇ ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ಅವರನ್ನು ಹೆಚ್ಚಿನ ಕಾಲ (Overtime) ದುಡಿಸಿಕೊಂಡು ಸಾದಾವೇತನ (Single Wages) ವನ್ನು ಕೊಡುತ್ತಾರೆ. ದ್ವಿಗುಣ ವೇತನ (Double Wages) ಕೊಡುತ್ತಿಲ್ಲ. ಸಿದ್ಧ ಉಡುಪುಗಳ ತಯಾರಿ, ಬೀಡಿ ಸುತ್ತುವುದು, ಹೆಂಚು, ಇಟ್ಟಿಗೆ ತಯಾರಿಸುವುದು, ಕಟ್ಟಡಗಳ ಕೆಲಸ, ಮನೆಗೆಲಸ ಮುಂತಾದವುಗಳನ್ನು ಇದಕ್ಕೆ ಉದಾಹರಿಸಬಹುದಾಗಿದೆ. ಉದ್ಯೋಗದಾತರು ಹೇಳಿದ ಕೆಲಸ, ಹೇಳಿದ ಹಾಗೆ, ಹೇಳಿದಷ್ಟು ಸಮಯ ಮಾಡದಿದ್ದರೆ ತೊಂದರೆಗೆ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ ಎಂಬ ಭಯ ಬೇರೆ. ಕೆಲವು ಕೈಗಾರಿಕೆಗಳಲ್ಲಿ ಉದ್ಯೋಗದಾತರಿಂದ, ಹಿರಿಯ ಅಧಿಕಾರಿಗಳಿಂದ ಲೈಂಗಿಕ ಕಿರುಕುಳ ಅನುಭವಿಸುವಂತಾಗಿದೆ. ಸ್ತ್ರೀ ಉದ್ಯೋಗಿಗಳನ್ನು ಸದಾ ನೋಡುತ್ತಿರುವುದು, ಏನೂ ಕೆಲಸ ಇಲ್ಲದಿದ್ದರೂ ಅವರನ್ನು ಮಾತನಾಡಿಸಲು ಪ್ರಯತ್ನಿಸುವುದು, ಅವರನ್ನು ಮುಟ್ಟಲು ಪ್ರಯತ್ನಿಸುವುದು, ಅವರೊಡನೆ ಅಸಭ್ಯವಾಗಿ ವರ್ತಿಸುವುದು, ಅವರೊಡನೆ ದ್ವಂದ್ವಾರ್ಥದ ಮಾತುಗಳನ್ನು ಆಡುವುದು, ಅವರನ್ನು ತಮ್ಮ ಸ್ವಾರ್ಥ ಲೈಂಗಿಕ ಉದ್ದೇಶಗಳಿಗೆ ಬಳಸಿಕೊಳ್ಳುವುದು, ವಿರೋಧಿಸಿದರೆ ಕೆಲಸದಿಂದ ತೆಗೆದುಹಾಕುವ ಬೆದರಿಕೆಯನ್ನೊಡ್ಡುವುದು, ಇವೇ ಮುಂತಾದ ಕೆಲಸಗಳಿಂದ ಅವರನ್ನು ಶೋಷಣೆಗೆ ಒಳಪಡಿಸುತ್ತಿದ್ದಾರೆ. ಸಮೂಹ ಮಾಧ್ಯಮಗಳಾದ ರೇಡಿಯೋ, ದೂರದರ್ಶನ, ಪತ್ರಿಕೆಗಳು, ಚಲನಚಿತ್ರ ಮುಂತಾದವುಗಳಲ್ಲಿಯೂ ಸ್ತ್ರೀಯರನ್ನು ನಿರಂತರವಾಗಿ ಶೋಷಿಸಲಾಗುತ್ತಿದೆ. ದಿನಪತ್ರಿಕೆ, ವಾರಪತ್ರಿಕೆ, ಇತರೆ ಮುದ್ರಣ ಮಾಧ್ಯಮದ ನಿಯತಕಾಲಿಕೆಗಳಲ್ಲಿ ಜಾಹೀರಾತಿನ ಶೀರ್ಷಿಕೆಯಡಿ ಸ್ತ್ರೀಯರನ್ನು ಅಸಹ್ಯಕರವಾಗಿ ಚಿತ್ರಿಸಲಾಗುತ್ತಿದೆ. ಓದುಗರ, ನೋಡುಗರ ಕಾಮನೆಗಳನ್ನು ಕೆರಳಿಸುವಂತೆ ಚಿತ್ರಗಳಿದ್ದು, ಅವುಗಳನ್ನು ರೋಚಕವಾಗಿ ವಿವರಿಸಿ ತಮ್ಮ ಮಾರಾಟದ ಉದ್ದೇಶಗಳನ್ನು ಪೂರೈಸಿಕೊಳ್ಳುತ್ತಾರೆ. ವರದಕ್ಷಿಣೆಗೆ ಮಹಿಳೆ ಬಲಿ, ಮಹಿಳೆಯ ಮೇಲಿನ ದೌರ್ಜನ್ಯ, ಸಾಮೂಹಿಕ ಅತ್ಯಾಚಾರ ಇತ್ಯಾದಿ ಶಿರೋನಾಮೆಗಳಡಿಯಲ್ಲಿ ತಮಗೆ ಬೇಕಾದ ರೋಚಕ ಸಾಹಿತ್ಯವನ್ನು ತುಂಬಿ, ಯುವಕರನ್ನು ತಪ್ಪುದಾರಿಗೆ ಎಳೆಯುತ್ತಾರೆ. ಈ ತರಹದ ಚಟುವಟಿಕೆಗಳಲ್ಲಿ ದೂರದರ್ಶನ ಕೂಡಾ ಹಿಂದೆ ಬಿದ್ದಿಲ್ಲ. ಅದು ಚಲನಚಿತ್ರ ತಾರೆಯರ ವಿಷಯವೇ ಇರಬಹುದು, ಇಲ್ಲವೆ ಪ್ರಸಿದ್ಧ ರಾಜಕಾರಣಿಯ ಖಾಸಗೀ ಸಮಾಚಾರವಿರಬಹುದು, ಮತ್ತಿನ್ಯಾರದ್ದೋ ಆಗಿರಬಹುದು, ತಮ್ಮ ದೃಶ್ಯಮಾಧ್ಯಮದ ಮೂಲಕ ಅವರ ಅಶ್ಲೀಲ ಚಿತ್ರಗಳು, ಆಕರ್ಷಕ ಶಿರೋನಾಮೆಗಳು ಹಾಗೂ ರೋಚಕ ವಿವರಣೆ, ವಿಶ್ಲೇಷಣೆಗಳ ಮೂಲಕ ಸುದ್ದಿಯನ್ನೇನೊ ಪ್ರಾಚಾರ ಮಾಡುತ್ತಾರೆ. ಆದರೆ ಆ ಪ್ರಕ್ರಿಯೆಯಲ್ಲಿ ಸ್ತ್ರೀಯರ ಸ್ವಾತಂತ್ರ್ಯಹರಣ ಮಾಡಿ ಅವರ ಮಾನವನ್ನು ಹರಾಜಿಗೆ ಹಾಕುತ್ತಾರೆ. ಇನ್ನು ರೂಪದರ್ಶಿಗಳ ಬಗ್ಗೆ ಹೇಳುವುದೇ ಬೇಡ. ಸೋಪು, ಶಾಂಪು, ಪೌಡರು, ಒಳ ಉಡುಪುಗಳು, ಕ್ಷೌರದ ಸಾಧನಗಳು, ಚಪ್ಪಲಿ, ತಂಪು ಪಾನೀಯ, ಐಸ್ಕ್ರೀಮ್, ತರಕಾರಿ, ದ್ವಿಚಕ್ರ ವಾಹನಗಳು, ಕಾರುಗಳು ಮುಂತಾದವುಗಳ ಜಾಹೀರಾತಿಗೆ ಸ್ತ್ರೀಯರನ್ನು ಅಸಭ್ಯವಾಗಿ ಬಳಸಿಕೊಳ್ಳಲಾಗುತ್ತಿದೆ. ತಮ್ಮ ಹಣದ ದಾಹಕ್ಕೆ ಸ್ತ್ರೀಯರ ಗೌರವವನ್ನು ಬಲಿ ಕೊಡಲಾಗುತ್ತಿದೆ. ಆರೋಗ್ಯ :- ಆರೋಗ್ಯ ಕ್ಷೇತ್ರದಲ್ಲಿಯೂ ಮಹಿಳೆಯರನ್ನು ಆಲಕ್ಷಿಸಲಾಗುತ್ತಿದೆ. ಹುಟ್ಟಿದ ಮಗು ಹೆಣ್ಣು ಎಂದು ತಿಳಿದರೆ ತಾಯಿ ಎದೆ ಹಾಲು ಕೊಡುವಲ್ಲಿ ಉಪೇಕ್ಷೆ ಮಾಡುತ್ತಾಳೆಂದು ವೈದ್ಯರು ಹೇಳುತ್ತಾರೆ. ಪೌಷ್ಟಿಕ ಆಹಾರ ಕೊಡುವಲ್ಲಿ ತಾಯಿ ಗಂಡು ಮಕ್ಕಳಿಗೆ ಆದ್ಯತೆಯನ್ನು ಕೊಡುತ್ತಾಳೆ. ಕುಟುಂಬದಲ್ಲಿ ಹುಡುಗಿಯರನ್ನು ಉಪೇಕ್ಷಿಸುವ ಅಂಶವನ್ನು ಹಿಂದೆ ನೋಡಿದ್ದೇವೆ. ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಆರೋಗ್ಯದ ಮಹತ್ವದ ಬಗ್ಗೆ ತಿಳಿವಳಿಕೆ ಕೊಡುವ ವ್ಯವಸ್ಥೆ ಇರುವುದಿಲ್ಲ. ಪ್ರೌಢ ವಿದ್ಯಾರ್ಥಿಗಳಿಗೆ ಅವಶ್ಯವಿರುವ ಪ್ರತ್ಯೇಕ ಮೂತ್ರಾಲಯ, ಶೌಚಾಲಯ, ನೀರು, ಏಕಾಂತತೆಗೆ ಅವಕಾಶ ಮುಂತಾದ ವ್ಯವಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಲಭ್ಯವಿರುವುದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಘಟಕ, ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಲು, ಚಿಕಿತ್ಸೆ ಕೊಡಲು ಸ್ತ್ರೀಯರಿಗೆ ಬೇರೆಯಾದ ವ್ಯವಸ್ಥೆ ಇರುವುದಿಲ್ಲ. ಗುಡಿ ಕೈಗಾರಿಕೆಗಳಲ್ಲಿ, ಕಛೇರಿಗಳಲ್ಲಿ ಸ್ತ್ರೀ ಉದ್ಯೋಗಿಗಳಿಗೆ ಮೂತ್ರಾಲಯ, ಶೌಚಾಲಯ ಇತ್ಯಾದಿ ಅನುಕೂಲಗಳು ನಾಮಕಾವಸ್ತೆ ಇರುತ್ತವೆ. ಉಪಯೋಗಿಸಲು ಸ್ವಚ್ಛವಾಗಿರುವುದಿಲ್ಲ. ನೀರು ನಿರಂತರವಾಗಿ ಬರುತ್ತಿರುವುದಿಲ್ಲ. ಸ್ವಚ್ಛತೆಯ ನಿರ್ವಹಣೆಯ ಸಮಸ್ಯೆ ಇರುತ್ತದೆ. ಮೇಲಧಿಕಾರಿಗಳಿಗೆ ತಿಳಿಸಿದರೆ ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಗ್ರಾಮೀಣ ಸಮುದಾಯಗಳಲ್ಲಿ ಸ್ತ್ರೀಯರು ಹೆಚ್ಚಾಗಿ ಮನೆಕೆಲಸಗಳನ್ನು ನೋಡಿಕೊಳ್ಳುತ್ತಾರೆ. ನಗರ ಪ್ರದೇಶಗಳಲ್ಲಿ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಭಿನ್ನವಾಗಿರುತ್ತದೆ. ಗ್ರಾಮೀಣ ಮಹಿಳೆಯರು ತಮ್ಮ ಮನೆಕೆಲಸಗಳನ್ನು ಬೇಗ ಮುಗಿಸಿಕೊಂಡು, ಹೊಲಗಳಲ್ಲಿ ಕೆಲಸ ಮಾಡುವ ಗಂಡಸರಿಗೆ ಊಟ ತೆಗೆದುಕೊಂಡು ಹೋಗಬೇಕು. ಅವರಿಗೆ ಅದನ್ನು ಕೊಟ್ಟು, ತಾವೂ ಹೊಲದಲ್ಲಿ ಹೆಣ್ಣುಮಕ್ಕಳು ಮಾಡಬಹುದಾದ ಕೆಲಸಗಳನ್ನು ಮಾಡಬೇಕು. ಸಂಜೆ ಬೇಗನೇ ಮನೆಗೆ ಬಂದು ಪುನಃ ರಾತ್ರಿಯ ಅಡಿಗೆ ಮಾಡಬೇಕು. ಅವರಿಗೆ ವಿಶ್ರಾಂತಿ ಸಿಗುವುದೇ ಅಪರೂಪ. ಮನೆಗಳಲ್ಲಿಯೂ ಕೆಲಸ ಬಹಳ. ಆರೋಗ್ಯದ ಸೌಲಭ್ಯಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದಿಲ್ಲ. ಮೂಢನಂಬಿಕೆ, ಸಂಪ್ರದಾಯ, ಅನಕ್ಷರತೆ, ಅಜ್ಞಾನ ಇವುಗಳ ಪ್ರಭಾವ ಬೇರೆ. ಕೆಲವು ಮಹಿಳೆಯರು ತಮ್ಮ ಆರೋಗ್ಯದ ಸಮಸ್ಯೆಗಳನ್ನು ಹೇಳಿಕೊಳ್ಳಲು ನಾಚುತ್ತಾರೆ. ಪರಿಹಾರದ ಸುದ್ದಿ ದೂರ ಉಳಿಯಿತು. ಅವರ ಅಡಿಗೆ ಮನೆಯ ಪರಿಸರ ಸಮಾಧಾನಕರವಾಗಿರುವುದಿಲ್ಲ. ಸ್ವಚ್ಛವಿರಬಹುದಷ್ಟೆ. ಅಡಿಗೆ ಮಾಡಲು, ನೀರು ಕಾಸಲು ಕಟ್ಟಿಗೆ ಉಪಯೋಗಿಸುತ್ತಾರಾದ್ದರಿಂದ ಹೊಗೆ, ಸೀಮೆ ಎಣ್ಣೆ ಹೊಗೆ, ಮುಂತಾದವುಗಳು ಹೊರಗೆ ಹೋಗಲು ಬೆಳಕಿಂಡಿ ವ್ಯವಸ್ಥೆ ಸಮರ್ಪಕವಾಗಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಹೊಗೆಯನ್ನು ಅವರು ತಾವೇ ಉಸಿರಿನೊಂದಿಗೆ ದೇಹದೊಳಕ್ಕೆ ಎಳೆದುಕೊಳ್ಳುತ್ತಾರೆ. ಪರಿಣಾಮವಾಗಿ ಶ್ವಾಸಕೋಶದ ತೊಂದರೆಗಳು, ತಲೆನೋವು, ಕ್ಯಾನ್ಸರ್ ಮುಂತಾದ ತೀವ್ರ ತೊಂದರೆಗಳಿಗೆ ಒಳಗಾಗುತ್ತಾರೆ. ಅಂತಹ ಆರೋಗ್ಯದ ಸಮಸ್ಯೆಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯ ಇರುವುದಿಲ್ಲ. ನಗರಗಳಿಗೆ ಹೋಗಲು ಹಣದ ಅಡಚಣೆ. ವೃಥಾ ತೊಂದರೆಯನ್ನು ಅನುಭವಿಸುತ್ತಾರೆ. ಗ್ರಾಮಾಂತರ ಸಮುದಾಯಗಳಲ್ಲಿ ಮನೆಗೆ ಬೇಕಾದ ನೀರು ತರುವವರೂ ಸ್ತ್ರೀಯರೆ. ಅವರಿಗೆ ಮಕ್ಕಳು ಸಹಾಯ ಮಾಡುತ್ತಾರೆ. ನೀರಿನ ಕೊಳಾಯಿ ಹತ್ತಿರ, ಇತರೆ ಸ್ತ್ರೀಯರೊಡನೆ ಕಿತ್ಯಾಡಿ, ಇಲ್ಲವೇ ಕೊಳವೆ ಭಾವಿಯಿಂದ ಕೈಪಂಪು ಹೊಡೆದುಕೊಂಡು ಅಥವಾ ಭಾವಿಯಿಂದ ಸೇದಿ ನೀರು ತರುವವರು ಅವರೇ. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ನಾಲ್ಕಾರು ಕಿಲೋಮೀಟರು ಹೋಗಿ ಕುಡಿಯುವ ನೀರು ತರುವುದು ಸಾಮಾನ್ಯವಾಗಿ ಮಹಿಳೆಯರೆ. ಇದು ಹೆಚ್ಚಿನ ಶ್ರಮವನ್ನು ಅಪೇಕ್ಷಿಸುತ್ತದೆ, ದೇಹವನ್ನು ಬಳಲಿಸುತ್ತದೆ. ಸ್ತ್ರೀಯರು ತುಂಬಾ ಶ್ರಮವಹಿಸಿ, ಆಸಕ್ತಿವಹಿಸಿ ಮಾಡುವ ಇನ್ನೊಂದು ಮುಖ್ಯ ಕೆಲಸ ಗರ್ಭಧಾರಣೆ. ಗರ್ಭಧಾರಣೆಯಾದಂದಿನಿಂದ ಒಂಬತ್ತು ತಿಂಗಳು ಹೊತ್ತು, ಆನಂತರ ಹೆತ್ತು, ತದನಂತರ 2-3 ವರ್ಷದ ತನಕ ಲಾಲನೆ-ಪಾಲನೆ ಮಾಡುವುದು. ಹೀಗೆ ಮಾಡುವಾಗ ತಮ್ಮ ಸ್ವಂತ ಇಚ್ಛೆ, ಆಶೆಗಳನ್ನು ಬದಿಗಿರಿಸಿ, ಮಗುವಿಗೋಸ್ಕರ ಎಲ್ಲಾ ತ್ಯಾಗ ಮಾಡಿ ತಾವು ಸಾತ್ವಿಕ ಆಹಾರವನ್ನು ಸೇರಿಸಿ, ಮಗುವನ್ನು ರಕ್ಷಿಸಿ, ಬೆಳೆಸುತ್ತಾರೆ. ಅಂತಹ ಸಮಯದಲ್ಲಿ ಸ್ತ್ರೀಯರು ಪೌಷ್ಟಿಕ ಆಹಾರದ ಕೊರತೆಯನ್ನು ಎದುರಿಸುತ್ತಾರೆ. ವೈದ್ಯಕೀಯ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಾರೆ. ರಾಜಕೀಯ ಕ್ಷೇತ್ರ :- ಯಾವುದೇ ಸಮಾಜದಲ್ಲಿ ಸಾಮಾನ್ಯವಾಗಿ ಸ್ತ್ರೀಯರು ಅರ್ಧದಷ್ಟು ಸಂಖ್ಯೆಯಲ್ಲಿದ್ದಾರೆ. ಅದಕ್ಕೆ ತಕ್ಕಂತೆ ರಾಜಕೀಯ, ಸಾಮಾಜಿಕ ಹಾಗೂ ಸಹಕಾರಿ ಸಂಸ್ಥೆಗಳಲ್ಲಿ ಸ್ತ್ರೀಯರಿಗೆ ಅರ್ಧದಷ್ಟು ಪ್ರಾತಿನಿಧ್ಯ ಇರಬೇಕು. ಸಮಾಜದ ಹೆಚ್ಚಿನ ಆಗುಹೋಗುಗಳನ್ನು ಗುರುತಿಸಿ, ಶಾಸನಗಳನ್ನು ರೂಪಿಸಿ, ಅವುಗಳನ್ನು ಅನುಷ್ಠಾನಕ್ಕೆ ತಂದು, ಅಭಿವೃದ್ಧಿಯ ಕಡೆಗೆ ಸಮಾಜವನ್ನು ಮುನ್ನಡೆಸಲು ಹೆಚ್ಚಿನ ಆದ್ಯತೆ ಇರುವ ರಾಜಕೀಯ ಕ್ಷೇತ್ರದಲ್ಲಿ ಸ್ತ್ರೀಯರಿಗೆ ಹೆಚ್ಚಿನ ಅವಕಾಶ ಸಿಗುತ್ತಿಲ್ಲ. ಕೇಂದ್ರ ಸರಕಾರದಲ್ಲಿ, ರಾಜ್ಯ ಸರಕಾರದಲ್ಲಿ ಮಂತ್ರಿಗಳು, ಮಹಿಳಾ ರಾಜ್ಯಪಾಲರು, ಸರಕಾರದ ಸಲಹೆಗಾರರು, ಐ.ಎ.ಎಸ್., ಐ.ಪಿ.ಎಸ್., ಡಿ.ಎಫ್.ಎಸ್. ಸೇವೆಗಳು, ಮಹಾನಗರ ಪಾಲಿಕೆಗಳ ಅಧ್ಯಕ್ಷರು ಮುಂತಾದ ಪ್ರಭಾವೀ ಹುದ್ದೆಗಳಲ್ಲಿ ಸ್ತ್ರೀಯರನ್ನು ನೋಡುವುದು ವಿರಳ. ಪಂಚಾಯತ್ ರಾಜ್ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರಕಾರಗಳಲ್ಲಿ ಮೀಸಲಾತಿ ಸೌಲಭ್ಯಗಳೇನೋ ಇವೆ. ಅವುಗಳಲ್ಲಿ ಸ್ತ್ರೀಯರು ಇರುತ್ತಾರೆಂಬುದೂ ಅಷ್ಟೇ ಸತ್ಯ. ಆದರೆ ಈ ಕ್ಷೇತ್ರಗಳಿಗೆ ಏರ್ಪಟ್ಟ ಸ್ಪರ್ಧೆಯಲ್ಲಿ ಹೆಚ್ಚಿನ ಪೈಪೋಟಿ, ಮುಂದಾಳತ್ವ ಇರುವುದಿಲ್ಲ. ಮೀಸಲಾತಿಗೆ ಅನುಸಾರವಾಗಿ ಗ್ರಾಮ ಪಂಚಾಯಿತಿ. ತಾಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿತ ಸಮುದಾಯ ಮುಂತಾದವುಗಳನ್ನು ಪ್ರತಿನಿಧಿಸುತ್ತಿರುವವರು, ಆರಿಸಿ ಬರುತ್ತಾರೆ. ಆದರೆ ಅಂತಹ ಸಂದರ್ಭಗಳಲ್ಲಿ ಆಡಳಿತ ನಡೆಸುವವರು, ಅಧಿಕಾರ ಚಲಾಯಿಸುತ್ತಿರುವವರು ಪುರುಷರಾದ ಅವರ ಗಂಡಂದಿರೊ ಇಲ್ಲವೇ ಮಕ್ಕಳೋ ಇರುತ್ತಾರೆ. ಅವರು ಹೇಳಿದ ಜಾಗದಲ್ಲಿ ಸಹಿ ಮಾಡುವ ಸ್ತ್ರೀಯರಿಗೆ ತಮ್ಮ ಕರ್ತವ್ಯದ ಬಗ್ಗೆ, ತಮ್ಮ ಸ್ಥಾನಮಾನಗಳ ಬಗ್ಗೆ ಸ್ಪಷ್ಟ ತಿಳುವಳಿಕೆ ಇರುವುದಿಲ್ಲ. ಅವರು ಅಧಿಕಾರ ಗ್ರಹಣ ಮಾಡುವ ಮೊದಲು ಕೊಡುವ ತರಬೇತಿ ಸಾಕಾಗುವುದಿಲ್ಲ. ಅವರ ರಾಜಕೀಯ, ಸಾಮಾಜಿಕ ತಿಳುವಳಿಕೆ ಅಷ್ಟರಮಟ್ಟಿಗೆ ಅಭಿವೃದ್ಧಿ ಹೊಂದಿರುವುದಿಲ್ಲ. ಇದರ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿ ದೌರ್ಜನ್ಯ, ಹಿಂಸಾಚಾರ, ಮೋಸ, ಭಯೋತ್ಪಾದನೆ, ಅಭದ್ರತೆ, ಗೊಂದಲ ಹಾಗೂ ಭ್ರಷ್ಟಾಚಾರಗಳು ತುಂಬಿ ಹೋಗಿವೆ. ಪರಿಣಾಮವಾಗಿ ಸ್ತ್ರೀಯರು ರಾಜಕೀಯದಿಂದ, ಸಾಮಾಜಿಕ ಸಂಸ್ಥೆಗಳಿಂದ, ಸಹಕಾರಿ ಸಂಸ್ಥೆಗಳಿಂದ ದೂರ ಉಳಿದಿದ್ದಾರೆ. ಧಾರ್ಮಿಕ ಕ್ಷೇತ್ರ :- ಧಾರ್ಮಿಕ ಕ್ಷೇತ್ರದಲ್ಲೂ ಸ್ತ್ರೀಯರು ಹಿಂದೆ ಉಳಿಯುವಂತಾಗಿದೆ. ಉತ್ತರ ಭಾರತದ ಕೆಲಸ ಸಂಘ ಸಂಸ್ಥೆಗಳನ್ನು ಹೊರತುಪಡಿಸಿ, ಸ್ತ್ರೀಯರು ಧಾರ್ಮಿಕ ಕ್ಷೇತ್ರದಲ್ಲಿ ನಾಯಕತ್ವವನ್ನು ವಹಿಸುವುದು, ಧರ್ಮಪ್ರಚಾರ ಮಾಡುವುದು ಅಪರೂಪವಾಗಿದೆ. ಮದುವೆಯ ಸಂದರ್ಭಗಳಲ್ಲಿ, ಸ್ತ್ರೀಯರಿಗೆ ತಮ್ಮ ಬಾಳಸಂಗಾತಿಯನ್ನು ಆರಿಸುವ ಸ್ವಾತಂತ್ರ್ಯ ಕಡಿಮೆ. ಇದಕ್ಕೆ ವಿದ್ಯಾವಂತ ಯುವತಿಯರನ್ನು ಮಾತ್ರಾ ಹೊರತುಪಡಿಸಬಹುದಾಗಿದೆ. ಕೆಲವು ದೇವಸ್ಥಾನಗಳಲ್ಲಿ ಸಂಪ್ರದಾಯದ ಹೆಸರಿನ ಮೇಲೆ ಸ್ತ್ರೀಯರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಧಾರ್ಮಿಕ ಕ್ಷೇತ್ರದಲ್ಲೂ ಸ್ತ್ರೀಯರಿಗೆ ಸ್ವಾತಂತ್ರ್ಯವನ್ನು ಒದಗಿಸಿಕೊಡಬೇಕಾಗಿದೆ.3 8. ನಾಗರೀಕ ಸೌಲಭ್ಯಗಳ ಕೊರತೆ :- ಗ್ರಾಮ ಸಮುದಾಯಗಳು ಪ್ರತಿನಿತ್ಯ ಎದುರಿಸಬೇಕಾದ ಇನ್ನೊಂದು ಸಮಸ್ಯೆ ನಾಗರೀಕ ಸೌಲಭ್ಯಗಳ ಕೊರತೆ. ಗ್ರಾಮಗಳು ಗುಡ್ಡಬೆಟ್ಟಗಳಲ್ಲಿ ಕಟ್ಟಿರಬಹುದು, ಇಲ್ಲವೇ ಸಮತಟ್ಟಾದ ನೆಲದಲ್ಲಿರಬಹುದು. ಈ ಎಲ್ಲಾ ತರಹದ ಗ್ರಾಮಗಳಿಗೆ, ಹಳ್ಳಗಳಿಗೆ, ತಾಂಡಗಳಿಗೆ, ಹಟ್ಟಿಗಳಿಗೆ, ಬೀದಿ ದೀಪದ ವ್ಯವಸ್ಥೆ ಬೇಕು. ಕೆಲವು ಗ್ರಾಮಗಳಲ್ಲಿ ಬೀದಿ ದೀಪದ ವ್ಯವಸ್ಥೆ ಇರುತ್ತದೆ. ಆದರೆ ವಿದ್ಯುಚ್ಛಕ್ತಿಯ ಪ್ರವಾಹ ಇರುವುದಿಲ್ಲ. ಇನ್ನು ಕೆಲವು ಗ್ರಾಮಗಳಲ್ಲಿ ವ್ಯವಸ್ಥೆಯೇ ಇರುವುದಿಲ್ಲ. ಮನುಷ್ಯನ ಇನ್ನೊಂದು ಅವಶ್ಯಕತೆ ನೀರು. ದಿನಬಳಕೆಗೆ ಮತ್ತು ಕುಡಿಯಲು ನೀರು ಬೇಕಾಗುತ್ತದೆ. ರಾಷ್ಟ್ರೀಯ ಕುಡಿಯುವ ನೀರಿನ ಯೋಜನೆ, ಚಿಕ್ಕ ಕುಡಿಯುವ ನೀರಿನ ಯೋಜನೆ, ಕೊಳವೆಭಾವಿ ಮುಂತಾದವುಗಳ ಮುಖಾಂತರ ಜನರು ನೀರನ್ನು ಪಡೆಯುತ್ತಾರೆ. ಕುಡಿಯುವ ನೀರಿನ ಯೋಜನೆಗಳು ಬಹುಶಃ ಎಲ್ಲಾ ಹಳ್ಳಿಗಳಲ್ಲಿ ಈಗ ಕಾಣಸಿಗುತ್ತವೆ. ಅವು ಇಲ್ಲದಿದ್ದ ಪಕ್ಷದಲ್ಲಿ ಕೊಳವೆಭಾವಿ. ಆದರೆ ಇಲ್ಲಿ ಸಮಸ್ಯೆ ಎಂದರೆ ಅನೇಕ ಯೋಜನೆಗಳು ಸ್ಥಗಿತಗೊಂಡಿರುತ್ತವೆ. ಮೋಟಾರು, ಮುಂತಾದವುಗಳನ್ನು ದುರಸ್ಥಿಗೆ ತೆಗೆದುಕೊಂಡು ಹೋಗಿರುತ್ತಾರೆ. ಬೇಗ ದುರಸ್ಥಿ ಮಾಡಿಸಿ ತರುವುದಿಲ್ಲ. ಅಲ್ಲಿಯ ತನಕ ಬದಲಿ ವ್ಯವಸ್ಥೆ ಮಾಡಿರುವುದಿಲ್ಲ. ಇದೇ ಪರಿಸ್ಥಿತಿ ಕೊಳವೆಭಾವಿಗಳಿಗೂ ಇದೆ. ಪ್ರತಿವರ್ಷ ಕಡುಬೇಸಿಗೆಯನ್ನು ಎದುರಿಸುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಜನರ ಭವಣೆ ಹೇಳತೀರದು. ಈಗಲೂ ಜನ ನೀರಿಗಾಗಿ ನಾಲ್ಕಾರು ಕಿಲೋಮೀಟರು ಕ್ರಮಿಸಬೇಕಾದ ಪ್ರಸಂಗಗಳಿವೆ. ಕೆಲವು ಗ್ರಾಮಗಳಲ್ಲಿ ನೀರಿದೆ. ಆದರೆ ಕುಡಿಯಲು ಅಯೋಗ್ಯ. ಫ್ಲೋರೈಡ್ಯುಕ್ತ ನೀರು ಕುಡಿಯಲು ಬರುವುದಿಲ್ಲ. ಅನಿವಾರ್ಯವೆಂದು ಕುಡಿದು ಮೂಳೆರೋಗ, ಜೀರ್ಣಾಂಗ ವ್ಯವಸ್ಥೆಯ ರೋಗಗಳನ್ನು ತಂದುಕೊಂಡಿರುವುದು ನಮ್ಮ ಕಣ್ಣೆದುರಿಗೇ ಇದೆ. ಇತ್ತೀಚಿಗೆ ಅಂತಹ ಗ್ರಾಮಗಳಲ್ಲಿ, ಗುಂಪುಗ್ರಾಮಗಳಲ್ಲಿ ಸರಕಾರ ಖಾಸಗಿ ಕಂಪನಿಗಳ ದ್ವಾರ `ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಿದ್ದಾರೆ. ಒಂದು ನೀರಿನ ಎಟಿಎಮ್ ಕಾರ್ಡ್ ಮೂಲಕ ಶುದ್ಧ ಕುಡಿಯುವ ನೀರನ್ನು ಪಡೆಯಬಹುದಾಗಿದೆ. ಈ ಯೋಜನೆ ಇನ್ನೂ ಎಲ್ಲಾ ಗ್ರಾಮಗಳಲ್ಲಿ ಅನುಷ್ಠಾನಕ್ಕೆ ಬಂದಿಲ್ಲ. ಆದಷ್ಟು ಬೇಗನೆ ಅನುಷ್ಠಾನಕ್ಕೆ ಬಂದರೆ ಆಯಾ ಗ್ರಾಮಗಳ ಜನರನ್ನು ಆ ರೋಗಗಳಿಂದ ರಕ್ಷಿಸಬಹುದು. ಈ ಕುಡಿಯುವ ನೀರಿನ ಘಟಕ ಕೆಟ್ಟು ನಿಂತರೆ ಅದು ಬೇಗ ದುರಸ್ಥಿಯಾಗುವುದಿಲ್ಲ. ಆ ಸಮಯದಲ್ಲಿ ಗ್ರಾಮಸ್ಥರು ಫ್ಲೋರೈಡ್ ಮಿಶ್ರಿತ ನೀರನ್ನೇ ಬಲವಂತವಾಗಿ ಕುಡಿಯಬೇಕಾಗುತ್ತದೆ ಎಂಬುದೇ ಸಮಸ್ಯೆ. ಗ್ರಾಮಗಳಲ್ಲಿ ಒಳಚರಂಡಿ ವ್ಯವಸ್ಥೆ ಇರುವುದಿಲ್ಲ. ಎಲ್ಲಾ ತೆರೆದ ಚರಂಡಿ ವ್ಯವಸ್ಥೆಗಳೇ. ಅವುಗಳೂ ಚೆನ್ನಾಗಿ ಕೆಲಸ ಮಾಡುವುದಿಲ್ಲ. ತೆರೆದ ಚರಂಡಿಗಳು ಇರುವುದರಿಂದ ಅವುಗಳಲ್ಲಿ ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಬಾಟಲ್ಲು, ಚಪ್ಪಲಿ, ಒಣ ಎಲೆ, ರದ್ದಿ ಕಾಗದ, ರೊಟ್ಟು, ಒಣ ತ್ಯಾಜ್ಯ, ತರಕಾರಿ ತ್ಯಾಜ್ಯ, ಮಾಂಸಾಹಾರ ತ್ಯಾಜ್ಯ, ಸತ್ತ ಪ್ರಾಣಿಗಳು, ಇತ್ಯಾದಿಗಳಿಂದ ತುಂಬಿದ್ದು ನೀರು ಹರಿದುಕೊಂಡು ಹೋಗಲು ಜಾಗವೇ ಇರುವುದಿಲ್ಲ. ಇಂತಹ ಚರಂಡಿಗಳನ್ನು ಕಾಲಕಾಲಕ್ಕೆ ಸ್ವಚ್ಛ ಮಾಡಬೇಕು ಹಾಗೂ ಅಲ್ಲಿಂದ ತೆಗೆದ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ಚರಂಡಿಯಿಂದ ತೆಗೆದುಹಾಕಿದ ತ್ಯಾಜ್ಯ ಪುನಃ ಚರಂಡಿ ಸೇರುತ್ತದೆ. ಇದರಿಂದ ಹೊಲಸುವಾಸನೆ, ಮುಂತಾದವುಗಳಾಗಿ, ಜೀವಿಸಲು ಅಯೋಗ್ಯ ಸ್ಥಳಗಳಾಗಿ ಪರಿವರ್ತನೆಗೊಳ್ಳುತ್ತವೆ. ಹಳ್ಳಿಗಳಲ್ಲಿ ಮಾರುಕಟ್ಟೆಗಳಿಲ್ಲ. ಕೃಷಿ ಹಾಗೂ ಗುಡಿ ಕೈಗಾರಿಕೆಗಳ ಉತ್ಪಾದನೆಗಳನ್ನು ಮಾರಲು, ತಮ್ಮ ದಿನಬಳಕೆಯ ವಸ್ತುಗಳನ್ನು, ತರಕಾರಿಗಳನ್ನು ಕೊಳ್ಳಲು ಮಾರುಕಟ್ಟೆ ಬೇಕು. ಕೆಲವು ಗ್ರಾಮಗಳಲ್ಲಿ, ಹಳ್ಳಿ ಗೊಂಚಲಿನಲ್ಲಿ ಸಂತೆಗಳು ಆಗುತ್ತವೆ. ಅವುಗಳು ಎಲ್ಲಾ ಅವಶ್ಯಕತೆಗಳನ್ನು ಪೂರೈಸಲಾರವು. ಕೃಷಿ ಉತ್ಪಾದನೆಯನ್ನು ರೈತರು ವ್ಯಾಪಾರಿಗಳಿಗೆ ಮಾರಿ ನಷ್ಟ ಅನುಭವಿಸುತ್ತಿದ್ದಾರೆ. ಸಂತೆಗಳಲ್ಲಿ ಗುಣಮಟ್ಟದ ಧಾನ್ಯಗಳು, ದಿನಬಳಕೆ ವಸ್ತುಗಳು ಸಿಗುವುದಿಲ್ಲ. ಗ್ರಾಮ ಸಮುದಾಯಗಳಲ್ಲಿ ಒಳ್ಳೆಯ ರಸ್ತೆಗಳಿರುವುದಿಲ್ಲ. ಇದ್ದ ಮಣ್ಣಿನ ರಸ್ತೆಗಳು ಸಮತಟ್ಟಿನಿಂದ ಕೂಡಿರುವುದಿಲ್ಲ. ಬೇಸಿಗೆಯಲ್ಲಿ ಧೂಳಿನಿಂದಲೂ, ಮಳೆಗಾಲದಲ್ಲಿ ನೀರು, ಕೆಸರಿನಿಂದಲೂ ಕೂಡಿರುತ್ತವೆ. ಇದರಿಂದ ಸಂಚಾರ ಕಷ್ಟವಾಗುತ್ತದೆ. ಗ್ರಾಮಗಳಲ್ಲಿ ಮನೋರಂಜನೆಗೆ ಅವಕಾಶಗಳು ಕಡಿಮೆ. ನಾಟಕ, ಬಯಲಾಟ ಮುಂತಾದವುಗಳನ್ನು ನೋಡಲು ವರ್ಷಕ್ಕೊಮ್ಮೆ ಜಾತ್ರೆಯ ಸಮಯದಲ್ಲಿ ವ್ಯವಸ್ಥೆಗೊಳಿಸಬಹುದಾದ ಸಮಯದ ತನಕ ಕಾಯಬೇಕು. ಚಲನಚಿತ್ರಗಳನ್ನು ನೋಡಲು ಹತ್ತಿರದ ಪಟ್ಟಣ, ನಗರಗಳಿಗೆ ಹೋಗಬೇಕು. ಹಳ್ಳಿಗಳಲ್ಲಿ ಕ್ರೀಡಾ ಸೌಲಭ್ಯಗಳೂ ಕಡಿಮೆ. ಯುಗಾದಿ, ದಸರ ಮುಂತಾದ ಹಬ್ಬಗಳಲ್ಲಿ ಆಡುವ ಕಬಡಿ, ಕಾಯಿ ಗುದ್ದುವುದು (ತೆಂಗಿನಕಾಯಿಯನ್ನು ಕೈಯಿಂದ ಗುದ್ದಿ ಒಡೆಯುವುದು), ಕಾಯಿ ಉರುಳಿಸುವುದು (ತೆಂಗಿನಕಾಯಿಯನ್ನು ಒಂದು ನಿಗದಿತ ಜಾಗಕ್ಕೆ ಯಾರು ಕಡಿಮೆ ಸಂಖ್ಯೆಯ ಪ್ರಯತ್ನದಲ್ಲಿ ಉರುಳಿಸುತ್ತಾರೊ ಅವರು ಗೆದ್ದ ಹಾಗೆ) ಮುಂತಾದ ಮನರಂಜನಾ ಚಟುವಟಿಕೆಗಳನ್ನು ಹೊರತುಪಡಿಸಿದರೆ, ಅಥವಾ ತೇರು-ಜಾತ್ರೆಗಳಲ್ಲಿ ಆಡುವ ಕೋಲಾಟವನ್ನು ಬಿಟ್ಟರೆ, ಉಳಿದ ಸಮಯದಲ್ಲಿ ಹೆಚ್ಚಿನ ಮನರಂಜನಾ ಕೃತ್ಯಗಳು ಇರುವುದಿಲ್ಲ. ಬಹುತೇಕ ಹಳ್ಳಿಗಳಲ್ಲಿ ಗ್ರಂಥಾಲಯಗಳು, ವಾಚನಾಲಯಗಳು ಇರುವುದಿಲ್ಲ. ಗ್ರಾಮ ಪಂಚಾಯಿತಿಯ ಕೇಂದ್ರ ಗ್ರಾಮಗಳಲ್ಲಿ ಗ್ರಾಮೀಣ ಗ್ರಂಥಾಲಯಗಳು ಇರುತ್ತವೆ. ಅವೂ ಕಡಿಮೆ. ವಾಚನಾಲಯಗಳಲ್ಲಿ ಎಲ್ಲಾ ಪತ್ರಿಕೆಗಳು, ನಿಯತಕಾಲಿಕೆಗಳು, ಪುಸ್ತಕಗಳು ಸಿಕ್ಕುವುದಿಲ್ಲ. ವಾಚನಾಲಯಗಳು ಇದ್ದಲ್ಲಿ ಸಿಬ್ಬಂದಿ ಕೊರತೆ. ಗಾಳಿ ಬೆಳಕಿನ ವ್ಯವಸ್ಥೆ, ಕುಡಿಯುವ ನೀರಿನ ಅನುಕೂಲ ಮುಂತಾದವುಗಳು ಇರುವುದಿಲ್ಲ. ಹೀಗೆ ಇಲ್ಲ ಇಲ್ಲ ಎಂಬ ಉತ್ತರಗಳ ಪಟ್ಟಿ ಬೆಳೆಯುತ್ತದೆ. 9. ನಿರಕ್ಷರತೆ :- ಅಕ್ಷರಜ್ಞಾನ ಇಲ್ಲದೆ ಇರುವುದು ಒಂದು ಸಾಮಾನ್ಯ ಸಂಗತಿ ಎಂಬಂತೆ ಗ್ರಾಮ ಸಮುದಾಯದ ಸದಸ್ಯರು ವರ್ತಿಸುತ್ತಾರೆ. ಇತ್ತೀಚಿನವರೆಗೆ ಹಳ್ಳಿಗಳಲ್ಲಿ ಅಕ್ಷರಜ್ಞಾನ ಉಳ್ಳವರು ಬಹಳ ಜನ ಇರುತ್ತಿರಲಿಲ್ಲ. ಕಡ್ಡಾಯ ಶಿಕ್ಷಣ, ವಯಸ್ಕರ ಶಿಕ್ಷಣ, ಸಾಕ್ಷರತಾ ಆಂದೋಲನ, ಸರ್ವಶಿಕ್ಷಣ ಅಭಿಯಾನ ಮುಂತಾದ ಅನೇಕ ಯೋಜನೆಗಳ ಪರಿಣಾಮವಾಗಿ ಜನಸಾಮಾನ್ಯರ ಶಿಕ್ಷಣಮಟ್ಟ ಸುಧಾರಿಸಿದೆ. ಈಗ ಸಾಕ್ಷರತಾಮಟ್ಟ ಪ್ರತಿಶತ 75 ಎಂದು ಹೇಳಲಾಗುತ್ತಿದೆ. ಸಾಕ್ಷರತಾ ಮಟ್ಟ ಸಮಾಧಾನಕರ ಆಗಿಲ್ಲದಿರುವುದಕ್ಕೆ ಪ್ರಮುಖವಾಗಿ ಸಂಪ್ರದಾಯ ಶರಣತೆ, ಮೂಢನಂಬಿಕೆ, ಶಿಕ್ಷಣದ ಬಗ್ಗೆ ಅರಿವು ಇಲ್ಲದೆಯಿರುವುದು, ನಿರ್ಲಕ್ಷ್ಯ, ಶಾಲೆಗಳ ಅಲಭ್ಯತೆ, ಪಠ್ಯಪುಸ್ತಕಗಳು ಸರಿಯಾದ ಸಮಯಕ್ಕೆ ಒದಗದಿರುವುದು, ಶಾಲೆಗಳಲ್ಲಿ ಗಾಳಿ ಬೆಳಕಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಪೀಠೋಪಕರಣಗಳ ಅಲಭ್ಯತೆ, ಪರಿಕರಗಳ ಅಲಭ್ಯತೆ, ದಾಖಲಾತಿ, ಮಧ್ಯೆ ಶಾಲೆ ಬಿಡುವುದು, ಪರಿಹಾರ ಬೋಧನೆ, ಅಂಗವಿಕಲರಿಗೆ-ಊನಾಸಕ್ತರಿಗೆ ವಿಶೇಷ ತರಬೇತಿ, ಶಿಕ್ಷಕರಿಗೆ ತರಬೇತಿ, ಆಡಳಿತ ವ್ಯವಸ್ಥೆ, ಶಿಕ್ಷಕರಿಗೆ ಸೂಕ್ತ ಸಂಬಳ ಮುಂತಾದ ಹಲವು ಹತ್ತು ಕಾರಣಗಳನ್ನು ಕೊಡಬಹುದು. ಗ್ರಾಮ ಸಮುದಾಯಗಳಲ್ಲಿ ವೈಯಕ್ತಿಕ ಹಾಗೂ ಸಾಮೂಹಿಕವಾಗಿ ಶಿಕ್ಷಣದ ಬಗ್ಗೆ ಆದ್ಯತೆ ಇಲ್ಲದೆ ಇರುವುದು ಮುಖ್ಯ ಕಾರಣ. ಆದರೆ ಇತ್ತೀಚಿಗೆ ಪರಿಸ್ಥಿತಿ ಬದಲಾಗುತ್ತಿದೆ. ನಾಡಿನಾದ್ಯಂತ ಪ್ರಚಾರಗೊಂಡ ಸಾಕ್ಷರತಾ ಆಂದೋಲನಗಳ ಪರಿಣಾಮವಾಗಿ ಸಾರ್ವಜನಿಕರಲ್ಲಿ ಶಿಕ್ಷಣದ ಮಹತ್ವ ಮನದಟ್ಟಾಗುತ್ತಿದೆ. ಕಡ್ಡಾಯ ಶಿಕ್ಷಣ, ಸರ್ವ ಶಿಕ್ಷಣ ಅಭಿಯಾನ ಮುಂತಾದ ಯೋಜನೆಯ ಅನುಷ್ಟಾನದಿಂದ ಸಾಕ್ಷರತಾ ಪ್ರಮಾಣ ನಿಯತಕಾಲಿಕವಾಗಿ ಹೆಚ್ಚುತ್ತಿದೆ. ಇಷ್ಟೆಲ್ಲಾ ಆದರೂ ಇನ್ನೂ ಪ್ರತಿಶತ 25ರಷ್ಟು ಜನ ಅಕ್ಷರ ಜ್ಞಾನವನ್ನು ಪಡೆಯಬೇಕಾಗಿದೆ. ಶಿಕ್ಷಣ ಇಲ್ಲದೆ ಹೋದರೆ ನಿರುದ್ಯೋಗ, ಬಾಲ ಕಾರ್ಮಿಕತೆ, ಮೋಸ-ವಂಚನೆಗೆ ಒಳಗಾಗುವುದು ಮುಂತಾದ ಸಮಸ್ಯೆಗಳು ಜಾಸ್ತಿಯಾಗುತ್ತವೆ. ಇದು ತಪ್ಪಬೇಕೆಂದರೆ ಜನರು ಶಿಕ್ಷಣವನ್ನು ಪಡೆಯಬೇಕು. 10. ಆರೋಗ್ಯ : ಗ್ರಾಮೀಣ ಸಮುದಾಯಗಳಲ್ಲಿರುವ ಪ್ರಚಲಿತ ಪ್ರಮುಖ ಸಮಸ್ಯೆಗಳಲ್ಲಿ ಒಂದು ಅನಾರೋಗ್ಯ. ಮನುಷ್ಯರ ಜೀವನದಲ್ಲಿ ಆರೋಗ್ಯ ಒಂದು ಮಹತ್ವದ ಅಂಶ. ಒಂದು ಸಮುದಾಯ ಪ್ರಗತಿಯನ್ನು ಕಾಣಬೇಕಾದರೆ, ಶಾಂತಿ ಸಮಾಧಾನದಿಂದ ಇರಬೇಕಾದರೆ ಅಂತಹ ಸಮುದಾಯದ ಸದಸ್ಯರು ಆರೋಗ್ಯಪೂರ್ಣವಾಗಿರಬೇಕು. `ಆರೋಗ್ಯ ಶಬ್ದಕ್ಕೆ ಆಯುರ್ವೇದ, ಹೋಮಿಯೋಪತಿ, ಅಲೋಪತಿ, ಯನಾನಿ ಮುಂತಾದ ವೈದ್ಯಪದ್ಧತಿಗಳು ಬೇರೆ ಬೇರೆ ಅರ್ಥಗಳನ್ನು ಕೊಡುತ್ತವೆ. ಆರೋಗ್ಯ ಎಂದರೆ ರೋಗವಿಲ್ಲದಿರುವಿಕೆ ಎಂದು ಸರಳವಾಗಿ ಹೇಳಬಹುದಾದರೂ ಆಯುರ್ವೇದ ವಿಜ್ಞಾನದಲ್ಲಿ ಇದಕ್ಕೆ ಸಮಾನವಾಗಿ `ಸ್ವಾಸ್ಥ್ಯ ಶಬ್ದವನ್ನು ಉಪಯೋಗಿಸುತ್ತಾರೆ. ``ಸ್ವಾಸ್ಥ್ಯವನ್ನು ದೋಷ, ಧಾತು, ಮಲಗಳು ತಮ್ಮ ಪ್ರಾಕೃತಿಕ ಸ್ಥಿತಿಗತಿಗಳಲ್ಲಿ ಹಾಗೂ ಆತ್ಮ, ಮನಸ್ಸು, ಇಂದ್ರಿಯಗಳು ಪ್ರಸನ್ನಸ್ಥಿತಿಯಲ್ಲಿ ಇದ್ದು ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಿರುವ ಸ್ಥಿತಿ ಎಂದು ವ್ಯಾಖ್ಯಾನಿಸಿದ್ದಾರೆ.4 ವಿಶ್ವ ಆರೋಗ್ಯ ಸಂಸ್ಥೆ, ``ಆರೋಗ್ಯವೆಂದರೆ ಮಾನವನು ರೋಗರಹಿತನಾಗಿರುವುದಲ್ಲ, ಸಂಪೂರ್ಣ ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವುದಾಗಿದೆ5 ಎಂದು ವ್ಯಾಖ್ಯಾನಿಸುತ್ತದೆ. ಆರೋಗ್ಯ ಎಂಬ ಪರಿಕಲ್ಪನೆ ನೈರ್ಮಲ್ಯವನ್ನೂ ಒಳಗೊಂಡಿದೆ. ಹಾಗಾಗಿ ಸಮುದಾಯದ ಪ್ರತಿಯೊಬ್ಬ ಸದಸ್ಯನೂ ತಾನು ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದು ತನ್ನ ಕುಟುಂಬದ ಹಾಗೂ ತನ್ನ ಸಮುದಾಯದ ಒಳಿತಿಗೆ ಶ್ರಮಿಸುವಂತಾಗಬೇಕು. ಗ್ರಾಮೀಣ ಸಮುದಾಯದ ಸದಸ್ಯರು ಕಷ್ಟ ಸಹಿಷ್ಣುಗಳು, ಬಡತನ ಇತ್ಯಾದಿ ಕಷ್ಟಗಳು ಬೇರೆ. ಕಾಲಕಾಲಕ್ಕೆ ಸರಿಯಾಗಿ ಊಟ ಮಾಡಲಾಗುವುದಿಲ್ಲ. ಗಾಳಿ, ಮಳೆ, ಬಿಸಿಲು, ಪ್ರವಾಹ, ಬರಗಾಲ ಮುಂತಾದ ಪ್ರಕೃತಿಯ ಸಹಜ ಪ್ರವೃತ್ತಿಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ಹಾಗಾಗಿ ಅವರು ನಿರಂತರವಾಗಿ ಆರೋಗ್ಯದಿಂದ ಇರಲಾಗುವುದಿಲ್ಲ. ಅನೇಕ ರೋಗಗಳಿಗೆ ತುತ್ತಾಗುತ್ತಾರೆ. ಹಾಗಾಗಿ ಅವರಿಗೆ ಆಸ್ಪತ್ರೆಗಳ ಅನುಕೂಲಗಳು ಬೇಕು. ಆರೋಗ್ಯ ಇಲಾಖೆಯವರು ಹತ್ತಾರು ಹಳ್ಳಿಗಳನ್ನು ಸೇರಿಸಿ, ಕೇಂದ್ರ ಗ್ರಾಮದಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮತ್ತು ಎರಡು-ಮೂರು ಹಳ್ಳಿಗಳನ್ನು ಸೇರಿಸಿ (ಜನಸಂಖ್ಯೆಯ ಆಧಾರದ ಮೇಲೆ) ಒಂದು ಆರೋಗ್ಯ ಘಟಕವನ್ನು ಒದಗಿಸಿದ್ದಾರೆ. ಅಂದರೆ ಇನ್ನೂ ಅನೇಕ ಹಳ್ಳಿಗಳಲ್ಲಿ ಆರೋಗ್ಯ ಘಟಕಗಳಿಲ್ಲ. ಇರುವ ಆರೋಗ್ಯ ಘಟಕಗಳಲ್ಲಿ ತರಬೇತಿ ಪಡೆದ ಆರೋಗ್ಯ ಸಹಾಯಕರ ಕೊರತೆಯಿದೆ. ಆರೋಗ್ಯ ಘಟಕಗಳಲ್ಲಿ ಚುಚ್ಚುಮದ್ದು ಹಾಕಲು ಬೇಕಾದ ಅನುಕೂಲತೆ ಇಲ್ಲ. ಶೀತಲ ಪೆಟ್ಟಿಗೆ ಇಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕ್ಕ ಪ್ರಮಾಣದ ಶಸ್ತ್ರಚಿಕಿತ್ಸೆ ಮಾಡಲು, ಸುಖವಾಗಿ ಹೆರಿಗೆ ಮಾಡಿಸಲು, ಸುಸಜ್ಜಿತವಾದ ವ್ಯವಸ್ಥೆ ಇರುವ ಕೋಣೆಗಳಿಲ್ಲ. ಅರ್ಹ, ವಿದ್ಯಾವಂತ ವೈದ್ಯಾಧಿಕಾರಿಗಳ, ದಾದಿಯರ, ತಂತ್ರಜ್ಞರ, ಸಿಬ್ಬಂದಿಯ ಕೊರತೆ ಇದೆ. ಬಂದವರು ಹಳ್ಳಿಗಳಲ್ಲಿ ಬಹಳ ದಿನ ಉಳಿಯುವುದಿಲ್ಲ. ಆಂಬುಲೆನ್ಸ್ಗಳ ಕೊರತೆ ಇದೆ. ಔಷಧಗಳ ಸರಬರಾಜು, ವಿತರಣೆ ಸರಿಯಾಗಿ ಆಗುತ್ತಿಲ್ಲ. ಔಷಧಗಳು ಹೊರಗೆ ಮಾರಾಟವಾಗುತ್ತವೆ ಇತ್ಯಾದಿಗಳ ದೂರು ಬೇರೆ. ಇದೆಲ್ಲಾ ಮೇಲ್ವಿಚಾರಣಾ ವ್ಯವಸ್ಥೆಯ ಕಥೆಯನ್ನು ಹೇಳುತ್ತವೆ. ಹಾಗಾಗಿ ಜನಸಾಮಾನ್ಯರು ತಮ್ಮ ರೋಗ-ರುಜಿನಗಳಿಗಾಗಿ ಖಾಸಗಿ ವೈದ್ಯರ ಮೊರೆಹೋಗಬೇಕಾಗಿದೆ. ಹಳ್ಳಿಗಳಲ್ಲಿಯೂ ಅಳಲೆಕಾಯಿ ವೈದ್ಯರದೇ ಪ್ರಾಬಲ್ಯ. ಯಾವುದೋ ರೋಗಕ್ಕೆ ಇನ್ಯಾವುದೋ ರೋಗದ ಔಷಧಿಗಳನ್ನು ಮಿಶ್ರಮಾಡಿ, ಹಾಕಿ ತೊಂದರೆಗಳನ್ನು ತಂದುಕೊಂಡ ಉದಾಹರಣೆಗಳು ಅನೇಕ ಇವೆ. ಇದಕ್ಕೆ ದೇಶದಾದ್ಯಂತ ಒಂದು ನಿಯಂತ್ರಣ ವ್ಯವಸ್ಥೆ ಹಾಗೂ ಒಂದು ಸರ್ವತೋಮುಖ ಆರೋಗ್ಯ ಸೇವೆಗಳ ನಿರ್ವಹಣಾ ವ್ಯವಸ್ಥೆಯ ಅವಶ್ಯಕತೆಯಿದೆ. ಅಂತಹ ವ್ಯವಸ್ಥೆ ಇದ್ದ ಪಕ್ಷದಲ್ಲಿ ಅದನ್ನು ಇನ್ನೂ ಹೆಚ್ಚು ದಕ್ಷತೆಯಿಂದ ಜಾರಿಗೊಳಿಸಬೇಕಾಗಿದೆ. ಆರೋಗ್ಯದ ಪರಿಕಲ್ಪನೆ ನೈರ್ಮಲ್ಯದ ಅಂಶವನ್ನೂ ಒಳಗೊಂಡಿದೆ. ನೈರ್ಮಲೀಕರಣದ ಅರ್ಥವ್ಯಾಪ್ತಿಯಲ್ಲಿ ಪಾಯಿಖಾನೆ ಸ್ವಚ್ಛತೆ, ತೆರೆದ ಗುಂಡಿಗಳು, ಕಸ ಗುಡಿಸುವುದು, ಚರಂಡಿ ಸ್ವಚ್ಛಗೊಳಿಸುವುದು ಮುಂತಾದ ಅಂಶಗಳನ್ನು ಇಲ್ಲಿಯವರೆಗೆ ಸೇರಿಸಿಕೊಳ್ಳಲಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಅದರ ಅರ್ಥವ್ಯಾಪ್ತಿಯಲ್ಲಿ, ``ಮಾನವ ಮಲವನ್ನು ಸುರಕ್ಷಿತವಾಗಿ ಹೊರಸಾಗಿಸುವುದು, ದ್ರವ ತ್ಯಾಜ್ಯವನ್ನು ಹೊರಸಾಗಿಸುವುದು, ಘನತ್ಯಾಜ್ಯವನ್ನು ಹೊರ ಸಾಗಿಸುವುದು, ಕುಡಿಯುವ ನೀರಿನ ಸಂಗ್ರಹಣೆ, ಶೇಖರಣೆ ಮತ್ತು ಬಳಕೆ, ಗೃಹ ನೈರ್ಮಲ್ಯ ಮತ್ತು ಆರೋಗ್ಯ, ವೈಯಕ್ತಿಕ ಚೊಕ್ಕಟತನ ಹಾಗೂ ಪರಿಸರ ಆರೋಗ್ಯ, ಮುಂತಾದ ಅಂಶಗಳನ್ನು ಸೇರಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಾನವ ತ್ಯಾಜ್ಯ, ದ್ರವ ತ್ಯಾಜ್ಯ, ಘನ ತ್ಯಾಜ್ಯಗಳ ವಿಲೇವಾರಿ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಲಾಗಿಲ್ಲ. ಹಳ್ಳಿಗಳಲ್ಲಿ ಸಾಮೂಹಿಕ ಪಾಯಿಖಾನೆಗಳನ್ನು ಕಟ್ಟಲಾಗಿದೆ. ಸಮರ್ಪಕ ನೀರಿನ ಬಳಕೆಯಿಲ್ಲದೆ ಅವುಗಳ ಉಪಯೋಗ ಗರಿಷ್ಟ ಮಟ್ಟದಲ್ಲಿ ಆಗುತ್ತಿಲ್ಲ. ಕೆಲವು ಗ್ರಾಮಗಳಲ್ಲಿ ಇನ್ನೂ ಬಯಲು ಶೌಚಾಲಯವನ್ನು ಕಾಣುತ್ತೇವೆ. ಎಲ್ಲರಿಗೂ ಗೊತ್ತಿರುವಂತೆ ಬಯಲು ಶೌಚಾಲಯಗಳಿಂದ ಕಾಲರಾ, ಭೇದಿ, ಟೈಫಾಯ್ಡ್, ಜಂತುಹುಳು ಮತ್ತಿತರ ಅಂಟುಜಾಡ್ಯಗಳು ಪಸರಿಸುತ್ತವೆ. ಮಕ್ಕಳ ಸಾವಿನ ಕಾರಣಗಳಲ್ಲಿ ಐದು ಕಾರಣಗಳು ಈ ತರಹದ ಸೊಂಕಿಗೆ ಸಂಬಂಧಪಟ್ಟಿವೆ. ಮಹಿಳೆಯರಂತೂ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಕ್ಕಾಗಿ ಹಾಗೂ ಮಾಸಿಕ ಋತುಸ್ರಾವ ಸಮಯದಲ್ಲಿ ಎದುರಿಸುವ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ತುಂಬಾ ದಯನೀಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕುಡಿಯುವ ನೀರಿನ ಸಂಗ್ರಹಣೆ ಮತ್ತು ವಿತರಣೆ ಸಮರ್ಪಕವಾಗಿಲ್ಲ. ಬಹಳಷ್ಟು ನೀರು ಪೋಲಾಗುತ್ತಿದೆ. ಗ್ರಾಮೀಣ ಜನತೆಗೆ ನೀರನ್ನು ಮಿತವಾಗಿ ಬಳಸುವ ಪದ್ಧತಿಯನ್ನು ತಿಳಿಹೇಳಬೇಕಾಗಿದೆ. ಕಸಗುಡಿಸುವುದು, ಕಸವನ್ನು ವಿಂಗಡಿಸುವುದು, ಕಸವನ್ನು ಸರಿಯಾಗಿ ವಿಲೇವಾರಿ ಮಾಡುವುದು ಆಗುತ್ತಿಲ್ಲ. ಆ ಬಗ್ಗೆಯೂ ಗ್ರಾಮೀಣ ಜನತೆಗೆ ತಿಳುವಳಿಕೆಯನ್ನು ಕೊಡಬೇಕಾಗುತ್ತದೆ. ನೈರ್ಮಲ್ಯದ ಸಮಗ್ರ ಕಲ್ಪನೆಯನ್ನು ಮನದಟ್ಟು ಮಾಡಿಕೊಡುವುದರ ಜೊತೆಗೆ, ನೈರ್ಮಲ್ಯ ಯೋಜನೆಗಳನ್ನು ಸಮಾಧಾನಕರವಾಗುವಂತೆ ಅನುಷ್ಠಾನಗೊಳಿಸಬೇಕಾಗಿದೆ. ಹಳ್ಳಿಗಳಲ್ಲಿ ಬಟ್ಟೆ ಒಗೆಯುವ ಕಟ್ಟೆಗಳಿಲ್ಲ. ಇದ್ದ ಕೆಲವು ಕಡೆ ನೀರಿನ ಅನುಕೂಲವಿಲ್ಲ. ಅಂತಹ ಕಟ್ಟೆಗಳಿಗೆ ನೆರಳಿಲ್ಲ. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಸಾರ್ವಜನಿಕ ಆರೋಗ್ಯದ ಬಗ್ಗೆ ಇನ್ನೂ ಹೆಚ್ಚಿನ ಆಸಕ್ತಿಯನ್ನು ಸಂಬಂಧಪಟ್ಟವರು ತೋರಿಸಬೇಕಾಗಿದೆ. 11. ವಸತಿ :- ಗ್ರಾಮ ಸಮುದಾಯಗಳ ಜ್ವಲಂತ ಸಮಸ್ಯೆಗಳಲ್ಲಿ ಒಂದು ವಸತಿ ಸಮಸ್ಯೆ. ನಗರ ಸಮುದಾಯಗಳಲ್ಲಿರುವಂತೆ ಗ್ರಾಮ ಸಮುದಾಯಗಳಲ್ಲಿಯೂ ವಸತಿ ಸಮಸ್ಯೆಗೆ ಅನೇಕ ಮುಖಗಳಿವೆ ಹಾಗೂ ಅನೇಕ ಕಾರಣಗಳಿವೆ. ಬಡತನದ ಕಾರಣದಿಂದ ಗ್ರಾಮೀಣ ಜನತೆಗೆ ಮನೆಗಳಿಲ್ಲದೆ ಇರಬಹುದು. ಕೆಲವರಿಗೆ ಮನೆ ಇದೆ ಆದರೆ ಕಳಪೆ ಗುಣಮಟ್ಟದಿಂದ ಕೂಡಿದವು. ನಾಲ್ಕರಿಂದ ಆರಡಿ ಎತ್ತರದ ಗೋಡೆಗಳಿದ್ದು, ಅದಕ್ಕೆ ಗೋಪುರಾಕಾರದಲ್ಲಿ ಹುಲ್ಲಿನ ಮೇಲ್ಛಾವಣಿ ಇರುತ್ತವೆ. ಬೇಸಿಗೆ ಕಾಲದಲ್ಲಿ ಬೆಂಕಿ ಅನಾಹುತ ಆಗುವ ಸಂಭವ ಹೆಚ್ಚು. ಇಂತಹ ಮನೆಗಳಲ್ಲಿ ಗಾಳಿ, ಬೆಳಕಿನ ಕೊರತೆ ಇರುತ್ತದೆ. ಇಡೀ ಮನೆಗೆ ಬಾಗಿಲು ಒಂದೆ. ಕಿಟಕಿಗಳು ಇರುವುದಿಲ್ಲ. ಇದ್ದ ಮನೆಯಲ್ಲೇ ಮೂರು ಭಾಗ ಮಾಡಿಕೊಂಡು, ಒಂದು ಭಾಗದಲ್ಲಿ ಅಡಿಗೆ ಮಾಡಿಕೊಳ್ಳಲು, ಇನ್ನೊಂದು ಭಾಗದಲ್ಲಿ ದನಕರ ಕಟ್ಟಿಕೊಳ್ಳಲು ಹಾಗೂ ಮತ್ತೊಂದು ಭಾಗ ಜೀವಿಸಲು, ಮಲಗಲು ಉಪಯೋಗಿಸುವುದು ಕಂಡುಬರುತ್ತದೆ. ಮನೆಯ ಎಲ್ಲಾ ಸಾಮಗ್ರಿಗಳನ್ನು ಅಡಿಗೆ ಕೋಣೆಯ ಭಾಗದ ಒಂದು ಮೂಲೆಯಲ್ಲಿ ಪೇರಿಸಿಟ್ಟಿರುತ್ತಾರೆ. ದನಕರುಗಳೂ ಜೊತೆಗೇ ಜೀವಿಸುತ್ತವಾದ್ದರಿಂದ, ಅವುಗಳ ಗಂಜಲು, ಸೆಗಣಿ, ಹುಲ್ಲು ಮುಂತಾದವುಗಳಿಂದ ರೋಗರುಜಿನ ಸುಲಭವಾಗಿ ಹರಡಲು ಅವಕಾಶವಿರುತ್ತದೆ. ನೀರಿಗಾಗಿ ಕೊಳವೆಭಾವಿಗೊ, ಓಣೀ ಕೊಳಾಯಕ್ಕೊ ಹೋಗಬೇಕು. ಮನೆಗೆ-ಗುಡುಸಿಲಿಗೆ ನೀರಿನ ಕೊಳಾಯಿ ಅನುಕೂಲ ಇರುವುದಿಲ್ಲ. ದೀಪದ ಬೆಳಕೂ ಹೆಚ್ಚಾಗಿ ಇರುವುದಿಲ್ಲ. ಗುಡಿಸಲಾದರೆ ವಿದ್ಯುಶ್ಛಕ್ತಿ ದೀಪ ಉರಿಸುವುದು ಅಪಾಯ. ಹೆಂಚಿನ ಮನೆ, ಮಣ್ಣಿನ ಮನೆ ಇದ್ದರೆ ಇಂತಹ ದೀಪ ಹಾಕಿಸಬಹುದು. ಸುತ್ತಲಿನ ಪರಿಸರವೂ ಸ್ವಚ್ಛವಾಗಿರುವುದಿಲ್ಲ. ಮನೆ ಹತ್ತಿರವೇ ತಿಪ್ಪೆಗಳು ಹಾಗೂ ಗುಂಡಿಗಳು. ಜನಸಂಖ್ಯೆ ಹೆಚ್ಚಿರುವುದರಿಂದ ನಾಲ್ಕು ಜನ ಜೀವಿಸಬಹುದಾದ ಒಂದು ಮನೆಯಲ್ಲಿ ಎಂಟು-ಹತ್ತು ಜನರಿರುತ್ತಾರೆ. ದಂಪತಿಗಳಿಗೆ ಏಕಾಂತತೆ ಇರುವುದಿಲ್ಲ. ಪ್ರತಿಯೊಂದು ಮನೆಗೂ ಪ್ರತ್ಯೇಕ ಸ್ನಾನದ ಕೋಣೆ, ಪಾಯಿಖಾನೆ ಇರುವುದಿಲ್ಲ. ಸರಕಾರದವರು ಪಾಯಿಖಾನೆ ಕಟ್ಟಿಸಿಕೊಟ್ಟರೂ ಅದನ್ನು ಸರಿಯಾಗಿ ಉಪಯೋಗಿಸುವುದಿಲ್ಲ ಹಾಗೂ ನಿರ್ವಹಣೆ ಮಾಡಿಕೊಳ್ಳುವುದಿಲ್ಲ. ಪಾಯಿಖಾನೆಯನ್ನು ಕಟ್ಟಿಗೆ ಶೇಖರಿಸಿಡಲು, ಅಥವಾ ಬೇರೆ ಕೆಲಸಕ್ಕೆ ಉಪಯೋಗಿಸುತ್ತಾರೆ. ಹೀಗೆ ವಸತಿಸಮಸ್ಯೆ ಬೆಳೆಯುತ್ತಾ ಹೋಗುತ್ತದೆ. ವಸತಿ ಸಮಸ್ಯೆಗೆ ಬಡತನ, ಹೆಚ್ಚಿನ ಜನಸಂಖ್ಯೆ, ಕಳಪೆ ಸಾಮಗ್ರಿಗಳ ಉಪಯೋಗ, ನೀರಿನ ಅಭಾವ, ಜಾಗದ ಕೊರತೆ, ಸಂಯೋಜನೆಯ ಕೊರತೆ ಮುಂತಾದ ಕಾರಣಗಳನ್ನು ಕೊಡಬಹುದಾಗಿದೆ. ಇವುಗಳ ಜೊತೆಗೆ ನಿರಕ್ಷರತೆ, ಅಜ್ಞಾನ, ಸಂಪ್ರದಾಯ ಶರಣತೆ, ಮುಂತಾದ ಕಾರಣಗಳೂ ಸೇರಿ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತವೆ. ಇವೆಲ್ಲವುಗಳ ಪರಿಣಾಮವಾಗಿ ಗ್ರಾಮೀಣ ವಸತಿ ಸಮಸ್ಯೆ ಜಟಿಲ ಸಮಸ್ಯೆಗಳಲ್ಲಿ ಒಂದಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಇಂದಿರಾ ಆವಾಸ ಯೋಜನೆಯನ್ನೂ ಒಳಗೊಂಡಂತೆ ಅನೇಕ ನಿವೇಶನ ಹಾಗೂ ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಿವೆ. ಕೆಲವೊಮ್ಮೆ ಅರ್ಹ ಫಲಾನುಭವಿಗಳಿಗೆ ಯೋಜನೆಯಡಿ ಅನುಕೂಲಗಳು ದೊರಕುತ್ತಿಲ್ಲವೆಂಬ ಕೂಗಿದೆ. ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಸ್ಥಳೀಯ ಶಾಸಕರು ಹಾಗೂ ಪಂಚಾಯತಿ ರಾಜ್ಯದ ಸಂಸ್ಥೆಗಳ ಪ್ರತಿನಿಧಿಗಳಿಗೆ ವಹಿಸಲಾಗಿದೆ. 12. ಬಾಲ ಕಾರ್ಮಿಕರು :- ಜಗತ್ತಿನ ಅನೇಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿರುವಂತೆ ಭಾರತದಲ್ಲಿಯೂ ಬಾಲಕಾರ್ಮಿಕರ ಸಮಸ್ಯೆ ಇದೆ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಬಾಲಕಾರ್ಮಿಕರು ಇದ್ದಾರೆಂದು ವರದಿಗಳು ಹೇಳುತ್ತವೆ. ಭಾರತದ ಸಂವಿಧಾನದ ಭಾಗ ನಾಲ್ಕು, ನಿರ್ದೇಶಕ ತತ್ವಗಳಲ್ಲಿನ ಅನುಚ್ಛೇದ 45ರ ಅನ್ವಯ, ಮಕ್ಕಳಿಗೆ ಹದಿನಾಲ್ಕು ವರ್ಷಗಳ ವಯಸ್ಸು ಪೂರ್ತಿಯಾಗುವವರೆಗೆ, ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸಬೇಕು. ಆದರೆ ಇಂದಿಗೂ ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಆಟ, ಪಾಠ, ಮನರಂಜನೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರೇ ಚೆನ್ನ. ಆ ವಯಸ್ಸಿನಲ್ಲಿ ಒಳ್ಳೆಯ ತರಬೇತಿಯಿದ್ದರೆ ಮುಂದೆ ಅವರೇ ಉತ್ತಮ ನಾಗರೀಕರಾಗಲು ಸಾಧ್ಯ. ಹಾಗೆ ಆಗಲು ಅವಕಾಶ ಕಲ್ಪಿಸದೆ, ಅನೇಕ ಕಾರಣವೊಡ್ಡಿ, ಅವರ ಸ್ವಾತಂತ್ರ್ಯವನ್ನು ಹರಣಮಾಡಿ, ಅವರ ಶ್ರಮವನ್ನು ತಂದೆ-ತಾಯಿಗಳು ತಮ್ಮ ಆರ್ಥಿಕ ಅನುಕೂಲಕ್ಕೆ ಬಳಸಿಕೊಳ್ಳುವುದು ಅಕ್ಷಮ್ಯ ಅಪರಾಧ. ಬಾಲ ಕಾರ್ಮಿಕರು ಈಗ ಸಂಘಟಿತ ಹಾಗೂ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾಫಿ, ಟೀ, ರಬ್ಬರ್ ತೋಟಗಳಲ್ಲಿ, ಗ್ರಾಮೀಣ ಕೃಷಿಯಲ್ಲಿ, ಗಣಿಗಳಲ್ಲಿ, ರೈಲ್ವೆ ಯಾರ್ಡ್ಗಳಲ್ಲಿ, ಬೀಡಿ ಉದ್ಯಮದಲ್ಲಿ, ಗುಡಿ ಕೈಗಾರಿಕೆಗಳಲ್ಲಿ, ಹೋಟಲ್ಲು, ಗ್ಯಾರೇಜ್, ಪೆಟ್ರೋಲ್ ಪಂಪು, ಅಂಗಡಿ, ಮನೆ ಮುಂತಾದ ಕಡೆಗಳಲ್ಲಿ ಬಾಲಕಾರ್ಮಿಕರನ್ನು ಕಾಣಬಹುದಾಗಿದೆ. ಮನೆಗಳಲ್ಲಿ ಹೆಚ್ಚಾಗಿ ಹೆಣ್ಣು ಮಕ್ಕಳನ್ನು ಹೆಚ್ಚಾಗಿ ದುಡಿಸಿಕೊಂಡರೆ ಉಳಿದ ಕಡೆಗಳಲ್ಲಿ ಗಂಡು ಹುಡುಗರನ್ನು ದುಡಿಯಲಿಕ್ಕೆ ಹಚ್ಚುತ್ತಾರೆ. ಉದ್ದಿಮೆಗಳನ್ನು ನಡೆಸುವವರು ಕಾರ್ಮಿಕರಿಗೆ ಕೊಡಬೇಕಾದ ಶಾಸನಬದ್ಧ ವೇತನ, ಕೂಲಿ, ಅವರಿಗೆ ಕೆಲಸ ಮಾಡಲು ಒದಗಿಸಬೇಕಾದ ಅನುಕೂಲಗಳು, ಅವರಿಗೆ ಕೊಡಬೇಕಾದ ಪರಿಕರಗಳು ಮುಂತಾದ ಬಾಬತ್ತುಗಳಲ್ಲಿ ಹಣವನ್ನು ಉಳಿಸಲು ಬಾಲ ಕಾರ್ಮಿಕರನ್ನು ಉಪಯೋಗಿಸುತ್ತಾರೆ. ಅವರು ಸೋವಿಯಾಗಿ ಸಿಗುತ್ತಾರೆ. ಯಾವ ಅನುಕೂಲಕ್ಕಾಗಿಯಾಗಲೀ, ನಿಯತಕಾಲಿಕ ವೇತನ, ಕೂಲಿ ಪರಿಷ್ಕರಣೆಗಾಗಿಯಾಗಲೀ ಮುಷ್ಕರ ಮಾಡುವುದಿಲ್ಲ. ಹೇಳಿದ ಕೆಲಸ ಮಾಡುತ್ತಾರೆ. ಅವರ ಮೇಲೆ ದೌರ್ಜನ್ಯ ಮಾಡಿದರೆ ಸಹಿಸಿಕೊಂಡು ಸುಮ್ಮನಿರುತ್ತಾರೆ. ಬಾಲಕಾರ್ಮಿಕರಿಗೆ ಮನೆಯಲ್ಲಿ ಪೌಷ್ಟಿಕ ಆಹಾರ ಸಿಕ್ಕುವುದಿಲ್ಲ. ಹಾಗಾಗಿ ಅವರು ಅನಾರೋಗ್ಯದಿಂದ ನರಳಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ವಯಸ್ಕರಿಗೆ ಸಿಕ್ಕ ಹಾಗೆ ಇವರಿಗೆ ವೈದ್ಯಕೀಯ ಸೌಲಭ್ಯ ದೊರಕುವುದಿಲ್ಲ. ಮಕ್ಕಳನ್ನು ಉದಾಸೀನದಿಂದ ಕಾಣುತ್ತಾರೆ. ಪಾಲಕರಲ್ಲಿ ಶಿಕ್ಷಣದ ಮಹತ್ವ ತಿಳಿಯದೆ ಇದ್ದುದರಿಂದ ಮಕ್ಕಳಿಗೆ ಸಂವಿಧಾನರೀತ್ಯಾ ಸಿಗಬೇಕಾದ ಶಿಕ್ಷಣ ಸಿಗುವುದಿಲ್ಲ. ಅವರ ಅಭಿಪ್ರಾಯವನ್ನು ಕೇಳದೆ ಅವರನ್ನು ಒತ್ತಾಯದ ದುಡಿತಕ್ಕೆ ಹಚ್ಚುತ್ತಾರೆ. ಮನೆಯಲ್ಲಿ, ವೃತ್ತಿಗಳಲ್ಲಿ ಅವರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ಸಮಾಜದಲ್ಲಿ ಅವರನ್ನು ಕ್ರೌರ್ಯದಿಂದ ಕಾಣಲಾಗುತ್ತಿದೆ. ಜೀತದಾಳು ಸಮಸ್ಯೆಯಲ್ಲಿರುವಂತೆ (ಬಾಲಕಾರ್ಮಿಕ ಸಮಸ್ಯೆಯೂ ಜೀತದಾಳು ಸಮಸ್ಯೆಯ ಇನ್ನೊಂದು ಮುಖ), ಬಾಲಕಾರ್ಮಿಕ ಸಮಸ್ಯೆಗೂ ಬಡತನ ಮೂಲಕಾರಣ. ಸಾಮಾಜಿಕ ಜಾಗೃತಿ ಇಲ್ಲದೆ ಇರುವುದು, ಪಾಲಕರಿಗೆ ಶಿಕ್ಷಣದ ಪ್ರಾಮುಖ್ಯತೆ ಗೊತ್ತಿಲ್ಲದಿರುವುದು, ಶಾಸನಗಳ ವೈಫಲ್ಯ ಮುಂತಾದ ಸಾಮಾಜಿಕ ಹಾಗೂ ಆಡಳಿತಾತ್ಮಕ ಕಾರಣಗಳನ್ನೂ ಬಾಲ ಕಾರ್ಮಿಕ ಸಮಸ್ಯೆಗೆ ಆರೋಪಿಸಬಹುದಾಗಿದೆ. ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ 1986 ಕಾನೂನನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗಿಲ್ಲ ಎಂಬ ಆರೋಪವಿದೆ. ರಾಜಕಾರಣಿಗಳು, ಆಡಳಿತಾಧಿಕಾರಿಗಳು, ಸಮಾಜದ ಒಳಿತಿನ ಬಗ್ಗೆ ಮಾತನಾಡುವವರು, ಸದ್ರಿ ವಿಷಯದ ಬಗ್ಗೆ ಹೆಚ್ಚಿನ ಅಭಿರುಚಿಯನ್ನು ತೋರಿಸದೆ, ತೋರಿಕೆಯ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂಬ ಆಪಾದನೆಯೂ ಇದೆ. 13. ಗ್ರಾಮೀಣ ರಸ್ತೆಗಳು :- ಗ್ರಾಮೀಣಾಭಿವೃದ್ಧಿಯಲ್ಲಿ ರಸ್ತೆಗಳ ಪಾತ್ರ ತುಂಬಾ ದೊಡ್ಡದು. ರಸ್ತೆಗಳಲ್ಲಿ ಎಕ್ಸ್ಪ್ರೆಸ್ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯದ ಹೆದ್ದಾರಿಗಳು, ಜಿಲ್ಲಾ ಮುಖ್ಯರಸ್ತೆಗಳು, ಜಿಲ್ಲಾ ಇತರೆ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳು ಎಂದು ವಿಭಾಗಿಸುವುದು ವಾಡಿಕೆ. ಇವುಗಳಲ್ಲಿ ಹೆಚ್ಚಾಗಿ ಜಿಲ್ಲಾ ಮುಖ್ಯರಸ್ತೆಗಳು, ಜಿಲ್ಲೆಯ ಇತರೆ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳು ಗ್ರಾಮ ಸಮುದಾಯಗಳಿಗೆ ಹೆಚ್ಚಿನ ನೆರವನ್ನು ಒದಗಿಸುತ್ತವೆ. ಇಂತಹ ರಸ್ತೆಗಳಿಂದ ಗ್ರಾಮೀಣ ಜನತೆ ವಂಚಿತರಾಗಿ, ಅವರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ರಸ್ತೆ ಇಲ್ಲದಿದ್ದರೆ ಅಥವಾ ಕಳಪೆ ರಸ್ತೆಯಿದ್ದರೆ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಒದ್ದಾಡಬೇಕಾಗುತ್ತದೆ. ಮಳೆಗಾಲದಲ್ಲಂತೂ ಅವರ ಬವಣೆ ಹೇಳತೀರದು. ಎಲ್ಲಾ ಗ್ರಾಮಗಳಲ್ಲಿ ಆಸ್ಪತ್ರೆಗಳು ಇಲ್ಲವೇ ಆರೋಗ್ಯ ಘಟಕಗಳು ಇರುವುದಿಲ್ಲ. ಅನಾರೋಗ್ಯದ ಸಂದರ್ಭದಲ್ಲಿ ರೋಗಿಗಳು ಔಷಧೋಪಚಾರಕ್ಕೆ ಇನ್ನೊಂದು ಪಕ್ಕದ ದೊಡ್ಡ ಹಳ್ಳಿಗೊ, ಊರಿಗೊ ಹೋಗಬೇಕು. ರಸ್ತೆ ಸರಿಯಾಗಿರದಿದ್ದರೆ ಹಾಗೆ ಹೋಗಲು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಹಾಗೇನೇ ರೈತರು ತಮಗೆ ಬೇಕಾದ ಬೀಜ, ಗೊಬ್ಬರ, ಔಷಧ, ಉಪಕರಣಗಳು, ಇತರೆ ಪರಿಕರಗಳನ್ನು ಬೇರೆಡೆಯಿಂದ ತರಲು ಒಳ್ಳೆಯ ರಸ್ತೆಗಳಿಲ್ಲದೆ ಪರದಾಡುತ್ತಾರೆ. ತಮ್ಮ ಜಾನುವಾರುಗಳಿಗೆ ರೋಗ ಬಂದಾಗಲೂ ಅವುಗಳನ್ನು ಆಸ್ಪತ್ರೆಗೆ ಸಾಗಿಸಲು ಇಲ್ಲವೇ ಪಶು ವೈದ್ಯರನ್ನು ಹಳ್ಳಿಗೆ ಕರೆತರಲು ಒದ್ದಾಡುತ್ತಾರೆ. ರೈತರು ತಮ್ಮ ಕೃಷಿ ಉತ್ಪಾದನೆಯನ್ನು ಮಾರುಕಟ್ಟೆಗೆ ಸಾಗಿಸಲು ಸೂಕ್ತ ರಸ್ತೆಗಳಿಲ್ಲದೆ, ಆಯಾ ಗ್ರಾಮಗಳಿಗೆ ಬಂದು ಖರೀದಿಸುವ ವ್ಯಾಪಾರಸ್ಥರಿಗೆ ಸೋವಿದರದಲ್ಲಿ ಮಾರಬೇಕಾಗುತ್ತದೆ. ಅದರಂತೆಯೇ ಸಣ್ಣ ಉದ್ದಿಮೆದಾರರು, ಗುಡಿ ಕೈಗಾರಿಕೆಗಳನ್ನು ನಡೆಸುವವರು ತಮ್ಮ ಉತ್ಪಾದನೆಯನ್ನು ಮಾರುಕಟ್ಟೆಗಳಿಗೆ ಸಾಗಿಸಲು ರಸ್ತೆಗಳು ಬೇಕೇಬೇಕು. ಅಂಗಡಿ ಸಾಮಾನುಗಳನ್ನು ತಂದುಕೊಳ್ಳಲು, ತತ್ತಿ, ಕೋಳಿ, ಹಾಲು, ಇತ್ಯಾದಿಗಳನ್ನು ತರಲೂ ರಸ್ತೆಗಳು ಅವಶ್ಯ. ಇವುಗಳಲ್ಲದೆ ಗ್ರಾಮೀಣ ಜನತೆಯ ಸಾಮಾಜಿಕ ಜೀವನದಲ್ಲಿ ಬದಲಾವಣೆ ಹಾಗೂ ಸುಧಾರಣೆಗೂ ಗ್ರಾಮೀಣ ರಸ್ತೆ ಅತ್ಯವಶ್ಯ. ಈ ಹಿನ್ನೆಲೆಯಲ್ಲಿ ಸರಕಾರಗಳು ಗ್ರಾಮೀಣ ರಸ್ತೆಗಳನ್ನು ಉತ್ತಮಪಡಿಸಲು ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯೂ ಕೇಂದ್ರ ಸರಕಾರದಿಂದ ಅನುಷ್ಠಾನಗೊಂಡ ಅಂತಹ ಯೋಜನೆಗಳಲ್ಲಿ ಒಂದು. ಇತ್ತೀಚಿಗೆ ಜಾರಿಗೆ ಬಂದ ಭಾರತ್ ನಿರ್ಮಾಣ್ ಯೋಜನೆಯಲ್ಲಿಯೂ ರಸ್ತೆ ಅಭಿವೃದ್ಧಿಯ ಅಂಶವನ್ನು ಸೇರಿಸಲಾಗಿದೆ. ಸಮಗ್ರ ಗ್ರಾಮೀಣಾಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಗೊಂಡ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ದೃಷ್ಟಿ (2025) ಯು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. 14. ಜನಸಂಖ್ಯಾ ಏರಿಕೆ :- ಜನಸಂಖ್ಯಾ ಸಮಸ್ಯೆ ಇಡೀ ಜಗತ್ತನ್ನೇ ಬಾಧಿಸುತ್ತಿದೆ. ಭಾರತ ಇದಕ್ಕೆ ಹೊರತಾಗೇನಿಲ್ಲ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವರಕವಿ ಬೇಂದ್ರೆ, ಇಪ್ಪತ್ತನೇ ಶತಮಾನದ ನಾಲ್ಕನೇ ದಶಕದಲ್ಲಿ, ``ಮಕ್ಕಳಿವರೇ ನಮ್ಮ ಮೂವತ್ತು ಮೂರು ಕೋಟಿ ಎಂದು ಹಾಡಿದರು. ಆದರೆ ಇಂದಿನ ದಿನಗಳಲ್ಲಿ ನಮ್ಮ ಜನಸಂಖ್ಯೆ ಅದರ ಮೂರುವರೆಪಟ್ಟು ಜಾಸ್ತಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಪಂಚಾಯಿತಿ ರಾಜ್ಯ ಸಂಸ್ಥೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಒಂದಾಗಿ ಅಭಿವೃದ್ಧಿಗೆ ಎಷ್ಟೇ ಪ್ರಯತ್ನಿಸಿದರೂ, ಜನಸಂಖ್ಯೆ ಮಿತಿ ಮೀರಿದರೆ, ಅಂತಹ ಶ್ರಮ ನಿರೀಕ್ಷಿತ ಫಲಕವನ್ನು ಕೊಡುವುದಿಲ್ಲ. ಜನಸಂಖ್ಯೆ ಒಂದು ನಿಯೋಜಿತ ಮಿತಿಯಲ್ಲಿದ್ದರೆ ರಾಜ್ಯಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಅನುಷ್ಠಾನಗೊಳಿಸಿದ ಕಾರ್ಯಯೋಜನೆಗಳು ಕಣ್ಣಿಗೆ ಕಾಣಬಹುದಾದ ಫಲಿತಾಂಶವನ್ನು ತರಬಹುದಾಗಿದೆ. ಇತಿಹಾಸವನ್ನು ನೋಡಿದರೆ 19ನೇ ಶತಮಾನದವರೆಗೆ ಜನಸಂಖ್ಯೆ ನಿಯಂತ್ರಣದಲ್ಲಿರುವುದು ಕಂಡುಬರುತ್ತದೆ. ಇಪ್ಪತ್ತನೇ ಶತಮಾನದಲ್ಲಿ ಎಲ್ಲೆಡೆ ಕೈಗಾರಿಕಾ ಕ್ರಾಂತಿಯಾಯಿತು. ದಿನಬಳಕೆ ವಸ್ತುಗಳು ಮಾರುಕಟ್ಟೆಯಲ್ಲಿ ಸಿಗುವಂತಾಯಿತು. ಜನರು ಕೈಗಾರಿಕೆಗಳಲ್ಲಿ ದುಡಿಯುತ್ತಿದ್ದರಾದ್ದರಿಂದ ಅವರ ಬಳಿ ಹಣ ಸಂಗ್ರಹವಾಗಿ, ಅವರ ಕೊಳ್ಳುವ ಶಕ್ತಿ ಹೆಚ್ಚುತ್ತಾ ಬಂತು. ಪರಿಣಾಮವಾಗಿ ಅವರ ಸಾಮಾಜಿಕ ಸ್ಥಿತಿಗಳು ಪ್ರಗತಿಯನ್ನು ಸಾಧಿಸಿದವು. ಇದರ ಜೊತೆ ಜೊತೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಅಘಾದವಾದ ಸಂಶೋಧನೆಗಳಾಗಿ ಕಾಲರಾ, ಸಿಡುಬು, ಕ್ಷಯ, ಪ್ಲೇಗು ಮುಂತಾದ ಮಾರಣಾಂತಿಕ ರೋಗಗಳಿಗೆ ಚುಚ್ಚುಮದ್ದನ್ನು ಕಂಡುಹಿಡಿಯಲಾಯಿತು. ಪರಿಣಾಮವಾಗಿ ಅನೇಕ ಪ್ರಮುಖ ರೋಗಗಳಿಂದ ಜನತೆ ಗುಣಮುಖ ಹೊಂದಿ ಇನ್ನೂ ಹೆಚ್ಚು ದಿನ ಬದುಕುಳಿಯುವಂತಾಯಿತು. ಜನಸಾಮಾನ್ಯರ ಆಯುಷ್ಪ್ರಮಾಣ ಇದರಿಂದ ಜಾಸ್ತಿಯಾಯಿತು. ಆದರೆ ಇದಕ್ಕೆ ಸಂವಾದಿಯಾಗಿ, ಕೈಗಾರಿಕಾ ಪ್ರಗತಿ, ಆರ್ಥಿಕ, ಸಾಮಾಜಿಕ ಮುಂತಾದ ಕ್ಷೇತ್ರಗಳಲ್ಲಿ ಕಂಡ ಅಭಿವೃದ್ಧಿಯ ಪರಿಣಾಮವಾಗಿ ಜನಸಾಮಾನ್ಯರಲ್ಲಿ ಜನನ ಪ್ರಮಾಣದಲ್ಲಿ ಏರಿಕೆಯೂ ಆಯಿತು. ಆದರೆ ಮರಣ ಪ್ರಮಾಣದಲ್ಲಿ ಇಳಿಕೆಯಾಯಿತು. ಇದು ಜನಸಂಖ್ಯೆ ಹೆಚ್ಚಾಗಲು ಕಾರಣವಾಯಿತು. ಕೃಷಿ ಕ್ಷೇತ್ರದಲ್ಲಿ, ನಿರಂತರ ಸಂಶೋಧನಗಳ ಪರಿಣಾಮವಾಗಿ ಉತ್ತಮ ಹೆಚ್ಚು ಇಳುವರಿ ತರುವ ಬೀಜ, ಇಳುವರಿ ಹೆಚ್ಚಿಸಲು ರಸಾಯನಿಕ ಗೊಬ್ಬರ, ಬೆಳೆಗಳನ್ನು ರೋಗಗಳಿಂದ-ಕೀಟಗಳಿಂದ ರಕ್ಷಿಸಲು ಔಷಧಗಳ ಆವಿಷ್ಕಾರ, ಕೃಷಿಗೆ ಟ್ರಾಕ್ಟರ್, ಪವರ್ ಟಿಲ್ಲರ್, ಮುಂತಾದ ಯಂತ್ರಗಳ ಬಳಕೆ, ಇವುಗಳು ಉಪಯೋಗಿಸಲ್ಪಟ್ಟವು. ಇವುಗಳಿಂದ ಇಳುವರಿ ಜಾಸ್ತಿಯಾಗಿ ರೈತರಿಗೆ ಆರ್ಥಿಕ ಸಂಪತ್ತು ಹೆಚ್ಚಾಯಿತು. ಇದರಿಂದ ಯುವ ಜನತೆಯ ವಿವಾಹ, ಸಂತತಿ ಬೆಳವಣಿಗೆ ಮುಂತಾದವುಗಳಿಂದ ಪರೋಕ್ಷವಾಗಿ ಜನಸಂಖ್ಯೆ ಬೆಳೆಯುವಂತಾಯಿತು. ಭಾರತೀಯ ಸಮಾಜದಲ್ಲಿ ಬಾಲ್ಯವಿವಾಹ ಹಾಗೂ ಎಲ್ಲರೂ ವಿವಾಹ ಮಾಡಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ. ಬಾಲ್ಯ ವಿವಾಹ ಇತ್ತೀಚಿನವರೆಗೂ ತುಂಬಾ ಸಾಮಾನ್ಯವಾಗಿತ್ತು. ಇದರ ಜೊತೆಗೆ ವಿವಾಹದ ಸಾರ್ವತ್ರಿಕತೆಯ ಕಲ್ಪನೆ ನಮ್ಮ ಸಮಾಜದಲ್ಲಿದೆ. ಪ್ರತಿಯೊಬ್ಬ ವ್ಯಕ್ತಿಯೂ, ಹೆಣ್ಣಾಗಲಿ ಇಲ್ಲವೇ ಗಂಡಾಗಲಿ, ವಂಶೋದ್ಧಾರಕ್ಕಾಗಿ ಮದುವೆಯಾಗಲೇಬೇಕು. ಮಕ್ಕಳನ್ನು ಪಡೆಯಲೇಬೇಕು. ಇದನ್ನು ಒಂದು ಅಲಿಖಿತ ಕಟ್ಟಳೆ-ಕಟ್ಟುಪಾಡು ಎಂದು ಆಚರಿಸಿಕೊಂಡು ಬಂದಿದ್ದಾರೆ. ಇದು ಎಲ್ಲಾ ಧರ್ಮದವರಿಗೂ, ಜಾತಿ, ಪಂಥದವರಿಗೂ ಅನ್ವಯಿಸುತ್ತದೆ. ಇದರ ಪರಿಣಾಮವಾಗಿ ಜನಸಂಖ್ಯೆಯ ಏರಿಕೆಯಾಯಿತು. ಜನಸಂಖ್ಯಾ ಏರಿಕೆಗೆ ಜನಸಾಮಾನ್ಯರ ಸಾಮಾಜಿಕ ಮನೋಭಾವವೂ ಒಂದು ಕಾರಣವಾಗಿದೆ. ಸಂಪ್ರದಾಯ ಶರಣತೆ, ಮೂಢನಂಬಿಕೆ, ವಿಧಿವಾದ, ದೇವರ ಮೇಲಿನ ಅತಿಯಾದ ಅವಲಂಬನೆ, ಬಡತನ, ನಿರಕ್ಷರತೆ, ಅಜ್ಞಾನ, ಗಂಡುಮಕ್ಕಳ ಬಯಕೆ, ಮಕ್ಕಳು ಮುಪ್ಪಿನಲ್ಲಿ ಆಶ್ರಯವನ್ನು ಕೊಡುತ್ತಾರೆ ಎಂಬ ಕಲ್ಪನೆ ಮುಂತಾದ ಜನಾಂಗೀಯ, ಸಾಮಾಜಿಕ ಅಂಶಗಳೂ ಜನಸಂಖ್ಯಾ ಏರಿಕೆಗೆ ಕಾರಣವಾಗಿವೆ. ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಕುಟುಂಬ ಯೋಜನೆ ವ್ಯಾಪಕವಾಗಿ ಅನುಷ್ಠಾನಕ್ಕೆ ಬಂದರೂ, ಜನರು ಅದರಲ್ಲೂ ಗ್ರಾಮೀಣ ಸಮುದಾಯ ಸದಸ್ಯರು, ಅದನ್ನು ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳಲಿಲ್ಲ. ಹಾಗಾಗಿ ಜನಸಂಖ್ಯೆಯ ಹೆಚ್ಚಳವನ್ನು ಪ್ರಭಾವಯುತವಾಗಿ ತಡೆಯಲಾಗಲಿಲ್ಲ. ಸ್ವಲ್ಪಮಟ್ಟಿನ ಜನಸಂಖ್ಯಾ ನಿಯಂತ್ರಣ ಆದದ್ದಂತೂ ಅಷ್ಟೇ ನಿಜ. ಗ್ರಾಮೀಣ ಪ್ರದೇಶದಲ್ಲಿ ಮನರಂಜನಾ ಕೊರತೆಯಿದೆ. ಹಾಗಾಗಿ ಗ್ರಾಮೀಣ ಜನತೆ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿ ಮನರಂಜನೆಯನ್ನು ಕಂಡುಕೊಂಡಿದ್ದಾರೆ. ಇದೂ ಜನಸಂಖ್ಯೆ ಹೆಚ್ಚಾಗುವಲ್ಲಿ ತನ್ನ ಪಾತ್ರವನ್ನು ಬೀರಿದೆ. ಇನ್ನು ಜನಸಂಖ್ಯಾ ಹೆಚ್ಚಳ ಇಡೀ ಸಮಾಜದ ಮೇಲೆ ಅತಿಯಾದ ದುಷ್ಪರಿಣಾಮವನ್ನು ಬೀರಿದೆ. ಜನಸಂಖ್ಯೆ ಹೆಚ್ಚಾಗಿ, ಅದರಲ್ಲೂ ನಗರ ಪ್ರದೇಶಗಳಲ್ಲಿ, ಕೈಗಾರಿಕಾ ಕೇಂದ್ರಗಳಲ್ಲಿ, ಶಿಕ್ಷಣ ಕೇಂದ್ರಗಳಲ್ಲಿ, ಜನಸಾಂಧ್ರತೆ ಹೆಚ್ಚಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ, ಒತ್ತಡ, ವ್ಯಾಕುಲತೆ, ದ್ವೇಷಾಸೂಯೆಗಳು ಹೆಚ್ಚಾಗಿವೆ. ಜನಸಂಖ್ಯೆಯ ಒತ್ತಡದಿಂದ ಭೂಮಿಯ ಮೇಲಿನ ಒತ್ತಡ ಜಾಸ್ತಿಯಾಗುತ್ತಿದೆಯೆಂದು ಪರಿಸರ ತಜ್ಞರು, ಸಮಾಜವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಜನಸಂಖ್ಯೆ ಜಾಸ್ತಿಯಾದರೆ ಆಹಾರದ ಕೊರತೆ ಉಂಟಾಗುತ್ತದೆ. ನಾವು ಉತ್ಪಾದಿಸಿದ ದವಸಧಾನ್ಯಗಳು ನಮಗೇ ಸಾಕಾಗುವುದಿಲ್ಲ. ನಮ್ಮ ಉತ್ಪಾದನೆಯ ಜೊತೆಗೆ ನಾವು ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಇಪ್ಪತ್ತನೇ ಶತಮಾನದ ಏಳನೇ ದಶಕದಲ್ಲಿ ನಾವು ಅಮೇರಿಕಾ ದೇಶದಿಂದ ಗೋಧಿಯನ್ನು ಆಮದು ಮಾಡಿಕೊಂಡದ್ದು ನಮಗಿನ್ನೂ ನೆನಪಿದೆ. ಅದರಂತೆಯೇ ವಸತಿ ಸಮಸ್ಯೆಯೂ ಭೀಕರರೂಪ ತಾಳಿದೆ. ಈ ಸಮಸ್ಯೆ ಗ್ರಾಮೀಣ ಹಾಗೂ ನಗರ ಪ್ರದೇಶಗಳನ್ನೂ ವ್ಯಾಪಿಸಿಕೊಂಡಿದೆ. ವಿಶೇಷವಾಗಿ ಕೊಳೆಗೇರಿಗಳಲ್ಲಿ 10x10 (ಒಂದು ಚದುರ) ಜಾಗದಲ್ಲಿ ಎರಡೆರಡು ಕುಟುಂಬಗಳು ಜೀವನ ಮಾಡುವ ಪರಿಸ್ಥಿತಿ ಬಂದೊದಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಈ ಸಮಸ್ಯೆಯ ಇನ್ನೊಂದು ಮುಖವನ್ನೂ ಕಾಣಬಹುದಾಗಿದೆ. ಜನಸಂಖ್ಯೆ ಹೆಚ್ಚಾಗಿ ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡಿದೆ. ಗ್ರಾಮೀಣ ಪ್ರದೇಶಗಳಿಂದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ನಗರಗಳನ್ನು ಸೇರುತ್ತಿದ್ದಾರೆ. ನಗರಗಳಲ್ಲಿ ಕೈಗಾರಿಕೋದ್ಯಮಗಳು, ಕೈಗಾರಿಕಾ ಕೇಂದ್ರಗಳು ಅಸಂಖ್ಯ ಸಂಖ್ಯೆಯಲ್ಲಿ ಬೆಳೆದರೂ ಎಲ್ಲಾ ನಿರುದ್ಯೋಗಿಗಳಿಗೂ ಕೆಲಸ ಕೊಡಲಾಗುತ್ತಿಲ್ಲ. ಆ ಕೆಲಸಗಳಲ್ಲಿಯೂ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಕೆಲಸ ಗಳಿಸಿಕೊಳ್ಳುವುದು, ಮನೆಗಳಿಂದ ಉದ್ಯೋಗದ ಸ್ಥಳಕ್ಕೆ ಹೋಗಿಬರುವುದು, ನಿಯತಕಾಲಿಕವಾಗಿ ಕೆಲಸ ಮಾಡುವುದು, ಬಂದ ಆದಾಯದಲ್ಲೇ ಜೀವನ ಸಾಗಿಸುವುದು, ಹೀಗೆ ಎಲ್ಲಾ ಕಡೆಗೂ ಸಮಸ್ಯೆಗಳು ಹೆಚ್ಚುತ್ತಿವೆ. ಸಾಮಾಜಿಕ ಕ್ಷೇತ್ರದಲ್ಲಿ ನೀರು, ಬೀದಿ ದೀಪ, ಚರಂಡಿ ವ್ಯವಸ್ಥೆ, ಹಾಲು ಸರಬರಾಜು, ದಿನಪತ್ರಿಕೆ ವಿತರಣೆ, ಶಿಕ್ಷಣ, ಸಂಚಾರ ಮುಂತಾದ ಮೂಲಭೂತ ಸೌಲಭ್ಯಗಳು ಸಿಗುವುದೇ ಕಷ್ಟವಾಗುತ್ತಿದೆ. ಸರ್ವರಿಗೂ ಆರೋಗ್ಯ ಮತ್ತು ನೈರ್ಮಲ್ಯ ಸೇವೆಗಳನ್ನು ಒದಗಿಸುವುದೂ ಒಂದು ದೊಡ್ಡ ಕೆಲಸವೇ ಆಗಿ ಪರಿಗಣಿಸಿದೆ. ಹೀಗೆ ಜನಸಂಖ್ಯಾ ಸಮಸ್ಯೆ ವಿವಿಧ ಕ್ಷೇತ್ರಗಳಲ್ಲಿ ಹಲವಾರು ತೊಂದರೆಗಳನ್ನು ಸೃಷ್ಟಿಸಿ ನಾಯಕರನ್ನು, ಯೋಜಕರನ್ನು, ಬುದ್ಧಿಜೀವಿಗಳನ್ನು ಚಿಂತೆಗೆ ಈಡುಮಾಡಿದೆ. ಜನಸಂಖ್ಯಾ ಸಮಸ್ಯೆಯನ್ನು ಪ್ರಭಾವಯುತವಾಗಿ ಎದುರಿಸಬೇಕಾಗಿದೆ. ಮೊದಲನೆಯದಾಗಿ ಈಗಿರುವ ಜನಸಂಖ್ಯೆಯನ್ನು ಉತ್ತಮ ರೀತಿಯಲ್ಲಿ ಸಂರಕ್ಷಿಸಬೇಕಾಗಿದೆ. ಕೃಷಿ, ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಉತ್ಪಾದನೆ ಹೆಚ್ಚಿಸಿ, ಅದು ಎಲ್ಲಾ ಜನರಿಗೂ ಯೋಗ್ಯ ಬೆಲೆಯಲ್ಲಿ ಸಿಗುವಂತಾಗಬೇಕು. ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಬರುವುದನ್ನೂ ತಡೆಯಬೇಕಾಗಿದೆ. ಕುಟುಂಬ ಯೋಜನೆಯ ಹೊಸ ಹೊಸ ವಿಧಾನಗಳನ್ನು ಆವಿಷ್ಕರಿಸಿ ಅಳವಡಿಸಿಕೊಳ್ಳಬೇಕಾಗಿದೆ. ಇಂತಹ ವಿಧಾನಗಳ ಸಾಧನ ಸಾಮಗ್ರಿಗಳು ನವ ದಂಪತಿಗಳಿಗೆ ಸೋವಿದರದಲ್ಲಿ ಇಲ್ಲವೇ ಉಚಿತವಾಗಿ ಸಿಗುವಂತಾಗಬೇಕಾಗಿದೆ. ವಿವಾಹದ ವಯಸ್ಸು, ಸ್ತ್ರೀಯರ ಸ್ಥಾನಮಾನ, ಕಾನೂನಿನ ಬೆಂಬಲ ಮುಂತಾದ ವಿಷಯಗಳ ಬಗ್ಗೆ ಸೂಕ್ತ ತಿಳುವಳಿಕೆ ಕೊಡಬೇಕಾಗಿದೆ. ಮಾರ್ಗದರ್ಶನ ಮಾಡಬೇಕಾಗಿದೆ. ಸರಕಾರ, ಸಮಾಜ, ವೈದ್ಯರು, ಜನರು ಎಲ್ಲರೂ ಸಹಕರಿಸಿ ದುಡಿದು ಜನಸಂಖ್ಯೆಯನ್ನು ಒಂದು ನಿಯೋಜಿತ ಮಿತಿಯಲ್ಲಿಡಲು ಪ್ರಯತ್ನಿಸಬಹುದಾಗಿದೆ.6 15. ವೃದ್ಧರ ಸಮಸ್ಯೆಗಳು :- ಗ್ರಾಮೀಣ, ನಗರ ಹಾಗೂ ಬುಡಕಟ್ಟುಗಳೆಂಬ ಮೂರೂ ತರಹದ ಸಮುದಾಯಗಳನ್ನು ಚಿಂತೆಗೆ ಈಡುಮಾಡುತ್ತಿರುವ ಇನ್ನೊಂದು ಸಮಸ್ಯೆಯೆಂದರೆ ವೃದ್ಧರ ಸಮಸ್ಯೆಗಳು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು (ಸಂಪುಟ-2), ವೃದ್ಧ ಶಬ್ದಕ್ಕೆ ಪೂರ್ಣವಾಗಿ ಬೆಳೆದ, ವಯಸ್ಸಾದ, ಹಿರಿಯ, ಮುಪ್ಪಾದ, ಹಳೆಯ, ಮುದುಕ ಮುಂತಾದ ಅರ್ಥಗಳನ್ನು ಕೊಟ್ಟಿದೆ. ವೃದ್ಧ ಶಬ್ದದ ಸ್ತ್ರೀ ರೂಪವೇ ವೃದ್ಧೆ. ವೃದ್ಧೆಯೆಂದರೆ ವಯಸ್ಸಾದವಳು. ಮುದುಕಿ ಇತ್ಯಾದಿ ಅರ್ಥಗಳನ್ನು ಕೊಡಲಾಗಿದೆ. ಬೆಕರ್ರವರು ವಿಶಾಲವಾದ ಅರ್ಥದಲ್ಲಿ ವೃದ್ಧಾಪ್ಯವನ್ನು, ``ಕಾಲದ ಅಂತರದಲ್ಲಿ ವ್ಯಕ್ತಿಯಲ್ಲಾಗುವ ಬದಲಾವಣೆ,7 ಎಂದಿದ್ದಾರೆ. ಈ ಬದಲಾವಣೆ ಶಾರೀರಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ, ಆರ್ಥಿಕ ಮುಂತಾದ ಆಯಾಮಗಳನ್ನು ಹೊಂದಿರುತ್ತದೆ. ಕಾಲದ ಅಂತರದಲ್ಲಿ ವ್ಯಕ್ತಿಯಲ್ಲಾಗುವ ಬದಲಾವಣೆಗಳನ್ನು ಬಹಳ ಸುಲಭವಾಗಿ ಗುರುತಿಸಬಹುದಾಗಿದೆ. ವ್ಯಕ್ತಿಯ ದೇಹದಲ್ಲಾಗುವ ಬದಲಾವಣೆಗಳನ್ನು ವೃದ್ಧಾಪ್ಯದ ಲಕ್ಷಣಗಳೆಂದು ಒಪ್ಪಿಕೊಳ್ಳಲಾಗಿದೆ. ವೃದ್ಧಾಪ್ಯದಲ್ಲಿ ವ್ಯಕ್ತಿಯ ಹಲ್ಲುಗಳು ಉದುರುತ್ತವೆ. ದೃಷ್ಟಿ ಮಂಜಾಗುತ್ತದೆ. ಚರ್ಮ ಸುಕ್ಕುಗಟ್ಟುತ್ತದೆ. ಕೀಲುಗಳು ನೋವಾಗುತ್ತವೆ. ಕೈಕಾಲುಗಳು ನಡುಗಲು ಪ್ರಾರಂಭಿಸುತ್ತವೆ. ಹೆಚ್ಚು ಹೊತ್ತು ನಿಲ್ಲಲಾಗುವುದಿಲ್ಲ. ಅವಯವಗಳು ನಿಶ್ಯಕ್ತವಾಗುತ್ತವೆ. ದೇಹದಲ್ಲಿ ಚೈತನ್ಯ ಕುಂದುತ್ತದೆ. ಕೂದಲು ಬೆಳ್ಳಗಾಗುತ್ತವೆ. ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ. ಮಹಿಳೆಯರಲ್ಲಿ ಮಾಸಿಕ ಸ್ರಾವ ನಿಂತಿರುತ್ತದೆ. ನೆನಪಿನ ಶಕ್ತಿ ಕುಂದುತ್ತದೆ. ದೀರ್ಘಕಾಲದ ವ್ಯಾಧಿಗಳು ಹೆಚ್ಚಾಗಿ ವೃದ್ಧಾಪ್ಯದಲ್ಲಿ ನಂಟನ್ನು ಬೆಳೆಸುತ್ತವೆ. ವೃದ್ಧಾಪ್ಯದಲ್ಲಿ ವ್ಯಕ್ತಿಯು ನಿಧಾನವಾಗಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾನೆ. ಹೀಗೆ ವೃದ್ಧಾಪ್ಯದ ಲಕ್ಷಣಗಳನ್ನು ಒಂದು ಪಟ್ಟಿ ಮಾಡಬಹುದು. ವೃದ್ಧಾಪ್ಯವನಮ್ನು ಎರಡು ಪ್ರಕಾರಗಳಲ್ಲಿ ಗುರುತಿಸಲಾಗುತ್ತದೆ. ಒಂದು ಪ್ರಾಥಮಿಕ ವೃದ್ಧಾಪ್ಯ. ಇದು ಶರೀರದ ಜೈವಿಕ ಅರ್ಹತೆಗೆ ಸಂಬಂಧಿಸಿದ್ದು. ಇಂದ್ರಿಯಗಳ ಶಕ್ತಿ ಕುಂದುವುದು ಇದಕ್ಕೆ ಉದಾಹರಣೆ. ಇದರ ಕ್ಷಯಿಸುವಿಕೆಯನ್ನು ತಡೆಯಲಾಗುವುದಿಲ್ಲ. ಅಷ್ಟಾಂಗ ಯೋಗ, ವ್ಯಾಯಾಮ, ಚಂಕ್ರಮಣ, ಮುದ್ರಾ ಮುಂತಾದವುಗಳಿಂದ ಅದರ ವೇಗವನ್ನು ನಿಧಾನಿಸಬಹುದು, ಅಷ್ಟೆ. ಇನ್ನೊಂದು ಮಾಧ್ಯಮಿಕ ವೃದ್ಧಾಪ್ಯ. ಇದು ಹೊರಗಿನ ಕಾರಣಗಳಿಂದ ಉಂಟಾಗುವಂತಹದು. ಕಾಯಿಲೆ, ಬಂಧುಗಳ ಮರಣ, ಬಡತನ, ಮಾನಸಿಕ ಅಸಮತೋಲನ/ಕ್ಲೇಶ ಮುಂತಾದ ಕಾರಣಗಳಿಂದ ಬರುವ ವೃದ್ಧಾಪ್ಯ. ಇದನ್ನು ಉಚಿತ ಕ್ರಮಗಳಿಂದ ಹಾಗೂ ಚಿಕಿತ್ಸೆಯಿಂದ ತಡೆಯಬಹುದು. ವೃದ್ಧಾಪ್ಯದ ವಯಸ್ಸಿಗೆ ಸಂಬಂಧಪಟ್ಟಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಹಮತವಿಲ್ಲ. ಒಂದೊಂದು ದೇಶದಲ್ಲಿ ಒಂದೊಂದು ವಯಸ್ಸನ್ನು ನಿವೃತ್ತಿಯ ವಯಸ್ಸೆಂದು ನಿರ್ಣಯಿಸಲಾಗಿದೆ. ಭಾರತದಲ್ಲಿ ನಿವೃತ್ತಿಯ ವಯಸ್ಸು 60 ವರ್ಷಗಳು ಎಂದು ಒಪ್ಪಿಕೊಂಡಿರುವಾಗ, ಅಮೇರಿಕಾ, ಯೂರೋಪ್ನ ರಾಷ್ಟ್ರಗಳು, ಜಗತ್ತಿನ ಇತರ ಮುಂದುವರೆದ ರಾಷ್ಟ್ರಗಳಲ್ಲಿ ಇದನ್ನು 65 ವರ್ಷಗಳು ಎಂದು ತೀರ್ಮಾನಿಸಲಾಗಿದೆ. ಏಷ್ಯಾದ ಕೆಲವು ಮುಂದುವರೆಯುತ್ತಿರುವ ದೇಶಗಳಲ್ಲಿ ನಿವೃತ್ತಿಯ ವಯಸ್ಸನ್ನು 58 ರಿಂದ 60 ಎಂದು ನಿರ್ಣಯಿಸಲಾಗಿದೆ. ಅದರಂತೆಯೇ ಭಾರತದಲ್ಲಿಯೂ ನಿವೃತ್ತಿ ವಯಸ್ಸಿಗೆ ಸಂಬಂಧಪಟ್ಟಂತೆ ಒಮ್ಮತ ಅಭಿಪ್ರಾಯವಿಲ್ಲ. ಕೆಲವು ರಾಜ್ಯಗಳು ನಿವೃತ್ತಿಯ ವಯಸ್ಸನ್ನು 58 ವರ್ಷಗಳು ಎಂದು ಅಳವಡಿಸಿಕೊಂಡರೆ, ಇನ್ನೂ ಕೆಲವು ರಾಜ್ಯಗಳು ಅದನ್ನು 60 ವರ್ಷಗಳು ಎಂದು ಜಾರಿಯಲ್ಲಿ ತಂದಿವೆ. ಒಟ್ಟಾರೆಯಾಗಿ ನಿವೃತ್ತಿಯ ವಯಸ್ಸನ್ನು 60 ವರ್ಷಗಳು ಎಂದು ಒಪ್ಪಿ, ಜಾರಿಗೊಳಿಸುತ್ತಿರುವವರೇ ಹೆಚ್ಚು. ಮಾನವನ ಬದುಕಿನಲ್ಲಿ ಶೈಶವಾವಸ್ಥೆ (Infancy), ಬಾಲ್ಯಾವಸ್ಥೆ (Childhood), ಕಿಶೋರಾವಸ್ಥೆ (adolescence), ಪ್ರೌಢಾವಸ್ಥೆ (adulthood) ಹಾಗೂ ವೃದ್ಧಾವಸ್ಥೆ (Old age) ಎಂದು ಐದು ಹಂತಗಳನ್ನು ಗುರುತಿಸಲಾಗಿದೆ. ಮೊದಲ ಎರಡು ಹಂತಗಳಲ್ಲಿ ಜೀವಿಯು ಪರಾವಲಂಬಿಯಾಗಿ ಕಳೆಯಬೇಕಾಗುತ್ತದೆ. ಕಿಶೋರಾವಸ್ಥೆಯಲ್ಲಿ ಹೆಚ್ಚಾಗಿ ಕಲಿಕೆಯ ಕಡೆಗೆ ಗಮನಹರಿಸಲಾಗುತ್ತದೆ. ನಾಲ್ಕನೇ ಹಂತವಾದ ಪ್ರೌಢಾವಸ್ಥೆಯಲ್ಲಿ ವ್ಯಕ್ತಿ ತನ್ನ ಬದುಕಿನ ಹೆಚ್ಚಿನ ಸವಾಲುಗಳನ್ನು, ಸಮಸ್ಯೆಗಳನ್ನು ಎದುರಿಸುತ್ತಾನೆ. ತಾನು ದುಡಿದು ತನ್ನ ಕುಟುಂಬವನ್ನು ರಕ್ಷಿಸುತ್ತಾನೆ. ತನ್ನ ಜೀವನದ ಉದ್ದೇಶಗಳ ಸಾಧನೆಗೆ ಅವಿರತವಾಗಿ ಶ್ರಮಿಸುತ್ತಾನೆ. ಕೊನೆಯದೇ ವೃದ್ಧಾವಸ್ಥೆ. ಇದರಲ್ಲಿಯೂ ಎರಡು ಹಂತಗಳನ್ನು ಗುರುತಿಸುವುದುಂಟು. ಮೊದಲನೆ ಗುಂಪಿನ ವೃದ್ಧರು ತಮ್ಮ ವೃತ್ತಿಯಿಂದ ಅಥವಾ ಸ್ವಯಂ ಉದ್ಯೋಗದಿಂದ ನಿವೃತ್ತಿ ಹೊಂದಿರುತ್ತಾರೆ. ಆದರೆ ಅವರು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಶಕ್ತರಿರುತ್ತಾರೆ ಮತ್ತು ಅಪೇಕ್ಷೆಯ ಮೇರೆಗೆ ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಾರೆ. ಸಾಮಾನ್ಯವಾಗಿ ಇವರು 60 ರಿಂದ 75 ವರ್ಷಗಳ ಗುಂಪಿನಲ್ಲಿರುತ್ತಾರೆ. ಇನ್ನೊಂದು ಗುಂಪು 75 ವರ್ಷಕ್ಕಿಂತ ಹೆಚ್ಚಿನ ವಯಸ್ಸಾದವರಿದ್ದು ಅವರು ಹಿರಿಯ ವೃದ್ಧರೆನಿಸಿಕೊಳ್ಳುತ್ತಾರೆ. ಇವರು ತಮ್ಮ ಕೆಲಸ ತಾವು ಮಾಡಿಕೊಳ್ಳದೆ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಇತರರನ್ನು ಅವಲಂಬಿಸುತ್ತಾರೆ. ಹಾಗಾಗಿ ಈ ಎರಡೂ ಗುಂಪಿನ ವೃದ್ಧರ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಬೇರೆಬೇರೆಯೇ ಆಗಿರುತ್ತವೆ. ಸನಾತನ ಹಿಂದೂ ಧರ್ಮದಲ್ಲಿಯೂ ಮನುಷ್ಯನ ಜೀವಿತಾವಧಿಯನ್ನು ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂದು ಸ್ಥೂಲವಾಗಿ ವಿಭಾಗಿಸಲಾಗಿದೆ. ಬ್ರಹ್ಮಚರ್ಯಾಶ್ರಮದಲ್ಲಿ ಉತ್ತಮ ಬದುಕಿಗೆ ಬೇಕಾದ ಶಿಕ್ಷಣವನ್ನು ಪಡೆಯಬೇಕು. ಶಾರೀರಿಕ ಸಾಮರ್ಥ್ಯ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿ ಮುಂತಾದವುಗಳನ್ನು ಪ್ರಯತ್ನಪೂರ್ವಕ ಗಳಿಸಿಕೊಳ್ಳಬೇಕು. ಇದು ಬ್ರಹ್ಮಚರ್ಯ ಆಶ್ರಮದ ಮೂಲ ಉದ್ದೇಶ. ಎರಡನೆಯದು ಗೃಹಸ್ಥಾಶ್ರಮ. ಗೃಹಸ್ಥ ಎಂದರೆ ಮನೆ ಇರುವವನು ಎಂದರ್ಥ. ಈ ಆಶ್ರಮದಲ್ಲಿ ಮದುವೆ ಮಾಡಿಕೊಂಡು, ಕುಟುಂಬಕ್ಕೆ, ಸಮಾಜಕ್ಕೆ ಒಳ್ಳೆಯ ಸಂತಾನವನ್ನು ಕೊಡುವುದೇ ಮುಖ್ಯ ಕರ್ತವ್ಯ. ಇವುಗಳ ಜೊತೆಗೆ, ಇಷ್ಟು ದಿನ ತನ್ನ ತಂದೆ ಸಾಕಿ, ಸಲಹಿದ ಕುಟುಂಬವನ್ನು, ಇನ್ನು ಮುಂದೆ ನಡೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಹೊರುತ್ತಾನೆ. ಬ್ರಹ್ಮಚರ್ಯಾಶ್ರಮ 25 ವರ್ಷಗಳಾದರೆ, ಗೃಹಸ್ಥಾಶ್ರಮ ಇನ್ನು 25 ವರ್ಷಗಳು. ಮುಂದಿನ ಆಶ್ರಮವೇ ವಾನಪ್ರಸ್ಥಾಶ್ರಮ. ಈ ಆಶ್ರಮಕ್ಕೆ ಬರುವ ಹೊತ್ತಿಗೆ ದೈಹಿಕ ಶಕ್ತಿ, ಬೌದ್ಧಿಕ ಚುರುಕುತನ ಕಡಿಮೆ ಆಗಿರುತ್ತದೆ. ಇಂದ್ರಿಯಗಳು ನಿಧಾನವಾಗಿ ತಮ್ಮ ಸಾಮಥ್ರ್ಯವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತವೆ. ಇಲ್ಲಿಗೆ ಬರುವ ಹೊತ್ತಿಗೆ ಲೌಕಿಕ ಜೀವನ, ವಿಷಯ ಸುಖದ ಪರಿಚಯ ಆಗಿರುತ್ತದೆ. ಜೀವನದ ಉದ್ದೇಶವೇನು ಎಂದು ತಿಳಿದಿರುತ್ತದೆ. ಇತಿಮಿತಿಗಳ ಅರಿವು ಮೂಡಿರುತ್ತದೆ. ಜೀವನದ ಲೌಕಿಕ ಸಾಧನೆ ಒಂದು ಹಂತಕ್ಕೆ ಬಂದಿರುತ್ತದೆ. ಈ ಹಂತದಲ್ಲಿ ವಿಶ್ರಾಂತಿ ಬೇಕಾಗುತ್ತದೆ. ಈ ಆಶ್ರಮದಲ್ಲಿ ಕಿರಿಯರಿಗೆ ಮಾರ್ಗದರ್ಶನ ಮತ್ತು ವೈಯಕ್ತಿಕ ಧಾರ್ಮಿಕ ಸಾಧನೆಗಳೇ ಮುಖ್ಯ ಕರ್ತವ್ಯಗಳು. ಕೊನೆಯದು ಸನ್ಯಾಸಾಶ್ರಮ. ಈ ಆಶ್ರಮದಲ್ಲಿ ಐಹಿಕ ಸಂಬಂಧಗಳನ್ನು, ಸುಖಗಳನ್ನು ತೊರೆದು, ಮಿತಾಹಾರಿಯಾಗಿ, ಮೋಕ್ಷಕ್ಕಾಗಿ ಕಠಿಣ ಸಾಧನೆ ಮಾಡುವುದಕ್ಕೇ ಹೆಚ್ಚಿನ ಆದ್ಯತೆ. ಸನ್ಯಾಸಾಶ್ರಮದಲ್ಲಿ ಮಾಡಬೇಕಾದ ಇನ್ನೊಂದು ಕೆಲಸ ಕಿರಿಯರಿಗೆ, ಆಕಾಂಕ್ಷಿಗಳಿಗೆ ಮಾರ್ಗದರ್ಶನ. ವೃದ್ಧಾಪ್ಯ ವಾನಪ್ರಸ್ಥಾಶ್ರಮದಲ್ಲಿ ಪ್ರಾರಂಭಗೊಂಡು ಸನ್ಯಾಸಾಶ್ರಮದಲ್ಲಿ ಕೊನೆಗೊಳ್ಳುತ್ತದೆ.9 ವೃದ್ಧರು ಇತರರಿಗಿಂತ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ವೃದ್ಧರನ್ನು ವಯಸ್ಸಿನ ಆಧಾರದ ಮೇಲೆ ವೃದ್ಧರು ಮತ್ತು ಹಿರಿಯ ವೃದ್ಧರು ಎಂಬ ಎರಡು ಗುಂಪುಗಳನ್ನು ಮಾಡುವುದು ರೂಢಿ. ವೃದ್ಧರು ಈಗಾಗಲೇ ನೋಡಿರುವಂತೆ ತಮ್ಮ ಕೆಲಸಗಳನ್ನು ತಾವು ಮಾಡಿಕೊಳ್ಳುತ್ತಾ, ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾರೆ. ಅಪೇಕ್ಷೆ ಪಟ್ಟರೆ ಕಿರಿಯರಿಗೆ, ಆಕಾಂಕ್ಷಿಗಳಿಗೆ ಮಾರ್ಗದರ್ಶನ ಮಾಡುತ್ತಾರೆ. ಇದಕ್ಕೆ ಅಪವಾದಗಳೂ ಇವೆ. ಆದರೆ ಹಿರಿಯ ವೃದ್ಧರು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲಾಗದ ಸ್ಥಿತಿಗೆ ತಲುಪಿರುತ್ತಾರೆ. ಅವರಿಗೆ ಮನೆಯ ಇನ್ನುಳಿದ ಸದಸ್ಯರ ಹಾಗೂ ಇತರರ ಸಹಾಯ ಬೇಕಾಗುತ್ತದೆ. ವೃದ್ಧರನ್ನು ಸಂಘಟಿತ ಹಾಗೂ ಅಸಂಘಟಿತ ಕ್ಷೇತ್ರಗಳಲ್ಲಿ ಕಾಣಬಹುದಾಗಿದೆ. ಸಂಘಟಿತ ಕ್ಷೇತ್ರದಲ್ಲಿ ತಮ್ಮ ಸ್ವಂತ ಪ್ರಯತ್ನದಿಂದ ಪಿಂಚಿಣಿ, ಆರೋಗ್ಯ ವಿಮೆ, ಆರೋಗ್ಯ ರಕ್ಷಣೆ, ಸಮಯದ ಸದ್ವಿನಿಯೋಗ, ವಿರಾಮಕಾಲದಲ್ಲಿನ ಅಭ್ಯಾಸ, ಮುಂತಾದ ವಿಷಯಗಳ ಬಗ್ಗೆ ಮುಂಚಿತವಾಗಿಯೇ ಯೋಚಿಸಿ, ಯೋಗ್ಯ ರೀತಿಯಲ್ಲಿ ನಿವೃತ್ತಿ ಜೀವನವನ್ನು ರೂಪಿಸಿಕೊಂಡಿರುತ್ತಾರೆ. ಈ ಪ್ರಕ್ರಿಯೆಗೆ ಸರಕಾರ, ಬ್ಯಾಂಕ್, ವಿಮಾ ಸಂಸ್ಥೆಗಳು, ಇನ್ನಿತರ ಸಂಘಸಂಸ್ಥೆಗಳ ಸಹಾಯ ಪಡೆಯುತ್ತಾರೆ. ಅಸಂಘಟಿತ ವಲಯದಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿರುತ್ತವೆ. ಇದಕ್ಕೆ ಅಸಂಘಟಿತ ವೃತ್ತಿ, ಸ್ವಯಂ ಉದ್ಯೋಗ, ಬಡತನ, ಅನಾರೋಗ್ಯ, ಸಂಘ ಸಂಸ್ಥೆಗಳ ಕೊರತೆ, ನಿರಾಶಾವಾದ, ಅನುಕೂಲಗಳ ಕೊರತೆ, ಬಂಧುಗಳ ತಿರಸ್ಕಾರ ಮುಂತಾದ ಹಲವು ಹತ್ತು ಕಾರಣಗಳನ್ನು ಕೊಡಬಹುದಾಗಿದೆ. ವೃದ್ಧರ ಸಮಸ್ಯೆಗಳನ್ನು ಆರ್ಥಿಕ, ಸಾಮಾಜಿಕ ಹಾಗೂ ವೈದ್ಯಕೀಯ ಎಂದು ವಿಭಾಗಿಸಿದರೆ ಅರ್ಥೈಸಿಕೊಳ್ಳಲು ಸುಲಭವಾಗುತ್ತದೆ. ಆರ್ಥಿಕ ಸಮಸ್ಯೆಗಳು ವೃದ್ಧರ ಸಮಸ್ಯೆಗಳಲ್ಲಿ ಪ್ರಮುಖವಾದುದು ಆರ್ಥಿಕ ಸಮಸ್ಯೆ. ತಮ್ಮ ಜೀವನದಲ್ಲಿ ಒಂದು ನೌಕರಿಯೋ ಅಥವಾ ಸ್ವಯಂ ಉದ್ಯೋಗವೋ ಮಾಡುತ್ತಿರುವುದರ ಪರಿಣಾಮವಾಗಿ, ನಿಯತಕಾಲಿಕವಾಗಿ ಹಣ ಸಂಪಾದನೆ ಆಗುತ್ತಿರುತ್ತದೆ. ಆ ಪರಿಸ್ಥಿತಿಗೆ ಅವನು/ಅವಳು ಮತ್ತು ಆ ಕುಟುಂಬ ಹೊಂದಿಕೊಂಡಿರುತ್ತದೆ. ಆದರೆ ಆ ವ್ಯಕ್ತಿ ನಿವೃತ್ತಿಯಾದಾಗ, ಸ್ವಯಂ ಉದ್ಯೋಗವನ್ನು ಯಾವುದೋ ಕಾರಣದಿಂದ ನಿಲ್ಲಿಸಿದಾಗ, ಇದ್ದಕ್ಕಿದ್ದ ಹಾಗೆ ಸಂಪಾದನೆ ನಿಂತು ಹೋಗುತ್ತದೆ. ಸಂಘಟಿತ ವೃದ್ಧರಾದರೆ ಆದಾಯ ನಿಲ್ಲುವುದರ ಬದಲು ಬಹಳಷ್ಟು ಕಡಿಮೆಯಾಗುತ್ತದೆ. ಸ್ವಯಂ ಉದ್ಯೋಗವಾದರೆ ಸಂಪಾದನೆ ನಿಂತೇಹೋಗುತ್ತದೆ. ಸಂಸಾರವನ್ನು ನಿರ್ವಹಿಸುವ ಜವಾಬ್ದಾರಿ ಧುತ್ತೆಂದು ಎದುರು ನಿಲ್ಲುತ್ತದೆ. ಮನುಷ್ಯ ಅಂತಹ ಸಂದರ್ಭಗಳಲ್ಲಿ ಅಧೀರನಾಗುತ್ತಾನೆ. ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ತುಂಬಾ ಚಟುವಟಿಕೆಯಿಂದಿದ್ದರೆ, ಹೆಚ್ಚು ಉತ್ಸುಕನಾಗಿದ್ದರೆ, ಅಂತಹ ನಿವೃತ್ತಿ ಒಂದು ಶಾಪವಾಗಿ ಪರಿಣಮಿಸುತ್ತದೆ. ವೃದ್ಧರ ಸ್ವಯಂ ಉದ್ಯೋಗ ನಿಂತುಬಿಟ್ಟರೆ ನಿರುದ್ಯೋಗಿಯಾಗುತ್ತಾನೆ ಮತ್ತು ಅಂತಹವರ ಮನೆಯ ಆರ್ಥಿಕ ಪರಿಸ್ಥಿತಿ ಕೆಡಲು ಪ್ರಾರಂಭಿಸುತ್ತದೆ. ವೃದ್ಧ ಸಂಘಟಿತ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೆ ಮತ್ತು ಕುಶಾಗ್ರಮತಿಯಾಗಿದ್ದರೆ, ಮುಂಜಾಗ್ರತೆಯಿಂದ ತನ್ನ ಕಡಿಮೆ ಆದಾಯಕ್ಕೆ (ಪಿಂಚಿಣಿ, ಬ್ಯಾಂಕ್ ಡಿಪಾಜಿಟ್ ಮೇಲಿನ ಬಡ್ಡಿ, ಇತರೆ ಆದಾಯ) ತಕ್ಕಂತೆ ಕೆಲವು ಖರ್ಚುಗಳನ್ನು ಕಡಿತಗೊಳಿಸಿ, ಕೆಲವನ್ನು ಬಿಟ್ಟು. ತೀರಾ ಅವಶ್ಯಕತೆ ಇರುವ ಅಂಶಗಳ ಕಡೆಗೆ ಗಮನಕೊಟ್ಟು, ತನ್ನ ವ್ಯಯಪಟ್ಟಿಯನ್ನು ತಯಾರಿಸಿಕೊಳ್ಳುತ್ತಾನೆ ಮತ್ತು ಅದಕ್ಕೆ ಬದ್ಧನಾಗಿರುತ್ತಾನೆ. ಸ್ವಯಂ ಉದ್ಯೋಗದಿಂದ ನಿವೃತ್ತಿ ಹೊಂದಿದವನಾಗಿದ್ದರೆ ಅಥವಾ ವ್ಯಕ್ತಿ ಅಶಿಸ್ತಿನಿಂದ ಕೂಡಿದ್ದರೆ, ನಿಂತುಹೋದ ಅಥವಾ ಕಡಿಮೆಯಾದ ಆದಾಯಕ್ಕೆ ಹೊಂದಿಕೊಳ್ಳದೆ, ಇಲ್ಲವೇ ಆದಾಯ ಬರುವಂತಹ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳದೆ ಪರದಾಡುತ್ತಾನೆ ಮತ್ತು ಸಂಯಮ ಕಳೆದುಕೊಳ್ಳುತ್ತಾನೆ. ಸಾಮಾಜಿಕ ಸಮಸ್ಯೆಗಳು ವೃದ್ಧರು ಆರ್ಥಿಕ ಕ್ಷೇತ್ರವೊಂದಲ್ಲದೆ ಸಾಮಾಜಿಕ ಕ್ಷೇತ್ರದಲ್ಲಿಯೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಒಬ್ಬ ವ್ಯಕ್ತಿ ವೃದ್ಧನಾದ ಮೇಲೆ, ಅವನು/ಳು ನಿವೃತ್ತಿಯಾಗಿರುವುದರಿಂದ, ಆದಾಯ ಕಡಿಮೆ ಆಗಿರುವುದರಿಂದ ಇಲ್ಲವೇ ನಿಂತು ಹೋಗಿರುವುದರಿಂದ, ಅವನಿಗೆ ಕುಟುಂಬದಲ್ಲಿ, ಕೇರಿಗಳಲ್ಲಿ, ಸಮುದಾಯಗಳಲ್ಲಿ ಮಾನ್ಯತೆ ಕಡಿಮೆಯಾಗುತ್ತದೆ. ಎಲ್ಲರೂ ವೃದ್ಧರನ್ನೂ ನಿರ್ಲಕ್ಷ್ಯದಿಂದ ನೋಡಲು ಪ್ರಾರಂಭಿಸುತ್ತಾರೆ. ಅವರ ಅಭಿಪ್ರಾಯಗಳಿಗೆ, ಅನಿಸಿಕೆಗಳಿಗೆ ಬೆಲೆ ಕೊಡುವುದಿಲ್ಲ. ಈ ಕಾರಣಕ್ಕಾಗಿ ಕುಟುಂಬದ ಒಳಗೂ ಹಾಗೂ ಹೊರಗೂ ಸಂಬಂಧಗಳ ಮನೋಭೂಮಿಕೆಯಲ್ಲಿ ಬದಲಾವಣೆಗಳಾಗುತ್ತವೆ. ಅವರು ದುಡಿಯುತ್ತಿದ್ದಾಗ ಅವರ ಮಾತನ್ನು ಕುಟುಂಬದ ಉಳಿದ ಸದಸ್ಯರು ಕೇಳುತ್ತಿದ್ದರೆ, ಅವರು ನಿವೃತ್ತಿ ಹೊಂದಿದ ನಂತರ ಅವರು ದುಡಿಯುವ ಮಕ್ಕಳ ಮಾತನ್ನು ಕೇಳುವಂತಾಗುತ್ತದೆ. ಮನೆಯಲ್ಲಿ ವೃದ್ಧರ ಬಗ್ಗೆ ಸ್ತ್ರೀಯರ, ಮಕ್ಕಳ ಸಂಬಂಧಗಳಲ್ಲಿ, ಪ್ರವೃತ್ತಿಗಳಲ್ಲಿ ಬದಲಾವಣೆಯನ್ನು ಕಾಣಲಾಗುತ್ತದೆ. ಮನೆಯಲ್ಲಿ ಅವನೊಬ್ಬ ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾದ ವ್ಯಕ್ತಿಯಾಗಿ ಪರಿವತರ್ತಿತನಾಗುತ್ತಾನೆ. ವೃದ್ಧರು, ಆರ್ಥಿಕ ಅಂಶವನ್ನು ಹೊರತುಪಡಿಸಿ, ಕುಟುಂಬದ ಸಮಸ್ಯೆಗಳಿಗೆ ಸಹಾಯ ಮಾಡುವ ಕೆಲಸಗಳು ಹೆಚ್ಚಾಗುತ್ತವೆ. ಮನೆಯಲ್ಲಿ ಮಕ್ಕಳು, ಸೊಸೆಯಂದಿರು ನೌಕರಿ ಮಾಡಲು, ಕೆಲಸ ಮಾಡಲು ಕಛೇರಿ, ಹೊಲಗದ್ದೆಗಳು ಮುಂತಾದ ಕಡೆಗೆ ಹೋದರೆ, ವೃದ್ಧರು ಮನೆಯಲ್ಲಿದ್ದು ಮನೆಕೆಲಸಗಳನ್ನು ಮಾಡಬೇಕಾಗುತ್ತದೆ. ಅಡಿಗೆ ಮಾಡುವುದು, ಮಕ್ಕಳ ಆರೈಕೆಯನ್ನು ನೋಡಿಕೊಳ್ಳುವುದು, ಮಕ್ಕಳಿಗೆ ಪಾಠ ಹೇಳುವುದು, ಮಕ್ಕಳನ್ನು ಶಾಲೆಗೆ ಬಿಟ್ಟುಬರುವುದು - ಕರೆದುಕೊಂಡು ಬರುವುದು, ಅಂಗಡಿಯಿಂದ ಕಿರಾಣಿ ಸಾಮಾನುಗಳನ್ನು ತರುವುದು, ಬ್ಯಾಂಕು, ಅಂಚೆ ಕಛೇರಿ, ಗ್ಯಾಸ್ ಏಜನ್ಸಿ ಮುಂತಾದ ಕಡೆಗಳಿಗೆ ಹೋಗಿ ಬರುವುದು, ಸಂಬಂಧಿಕರ ಮದುವೆ ಮುಂಜಿಗಳಗೆ ಹೋಗಿ ಬರುವುದು ಮುಂತಾದ ಕೆಲಸಗಳನ್ನು ಮಾಡುವುದು ವೃದ್ಧರ ಪಾಲಿಗೆ ಬರುತ್ತವೆ. ``ನೀವು ಏನೂ ಕೆಲಸ ಮಾಡುತ್ತಿಲ್ಲ. ಇಂತಹ ಕೆಲಸಗಳನ್ನು ಮಾಡಬಾರದೇ ಎಂಬ ಒತ್ತಾಯ ಮನೆಯವರಿಂದ ಇರುತ್ತದೆ. ಇದು ಒಂದು ಮಿತಿಯಲ್ಲಿದ್ದರೆ ಒಳಿತು. ಅದು ಹಾಗಾಗದೆ, ಕೆಲಸ ಹೆಚ್ಚಾಗಿ ವೃದ್ಧರಿಗೆ ಸಮಸ್ಯೆಯಾಗಿ ಪರಿಣಮಿಸುತ್ತದೆ. ವ್ಯಕ್ತಿ ದುಡಿಯುತ್ತಿದ್ದಾಗ ಸಮಯದ ಅಭಾವವಿರುತ್ತದೆ. ಕಛೇರಿ ಕೆಲಸ, ಮನೆ ಕೆಲಸಗಳು, ಬಂಧುಗಳ ಕೆಲಸಗಳು, ಸಮುದಾಯದ ಕೆಲಸಗಳು, ಇತರೆ ಕೆಲಸಗಳು ಹೀಗೆ ಅನೇಕ ಕೆಲಸಗಳನ್ನು ಮಾಡುತ್ತಾನೆ. ಹಾಗಾಗಿ ಅವನು ಯಾವಾಗಲೂ ಕೆಲಸ ನಿರತನಾಗಿರುತ್ತಾನೆ. ಸಮಯ ಕಳೆದದ್ದೇ, ದಿನಗಳು ಉರುಳಿದ್ದೇ ಗೊತ್ತಾಗುವುದಿಲ್ಲ. ಆದರೆ ಒಮ್ಮೆ ನಿವೃತ್ತಿ ಹೊಂದಿದ ಮೇಲೆ, ಕೆಲವನ್ನು ಮಾತ್ರಾ ಹೊರತುಪಡಿಸಿ, ಈ ಕೆಲಸಗಳನ್ನು ಮಾಡಲಾಗುವುದಿಲ್ಲ. ಅನಾರೋಗ್ಯ ತೊಂದರೆ ಕೊಡುತ್ತಿದ್ದರಂತೂ ಕೇಳುವುದೇ ಬೇಡ. ಇವುಗಳ ಪರಿಣಾಮವಾಗಿ ವೃದ್ಧರಿಗೆ ಸಮೃದ್ಧಿಯಾಗಿ ಸಮಯ ಸಿಗುತ್ತದೆ. ತಮ್ಮ ನಿವೃತ್ತಿ ಜೀವನವನ್ನು ಸರಿಯಾಗಿ ಯೋಜಿಸಿಕೊಳ್ಳದೆ ಹೋದರೆ ಸಮಯ ಕಳೆಯುವುದೇ ಒಂದು ಸಮಸ್ಯೆಯಾಗಿ ಪರಿಣಮಿಸುತ್ತದೆ. ವ್ಯಕ್ತಿ ದುಡಿಯುತ್ತಿದ್ದಾಗ ವೃತ್ತಿಯ, ಕೆಲಸದ ಯಜಮಾನರು, ಒಡೆಯರು, ಮೇಲಧಿಕಾರಿಗಳು, ಸಹೋದ್ಯೋಗಿಗಳು, ಅಧೀನ ಅಧಿಕಾರಿಗಳು, ಅಧೀನ ಉದ್ಯೋಗಿಗಳು, ಗಿರಾಕಿಗಳು, ಫಲಾನುಭವಿಗಳು, ಸರಕಾರಿ ಅಧಿಕಾರಿಗಳು, ಸಾರ್ವಜನಿಕರು ಹೀಗೆ ಹಲವಾರು ಜನರ ನಿರಂತರ ಸಂಪರ್ಕದಲ್ಲಿರುತ್ತಾನೆ. ಆದರೆ ಒಂದು ಸಾರಿ ನಿವೃತ್ತಿ ಹೊಂದಿದ ಮೇಲೆ ಇದ್ದಕ್ಕಿದ್ದಂತೆ ಈ ಜನಸಂಪರ್ಕ ನಿಂತುಹೋಗುತ್ತದೆ ಅಥವಾ ಬಹಳಷ್ಟು ಕಡಿಮೆಯಾಗುತ್ತದೆ. ಈ ರೀತಿಯ ಸಂಪರ್ಕ ಕಡಿತದಿಂದ ಮನೆಯಲ್ಲಿ ಒಬ್ಬರೇ ಉಳಿಯುವಂತಾಗುತ್ತದೆ. ಇದೇ ಮುಂದಿನ ದಿನಗಳಲ್ಲಿ ದೈಹಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಒಂಟಿತನವಾಗಿ ಮಾರ್ಪಡುತ್ತದೆ ಮತ್ತು ಸದ್ರಿ ಒಂಟಿತನ ಮಾನಸಿಕ ಸ್ವಾಸ್ಥ್ಯವನ್ನು ಕೆಡಿಸಲು ಮುಂದಾಗುತ್ತದೆ. ಈ ಸಂಪರ್ಕಗಳ ಕೊರತೆಯಿಂದಾಗಿ ಆ ವೃದ್ಧನ ಪ್ರಾಮುಖ್ಯತೆ ಕಳೆದುಹೋಗುತ್ತದೆ. ಜನರು ಅವರನ್ನು ಮರೆಯಲು ಪ್ರಾರಂಭಿಸುತ್ತಾರೆ. ``ಆದಾಯದಲ್ಲಿ ಕಡಿತ, ಆರೋಗ್ಯದಲ್ಲಿ ಕುಸಿತ, ವ್ಯವಹಾರದಲ್ಲಿ ಹಿಡಿತ ಇವುಗಳ ಫಲಿತಾಂಶ ಭಯ, ತಾವು ನಿರುಪಯುಕ್ತ ಎಂಬ ಭಾವನೆ ವೃದ್ಧರಲ್ಲಿ ಬೇರೂರುತ್ತದೆ.10 ಜೀವನ ಅರ್ಥಶೂನ್ಯ ಎಂಬ ಭಾವನೆ ಮೂಡುತ್ತದೆ. ತಮ್ಮ ಜೀವನ ಒಂದು ಮುಗಿಯುತ್ತಿರುವ ಅಧ್ಯಾಯ ಎಂಬ ಅನಿಸಿಕೆ ಮನಸ್ಸಿನಲ್ಲಿ ಮೂಡುತ್ತದೆ. ಆರೋಗ್ಯದ ಸಮಸ್ಯೆಗಳು ವೃದ್ಧಾಪ್ಯದಲ್ಲಿ ಆರೋಗ್ಯದ ಸಮಸ್ಯೆಗಳು ವೃದ್ಧರನ್ನು ಹೈರಾಣಗೊಳಿಸುತ್ತವೆ. ಕಣ್ಣು ಸರಿಯಾಗಿ ಕಾಣಿಸುವುದಿಲ್ಲ ಇಲ್ಲವೇ ಪೂರ್ಣವಾಗಿ ದೃಷ್ಟಿ ಹೋಗಬಹುದು. ಅದರಂತೆಯೇ ಕಿವಿ ಸರಿಯಾಗಿ ಕೇಳಿಸುವುದಿಲ್ಲ ಅಥವಾ ಪೂರ್ತಿಯಾಗಿ ಕೇಳಿಸದಿರಬಹುದು. ಸಂಧಿವಾತ, ಮೊಣಕಾಲು ನೋವು, ಬೆನ್ನು ಹುರಿ ನೋವು, ಕುತ್ತಿಗೆ ನೋವು ಮುಂತಾದ ಮೂಳೆಗೆ-ಸ್ನಾಯುವಿಗೆ ಸಂಬಂಧಪಟ್ಟ ರೋಗಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಓಡಾಟ ನಿಂತುಹೋಗುತ್ತದೆ. ಜ್ಞಾಪಕ ಶಕ್ತಿ ಕಡಿಮೆಯಾಗುತ್ತದೆ. ಉಸಿರಾಟದ ತೊಂದರೆಗಳು, ಪೊಪ್ಪುಸಗಳ ಕಾಯಿಲೆಗಳು ಗೋಚರಿಸುತ್ತವೆ. ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಗಳು ಉದ್ಭವಿಸಬಹುದು. ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿಯಲ್ಲಿ ಇಳಿಮುಖವಾಗುತ್ತದೆ. ರಕ್ತದೊತ್ತಡ, ಮಧುಮೇಹ, ಸಂಧಿವಾತ, ಬೆನ್ನು ನೋವು, ಮಂಡಿ ನೋವು ಮುಂತಾದ ದೀರ್ಘಕಾಲದ ಜಾಡ್ಯಗಳು ಅಂಟಿಕೊಳ್ಳುತ್ತವೆ. ದೈಹಿಕ ನಿತ್ರಾಣವಾಗಿ ಏನೂ ಕೆಲಸ ಮಾಡಿಕೊಳ್ಳಲಾರದ ಸ್ಥಿತಿಗೆ ತಲುಪುತ್ತಾರೆ. ತಮ್ಮ ಸ್ವಂತ ಮತ್ತು ದೈನಂದಿನ ತಾವೇ ಮಾಡಿಕೊಳ್ಳಲಾರದ ಸ್ಥಿತಿಗೆ ತಲುಪುತ್ತಾರೆ. ತಮ್ಮ ಪ್ರತಿಯೊಂದು ಕೆಲಸವನ್ನೂ ಮಕ್ಕಳ, ಸೊಸೆಯಂದಿರ, ಮೊಮ್ಮಕ್ಕಳ, ಸಹಾಯಕರ ಹಾಗೂ ಇತರರ ಸಹಾಯವಿಲ್ಲದೇ ಮಾಡಿಕೊಳ್ಳಲಾರರು. ಎಲ್ಲಾ ಚಟುವಟಿಕೆಗಳೂ ಒಂದು ನಿಶ್ಚಲ ಸ್ಥಿತಿಗೆ ಬಂದು ಮುಟ್ಟುತ್ತವೆ. ಈ ಬದಲಾದ ಸ್ಥಿತಿಗೆ ವೃದ್ಧರು ಹೊಂದಿಕೊಳ್ಳಲು ಪರದಾಡಬೇಕಾಗುತ್ತದೆ. ಇದರಿಂದ ವೃದ್ಧರು ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ವೃದ್ಧರ ಆರ್ಥಿಕ, ಸಾಮಾಜಿಕ ಮತ್ತು ಆರೋಗ್ಯದ ಸಮಸ್ಯೆಗಳನ್ನು ವ್ಯಕ್ತಿಗತವಾಗಿ, ವೃಂದಗತವಾಗಿ ಹಾಗೂ ಸಾಮೂಹಿಕ ನೆಲೆಯಲ್ಲಿ ಅರ್ಥೈಸಿಕೊಂಡು ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ. ಅಡಿಟಿಪ್ಪಣಿಗಳು
ಡಾ. ಸಿ.ಆರ್. ಗೋಪಾಲ್ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸ್ಮಯೋರ್ (SMIORE)
2 Comments
Mahaveer
11/10/2018 10:40:17 pm
Sir, I thank you so much for the information I learned from this study.
Reply
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
![]()
|
![]()
|
![]()
|
![]()
|
SITE MAP
SitePOSH |
NIRATHANKAOUR OTHER WEBSITESSubscribe |
HR and Employment Law Classes - Every Fortnight
Stay updated and informed by joining our WhatsApp group for HR and Employment Law Classes - Every Fortnight.
The Zoom link for the sessions will be shared directly in the group. |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |