ಜಗತ್ತನ್ನು ನೋಡಿಸುವ ಕಣ್ಣಿನದೂ ಒಂದು ಗೋಲಾಕಾರ. ಈ ಆಕಾರವನ್ನು ಸ್ಥಿರವಾಗಿ ಕಾಪಾಡಲು ಕಣ್ಣಿನಲ್ಲಿ ಒಂದು ನಿರ್ದಿಷ್ಟವಾದ ಒತ್ತಡವಿರುತ್ತದೆ. ಈ ಒಳ ಒತ್ತಡವು ಕಣ್ಣನ್ನು ವಾತಾವರಣದ ಒತ್ತಡಕ್ಕೆ ಕುಸಿಯದಂತೆ ನೋಡಿಕೊಳ್ಳುತ್ತದೆ. ಬಗೆ ಬಗೆಯ ಕಾರಣಗಳಿಂದ, ಈ ಒತ್ತಡವು ಹೆಚ್ಚಿದಾಗ ಅದರಿಂದ ಕಣ್ಣಿನ ನರಕ್ಕೆ ಮತ್ತು ಇತರ ಅಂಗರಚನೆಗೆ ತೊಂದರೆಯಾಗಿ ದೃಷ್ಟಿಮಾಂದ್ಯತೆ ಹಾಗೂ ಕುರುಡುತನ ಉಂಟಾಗುತ್ತದೆ. ಈ ಕಾಯಿಲೆಗೆ ಗ್ಲಾಕೋಮ ಎಂದು ಹೆಸರು. ಕಣ್ಣಿನ ಒತ್ತಡ, ಕಣ್ಣಿನ ಒಳಕ್ಕೆ ಬರುವ ಮತ್ತು ಹೊರ ಹೋಗುವ ನೀರಿನಂಶದ ಗತಿಯನ್ನು ಅವಲಂಬಿಸಿರುತ್ತದೆ. ಈ ಎರಡು ಗತಿಗಳು ಒಂದು ಸಾಮರಸ್ಯದಲ್ಲಿದ್ದು, ಕಣ್ಣಿನ ಒತ್ತಡವನ್ನು ಹೆಚ್ಚೂ ಕಡಿಮೆ ಸಮವಾಗಿರುತ್ತದೆ. ಈ ಸಾಮರಸ್ಯದ ಏರುಪೇರು ಕಣ್ಣಿನ ಒತ್ತಡವು ಮೇಲೆ ಏರಲು ಕಾರಣ. ಹೆಚ್ಚಾಗಿ ಗ್ಲಾಕೋಮ ಕಾಯಿಲೆಯಲ್ಲಿ ಕಣ್ಣಿನಿಂದ ನೀರಿನಂಶ ಹೊರ ಹೋಗುವ ಗತಿಯ ಕ್ಷೀಣಿಕೆಯೇ ಕಾರಣವಾಗಿರುತ್ತದೆ. (ಈ ನೀರಿನಂಶ ಕಣ್ಣಿನ ಒಳಗಿನದ್ದೇ ಹೊರತು ಮೇಲ್ಮೈಯಲ್ಲಿರುವ ಕಣ್ಣೀರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ). ಕಣ್ಣಿನಲ್ಲಿರುವ ನೀರಿನಂಶ ಹೊರಹೋಗದೇ, ಕಣ್ಣಿನಲ್ಲಿ ಒತ್ತಡ ಏರುತ್ತದೆ. ಒತ್ತಡ ಹೆಚ್ಚಾದಾಗ ದೃಷ್ಟಿಪಟಲದ ಸೂಕ್ಷ್ಮ ದೃಷ್ಟಿಕಣಗಳು ಮತ್ತು ನರಗಳು ಇದನ್ನು ತಡೆದುಕೊಳ್ಳಲಾರದೇ ಕ್ಷೀಣಿಸುತ್ತವೆ. ಹಾಗೆಯೇ ಕಣ್ಣಿನೊಳಗಿನ ರಕ್ತ ಸಂಚಾರಕ್ಕೂ ಧಕ್ಕೆ ಉಂಟಾಗುತ್ತದೆ.
ಗ್ಲಾಕೋಮ ಕಾಯಿಲೆ ಹೆಚ್ಚಾಗಿ ನಲವತ್ತು ವರ್ಷ ದಾಟಿದವರಲ್ಲೇ ಹೆಚ್ಚು ಕಾಣುವುದು. ಆದರೆ ಕಣ್ಣಿನ ಅಂಗರಚನೆಯಲ್ಲಿ ತೊಂದರೆ ಉಂಟಾದಾಗ ಹುಟ್ಟಿದ ಮಗುವಿನಲ್ಲೇ ಈ ಕಾಯಿಲೆ ಕಾಣಿಸಬಹುದು. ಮಕ್ಕಳಲ್ಲಿ ಕಣ್ಣಿನ ಒತ್ತಡ ಏರಿದಾಗ, ಕಣ್ಣು ಇದನ್ನು ತಾಳಲಾರದೇ ಕ್ರಮೇಣ ಬೆಲೂನಿನಂತೆ ಊದಿಕೊಳ್ಳುತ್ತದೆ. ಕಣ್ಣಿನ ಎಲ್ಲಾ ಅಂಗಗಳಿಗೂ ಧಕ್ಕೆ ಉಂಟಾಗಿ. ಕಣ್ಣು ಸಂಪೂರ್ಣ ನಾಶವಾಗುವ ಸಂಭವ ಹೆಚ್ಚು. ಸೂಕ್ತ ಸಮಯದಲ್ಲಿ ಇದನ್ನು ಗುರುತಿಸಿ ಚಿಕಿತ್ಸೆಗೆ ಒಳಪಡಿಸುವುರಿಂದ ಇದನ್ನು ಸರಿಪಡಿಸಬಹುದು. ವಯಸ್ಸಾದವರಲ್ಲಿ ಕಣ್ಣಿನ ಮೇಲ್ಪದರ ದೃಢಗೊಂಡಿರುವುದರಿಂದ ಕಣ್ಣಿನ ಗಾತ್ರ ಅತೀ ಒತ್ತಡದಿಂದ ಹೆಚ್ಚುವುದಿಲ್ಲ. ಬದಲಾಗಿ ಈ ಒತ್ತಡ ಸಂಪೂರ್ಣ ದೃಷ್ಟಿನರದ ಮೇಲೆ ಕೇಂದ್ರಿಕೃತಗೊಂಡು ಅದನ್ನು ಕ್ರಮೇಣ ಕ್ಷೀಣಿಸುತ್ತದೆ. ಈ ವಯೋಮಿತಿಯಲ್ಲಿ ಬರುವ ಗ್ಲಾಕೋಮದಲ್ಲಿ ಸ್ಥೂಲವಾಗಿ ಎರಡು ವಿಧಗಳಿವೆ. ಅವು ಸಂಕುಚಿತ ಕೋನದ (Narrow Angle) ಮತ್ತು ತೆರೆದ ಕೋನದ (Open Angle) ಗ್ಲಾಕೋಮ. ಸಂಕುಚಿತ ಕೋನದ ಗ್ಲಾಕೋಮ: ಈ ವಿಧದ ಗ್ಲಾಕೋಮ ಕಣ್ಣಿನಲ್ಲಿ ತೀವ್ರವಾದ ನೋವು ತರಿಸುವ ಕಾಯಿಲೆಗಳಲ್ಲಿ ಒಂದು. ಕಣ್ಣಿನ ಅಂಗರಚನೆಯಲ್ಲಿನ ಕೆಲವು ವ್ಯತ್ಯಾಸಗಳು ಇದಕ್ಕೆ ಕಾರಣ. ಇಂತಹ ಕಣ್ಣುಗಳಲ್ಲಿ ಕಣ್ಣಿನ ಪಾಪೆ ದೊಡ್ಡದಾದಾಗ ಅಥವಾ ಔಷಧಗಳಿಂದ ನೇತ್ರ ಪರೀಕ್ಷೆಗಾಗಿ ದೊಡ್ಡದು ಮಾಡಿದಾಗ ಕಣ್ಣಿನೊಳಗಿನಿಂದ ನೀರು ಹೊರಹೋಗುವ ದಾರಿಗಳು ಮುಚ್ಚಿಹೋಗಿ, ಹಠಾತ್ತನೆ ಒತ್ತಡ ಏರುತ್ತದೆ. ವ್ಯಕ್ತಿಗೆ ಇದ್ದಕ್ಕಿದ್ದಂತೆ ತೀವ್ರವಾದ ಕಣ್ಣು ನೋವು, ತಲೆನೋವು ಅತೀವ ದೃಷ್ಟಿಮಾಂದ್ಯತೆ, ವಾಂತಿ ಆಗಬಹುದು. ಇದು ನೇತ್ರ ಚಿಕಿತ್ಸೆಗೆ ಒಂದು ತುರ್ತು ಪ್ರಮೇಯ Emergency. ತಕ್ಷಣ ಔಷಧಗಳ ಸಹಾಯದಿಂದ ಒತ್ತಡವನ್ನು ಇಳಿಸಿದಲ್ಲಿ ವ್ಯಕ್ತಿಗೆ ಆರಾಮ ಸಿಗುತ್ತದೆ. ಇದರ ನಂತರ ಯಾಗ್ ಲೇಸರ್ ಅಥವಾ ಶಸ್ತ್ರ ಚಿಕಿತ್ಸೆಯಿಂದ ಇಂತಹ ಪ್ರಮೇಯಗಳು ಮರುಕಳಿಸದಂತೆ ನೋಡಿಕೊಳ್ಳಬಹುದು ಮತ್ತು ಶಾಶ್ವತವಾಗಿ ಸರಿಪಡಿಸಬಹುದು. ಸಕಾಲದ ಸರಿಯಾದ ಚಿಕಿತ್ಸೆಯಿಂದ ಈ ತೆರನಾದ ಗ್ಲಾಕೋಮದಿಂದ ಆಗಬಹುದಾದ ದೃಷ್ಟಿಮಾಂದ್ಯತೆಯನ್ನು ಸಂಪೂರ್ಣವಾಗಿ ನಿವಾರಿಸಬಹುದು. ಚಿಕಿತ್ಸೆ ಇಲ್ಲದಿದ್ದಲ್ಲಿ ಒಂದೆರಡು ದಿನಗಳಲ್ಲೇ ದೃಷ್ಟಿ ಸಂಪೂರ್ಣ ನಶಿಸಿಹೋಗುತ್ತದೆ. ತೆರೆದ ಕೋನದ ಗ್ಲಾಕೋಮ: ಈ ತರಹದ ಗ್ಲಾಕೋಮದಲ್ಲಿ ಒತ್ತಡ ಕ್ರಮೇಣ ಜಾಸ್ತಿಯಾಗುವುದರಿಂದ ವ್ಯಕ್ತಿಗೆ ಇದರ ಸಂಬಂಧದಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಸಾಮಾನ್ಯವಾಗಿ ನಲವತ್ತು ವರ್ಷ ವಯಸ್ಸು ದಾಟಿದವರಿಗೆ ಓದಲು ಚಾಳಿಸು ಕನ್ನಡಕ ಬೇಕಾಗುತ್ತದೆ. ಇಂಥ ಪರೀಕ್ಷೆಯನ್ನು ನಡೆಸುವಾಗ ನೇತ್ರ ವೈದ್ಯ ಸಾಮಾನ್ಯವಾಗಿ ಕಣ್ಣಿನ, ಅದರ ಅಂಗಗಳ, ಹಾಗೆಯೇ ದೃಷ್ಟಿನರದ ತಪಾಸಣೆ ನಡೆಸುತ್ತಾರೆ. ಹಾಗೆಯೇ ವಿಶೇಷ ಉಪಕರಣಗಳಿಂದ ಕಣ್ಣಿನ ಒತ್ತಡವನ್ನು ಮಾಪಿಸುತ್ತಾರೆ. ಹೀಗೆ ಮಾಪಿಸಿದಾಗ, ಗ್ಲಾಕೋಮದ ಮೊದಲ ಕುರುಹು ದೊರೆಯಬಹುದು. ಹೀಗಾಗಿ ನಲವತ್ತು ದಾಟಿದಾಗ ಸಕ್ಕರೆ, ರಕ್ತದ ಒತ್ತಡ ಮತ್ತು ಇತರ ಪರೀಕ್ಷೆಗೆ ಒತ್ತುಕೊಡುವ ಹಾಗೆ, ಕಣ್ಣಿನ ಒತ್ತಡದ ಪರೀಕ್ಷೆ ಕೂಡ ಬಹಳ ಮುಖ್ಯ. ದುರದೃಷ್ಟಕರವಾದ ಸಂಗತಿಯೆಂದರೆ ಈ ಗ್ಲಾಕೋಮದಿಂದ ಶುರುವಿನಲ್ಲಿ ಏನೂ ತೊಂದರೆಗಳು ಕಾಣಿಸುವುದಿಲ್ಲ. ಆದರೆ ತೊಂದರೆ ಕಾಣಿಸಿಕೊಳ್ಳುವ ಸಮಯಕ್ಕೆ ಕಾಯಿಲೆ ಉಲ್ಬಣಿಸಿರುತ್ತದೆ. ಕಣ್ಣಿನ ಅತಿ ಒತ್ತಡದಿಂದ ದೃಷ್ಟಿ ನರಕಣಗಳು ಕ್ಷೀಣಿಸಿ ಕ್ರಮೇಣ ದೃಷ್ಟಿಮಾಂದ್ಯತೆ ಉಂಟಾಗುತ್ತ ಹೋಗುತ್ತದೆ. ದೃಷ್ಟಿಯ ಆವರಣ ಕ್ರಮೇಣ ಸಂಕುಚಿತಗೊಳ್ಳುತ್ತ ಸಾಗುತ್ತದಾದರೂ ಕೇಂದ್ರ ಅಥವಾ ಮಧ್ಯದ ದೃಷ್ಟಿ ಸರಿಯಿರಬಹುದು ಇದರಿಂದ ಗ್ಲಾಕೋಮಾ ಇರುವ ವ್ಯಕ್ತಿಗೆ ತನ್ನಲ್ಲಿರುವ ನ್ಯೂನತೆಯ ಅರಿವಾಗದಿರಬಹದು. ದೃಷ್ಟಿಯ ಆವರಣ ಅತ್ಯಂತ ಸಂಕುಚಿತಗೊಂಡಾಗ ವ್ಯಕ್ತಿಗೆ ದೃಷ್ಟಿ ಮಾಂದ್ಯತೆಯ ಅರಿವಾಗದಿರಬಹುದು. ಗ್ಲಾಕೋಮದಲ್ಲಿ ಕ್ಷೀಣಿಸಿದ ನರಕಣಗಳನ್ನು ಅಥವಾ ಅದರಿಂದ ಉಂಟಾಗುವ ದೃಷ್ಟಿಮಾಂದ್ಯತೆ ಹಿಂದೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಗ್ಲಾಕೋಮ ಚಿಕಿತ್ಸೆಯಿಂದ ಒತ್ತಡವನ್ನು ಹತೋಟಿಗೆ ತರಬಹುದು. ಇದರಿಂದ ಮುಂದಾಗುವ ತೊಂದರೆಯನ್ನು ತಪ್ಪಿಸಬಹುದೇ ಹೊರತು ಕಳೆದಿರುವ ದೃಷ್ಟಿ ಮರಳಿ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಶೀಘ್ರ ಪತ್ತೆಹಚ್ಚುವಿಕೆ ಮತ್ತು ತುರ್ತು ಚಿಕಿತ್ಸೆ ಈ ಕಾಯಿಲೆಗೆ ಅತಿಮುಖ್ಯ. ಇದ್ದುದನ್ನು ಉಳಿಸಿಕೊಳ್ಳುವುದೇ ಗ್ಲಾಕೋಮ ಚಿಕಿತ್ಸೆಯ ಬುನಾದಿ. ಗ್ಲಾಕೋಮವಿನ ಚಿಕಿತ್ಸೆ ಸುಲಭ. ಕಣ್ಣಿನಲ್ಲಿ ಒತ್ತಡವನ್ನು ಇಳಿಸಲು ಈಗ ಬಹುತರಹಗಳ ಕಣ್ಣಿನ ತೊಟ್ಟೌಷಧಿಗಳು, ಮಾತ್ರೆಗಳು ಲಭ್ಯವಿವೆ. ವ್ಯಕ್ತಿಯ ಕಾಯಿಲೆಯ ಪ್ರಮಾಣಕ್ಕೆ ಮತ್ತು ಔಷಧದ ಉಪಶಮನದ ಶಕ್ತಿಗೆ ಅನುಗುಣವಾಗಿ ವೈದ್ಯರು ಔಷಧದ ಮಾದರಿ ಮತ್ತು ಪ್ರಮಾಣವನ್ನು ನಿಷ್ಕರಿಸುತ್ತಾರೆ. ಈ ಔಷಧಗಳು ಸರಿಯಾಗಿ ಕಾರ್ಯ ನಡೆಸುತ್ತಿವೆಯೋ ಇಲ್ಲವೋ ಎಂದು ಖಾತರಿಪಡಿಸಿಕೊಳ್ಳಲು ಕಾಲಕಾಲಕ್ಕೆ ವೈದ್ಯರು ನಿಗದಿಪಡಿಸಿದ ಸಮಯದಲ್ಲಿ ದೃಷ್ಟಿ, ದೃಷ್ಟಿನರ, ಕಣ್ಣಿನ ಒತ್ತಡ ಮತ್ತು ದೃಷ್ಟಿಯ ಆವರಣ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಬಹುಮುಖ್ಯ. ಗ್ಲಾಕೋಮ ಕಾಯಿಲೆಯ ಉಪಶಮನಕ್ಕೆ ವೈದ್ಯರ ಸಲಹೆ ಹಾಗೂ ಅದಕ್ಕಿಂತ ಮುಖ್ಯವಾಗಿ ಗ್ಲಾಕೋಮ ರೋಗಿಯ ಸಹಕಾರ ಬಹಳ ಮುಖ್ಯ. ಕಣ್ಣಿನ ತೊಟ್ಟೌಷಧವಾಗಲೀ, ಮಾತ್ರೆಗಳಾಗಲೀ ನಿಗದಿತ ಪ್ರಮಾಣದಲ್ಲಿ ಸರಿಹೊತ್ತಿನಲ್ಲಿ ಉಪಯೋಗಿಸುವುದು ಕಡ್ಡಾಯ. ಈ ಪರಿಕ್ರಮದಿಂದ ವ್ಯಕ್ತಿಗೆ ದೃಷ್ಟಿಯಲ್ಲಿ ಅಥವಾ ಮತ್ತಾವುದೇ ವ್ಯತ್ಯಾಸ ಕಾಣಿಸುವುದಿಲ್ಲ. ಆದರೆ ವ್ಯಕ್ತಿಯ ಗಮನಕ್ಕೆ ಬಾರದೆ ಈ ಔಷಧಗಳು ಕಣ್ಣಿನ ಒತ್ತಡವನ್ನು ನಿಯಂತ್ರಣದಲ್ಲಿರುಸುತ್ತವೆ. ಕಣ್ಣಿನ ಒತ್ತಡದ ಪ್ರಮಾಣ ಮನುಷ್ಯನ ಗಮನಕ್ಕೆ ಬಾರದಿರುವುದರಿಂದ ರೋಗಿಯು ಔಷಧಗಳು ಕೆಲಸ ಮಾಡುತ್ತಿವೆಯೋ ಇಲ್ಲವೋ ಎಂದು ಸಂದೇಹವುಂಟಾಗಿ, ಔಷಧ ಪರಿಕ್ರಮದ ಬಗ್ಗೆ ಉದಾಸೀನ ಮಾಡುವ ಪ್ರಮೇಯ ಬರಬಹುದು. ಇಂತಹ ಉದಾಸೀನ ಕಣ್ಣಿಗೆ ಮಾರಕ. ಗ್ಲಾಕೋಮ ಚಿಕಿತ್ಸೆಯನ್ನು ವೈದ್ಯರು ಸೂಚಿಸುವ ಪರಿಕ್ರಮಕ್ಕೆ ಹೊಂದಿಕೊಂಡು ಕಾಲಕಾಲಕ್ಕೆ ಕೂಲಂಕುಷವಾಗಿ ಪರೀಕ್ಷೆ ಮೂಲಕ ನಡೆಸಬೇಕು. ಇದರಿಂದ ಆಗಬಹುದಾದ ದೃಷ್ಟಿಮಾಂದ್ಯತೆ ಮತ್ತು ಕುರುಡುತನವನ್ನು ಬಹುಪಾಲು ತಪ್ಪಿಸಬಹುದು. ಕೆಲವೊಮ್ಮೆ ಔಷಧಗಳಿಂದ ಕಣ್ಣಿನ ಒತ್ತಡ ಹತೋಟಿಯಲ್ಲಿಡಲು ಆಗದಿರಬಹುದು. ಅಂಥ ಸ್ಥಿತಿಯಲ್ಲಿ ಶಸ್ತ್ರಚಿಕತ್ಸೆ ನಡೆಸಿ ಒತ್ತಡವನ್ನು ಹತೋಟಿಗೆ ತರಬಹುದು. ಹಾಗೆಯೇ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಪಡಬಹುದಾದ ಸಂದರ್ಭದಲ್ಲಿ, ಅದರ ಜೊತೆಗೆ ಗ್ಲಾಕೋಮ ಶಸ್ತ್ರಚಿಕಿತ್ಸೆ ಕೂಡ ನಡೆಸಿ, ಗ್ಲಾಕೋಮದ ಶಾಶ್ವತ ಉಪಶಮನ ಮಾಡಲು ಸಾಧ್ಯ. ಅಲ್ಲದೇ ಲೇಸರ್ ಮೂಲಕ ಕೂಡ ಒತ್ತಡವನ್ನು ಕಡಿಮೆ ಮಾಡಬಹುದು. ಆದರೆ ಇದು ಪರಿಣಾಮಕಾರಿ ಚಿಕಿತ್ಸೆ ಎಂದು ಪ್ರಮಾಣೀಕರಣಗೊಂಡಿಲ್ಲ. -ಡಾ.ಎಂ.ಎಸ್. ಪ್ರಶಾಂತ್
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
![]()
|
![]()
|
![]()
|
![]()
|
SITE MAP
SitePOSH |
NIRATHANKAOUR OTHER WEBSITESSubscribe |
HR and Employment Law Classes - Every Fortnight
Stay updated and informed by joining our WhatsApp group for HR and Employment Law Classes - Every Fortnight.
The Zoom link for the sessions will be shared directly in the group. |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |