Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಭಾರತದಲ್ಲಿ ಸಮುದಾಯ ಸಂಘಟನೆಯ / ಅಭಿವೃದ್ಧಿಯ ಇತಿಹಾಸ - 2

12/20/2019

0 Comments

 
Picture
ಚಾಣಕ್ಯನ ನೀತಿಶಾಸ್ತ್ರ - ಅರ್ಥಶಾಸ್ತ್ರ
ಮಾನವನ ಬದುಕಿಗೆ ಉಪಯುಕ್ತವಾಗುವ ನೀತಿಸೂತ್ರಗಳನ್ನು ವಿವರಿಸುವ ಇನ್ನೊಂದು ಗ್ರಂಥವೆಂದರೆ ಚಾಣಕ್ಯನ (ವಿಷ್ಣುಶರ್ಮ, ಕೌಟಿಲ್ಯ) ನೀತಿಶಾಸ್ತ್ರ. ಚಾಣಕ್ಯ ಅದ್ವಿತೀಯ ದೇಶಭಕ್ತ, ಅಪ್ರತಿಮ ಸಂಘಟಕ. ಸುಖ ಲೋಲುಪತೆಯಲ್ಲಿ ತಮ್ಮ ರಾಜಧರ್ಮ (ಕರ್ತವ್ಯ)ವನ್ನು ಮರೆತ ಮಗಧ ಸಾಮ್ರಾಜ್ಯವನ್ನು ಆಳುತ್ತಿದ್ದ ನವನಂದರನ್ನು ನಿಗ್ರಹಿಸಿ, ಅದೇ ವಂಶದ ಕುಡಿಯಾದ ಚಂದ್ರಗುಪ್ತನನ್ನು ಸಾಮ್ರಾಜ್ಯಾಧಿಪತಿಯನ್ನಾಗಿ ಮಾಡಿ, ಧರ್ಮ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ ಧೀರ.  

ರಾಜರು ಮತ್ತು ಪ್ರಜೆಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಸೂತ್ರಗಳನ್ನೊಳಗೊಂಡ ನೀತಿಶಾಸ್ತ್ರ ಮತ್ತು ಅರ್ಥಶಾಸ್ತ್ರ ಎಂಬ ಎರಡು ಮಹತ್ತರ ಕೃತಿಗಳನ್ನು ಚಾಣಕ್ಯನು ಬರೆದಿದ್ದಾನೆ. ನೀತಿಶಾಸ್ತ್ರ ಮನುಷ್ಯನ ದೈನಂದಿನ ಬದುಕಿಗೆ ಸಂಬಂಧಿಸಿದ್ದಾಗಿದೆ ಹಾಗೂ ಅರ್ಥಶಾಸ್ತ್ರ ಹೆಚ್ಚಾಗಿ ಆಡಳಿತ ಹಾಗೂ ರಕ್ಷಣೆಯ ಬಗ್ಗೆ ಬರೆದ ಕೃತಿಯಾಗಿದೆ. ಈ ಎರಡೂ ಗ್ರಂಥಗಳು ಧರ್ಮ ಮತ್ತು ಸಂಸ್ಕೃತಿಯನ್ನಾಧರಿಸಿ ಬರೆದ ಗ್ರಂಥಗಳಾಗಿವೆ.

ನೀತಿಶಾಸ್ತ್ರ ಒಂದು ನೀತಿಸಂಹಿತೆ. ಇಲ್ಲಿನ ಸೂತ್ರಗಳು ವ್ಯಷ್ಟಿ ಮತ್ತು ಸಮಷ್ಟಿ ಎರಡಕ್ಕೂ ಒಳಿತನ್ನು ಬಯಸುತ್ತವೆ. ರಾಜ, ಮಂತ್ರಿ, ಸಾಮಂತ, ಅಧಿಕಾರಿ, ಪ್ರಜೆ ಹೀಗೆ ಎಲ್ಲರಿಗೂ ಅನ್ವಯವಾಗುವ ಸೂತ್ರಗಳನ್ನು ಇದು ಒಳಗೊಂಡಿದೆ.  ಯಾವುದು ಒಳಿತು-ಯಾವುದು ಕೆಡಕು, ಯಾವುದು ಸರಿ-ಯಾವುದು ತಪ್ಪು, ಯಾವುದು ಶುಭ-ಯಾವುದು ಅಶುಭ ಎನ್ನುವ ತಿಳುವಳಿಕೆಯನ್ನು ಇದು ನೀಡುತ್ತದೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ದೂರವಿರಿಸಿ, ಸರಳತೆ, ಪರಿಶುದ್ಧತೆ, ಸತ್ಯ, ಅಹಿಂಸೆ, ತ್ಯಾಗ ಇತ್ಯಾದಿ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ವೇದಜ್ಞಾನ, ಶಾಸ್ತ್ರ, ಸಂಪ್ರದಾಯ, ಆಚಾರ ವಿಚಾರಗಳನ್ನು ತಿಳಿದುಕೊಂಡು ತ್ಯಾಗ, ಶೀಲ, ಗುಣಗಳನ್ನು ಬೆಳೆಸಿಕೊಳ್ಳಲು ಮತ್ತು ಸತ್ಕರ್ಮಾಚರಣೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ.  ಆದರ್ಶ ಜೀವನಕ್ಕೆ ಬೇಕಾಗುವ ಶೀಲ, ವಿದ್ಯೆ, ಸಂಸ್ಕಾರ, ಆಚಾರ, ವಿಚಾರ, ಚತುರ್ವೇದ ಪುರುಷಾರ್ಥಗಳು (ಧರ್ಮ, ಅರ್ಥ, ಕಾಮ, ಮೋಕ್ಷ), ಸ್ತ್ರೀ ಧರ್ಮ ಮತ್ತು ಕರ್ತವ್ಯಗಳು, ಸ್ನೇಹಿತ, ಸ್ನೇಹಿತಧರ್ಮ, ಕುಟುಂಬದ ಮಹತ್ವ, ಆಪತ್ಕಾಲದ ನಿರ್ವಹಣೆ, ಸಾಮರ್ಥ್ಯಕ್ಕೆ ತಕ್ಕಂತೆ ಗುರಿ ನಿರ್ಣಯ ಮುಂತಾದ ಅಂಶಗಳ ಬಗ್ಗೆ ಮಾರ್ಗದರ್ಶನ ನೀಡುತ್ತದೆ. ಯಾರೇ ಆಗಲಿ ಈ ಮೌಲ್ಯಗಳನ್ನು ಅಳವಡಿಸಿಕೊಂಡರೆ ಪರಿಪೂರ್ಣ ಹಾಗೂ ಸ್ಥಿತಪ್ರಜ್ಞ ಜೀವನ ರೂಪಿಸಿಕೊಳ್ಳಲು ಸಹಾಯವಾಗುತ್ತದೆ. 

ಚಾಣುಕ್ಯನ ನೀತಿಸಂಹಿತೆಯಲ್ಲಿ ಪ್ರಾಸಂಗಿಕವಾಗಿ ಅಲ್ಲಲ್ಲಿ ದಾನದ ಬಗ್ಗೆ ಪ್ರಸ್ತಾಪವಿದೆ. ದಾನದ ಬಗ್ಗೆ ಪ್ರಸ್ತಾಪ ಮಾಡಿದ ಅಧ್ಯಾಯ ಮತ್ತು ಶ್ಲೋಕಗಳ ಸಂಖ್ಯೆಯನ್ನು ಕಂಸದಲ್ಲಿ ಕೊಡಲಾಗಿದೆ.

ಯಜ್ಞ ಮತ್ತು ದಾನ ಜೊತೆಜೊತೆಯಾಗಿಯೇ ಇರಬೇಕು. ಯಜ್ಞ ಮಾಡಿ ಯಜ್ಞದ ಅಂಗವಾಗಿ ದಾನ ಕೊಡಬೇಕು (8-11). ದಾನಧರ್ಮಾದಿಗಳನ್ನು ಮಾಡುವವರು ಸ್ವರ್ಗ ಸೇರುವುದು ನಿಶ್ಚಯ (7-16). ದಾನದಲ್ಲಿ ಅತೃಪ್ತಿ ಇರಬೇಕು. ಸ್ವಲ್ಪದಾನ ಕೊಟ್ಟು ಅದರಲ್ಲೇ ತೃಪ್ತಿ ಹೊಂದಬಾರದು. ಹೆಚ್ಚು ಹೆಚ್ಚು ದಾನ ಕೊಡಬೇಕು (7-4). ಕಷ್ಟದಲ್ಲಿರುವವರಿಗೆ ದಾನ ಮಾಡಿದರೆ ಭಗವಂತ ಸಂತೃಪ್ತಿ ಹೊಂದಿ ಹೆಚ್ಚು ಸಂಪತ್ತನ್ನು ಕರುಣಿಸುತ್ತಾನೆ (12-3), ದಾನ ಮಾಡದ ಕೈಗಳು ವ್ಯರ್ಥ (12-7), ಉತ್ತಮರಿಗೆ (ಸತ್ಪಾತ್ರರಿಗೆ, ಅವಶ್ಯವಿದ್ದವರಿಗೆ) ಮಾಡಿದ ದಾನ ಹೆಚ್ಚುತ್ತಾ ಹೋಗುತ್ತದೆ (14-5). ದಾನ ಮಾಡಿ ಅಹಂಕಾರ ಪಡಬಾರದು, ಹೇಳಿಕೊಳ್ಳಬಾರದು (14-8). ಅನ್ನದಾನ, ಜಲದಾನ ಅತ್ಯಂತ ಶ್ರೇಷ್ಠ ದಾನವಾಗಿದೆ (17-8).

ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ರಾಜಕೀಯ, ಆಡಳಿತ, ಸಾಮಾಜಿಕ, ವಾಣಿಜ್ಯ, ಕೈಗಾರಿಕೆ, ವರ್ಣಾಶ್ರಮ, ಗೂಢಚಾರಿಕೆ, ನ್ಯಾಯ, ವೈದ್ಯಶಾಸ್ತ್ರ ಮುಂತಾದ ವಿಷಯಗಳ ಬಗ್ಗೆ ವಿವರಗಳಿವೆ. ಕೋಟೆಗಳು, ಹಣಕಾಸು, ತೆರಿಗೆ, ಗಣಿಗಾರಿಕೆ, ಅರಣ್ಯ ರಕ್ಷಣೆ, ಕಾನೂನು ಪಾಲನೆ, ಜೀತದಾಳುಗಳು ಬಿಡುಗಡೆ, ದಂಡಸಂಹಿತೆ, ಔದ್ಯೋಗಿಕ ನೀತಿ, ಸ್ವಾವಲಂಬಿ ಸಾಮ್ರಾಜ್ಯ, ರಾಜನ ಕಾರ್ಯತಂತ್ರ, ಸೈನ್ಯ ನಿರ್ವಹಣೆ, ಯುದ್ಧನೀತಿ, ಔಷಧಿಗಳು, ವ್ಯವಹಾರ, ಮಂತ್ರ-ತಂತ್ರಗಳ ಪ್ರಯೋಗ ಮುಂತಾದ ವಿಷಯಗಳ ಬಗ್ಗೆಯೂ ಮಾಹಿತಿ ಸಿಗುತ್ತದೆ. ಆಡಳಿತಕ್ಕೆ ಉಪಯೋಗವಾಗುವ ಅನೇಕ ವಿಚಾರಗಳ ಬಗ್ಗೆ ವಿವರಣೆಗಳಿವೆ. 

ಅದರಂತೆಯೇ ಗ್ರಾಮ ಸಮುದಾಯಗಳ ರಚನೆ, ಗಡಿ ನಿರ್ಣಯ, ಗ್ರಾಮಗಳಲ್ಲಿ ದೀನದಲಿತರಿಗೆ ಒದಗಿಸಬೇಕಾದ ಸಹಾಯ ಇವುಗಳ ವಿವರಗಳೂ ಸಿಗುತ್ತವೆ. ಅವುಗಳ ಸಾರಾಂಶವನ್ನು ಹೀಗೆ ಹೇಳಬಹುದು. 

ಉತ್ತಮ ಪರಿಸರದಲ್ಲಿ ಗ್ರಾಮಗಳ ರಚನೆಯಾಗಬೇಕು. ಪ್ರತಿಯೊಂದು ಗ್ರಾಮದಲ್ಲಿ ನೂರರಿಂದ ಐನೂರು ಮನೆಗಳಿರಬೇಕು. ಗ್ರಾಮ-ಗ್ರಾಮಗಳ ನಡುವೆ (ಗುಂಪು ಗ್ರಾಮಗಳ ಮಧ್ಯೆ, ಗ್ರಾಮ ಗೊಂಚಲುಗಳ ಮಧ್ಯೆ) ಒಂದು ಮಹಾಗ್ರಾಮವಿರಬೇಕು. ಗ್ರಾಮ-ಗ್ರಾಮಗಳ ಮಧ್ಯೆ, ಗ್ರಾಮ-ಮಹಾಗ್ರಾಮಗಳ ಮಧ್ಯೆ ನಿರ್ದಿಷ್ಟ ಗಡಿಗಳನ್ನು ಗುರುತಿಸಬೇಕು. ಗ್ರಾಮಗಳಲ್ಲಿ ನೀರು, ಕಾಲುವೆ, ರಸ್ತೆ, ಮುಂತಾದ ಅನುಕೂಲಗಳಿರಬೇಕು. ಅನಾಥರು, ರೋಗಿಗಳು, ಬಂಜೆಯರಾದ ಸ್ತ್ರೀಯರು, ಅಂಗವಿಕಲರು ಮುಂತಾದವರಿಗೆ ಸೂಕ್ತ ನೆರವು ಒದಗುವಂತಿರಬೇಕು. ವಸತಿ, ಆಹಾರ, ರಕ್ಷಣೆ, ಔಷಧೋಪಚಾರ ಮುಂತಾದವು ಸುಲಭವಾಗಿ ಸಿಗುವಂತೆ ಇರಬೇಕು. ನಗರ ಪ್ರದೇಶಗಳಲ್ಲಿ ಈಗ ಸ್ವಯಂಸೇವಾ ಸಂಸ್ಥೆಗಳು ಮಾಡುತ್ತಿರುವ ಕೆಲಸಗಳು ಇಂತಹವು ತಾನೆ. ಗ್ರಾಮದಲ್ಲಿ ಹೂದೋಟ, ಗೋಮಾಳ, ರೈತರಿಗೆ ಭೂಮಿ, ಉಪಕರಣಗಳನ್ನು ಖರೀದಿಸಲು ಆರ್ಥಿಕ ನೆರವು ಸಿಗುವಂತಿರಬೇಕು.  ಗ್ರಾಮೀಣ ಬದುಕಿಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸುವ ವ್ಯವಸ್ಥೆ ಇರಬೇಕು.  ಇದು ಚಾಣಿಕ್ಯನ ಗ್ರಾಮ ಸಮುದಾಯಗಳ ಕಲ್ಪನೆ.22
 
ವಿದುರ ನೀತಿ
ಶುಕ್ರ ನೀತಿ  ಹಾಗೂ ಕೌಟಿಲ್ಯನ ನೀತಿಶಾಸ್ತ್ರಗಳಂತೆಯೇ ವಿದುರ ನೀತಿಯೂ ಇಂತಹ ನೀತಿಸೂತ್ರಗಳನ್ನು ತಿಳಿಸುವ ಮತ್ತೊಂದು ಗ್ರಂಥ. ಹುಟ್ಟಿನಿಂದ ದಲಿತ (ದಾಸಿಪುತ್ರ) ಎಂದೆನಿಸಿದರೂ, ತಂದೆಯ ಕಾರಣದಿಂದ ಮಹಾ ಮೇಧಾವಿ ಹಾಗೂ ಮತ್ಸದ್ದಿ. ಮಹಾಭಾರತದ ಧೃತರಾಷ್ಟ್ರನ ಮಹಾ ಅಮಾತ್ಯನಾಗಿ ಕೆಲಸ ನಿರ್ವಹಿಸಿದವನು. ಧೃತರಾಷ್ಟ್ರ ತನ್ನ ಮಾನಸಿಕ ಸಂಕಟಗಳನ್ನು ಅವನಿಗೆ ಹೇಳಿ ಅವನಿಂದ ಮಾರ್ಗದರ್ಶನ ಪಡೆಯುತ್ತಿದ್ದ. ಮಹಾಭಾರತದ ಒಂದು ಭಾಗವಾಗಿ ವಿದುರನೀತಿ ರೂಪುಗೊಂಡಿದೆ. ಮಹಾಭಾರತ ಯುದ್ಧದ ಪೂರ್ವದಲ್ಲಿ ಸಂಧಾನಗಳೆಲ್ಲಾ ನಿಷ್ಟ್ರಯೋಜಕವಾಗಿ ಯುದ್ಧ ಅನಿವಾರ್ಯ ಎಂಬಂತಾಗಿದೆ. ಧೃತರಾಷ್ಟ್ರನಿಗೆ ಪುತ್ರ ವ್ಯಾಮೋಹ ಜಾಸ್ತಿ. ಅವನ ಮಕ್ಕಳಾದ ದುರ್ಯೋಧನಾದಿಗಳಿಗೆ ಆಳಲು ರಾಜ್ಯವನ್ನು ಉಳಿಸಿ ಕೊಡಬೇಕು. ಆದರೆ ಯುದ್ಧವಾಗಬಾರದು. ಯುದ್ಧವಾದರೆ ಮಕ್ಕಳು ಸಾಯುತ್ತಾರೆ. ಅವರು ಅಧರ್ಮಿಗಳು, ಪಾಂಡವರಿಗೆ ಅನ್ಯಾಯ ಮಾಡಿದ್ದಾರೆ.  ಹಾಗಾಗಿ ಶ್ರೀಕೃಷ್ಣ ಪಾಂಡವರ ಬೆಂಬಲಕ್ಕೆ ನಿಂತ. ಎಲ್ಲವೂ ಅವನ ಕೈಮೀರಿ ನಡೆಯುತ್ತಿದೆ. ಯುದ್ಧ, ಮಕ್ಕಳ ಸಾವು, ಅಧಿಕಾರ ನಾಶ ಎಲ್ಲವು ಸ್ಪಷ್ಟವಾಗುತ್ತಾ ಬರುತ್ತಿದೆ. ಅದಕ್ಕಾಗಿ ಚಿಂತೆ, ದುಃಖ, ಗೊಂದಲ ಹಾಗೂ ಮುಂದೇನು ಎಂಬ ಗಾಬರಿ. ಇದರ ಪರಿಹಾರಕ್ಕಾಗಿ ರಾತ್ರೋರಾತ್ರಿ ಮಹಾ ಮಂತ್ರಿ ವಿದುರನನ್ನು ಕರೆಸುತ್ತಾನೆ. ತನ್ನ ಚಿಂತೆಯನ್ನು, ಗೊಂದಲವನ್ನು ಹೇಳಿಕೊಳ್ಳುತ್ತಾನೆ. ಮನಸ್ಸಿಗೆ ಸಮಾಧಾನವಾಗುವ ಹಾಗೆ ಧಾರ್ಮಿಕ ತತ್ವಗಳನ್ನು ಹೇಳು ಎಂದು ಕೇಳಿಕೊಳ್ಳುತ್ತಾನೆ. ಮಹಾತ್ಮ ವಿದುರ ಧೃತರಾಷ್ಟ್ರನಿಗೆ, ಅಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಧರ್ಮ ಮತ್ತು ನೀತಿ ಸೂತ್ರಗಳನ್ನು ಹೇಳುತ್ತಾನೆ. ಅದೇ ವಿದುರನೀತಿಯೆಂದು ಪ್ರಶಿದ್ಧಿಯಾಗುತ್ತದೆ.  ಇತರೆ ನೀತಿ ಶಾಸ್ತ್ರಗಳಂತೆಯೇ ವಿದುರನೀತಿಯೂ ಧರ್ಮ, ನೀತಿ, ಆಡಳಿತ, ಕರ್ತವ್ಯ ಮುಂತಾದ ಅನೇಕ ಜೀವನಾವಶ್ಯಕ ಮೌಲ್ಯಗಳನ್ನು ಒಳಗೊಂಡಿದೆ.  ವಿದುರನೀತಿಯಲ್ಲಿ ಅನೇಕ ವಿಚಾರಗಳು ಪ್ರಸ್ತಾಪಗೊಂಡರೂ, ಅವುಗಳಲ್ಲಿ ಮುಖ್ಯವಾದವುಗಳು ಹೀಗಿವೆ.

ಚತುರ್ವೇದ ಪುರುಷಾರ್ಥಗಳು (ಧರ್ಮ, ಅರ್ಥ, ಕಾಮ, ಮೋಕ್ಷ), ಅವುಗಳನ್ನು ಪಡೆಯುವ ಬಗೆ, ಧರ್ಮ-ಅಧರ್ಮಗಳ ವಿವರಣೆ, ಅರಿಷಡ್ವರ್ಗಗಳ (ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ) ನಿಗ್ರಹ ವಿಧಾನ, ರಾಜನಾದವನು ಬಿಡಬೇಕಾದ ಏಳು ವ್ಯಸನಗಳು (ಮದ್ಯಪಾನ, ಜೂಜು, ಸ್ತ್ರೀ, ಬೇಟೆ, ಕ್ರೂರವಾದ ದಂಡನೆ, ಕಠೋರ ವಚನ, ದುಂದುಗಾರಿಕೆ), ಅಷ್ಟಾಂಗಗಳ ಆಚರಣೆ (ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣೆ, ಧ್ಯಾನ, ಸಮಾಧಿ-ರಾಜಯೋಗ), ಭಕ್ತಿಮಾರ್ಗದಲ್ಲಿ ಸಾಧನೆ (ಶ್ರವಣ, ಕೀರ್ತನ, ಸ್ಮರಣೆ, ವಂದನ, ಅರ್ಚನ, ಪಾದಸೇವನೆ, ಸಖ್ಯ, ದಾಸ್ಯ, ಆತ್ಮ ನಿವೇದನ), ಸಾಮಾನ್ಯ ಧರ್ಮಗಳ ಅನುಷ್ಠಾನ (ಸಂತೋಷ, ತಾಳ್ಮೆ, ಮನೋನಿಗ್ರಹ, ಪರದ್ರವ್ಯದಲ್ಲಿ ಅನಪೇಕ್ಷೆ, ಶುಚಿತ್ವ, ಇಂದ್ರಿಯ ನಿಗ್ರಹ, ಶಾಸ್ತ್ರ ವಿಚಾರ, ಆತ್ಮಜ್ಞಾನ, ಸತ್ಯ, ಕೋಪಿಸಿಕೊಳ್ಳದಿರುವುದು), ತ್ರಿವಿಧ (ಸಾತ್ವಿಕ, ರಾಜಸ, ತಾಮಸ) ಜೀವರ ಚರ್ಯೆಯ ಜ್ಞಾನ, ಒಳ್ಳೆಯವರಾರು - ಕೆಟ್ಟವರಾರು ಎಂಬ ನಿಷ್ಕರ್ಷೆ, ಸಾತ್ವಿಕರ ರಕ್ಷಣೆ, ಅಧರ್ಮದಿಂದ ಸಂಪಾದಿಸಿದರೆ ಆಗುವ ಅನರ್ಥ, ಶಿಕ್ಷಣ, ಗುರುವಿನ ಮಹತ್ವ, ತಾಯಿ ತಂದೆಗಳ ಕರ್ತವ್ಯ, ಗೃಹಸ್ಥ ಧರ್ಮ, ಮದಗಳಿಂದ ದೂರವಿರುವುದು (ಧನದ ಮದ, ಕುಲದ ಮದ, ವಿದ್ಯೆಯ ಮದ, ಯೌವನದ ಮದ), ಸದ್ಗತಿ ಪಡೆಯುವ ವಿಧಾನ, ಯಜ್ಞ, ಅದರ ಪದ್ಧತಿ ಹಾಗೂ ಉಪಯೋಗ, ಪಂಚೇಂದ್ರಿಯಗಳ ನಿಗ್ರಹ, ಇಂದ್ರಿಯ ನಿಗ್ರಹ, ವೈಯಕ್ತಿಕ ಸ್ವಚ್ಛತೆ, ರಾಜ ಧರ್ಮ, ರಾಜನ ಕರ್ತವ್ಯ, ಆಡಳಿತ, ಮಂತ್ರಾಲೋಚನೆ, ನ್ಯಾಯ ನಿರ್ಣಯ, ಕರನಿರ್ಣಯ, ಸಾಮಾನ್ಯ ನಿಯಮಗಳು ಮುಂತಾದ ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಉತ್ತಮ ಮಾರ್ಗದರ್ಶನವನ್ನು ಮಾಡಲಾಗಿದೆ.

ವಿದುರನೀತಿಸಾರದಲ್ಲಿಯೂ ದಾನದ ಬಗ್ಗೆ ಅಲ್ಲಲ್ಲಿ ಪ್ರಸ್ತಾಪಿಸಲಾಗಿದೆ. ದಾನದ ಮಹತ್ವ, ದಾನದ ಪ್ರಕಾರಗಳು, ದಾನದ ಅರ್ಹತೆ, ದಾನದ ಇತಿಮಿತಿ ಮುಂತಾದ ವಿಷಯಗಳ ಬಗ್ಗೆ ಪ್ರಾಸಂಗಿಕವಾಗಿ ತಿಳಿಸಲಾಗಿದೆ. ಧನ ಇದ್ದಾಗ ದಾನ ಮಾಡಬೇಕು. ಧನದ ಸಾರ್ಥಕ್ಯ ದಾನದಲ್ಲಿ. ಅರ್ಹರಾದ ಉತ್ತಮರಿಗೆ ದಾನ ಮಾಡಬೇಕು. ದಾನಕ್ಕೆ ಯಾರು ಪಾತ್ರರು, ಯಾರಿಗೆ ದಾನ ಪಡೆಯಲು ಅರ್ಹತೆ ಇದೆ, ಯಾರಿಗೆ ದಾನದ ಅವಶ್ಯಕತೆ ಇದೆ, ಅದನ್ನು ತಿಳಿದು ದಾನನಿರ್ಣಯ ಮಾಡಬೇಕು. ಬಡವನಾಗಿದ್ದರೂ, ದರಿದ್ರನಾಗಿದ್ದರೂ ತನ್ನ ಕೈಲಾದಷ್ಟು, ಶಕ್ತಿ ಇದ್ದಷ್ಟು ದಾನ ಮಾಡಬೇಕು. ಅಂತಹವರಿಗೆ ಸದ್ಗತಿ ನಿಶ್ಚಿತ. ಕೆರೆ ಕಟ್ಟೆಗಳನ್ನು ಕಟ್ಟಿಸುವುದು, ಬಾವಿಗಳನ್ನು ತೋಡಿಸುವುದು, ರಸ್ತೆಗಳನ್ನು ನಿರ್ಮಿಸುವುದು ಮುಂತಾದ ಪರೋಪಕಾರದ ಕೆಲಸಗಳು ದಾನದ ಭಾಗವೇ ಆಗಿದೆ. ಆದರೆ ಅಪಾತ್ರರಿಗೆ ದಾನ ಮಾಡಬಾರದು. ಮನ ಬಂದಂತೆ ದಾನ ಮಾಡುವುದು ತಪ್ಪು. ದಾನವನ್ನು ಉತ್ತಮರ ಮಾರ್ಗದರ್ಶನದಲ್ಲಿ ಮಾಡಬೇಕು.23
 
ಭೌದ್ಧಯುಗ
ಬುದ್ಧನಿಂದ ಪ್ರತಿಪಾದನೆಗೊಂಡ ತತ್ತ್ವಗಳು ಮತ್ತು ಅದನ್ನನುಸರಿಸಿದ ಆಚಾರಗಳು ಬೌದ್ಧ ಧರ್ಮದ ತಿರುಳು. ವೇದೋತ್ತರ ಯುಗದಲ್ಲಿ ಹೆಚ್ಚು ಪ್ರಸಿದ್ಧಿಗೆ ಬಂದಿದ್ದ ಪಶುಬಲಿ, ಯಾಜ್ಞಿಕ ಕ್ರೂರಕರ್ಮಗಳಿಂದ ಜೀವನ ರೋಸಿ ಹೋಗಿತ್ತು. ಸನಾತನ ಉದಾತ್ತ ಮೌಲ್ಯಗಳನ್ನು ಎತ್ತಿಹಿಡಿಯಬೇಕಾಗಿತ್ತು. ಇಂಥಹ ಪರಿಸ್ಥಿತಿಯಲ್ಲಿ ಬೌದ್ಧ ಧರ್ಮದ ಉಗಮವಾಯಿತು. ಬುದ್ಧನು ಸ್ಥಾಪಿಸಿದ ಧರ್ಮವು ಅತ್ಯಂತ ಉನ್ನತ ನೈತಿಕ ವಿಚಾರಗಳಿಂದ, ಉದಾತ್ತ ಮಾನವೀಯ ಮೌಲ್ಯಗಳಿಂದ ಅನುಪ್ರಾಣಿತವಾಗಿದ್ದು, ಜಗದ್ವಂದವಾಗಿದೆ.25    

ಬೌದ್ಧ ಧರ್ಮದಲ್ಲಿ ಸದಾಚಾರಕ್ಕೆ ಹೆಚ್ಚು ಆದ್ಯತೆ. ಚಿತ್ತ ಶುದ್ಧಿಯೇ ಬೌದ್ಧಧರ್ಮದ ಪ್ರಥಮ ಆಶಯ. ಚಿತ್ತಶುದ್ಧಿ, ನಿಷ್ಠಾಪ್ರವೃತ್ತಿ ಮತ್ತು ಕಲ್ಯಾಣ ಕರ್ಮಗಳು ಬುದ್ಧತ್ವಕ್ಕೆ ಸಾಧಕ ಅಂಶಗಳು. ಬೌದ್ಧ ಧರ್ಮ ಮೂರು ತತ್ವಗಳನ್ನು ಒಳಗೊಂಡಿದೆ. ಬುದ್ಧನಿಗೆ ಆಶ್ರಯ ನೀಡಿದ ಧರ್ಮ, ಧರ್ಮಕ್ಕೆ ಆಶ್ರಯ ನೀಡಿದ ಸಂಘ. ಸಂಘಕ್ಕೆ ಪೇರಣೆ ನೀಡಿದ ಬುದ್ಧ, ಇವೇ ಆ ಮೂರು ತತ್ವಗಳು. ಇವುಗಳಲ್ಲಿ ಧರ್ಮಕ್ಕೆ ಹೆಚ್ಚಿನ ಮಹತ್ವ. ಅದನ್ನು ಅನುಸರಿಸಿ ಯಾರು ಬೇಕಾದರೂ ಬುದ್ಧತ್ವಕ್ಕೆ ಏರಬಹುದು. ಬುದ್ಧ ಧರ್ಮ ಬ್ರಹ್ಮಜಿಜ್ಞಾಸೆಗಿಂತ ಆಚಾರ ವಿಚಾರಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತದೆ. 

ಈ ಧರ್ಮದಲ್ಲಿ ಜಾತಿಮತಗಳ ಭೇದಭಾವ ಇಲ್ಲ. ಸಾಮಾಜಿಕ ಸಮಾನತೆ, ಮಾನವರಲ್ಲಿ ಬಂಧುತ್ವ ಇವು ಬೌದ್ಧ ಧರ್ಮದ ಸಾರ. ಸಾಧನೆಗೈದು ಯಾರು ಬೇಕಾದರೂ ಬುದ್ಧತ್ವಕ್ಕೆ ಅರ್ಹರಾಗಬಹುದು. ಹಿಂದೂ ಧರ್ಮದಲ್ಲಿ ಧರ್ಮ ಪ್ರಚಾರಕ್ಕೆ ಬ್ರಾಹ್ಮಣರಿದ್ದಂತೆ ಬೌದ್ಧ ಧರ್ಮದಲ್ಲಿ ಧರ್ಮ ಪ್ರಚಾರಕ್ಕೆ ಸಮಣರು ಇದ್ದಾರೆ. ಬ್ರಾಹ್ಮಣ ಜಾತಿ ಆಧಾರವಾದರೆ, ಬೌದ್ಧಧರ್ಮದಲ್ಲಿ ಯಾರು ಬೇಕಾದರೂ ಸಾಧನೆಗೈದು ಸಮಣರಾಗಬಹುದಾಗಿದೆ. ಈ ಬುದ್ಧ ಸಂನ್ಯಾಸಿಗಳು ಭಿಕ್ಷು ಸಂಘ ಎಂಬ ಸಂಸ್ಥೆಗಳನ್ನು ಕಟ್ಟಿಕೊಂಡರು. ಇವುಗಳಿಗೆ ಆವಾಸ ಮತ್ತು ಆರಾಮ ಎಂದು ಕರೆಯಲಾಗುತ್ತಿತ್ತು. ಆವಾಸ ಸನ್ಯಾಸಿಗಳೇ ತಯಾರಿಸಿಕೊಂಡ ನಿವೇಶನ. ಆದರೆ ಆರಾಮ ಧನಿಕರಿಂದ ದಾನದ ರೂಪದಲ್ಲಿ ಕಟ್ಟಿಕೊಟ್ಟ ವಸತಿ ನಿಲಯಗಳು, ಅವುಗಳ ನಿರ್ವಹಣೆಯನ್ನು ಧನಿಕರೇ ನೋಡಿಕೊಳ್ಳುತ್ತಿದ್ದರು. ಇವುಗಳನ್ನು ಸಂಘರಾಮ ಎಂದು ಕರೆಯಲಾಗುತ್ತಿತ್ತು. ಇದರ ಮಾಲೀಕತ್ವ ಸಾಮೂಹಿಕವಾಗಿರುತ್ತಿತ್ತು.

ಪ್ರಾಚೀನ ಭಾರತೀಯ ಇತಿಹಾಸದ ಶತಮಾನಗಳಲ್ಲಿ ಆಗಿಹೋದ ಭಾರತದ ಬೇರೆ ಬೇರೆ ವಂಶಗಳ ರಾಜರುಗಳು (ಸಾತವಾಹನರು, ಇಕ್ಷವಾಕುಗಳು, ಗುಪ್ತರು, ಮೈತ್ರಕರು, ರಾಷ್ಟ್ರಕೂಟರು, ಮತ್ತಿತತರು) ಬೌದ್ಧ ಸಂಘಗಳಿಗೆ ಮಠಮಾನ್ಯಗಳಿಗೆ ದಾನಾದಿಗಳನ್ನು ನೀಡುತ್ತಿದ್ದುದನ್ನು ನಾವು ಕಾಣಬಹುದು. ಅನ್ಯ ಮತಾವಲಂಬಿಗಳಿಗೂ, ಇತರ ಸಂಸ್ಥೆಗಳಿಗೂ ಅವರು ದಾನದತ್ತಿಗಳನ್ನೀಯುತ್ತಿದ್ದರು. ಇದಕ್ಕೆ ಪ್ರೇರಕವಾದದ್ದು ಮತ ಸಹಿಷ್ಟುತೆಯಲ್ಲ. ಆದರೆ ಸಮಾಜದ ಪೂರ್ಣ ಸಂಯೋಜನೆಯಲ್ಲಿ ಕ್ರಿಯಾತ್ಮಕ ಸ್ಥಾನಗಳಲ್ಲಿ ಸಂಘಸಂಸ್ಥೆಗಳಿಗೆ ನೆರವಾಗುವುದು ಸಂವೈಧಾನಿಕ ಕರ್ತವ್ಯವೆಂಬ ಪ್ರಜ್ಞೆಯು ಅವರಲ್ಲಿ ಜಾಗ್ರತವಾಗಿದ್ದುದು ಮುಖ್ಯ ಕಾರಣವಾಗಿತ್ತು.26 ಇದೊಂದು ಸಮಾಜಕಾರ್ಯ ಪರಿಕಲ್ಪನೆ.

ಗೃಹಸ್ಥರೂ ವೈಯಕ್ತಿಕವಾಗಿ ದಾನ ಮಾಡುತ್ತಿದ್ದರು ಮತ್ತು ಅದನ್ನು ತಮ್ಮ ಕರ್ತವ್ಯವೆಂದು ಭಾವಿಸಿದ್ದರು. ಸಂಪತ್ತು, ವಸ್ತುಗಳು, ಧಾರ್ಮಿಕ ಶಿಕ್ಷಣ, ಸ್ನೇಹ (ಭದ್ರತೆ-ರಕ್ಷಣೆ) ಮುಂತಾದವುಗಳು ದಾನದ ಸ್ವರೂಪವಾಗಿರುತ್ತಿದ್ದವು. ಧರ್ಮ ಪ್ರವರ್ತಕರಿಗೆ, ಬೌದ್ಧ ಸಂನ್ಯಾಸಿಗಳಿಗೆ, ಹಿಂದೂ ಪುರೋಹಿತರಿಗೆ ದಾನ ಕೊಡುವುದು ತಮ್ಮ ಕಾಯಕ ಎಂದು ರಾಜರು, ಗೃಹಸ್ಥರು ನಂಬಿದ್ದರು. ಇವರ ಜೊತೆಗೆ ಸಹಾಯಾರ್ಥಿಗಳು, ಬಡವರು, ರೋಗಿಗಳು, ಕ್ಲೇಶಬಾಧಿತರು ಮತ್ತು ನಿಸ್ಸಹಾಯಕರನ್ನು ಸಹಾಯ ನೀಡಲೇಬೇಕಾದಂಥವರು ಎಂದು ಪರಿಗಣಿಸಲಾಗುತ್ತಿತ್ತು. ಆತ್ಮೋನ್ನತಿಯ ಪೌರಾಣಿಕ ಕತೆಗಳಲ್ಲಿ ಬರುವ ರಾಜರು, ರಾಜಕುಮಾರರು ದಾನವಾಗಿ ಆಹಾರ, ಪಾನೀಯ, ಔಷಧ, ಸುಪ್ಪತ್ತಿಗೆಗಳು, ಆಸನಗಳು, ತೋಟಗಳು, ಮನೆಗಳು, ಗ್ರಾಮಗಳು, ಪಟ್ಟಣಗಳು, ಸುಗಂಧ ದ್ರವ್ಯಗಳು, ಹೂಹಾರಗಳು, ಲೇಪನಗಳು, ಬೆಳ್ಳಿ, ಬಂಗಾರ, ಆನೆಗಳು, ಕುದುರೆಗಳು, ರಥಗಳು, ವಾದ್ಯಗಳು, ಗಂಡಾಳುಗಳು, ಹೆಣ್ಣಾಳುಗಳು, ಮುಂತಾದವುಗಳನ್ನೆಲ್ಲಾ ಕೊಟ್ಟುಬಿಡುತ್ತಿದ್ದರು.27 ಇಲ್ಲಿ ಸಮಾಜ ಸೇವೆಯ ಅಂಶಗಳನ್ನು ಕಾಣಬಹುದಾಗಿದೆ. 

ಇಂತಹ ದಾನಗಳ ಮೂಲ ಉದ್ದೇಶ ಪುಣ್ಯ ಸಂಗ್ರಹ. ಇಂದು ಅರ್ಹರಿಗೆ ದಾನಕೊಟ್ಟರೆ ಮುಂದೆ ಅದು ನಮ್ಮನ್ನು ಕಾಪಾಡುತ್ತದೆ ಎಂಬ ನಂಬಿಕೆ ಬಲವಾಗಿತ್ತು. ಇಂದಿನ ದಿನಮಾನದಲ್ಲಿಯೂ ನಮ್ಮ ಸಮಾಜದಲ್ಲಿ ಈ ನಂಬಿಕೆ ಬಲವಾಗಿ ಬೇರೂರಿದೆ.         

ದಾನವು ಕೀರ್ತಿಕಾಮನೆಗೆ ಒಂದು ಪ್ರೇರಕಶಕ್ತಿ, ಅದನ್ನು ತೀವ್ರವಾಗಿ ಖಂಡಿಸಬಾರದು. ದಾನವು ಪುಣ್ಯಸಂಗ್ರಹಕ್ಕೆ ಹಾದಿ ಮಾಡಿಕೊಡುತ್ತದೆ. ಭೂಮಿಯ ಮೇಲೆ ಸುಖಸಂತಸದ ಜೀವನಕ್ಕೆ, ಪುನರ್ಜನ್ಮಗಳಿಗೆ ಅಥವಾ ದೇವತೆಗಳ ಸ್ವರ್ಗಪ್ರಾಪ್ತಿಗೆ ಇದು ನಿರ್ಧಾರವಾಗುತ್ತದೆ. ಇದನ್ನು ಸ್ವಾರ್ಥಿಜನರೂ ಪಾಲಿಸಬೇಕು. ಯಾಕೆಂದರೆ, ಇದರಿಂದ ಅಂತರಂಗದ ಸಂತೋಷ ಮತ್ತು ಮಾನಸಿಕ ಶಾಂತಿ ದೊರೆಯುತ್ತವೆ. ಜೊತೆಗೆ, ಅಕಾಲ ಮರಣ, ಮತ್ತಿತರ ದುಷ್ಟಶಕ್ತಿಗಳಿಂದ ಇದು ರಕ್ಷಣೆ ಒದಗಿಸಬಲ್ಲದು. ನಿಜವಾಗಿ ನೋಡಿದರೆ ಯುಗ ಯುಗಾಂತರಗಳಲ್ಲಿ ಇದು ಶಕ್ತಿಯ, ದೀರ್ಘಾಯುವಿನ, ಕಲ್ಯಾಣದ, ಉಚ್ಛ್ರಾಯದ ಆಕರವಾಗಿದೆ. ಕಾಣಿಕೆಯು ಅದಕ್ಕೆ ಉಚಿತವಾದ ಪ್ರತಿಫಲವನ್ನು ಮುಂದಿನ ಜನ್ಮದಲ್ಲಿ ತಾರದೇ ಹೋಗುವುದಿಲ್ಲ. ಆಹಾರವನ್ನು ಇಟ್ಟವನು, ತೋಳಬಲವನ್ನು ಕೊಟ್ಟವನು, ಹಣವನ್ನು ಅರ್ಪಿಸಿದವನು, ಸೌಂದರ್ಯವನ್ನು, ಕಣ್ಣುಗಳನ್ನು ಪಡೆಯಬಹುದು. ಗೌತಮ ಬುದ್ಧನೇ ತನ್ನ ಪೂರ್ವಜನ್ಮದಲ್ಲಿ ಮಾಡಿದ ಉದಾರ ಕೃತಿಗಳಿಂದಾಗಿ ಉತ್ತಮ ಆರೋಗ್ಯವನ್ನು ಅನುಭವಿಸಿದ; ಇದರಂತೆಯೇ ಬೋಧಿಸತ್ವನು ತನ್ನ ಅತುಳ ದೈಹಿಕ ಬಲವನ್ನು ಗಳಿಸಿದ.28

ಆದರೂ ಬೋಧಿಸತ್ವನು ಇಂತಹ ದಾನಗಳನ್ನು ನಿರ್ಲಿಪ್ತನಾಗಿ ಕೊಡಬೇಕು, ಫಲಾಪೇಕ್ಷೆಯಿಂದ ಕೊಡಬಾರದೆಂದು ಹೇಳುತ್ತಾನೆ.  ದಾನಾರ್ಥಿಗಳ ಮೇಲಿನ ಕರುಣ, ಅನುಕಂಪ, ಕೃಪೆ ಮುಂತಾದವುಗಳನ್ನು ಆದರಿಸಿ ಕೊಡಬೇಕೆಂದು ಹೇಳುತ್ತಾನೆ. ಇವು ಪ್ರತಿಯೊಬ್ಬರು ಅನುಸರಿಸಬೇಕಾದ ಉದಾತ್ತ ಮೌಲ್ಯಗಳೇ ಆಗಿವೆ. ಇಲ್ಲಿ ಸಮಾಜಕಾರ್ಯ, ಸಮಾಜಸೇವೆಯ ವಿಚಾರಗಳನ್ನು ಕಾಣಬಹುದಾಗಿದೆ. ಗೌತಮ ಬುದ್ಧ ಮತ್ತು ಬುದ್ಧನ ತತ್ವಗಳ ಬಗ್ಗೆ ಚಿಂತಿಸುವಾಗ ನಮಗೆ ನೆನಪಾಗುವುದು ಅಂಗುಲಿಮಾಲನ ಪ್ರಸಂಗ. ಮಹಾಭಾರತದ ಶ್ರೀಕೃಷ್ಣ ಅರ್ಜುನನ ಮಾನಸಿಕ ಕ್ಲೇಶವನ್ನು ದೂರ ಮಾಡಿ, ಅವನ ಕರ್ತವ್ಯದ ಬಗ್ಗೆ ಎಚ್ಚರಿಸಿ, ಅವನು ತನ್ನ ಕರ್ತವ್ಯವನ್ನು ನಿರ್ಲಿಪ್ತತೆಯಿಂದ ಮಾಡಲು ಪ್ರೇರೇಪಿಸಿದಂತೆ, ಭಗವಾನ್ ಬುದ್ಧನೂ ಅಂಗುಲಿಮಾಲನ ಮಾನಸಿಕ ಆಘಾತಾನುಭವ (Traumatic Experience) ವನ್ನು ತನ್ನ ಮಾನಸೋಪಚಾರದಿಂದ ಸಮರ್ಥವಾಗಿ ಬಗೆಹರಿಸಿ, ಅವನು ಒಬ್ಬ ಸಂತನಾಗಲು ಸಹಾಯ ಮಾಡಿದ. ಅಂಗುಲಿಮಾಲಿನ ಕಥೆ ತುಂಬಾ ಸ್ವಾರಸ್ಯಕರವಾಗಿದೆ. 

ಅವನು ಕೋಶಲ ದೇಶದ ಧೀಮಂತ ರಾಜ ಪುರೋಹಿತ ಗಾರ್ಗಾಚಾರ್ಯರ ಮಗ, ತಾಯಿ ಮೈತ್ರಾಯಣಿ, ಜನ್ಮದಾತರು ಇಟ್ಟ ಹೆಸರು ಅಹಿಂಸಕ. ಅವನ ವಿದ್ಯಾಭ್ಯಾಸ ಆದದ್ದು ಪ್ರಸಿದ್ಧ ತಕ್ಷಶಿಲಾ ವಿಶ್ವವಿದ್ಯಾಲಯದಲ್ಲಿ. ಅವನೊಬ್ಬ ಶಿಸ್ತುಗಾರ. ಸಾತ್ವಿಕ ಹಾಗೂ ಹಿತಕರ ಮಾತುಗಾರ. ಇತರೆ ವಿದ್ಯಾರ್ಥಿಗಳಿಗೆ ಇವನನ್ನು ಕಂಡರೆ ಮತ್ಸರ. ಅವನನ್ನು ಹಾಳುಮಾಡಲು ಆಲೋಚಿಸಿ, ಅವನಿಗೆ ಗುರುಪತ್ನಿಯೊಡನೆ ಸಂಬಂಧವಿದೆ ಎಂದು ಗುರುಗಳಿಗೆ ಚಾಡಿ ಹೇಳಿ, ಅವರು ನಂಬುವಂತೆ ಮಾಡಿದರು. ಗುರು, ಅವನನ್ನು ಕೊಲ್ಲಿಸಿದರೆ ಕೆಟ್ಟ ಹೆಸರು ಬರುತ್ತದೆಯೆಂದು ಚಿಂತಿಸಿ, ಹಾಗೆ ಮಾಡದೆ, ಅವನನ್ನು ಕರೆದು, ಗುರುದಕ್ಷಿಣೆಯಾಗಿ ಒಂದು ಸಾವಿರ ಜನರನ್ನು ಕೊಲ್ಲಲು ಆದೇಶಿಸಿದ. ಈ ಗುರುದಕ್ಷಿಣೆ ಕೊಡದ ಹೊರತು ನಿನಗೆ ವಿದ್ಯೆ ಫಲಿಸುವುದಿಲ್ಲ ಎಂದು ಶಾಪವಿತ್ತ.  ಅಹಿಂಸಕ ಪ್ರಾರಂಭದಲ್ಲಿ ಒಪ್ಪದಿದ್ದರೂ, ಶಾಪಕ್ಕೆ ಹೆದರಿ ಒಪ್ಪಿದ.

ಅಹಿಂಸಕ ಗುರುಗಳಿಗೆ ವಂದಿಸಿ, ಆಯುಧ ಹಿಡಿದು ಅರಣ್ಯಗಳು, ಊರುಗಳು, ದಾರಿ ಎಲ್ಲೆಂದರಲ್ಲಿ ಜನರನ್ನು ಕೊಂದ, ದಿನಕಳೆದಂತೆ ಕೊಂದ ಜನರ ಲೆಕ್ಕ ತಪ್ಪಿ ಹೋಯಿತು. ಕೊಂದವರ ಒಂದೊಂದು ಕೈಬೆರಳನ್ನು ಲೆಕ್ಕ ಇಡುವ ಸಲುವಾಗಿ ಸಂಗ್ರಹಿಸಿ ಮಾಲೆ ಮಾಡಿದ, ಕೊರಳಲ್ಲಿ ಹಾಕಿಕೊಂಡ. ಸಂಸ್ಕೃತದಲ್ಲಿ ಕೈಬೆರಳಿಗೆ ಅಂಗುಲಿ ಎಂದು ಹೆಸರು. ಹಾಗಾಗಿ ಅವನು ಅಂಗುಲಿಮಾಲ ಆದ.

ಭಗವಾನ್ ಬುದ್ಧರು ಶ್ರಾವಸ್ತಿ ಎಂಬಲ್ಲಿ ತಂಗಿದ್ದಾಗ ಇವನ ಬಗ್ಗೆ ಕೇಳಿದರು. ಒಂದು ಸಂಜೆ, ಜನ ಬೇಡಬೇಡವೆಂದರೂ, ಬುದ್ಧರು ಅವನಿದ್ದ ಸ್ಥಳಕ್ಕೆ ಹೋದರು. ಅಂಗುಲಿಮಾಲನಿಗೆ ಆಶ್ಚರ್ಯವಾಯಿತು. ಅವರನ್ನು ಕೊಲ್ಲಬೇಕೆಂದು ನಿರ್ಣಯಿಸಿದ. ಆಯುಧ ಹಿಡಿದು ಅವರನ್ನು ಹಿಂಬಾಲಿಸಿದ. ಬುದ್ಧರು ತಮ್ಮ ಯೋಗಶಕ್ತಿಯಿಂದ ಅವನು ಎಷ್ಟು ಓಡಿದರೂ, ಅವನಿಗೆ ಸಿಗದ ಹಾಗೆ ಹಾಗೂ ಅವನಿಗೆ ಹತ್ತಿರ ಕಾಣುವ ಹಾಗೆ ನೋಡಿಕೊಡರು. ಅವರೇನೂ ಓಡಲಿಲ್ಲ ಅಂಗುಲಿಮಾಲನಿಗೆ ಓಡಿ ಓಡಿ ಸಾಕಾಯಿತು. ನಿಂತುಬಿಟ್ಟ, ಬುದ್ಧರನ್ನು ನಿಲ್ಲಲು ಹೇಳಿದ. ಗೌತಮ ಬುದ್ಧರು ಹೇಳಿದರು. ನಾನು ಸ್ಥಿರವಾಗಿದ್ದೇನೆ; ನೀನೂ ಕೂಡಾ ಸ್ಥಿರವಾಗಿರು. ಅವನಿಗೆ ಬುದ್ಧರು ಸುಳ್ಳು ಹೇಳುತ್ತಿದ್ದಾರೆಂದು ಆಶ್ಚರ್ಯವಾಯಿತು. ಆ ಬಗ್ಗೆ ಕೇಳಿದ. ಗೌತಮ ಬುದ್ಧರು ಉತ್ತರಿಸಿದರು. ನಾನು ಹಿಂಸೆಯನ್ನು ತ್ಯಜಿಸಿದ್ದೇನೆ. ನಾನು ಯಾವ ಜೀವಿಯಲ್ಲೂ ವೈರತ್ವವನ್ನು ಹೊಂದಿಲ್ಲ; ಅದಕ್ಕೆಂದೇ ನಾನು ಸ್ಥಿರವಾಗಿದ್ದೇನೆ. ಆದರೆ ನೀನೋ! ನೀನು ಜೀವರಾಶಿಯ ಬಗೆಗೆ ಅಸಂಯಮಿಯಾಗಿರುವೆ. ಆದುದರಿಂದಲೇ ನೀನು ಅಸ್ಥಿರವಾಗಿರುವೆ. ಇಂತಹ ಆಧ್ಯಾತ್ಮಕ ಉಪದೇಶ ಅವನ ಮನಸ್ಸಿಗೆ ನಾಟಿತು.  ಹತ್ಯಾಕಾಂಡಕ್ಕೆ ಇತಿಶ್ರೀ ಹಾಡಿದ. ಬುದ್ಧನ ಶಿಷ್ಯನಾದ, ಅಂಗುಲಿಮಾಲನ ಪರಿವರ್ತನೆಯಾಯಿತು. ಪ್ರಾಯಶ್ಚಿತ್ತ ಮಾಡಿಕೊಂಡು ಸಾಧನೆ ಮಾಡಿ ಅರ್ಹಂತ ಪದವಿಗೇರಿದ. 

ಸಹಪಾಠಿಗಳ ಸುಳ್ಳು ಆಪಾದನೆಯಿಂದ ಮನಸ್ಸಿಗೆ ಆಘಾತವಾಗಿತ್ತು. ಗುರುಗಳ ಶಾಪ ಹಾಗೂ ಗುರುದಕ್ಷಿಣೆಯ ವಿಷಯಗಳಿಂದ ಕ್ರೂರ ಪ್ರವೃತ್ತಿ ಮತ್ತು ಶತೃತ್ವಗಳೇ ಅವನ ಜೀವನಶೈಲಿಯಾಗಿತ್ತು. ಈಗಿನ ಆಧುನಿಕ ಸಿದ್ಧಾಂತದ ಪ್ರಕಾರ ಪರಿವರ್ತನ ನರಸೂಕ್ಷ್ಮ ವ್ಯಾಧಿಯು (Transference Neurosis) ಸ್ವಾಸ್ಥ್ಯಸಾಧಕಾನುಭವ (Corrective Experience) ದಿಂದಲೇ ಅಥವಾ ವರ್ತನೆಯಿಂದಲೇ ಶಮನವಾಗಲು ಸಾಧ್ಯ; ಹಾಗೂ ಇಂತಹ ಅನುಭವವು ಸ್ವರಕ್ಷಕ ತಂತ್ರ (Defence Mechanism)ವನ್ನು ಅಸಮಂಜಸಗೊಳಿಸುತ್ತೆ ಮತ್ತು ಅದನ್ನು ಅಸಂಗತವೆನ್ನಿಸಿಬಿಡುತ್ತದೆ.29 ಅಂಗುಲಿಮಾಲನ ಜೀವನದಲ್ಲಿ ಆದ ಈ ಘಟನೆಯೂ ಅಂತಹದೇ ಆಗಿದೆ. ಇಲ್ಲಿ ಭಗವಾನ್ ಬುದ್ಧರು ಮಾಡಿದ ಕೆಲಸ ಮಾನಸೋಪಚಾರಕ್ಕೆ ಸಂಬಂಧಪಟ್ಟಿರುವುದೇ ಆಗಿದೆ. ಆನಂತರ ಭಿಕ್ಷು ಸಂಘಕ್ಕೆ ಸೇರಿಸಿಕೊಳ್ಳುವುದರ ಮೂಲಕ ಅವನನ್ನು ಜನಪರ ಕೆಲಸಕ್ಕೆ ತೊಡಗಿಸುತ್ತಾರೆ, ಸಮಾಜಸೇವೆಗೆ ತೊಡಗಿಸುತ್ತಾರೆ. ಹೀಗೆ ಬೌದ್ಧ ಧರ್ಮದಲ್ಲಿ ಸಮಾಜಕಾರ್ಯ ಮತ್ತು ಸಮಾಜಸೇವೆಯ ಎರಡೂ ಕೆಲಸಗಳನ್ನೂ ನೋಡುತ್ತೇವೆ. ದಾನದ ಪರಿಕಲ್ಪನೆ, ಉದ್ದೇಶ ಹಾಗೂ ವಿಧಾನಗಳನ್ನು ನೋಡುತ್ತೇವೆ. ಅಂಗುಲಿಮಾಲನ ಪ್ರಸಂಗವಂತೂ, ಸಮಾಜಕಾರ್ಯಕರ್ತ ತನ್ನನ್ನು ತೊಡಗಿಸಿಕೊಳ್ಳುವ, ಮಾನಸೋಪಚಾರವೇ ಆಗಿದೆ. 
 
ಇಸ್ಲಾಂಯುಗ
ಜಗತ್ತಿನ ಪ್ರಮುಖ ಧರ್ಮಗಳಲ್ಲಿ ಇಸ್ಲಾಂ ಧರ್ಮವೂ ಒಂದು. ಇಸ್ಲಾಂ ಧರ್ಮವು ಐದು ತತ್ವಗಳನ್ನು ಒಳಗೊಂಡಿದೆ. ನಮಾಝ್ ಉಪವಾಸ ವ್ರತ, ಝಕಾತ್, ಹಜ್ ಮತ್ತು ಜಿಹಾದ್; ಇವುಗಳೇ ಆ ಐದು ತತ್ವಗಳು. ನಮಾಝ್ (ಇಬಾದತ್-ಆರಾಧನೆ-ಉಪಾಸನೆ-ಪೂಜೆ)ನ ಬಳಿಕ ಇಸ್ಲಾಮಿನ್ ಅತಿ ಪ್ರಮುಖ ಆಧಾರ ಸ್ತಂಭವು ಝಕಾತ್ ಆಗಿದೆ. ಝಕಾತ್ನ ಅರ್ಥ ನೈರ್ಮಲ್ಯ ಮತ್ತು ಶುದ್ಧೀಕರಣ ಎಂದಾಗಿದೆ. ತನ್ನ ಸಂಪತ್ತಿನಿಂದ ಒಂದಂಶವನ್ನು (ಪ್ರತಿಶತ ಒಂದುವರೆ ಭಾಗ-1.5%) ಪ್ರತ್ಯೇಕಿಸಿ ಬಡವರಿಗೆ ಕೊಡುವುದನ್ನು ಝಕಾತ್ ಎನ್ನುತ್ತಾರೆ. ಏಕೆಂದರೆ ಈ ರೀತಿಯಿಂದ ಆ ಧನವೂ, ಅದರೊಂದಿಗೆ ಆಧುನಿಕನ ಅಂತಃಕರಣವೂ ಶುದ್ಧವಾಗುತ್ತದೆ.30

ಝಕಾತ್ ಕೊಡುವುದರಿಂದ ಕೊಟ್ಟವನಿಗೆ ಪರಲೋಕದಲ್ಲಿ ಒಳ್ಳೆಯದಾಗುತ್ತದೆಯೆಂದೂ ಹಾಗೂ ಝಕಾತ್ ನೀಡದವರಿಗೆ ಪರಲೋಕದಲ್ಲಿ ವಿನಾಶ ಕಾದಿದೆಯೆಂದು ಕುರಾನ್ನಲ್ಲಿ ನಮೂದಿಸಲಾಗಿದೆ.

ಸಯ್ಯದ್ ಅಬ್ದುಲ್ ಆಲಾ ಮೌದೋದಿಯವರು, ಕುರಾನ್ನಲ್ಲಿ ವಿವರಿಸಲಾಗಿರುವ, ದಾನದ ಮನೋಭೂಮಿಕೆಯನ್ನು ಹೀಗೆ ಹೇಳುತ್ತಾರೆ. 
  1. ಕೇವಲ ದೇವ ಸಂಪ್ರೀತಿಗಾಗಿ ಕೊಡಬೇಕು:- ಖರ್ಚು ಮಾಡುವ (ದಾನ ಕೊಡುವ) ಉದ್ದೇಶವು ದೇವಸಂಪ್ರೀತಿ ಮತ್ತು ದೇವಸಂತುಷ್ಟಿ ಮಾತ್ರವಾಗಿರಬೇಕು. ಇತರರ ಮೇಲೆ ಉಪಕಾರ ಭಾರವನ್ನಿರಿಸಿಲಿಕ್ಕಾಗಿ ಅಥವಾ ಲೌಕಿಕ ಕೀರ್ತಿಗಾಗಿ ವ್ಯಯಿಸಬಾರದು (ಕೊಡಬಾರದು).  (ಕೇವಲ ಸಹಬಾಳ್ವೆಗಾಗಿ ಕೊಡಬೇಕು).
  2. ಋಣಭಾರವಿರಿಸಬಾರದು:- ಯಾರಿಗಾದರೂ ಹಣ ಸಹಾಯಮಾಡಿ, ಉಣಿಸಿ ಅಥವಾ ಬಟ್ಟೆಯುಡಿಸಿ ಋಣಭಾರವನ್ನಿರಿಸಬಾರದು ಮತ್ತು ಅವನ ಮನ ನೋಯಿಸುವಂತಹ ಯಾವುದೇ ಕೆಲಸ ಮಾಡಬಾರದು. (ಇದೊಂದು ಉದಾತ್ತ ಮೌಲ್ಯವೇ ಸರಿ).
  3. ಉತ್ತಮವಾದದ್ದನ್ನು ಕೊಡಬೇಕು:- ಉತ್ತಮ ಗುಣಮಟ್ಟದ್ದನ್ನೇ ಕೊಡಬೇಕು. ಕೆಟ್ಟದ್ದನ್ನು ಆಯ್ದು ಕೊಡಬಾರದು. ದರಿದ್ರನಿಗೆ ಹರಕು ಬಟ್ಟೆಗಳನ್ನೂ, ಬಡವನಿಗೆ ಉಣಿಸಲು ಕೀಳು ತರಗತಿಯ (ಕೆಟ್ಟ) ಆಹಾರವನ್ನೂ ಆಯ್ದು ಕೊಡಬಾರದು. 
  4. ಆದಷ್ಟು ಗುಪ್ತವಾಗಿ ಕೊಡಬೇಕು:- ದಾನಗಳನ್ನು ರಹಸ್ಯವಾಗಿ ಕೊಡಿರಿ. ತೋರಿಕೆ ಮತ್ತು ಆಡಂಬರಗಳಿಗಾಗಿ ಕೊಡಬೇಡಿ. ಬಹಿರಂಗವಾಗಿ ಕೊಡುವುದು ಅಡ್ಡಿಯಿಲ್ಲವಾದರೂ ಮುಚ್ಚಿ-ಮರೆಸಿ ಕೊಡುವುದೇ ಉತ್ತಮ. (ಹಿಂದೂ ಧರ್ಮದಲ್ಲಿಯೂ ಗುಪ್ತ ದಾನದ ಪದ್ಧತಿ ಇದೆ). 
  5. ಮೂರ್ಖರಿಗೆ, ತಿಳಿಗೇಡಿಗಳಿಗೆ ಅಗತ್ಯಕ್ಕಿಂತ ಹೆಚ್ಚು ಕೊಡಬೇಡಿ:- ಅಂಥಹವರಿಗೆ ಅವಶ್ಯವಿದ್ದಷ್ಟು ಮಾತ್ರ ಕೊಡಿ. ಹೆಚ್ಚಿಗೆ ಕೊಟ್ಟರೆ ಅವನು ದುರಭ್ಯಾಸಗಳಿಗೆ ಬಲಿ ಬೀಳುವ ಸಾಧ್ಯತೆ ಇದೆ. ಮದ್ಯಪಾನಿ, ಗಾಂಜಾ ಸೇವಿಸುವವರು ಹಾಗೂ ಜೂಜುಕೋರರಿಗೆ ಹಣ ಕೊಡಬಾರದು. (ಇದು ಹಿಂದೂ ಧರ್ಮದ ಸತ್ಪಾತ್ರದಾನಕ್ಕೆ ತತ್ಸಮಾನವಾದುದಾಗಿದೆ).
  6. ಸಾಲಗಾರರನ್ನು ಪೀಡಿಸಬಾರದು:- ಅವನನ್ನು ಕಾಡಿಸಬೇಡಿ. ಮರುಪಾವತಿಸಲು ಸಾಕಷ್ಟು ಸಮಯ ಕೊಡಿ. ತೀರಾ ನಿರ್ಗತಿಕ ಆದರೆ ಅವರನ್ನು ಕ್ಷಮಿಸಿಬಿಡಿ. ವಾಪಸು ಕೊಡಲು ಕೇಳಬೇಡಿ. 
  7. ದಾನದಲ್ಲಿ ಸಮತೋಲನವಿರಲಿ:- ಮಕ್ಕಳ ಮರಿಗಳ ಹೊಟ್ಟೆ ಕಟ್ಟಿ ದಾನ ಮಾಡಬೇಡಿ. ಸರಳ ಜೀವನ ನಡೆಸಲು ಬೇಕಾದದ್ದನ್ನು ಇಟ್ಟುಕೊಂಡು ಹೆಚ್ಚಾದದ್ದನ್ನು ಕೊಡಿ.31
ದಾನವನ್ನು ಯಾರಿಗೆ ಕೊಡಬೇಕು - ಯಾರಿಗೆ ಕೊಡಬಾರದು.  ಕುರಾನಿನಲ್ಲಿ ತಿಳಿಸಿರುವಂತೆ ಎಂಟು ತರಹದ ಜನರಿಗೆ ದಾನ ಕೊಡಬಹುದು; 1. ದರಿದ್ರರಿದ್ದರೂ ಯಾರನ್ನು ಬೇಡದಿರುವವರು, 2. ನಿರ್ಗತಿಕರು (ಅತ್ಯಂತ ದುರಸ್ಥೆಯಲ್ಲಿರುವವರು, ತಮ್ಮ ಹೊಟ್ಟೆ ಹೊರೆಯಲಿಕ್ಕೂ ಗತಿ ಇಲ್ಲದವರು), 3. ಆಮಿಲೀನ ಅಲೈಹಾ-ಝಕಾತ್ ವಸೂಲಿ ಮಾಡಲು ಇಸ್ಲಾಮಿ ಸರಕಾರದಿಂದ ನೇಮಿಸಲ್ಪಟ್ಟವರು, ಝಕಾತ್ ಖಾತೆಯಿಂದ ಅವರಿಗೆ ಸಂಬಳ ಕೊಡಲಾಗುವುದು. 4. ಮುಅಲ್ಲಫತುಲ್ ಕುಲೂಬ್ - ಇಸ್ಲಾಂಮಿನ ಬೆಂಬಲಕ್ಕಾಗಿ ಕೆಲಸ ಮಾಡುತ್ತಿರುವವರು ಮತ್ತು ಇಸ್ಲಾಂಗೆ ಮತಾಂತರಗೊಂಡವರು. 5. ಗುಲಾಮರ ಬಿಡುಗಡೆಗೆ ತಗಲುವ ಖರ್ಚು, 6. ಸಾಲಗಾರರು ಸಾಲ ತೀರಿಸಲು, 7. ಧರ್ಮ ರಕ್ಷಣೆಗೆ ಸಹಾಯ ಮತ್ತು 8. ಒಬ್ಬ ಪ್ರಯಾಣಿಕನಿಗೆ ಸಹಾಯ. ತೀರ ಹತ್ತಿರದ ಬಂಧುಗಳು (ಗಂಡ, ಹೆಂಡತಿ, ಮಗ ಇತ್ಯಾದಿ), ಇಸ್ಲಾಂಮಿನಲ್ಲಿ ನಂಬಿಕೆ ಇಲ್ಲದಿರುವವರಿಗೆ ಝಕಾತ್ ಅನ್ನು ಕೊಡಬೇಕಾಗಿಲ್ಲ.
 
ದಾನ ಕೊಡಬಹುದಾದ ವಸ್ತುಗಳು
ಕುರ್ಆನಿನಲ್ಲಿ ನೀಡಿದ ದೈವಾಜ್ಞೆಯಂತೆ ಹಣ, ದನಕರುಗಳು, ಧಾನ್ಯ, ಹಣ್ಣುಗಳು ಮತ್ತು ವ್ಯಾಪಾರದ ಸರಕು (ಜೀವನಾವಶ್ಯಕತೆಗಳು). ಆದರೆ ಇಂತಹವುಗಳನ್ನು ದಾನ ಕೊಡಬೇಕಾದರೆ, ಆ ವಸ್ತುಗಳು ದಾನ ಕೊಡುವವನ ಹತ್ತಿರ ಒಂದು ವರ್ಷ ಇರಬೇಕು. ಬಂಗಾರ, ಬೆಳ್ಳಿ ಮುಂತಾದ ಆಭರಣಗಳು, ಇತರೆ ಬೆಲೆಬಾಳುವ ವಸ್ತುಗಳು ದಾನಿಯಲ್ಲಿದ್ದರೆ ಅವುಗಳ 40ನೇ ಒಂದು ಭಾಗ ಝಕಾತ್ ರೂಪದಲ್ಲಿ ದಾನ ಕೊಡಬೇಕು.

ಇಸ್ಲಾಮಿನ ದೊರೆಗಳು, ಸುಲ್ತಾನರು, ಬಹುದೊಡ್ಡ ಮೊತ್ತದ ಹಣವನ್ನು ಬಡವರಿಗೂ, ಅವಶ್ಯಕತೆಯುಳ್ಳವರಿಗೂ ಖರ್ಚು ಮಾಡುತ್ತಿದ್ದರು.  ದೆಹಲಿಯಲ್ಲಿ ಆಳಿದ ಸುಲ್ತಾನರು ತಮ್ಮ ಔದಾರ್ಯಕ್ಕೆ, ಸಮಾಜಸೇವೆಗೆ ಹೆಸರುವಾಸಿಯಾಗಿದ್ದರು. ಕುತುಬ್ಉದ್ದಿನ್ ಐಬಕ್, ಇಲ್ತಮಿಷ್, ಫಿರೋಜ್ಶಾಹಾ, ಸಿಕಿಂದರ್ ಲೋದಿ, ಹುಮಾಯೂನ್, ಫಿಯಾಜ್-ಉಇದಿನ್ ತುಘ್ಲಖ್, ಖವಾಸಾ ಖಾನ್, ಮೊಹಮದ್ ಗಮಾನ್ ಮುಂತಾದ ಇಸ್ಲಾಮಿನ್ ದೊರೆಗಳ, ಸುಲ್ತಾನರ, ರಾಜ್ಯಪಾಲರ ಹೆಸರುಗಳು ತಮ್ಮ ಮಾನವೀಯತೆಗೆ ಹಾಗೂ ದಾನದ ಚಟುವಟಿಕೆಗಳಿಗೆ ಪ್ರಖ್ಯಾತರಾಗಿದ್ದಾರೆ. 

ಬಡವರಿಗೆ ಆರ್ಥಿಕ ಸಹಾಯ, ಅನ್ನ ಸತ್ರಗಳನ್ನು ನಡೆಸುವುದು, ಬೇಯಿಸದ ಆಹಾರ ಪದಾರ್ಥಗಳನ್ನು ತಿನ್ನದ ಅನ್ಯ ಧರ್ಮೀಯರಿಗೆ ಆಹಾರ ಸಾಮಗ್ರಿಗಳನ್ನು ಕೊಡುವುದು, ಚಳಿಗಾಲದಲ್ಲಿ ಕಂಬಳಿ, ಉಡುಪುಗಳನ್ನು ಹಂಚುವುದು, ನಿರ್ಗತಿಕರಿಗೆ ಚಿಕ್ಕ ಚಿಕ್ಕ ಮನೆಗಳನ್ನು ಕಟ್ಟಿಸಿಕೊಡುವುದು, ಬೊಕ್ಕದದ ಧಾನ್ಯವನ್ನು ಕಡಿಮೆ ಬೆಲೆಗೆ ಮಾರುವುದು, ನಿರುದ್ಯೋಗಿಗಳಿಗೆ ಕೆಲಸ ಒದಗಿಸುವುದು ಮುಂತಾದ ಅನೇಕ ಜನಹಿತ ಕೆಲಸಗಳನ್ನು ಮಾಡುತ್ತಿದ್ದರು. ಕೆಲವು ಸುಲ್ತಾನರಂತೂ ಇಂತಹ ಚಟುವಟಿಕೆಗಳ ಮೇಲುಸ್ತುವಾರಿಯನ್ನು ತಾವೇ ಸ್ವತಃ ನಿಂತು ಮಾಡುತ್ತಿದ್ದರು.  ಕೆಲವು ದೊರೆಗಳು ಈ ಮೇಲ್ವಿಚಾರಣೆ ಕೆಲಸಗಳನ್ನು ತಮ್ಮ ನಿಷ್ಪಕ್ಷಪಾತಿ, ನಿಷ್ಠಾವಂತ ವಿದ್ವಾಂಸರಿಗೆ, ಅಧಿಕಾರಿಗಳಿಗೆ ವಹಿಸುತ್ತಿದ್ದರು. ತುಂಬಾ ದೀನರಿಗೆ, ಕೃಷಿ ಕಾರ್ಮಿಕರಿಗೆ ಉಳುಮೆ ಭೂಮಿಯನ್ನು ದಾನಮಾಡಿದ ಉದಾಹರಣೆಗಳಿವೆ. 

ಮಹಮ್ಮದ್ ಬಿನ್ ತೊಘಲಖ್ನ ಆಡಳಿತ ಕಾಲದಲ್ಲಿ ದೆಹಲಿಯೊಂದರಲ್ಲೇ ಎಪ್ಪತ್ತು ಆಸ್ಟತ್ರೆಗಳು ಇದ್ದವು. ಆಸ್ಪತ್ರೆಗಳು ವೈದ್ಯರು, ಶಸ್ತ್ರವೈದ್ಯರು, ನೇತ್ರತಜ್ಞರು, ದಾದಿಯರು, ಸಹಾಯಕರಿಂದ ಕೂಡಿರುತ್ತಿತ್ತು.  ಔಷಧಿಗಳು, ಆಹಾರ, ಪಾನಿಯ, ಮುಂತಾದವುಗಳನ್ನು ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತಿತ್ತು. ಹೀಗೆ ಇಸ್ಲಾಮ್ ದೊರೆಗಳು ತಮ್ಮ ಜನಪರ ಕಾಯಕಗಳಿಗೆ ಪ್ರಸಿದ್ಧಿಯಾಗಿದ್ದರು. ಇಂದಿನ ಸಮಾಜಕಾರ್ಯ ಪರಿಭಾಷೆಯಲ್ಲಿ ಹೇಳುವುದಾದರೆ ಈ ದೊರೆಗಳು ತಮ್ಮನ್ನು ಶ್ಲಾಘನೀಯ ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.32 ಸಮಾಜಕಾರ್ಯ ಕೆಲಸಗಳನ್ನು ಮಾಡುತ್ತಿದ್ದರು-ಮಾಡಿಸುತ್ತಿದ್ದರು. 
 
ಪಾರ್ಸಿಯುಗ-ಝರತುಷ್ಟ ಧರ್ಮ
ದೇವದೂತ ಝರತುಷ್ಟನಿಂದ ಪ್ರವರ್ತನೆಗೊಂಡ ಧರ್ಮ ಪಾರ್ಸಿಧರ್ಮ. ಪಾರ್ಸಿಧರ್ಮಕ್ಕೂ ವೈದೀಕಧರ್ಮಕ್ಕೂ ಬಹಳ ಸಾಮ್ಯಗಳಿವೆ ಎಂದು ಹೇಳಲಾಗಿದೆ. ಭಾಷೆಯಲ್ಲಿ, ರೂಢಿ-ಸಂಪ್ರದಾಯಗಳಲ್ಲಿ, ಸ್ತ್ರೀಧರ್ಮ, ಪುರೋಹಿತ ಧರ್ಮದ ವಿಚಾರದಲ್ಲಿ, ಧಾರ್ಮಿಕ ಸಂಸ್ಕಾರಗಳಲ್ಲಿ ಅಷ್ಟೇ ಏಕೆ ಆಧ್ಯಾತ್ಮದ ಗಹನ ತತ್ವವಿಚಾರಗಳಲ್ಲಿಯೂ ಗಮನಾರ್ಹವಾದ ಸಾದೃಶ್ಯಗಳಿವೆ. ಪಾರಸಿ ಧರ್ಮವು (ಹಿಂದೂ ಧರ್ಮದಂತೆ) ಸಾಕ್ಷಾತ್ಕಾರ ಧರ್ಮವಾಗಿದೆ. ಭಕ್ತಿ ಮತ್ತು ಶ್ರದ್ಧೆಗಳನ್ನು, ಏಕದೇವೊಪಾಸನೆಯನ್ನು ನಂಬುತ್ತದೆ.33 ಎಲ್ಲಾ ಧರ್ಮಗಳಲ್ಲಿ ಇರುವಂತೆ ಪಾರ್ಸಿ ಧರ್ಮದಲ್ಲೂ ತತ್ವಶಾಸ್ತ್ರ ಮತ್ತು ನೀತಿಶಾಸ್ತ್ರ ಎಂಬ ಎರಡು ಭಾಗಗಳಿವೆ. ನೀತಿಶಾಸ್ತ್ರದಲ್ಲಿ ಹೇಳಿದ ಅನೇಕ ಸಿದ್ಧಾಂತಗಳು ಸಮಾಜಕಾರ್ಯದಲ್ಲಿ ಪ್ರತಿಪಾದನೆಗೊಂಡ ಮೌಲ್ಯಗಳೇ ಆಗಿವೆ.

ನೈತಿಕತೆ ವ್ಯಕ್ತಿಗೆ ಅನ್ವಯ ಆಗುವಂತೆ ಸಮಷ್ಟಿಗೂ ಅನ್ವಯಿಸುತ್ತದೆ. ಇದರಿಂದ ಮನುಷ್ಯ-ಮನುಷ್ಯರೊಳಗಿನ ಸಂಬಂಧಗಳೂ ಪರಸ್ಪರ ವ್ಯವಸ್ಥೆಗೊಳ್ಳುತ್ತವೆ ಹಾಗೂ ನಿಯಂತ್ರಣಗೊಳ್ಳುತ್ತವೆ.  ಇದು ಸಮಷ್ಟಿ ಹಿತಕ್ಕೆ ಪೂರಕ (ಸಮಾಜಕಾರ್ಯದಲ್ಲಿಯೂ ಸಂಬಂಧಗಳಿಗೆ ತುಂಬಾ ಮಹತ್ವವಿದೆ). ಪಾರ್ಸಿಗಳ ಪವಿತ್ರಗ್ರಂಥ ಝೆಂಡಾ ಅವೆಸ್ತಾದಲ್ಲಿ ಪ್ರತಿಪಾದನೆಗೊಂಡಿರುವ ಅನೇಕ ಬದುಕಿನ ಮೌಲ್ಯಗಳಲ್ಲಿ ದಾನವೂ ಒಂದು.  ದಾನದ ವಿವಿಧ ರೂಪಗಳನ್ನು ಪಾರ್ಸಿ ಸಾಹಿತ್ಯದಲ್ಲಿ ತಿಳಿಸಲಾಗಿದೆ.  ಪಾರ್ಸಿ ಸಮುದಾಯದಲ್ಲಿ ಯಾರು ಹೆಚ್ಚು ದಾನದ ಕರ್ಮಗಳನ್ನು ಮಾಡುತ್ತಾರೊ ಅವರು ಹೆಚ್ಚು ಪೂಜನೀಯ ಎಂದು ಭಾವಿಸಲಾಗುತ್ತದೆ. ದಾನದ ಬಗ್ಗೆ ಪವಿತ್ರ ಗ್ರಂಥದಲ್ಲಿ ಹೇಳಲಾಗಿರುವ ಅಂಶಗಳ ಸಾರಾಂಶ ಹೀಗಿದೆ.

ಸದಾ ದಾನಶೀಲನಾಗಿರು. ಸಂಪತ್ತನ್ನು ಹೆಚ್ಚು ಹೆಚ್ಚು ಅನುಭವಿಸಿದಂತೆ ಹೆಚ್ಚು ಹೆಚ್ಚು ದಾನಮಾಡು. ರೋಗಿಗಳಿಗೆ, ಏಕಾಂತವಾಸಿಗಳಿಗೆ (ದರಿದ್ರರು), ಅಲೆಮಾರಿಗಳಿಗೆ ವಸತಿಸೌಕರ್ಯ ಒದಗಿಸಿದರೆ ಅವನಿಗೆ ಸ್ವರ್ಗ ಸಿಗುತ್ತದೆ.  ದೀನರಿಗೆ, ಪರದೇಶಿಗಳಿಗೆ ಅವರ ಬೇಡಿಕೆ ಪೂರೈಸುವಷ್ಟು ಆಹಾರ ಹಾಗೂ ನೀರನ್ನು ಒದಗಿಸಿದರೆ, ಅದಕ್ಕೆ ಪ್ರತಿಯಾಗಿ ಅವನಿಗೆ ಉತ್ತಮ ಗತಿ ಸಿಗುತ್ತದೆ.  ದಾನದ ಪರಿಣಾಮ ಅಂತಿಮ ಉತ್ತಮ ಜೀವನ.

ಯಾರು ಬಡವರಿಗೆ ಆಶ್ರಯ, ಪರಿಹಾರ ಒದಗಿಸುತ್ತಾರೋ ಅವನು ಒಳ್ಳೆಯ ಸಮಾಜವನ್ನು (ಅಹುರಾ ರಾಜ್ಯ) ನಿರ್ಮಿಸುತ್ತಾರೆ. ಯಾರು ಧರ್ಮಿಷ್ಟರೊ ಅಂಥಹವರು ದಾನಕ್ಕೆ ಯೋಗ್ಯರು. ಆಸ್ತಿಕನಿಗೆ ಆಹಾರ, ಉಡುಪು, ಔಷಧಿ ಮುಂತಾದವುಗಳನ್ನು ಕೊಡಬೇಕು. ಅಯೋಗ್ಯರಿಗೆ ದಾನ ಕೊಡಬಾರದು. ಅದು ಹೆಚ್ಚು ಪ್ರಯೋಜನಕಾರಿಯಲ್ಲ. ಸಮಾಜಕ್ಕೆ ಉಪಯೋಗವಾಗುವ ಧರ್ಮಶಾಲೆಗಳು, ಕೊಳಗಳು, ಬಾವಿಗಳು, ಜಲಾಶಯಗಳು, ಸೇತುವೆಗಳು ಮುಂತಾದವುಗಳ ನಿರ್ಮಾಣವೂ ದಾನದ ವ್ಯಾಪ್ತಿಗೆ ಬರುತ್ತವೆ.34
 
ಭಾರತದಲ್ಲಿ ಪಾರ್ಸಿಗಳು
ಪರ್ಷಿಯ ಪಾರ್ಸಿಗಳ ಮೂಲಸ್ಥಾನ. ಇಸ್ಲಾಂ ದೊರೆಗಳ ಅಡಳಿತ ಕಾಲದಲ್ಲಿ, ಅವರನ್ನು ಇಸ್ಲಾಮಿಗೆ ಮತಾಂತರಿಸಲು ಬಲಾತ್ಕರಿಸಲಾಯಿತು. ಸ್ವಾಭಿಮಾನಿ ಪಾರ್ಸಿಗಳು, ಸದರಿ ಪ್ರಸ್ತಾವನೆಯನ್ನು ತಿರಸ್ಕರಿಸಿ, ಅಲ್ಲಿಂದ ಬೇರೆ ಬೇರೆ ದೇಶಕ್ಕೆ ಹೋದಂತೆ, ಭಾರತಕ್ಕೂ ಬಂದು ನೆಲೆಸಿದರು. ಸುಸಂಸ್ಕೃತ ಹಾಗೂ ಧೈರ್ಯ-ಸಾಹಸಗಳಿಗೆ ಪ್ರಸಿದ್ಧಿಯಾದ ಪಾರ್ಸಿಗಳು ದೇಶದ ಉದ್ದಗಲಕ್ಕೂ ಪಾದರಸದಂತೆ ಸಂಚರಿಸಿ, ಅನೇಕ ಕೈಗಾರಿಕೆಗಳನ್ನು ಸ್ಥಾಪಿಸಿದರು. ಕೈಗಾರಿಕಾ ಪ್ರಗತಿಗೆ ಕಾರಣರಾದರು. ಪಾರ್ಸಿ ಧರ್ಮ ಸಂಸ್ಥೆಗಳು ಮತ್ತು ನಿಧಿಗಳು, ಅನೇಕ ಸಮಾಜ ಸೇವಾ ಕಾರ್ಯ ಕೆಲಸಗಳನ್ನು ಕೈಗೆತ್ತಿಕೊಂಡಿವೆ, ಶಿಕ್ಷಣ, ಆರೋಗ್ಯ, ಅನಾಥಾಲಯ, ನೆರೆಹಾವಳಿ ಪರಿಹಾರ, ಮಹಿಳೆಯರ ಅಭಿವೃದ್ಧಿ, ಕುಶಲಕಲೆಗಳಲ್ಲಿ ತರಬೇತಿ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಪಾರ್ಸಿಗಳ ಸಮಾಜಸೇವಾ ಕಾರ್ಯ ಚಟುವಟಿಕೆಗಳನ್ನು ಎರಡು ಗುಂಪುಗಳಲ್ಲಿ ಗುರುತಿಸಬಹುದು. ಮೊದಲನೆಯದು ಪಾರ್ಸಿ ಸಮುದಾಯಕ್ಕೆ ಮೀಸಲಾದ ಕೆಲಸಗಳು. ಎರಡನೆಯದು, ಇತರೆ ಸಮುದಾಯಗಳಲ್ಲಿನ, ಸಹಾಯವನ್ನು ಅಪೇಕ್ಷಿಸುವ, ವ್ಯಕ್ತಿಗಳಿಗೆ ಬೇರೆ ಬೇರೆ ಕೆಲಸಗಳಿಗೆ, ಬೇರೆ ಬೇರೆ ನಿಧಿಗಳಿಂದ ಇಂತಹ ಸಮಾಜ ಸೇವಾ ಚಟುವಟಿಕೆಗಳು ಸಂಘಟನೆ-ಸಂಯೋಜನೆಗೊಂಡಿವೆ.

ಶಿಕ್ಷಣ ಕ್ಷೇತ್ರದಲ್ಲಿ ಶಿಷ್ಯವೇತನ, ವಸತಿನಿಲಯ, ಶಾಲಾಪುಸ್ತಕಗಳ ವಿತರಣೆ, ಕೈಗಾರಿಕೆ ಮತ್ತು ಕುಶಲ ಕಲೆಗಳಲ್ಲಿ ತರಬೇತಿ, ಶಿಕ್ಷಣ ಸಂಯೋಜನೆ ಮುಂತಾದ ಕೆಲಸಗಳಿಗೆ ಅಂತಹ ನಿಧಿಗಳಿಂದ ಹಣವನ್ನು ಒದಗಿಸಲಾಗುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಆಸ್ಪತ್ರೆಗಳು, ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಗಳು, ನೇತ್ರ ಚಿಕಿತ್ಸಾಲಯಗಳು, ಪ್ರಸೂತಿಗೃಹಗಳು, ಅಸ್ಥಿ ಚಿಕಿತ್ಸಾಲಯಗಳು, ಪ್ರಯೋಗಾಲಯಗಳು, ಔಷಧಿ ನೆರವು, ಪರೀಕ್ಷಾ ಯಂತ್ರಗಳು ಇತ್ಯಾದಿ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ, ಕೆಲಸಗಳನ್ನು ಮಾಡಿದ್ದಾರೆ. ಸಾರ್ವಜನಿಕರ ಉಪಯೋಗಕ್ಕಾಗಿ ಗ್ರಂಥಾಲಯಗಳನ್ನು ಹಾಗೂ ವಾಚನಾಲಯಗಳನ್ನು ತೆರೆದಿದ್ದಾರೆ.  ನೆರೆಹಾವಳಿಯಂತಹ ಪ್ರಕೃತಿ ವಿಕೋಪಗಳು ತಲೆದೋರಿದಾಗ ತಾವು ಮುಂದಿದ್ದು ಪರಿಹಾರ ವಿತರಿಸಿದ್ದಾರೆ. 

ಅದರಂತೆಯೇ ಬಡ ಪಾರ್ಸಿಗಳಿಗೆ ವಾಸಕ್ಕೆ ಮನೆ, ಉದ್ಯೋಗ ಒದಗಿಸಿದ್ದಾರೆ. ವಿಧವೆಯರಿಗೆ ಪರಿಹಾರ, ನಿರ್ಗತಿಕರಿಗೆ ಆಹಾರ ಧಾನ್ಯ ವಿತರಣೆ, ಧರ್ಮಶಾಲೆಗಳ ಪ್ರಾರಂಭ, ಶಿಷ್ಯವೇತನ, ವಾರ್ಷಿಕ ವೇತನ, ಯುವತಿಯರಿಗೆ ಬೇರೆ ಬೇರೆ ಕಲೆಗಳಲ್ಲಿ ತರಬೇತಿ, ಅಂಧ-ಊನ ಮಕ್ಕಳಿಗೆ ಧನ ಸಹಾಯ ಹೀಗೆ ಹಲವು ಹತ್ತು ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಂತೂ ಪಾರ್ಸಿ ಸಮುದಾಯಕ್ಕೆ ಸೇರಿದ, ಟಾಟಾ ಕಂಪನಿಯ ಮುಖಂಡರು ಸೇರಿದಂತೆ, ಹಲವಾರು ಕೈಗಾರಿಕಾ ಕಂಪನಿಗಳ ಪ್ರಮುಖರು, ಅಗ್ರಗಣ್ಯರು ಸಮಾಜಸೇವಾ ಕಾರ್ಯ ಚಟುವಟಿಕೆಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ದಾನ ಮಾಡಿದ್ದಾರೆ, ಮಾಡುತ್ತಿದ್ದಾರೆ.35
 
ಜೈನಧರ್ಮ
ಭಾರತದಲ್ಲಿ ಹಿಂದೂ ಧರ್ಮದ ನಂತರ, ಬೌದ್ಧ ಧರ್ಮಕ್ಕಿಂತ ಹಳೆಯದಾದ, ಭಾರತದಲ್ಲೇ ಹುಟ್ಟಿ ಬೆಳೆದ ಇನ್ನೊಂದು ಧರ್ಮ ಎಂದರೆ ಜೈನಧರ್ಮ. ಜೈನರು, ಬೌದ್ಧರಂತೆ, ದೇವರನ್ನು ನಂಬುವುದಿಲ್ಲ. ಅವರ ಧರ್ಮಶಾಸ್ತ್ರದಲ್ಲಿ ದೇವರಿಗೆ ಜಾಗವಿಲ್ಲ. ಜೈನರು ಸಾಧಕರನ್ನೇ ದೇವರೆಂದು ಪರಿಗಣಿಸುತ್ತಾರೆ. ಅವರ ಬೋಧನೆಗಳನ್ನು ಒಪ್ಪುತ್ತಾರೆ.  ಅವರನ್ನೇ ಅನುಸರಿಸುತ್ತಾರೆ.  ಜೈನರ ಸಾಧಕರನ್ನು ತೀರ್ಥಂಕರರೆಂದು ಕರೆಯುತ್ತಾರೆ. ಮೊದಲನೇ ತೀರ್ಥಂಕರರಾದ ವೃಷಭದೇವ (ವೃಷಭನಾಥ)ರಿಂದ ಇಪ್ಪತ್ನಾಲ್ಕನೇ ತೀರ್ಥಂಕರರಾದ ವರ್ಧಮಾನ ಮಹಾವೀರರ ತನಕ ಆಗಿಹೋದ ಜನ ತೀರ್ಥಂಕರರನ್ನು ದೇವರೆಂದು ಭಾವಿಸುತ್ತಾರೆ.  ಜೈನರು ದೇವರನ್ನು ನಂಬದೇ ಹೋದರೂ, 24 ತೀರ್ಥಂಕರರು, ಬಲರಾಮ, ಶ್ರೀಕೃಷ್ಣ, ನಾರಾಯಣ ಇತ್ಯಾದಿ ಕರ್ಮಬಂಧನದಿಂದ ಮುಕ್ತರಾದ ದಿವ್ಯಾತ್ಮರನ್ನು ನಂಬುತ್ತಾರೆ ಹಾಗೂ ಅನುಸರಿಸುತ್ತಾರೆ.  ಹಿಂದೂ ಧರ್ಮದಲ್ಲಿ ಪ್ರತಿಪಾದನೆಗೊಂಡ ಕರ್ಮ ಸಿದ್ಧಾಂತಕ್ಕೆ, ಸಾಧನೆಗೆ ಹೆಚ್ಚಿಗೆ ಮಹತ್ವವನ್ನು ಕೊಡುತ್ತಾರೆ.  ಸದಾಚಾರ, ಉಪವಾಸ, ಅಹಿಂಸೆ, ಇಂದ್ರಿಯ ನಿಗ್ರಹ, ಬ್ರಹ್ಮಚರ್ಯ, ಸತ್ಯ, ತಪಸ್ಸು (ಧ್ಯಾನ) ಮುಂತಾದ ಬದುಕಿನ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತಾರೆ. ತಮ್ಮ ಸಾಧನಾಪಥದಲ್ಲಿ ಈ ಆದರ್ಶಗಳನ್ನು ಅಳವಡಿಸಿಕೊಂಡು ಕರ್ಮಬಂಧನಗಳಿಂದ ಬಿಡುಗಡೆಗೊಂಡು, ಮುಕ್ತಿಗೆ ಅರ್ಹತೆಯನ್ನು ಪಡೆಯುತ್ತಾರೆ. 

ಜೈನ ದರ್ಶನದಲ್ಲಿ ಅಹಿಂಸೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಹಿಂಸೆ ಮಾಡಬಹುದಾದ ಕೃಷಿ ಇತ್ಯಾದಿ ವೃತ್ತಿಗಳನ್ನು ಬಿಟ್ಟು, ಹಿಂಸೆ ಇಲ್ಲದ ಅಥವಾ ಅತಿಕಡಿಮೆ ಹಿಂಸೆ ಮಾಡುವ ಕೆಲಸಗಳನ್ನು (ವ್ಯಾಪಾರ, ಸಾಗಾಣಿಕೆ, ವಕೀಲ ವೃತ್ತಿ ಇತ್ಯಾದಿ) ಆಯ್ದುಕೊಂಡು ತಮ್ಮ ಜೀವನವನ್ನು ನಿರ್ವಹಿಸುತ್ತಾರೆ. ಅಹಿಂಸೆ ಸದಾಚಾರದ ಒಂದು ಭಾಗವೇ ಆಗಿದೆ. ಜೈನರು ರತ್ನತ್ರಯಗಳನ್ನು ಅನುಸರಿಸುತ್ತಾರೆ. ರತ್ನತ್ರಯಗಳೆಂದರೆ ಸಮ್ಯಕ್ ದರ್ಶನ-ಜೈನ ತತ್ವದಲ್ಲಿ ಅಚಲವಾದ ನಂಬಿಕೆ; ಸಮ್ಯಕ್ ಜ್ಞಾನ- ಸತ್ಯದ ಅರಿವು; ಸಮ್ಯಕ್ ಚಾರಿತ್ರ್ಯ - ರಾಗ ದ್ವೇಷರಹಿತ ಚಾರಿತ್ರ್ಯ - ಸಚ್ಚಾರಿತ್ತ್ಯ.36 ಇವು ಜೈನರ ವ್ಯಕ್ತಿತ್ವವನ್ನು ರೂಪಿಸುತ್ತದೆ. 

ಅದರಂತೆಯೇ ಜೈನರು ಪಂಚಪರಮೇಷ್ಠಿಗಳನ್ನು ತುಂಬಾ ಗೌರವಿಸುತ್ತಾರೆ.  ಅರ್ಹಂತರು, ಸಿದ್ಧರು, ಆಚಾರ್ಯರು, ಉಪಾಧ್ಯಾಯರು ಮತ್ತು ಸರ್ವಸಾಧುಗಳು ಇವರೇ ಪಂಚಪರಮೇಷ್ಠಿಗಳು. ಇವರು ಕರ್ಮಬಂಧನದಿಂದ ಬಿಡುಗಡೆ ಕಂಡ ದಾರ್ಶನಿಕರು ಹಾಗೂ ಅನುಕರಣೀಯರೂ ಆಗಿರುತ್ತಾರೆ.   

ಅರ್ಹಂತರು - ಜೀವರುಗಳ ಸಾದನೆಗೆ ಅವಶ್ಯವಾದ ಧರ್ಮದಾನವನ್ನು ಮತ್ತು ಜ್ಞಾನದಾನವನ್ನು ಮಾಡುವವರು.

ಸಿದ್ಧರು - ಜ್ಞಾನಿಗೆ ಮಾತ್ರ ಗೋಚರವಾಗುವ ದೈವೀಪುರುಷರು.

ಆಚಾರ್ಯರು - ಸಮಸ್ತ ಸದ್ವ್ರತ ನಿರತರು ಹಾಗೂ ನೈತಿಕ ಪಾಠಕರು.

ಉಪಾಧ್ಯಾಯರು - ಸಂಯಮಿ ಬುದ್ಧಿ ಜೀವಿಗಳು ಹಾಗೂ ಅಧ್ಯಾಪಕರು.

ಸರ್ವಸಾಧುಗಳು - ಸರ್ವಸಂಗ ಪರಿತ್ಯಾಗಿಗಳು ಹಾಗೂ ಲೋಕಕಲ್ಯಾಣ ಮಾಡುವ ಮಹಾತ್ಮರು.37

ಇವರೆಲ್ಲಾ ಧರ್ಮ ಪ್ರವರ್ತಕರು, ಪ್ರಚಾರಕರು ಆಗಿದ್ದಾರೆ. ಇಂತಹ ಸಾಧಕರಿಗೆ ಈ ಗುಣ ವಿಶೇಷಗಳು ಸರಿ. ಜನಸಾಮಾನ್ಯರಿಗೆ ಇವುಗಳನ್ನು ಅನುಸರಿಸಲು ಕಷ್ಟವಾಗಬಹುದು. ಹಾಗಾಗಿ ಜನಸಾಮಾನ್ಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ 12 ಜೀವನ ಸೂತ್ರಗಳನ್ನು ಜೈನಧರ್ಮ, ಕೊಟ್ಟಿದೆ.  ಇವುಗಳನ್ನು ಜೈನರ ಹನ್ನೆರಡು ವಿಧಿಗಳೆಂದು ಕರೆದಿದ್ದಾರೆ.     
  1. ಹಿಂಸೆಯನ್ನು ಬಿಡಬೇಕು, ಯಾವ ಜೀವಿಯನ್ನೂ ಕೊಲ್ಲಬಾರದು.  ಸಂವೇದನಾ ಶೀಲ ಜೀವಿಯ ಬದುಕನ್ನು ಕಳೆಯಬಾರದು.
  2. ಎಂತಹ ಕಠಿಣ ಪ್ರಸಂಗ ಬಂದರೂ ಸುಳ್ಳು ಹೇಳಬಾರದು.
  3. ಇನ್ನೊಬ್ಬರ ವಸ್ತುಗಳನ್ನು, ಚಿಂತನೆಗಳನ್ನು ಕದಿಯಬಾರದು.
  4. ವಿವಾಹದಲ್ಲಿ (ಕುಟುಂಬದಲ್ಲಿ) ನಂಬಿಕೆ ಇಡಬೇಕು.
  5. ದುರಾಸೆ ಉಳ್ಳವರಾಗಬಾರದು. ಆಸೆಗಳನ್ನು ಹದ್ದಿನಲ್ಲಿರಿಸಿಕೊಂಡು ತನ್ನ ಐಶ್ವರ್ಯಕ್ಕೊಂದು ಮಿತಿಯನ್ನು ಹಾಕಿಕೊಂಡು, ಹೆಚ್ಚಿನದೆಲ್ಲವನ್ನು ದಾನ ಮಾಡಿಬಿಡಬೇಕು. 
  6. ಇತರ ಜೀವರಾಶಿಗಳಿಗೆ ಹಾನಿ ಒದಗಬಹುದಾದ ಪ್ರಯಾಣವನ್ನು ಅನವಶ್ಯಕವಾಗಿ ಮಾಡಬಾರದು. ಪಾಪ ಪ್ರಲೋಭನೆಯಿಂದ ದೂರವಿರಬೇಕು. 
  7. ನಿತ್ಯೋಪಯೋಗದ ವಸ್ತುಗಳನ್ನು ಸಾಧ್ಯವಿದ್ದಷ್ಟು ಮಿತಿಯಲ್ಲಿಟ್ಟುಕೊಂಡಿರಬೇಕು. 
  8. ಕೆಟ್ಟದ್ದರಿಂದ ದೂರವಿರುವ ಹಾಗೆ ಯಾವಾಗಲೂ ಎಚ್ಚರದಿಂದ ಇರಬೇಕು. 
  9. ನಿಗದಿತ ಸಮಯಕ್ಕೆ ಸರಿಯಾಗಿ ಧ್ಯಾನ ಮಾಡಬೇಕು.
  10. ಉಪವಾಸದಂತಹ ಆತ್ಮಸಂಯಮದ ವಿಶೇಷ ವ್ರತಗಳನ್ನು ಪಾಲಿಸಬೇಕು.
  11. ಆಗಿಂದಾಗ್ಗೆ ಸಂನ್ಯಾಸಿಯಂತೆ ಸ್ವಲ್ಪಕಾಲ ಕಳೆಯಬೇಕು.
  12. ತಪೋನಿರತರ ಪೋಷಣೆಗಾಗಿ ಭಿಕ್ಷೆ ನೀಡಬೇಕು.
ಜೈನಧರ್ಮದ ತತ್ತ್ವ ಮತ್ತು ನೀತಿ ಸೂತ್ರಗಳ ಸಾರವನ್ನು ಮೇಲೆ ನೋಡಿದ್ದೇವೆ.  ಇವುಗಳ ಸಾರಾಂಶ ಮತ್ತು ಸಮಾಜಕಾರ್ಯದ ಅಂಶಗಳನ್ನು ಹೀಗೆ ಕ್ರೋಢೀಕರಿಸಬಹುದು.
  • ಜೈನ ಧರ್ಮದಲ್ಲಿ ಸದಾಚಾರಕ್ಕೆ, ಸಚ್ಚಾರಿತ್ರ್ಯಕ್ಕೆ ಆದ್ಯತೆ. ಇವುಗಳಿಂದ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು. ಅದರ ಫಲವಾಗಿ ಕುಟುಂಬಗಳಲ್ಲಿ, ಸಮುದಾಯಗಳಲ್ಲಿ ಹಾಗೂ ಸಮಾಜದಲ್ಲಿ ಸಾಮಾಜಿಕ, ಆರ್ಥಿಕ ಸಮಸ್ಯೆಗಳು ಕಡಿಮೆಯಾಗುವ ಸಾಧ್ಯತೆ ಇದೆ. ಇದು ಉತ್ತಮ ಸಮಾಜದ ಪೂರಕ ಅಂಶ.
  • ಜೈನ ಧರ್ಮದಲ್ಲಿ ಸಾಮಾನ್ಯ ಜನರಿಗೆ ಹೇಳಲಾಗಿರುವ 12 ಜೀವನ ಸೂತ್ರಗಳಲ್ಲಿ ಹೆಚ್ಚಿನವು ಸಾಧಕರನ್ನು ಸನ್ಮಾರ್ಗಕ್ಕೆ ಹಚ್ಚುವ ಅಂಶಗಳೇ ಆಗಿವೆ. ಹಿಂಸೆ ಮಾಡಬೇಡ, ಸುಳ್ಳು ಹೇಳಬೇಡ, ಕದಿಯಬೇಡ, ಅವಶ್ಯಕತೆಗಳನ್ನು ನಿಯಂತ್ರಿಸು, ದುರಾಸೆಯನ್ನು ಬಿಡು ಇತ್ಯಾದಿ ಸೂತ್ರಗಳು ಜೈನರಿಗಷ್ಟೇ ಅಲ್ಲದೆ, ಇತರೆ ಧರ್ಮಗಳಲ್ಲಿಯೂ ಪ್ರತಿಪಾದನೆಗೊಂಡ ಜೀವನಸೂತ್ರಗಳೇ ಆಗಿವೆ. ಇವುಗಳಿಂದ ವ್ಯಕ್ತಿಗಳಿಗೆ, ಕುಟುಂಬಗಳಿಗೆ, ಗುಂಪುಗಳಿಗೆ, ಸಮುದಾಯಗಳಿಗೆ ಹಾಗೂ ಇಡೀ ಸಮಾಜಕ್ಕೆ ಆದರ್ಶವಾಗುವ ವಿಷಯಗಳೇ ಆಗಿವೆ. ಸಮಾಜಕಾರ್ಯ ಸಿದ್ಧಾಂತಗಳಿಗೆ ಸಹಕಾರಕವಾಗುವ ಅಂಶಗಳೇ ಆಗಿವೆ.
  • ಜೈನ ಸಾಹಿತ್ಯದಲ್ಲಿ ಮತ ಪ್ರವರ್ತಕರನ್ನು ಐದು ಗುಂಪುಗಳಲ್ಲಿ ಗುರುತಿಸಲಾಗಿದೆ. ಅವರೇ ಅರ್ಹಂತರು, ಸಿದ್ಧರು, ಆಚಾರ್ಯರು,  ಉಪಾಧ್ಯಾಯರು ಮತ್ತು ಸರ್ವಸಾಧುಗಳು. ಇವುಗಳಲ್ಲಿ ಮೊದಲನೇ ಗುಂಪಿಗೆ ಸೇರಿದವರೇ ಅರ್ಹಂತರು. ಇವರ ಬಹುಮುಖ್ಯ ಕೆಲಸ ಜೀವರುಗಳ ಸಾಧನೆಗೆ ಅವಶ್ಯವಾದ ಧರ್ಮದಾನ ಮತ್ತು ಜ್ಞಾನದಾನ ಮಾಡುವುದು. ಈ ದಾನಗಳು ಶ್ರೇಷ್ಠ ಎಂದು ಬೇರೆ ಹೇಳಬೇಕಾಗಿಲ್ಲ.  ಜಗತ್ತಿನ ಅವತಾರ ಪುರುಷರು, ಋಷಿಮುನಿಗಳು, ಸಾಧು ಸಂತರು ತಮ್ಮ ಜೀವಿತಾವಧಿಯಲ್ಲಿ ಮಾಡಿರುವುದು ಇದನ್ನೇ.
  • ಜನಸಾಮಾನ್ಯರಿಗೆ ಹೇಳಲಾಗಿರುವ ದ್ವಾದಶ ಜೀವನ ಸೂತ್ರಗಳಲ್ಲಿ ಒಂದು, ನಮ್ಮ ಆಸೆಗಳನ್ನುಹದ್ದಿನಲ್ಲಿರಿಸಿಕೊಂಡು, ತನ್ನ ಐಶ್ವರ್ಯಕ್ಕೊಂದು ಮಿತಿ ಹಾಕಿಕೊಂಡು ಹಚ್ಚಿನದೆಲ್ಲವನ್ನೂ ದಾನ ಮಾಡಿಬಿಡಬೇಕು ಎಂಬುದು. ಇದರ ಫಲರೂಪವೆಂಬಂತೆ ದೇಶದ ಉದ್ದಗಲಗಳಲ್ಲಿ ಅನೇಕ ದಾನ ಸಂಸ್ಥೆಗಳು ಸ್ಥಾಪನೆಗೊಂಡಿವೆ. ಅವುಗಳಿಂದ ಅನೇಕ ದೇವಸ್ಥಾನಗಳು, ಸಾಂಸ್ಕೃತಿಕ ಸಂಸ್ಥೆಗಳು, ಶಾಲಾ ಕಾಲೇಜುಗಳು ಹಾಗೂ ವಿಶೇಷ ಸೌಲಭ್ಯಗಳಿಂದ ಕೂಡಿದ ಆಸ್ಪತ್ರೆಗಳು ಪ್ರಾರಂಭಗೊಂಡಿವೆ ಮತ್ತು ಅವು ಒಳ್ಳೆಯ ಕಾರ್ಯಗಳನ್ನು ಮಾಡುತ್ತಿವೆ. ಇವೆಲ್ಲಾ ಚಟುವಟಿಕೆಗಳಿಗೆ ಮೂಲಭೂತ ಕಾರಣ ಜೈನರು ತ್ಯಾಗಕ್ಕೆ ಕೊಟ್ಟಿರುವ ಪ್ರಾಶಸ್ತ್ಯ.
ಜೈನಧರ್ಮದ 24ನೇ ತೀರ್ಥಂಕರರಾದ ವರ್ಧಮಾನ ಮಹಾವೀರರು ಧರ್ಮ ಪ್ರಚಾರಕರಂತೆಯೇ, ಒಬ್ಬ ಪ್ರಭಾವಿ ಸಂಘಟಕರೂ ಆಗಿದ್ದರೆಂದು ಹೇಳಲಾಗುತ್ತದೆ. ಅವನ ಮೊದಲಿನ ಹೆಸರು ನತಪುತ್ತ ವರ್ಧಮಾನ. ರಾಜ ಮನೆತನದಲ್ಲಿ ಬೆಳೆದವನು. ಯಾವ ಅವಶ್ಯಕತೆಗಳಿಗೂ ತೊಂದರೆ ಇದ್ದಿಲ್ಲ.  ಮದುವೆಯೂ ಆಗಿತ್ತು. ಹೆಂಡತಿ ಮತ್ತು ಒಬ್ಬ ಮಗಳೂ ಇದ್ದಳು. ಈ ರಾಜವೈಭವದಲ್ಲಿ ತೃಪ್ತಿಕಾಣದೆ, ಎಲ್ಲವನ್ನೂ ತ್ಯಾಗಮಾಡಿ ಒಂದು ಜೈನಮಠ ಸೇರಿದ. ತಪೋಜೀವನವನ್ನು ನಡೆಸದೆ ಆತ್ಮದ ಕಲ್ಮಷಗಳನ್ನು ಕಳೆದುಕೊಳ್ಳಲು ಸಾಧ್ಯವಿಲ್ಲವೆಂದು ಕಂಡುಕೊಂಡ. ಹನ್ನೆರಡು ವರ್ಷ ಕಠಿಣ ಧ್ಯಾನವನ್ನು ಮಾಡಿದ.  ತನ್ನ ಉಗ್ರಸಾಧನೆಯ ಪರಿಣಾಮವಾಗಿ ಕೇವಲವೆಂಬ ನಿರ್ವಾಣವು ಅವನಿಗೆ ಪ್ರಾಪ್ತವಾಯಿತು. ಆನಂತರ ತಾನಾಗಿಯೇ ಜನರನ್ನು ಕಂಡು ತಾನು ಕಂಡ ಸತ್ಯವನ್ನು ಬೋಧಿಸಲಾರಂಭಿಸಿದ. ಹೀಗೆ, ಮೂವತ್ತು ವರ್ಷಗಳ ಕಾಲ ಬೋಧನೆ ಹಾಗೂ ಜನಸಂಘಟನೆಯನ್ನು ಯಶಸ್ವಿಯಾಗಿ ಮಾಡಿದ.39 ಆ ದಿನಗಳಲ್ಲಿ ಸಮಾಜದಲ್ಲಿ ಹಿಂದೂ ಧರ್ಮ ಪ್ರಚಾರದಲ್ಲಿದ್ದರೂ, ಮಹಾವೀರರ ಸಂಘಟನಾ ಸಾಮರ್ಥ್ಯದಿಂದ ಮತ್ತು ತಮ್ಮ ಬೋಧನೆಗಳಿಂದ ಜೈನಧರ್ಮ ಪ್ರವರ್ತಕರಾಗಿ ಮಾರ್ಪಾಟು ಹೊಂದಿದರು. ಅವರ ಬೋಧನೆಗಳನ್ನು ನಂಬಿದವರು ಅವರ ಅನುಯಾಯಿಗಳಾದರು. ಮಹಾವೀರರ ಜನ ಸಂಘಟನೆ ಧರ್ಮದ ನೆಲೆಯಲ್ಲಿ ಆಯಿತು. ಆದರೆ ಅವರೊಬ್ಬ ಸಂಘಟಕರೆಂಬುದನ್ನು ಮರೆಯುವಂತಿಲ್ಲ.
 
ಅಡಿಟಿಪ್ಪಣಿಗಳು
22. ಸತೀಸ್ ಬಳೆಗಾರ - ಚಾಣಕ್ಯ-ಅರ್ಥಶಾಸ್ತ್ರ, ನೀತಿಸೂತ್ರ, ಸಕ್ಸಸ್ ಮಂತ್ರ, ಸ್ನೇಹ ಬುಕ್ ಹೌಸ್, ನಂ. 78/ಬಿ, 2ನೇ ಮಹಡಿ, ಎಸ್ಐಸಿ ಕಛೇರಿ ಎದುರು 24ನೇ ಮುಖ್ಯರಸ್ತೆ, 2ನೇ ಹಂತ, ಜೆಪಿನಗರ, ಬೆಂಗಳೂರು-78, 2015, ಅನುಕ್ರಮವಾಗಿ ಅಧ್ಯಾಯ, ಶ್ಲೋಕ ಮತ್ತು ಪುಟ; 8-11-88, 7-16-84, 7-4-81, 12-3-102, 12-7-103, 14-5-111, 14-8-112, 17-8-125.

23. ಪ್ರೊ.ಕೆ. ಭೈರಪ್ಪ - ವಿದುರ ನೀತಿ ಸಾರ, ಪೂಜಾ ಪುಸ್ತಕ ಭಂಡಾರ, 618, ರಾಜೇಶ್ವರಿ ಮಾರ್ಕೆಟ್, ಅವೆನ್ಯೂ ರಸ್ತೆ, ಬೆಂಗಳೂರು-2, 2004, ಪುಟಗಳು - 106, 112, 113, 129, 130, 141, 145. 

24. ಶೇಷ ನವರತ್ನ - ಜಾಗತಿಕ ಧರ್ಮಗಳು, ಸಮಾಜ ಪುಸ್ತಕಾಲಯ, ಧಾರವಾಡ, 1998, ಪು 77.

25. ಅದೇ ಪು 77.

26. ಪ್ರೊ. ರಾಜರಾಮಶಾಸ್ತ್ರಿ ಪು. 27

27. ಅದೇ ಪು 30.

28. ಅದೇ ಪು 31.

29. ಅದೇ ಪು 24.

30. ಸಯ್ಯದ್ ಅಬ್ದುಲ್ ಆಲಾ ಮೌದೂದಿ - ಖುತ್ ಬಾತ್ - ಇಸ್ಲಾಮಿನ್ ಬುನಾದಿಗಳು ಶಾಂತಿ ಪ್ರಕಾಶನ, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು - 1, 2008, ಪು 169. 

31. ಅದೇ, ವಿವರಗಳಿಗೆ ನೋಡಿ ಪು 203-206.

32. ಪ್ರೊ. ರಾಜಾರಾಮ ಶಾಸ್ತ್ರಿ ಪು. 48. 

33. ಶೇಷ ನವರತ್ನ - ಜಾಗತಿಕ ಧರ್ಮಗಳು, ಪು 211. 

34. ವಿವರಗಳಿಗೆ ನೋಡಿ. ಪ್ರೊ. ರಾಜಾರಾಮ ಶಾಸ್ತ್ರಿ, ಪು 49-51.

35. ವಿವರಗಳಿಗೆ ನೋಡಿ ಪ್ರೊ. ರಾಜಾರಾಮ ಶಾಸ್ತ್ರಿ, ಪು 55-57.

36. ಶೇಷ ನವರತ್ನ, ಪು 106.

37. ಶೇಷ ನವರತ್ನ, ಪು 106-107.

38. ಡಾ. ಹೆಚ್. ರಾಮಚಂದ್ರಸ್ವಾಮಿ - ಲೋಕ ಧರ್ಮಗಳು, ಶ್ರೀರಾಮಕೃಷ್ಣ ಆಶ್ರಮ, ಯಾದವಗಿರಿ, ಮೈಸೂರು, 2014, ಪು.164.
​
39. ಅದೇ ಪು 158.
 
...............................ಮುಂದುವರೆಯುತ್ತದೆ...............................

0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture

    Social Work Learning Academy

    Join WhatsApp Channel

    Niruta Publications

    Social Work Foot Prints

    Leaders Talk

    Ramesha Niratanka

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com