ಕರ್ನಾಟಕ ನಾಗರಿಕ ಸೇವಾ ಖಾತರಿ ಯೋಜನೆ ಅಧಿನಿಯಮ 2011 ಅಥವಾ ಸಕಾಲ ಯೋಜನೆಯು ಏಪ್ರಿಲ್ 2, 2012ರಿಂದ ಕರ್ನಾಟಕದಾದ್ಯಂತ ಜಾರಿಗೆ ಬಂದಿದೆ. ನಾಗರಿಕರಿಗೆ ವಿಳಂಬವಿಲ್ಲದೆ ಸರ್ಕಾರಿ ಸೇವೆಗಳನ್ನು ಒದಗಿಸುವ ದೃಷ್ಟಿಯಿಂದ ಜಾರಿಗೆ ತಂದಂತಹ ಕರ್ನಾಟಕ ಸರ್ಕಾರದ ಮಹತ್ತರ ಯೋಜನೆ ಇದಾಗಿದೆ. ಹೊಸದೊಂದು ವೃತ್ತಿ ಸಂಸ್ಕೃತಿ ರೂಪಿಸಬೇಕೆಂಬುದೇ ಈ ಯೋಜನೆಯ ಉದ್ದೇಶವಾಗಿದೆ. ಆದಾಯ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ, ಬಸ್ ಪಾಸ್, ಮರು ಮೌಲ್ಯಮಾಪನ, ಚಾಲನಾ ಕಲಿಕಾ ಪರವಾನಿಗೆ ಸೇರಿದಂತೆ ನಿತ್ಯ ಜೀವನದಲ್ಲಿ ಅಗತ್ಯವಾದ ಪ್ರಮಾಣ ಪತ್ರಗಳನ್ನು ಸರ್ಕಾರಿ ಕಚೇರಿಗಳಿಂದ ನಿಗದಿತ ದಿನದೊಳಗೆ ನಾಗರಿಕರಿಗೆ ನೀಡುವ ಸೇವೆಯೇ ಸಕಾಲ ಅಥವಾ ಕರ್ನಾಟಕ ನಾಗರಿಕ ಸೇವಾ ಖಾತರಿ ಯೊಜನೆ.
ನಾಗರಿಕರಿಗೆ ವಿವಿಧ ರೀತಿಯ ಸೇವೆಗಳನ್ನು ಪೂರೈಸುವ 11 ಇಲಾಖೆಗಳಾದ ಕಂದಾಯ, ಶಿಕ್ಷಣ, ಆರ್ಥಿಕ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ, ಸ್ಥಳೀಯ ಸಂಸ್ಥೆಗಳು, ಕಾರ್ಮಿಕ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಒಟ್ಟು 151 ಸೇವೆಗಳನ್ನು ಈ ಕಾಯ್ದೆಯ ವ್ಯಾಪ್ತಿಯಲ್ಲಿ ತರಲಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ? ಮೇಲೆ ಸೂಚಿಸಿದ ಇಲಾಖೆಗಳಲ್ಲಿ ಸೇವೆಯನ್ನು ಪಡೆಯಲು ಬಯಸುವ ನಾಗರಿಕರು ಸಂಬಂಧಿತ ದಾಖಲೆಗಳು ಮತ್ತು ನಿಗದಿ ಪಡಿಸಿದ ಶುಲ್ಕದೊಂದಿಗೆ ಅರ್ಜಿಯನ್ನು ಸಂಬಂಧಪಟ್ಟ ಇಲಾಖೆಯಲ್ಲಿ ಸಲ್ಲಿಸಬೇಕು. ಅಂತರ್ಜಾಲದ ಮುಖಾಂತರವೂ ನಾಗರಿಕರು ಈ ಕಾಯ್ದೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಅರ್ಜಿಯನ್ನು ಸಲ್ಲಿಸಿದ ಕೂಡಲೇ ಅರ್ಜಿಯನ್ನು ಸಲ್ಲಿಸಿದವರಿಗೆ ರಶೀದಿಯನ್ನು ನೀಡಲಾಗುತ್ತದೆ. ಈ ರಶೀದಿಯಲ್ಲಿ 15 ಅಂಕಿಗಳ ಗುರುತಿನ ಸಂಖ್ಯೆಯೊಂದನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸಿದ ಕೂಡಲೇ ನಾಗರಿಕರು ರಶೀದಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಅರ್ಜಿದಾರರು ತಮ್ಮ ಮೊಬೈಲ್ ಸಂಖ್ಯೆ ನೀಡಿದ್ದಲ್ಲಿ ಅರ್ಜಿದಾರರಿಗೆ ಎಸ್.ಎಂ.ಎಸ್ ನ ಮುಖಾಂತರ ಅರ್ಜಿಯ ಪ್ರಗತಿಯನ್ನು ಕುರಿತು ಮಾಹಿತಿಯನ್ನು ನೀಡಲಾಗುತ್ತಿರುತ್ತದೆ. ದಂಡ ವಿವರ: ಪ್ರತಿದಿನ ನಾಗರಿಕರಿಂದ ಸ್ವೀಕರಿಸಲಾಗುವ ಅರ್ಜಿಗಳ ಮಾಹಿತಿಯನ್ನು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಪಡೆಯಲಾಗುವುದು. ಇಲಾಖೆಯ ಅಧಿಕಾರಿಗಳು ಸೇವೆ ಒದಗಿಸುವಲ್ಲಿ ವಿಳಂಭವಾದರೆ ಅಥವಾ ಲೋಪದೋಷಗಳು ಉಂಟಾದರೆ ಅಧಿಕಾರಿಗಳು ದಂಡ ಪಾವತಿಸಬೇಕಾಗುತ್ತದೆ. ಇಲ್ಲವಾದಲ್ಲಿ 20 ರೂ. ನಂತೆ ಗರಿಷ್ಠ 500 ರೂ.ಗಳ ಮಿತಿಯವರೆಗೆ ಸಂಬಂಧಿತ ಇಲಾಖೆಯ ನೌಕರರು ನಾಗರಿಕರಿಗೆ ಪರಿಹಾರ ಶುಲ್ಕ ನೀಡಬೇಕಾಗುತ್ತದೆ. ನಾಗರಿಕರಿಗೆ ವರದಾನವಾಗಿರುವ ಈ ಕಾಯಿದೆಯಿಂದಾಗಿ ಇನ್ನು ಸರ್ಕಾರಿ ಇಲಾಖೆಯ ಅಧಿಕಾರಿಗಳು ನಾಗರಿಕರಿಗೆ ಸೇವೆಯನ್ನು ಒದಗಿಸಲು ವಿಳಂಬ ಮಾಡುವಂತಿಲ್ಲ. ಸಕಾಲದಲ್ಲಿ ಸೇವೆ ನೀಡಬೇಕು. ಇಲ್ಲವಾದಲ್ಲಿ ದಂಡ ತೆರಬೇಕಾಗುತ್ತದೆ. ಮಹತ್ವಾಕಾಂಕ್ಷೆಯ ಕಾನೂನು ಇದೀಗ ಜಾರಿಗೊಂಡಿದ್ದು ರಾಜ್ಯಾದ್ಯಂತ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಸಮಯ ಬದ್ಧತೆ ತೋರುವುದು ಕಡ್ಡಾಯವಾಗಿದೆ. ಲಂಚ ಕೊಡದ ನಾಗರಿಕರನ್ನು ನಿಕೃಷ್ಟವಾಗಿ ನೋಡುವ, ಕೈ ಬೆಚ್ಚಗೆ ಮಾಡದವರ ಕಡತ ಇತ್ಯರ್ಥಗೊಳಿಸದ ಸರ್ಕಾರಿ ಇಲಾಖೆಯ ಅಧಿಕಾರಿಗಳು ಇನ್ನು ಮೇಲಾದರೂ ಎಚ್ಚೆತ್ತುಕೊಳ್ಳುವರೇ? ಬಹಳಷ್ಟು ನಾಗರಿಕರು ಸರ್ಕಾರಿ ಕಚೇರಿಗಳಿಗೆ ಬರುವುದು ಆದಾಯ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ, ಬಸ್ ಪಾಸ್, ಪಹಣಿ, ಮನೆಕಟ್ಟಲು ನಕಾಶೆ ಮುಂತಾದುವುಗಳ ದಾಖಲೆ ಪಡೆಯಲು ಜನರು ಪಡುವ ಪಾಡು ಹೇಳಲು ಅಸಾಧ್ಯ. ಪ್ರತಿ ದಾಖಲೆಗೂ ಸರ್ಕಾರಿ ಶುಲ್ಕ ನಿಗದಿಯಾಗಿರುವಂತೆ ಲಂಚದ ದರವೂ ನಿಗದಿತವಾಗಿಬಿಡುತ್ತದೆ. ಸಿಬ್ಬಂದಿಯ ಅನುಚಿತ ವರ್ತನೆಗಳಿಂದ ಬೇಸತ್ತ ನಾಗರಿಕರು ಕೇಳಿದಷ್ಟು ಹಣ ನೀಡಿ ತಮ್ಮ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದುದು ಸರ್ವೇ ಸಾಮಾನ್ಯವಾಗಿದೆ. ಲಂಚ ಕೊಟ್ಟರೆ ಕೆಲಸ ಇಲ್ಲವಾದರೆ ಅಲೆದಾಡು ಎಂಬುದೇ ಅಧಿಕಾರಿಗಳ ಧ್ಯೇಯ ವಾಕ್ಯವಾಗಿದೆ. ಇಂತಹ ಜಡ್ಡು ಹಿಡಿದ ವ್ಯವಸ್ಥೆಗೆ ಕಾಯಕಲ್ಪ ನೀಡಲು ಕರ್ನಾಟಕ ನಾಗರೀಕ ಸೇವಾ ಖಾತರಿ ಯೋಜನೆ ಅಥವಾ ಸಕಾಲ ಯೋಜನೆಯನ್ನು ರೂಪಿಸಲಾಗಿದೆ. ಅನೇಕ ರಾಜ್ಯಗಳಲ್ಲಿ ಇದು ಯಶಸ್ವಿಯಾಗಿದೆ. ನಮ್ಮ ರಾಜ್ಯದ 30 ಜಿಲ್ಲೆಗಳಲ್ಲೂ ಅನುಷ್ಠಾನಕ್ಕೆ ಬಂದಿದೆ. ಲಂಚ ಪಡೆಯುವ ಅಧಿಕಾರಿಗಳ ಕಪಿಮುಷ್ಟಿಯಿಂದ ಹೊರಬರಲು ನಾಗರಿಕರಿಗೆ ಇದೊಂದು ಉತ್ತಮ ಅವಕಾಶ. ವೆಂಕಟೇಶ್ .ಕೆ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
30,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGnIRATHANKA CITIZENS CONNECTJOB |
HR SERVICES
OTHER SERVICES |
NIRATHANKAPOSHOUR OTHER WEBSITESSubscribe |