Niruta Publications
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
Niruta Publications

ಅಧ್ಯಾಯ-2,  ಸಮುದಾಯದ ಪ್ರಕಾರಗಳು

7/24/2017

0 Comments

 
Picture
ಸಮುದಾಯ ಎಂದರೆ ಒಂದು ಜನಸಮೂಹ. ಅವರು ಒಂದು ಭೌಗೋಲಿಕ ಪ್ರದೇಶದಲ್ಲಿ ಒಕ್ಕಟ್ಟಾಗಿ ಜೀವಿಸುತ್ತಾರೆ. ಆ ಸಮುದಾಯದ ಎಲ್ಲಾ ಸದಸ್ಯರಿಗೆ ಅನ್ವಯವಾಗುವಂತೆ, ತಮ್ಮದೇ ಆದ ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ಹೊಂದಿದವರಾಗಿರುತ್ತಾರೆ. ಅವುಗಳಿಗೆ ತಕ್ಕಂತೆ ಹಲವಾರು ಪದ್ಧತಿಗಳನ್ನು ಸೃಷ್ಟಿಸಿಕೊಂಡು, ಮೌಲ್ಯಗಳನ್ನು ರೂಢಿಸಿಕೊಂಡು, ಇತರರಿಗಿಂತ ಭಿನ್ನವಾದ ಒಂದು ಜೀವನಪದ್ಧತಿಯನ್ನು ರೂಪಿಸಿಕೊಂಡಿರುತ್ತಾರೆ. ಅವರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ. ತಮ್ಮ ಸಾಮೂಹಿಕ ಜೀವನಕ್ಕೆ ಒತ್ತುಕೊಟ್ಟು ಒಂದು ಶಾಶ್ವತತೆ-ಸ್ಥಿರತೆಯನ್ನು ಸ್ಥಾಪಿಸಿಕೊಂಡಿರುತ್ತಾರೆ. ತಮ್ಮ ಜನರ ಮೇಲೆ ಪ್ರತ್ಯಕ್ಷ-ಪರೋಕ್ಷ ನಿಯಂತ್ರಣವನ್ನು ಸಾಧಿಸಿಕೊಂಡಿರುತ್ತಾರೆ. ತಾವೆಲ್ಲಾ ಒಂದೇ ಗುಂಪಿನ, ಒಂದೇ ಜನಾಂಗದ ಸದಸ್ಯರು ಎಂಬ ಭಾವನಾತ್ಮಕ ಸಂಬಂಧವನ್ನು ಅಭಿವೃದ್ಧಿಪಡಿಸಿಕೊಂಡಿರುತ್ತಾರೆ. ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ ಒಂದು ರಾಚನಿಕ ವ್ಯವಸ್ಥೆಯನ್ನು ತಮ್ಮದನ್ನಾಗಿಸಿಕೊಂಡಿರುತ್ತಾರೆ. ಇದು ಒಂದು ಸಮುದಾಯದ ಪರಿಕಲ್ಪನೆ.
ಇಂತಹ ಸಮುದಾಯದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಭೌಗೋಲಿಕ, ಕ್ರಿಯಾತ್ಮಕ, ಭಾವನಾತ್ಮಕ, ಜನಾಂಗೀಯ ಅಂಶಗಳನ್ನು ಆಧರಿಸಿ ಸಮುದಾಯದಲ್ಲಿ ಅನೇಕ ಪ್ರಕಾರಗಳನ್ನು ಗುರುತಿಸಬಹುದಾಗಿದೆ.

ಪ್ರೊ. ಮುರ್ರೇ ಜಿ. ರೋಸ್ ಅವರು ಇಂತಹ ಎರಡು ಪ್ರಕಾರದ ಸಮುದಾಯಗಳನ್ನು ಗುರುತಿಸಿದ್ದಾರೆ. ಮೊದಲನೆಯದು ಭೌಗೋಲಿಕ ಸಮುದಾಯ. ಇಲ್ಲಿ ಸದಸ್ಯರು ಒಂದು ನಿಗದಿತ ಭೌಗೋಲಿಕ ಪ್ರದೇಶದಲ್ಲಿ ವಾಸಮಾಡುತ್ತಾರೆ. ಅದಕ್ಕೆ ಗ್ರಾಮ, ಪಟ್ಟಣ, ನಗರ, ನೆರೆಹೊರೆ, ಜಿಲ್ಲೆ, ರಾಜ್ಯ, ದೇಶ, ಪ್ರಪಂಚ, ಈ ಘಟಕಗಳ ಉದಾಹರಣೆಯನ್ನು ಕೊಡುತ್ತಾರೆ. ಈ ಎಲ್ಲಾ ಘಟಕಗಳು ಒಂದಲ್ಲ ಒಂದು ಭೌಗೋಲಿಕ ವ್ಯಾಪ್ತಿಗೆ ಸಂಬಂಧಪಟ್ಟಿವೆ. ಕೆಲವು ವ್ಯಾಪ್ತಿಯಲ್ಲಿ ಚಿಕ್ಕವು, ಇನ್ನು ಕೆಲವು ವ್ಯಾಪ್ತಿಯಲ್ಲಿ ದೊಡ್ಡವು. ಭಾರತೀಯ ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುವುದಾದರೆ ಹಳ್ಳಿ, ಊರು, ಹಳ್ಳಿಗೊಂಚಲು, ಫಿರ್ಕಾ, ತಾಲೂಕು, ಇತ್ಯಾದಿ ಘಟಕಗಳನ್ನೂ ಈ ಪಟ್ಟಿಗೆ ಸೇರಿಸಬಹುದು. ಈ ಹಿಂದೆ ನಾವು ನೋಡಿದ ಹಾಗೆ ಸಮಯ-ಸಂದರ್ಭಕ್ಕೆ ತಕ್ಕಂತೆ ಸಮುದಾಯದ ಅರ್ಥವ್ಯಾಪ್ತಿ ಬದಲಾಗುತ್ತಾ ಹೋಗುತ್ತದೆ.

ಸಾಮಾನ್ಯ ಅರ್ಥದಲ್ಲಿ ಒಂದು ಹಳ್ಳಿ, ಗ್ರಾಮ, ಊರು, ಚಿಕ್ಕ ಪಟ್ಟಣ ಮುಂತಾದುವುಗಳನ್ನು ಸಮುದಾಯ ಎಂದು ಕರೆಯುವುದು ವಾಡಿಕೆ. ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವಾಗ ಒಂದೇ ತರಹದ ಹಳ್ಳಿಗಳನ್ನು ಕೂಡಿಸಿ ಹಳ್ಳಿಗೊಂಚಲು, ವಲಯ, ಫಿರ್ಕಾಗಳೆಂದು ಕರೆದು, ಅವುಗಳನ್ನು ಒಂದು ಸಮುದಾಯ-ಒಂದು ಘಟಕ ಎಂದು ಗುರುತಿಸಿ, ಅಲ್ಲಿನ ಸಮಸ್ಯೆಗಳಿಗೆ ತಕ್ಕಂತೆ, ಯೋಜನೆಗಳನ್ನು ರೂಪಿಸುವುದೂ ಒಂದು ಪದ್ಧತಿ. ಇದೇ ತತ್ವವನ್ನು ಇನ್ನೂ ದೊಡ್ಡ ಘಟಕಗಳಾದ ಜಿಲ್ಲೆ, ರಾಜ್ಯ, ಅಂತರಾಜ್ಯ ಹಾಗೂ ದೇಶಕ್ಕೂ ಅನ್ವಯಿಸುವುದುಂಟು. ಇಡೀ ವಿಶ್ವದ ಸಮಸ್ಯೆಗಳನ್ನು ಚರ್ಚಿಸುವಾಗ, ಯೋಚಿಸುವಾಗ ವಿಶ್ವ ಸಮುದಾಯ ಎಂದು ಪ್ರಸ್ಥಾಪಿಸುವುದುಂಟು. ಹೀಗೆ ಸಮುದಾಯದ ಭೌಗೋಲಿಕ ವ್ಯಾಪ್ತಿಯನ್ನು ಆಧಾರವಾಗಿಟ್ಟುಕೊಂಡು ಸಮುದಾಯಗಳನ್ನು ಗುರುತಿಸುತ್ತಾರೆ.

ಪ್ರೊ. ರೋಸ್ ಗುರುತಿಸುವ ಇನ್ನೊಂದು ಸಮುದಾಯದ ಪ್ರಕಾರವೆಂದರೆ ಕ್ರಿಯಾತ್ಮಕ ಸಮುದಾಯಗಳು. ಸಮುದಾಯದ ಸದಸ್ಯರು ತಮ್ಮ ಸಾಮಾನ್ಯ ಅಭಿರುಚಿ, ವೃತ್ತಿ, ಉದ್ದೇಶ, ಒಟ್ಟುಗೂಡುವ ಪ್ರವೃತ್ತಿ ಮುಂತಾದ ಅಂಶಗಳ ಆಧಾರದ ಮೇಲೆ ಜನರು ಒಟ್ಟುಗೂಡಿ ಜೀವಿಸುತ್ತಾರೆ, ಇಲ್ಲವೇ ಒಟ್ಟು ಗೂಡಿ ಕೆಲಸ ಮಾಡುತ್ತಾರೆ. ಇಂತಹ ಸಮುದಾಯಗಳು ಕ್ರಿಯಾತ್ಮಕ ಸಮುದಾಯಗಳು. ಕೃಷಿ, ಶಿಕ್ಷಣ, ಧರ್ಮ, ವಯಸ್ಕರ ಶಿಕ್ಷಣ, ಮನರಂಜನೆ, ವಸತಿ ಇನ್ನೂ ಮುಂತಾದ ಕ್ಷೇತ್ರಗಳ ಉದಾಹರಣೆಯನ್ನು ಅವರು ಕೊಡುತ್ತಾರೆ. ಇಲ್ಲಿ ಸಮುದಾಯದ ಸದಸ್ಯರನ್ನು ಭೌಗೋಲಿಕ ವ್ಯಾಪ್ತಿಯಲ್ಲಿ ಬರುವ ಜನರನ್ನು ಹೆಚ್ಚಾಗಿ ಗಮನಿಸದೆ ಅವರು ಮಾಡುವ ಕೆಲಸ, ಅವರ ಪ್ರವೃತ್ತಿ, ಅವರ ಒಟ್ಟುಗೂಡುವಿಕೆಯ ಉದ್ದೇಶ, ಇಂತಹ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಕೃಷಿ ಮಾಡುವ ರೈತರು ಇದಕ್ಕೆ ಒಂದು ಉದಾಹರಣೆ. ಈ ರೈತರು ಒಂದೇ ಭೌಗೋಲಿಕ ಸಮುದಾಯಕ್ಕೆ ಸೇರಿರಬಹುದು, ಇಲ್ಲವೆ ವಿಭಿನ್ನ ಭೌಗೋಲಿಕ ಸಮುದಾಯಗಳಿಗೆ ಸೇರಿರಬಹುದು. (ಹಳ್ಳಿಗಳನ್ನು, ಗ್ರಾಮಗಳನ್ನು, ಊರುಗಳನ್ನು ಇತ್ಯಾದಿ ಪ್ರತಿನಿಧಿಸುತ್ತಿರಬಹುದು.) ಹಾಗಾಗಿ ನಾವು ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ, ರೈತರ ಬಗ್ಗೆ ಚರ್ಚಿಸುವಾಗ, ಆ ರೈತರು ಯಾವೆಲ್ಲಾ ಭೌಗೋಲಿಕ ಸಮುದಾಯಗಳ ವ್ಯಾಪ್ತಿಗೆ ಸೇರಿದ್ದಾರೆ ಎಂದು ಸ್ಪಷ್ಟ ಪಡಿಸುವುದು ಅವಶ್ಯವಾಗುತ್ತದೆ. ಹಾಗಾದಾಗ ಮಾತ್ರ ಅಭಿವೃದ್ಧಿ ಯೋಜನೆಗಳು ಅರ್ಹ ಸಮುದಾಯಗಳಿಗೆ, ಅರ್ಹ ಫಲಾನುಭವಿಗಳಿಗೆ ಅನ್ವಯವಾಗುತ್ತವೆ.

ಪ್ರೊ. ರೋಸ್ ಅವರು ಕ್ರಿಯಾತ್ಮಕ ಸಮುದಾಯಗಳ ಬಗ್ಗೆ ಮಾತನಾಡುವಾಗ, ಕಿಬುಟ್ಸ್ ಬಗ್ಗೆ ಹೇಳುತ್ತಾರೆ. ಕಿಬುಟ್ಸ್ ಅಂದರೆ ಇಸ್ರೇಲಿನ ಸಮುದಾಯಿಕ ವ್ಯವಸಾಯ ಕೇಂದ್ರ ವ್ಯವಸ್ಥೆ. ಈ ಸಮುದಾಯಗಳಲ್ಲಿ ಸಮುದಾಯಿಕ ಸದಸ್ಯರು ಒಟ್ಟುಗೂಡಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಉತ್ಪಾದನೆ-ಆದಾಯಗಳನ್ನು ಸಮನಾಗಿ ಹಂಚಿಕೊಳ್ಳುತ್ತಾರೆ. ಅದರಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಮುದಾಯಗಳನ್ನು ಅವರು ಉದಾಹರಿಸುತ್ತಾರೆ.1

ಅದರಂತೆಯೇ ಪ್ರೊ. ಆರ್ಥರ್ ಡನ್ಹ್ಯಾಮ್ ಅವರು ವಿವಿಧ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಸಮುದಾಯಗಳನ್ನು ಸ್ತೂಲವಾಗಿ ನಾಲ್ಕು ವಿಭಾಗಗಳಲ್ಲಿ ವಿಂಗಡಿಸುತ್ತಾರೆ.
  1. ಜನಸಂಖ್ಯೆಯ ಆಧಾರದ ಮೇಲೆ ರಚನೆಯಾಗಿರುವ ಸಮುದಾಯಗಳು-ಸಣ್ಣ ಹಳ್ಳಿ, ದೊಡ್ಡ ನಗರ, ಇತ್ಯಾದಿ.
  2. ಆರ್ಥಿಕ ಚಟುವಟಿಕೆಗಳ ಆಧಾರದ ಮೇಲೆ ನಿರ್ಮಾಣಗೊಂಡಿರುವ ಸಮುದಾಯಗಳು-ಗಣಿಗಾರಿಕೆ ಪಟ್ಟಣ, ಮೀನುಗಾರರ ಗ್ರಾಮ, ಇತ್ಯಾದಿ.
  3. ಸರಕಾರದ ಘಟಕಗಳ ಜೊತೆಗೆ ಬೆಳೆಸಿಕೊಂಡ ಸಂಬಂಧಗಳ ಆಧಾರದ ಮೇಲೆ ನಿರ್ಧಾರಿತವಾದ ಸಮುದಾಯಗಳು-ಪಟ್ಟಣಗಳು, ನಗರ ಪ್ರದೇಶದ ವಲಯಗಳು. (ಬಹುಶಃ ಇವು ನಮ್ಮ ದೇಶದಲ್ಲಿ ನೋಡುವ ಕಂದಾಯ ವಿಭಾಗಗಳಿಗೆ ಸಮಾನಾಂತರವಾದ ವಿಭಾಗಗಳಿರಬಹುದು).
  4. ಜನಾಂಗೀಯ ಅಂಶದ ಆಧಾರದ ಮೇಲೆ ನಿರ್ಧಾರಗೊಂಡ ಸಮುದಾಯಗಳು-ಚೈನಾ ಪಟ್ಟಣ (ಬಹುಶಃ ಚೈನಾ ದೇಶದಿಂದ ಬಂದಂತಹವರೆಲ್ಲರೂ ಒಂದೆಡೆ ನೆಲೆಸಿರುವ ಜಾಗ), ಗ್ರೀಕ್ ವಿಭಾಗ (ಗ್ರೀಕ್ ದೇಶದಿಂದ ಬಂದವರು ನೆಲೆಸಿರುವ ಜಾಗ), ಹೊಬೊಹೇಮಿಯ (ಅಲೆಮಾರಿ ಕೆಲಸಗಾರರು ನೆಲೆಸುವ ಜಾಗ) ಇತ್ಯಾದಿ.
ಅವರು ಇನ್ನೂ ಮುಂದುವರೆದು ಸಮಾಜದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಆರ್ಥಿಕ, ಸಾಮಾಜಿಕ ಅಥವಾ ಸಾಂಸ್ಕೃತಿಕ ಅಂಶಗಳನ್ನು ಆಧರಿಸಿ ಈ ಕೆಳಕಂಡ ಸಮುದಾಯದ ಪ್ರಕಾರಗಳ ಒಂದು ವಿಸ್ತೃತ ಪಟ್ಟಿಯನ್ನೇ ಕೊಡುತ್ತಾರೆ.
  1. ಕೈಗಾರಿಕೆ, ವಾಣಿಜ್ಯ, ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಆವಾಸಸ್ಥಾನವಾಗಿರುವ ಮಹಾನಗರಗಳು.
  2. ಕೈಗಾರಿಕಾ ನಗರಗಳು, ಪಟ್ಟಣಗಳು ಹಾಗೂ ಗ್ರಾಮಗಳು-ಗಣಿಗಾರಿಕೆ, ಬಂದರು, ಮೀನುಗಾರಿಕೆ, ಉಕ್ಕು ತಯಾರಿಕೆ, ಆಟೊಮೊಬೈಲ್, ಬೂಟುಗಳು, ಪೀಠೋಪಕರಣಗಳ ತಯಾರಿಕೆ ಮುಂತಾದ ಚಟುವಟಿಕೆಗಳಿಂದ ಕೂಡಿದವು.
  3. ವಾಣಿಜ್ಯ ನಗರಗಳು, ಪಟ್ಟಣಗಳು, ಗ್ರಾಮಗಳು ಮುಂತಾದ ವ್ಯಾಪಾರಿ ಕೇಂದ್ರಗಳು.
  4. ರಾಷ್ಟ್ರೀಯ, ರಾಜ್ಯಗಳ ಕೇಂದ್ರ ನಗರಗಳು. ಒಳನಾಡಿನ ಕಂದಾಯ ಕೇಂದ್ರಗಳು.
  5. ವಿಶ್ವವಿದ್ಯಾಲಯ, ಮಹಾವಿದ್ಯಾಲಯ, ಶೈಕ್ಷಣಿಕ ವಿದ್ಯಾಲಯ, ಇತರೆ ಶಿಕ್ಷಣ ಸಂಸ್ಥೆಗಳನ್ನೊಳಗೊಂಡ ನಗರಗಳು-ಗ್ರಾಮಗಳು.
  6. ಒಂದು ಆಸ್ಪತ್ರೆ, ವೈದ್ಯಕೀಯ ಕೇಂದ್ರ, ಆರೋಗ್ಯಧಾಮ ಇತ್ಯಾದಿ ಸಂಘಗಳನ್ನು ಹೊಂದಿದ ಪಟ್ಟಣ-ಗ್ರಾಮಗಳು.
  7. ದೊಡ್ಡಪಟ್ಟಣಗಳ ಜೊತೆಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡಿರುವ ಉಪನಗರಗಳು-ಕೇಂದ್ರಗಳು.
  8. ಗಿರಿಧಾಮಗಳು, ಸಾಗರ ಧಾಮಗಳು, ರಾಷ್ಟ್ರೀಯ ಉದ್ಯಾನಗಳಿಗೆ ಹತ್ತಿಕೊಂಡಂತೆ ಇರುವ ಕೇಂದ್ರಗಳು, ಇತ್ಯಾದಿ ಮನರಂಜನಾ ಕೇಂದ್ರಗಳು, ಪಟ್ಟಣಗಳು.
  9. ಕೃಷಿ ಮತ್ತು ಕೃಷಿ ಮಾರುಕಟ್ಟೆಗಳನ್ನು ಒದಗಿಸುವ ಕೇಂದ್ರಗಳು, ನಗರಗಳು, ಪಟ್ಟಣಗಳು ಇತ್ಯಾದಿ.
  10. ಶಾಲೆ, ಪ್ರಾರ್ಥನಾಮಂದಿರ, ದೇವಸ್ಥಾನ, ಬೃಹತ್ತಾದ ಅಂಗಡಿಗಳು, ಇಂಧನ ಕೇಂದ್ರಗಳು ಮುಂತಾದವುಗಳನ್ನೊಳಗೊಂಡ ಒಳನಾಡ ಸಮುದಾಯಗಳು.
  11. ಧಾರ್ಮಿಕ ಕೇಂದ್ರಗಳು, ಕಲಾ ಗ್ರಾಮಗಳು, ಸಹಕಾರಿ ಗ್ರಾಮಗಳು ಮುಂತಾದ ತಾತ್ವಿಕ ಹಿನ್ನಲೆಯಲ್ಲಿ ರೂಪಗೊಂಡಂತಹ ತಾತ್ವಿಕ ಸಮುದಾಯಗಳು.2
ಪ್ರೊ. ಕೆ.ಡಿ. ಗಂಗ್ರಾಡೆಯವರು, ಸಮುದಾಯದ ಪ್ರಕಾರಗಳ ಬಗ್ಗೆ ಮಾತನಾಡುವಾಗ, ಭಾರತೀಯ ಸಮಾಜವನ್ನು ಗಮನದಲ್ಲಿಟ್ಟುಕೊಂಡು ಮೂರು ತರಹದ ಸಮುದಾಯಗಳನ್ನು ಗುರುತಿಸಿದ್ದಾರೆ.

ಜಾತಿ-ಪಂಥ-ಧರ್ಮಗಳ ಆಧಾರದ ಮೇಲೆ ರೂಪಗೊಂಡ ಸಮುದಾಯಗಳು:- ನಮಗೆಲ್ಲಾ ತಿಳಿದಿರುವಂತೆ ಭಾರತೀಯ ಸಮಾಜ ಜಾತಿ-ಪಂಥ-ಜನಾಂಗ-ಧರ್ಮಗಳ ಆಧಾರದ ಮೇಲೆ ವಿಭಜನೆಗೊಂಡಿದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನಾಂಗೀಯ ಸಮುದಾಯಗಳಿವೆ. ವ್ಯಕ್ತಿಗಳ ಗುಣ ಮತ್ತು ಅವರು ಮಾಡುವ ಕರ್ಮಗಳ ಆಧಾರದ ಮೇಲೆ ಸ್ಥೂಲವಾಗಿ ನಾಲ್ಕು ಪ್ರಮುಖ ಗುಂಪುಗಳನ್ನು ಗುರುತಿಸಿದರೂ, ಆ ಪ್ರಕ್ರಿಯೆ ಅಲ್ಲಿಗೆ ನಿಲ್ಲದೆ, ನೂರಾರು ಜಾತಿಗಳಾಗಿ-ಜನಾಂಗಗಳಾಗಿ-ಪಂಥಗಳಾಗಿ ರೂಪಗೊಂಡಿವೆ. ಸಮುದಾಯದಲ್ಲಿ ನೋಡುವ ಎಲ್ಲಾ ಲಕ್ಷಣಗಳು ಈ ಜಾತಿ-ಪಂಥಗಳಲ್ಲಿ ಕಾಣಸಿಗುತ್ತವೆ. ಹಾಗಾಗಿ ಈ ಜಾತಿ-ಜನಾಂಗ-ಪಂಥಗಳು ಸಮುದಾಯಗಳೆಂದೇ ಕರೆಯಲ್ಪಡುತ್ತಿವೆ.

ಇಂತಹ ಸಮುದಾಯದ ಸದಸ್ಯತ್ವ ವ್ಯಕ್ತಿಗಳಿಗೆ ಅವರ ಹುಟ್ಟಿನಿಂದಲೇ ಬರುತ್ತದೆ. ಮದುವೆ, ಮುಂಜಿ, ಇತ್ಯಾದಿ ಕಾರ್ಯಕ್ರಮಗಳು, ಹಬ್ಬ-ಹುಣ್ಣಿಮೆ, ತೇರು-ಜಾತ್ರೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ತಮ್ಮ ತಮ್ಮ ಸಮುದಾಯಗಳಲ್ಲೇ ಮಾಡಿಕೊಳ್ಳುವುದು ಹೆಚ್ಚು. ಹಾಗಾಗಿ ತಾಯಿ-ತಂದೆ, ಗಂಡ-ಹೆಂಡತಿ, ಅಣ್ಣ-ತಮ್ಮ, ಅಕ್ಕ-ತಂಗಿ, ಅತ್ತೆ-ಮಾವ, ಹಿರಿಯ-ಗೆಳೆಯ, ಬಂಧು-ಬಳಗ ಮುಂತಾದ ಸಂಬಂಧಗಳು ಆಯಾ ಸಮುದಾಯಕ್ಕೇ ಸೀಮಿತಗೊಂಡಿರುತ್ತವೆ. ತಮ್ಮ ತಮ್ಮ ಸಮುದಾಯಕ್ಕೆ ಗುರುಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಶಿಕ್ಷಣ ಸಂಸ್ಥೆಗಳನ್ನು, ಸೇವಾ ಸಂಸ್ಥೆಗಳನ್ನು, ಅನುದಾನ ಸಂಸ್ಥೆಗಳನ್ನು, ವಿದ್ಯಾರ್ಥಿ ನಿಲಯಗಳನ್ನು, ಆಸ್ಪತ್ರೆಗಳನ್ನು ಇನ್ನೂ ಮುಂತಾದ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿಕೊಂಡು, ತಮ್ಮ ಸಮುದಾಯದ ಸದಸ್ಯರ ಪ್ರಗತಿಗೆ ಶ್ರಮಿಸುತ್ತಾರೆ. ಪರಿಣಾಮವಾಗಿ ಆಯಾ ಸಮುದಾಯಗಳ ಸದಸ್ಯರು ತಮ್ಮ ಶಿಕ್ಷಣ, ಕೆಲಸ (ಶೈಕ್ಷಣಿಕ, ಆರ್ಥಿಕ) ಮತ್ತು ಸಾಮಾಜಿಕ, ಸಾಂಸ್ಕೃತಿಕ ಅವಶ್ಯಕತೆಗಳಿಗೆ ತಮ್ಮ ಸಮುದಾಯವನ್ನು ಹೆಚ್ಚು ಅವಲಂಬಿಸುವಂತಾಗಿದೆ. ಈ ಪ್ರಕ್ರಿಯೆಯಲ್ಲಿ ಸಮುದಾಯ ಮತ್ತು ಸದಸ್ಯರು ಪರಸ್ಪರ ಅವಲಂಬಿಸಿರುತ್ತಾರೆ. ಅಂತಹ ಸಮುದಾಯದ ಸದಸ್ಯರು ಚಿಕ್ಕವರಿದ್ದಾಗ ತಮ್ಮ ಸಮುದಾಯದವರು ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಾರೆ. ವಸತಿ ನಿಲಯಗಳಲ್ಲಿ ಆಶ್ರಯ ಪಡೆಯುತ್ತಾರೆ. ಶಿಷ್ಯವೇತನಗಳನ್ನು ಸ್ವೀಕರಿಸುತ್ತಾರೆ. ಆನಂತರ ತಾವು ದುಡಿಯುವಾಗ ಅಂಥಹ ಸಂಸ್ಥೆಗಳನ್ನು ಮುನ್ನಡೆಸುತ್ತಾರೆ, ಇಲ್ಲವೇ ಮುನ್ನಡೆಸಲು ಸಹಾಯ ಮಾಡುತ್ತಾರೆ, ದೇಣಿಗೆ ಕೊಡುತ್ತಾರೆ. ಹೀಗೆ ಅವರು ಪರಸ್ಪರ ಅವಲಂಬಿತರಾಗುವುದರ ಜೊತೆಗೆ, ಪರಸ್ಪರ ನಿಯಂತ್ರಿತರೂ ಆಗಿರುತ್ತಾರೆ. ಭಾರತೀಯ ಸಂದರ್ಭದಲ್ಲಿ ಎಲ್ಲಾ ಜಾತಿ-ಜನಾಂಗಗಳಲ್ಲಿ ಇಂತಹ ವಾತಾವರಣ ಇರದಿದ್ದರೂ, ಹೆಚ್ಚಿನ ಸಮುದಾಯಗಳಲ್ಲಿ ಇದನ್ನು ನೋಡಬಹುದಾಗಿದೆ.

ಈ ತತ್ತ್ವ ಮತ್ತು ಪ್ರಕ್ರಿಯೆಗಳು ಎಲ್ಲಾ ಧರ್ಮದವರಿಗೂ ಅನ್ವಯವಾಗುತ್ತದೆ. ಹಿಂದೂ, ಮುಸಲ್ಮಾನ, ಕ್ರೈಸ್ತ, ಬೌದ್ಧ, ಸಿಖ್, ಪಾರ್ಸಿ ಮುಂತಾದ ಧರ್ಮಾವಲಂಬಿಗಳು ಭಾರತ ದೇಶದಲ್ಲಿದ್ದು ಅವುಗಳನ್ನು ಬೇರೆ ಬೇರೆ ಸಮುದಾಯಗಳೆಂದು ಗುರುತಿಸಲಾಗುತ್ತಿದೆ. ಈ ಸಮುದಾಯಗಳವರು ತಮ್ಮದೇ ಆದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಗಳನ್ನು ಕಟ್ಟಿಕೊಂಡು ನಡೆಸುತ್ತಿದ್ದಾರೆ. ತಮ್ಮದೇ ಆದ ಸಂಪನ್ಮೂಲಗಳ ಮುಖಾಂತರ ಹಣ ಸಂಗ್ರಹಿಸಿ, ಅದನ್ನು ಅನುದಾನ, ಶಿಷ್ಯವೇತನ, ವಸತಿ ನಿಲಯ ಮುಂತಾದವುಗಳ ಮೂಲಕ ತಮ್ಮ ಸಮುದಾಯದ ಸದಸ್ಯರ ಹಿತವನ್ನು ಕಾಪಾಡುವಲ್ಲಿ ಶ್ರಮಿಸುತ್ತಿದ್ದಾರೆ. ಭಾರತೀಯ ಸಂದರ್ಭದಲ್ಲಿ ಸಮುದಾಯ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಲು ಇವು ಉತ್ತಮ ಉದಾಹರಣೆಗಳಾಗಿವೆ.
ಸಮಾಜಕಾರ್ಯಕರ್ತನು ಯಾವ ಧರ್ಮವನ್ನೂ ಬೆಂಬಲಿಸಬಾರದು. ಎಲ್ಲಾ ಧರ್ಮಗಳ ಸದಸ್ಯರನ್ನೂ ಸಮಾನವಾಗಿ ಕಾಣಬೇಕು. ಸರ್ವಧರ್ಮ ಸಮಾನತೆ ಅವನ ಮನೋಭೂಮಿಕೆಯಾಗಬೇಕು. ಆದರೆ ಭಾರತೀಯ ಸಮಾಜದ ಈ ಪರಿಸ್ಥಿತಿಯ ಅರಿವು ಅವನಿಗಿರಬೇಕು.
 
ಭೌಗೋಲಿಕ ಮತ್ತು ಕ್ರಿಯಾತ್ಮಕ ಸಮುದಾಯಗಳು
ಭೌಗೋಲಿಕ ಸಮುದಾಯಗಳು ಒಂದು ಭೂಪ್ರದೇಶದ ಆಧಾರದ ಮೇಲೆ ನಿರ್ಧಾರಿತ ಆದವುಗಳು. ಒಂದು ಜಾಗ, ಒಂದು ಪ್ರದೇಶ, ಒಂದು ವಲಯ, ಒಂದು ಭೌಗೋಲಿಕ ವ್ಯಾಪ್ತಿಗೆ ಒಳಪಟ್ಟು ಸಮುದಾಯಗಳನ್ನು ಇದರ ವ್ಯಾಪ್ತಿಗೆ ಸೇರಿಸಬಹುದಾಗಿದೆ. ಒಂದು ಹಳ್ಳಿ, ಗ್ರಾಮ, ಊರು, ಹಳ್ಳಿಗೊಂಚಲು, ಗ್ರಾಮಪಂಚಾಯಿತಿ, ಫಿರ್ಕಾ, ತಾಲೂಕು, ಜಿಲ್ಲಾ, ರಾಜ್ಯ, ದೇಶ, ಪ್ರಪಂಚ, ವಲಯ, ಪಟ್ಟಣ, ನಗರ, ಮಹಾನಗರ ಇಂತಹವುಗಳನ್ನು ಭೌಗೋಲಿಕ ಸಮುದಾಯಗಳಿಗೆ ಉದಾಹರಿಸಬಹುದಾಗಿದೆ.

ಕ್ರಿಯಾತ್ಮಕ ಸಮುದಾಯಗಳು ಮತ್ತೊಂದು ಬಗೆಯವು. ಧರ್ಮ, ಜಾತಿ, ಜನಾಂಗ, ಭೌಗೋಲಿಕ ಪ್ರದೇಶ ಇಂತಹ ಅಂಶಗಳನ್ನು ಹೊರತುಪಡಿಸಿ, ಅವರು ಮಾಡುವ ವೃತ್ತಿ, ಕೆಲಸ ಮತ್ತು ಅಭಿರುಚಿಯ ಆಧಾರದ ಮೇಲೆ ರಚನೆಗೊಂಡ ಸಮುದಾಯಗಳು. ಕೃಷಿ, ತೋಟಗಾರಿಕೆ, ಕೂಲಿ ಕೆಲಸ, ಕೈಗಾರಿಕೆಗಳಲ್ಲಿ ಕೆಲಸ, ವ್ಯಾಪಾರ, ಬ್ಯಾಂಕಿಂಗ್ ಕೆಲಸ, ಶಿಕ್ಷಣ, ವಕೀಲವೃತ್ತಿ, ಕ್ಷೌರಿಕ ವೃತ್ತಿ, ಕಮ್ಮಾರ, ಕುಂಬಾರ, ಕ್ರಿಕೆಟ್, ಚೆಸ್, ಕಲೆ, ಹೀಗೆ ಹಲವು ಹತ್ತು ವೃತ್ತಿಗಳಲ್ಲಿ, ಕೆಲಸಗಳಲ್ಲಿ, ಅಭಿರುಚಿಗಳಲ್ಲಿ ತೊಡಗಿರುವವರ ಗುಂಪುಗಳು ಕ್ರಿಯಾತ್ಮಕ ಸಮುದಾಯಗಳು, ರೈತರು, ಉದ್ಯೋಗಿಗಳು, ವ್ಯಾಪಾರಸ್ಥರು, ಶಿಕ್ಷಕರು, ವಕೀಲರು, ಕ್ಷೌರಿಕರು, ಕಮ್ಮಾರರು, ಕುಂಬಾರರು ವಿವಿಧ ಆಟಗಾರರು, ಕಲಾವಿದರು ಮುಂತಾದ ಗುಂಪಿಗೆ ಸೇರಿದವರು ಕ್ರಿಯಾತ್ಮಕವಾಗಿ ಬೇರೆ ಬೇರೆಯಾಗಿ ಜೀವಿಸುತ್ತಾರೆ. ತಮ್ಮದೇ ಆದ ವೃತ್ತಿ, ಪ್ರವೃತ್ತಿ, ಅಭಿರುಚಿಗಳನ್ನು ಹೊಂದಿದವರಾಗಿರುತ್ತಾರೆ. ಇವು ಕ್ರಿಯಾತ್ಮಕ ಸಮುದಾಯಗಳು. ಇವರು ತಮ್ಮ ವೃತ್ತಿ, ಪ್ರವೃತ್ತಿ, ಅಭಿರುಚಿಗಳಿಗೆ ಅನುಸಾರವಾಗಿ ತಮ್ಮ ಸಮುದಾಯಗಳ ಅಭಿವೃದ್ಧಿಗಾಗಿ ಸಂಸ್ಥೆಗಳನ್ನು ಕಟ್ಟಿಕೊಂಡು, ಪೋಷಿಸುತ್ತಾರೆ. ಅಂತಹ ಸಂಸ್ಥೆಗಳಿಂದ ಸಹಾಯ ಪಡೆಯುತ್ತಾರೆ. ರೈತ ಸಂಘ, ಶಿಕ್ಷಕರ ಸಂಘ, ವಕೀಲರ ಸಂಘ, ಕ್ರಿಕೆಟ್ ಆಟಗಾರರ ಸಂಘ, ಮೇದಾರರ ಸಂಘ, ಕುಂಬಾರರ ಸಂಘ, ಸಮಾಜಕಾರ್ಯಕರ್ತರ ಸಂಘ ಮುಂತಾದವುಗಳನ್ನು ಇದಕ್ಕೆ ಉದಾಹರಿಸಬಹುದು.3
 
ಗ್ರಾಮೀಣ, ನಗರ ಹಾಗೂ ಆದಿವಾಸಿ ಸಮುದಾಯಗಳು
ಗ್ರಾಮ ಸಮುದಾಯ
ಭಾರತೀಯ ಸಮಾಜದ ಆಧಾರ ಸ್ತಂಭಗಳು ಗ್ರಾಮ ಸಮುದಾಯಗಳು. ಒಂದು ಅಂದಾಜಿನ ಪ್ರಕಾರ ಇಡೀ ದೇಶದಲ್ಲಿ ಐದು ಲಕ್ಷಕ್ಕೂ ಹೆಚ್ಚು ಗ್ರಾಮಗಳಿವೆ. ಈ ಹಿನ್ನೆಲೆಯಲ್ಲಿಯೇ ಇಡೀ ಭಾರತದ ಅಭ್ಯುದಯ ನಮ್ಮ ಗ್ರಾಮಗಳನ್ನು ಅವಲಂಬಿಸಿದೆ ಎಂದು ಮಹಾತ್ಮಾಗಾಂಧೀಜಿ ಹೇಳಿದ್ದು. ಪ್ರತಿಯೊಂದು ಗ್ರಾಮ ಸಮುದಾಯಕ್ಕೆ ತನ್ನದೇ ಆದ ಒಂದು ಚಾರಿತ್ರಿಕ ಹಿನ್ನಲೆ ಇರುತ್ತದೆ. ಗ್ರಾಮ ಸಮುದಾಯ ಒಂದು ಸೀಮಿತ ಭೂಪ್ರದೇಶದಲ್ಲಿ ವ್ಯಾಪಿಸಿಕೊಂಡಿರುತ್ತದೆ. ಕುಟುಂಬಗಳು ಹಾಗೂ ಜನಸಂಖ್ಯೆ ಕಡಿಮೆಯಿರುತ್ತದೆ. ಅಂತಹ ಸಮುದಾಯದ ಸದಸ್ಯರು ಒಂದು ಸಾಮಾನ್ಯ ಆಸಕ್ತಿ (ಕೃಷಿ ಇಲ್ಲವೇ ಕೃಷಿ ಆಧಾರಿತ)ಯನ್ನು ಹಾಗೂ ಜೀವನ ಮಾರ್ಗಗಳನ್ನು ಹೊಂದಿರುತ್ತಾರೆ. ಅವರ ಜೀವನ ಕೃತ್ರಿಮತೆಯಿಂದ ಕೂಡಿರದೆ, ತುಂಬಾ ಸರಳವಾಗಿರುತ್ತದೆ.

ಎ. ಡಬ್ಲ್ಯೂ. ಗ್ಲೀನ್ ಅವರ ಪ್ರಕಾರ, ``ಸೀಮಿತ ಭೂಮಿತಿಯೊಳಗೆ ಸಾಮಾನ್ಯ ಜೀವನ ವಿಧಾನವನ್ನು ಹಂಚಿಕೊಂಡು ಬದುಕುವ ಒಂದು ಗುಂಪು ಜನರನ್ನು ಹಳ್ಳಿ ಅಥವಾ ಗ್ರಾಮ ಸಮುದಾಯ ಎಂದು ವ್ಯಾಖ್ಯಾನಿಸಬಹುದಾಗಿದೆ.
 
ಗ್ರಾಮ ಸಮುದಾಯದ ವೈಲಕ್ಷಣ್ಯಗಳು
  1. ಗ್ರಾಮ ಸಮುದಾಯ ಒಂದು ಸೀಮಿತ ಭೌಗೋಲಿಕ ಪ್ರದೇಶದಲ್ಲಿ ನೆಲೆಗೊಂಡಿರುವುದರಿಂದ ಸಹಜವಾಗಿಯೇ ಗಾತ್ರ ಚಿಕ್ಕದಾಗಿರುತ್ತದೆ. ಜನಸಂಖ್ಯೆ ಕಡಿಮೆಯಿರುತ್ತದೆ.
  2. ಗ್ರಾಮ ಸಮುದಾಯ ಸಾಮಾನ್ಯವಾಗಿ ನಿಸರ್ಗಕ್ಕೆ ಹತ್ತಿರವಿರುತ್ತದೆ. ಸಮುದಾಯದ ಸದಸ್ಯರು ಗುಡ್ಡ, ಬೆಟ್ಟ, ನದಿ, ಹಳ್ಳ, ಕೆರೆ, ಕುಂಟೆ, ಹೊಂಡ, ಅಡವಿ ಮುಂತಾದ ನಿಸರ್ಗದ ಭಾಗಗಳಿಗೆ ನೇರವಾದ ಸಂಪರ್ಕವನ್ನು ಇಟ್ಟುಕೊಂಡಿರುತ್ತಾರೆ. ಸೂರ್ಯ, ಚಂದ್ರ, ಆಕಾಶ, ಮೋಡ, ಮಳೆ, ಗಾಳಿ, ಭೂಮಿ ಮುಂತಾದ ಸೃಷ್ಟಿಗೆ ಸಂಬಂಧಪಟ್ಟ ಅಂಶಗಳೊಂದಿಗೆ ತಮ್ಮ ಜೀವನವಿಧಾನವನ್ನು ರೂಪಿಸಿಕೊಂಡಿರುತ್ತಾರೆ. ಈ ಪ್ರಾಕೃತಿಕ ಅಂಶಗಳಲ್ಲಿ ದೈವತ್ತ್ವವನ್ನು ಕಾಣುತ್ತಾರೆ.
  3. ಗ್ರಾಮ ಸಮುದಾಯ ಪ್ರಾಥಮಿಕ ಸಮುದಾಯ. ಸದಸ್ಯರ ಸಂಬಂಧಗಳು ಮುಖಾಮುಖಿ ಮತ್ತು ಪರಸ್ಪರಾವಲಂಬಿ. ಅವರ ಸಂಬಂಧಗಳು ಹೆಚ್ಚು ವೈಯಕ್ತಿಕ, ನಿಕಟ, ಒಪ್ಪಂದ ಸ್ವರೂಪದ್ದು. ಸಮುದಾಯದ ಸದಸ್ಯರು ಏನೇ ಕೆಲಸ ಮಾಡಿದರೂ ಒಟ್ಟಾಗಿ ಮಾಡುತ್ತಾರೆ. ಬಂದ ಫಲವನ್ನು ಒಟ್ಟಾಗಿ ಅನುಭವಿಸುತ್ತಾರೆ.
  4. ಗ್ರಾಮ ಸಮುದಾಯ ಸಾಮಾನ್ಯವಾಗಿ ಕೃಷಿ ಪ್ರಧಾನ. ಸಮುದಾಯದ ಹೆಚ್ಚಿನ ಸದಸ್ಯರು ಕೃಷಿ ಮತ್ತು ಕೃಷಿ ಆಧಾರಿತ ಉದ್ಯೋಗಗಳನ್ನೂ ಮಾಡುತ್ತಾರೆ. ವ್ಯವಸಾಯ, ತೋಟಗಾರಿಕೆ, ಹೈನುಗಾರಿಕೆ, ಜಾನುವಾರುಗಳನ್ನು ಸಾಕುವುದು, ಕುರಿ ಸಾಕಾಣಿಕೆ, ಮೀನುಗಾರಿಕೆ, ಕೃಷಿ ಕೂಲಿ, ಬೆಲ್ಲ ತಯಾರಿಕೆ, ಕುಂಬಾರಿಕೆ, ಕಮ್ಮಾರಿಕೆ, ಪುಟ್ಟಿ-ಹಗ್ಗ ತಯಾರಿಕೆ ಮುಂತಾದ ಉದ್ಯೋಗಗಳಲ್ಲಿ ಜಾಸ್ತಿ ತೊಡಗಿಸಿಕೊಂಡಿರುತ್ತಾರೆ. ಇದಕ್ಕೆ ಅಪವಾದಗಳೂ ಇರಬಹುದು.
  5. ಗ್ರಾಮ ಸಮುದಾಯ ಸಮೈಕ್ಯತೆ (Homogeneity)ಯಿಂದ ಕೂಡಿರುವಂತಹದು. ಇಲ್ಲಿ ಏಕತೆಗೆ ಪ್ರಾಧಾನ್ಯ. ಅವರೆಲ್ಲರೂ ಹೆಚ್ಚು ಕಡಿಮೆ ಒಂದೇ ರೀತಿ ಆಲೋಚಿಸುತ್ತಾರೆ. ಒಂದೇ ರೀತಿ ಕೆಲಸ ಮಾಡುತ್ತಾರೆ. ಅವರ ಕೆಲಸಗಳಲ್ಲಿ ಸಮರೂಪತೆಯನ್ನು, ಸಾದೃಶ್ಯತೆಯನ್ನು ಕಾಣಬಹುದಾಗಿದೆ.
  6. ಗ್ರಾಮ ಸಮುದಾಯದ ಸದಸ್ಯರು ರಕ್ತ ಸಂಬಂಧ, ನೆರೆಹೊರೆ ಸಂಬಂಧಗಳಿಗೆ ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ. ಮಾನವೀಯ ಸಂಬಂಧಗಳು ಅವರ ಬದುಕಿನ ಜೀವಾಳ. ಗ್ರಾಮ ಸಮುದಾಯದ ಬದುಕು ಬೇಗ ಬದಲಾಗುವುದಿಲ್ಲ. ಸದಸ್ಯರು ಬದಲಾವಣೆಗಳನ್ನು ಬೇಗ ಒಪ್ಪಿಕೊಳ್ಳುವುದಿಲ್ಲ. ಜನರು ಒಟ್ಟಾಗಿ ಬದುಕುತ್ತಾರೆ. ಅವರ ಜೀವನ ವೇಗರಹಿತ. ಸಾಮೂಹಿಕ ಜೀವನಕ್ಕೆ ಹೆಚ್ಚಿನ ಆದ್ಯತೆ. ವೈಯಕ್ತಿಕ ಬದುಕಿಗೆ ಪ್ರಾಶಸ್ತ್ಯ ಬಹಳ ಕಡಿಮೆ.
  7. ಗ್ರಾಮ ಸಮುದಾಯದ ಬದುಕು ನೇರ ಹಾಗೂ ಸರಳ. ಸಾಮಾನ್ಯವಾಗಿ ಕೃತ್ರಿಮತೆ ಇರುವುದಿಲ್ಲ. ಸದಸ್ಯರು ಬೇಗ ದಾರಿ ತಪ್ಪುವುದಿಲ್ಲ. ಕೆಟ್ಟ ಹಾದಿಯನ್ನು ಹಿಡಿಯುವುದಿಲ್ಲ. ಇತ್ತೀಚಿಗೆ ಗ್ರಾಮಸಮುದಾಯಗಳೂ ಬೇರೆ ಬೇರೆ ಕಾರಣಗಳಿಗಾಗಿ ಕಲುಷಿತಗೊಳ್ಳುತ್ತಿವೆ.
  8. ಗ್ರಾಮ ಸಮುದಾಯದ ಸದಸ್ಯರಿಗೆ ದೇವರಲ್ಲಿ ನಂಬಿಕೆ ಜಾಸ್ತಿ. ತಮ್ಮ ಜಾತಿ, ಪಂಥ, ಜನಾಂಗ, ಧರ್ಮ, ಬೆಡಗು ಮುಂತಾದವುಗಳಲ್ಲಿ ಹೆಚ್ಚು ಆಸಕ್ತಿ. ಹಬ್ಬ-ಹುಣ್ಣಿಮೆ, ತೇರು-ಜಾತ್ರೆ ಮುಂತಾದವುಗಳನ್ನು ಒಟ್ಟಾಗಿ ಸೇರಿ ಆಚರಿಸುತ್ತಾರೆ. ದೇವರು, ದೇವತೆಗಳಲ್ಲಿ ಹೆಚ್ಚು ಭಯ, ಭಕ್ತಿ. ಇಂತಹ ಭಯ, ಭಕ್ತಿ, ಜನಪದ ನಂಬಿಕೆಗಳು ಅವರನ್ನು ಸನ್ಮಾರ್ಗದಲ್ಲಿ ನಡೆಸುತ್ತವೆ.
  9. ಗ್ರಾಮ ಸಮುದಾಯದ ಸದಸ್ಯರು ಹೆಚ್ಚಾಗಿ ಸಂಪ್ರದಾಯ ಶರಣರು. ತಮ್ಮ ಸಂಪ್ರದಾಯ, ಆಚಾರ-ವಿಚಾರ, ಪದ್ಧತಿಗಳಿಗೆ ಅಂಟಿಕೊಂಡಿರುತ್ತಾರೆ. ಅವುಗಳನ್ನು ಬಿಟ್ಟುಕೊಡಲು ತಯಾರಿರುವುದಿಲ್ಲ. ಆಧುನಿಕತೆಯನ್ನು ಬೇಗ ಒಪ್ಪಿಕೊಳ್ಳುವುದಿಲ್ಲ.
  10. ಗ್ರಾಮ ಸಮುದಾಯದ ಸದಸ್ಯರು ಸಂಪ್ರದಾಯದಂತೆಯೇ ತಮ್ಮ ವಂಶಾವಳಿಗೂ ಹೆಚ್ಚಿನ ಮನ್ನಣೆಯನ್ನು ಕೊಡುತ್ತಾರೆ. ಗ್ರಾಮ ಸಮುದಾಯಗಳಲ್ಲಿ ಹೆಚ್ಚು ಹೆಚ್ಚು ಅವಿಭಕ್ತ ಕುಟುಂಬಗಳನ್ನು ಇನ್ನೂ ನೋಡಬಹುದಾಗಿದೆ. ಮೂರು ಇಲ್ಲವೇ ನಾಲ್ಕು ತಲೆಮಾರಿನ ಜನರು ಒಂದೇ ಕುಟುಂಬದಲ್ಲಿ ವಾಸಿಸುತ್ತಾರೆ. ಅವರ ವೃತ್ತಿ ಸಾಮಾನ್ಯವಾಗಿ ಕೃಷಿ ಆಗಿರುವುದರಿಂದ, ತಮ್ಮ ಹೊಲ-ಗದ್ದೆ-ತೋಟಗಳಲ್ಲಿ ಕೆಲಸ ಮಾಡಲು ಮನೆ ಜನರನ್ನೇ ಉಪಯೋಗಿಸುತ್ತಾರೆ. ಅವರಿಗೆ ಕೆಲಸ ಮಾಡಲು ಸೋವಿ ದರದಲ್ಲಿ ಕೆಲಸಗಾರರು ಸಿಕ್ಕಂತಾಗುತ್ತದೆ.
  11. ಗ್ರಾಮ ಸಮುದಾಯದ ಜನ ಗುಂಪು ಭಾವನೆಯನ್ನಿಟ್ಟುಕೊಂಡಿರುತ್ತಾರೆ. ಗುಂಪುಗಳಲ್ಲಿ ದುಡಿಯುತ್ತಾರೆ. ಗುಂಪುಗಳಲ್ಲಿ ಬಂದ ಫಲವನ್ನು ಅನುಭವಿಸುತ್ತಾರೆ. ಸಹಕಾರ ಭಾವನೆಗೆ ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ. ತಮ್ಮ ಕೃಷಿ ಚಟುವಟಿಕೆಗಳಲ್ಲಿ ಮುಯ್ಯಿ ಸೇವಾ ಪದ್ಧತಿಯನ್ನು ಅನುಸರಿಸುತ್ತಾರೆ.
    [ಮುಯ್ಯಿ ಸೇವಾ ಪದ್ಧತಿ :- ಗ್ರಾಮ ಸಮುದಾಯ ಹೆಚ್ಚಾಗಿ ಕೃಷಿ ಪ್ರಧಾನ. ಪ್ರತಿ ಗ್ರಾಮ ಸಮುದಾಯದಲ್ಲಿ ಚಿಕ್ಕ ಹಿಡುವಳಿದಾರರೇ ಹೆಚ್ಚು. ದೊಡ್ಡ ಕೆಲವು ರೈತರನ್ನು ಹೊರತುಪಡಿಸಿ, ಸಣ್ಣ ರೈತರು ಒಬ್ಬರಿಗೊಬ್ಬರು ನೆರವಾಗುತ್ತಾರೆ. ಇಬ್ಬರು ರೈತರು ಸೇರಿ, ತಮ್ಮ ಹೊಲಗಳನ್ನು ಬಿತ್ತುತ್ತಾರೆ. ಒಬ್ಬರು ತಮ್ಮಲ್ಲಿರುವ ಜೋಡೆತ್ತಿನಿಂದ, ಕೂರಿಗೆ ಜೋಡಿಸಿಕೊಂಡು, ಹೆಣ್ಣು ಮಕ್ಕಳನ್ನು ಜೋಡಿಸಿಕೊಂಡು ಬಿತ್ತನೆ ಮಾಡಿದರೆ, ಇನ್ನೊಬ್ಬ ರೈತ ತನ್ನಲ್ಲಿರುವ ಕುಂಟೆಯಿಂದ ಹರಗುತ್ತಾನೆ. ಈ ಇಬ್ಬರೂ ಮೊದಲು ಒಬ್ಬನ ಹೊಲವನ್ನು ಬಿತ್ತಿದರೆ, ಇನ್ನೊಂದು ದಿನ ಇಬ್ಬರೂ ಎರಡನೆಯವನ ಹೊಲವನ್ನು ಬಿತ್ತುತ್ತಾರೆ. ಅದೇ ತರಹ ಒಬ್ಬರ ಕೃಷಿ ಕೆಲಸ (ಕಳೆ, ಕೊಯಿಲು ಇತ್ಯಾದಿ)ಕ್ಕೆ ಇನ್ನೊಬ್ಬ ಕೂಲಿ ಕೆಲಸ ಮಾಡಿ ನೆರವಾಗುತ್ತಾನೆ. ಇನ್ನೊಂದು ನಿಗದಿತ ದಿನದಂದು ಈ ಇನ್ನೊಬ್ಬನ ಕೆಲಸವನ್ನು ಮೊದಲನೆಯವನು ಕೂಲಿ ಮಾಡಿ ತೀರಿಸುತ್ತಾನೆ. ಇದು ಮುಯ್ಯಿ ಸೇವಾ ಪದ್ಧತಿ.
    ಎಲ್ಲಾ ರೈತರ ಹತ್ತಿರ ಎತ್ತು-ಗಾಡಿ ಇರುವುದಿಲ್ಲ. ಒಬ್ಬ ರೈತನ ಹತ್ತಿರ ಎತ್ತು-ಗಾಡಿ ಇದ್ದರೆ, ಇನ್ನೊಬ್ಬನ ಹತ್ತಿರ ಎತ್ತುಗಳು ಇರುತ್ತವೆ. ಆದರೆ ಗಾಡಿ ಇರುವುದಿಲ್ಲ. ಎತ್ತು-ಗಾಡಿ ಇರುವ ರೈತ ಇನ್ನೊಬ್ಬ ರೈತನ ಮಾಸೂಲನ್ನು ಅವನ ಹೊಲದಿಂದ ಖಣಕ್ಕೊ ಇಲ್ಲವೇ ಮನೆಗೊ ಸಾಗಿಸಿಕೊಡುತ್ತಾನೆ. ಅದಕ್ಕೆ ಪ್ರತಿಯಾಗಿ ಈ ರೈತ ತನ್ನ ಜೋಡೆತ್ತಿನಿಂದ ಉಳುಮೆ, ಎಡೆ, ಮುಂತಾದವುಗಳಲ್ಲಿ ಸಹಾಯ ಮಾಡಿ ಮುಯ್ಯಿ ಪದ್ಧತಿಯನ್ನು ಅನುಸರಿಸುತ್ತಾನೆ. ಹೀಗೆ ಮಾಡುವಾಗ ಅವರವರಲ್ಲಿ ಭಿನ್ನಾಭಿಪ್ರಾಯ ಬರುವುದಿಲ್ಲ. ಇದು ಗ್ರಾಮ ಸಮುದಾಯದಲ್ಲಿ ಮಾತ್ರಾ ನೋಡುತ್ತೇವೆ.]
  12. ಗ್ರಾಮ ಸಮುದಾಯ ಸಾಮಾನ್ಯವಾಗಿ ಇನ್ನೂ ಸಾಂಪ್ರದಾಯಿಕ ಸ್ತರ ವಿಂಗಡಣೆಯಿಂದ ಕೂಡಿದ್ದಾಗಿರುತ್ತದೆ. ತಮ್ಮನ್ನು ತಮ್ಮ ತಮ್ಮ ಸಮುದಾಯಗಳ ಮುಖಾಂತರವೇ ಗುರುತಿಸಿಕೊಳ್ಳುತ್ತಾರೆ. ಬೇಗ ಬದಲಾವಣೆ ಹೊಂದಲು ತಯಾರಿರುವುದಿಲ್ಲ.
  13. ಸ್ವಾಭಾವಿಕ ಸಾಮಾಜಿಕ ನಿಯಂತ್ರಣ:- ಗ್ರಾಮ ಸಮುದಾಯದ ಸದಸ್ಯರು ತಮ್ಮ ಧರ್ಮ, ಜಾತಿ, ಜನಾಂಗ, ಪಂಥ, ಸಂಪ್ರದಾಯ, ಪದ್ಧತಿ, ಮೌಲ್ಯಗಳು, ಲೋಕರೂಢಿಗಳು ಮುಂತಾದವುಗಳ ಮೂಲಕ ತಮ್ಮ ಸಮುದಾಯದ ಮೇಲೆ ನಿಯಂತ್ರಣವನ್ನು ಸಾಧಿಸುತ್ತಾರೆ. ತಪ್ಪು ಮಾಡಿದವರನ್ನು ದಂಡಿಸುತ್ತಾರೆ. ಪ್ರಚಲಿತ ಶಾಸನಗಳು, ನ್ಯಾಯಾಲಯ ಮುಂತಾದವುಗಳ ಅವಶ್ಯಕತೆ ಕಡಿಮೆ.
  14. ಗ್ರಾಮ ಸಮುದಾಯದ ಸದಸ್ಯರು ಪ್ರತ್ಯೇಕವಾಗಿ ಬದುಕಲು ಇಚ್ಛಿಸುತ್ತಾರೆ. ಅಪರಿಚಿತರೊಂದಿಗೆ ಬೆರೆಯುವುದು ಕಡಿಮೆ.
  15. ಗ್ರಾಮ ಸಮುದಾಯಗಳು ಒಂದು ಕಾಲಕ್ಕೆ ಸ್ವಪರಿಪೂರ್ಣತೆಯಿಂದ ಕೂಡಿದ್ದಿರಬಹುದು. ಆದರೆ ಈಗ ಹಾಗೆ ಉಳಿದಿಲ್ಲ. ಹಿಂದೆಯೂ ಕೂಡಾ ತಮ್ಮ ಗ್ರಾಮಗಳಲ್ಲಿ ಕೃಷಿಯಿಂದ ದವಸ ಧಾನ್ಯಗಳನ್ನು ಬೆಳೆದುಕೊಂಡರೂ, ಉಪ್ಪು, ಬೆಂಕಿಪೊಟ್ಟಣ, ಬಟ್ಟೆ, ಚಿಮಣಿ ಎಣ್ಣೆ ಮುಂತಾದ ಜೀವನಾವಶ್ಯಕ ವಸ್ತುಗಳಿಗಾಗಿ, ವಾರಕ್ಕೊಮ್ಮೆ, ನಾಲ್ಕೈದು ಗ್ರಾಮದವರು ಸೇರಿ ವ್ಯವಸ್ಥೆ ಮಾಡುತ್ತಿದ್ದ ಸಂತೆಯನ್ನು ಆಶ್ರಯಿಸಬೇಕಾಗಿತ್ತು. ಸ್ವಪರಿಪೂರ್ಣತೆ ಎಂಬುದು ಒಂದು ಉತ್ಪ್ರೇಕ್ಷೆಯ ಮಾತಷ್ಟೆ.
ಇವು ಗ್ರಾಮ ಸಮುದಾಯಗಳ ವೈಲಕ್ಷಣ್ಯಗಳೆಂದು ಗುರುತಿಸಿದರೂ, ಆಧುನೀಕರಣ, ಗ್ರಾಮ ಸಮುದಾಯಗಳಲ್ಲಿ ಶಾಲೆಗಳ, ಅಂಗನವಾಡಿಗಳ, ಸಹಕಾರಿ ಸಂಘ, ಗ್ರಾಮಪಂಚಾಯಿತಿ ಮುಂತಾದ ಸಂಘ-ಸಂಸ್ಥೆಗಳ ಸ್ಥಾಪನೆ, ವಿವಿಧ ಇಲಾಖೆಗಳಿಂದ ಅನುಷ್ಟಾನಗೊಳ್ಳುತ್ತಿರುವ ಸರಕಾರಿ ಯೋಜನೆಗಳು, ಮುಂತಾದವುಗಳ ಪರಿಣಾಮವಾಗಿ ಗ್ರಾಮ ಸಮುದಾಯಗಳೂ ಬದಲಾಗುತ್ತಿವೆ.
 
ಗ್ರಾಮ ಸಮುದಾಯಗಳ ವೈವಿಧ್ಯತೆ
ಗ್ರಾಮ ಸಮುದಾಯಗಳಲ್ಲಿಯೂ ವೈವಿಧ್ಯತೆಯನ್ನು ಕಾಣಬಹುದಾಗಿದೆ. ಜನಸಂಖ್ಯೆ, ವೃತ್ತಿ, ಜೀವನ ಮುಂತಾದ ಅಂಶಗಳನ್ನು ಆಧರಿಸಿ ಅಂತಹ ಸಮುದಾಯಗಳನ್ನು ವಿಂಗಡಿಸಬಹುದಾಗಿದೆ. ಜನಸಂಖ್ಯೆಯನ್ನು ಆಧರಿಸಿ ಸಣ್ಣ, ಮಧ್ಯಮ, ದೊಡ್ಡ ಮತ್ತು ಅತಿ ದೊಡ್ಡ ಗ್ರಾಮ ಸಮುದಾಯಗಳನ್ನು ಗುರುತಿಸಬಹುದು. 1991ನೇ ಜನಗಣತಿಯ ಆಧಾರದಂತೆ 5000ಕ್ಕೂ ಕಡಿಮೆ ಜನಸಂಖ್ಯೆ ಇರುವ ಗ್ರಾಮಗಳನ್ನು ಒಟ್ಟಾರೆಯಾಗಿ `ಗ್ರಾಮ ಸಮುದಾಯ ಎಂಬ ವ್ಯಾಖ್ಯೆಯಡಿ ತರಬಹುದಾಗಿದೆ. ಅದರಂತೆಯೇ ಸಮುದಾಯದ ಸದಸ್ಯರು ಮಾಡುವ ವೃತ್ತಿಯನ್ನಾಧರಿಸಿ ರೈತ ಸಮುದಾಯ, ಮೀನುಗಾರರ ಸಮುದಾಯ, ಕಮ್ಮಾರ, ಕುಂಬಾರ, ಬಳೆಗಾರ, ಕಂಚುಗಾರ, ಕ್ಷೌರಿಕರ ಸಮುದಾಯ ಮುಂತಾದವುಗಳನ್ನು ಗುರುತಿಸಬಹುದಾಗಿದೆ. ಸಮುದಾಯದ ಸದಸ್ಯರು ಒಂದು ಜಾಗದಲ್ಲಿ ನೆಲೆ ನಿಲ್ಲುವ ಸಮಯದ ಆಧಾರದ ಮೇಲೆ ವಲಸೆ ಸಮುದಾಯ, ಅರೆಶಾಶ್ವತ ಹಾಗೂ ಶಾಶ್ವತ ಸಮುದಾಯಗಳೆಂದೂ ವಿಂಗಡಿಸಬಹುದಾಗಿದೆ. ಇವು ಗ್ರಾಮಾಂತರ ಪ್ರದೇಶಗಳಲ್ಲಿ ಕಾಣುವ ಹಾಗೂ ವೈವಿಧ್ಯತೆಯಿಂದ ಕೂಡಿದ ಗ್ರಾಮ ಸಮುದಾಯಗಳಾಗಿವೆ.
 
ನಗರ ಸಮುದಾಯ
ಸಮಾಜಶಾಸ್ತ್ರದ ಲಕ್ಷಣಗಳು ಹಾಗೂ ಗಾತ್ರದ ದೃಷ್ಟಿಯಿಂದ, ಗ್ರಾಮೀಣ ಸಮುದಾಯಕ್ಕಿಂತ ತುಂಬಾ ಭಿನ್ನವಾದ, ಸಮುದಾಯದ ಇನ್ನೊಂದು ಪ್ರಕಾರವೆಂದರೆ ನಗರ ಸಮುದಾಯ. ನಗರ ಸಮುದಾಯಗಳನ್ನು ಗಾತ್ರ ಮತ್ತು ಜನಸಾಂಧ್ರತೆಯ ಮಾಪನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪಟ್ಟಣ, ದೊಡ್ಡ ಪಟ್ಟಣ, ನಗರ, ಮಹಾನಗರ ಎಂದು ವಿಂಗಡಿಸುವುದುಂಟು. ಸಾಮಾನ್ಯವಾಗಿ ತಾಲೂಕು ಕೇಂದ್ರಸ್ಥಾನದ ಪ್ರದೇಶಗಳನ್ನು ಪಟ್ಟಣಗಳೆಂದೂ, ಜಿಲ್ಲಾ ಕೇಂದ್ರ ಪ್ರದೇಶಗಳನ್ನು ನಗರಗಳೆಂದೂ, ಇನ್ನೂ ದೊಡ್ಡ ನಗರೀಕರಣಗೊಂಡ ಪ್ರದೇಶಗಳನ್ನೂ ಮಹಾನಗರಗಳೆಂದೂ ಕರೆಯುವುದು ಪದ್ಧತಿ. ಇದಕ್ಕೆ ಅಪವಾದಗಳೂ ಇವೆ. ಇವುಗಳ ಜೊತೆಗೆ ಸಮುದಾಯದ ಸದಸ್ಯರ ವೈವಿಧ್ಯತೆ, ಅವರ ಜೀವನದ ಗುಣಮಟ್ಟ, ಆರ್ಥಿಕ ಸ್ಥಿತಿಗತಿ, ಅವೈಯಕ್ತಿಕತೆ, ಮಾಧ್ಯಮಿಕ ಸಂಬಂಧಗಳು, ಉತ್ತಮ ಸಂಚಾರವ್ಯವಸ್ಥೆ, ಮನರಂಜನಾ ವ್ಯವಸ್ಥೆ, ಉನ್ನತ ಶಿಕ್ಷಣ ಸಂಸ್ಥೆಗಳು, ಕೈಗಾರಿಕಾ ಸಂಸ್ಥೆಗಳು ಇನ್ನೂ ಮುಂತಾದ ವೈಲಕ್ಷಣ್ಯಗಳನ್ನು ಗಮನದಲ್ಲಿರಿಸಿಕೊಂಡು ನಗರ ಸಮುದಾಯಗಳನ್ನು ಗುರುತಿಸಬಹುದಾಗಿದೆ. ಗ್ರಾಮೀಣ ಸಮುದಾಯಗಳಲ್ಲಿ ಪ್ರಾಥಮಿಕ ಸಂಬಂಧಗಳು, ಪ್ರಾಮಾಣಿಕ ವರ್ತನೆಗಳು ಮುಂತಾದ ಗುಣಗಳನ್ನು ನೋಡಬಹುದಾದರೆ, ನಗರ ಸಮುದಾಯಗಳಲ್ಲಿ ಮಾಧ್ಯಮಿಕ ಸಂಬಂಧಗಳು, ವ್ಯಾವಹಾರಿಕ ವರ್ತನೆಗಳು ಮುಂತಾದವುಗಳನ್ನು ಗುರುತಿಸಬಹುದಾಗಿದೆ.

ಕೇಂದ್ರ ಸರಕಾರ ಜನಸಂಖ್ಯೆ ಮತ್ತು ಇತರೆ ಮಾಪಕಗಳನಿಟ್ಟುಕೊಂಡು ನಗರ ಪ್ರದೇಶದ ಅರ್ಥವ್ಯಾಪ್ತಿಯನ್ನು ಪರಿಷ್ಕರಿಸುತ್ತಾ ಬಂದಿದೆ. ಅದರಂತೆ 2001ರ ಜನಗಣತಿಯಂತೆ, ಒಂದು ಪ್ರದೇಶವನ್ನು ನಗರ ಪ್ರದೇಶವೆಂದು ಘೋಷಿಸಲು ಈ ಕೆಳಕಂಡ ಅಂಶಗಳನ್ನು ಪರಿಗಣಿಸಬೇಕೆಂದು ಹೇಳುತ್ತಾರೆ.
  1. ಸ್ಥಳೀಯ ಆಡಳಿತಾಧಿಕಾರವುಳ್ಳ ಪಟ್ಟಣ (ಮುನಿಸಿಪಾಲಿಟಿ), ನಗರ (ಕಾರ್ಪೋರೇಷನ್), ಕಂಟೋನ್ಮೆಂಟ್ ಅಥವಾ ಸೂಚಿತ ಪ್ರದೇಶ.
  2. ಈ ಕೆಳಗಿನ ಅಂಶಗಳನ್ನು ಒಳಗೊಂಡ ಪ್ರದೇಶಗಳು.
  • ಕನಿಷ್ಠ 5000 ಜನಸಂಖ್ಯೆ.
  • ಶೇಕಡ 75ರಷ್ಟು ಜನ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವುದು.
  • ಒಂದು ಚದುರ ಕಿಲೋಮೀಟರ್ಗೆ 400 ಜನಸಾಂಧ್ರತೆ (ಒಂದು ಚದುರ ಮೈಲಿಗೆ 1000 ಜನಸಾಂಧ್ರತೆ) ಇರುವ ಪ್ರದೇಶಗಳು.
ಕೆಲವು ಪಟ್ಟಣ, ನಗರ ಮತ್ತು ಮಹಾನಗರಗಳ ಅಂಚಿನಲ್ಲೇ ಬೃಹತ್ ಕೈಗಾರಿಕೆಗಳು ಬೆಳೆದಿರುತ್ತವೆ. ಕೆಲವು ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿರುತ್ತವೆ. ಕೆಲವು ಆಸ್ಪತ್ರೆಗಳು, ಯೋಗಕೇಂದ್ರಗಳು ಮುಂತಾದ ಸಂಘಸಂಸ್ಥೆಗಳು ಪ್ರಾರಂಭವಾಗಿರುತ್ತವೆ. ಇಂತಹ ಪ್ರದೇಶಗಳ ಸುತ್ತಮುತ್ತ ಆಯಾ ಸಂಸ್ಥೆಗಳು ಒದಗಿಸುವ ಕೆಲಸಗಳಿಗಾಗಿ ಇಲ್ಲವೇ ಸೇವೆಗಳಿಗಾಗಿ ಜನಸಂಖ್ಯೆ ನೆಲೆಗೊಂಡಿರುತ್ತದೆ. ಆದರೆ ಅದಿಷ್ಟನ್ನೇ ಗಣನೆಗೆ ತೆಗೆದುಕೊಂಡರೆ, ಅದೊಂದು ನಗರಪ್ರದೇಶ ಎಂದು ಹೇಳಲು ಬರುವುದಿಲ್ಲ. ಆದರೆ ಅಂತಹ ಪ್ರದೇಶಗಳಲ್ಲಿ, ನಗರ ಪ್ರದೇಶಗಳಲ್ಲಿ ಕಾಣುವ ವೈಲಕ್ಷಣ್ಯಗಳು ಇರುತ್ತವೆ. ಆ ಕಾರಣಕ್ಕಾಗಿ ಅಂತಹ ಪ್ರದೇಶಗಳನ್ನು ಹತ್ತಿರದಲ್ಲೇ ಇರುವ ಪಟ್ಟಣ, ನಗರ, ಮಹಾನಗರಗಳಿಗೆ ಸೇರಿಸಿ, ನಗರ ಪ್ರದೇಶಗಳೆಂದು ಸಂಬಂಧಪಟ್ಟವರು ಪ್ರಕಟಿಸುತ್ತಾರೆ.

ಜನಸಂಖ್ಯೆಯನ್ನಾಧರಿಸಿ ನಗರ ಪ್ರದೇಶಗಳ ಈಗಿನ ವರ್ಗೀಕರಣ ಹೀಗಿದೆ.5
-             5000 ದಿಂದ 20000 ಜನಸಂಖ್ಯೆ - ಸಣ್ಣ ಪಟ್ಟಣ.
-             20001 ದಿಂದ 50000 ಜನಸಂಖ್ಯೆ - ದೊಡ್ಡ ಪಟ್ಟಣ.
-             50001 ದಿಂದ 100000 ಜನಸಂಖ್ಯೆ - ದೊಡ್ಡ ನಗರ
-             100000 ಕ್ಕೂ ಹೆಚ್ಚಿನ ಜನಸಂಖ್ಯೆ - ಬೃಹತ್ ನಗರ
-             5000000 ಕ್ಕೂ ಹೆಚ್ಚಿನ ಜನಸಂಖ್ಯೆ - ಮಹಾನಗರ

ನಗರ ಸಮುದಾಯದ ಆಯ್ದ ಕೆಲವು ವ್ಯಾಖ್ಯೆಗಳು
ಜನಸಂಖ್ಯೆ ಮತ್ತು ಇತರೆ ವೈಲಕ್ಷಣ್ಯಗಳನ್ನಾಧರಿಸಿ ಅನೇಕ ವಿದ್ವಾಂಸರು ನಗರ ಸಮುದಾಯದ ವ್ಯಾಖ್ಯೆಗಳನ್ನು ಕೊಟ್ಟಿದ್ದಾರೆ. ಅವುಗಳಲ್ಲಿ ವಿಶಾಲವಾದ ಅರ್ಥ ವ್ಯಾಪ್ತಿಯುಳ್ಳ ಕೆಲವು ವ್ಯಾಖ್ಯೆಗಳನ್ನು ಆರಿಸಿ ಇಲ್ಲಿ ಕೊಡಲಾಗಿದೆ.

ಲೂಯಿಸ್ ವಿರ್ತ್‍ರವರ ಪ್ರಕಾರ ``ಸಾಮಾಜಿಕವಾಗಿ ಪ್ರಭೇದಗಳುಳ್ಳ ವ್ಯಕ್ತಿಗಳ ವಿಶಾಲವಾದ ಸಾಂಧ್ರತೆಯುಳ್ಳ ಮತ್ತು ಶಾಶ್ವತವಾದ ವಸತಿ ಪ್ರದೇಶವನ್ನು ನಗರವೆಂದು ವ್ಯಾಖ್ಯಾನಿಸಬಹುದಾಗಿದೆ.

ಹೋವಾರ್ಡ್ ವುಲ್ಸ್ಟನ್ ಅವರು, ``ಒಂದು ಸ್ಥಳೀಯ ಸರಕಾರದ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿರುವ, ಹಲವು ಸಮಾನ ಆಸಕ್ತಿಗಳನ್ನು ಮತ್ತು ಸಂಸ್ಥೆಗಳನ್ನು ಹೊಂದಿದ್ದು ಒಂದು ಸೀಮಿತ ಭೌಗೋಲಿಕ ಪ್ರದೇಶದಲ್ಲಿ ದಟ್ಟವಾಗಿ ನೆಲೆಸಿರುವ ಜನಸಮೂಹವನ್ನು ನಗರ ಎಂದು ಕರೆದಿದ್ದಾರೆ.

ಇನ್ನೊಬ್ಬ ಸಮಾಜಶಾಸ್ತ್ರಜ್ಞ ಥಿಯಡೊರ್ಸನ್ ರವರ ಪ್ರಕಾರ, ``ನಗರ ಸಮುದಾಯವು ಅತಿಯಾದ ಜನಸಾಂಧ್ರತೆಯೊಂದಿಗೆ, ಕೃಷಿಯೇತರ ಉದ್ಯೋಗಗಳ ಪ್ರಧಾನ್ಯತೆಯನ್ನು ಹೊಂದಿರುವ, ಸಂಕೀರ್ಣ ಸ್ವರೂಪದ ಶ್ರಮ ವಿಭಜನೆಗೆ ಕಾರಣವಾಗಿರುವ ಅತ್ಯಧಿಕ ಮಟ್ಟದ ವಿಶೇಷ ಪರಿಣಿತಿ ಪಡೆದಿರುವ, ಹಾಗೂ ಔಪಚಾರಿಕ ಸ್ವರೂಪದ ಸ್ಥಳೀಯ ಸರಕಾರವನ್ನು ಒಳಗೊಂಡಿರುವ ಸಮುದಾಯವಾಗಿರುತ್ತದೆ. ಅದು ಅವೈಯಕ್ತಿಕ ಸ್ವರೂಪದ ಮಾಧ್ಯಮಿಕ ಸಂಬಂಧಗಳನ್ನು ಮತ್ತು ಔಪಚಾರಿಕ ಸ್ವರೂಪದ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿರುವ ವ್ಯವಸ್ಥೆಯಾಗಿರುತ್ತದೆ.6

ಜೇಮ್ಸ್ ಎ. ಕ್ವೀನ್ ಅವರು ಹೇಳುವಂತೆ, ``ವ್ಯವಸಾಯೇತರ ಉದ್ಯೋಗವುಳ್ಳ ಜನರ ಸಂಕಲನವಾಗಿ, ವಿಶಿಷ್ಟತೆಯ ಸಂಗತಿಯಾಗಿ ನಗರವನ್ನು ಗಮನಿಸಬಹುದು.

ಮೇಲಿನ ವ್ಯಾಖ್ಯೆಗಳಲ್ಲಿ ನಗರ ಸಮುದಾಯದ ವಿವಿಧ ಅಂಶಗಳನ್ನು ಪ್ರಸ್ಥಾಪಿಸಿದ್ದು, ಅವುಗಳನ್ನು ಹೀಗೆ ಪಟ್ಟಿಮಾಡಬಹುದಾಗಿದೆ.
  • ನಗರ ಒಂದು ಶಾಶ್ವತವಾದ ವಸತಿ ಪ್ರದೇಶ.
  • ನಗರದಲ್ಲಿ ಜನ ಸಾಂಧ್ರತೆ ದಟ್ಟವಾಗಿರುತ್ತದೆ.
  • ನಗರದಲ್ಲಿ ಜನಸಮೂಹ ವಿವಿಧ ಪ್ರಭೇದ ಮೂಲಗಳಿಂದ ಬಂದವರಾಗಿರುತ್ತಾರೆ.
  • ನಗರ ಸಮುದಾಯದ ವ್ಯಕ್ತಿಗಳಿಗೆ ಸಾಮಾನ್ಯವಾಗಿ ಸಮಾನ ಆಸಕ್ತಿಗಳಿರುತ್ತವೆ.
  • ನಗರ ಸಮುದಾಯದ ಸದಸ್ಯರು ವಿವಿಧ ಸಂಸ್ಥೆಗಳನ್ನು ಹೊಂದಿರುತ್ತಾರೆ.
  • ನಗರಗಳಲ್ಲಿ ಜನಸಮೂಹ ಕೃಷಿಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುತ್ತಾರೆ.
  • ನಗರ ಪ್ರದೇಶಗಳಲ್ಲಿ ಸಂಕೀರ್ಣ (ವಿಶೇಷ) ಸ್ವರೂಪದ ಶ್ರಮ ವಿಭಜನೆ ಇರುತ್ತದೆ.
  • ನಗರ ಪ್ರದೇಶದ ವ್ಯಕ್ತಿಗಳು ಅತ್ಯಧಿಕ ಮಟ್ಟದ ಪರಿಣಿತಿ ಪಡೆದಿರುತ್ತಾರೆ. ನಗರ ಪ್ರದೇಶದಲ್ಲಿ ಅದಕ್ಕೆ ಅವಕಾಶವೂ ಇರುತ್ತದೆ.
  • ನಗರ ಜೀವನ ಅವೈಯಕ್ತಿಕ ಸ್ವರೂಪದ ಮಾಧ್ಯಮಿಕ ಸಂಬಂಧಗಳಿಂದ ಕೂಡಿದ್ದಾಗಿರುತ್ತದೆ.
  • ನಗರ ಜೀವನ ಔಪಚಾರಿಕ ನಿಯಂತ್ರಣಕ್ಕೆ ಒಳಗೊಂಡಿರುತ್ತದೆ.
  • ನಗರ ಪ್ರದೇಶಕ್ಕೆ ಒಂದು ಸ್ಥಳೀಯ ಸರಕಾರವಿರುತ್ತದೆ.
 
ನಗರ ಸಮುದಾಯದ ವೈಲಕ್ಷಣ್ಯಗಳು
  1. ನಗರ ಸಮುದಾಯದ ಸದಸ್ಯರು ಹೆಚ್ಚಾಗಿ ಕೃಷಿಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಗ್ರಾಮೀಣ ಸಮುದಾಯದಲ್ಲಿ ಸದಸ್ಯರು ಕೃಷಿ ಮತ್ತು ಕೃಷಿ ಸಂಬಂಧಿ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದರೆ, ನಗರಗಳಲ್ಲಿ ಸದಸ್ಯರು ಕೃಷಿಯೇತರ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ವಿವಿಧ ತರಹದ ಕೈಗಾರಿಕೆ, ಬ್ಯಾಂಕಿಂಗ್, ಜೀವ ವಿಮೆ, ಮಾಹಿತಿ ತಂತ್ರಜ್ಞಾನ, ವ್ಯಾಪಾರ, ಸಾರಿಗೆ, ಶಿಕ್ಷಣ, ಆರೋಗ್ಯ, ಸೇವಾ ಪ್ರಬೇಧಗಳು, ಕಲಾ ಪ್ರಕಾರಗಳು, ಮನರಂಜನೆ, ಕ್ರೀಡೆ, ಹೋಟಲ್ ಉದ್ಯಮ, ಪತ್ರಿಕೋದ್ಯಮ, ನೌಕರಿ, ಕೂಲಿ ಮುಂತಾದ ನೂರಾರು ಉದ್ಯಮಗಳಲ್ಲಿ, ವೃತ್ತಿಗಳಲ್ಲಿ, ಕೆಲಸಗಳಲ್ಲಿ, ಸೇವಾ ವಲಯಗಳಲ್ಲಿ ಜನರು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ನಗರ ಪ್ರದೇಶದಲ್ಲಿ ವೃತ್ತಿ ವೈವಿಧ್ಯತೆ ಮತ್ತು ವಿಶೇಷತೆಗಳು ಇರುತ್ತವೆ.
  2. ನಗರ ಸಮುದಾಯಗಳಲ್ಲಿ ಜನಸಾಂಧ್ರತೆ ಹೆಚ್ಚು. ಪ್ರತಿ ಚದುರ ಕಿಲೋಮೀಟರ್ಗೆ ಜನಸಾಂಧ್ರತೆ 400 ಕ್ಕಿಂತ ಹೆಚ್ಚಿರುತ್ತದೆ. ಗ್ರಾಮೀಣ ಪ್ರದೇಶಗಳಿಂದ ಶಿಕ್ಷಣ, ವೃತ್ತಿ, ಅವಕಾಶ, ಪ್ರಸಿದ್ಧಿ, ಸಾಧನೆ, ವೈಭವ ಮುಂತಾದ ವಿವಿಧ ಉದ್ದೇಶಗಳಿಗಾಗಿ ಜನ ನಗರಕ್ಕೆ ವಲಸೆ ಹೋಗುತ್ತಾರೆ. ಆನಂತರದ ದಿನಗಳಲ್ಲಿ ಅಲ್ಲೇ ಉಳಿದುಕೊಳ್ಳುತ್ತಾರೆ. ನಗರ ಸಮುದಾಯಗಳಿಗೆ ವಲಸೆ ಬರುವುದು ನಿರಂತರವಾಗಿ ನಡೆದೇ ಇರುತ್ತದೆ. ಆದರೆ ನಗರ ಪ್ರದೇಶಗಳಿಂದ ಗ್ರಾಮೀಣ ಸಮುದಾಯಗಳಿಗೆ ಹೋಗುವುದು, ಮರಳುವುದು ಅಪರೂಪ. ಪರಿಣಾಮವಾಗಿ ನಗರ ಸಮುದಾಯಗಳಲ್ಲಿ ಜನಸಾಂಧ್ರತೆ ಹೆಚ್ಚುತ್ತಾ ಹೋಗುತ್ತದೆ.
  3. ಬೇರೆ ಬೇರೆ ಕಾರಣಗಳಿಗಾಗಿ, ಬೇರೆ ಬೇರೆ ಗ್ರಾಮ ಸಮುದಾಯಗಳಿಂದ ಬಂದಂತಹ ಜನರ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಹಿನ್ನೆಲೆಗಳೇ ಬೇರೆ ಬೇರೆ ಆಗಿರುತ್ತವೆ. ಗ್ರಾಮೀಣ ಸಮುದಾಯದ ಸದಸ್ಯರ ಜೀವನ, ಚಿಂತನೆ, ಭಾವನೆ ಏಕಮುಖವಾದರೆ, ನಗರ ಸಮುದಾಯಗಳ ಸದಸ್ಯರ ಜೀವನ, ಚಿಂತನೆ, ಭಾವನೆ ಬಹುಮುಖ.
  4. ಗ್ರಾಮ ಸಮುದಾಯಗಳಲ್ಲಿ ಓಡಾಟ- ಸಂಚಾರ ಕಡಿಮೆ. ನಗರಗಳಲ್ಲಿ ವ್ಯಕ್ತಿಗಳ ಓಡಾಟ-ಸಂಚಾರ ಜಾಸ್ತಿ. ಅನೇಕ ಕಾರಣ-ಉದ್ದೇಶಗಳಿಗಾಗಿ ಜನರು ತಮ್ಮನ್ನು ಓಡಾಟದಲ್ಲಿ-ಸಂಚಾರದಲ್ಲಿ ತೊಡಗಿಸಿಕೊಳ್ಳುತ್ತಾರೆ. ಗ್ರಾಮೀಣ ಸಮುದಾಯಗಳಲ್ಲಿ ಸದಸ್ಯರ ಸಂಬಂಧ ದೀರ್ಘಕಾಲದ್ದಾಗಿರುತ್ತದೆ. ಪರಿಣಾಮವಾಗಿ ಇದಕ್ಕೆ ವಿರುದ್ಧವಾಗಿ ನಗರ ಪ್ರದೇಶಗಳಲ್ಲಿ ಪ್ರತಿನಿತ್ಯ ಹೊಸ ಹೊಸ ವ್ಯಕ್ತಿಗಳನ್ನು ಭೇಟಿ ಮಾಡಬೇಕಾಗುತ್ತದೆ. ಸಂಪರ್ಕ, ಸಂಬಂಧ ಬೆಳೆಸಬೇಕಾಗುತ್ತದೆ. ಹಾಗಾಗಿ ಸಂಬಂಧಗಳು ಕ್ಷಣಿಕವಾಗುತ್ತವೆ. ಹಳಬರನ್ನು ಮರೆಯುವುದು, ಹೊಸಬರ ಸಂಪರ್ಕವನ್ನು ಪಡೆಯುವುದು, ಸಂಬಂಧಗಳನ್ನು ಸೃಷ್ಟಿಸಿಕೊಳ್ಳುವುದು ಸಾಮಾನ್ಯವಾಗಿ ಬಿಡುತ್ತದೆ.
    ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧಗಳು ಪ್ರಾಥಮಿಕವಾಗಿರುತ್ತವೆ ಮತ್ತು ಶಾಶ್ವತವಾಗಿರುತ್ತವೆ. ನಗರಗಳಲ್ಲಿ ಇವು ಮಾಧ್ಯಮಿಕ ಹಾಗೂ ತೋರಿಕೆಯ ಸಂಬಂಧಗಳಾಗಿರುತ್ತವೆ. ಗ್ರಾಮೀಣ ಸಮುದಾಯಗಳಲ್ಲಿ ಸಂಬಂಧಗಳು ಅನೌಪಚಾರಿಕ. ನಗರಗಳಲ್ಲಿ ಇವು ಹೆಚ್ಚು ಔಪಚಾರಿಕ, ಅವೈಯಕ್ತಿಕ ಮತ್ತು ಅವಶ್ಯಕತೆಯ ಆಧಾರದ ಮೇಲೆ ರೂಪಗೊಂಡಂತಹವು.
  5. ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು ಜೀವನಕ್ಕೆ ಪ್ರಾಶಸ್ತ್ಯ. ನಗರ ಸಮುದಾಯಗಳಲ್ಲಿ ವೈಯಕ್ತಿಕ ಬದುಕಿಗೆ ಹೆಚ್ಚು ಆದ್ಯತೆ. ನಗರಗಳ ಪ್ರತಿಯೊಬ್ಬ ಸದಸ್ಯನೂ ತನ್ನ ಅಭಿರುಚಿಗೆ ತಕ್ಕಂತೆ ತನ್ನ ಜೀವನವನ್ನು ರೂಪಿಸಿಕೊಳ್ಳಲು ಸ್ವಾತಂತ್ರ್ಯವಿದೆ ಮತ್ತು ಅದಕ್ಕೆ ವಿಫುಲ ಅವಕಾಶಗಳೂ ಇರುತ್ತವೆ.
  6. ಗ್ರಾಮ ಸಮುದಾಯಗಳಲ್ಲಿ ಸಂಖ್ಯೆ ಸೀಮಿತ ಇರುವುದರಿಂದ, ಪ್ರತಿಯೊಬ್ಬ ಸದಸ್ಯನೂ ಇನ್ನುಳಿದ ಎಲ್ಲಾ ಸದಸ್ಯರಿಗೂ ಗೊತ್ತಿರುತ್ತಾನೆ. ನಗರ ಸಮುದಾಯಗಳಲ್ಲಿ ಹಾಗಾಗುವುದಿಲ್ಲ. ಒಬ್ಬ ವ್ಯಕ್ತಿ ಹತ್ತಾರು ವರ್ಷಗಳು ನಗರಗಳಲ್ಲಿದ್ದರೂ ಅವನು ಆಗುಂತಕನಾಗಿಯೇ ಇರಬೇಕಾಗುತ್ತದೆ. ಅಂತಹ ಸದಸ್ಯನಿಗೆ ಅನಾಮಧೇಯತೆ ಕಾಡುತ್ತಿರುತ್ತದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ಸಾಹಿತ್ಯ, ಕಲೆ, ಸಂಗೀತ, ಮುಂತಾದ ಕ್ಷೇತ್ರಗಳ ಹಾಗೂ ವೈವಿಧ್ಯತೆಗಳ ಕಾರಣಗಳಿಗಾಗಿ ಒಬ್ಬರು ಇನ್ನೊಬ್ಬರಿಗೆ ಹೆಚ್ಚಿನ ಪರಿಚಯ ಇರುವುದಿಲ್ಲ. ಪರಿಚಯ ಸೀಮಿತ ಹಾಗೂ ಕ್ಷಣಿಕವಾಗಿರುತ್ತದೆ. ಹಾಗಾಗಿ ಸದಸ್ಯರನ್ನು ಅನಾಮಿಕತೆ ಕಾಡುತ್ತದೆ.
  7. ಗ್ರಾಮೀಣ ಸಮುದಾಯದ ಸದಸ್ಯರ ಸಾಮಾಜಿಕ ಜೀವನ ಹೆಚ್ಚು ವೈವಿಧ್ಯತೆಯಿಂದ ಕೂಡಿರುವುದಿಲ್ಲ. ಅಲ್ಲಿನ ಜನರ ಚಿಂತನೆ, ವರ್ತನೆ, ನಡತೆ ಹೆಚ್ಚು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಂಪ್ರದಾಯಬದ್ಧ. ನಗರ ಸಮುದಾಯಗಳ ಸದಸ್ಯರ ಆಲೋಚನಾ ವೈಖರಿ, ವರ್ತನೆ, ನಡತೆ, ಆಸಕ್ತಿ-ಅಭಿರುಚಿ, ಮನೋಭಾವ, ದೃಷ್ಠಿಕೋನ, ಸಂಪ್ರದಾಯ, ಆಚಾರ-ವಿಚಾರ, ನಂಬಿಕೆ-ನಡವಳಿಕೆ, ಆಹಾರ-ವಿಹಾರ, ನೈತಿಕತೆ-ಧಾರ್ಮಿಕತೆ, ಉಡಿಗೆ-ತೊಡಿಗೆ, ಕ್ರೀಡೆ-ಮನೋರಂಜನೆ, ಉದ್ಯಮಗಳು-ಹವ್ಯಾಸಗಳು, ಸೇವಾ ಕೇಂದ್ರಗಳು ಮುಂತಾದವುಗಳು ತುಂಬಾ ವೈವಿಧ್ಯತೆಯಿಂದ ಕೂಡಿರುತ್ತವೆ ಹಾಗೂ ಸಂಕೀರ್ಣವಾಗಿರುತ್ತವೆ. ಬದುಕಿನ ತಲ್ಲಣಗಳಿಗೆ ಪ್ರತಿಕ್ರಿಯೆ ತುಂಬಾ ವಿಭಿನ್ನವಾಗಿರುತ್ತದೆ.
  8. ಗ್ರಾಮೀಣ ಪ್ರದೇಶಗಳಲ್ಲಿ ವೃತ್ತಿಗಳು, ಕಾರ್ಯಗಳು, ಕೆಲಸಗಳು ಸೀಮಿತ ಆಗಿರುತ್ತವೆ. ಇದಕ್ಕೆ ವಿರುದ್ಧವಾಗಿ ನಗರಗಳಲ್ಲಿ ಶ್ರಮ ವಿಭಜನೆ, ವಿಶಿಷ್ಟೀಕರಣ, ಸಾಲ ಸೌಲಭ್ಯ, ಸಲಹಾ ಸೌಲಭ್ಯ, ಬ್ಯಾಂಕ್ಗಳು, ಜೀವ ವಿಮಾ ಸಂಸ್ಥೆಗಳು, ಕೈಗಾರಿಕೆಗಳು ಮುಂತಾದವುಗಳ ಕಾರಣವಾಗಿ, ನಗರ ಸಮುದಾಯದ ಸದಸ್ಯರು ವೈದ್ಯ, ಇಂಜನಿಯರ್, ಶಿಕ್ಷಣತಜ್ಞ, ಶಿಕ್ಷಕ, ಪ್ರಾಧ್ಯಾಪಕ, ವಕೀಲ, ಕಾರ್ಮಿಕ, ಚಾಲಕ, ಕಲಾವಿದ, ಸಂಗೀತಗಾರ, ಸಾಹಿತಿ, ಕವಿ, ಕಾದಂಬರಿಕಾರ, ಕಥೆಗಾರ, ವಿಮರ್ಶಕ, ಗುತ್ತಿಗೆದಾರ, ವ್ಯವಸ್ಥಾಪಕ, ರಾಜಕಾರಣಿ, ಪೂಜಾರಿ, ದುರಸ್ತಿಕಾರ, ಉದ್ಯೋಗದಾತ ಮುಂತಾದ ಹಲವು ಹತ್ತು ವೃತ್ತಿಗಳಲ್ಲಿ, ಕೆಲಸಗಳಲ್ಲಿ ನಿರತರಾಗಿರುತ್ತಾರೆ. ನಗರ ಪ್ರದೇಶಗಳಲ್ಲಿ ವ್ಯಕ್ತಿ ಬೆಳೆಯಲು ವಿಫುಲ ಅವಕಾಶಗಳಿರುತ್ತವೆ. ಇದರ ಫಲರೂಪವಾಗಿ ನಗರ ಪ್ರದೇಶಗಳಲ್ಲಿ ವಿಶಿಷ್ಟ ಸೇವೆಗಳು ಲಭ್ಯವಿರುತ್ತವೆ.
  9. ಗ್ರಾಮೀಣ ಸಮುದಾಯಗಳಲ್ಲಿ ಸಾಮಾಜಿಕ ಚಲನೆಗೆ ಅವಕಾಶಗಳು ಕಡಿಮೆ. ಇದಕ್ಕೆ ಪ್ರತಿಯಾಗಿ ನಗರಗಳಲ್ಲಿ ಸಾಮಾಜಿಕ ಚಲನೆಗೆ ಹೆಚ್ಚಿನ ಅವಕಾಶಗಳಿರುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಬಡವ, ಬಲ್ಲಿದ, ರೈತ ಮುಂತಾದ ವೃತ್ತಿ-ಸ್ಥಿತಿಗಳಿಗೆ ಕೆಲವೇ ಅವಕಾಶಗಳಿದ್ದರೆ, ನಗರ ಪ್ರದೇಶಗಳಲ್ಲಿ ಸಾಮಾಜಿಕ ಚಲನೆಯ ತೀವ್ರ ಸ್ವರೂಪವನ್ನು ನೋಡಬಹುದಾಗಿದೆ. ಆಥರ್ಿಕವಾಗಿ ಬಡವರು (ದಿನಗೂಲಿ ನೌಕರರು, ಕಾರ್ಮಿಕರು ಇತ್ಯಾದಿ), ಕೆಳ ಮಧ್ಯಮ ವರ್ಗ (ಉದ್ಯೋಗಿಗಳು, ಚಿಕ್ಕ ವ್ಯಾಪಾರಸ್ಥರು, ಇತ್ಯಾದಿ), ಮೇಲಿನ ಮಧ್ಯಮ ವರ್ಗ (ವೈದ್ಯರು, ಇಂಜಿನಿಯರ್, ಪ್ರಾಧ್ಯಾಪಕರು, ನ್ಯಾಯಾಧೀಶರು, ಚಿಕ್ಕ ಉದ್ದಿಮೆದಾರರು ಇತ್ಯಾದಿ), ಸಿರಿವಂತರು, ಹೆಚ್ಚು ಸಿರಿವಂತರು (ಉದ್ಯೋಗದಾತರು, ಕೈಗಾರಿಕೆಗಳನ್ನು ನಡೆಸುವವರು, ಕ್ರೀಡಾಪಟುಗಳು, ಸಿನೆಮಾ ತಾರೆಯರು ಇತ್ಯಾದಿ) ಮುಂತಾದವರನ್ನು ಕಾಣಬಹುದಾಗಿದೆ.
  10. ಗ್ರಾಮೀಣ ಪ್ರದೇಶಗಳಲ್ಲಿ ಜನರನ್ನು ನಿಯಂತ್ರಿಸುವುದು ಅವರ ಧಾರ್ಮಿಕ ಭಾವನೆಗಳು, ಸಾಂಸ್ಕೃತಿಕ ಅಂಶಗಳು, ಸಮುದಾಯದ ಭಾವೈಕ್ಯತೆ, ವೈಯಕ್ತಿಕ-ಕೌಟುಂಬಿಕ ಸಂಬಂಧಗಳು. ನಗರ ಸಮುದಾಯಗಳಲ್ಲಿ ಸದಸ್ಯರನ್ನು ನಿಯಂತ್ರಿಸುವುದು ಹೆಚ್ಚಾಗಿ ಇಂತಹ ಅಂಶಗಳನ್ನು ಒಳಗೊಂಡಿರದೆ, ಶಾಸನ, ಕಾನೂನು, ನ್ಯಾಯಾಲಯ, ಸರಕಾರಿ ಆದೇಶಗಳು ಮುಂತಾದವುಗಳಿಂದ ಕೂಡಿರುತ್ತದೆ.
  11. ಗ್ರಾಮೀಣ ಸಮುದಾಯಗಳಲ್ಲಿ ಸಾಮುದಾಯಿಕ ಐಕ್ಯತೆಯನ್ನು ಕಾಣುತ್ತೇವೆ. ಗ್ರಾಮೀಣ ಸಮುದಾಯದ ಸದಸ್ಯರು ಕಷ್ಟಸಹಿಷ್ಣುಗಳು. ನಗರ ಸಮುದಾಯಗಳಲ್ಲಿ ಐಕ್ಯತೆಯನ್ನು ಕಾಣುವುದು ಅಪರೂಪ. ಆದರೆ ಹೆಚ್ಚು ಹೊಂದಾಣಿಕೆಯನ್ನು ಕಾಣುತ್ತೇವೆ. ಆರ್ಥಿಕವಾಗಿ ಬಡವ-ಬಲ್ಲಿದ, ಸಾಮಾಜಿಕವಾಗಿ ಮೇಲು-ಕೀಳು, ಶೈಕ್ಷಣಿಕವಾಗಿ ಓದಿದವ-ಓದದೆ ಇರುವವ, ಧಾರ್ಮಿಕವಾಗಿ ವಿವಿಧ ಧರ್ಮ, ಪಂಥ, ಜಾತಿ, ಗೋತ್ರ, ಬೆಡಗು ಮುಂತಾದ ವಿಭಿನ್ನ ಗುಂಪುಗಳಿಂದ ಬಂದವರಾಗಿದ್ದರಿಂದ, ಇದರಂತೆ ಇನ್ನೂ ಅನೇಕ ವೈರುಧ್ಯಗಳನ್ನು ಕಾಣುವ ನಗರ ಪ್ರದೇಶಗಳಲ್ಲಿ ಐಕ್ಯತೆಯ ಬದಲು ಹೊಂದಾಣಿಕೆಯನ್ನು ಕಾಣುತ್ತೇವೆ. ತಮ್ಮ ತಮ್ಮ ಭಿನ್ನ ಹಿನ್ನೆಲೆ, ಭಿನ್ನ ಅಭಿಪ್ರಾಯಗಳನ್ನು ಉಳಿಸಿಕೊಂಡು ಬದುಕುವ ಏಕೈಕ ಮಾರ್ಗ ಹೊಂದಾಣಿಕೆ. ತಮ್ಮ ಎಲ್ಲಾ ಭಿನ್ನತೆಯನ್ನಿಟ್ಟುಕೊಂಡೂ ಹೊಂದಾಣಿಕೆಯಿಂದ ಬದುಕುತ್ತಾರೆ. ನಗರ ಪ್ರದೇಶಗಳಲ್ಲಿ ಈ ಕಾರಣಗಳಿಂದ ಪರಸ್ಪರ ಅವಲಂಬಿತರಾಗಿರುತ್ತಾರೆ.
  12. ಗ್ರಾಮೀಣ ಪ್ರದೇಶಗಳಲ್ಲಿ ಕಾಣದ ಮಾರುಕಟ್ಟೆ ಆಧಾರಿತ ಅರ್ಥವ್ಯವಸ್ಥೆಯನ್ನು ನಗರಗಳಲ್ಲಿ ಕಾಣಬಹುದಾಗಿದೆ. ಬೃಹತ್, ಮಧ್ಯಮ ಹಾಗೂ ಚಿಕ್ಕ ಕೈಗಾರಿಕೆಗಳ ಪ್ರಾರಂಭ, ಜೀವನಾವಶ್ಯಕ ವಸ್ತುಗಳ ಉತ್ಪಾದನೆ ಮತ್ತು ಸರಬರಾಜು, ದೊಡ್ಡ ಅಂಗಡಿಗಳ-ಮಾಲ್ಗಳ ಪ್ರಾರಂಭ, ಬ್ಯಾಂಕಿಂಗ್, ಜೀವವಿಮೆ, ಸೇವಾವಲಯ ಮುಂತಾದ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಒಂದು ಬೃಹತ್ತಾದ ಮಾರುಕಟ್ಟೆ ವ್ಯವಸ್ಥೆ ನಗರ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುತ್ತದೆ. ಅಷ್ಟೇ ಅಲ್ಲ, ಇಡೀ ಆರ್ಥಿಕ ವ್ಯವಸ್ಥೆಯಲ್ಲಿ ಮಾರುಕಟ್ಟೆಯ ಪಾತ್ರ ತುಂಬಾ ದೊಡ್ಡದಾಗಿರುತ್ತದೆ.
  13. ನಗರ ಸಮುದಾಯಗಳಲ್ಲಿ ಸ್ವಯಂಸೇವಾ ಸಂಸ್ಥೆಗಳು ಹಾಗೂ ಐಶ್ಛಿಕ ಸಂಘಗಳು ಅಸ್ತಿತ್ವದಲ್ಲಿರುತ್ತವೆ. ಕೈಗಾರಿಕಾ ದಿಗ್ಗಜರ ಸಂಘಗಳು, ಕಾರ್ಮಿಕರ ಸಂಘಗಳು, ಉದ್ಯೋಗಿಗಳ ಸಂಘಗಳು, ಹೋಟಲ್ ಉದ್ಯಮಿಗಳ ಸಂಘಗಳು, ಕೂಲಿಕಾರರ ಸಂಘಗಳು, ಶಿಕ್ಷಕರ ಸಂಘಗಳು, ವಕೀಲರ, ವೈದ್ಯರ, ಪ್ರಾಚಾರ್ಯರ-ಪ್ರಾಧ್ಯಾಪಕರ ಸಂಘಗಳು, ಆಟೋ ಚಾಲಕರ ಸಂಘಗಳು, ಬ್ಯಾಂಕ್ ಉದ್ಯೋಗಿಗಳ ಸಂಘಗಳು, ಅಂಗಡಿ ಮಾಲಿಕರ ಸಂಘಗಳು, ಕ್ಷೌರಿಕ, ದರ್ಜಿ ಮುಂತಾದ ಸ್ವಯಂ ವೃತ್ತಿ ನಿರತರಾದವರ ಸಂಘಗಳು, ಕ್ರೀಡಾ ಸಂಘಗಳು, ಕಲಾವಿದರ ಸಂಘಗಳು, ಮಹಿಳಾ ಸಂಘಗಳು, ಯುವಕ-ಯುವತಿ ಸಂಘಗಳು ಹೀಗೆ ವಿವಿಧ ಗುಂಪಿನ ಜನರು ನಿಗದಿತ ಉದ್ದೇಶಗಳಿಗಾಗಿ ಸಂಘಗಳನ್ನು ಕಟ್ಟಿಕೊಂಡು, ಅವುಗಳ ಮುಖಾಂತರ ತಮ್ಮ ಅವಶ್ಯಕತೆಗಳನ್ನು, ಬೇಡಿಕೆಗಳನ್ನು ಪೂರೈಸಿಕೊಳ್ಳುತ್ತಾರೆ. ಈ ಸಂಘಗಳಲ್ಲಿ ಸದಸ್ಯರಾಗಲು ಆಯಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಸಾಮಾನ್ಯವಾಗಿ ಮುಕ್ತವಾಗಿ ಅವಕಾಶ ಇರುತ್ತದೆ.
  14. ನಗರ ಪ್ರದೇಶದ ಜನರು ವಿಭಿನ್ನ ಧಾರ್ಮಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಿನ್ನೆಲೆಗಳಿಂದ ಬಂದವರಿರುತ್ತಾರೆ. ಅವರಿಗೆ ಆಧುನೀಕರಣದ ಹಾಗೂ ಸ್ವತಂತ್ರ ವ್ಯಕ್ತಿತ್ವದ ಪರಿಚಯ ಇರುತ್ತದೆ. ತಮ್ಮ ಜೀವನವನ್ನು ತಾವೇ ಸ್ವತಂತ್ರವಾಗಿ ರೂಪಿಸಿಕೊಳ್ಳಬಲ್ಲರು. ಹಾಗಾಗಿ ನಗರ ಸಮುದಾಯದ ಸದಸ್ಯರ ಮೇಲೆ ಕುಟುಂಬದ ನಿಯಂತ್ರಣ ಕಡಿಮೆಯಾಗುತ್ತಾ ಹೋಗುತ್ತದೆ. ಈ ಪರಿಸ್ಥಿತಿ ಅಭದ್ರ ಕುಟುಂಬಕ್ಕೆ ದಾರಿ ಮಾಡಿಕೊಡುತ್ತದೆ.
  15. ನಗರ ಸಮುದಾಯಗಳು ಬಹುಚಟುವಟಿಕೆಗಳ ಕೇಂದ್ರಗಳಾಗಿರುತ್ತವೆ. ಹತ್ತಾರು ಕ್ಷೇತ್ರಗಳಲ್ಲಿ ನೂರಾರು ರೀತಿಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಕೈಗಾರಿಕೆಯಿಂದ ಸೇವಾ ವಲಯಗಳವರೆಗೆ, ಧಾರ್ಮಿಕ ಕ್ಷೇತ್ರದಿಂದ ಸಾಂಸ್ಕೃತಿಕ ಕ್ಷೇತ್ರದವರೆಗೆ, ಕಲಾ ಕ್ಷೇತ್ರದಿಂದ-ಕ್ರೀಡಾ ವಿಭಾಗಗಳವರೆಗೆ ಸಾಹಿತ್ಯದಿಂದ-ಸಿನೇಮಾ ರಂಗದವರೆಗೆ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ, ವಲಯಗಳಲ್ಲಿ, ವಿಭಾಗಗಳಲ್ಲಿ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿರುತ್ತವೆ.
  16. ನಗರ ಸಮುದಾಯದ ಸದಸ್ಯರಿಗೆ ಸಾಮಾಜಿಕ ಪ್ರಜ್ಞೆ ಸದಾ ಜಾಗೃತವಾಗಿರುತ್ತದೆ. ಅವರಿಗೆ ಶಿಕ್ಷಣದ ಪ್ರಾಮುಖ್ಯತೆ ತಿಳಿದಿರುತ್ತದೆ. ಕಷ್ಟಪಟ್ಟಾದರೂ ಓದಿ ಮುಂದೆ ಬರಲು ಪ್ರಯತ್ನಿಸುತ್ತಾರೆ. ನಗರ ಪ್ರದೇಶದ ಜನರಿಗೆ ಸಮಯಪ್ರಜ್ಞೆ ಇರುತ್ತದೆ. ತಮ್ಮ ಜೀವನದ ಸ್ವಲ್ಪ ಸಮಯವನ್ನೂ ಹಾಳು ಮಾಡಿಕೊಳ್ಳುವುದಿಲ್ಲ. ಅವರ ನಡವಳಿಕೆ ವಿವೇಚನೆಯಿಂದ ಕೂಡಿರುತ್ತದೆ.7

ನಗರ ಪ್ರದೇಶಗಳಲ್ಲಿ ಈ ವೈಲಕ್ಷಣ್ಯಗಳನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ. ಇದಕ್ಕೆ ಅಪವಾದಗಳು ಉಂಟೆಂಬುದನ್ನು ನಾವು ಮರೆಯುವ ಹಾಗಿಲ್ಲ.
 
ಬುಡಕಟ್ಟು ಸಮುದಾಯಗಳು
ಗ್ರಾಮೀಣ ಮತ್ತು ನಗರ ಸಮುದಾಯಗಳಿಂದ ಭಿನ್ನವಾದ ಇನ್ನೊಂದು ಪ್ರಕಾರದ ಸಮುದಾಯಗಳಿವೆ. ಇಂತಹ ಪ್ರಕಾರದ ಸಮುದಾಯದ ಸದಸ್ಯರು ನಾಗರೀಕತೆಯಿಂದ ದೂರವಿದ್ದು, ಗುಡ್ಡಗಾಡು ಪ್ರದೇಶಗಳಲ್ಲಿ, ಗಿರಿ ಕಂದರಗಳಲ್ಲಿ, ಇಲ್ಲವೇ ಕಣಿವೆ-ಹಳ್ಳಗಳ ಬದಿಯಲ್ಲಿ ತಮ್ಮ ಜನರೊಂದಿಗೆ, ತಮ್ಮದೇ ಆದ ಹಟ್ಟಿಗಳನ್ನು, ತಾಂಡಗಳನ್ನು ಕಟ್ಟಿಕೊಂಡು ವಾಸವಾಗಿರುತ್ತಾರೆ. ಇವರು ಸಾಮಾನ್ಯವಾಗಿ ಸಾಂಪ್ರದಾಯಿಕ ವೃತ್ತಿಗಳನ್ನು ಅನುಸರಿಸುತ್ತಿರುತ್ತಾರೆ. ತಮ್ಮದೇ ಆದ ದೇವರುಗಳು, ಸಂಪ್ರದಾಯ ಪದ್ಧತಿಗಳನ್ನು ಹೊಂದಿರುತ್ತಾರೆ. ಇವರ ಭಾಷೆಯೂ ಭಿನ್ನವಾಗಿರುತ್ತದೆ. ಇವರು ತಾವೇ ಸೃಷ್ಟಿಸಿಕೊಂಡ ಒಂದು ಆರ್ಥಿಕ ವ್ಯವಸ್ಥೆಯನ್ನು ಅನುಸರಿಸುತ್ತಿರುತ್ತಾರೆ. ಇಂತಹ ಸಮುದಾಯಗಳಿಗೆ ಬುಡಕಟ್ಟು ಸಮುದಾಯಗಳು ಎಂದು ಕರೆಯುತ್ತಾರೆ.

ಇಂತಹ ಬುಡಕಟ್ಟು ಸಮುದಾಯಗಳು ಭಾರತದ ಉದ್ದಗಲಕ್ಕೂ ಸಿಗುತ್ತವೆ. ಇವರನ್ನು ಮೂಲ ನಿವಾಸಿಗಳು, ಆದಿವಾಸಿಗಳು, ಗುಡ್ಡಗಾಡು ಜನರು, ಗಿರಿಜನರು ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಭಿಲ್ಲರು, ಗೊಂಡರು, ಸಂತಲರು, ಓರಾನರು, ಮುಂಡರು, ಖೊಂಡರು ಮುಂತಾದವರನ್ನು ಇದಕ್ಕೆ ಉದಾಹರಿಸಬಹುದಾಗಿದೆ. ಕರ್ನಾಟಕದಲ್ಲಿಯೂ ಇಂತಹ ಅನೇಕ ಬುಡಕಟ್ಟು ಸಮುದಾಯಗಳಿವೆ. ಗೊಲ್ಲರು, ಹೆಳವರು, ಹಕ್ಕಿಪಿಕ್ಕಿ ಜನಾಂಗ, ಜೇನು ಕುರುಬರು, ಕಾಡು ಕುರುಬರು, ಕೊರಗರು, ಮ್ಯಾಸ ನಾಯಕರು, ಸೋಲಿಗರು ಇತ್ಯಾದಿ ಬುಡಕಟ್ಟು ಜನಾಂಗಗಳು ಕನ್ನಡ ನಾಡಿನಲ್ಲಿ ಸಿಗುತ್ತವೆ. ಲಂಬಾಣಿ ಜನಾಂಗವನ್ನು ಸರಕಾರವು ಪರಿಶಿಷ್ಟ ಜಾತಿ ಎಂದು ಪರಿಗಣಿಸಿದರೂ ಅವರು ಸಮಾಜಶಾಸ್ತ್ರೀಯ ದೃಷ್ಟಿಯಿಂದ ಒಂದು ಬುಡಕಟ್ಟು ಸಮುದಾಯವಾಗಿದೆ. ಇವರು ತಮ್ಮ ಜೀವನಕ್ಕೆ ಹೆಚ್ಚಾಗಿ ಪ್ರಕೃತಿಯನ್ನು ಅವಲಂಬಿಸಿರುತ್ತಾರೆ.

ಒಂದು ಜನಾಂಗವನ್ನು ಬುಡಕಟ್ಟು ಸಮುದಾಯಕ್ಕೆ ಸೇರಿಸಬೇಕಾದರೆ ಈ ಕೆಳಕಂಡ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಆರ್.ಸಿ. ವರ್ಮ ಹೇಳುತ್ತಾರೆ.8
  1. ಒಂದು ಭೌಗೋಲಿಕ ಪ್ರದೇಶದಲ್ಲಿದ್ದು, ಒಂದು ಸಾಂಪ್ರದಾಯಿಕ ವೃತ್ತಿಯನ್ನು ಅವಲಂಬಿಸಿರುವುದು.
  2. ತಮ್ಮದೇ ಆದ ಭಾಷೆ, ಧಾರ್ಮಿಕ ನಂಬಿಕೆಗಳು, ಸಂಪ್ರದಾಯಗಳು, ಪದ್ಧತಿಗಳು, ಕುಶಲಕಲೆಗಳು ಮುಂತಾದವುಗಳನ್ನು ಹೊಂದಿದ್ದು ಒಂದು ಸ್ವತಂತ್ರ ಜೀವನಪದ್ಧತಿಯನ್ನು ಅಳವಡಿಸಿಕೊಂಡಿರುವುದು.
  3. ಪುರಾತನ ಹಾಗೂ ಸಾಂಪ್ರದಾಯಿಕ ವೃತ್ತಿ ಮತ್ತು ಆರ್ಥಿಕ ವ್ಯವಸ್ಥೆಯನ್ನು ಹೊಂದಿರುವುದು.
  4. ಶೈಕ್ಷಣಿಕವಾಗಿ, ತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವುದು.

ಈ ಮಾನದಂಡವನ್ನು ಆಧಾರವಾಗಿಟ್ಟುಕೊಂಡು ಅನೇಕ ಸಮಾಜಶಾಸ್ತ್ರಜ್ಞರು ಬುಡಕಟ್ಟಿನ ವ್ಯಾಖ್ಯೆಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೋಡಬಹುದಾಗಿದೆ.

ಜೆ.ಎಲ್. ಗಿಲಿನ್ ಮತ್ತು ಜೆ.ಎ. ಗಿಲಿನ್ ಅವರ ಅಭಿಪ್ರಾಯದಂತೆ, ``ಒಂದು ಸ್ಥಳದಲ್ಲಿ ವಾಸಿಸುತ್ತಾ ಒಂದೇ ಭಾಷೆಯನ್ನು ಮಾತನಾಡುವ ಮತ್ತು ಒಂದು ಸಂಸ್ಕೃತಿಯನ್ನು ಹೊಂದಿರುವ ಸ್ಥಳೀಯ ಸಮುದಾಯಗಳ ಸಮೂಹಕ್ಕೆ ಸಮುದಾಯ ಎನ್ನಬಹುದು.

ಡಾ. ಡಿ.ಎಸ್. ಮಂಜುಮ್ದಾರ್ರವರ ಪ್ರಕಾರ, ``ಒಂದೇ ನಾಮಧೇಯವನ್ನು ಹೊಂದಿರುವ, ಒಂದೇ ಭೂನೆಲೆಯಲ್ಲಿ ವಾಸಿಸುವ, ಒಂದೇ ಭಾಷೆಯನ್ನಾಡುವ ಮತ್ತು ವಿವಾಹ-ಉದ್ಯೋಗಗಳಿಗೆ ಸಂಬಂಧಿಸಿದಂತೆ ಒಂದೇ ಬಗೆಯ ವಿಧಿ-ನಿಷೇಧಗಳಿಗೆ ಬದ್ಧವಾದ ಕುಟುಂಬಗಳ ಸಮೂಹವನ್ನು ಆದಿವಾಸಿ ಸಮೂಹ ಎಂದು ಕರೆಯಬಹುದು.

ಭಾರತದ ಇಂಪೀರಿಯಲ್ ಗೆಜೆಟಿಯರ್ ಪ್ರಕಾರ, ``ಒಂದೇ ಹೆಸರನ್ನು ಹೊಂದಿರುವ, ಒಂದೇ ಭಾಷೆಯನ್ನು ಮಾತನಾಡುವ, ಒಂದೇ ಸ್ಥಳದಲ್ಲಿ ವಾಸಮಾಡುವ ಅಥವಾ ವಾಸಿಸಲು ಉದ್ಯುಕ್ತರಾಗಿರುವ, ಪೂರ್ವದಲ್ಲಿ ಒಳಪಂಗಡ ವಿವಾಹ ಪದ್ಧತಿಗೆ ಬದ್ಧವಾಗಿದ್ದಿರಬಹುದಾದರೂ ಈಗ ಹಾಗಿಲ್ಲದ ಕುಟುಂಬಗಳ ಸಮೂಹವನ್ನು ಆದಿವಾಸ ಸಮಾಜ ಎನ್ನಬಹುದು.9
 
ಬುಡಕಟ್ಟು ಸಮುದಾಯದ ಪ್ರಮುಖ ಲಕ್ಷಣಗಳು
  1. ಭೂಪ್ರದೇಶ :- ಪ್ರತಿಯೊಂದು ಬುಡಕಟ್ಟು ಸಮುದಾಯದ ಸದಸ್ಯರು ಸಾಮಾನ್ಯವಾಗಿ ಒಂದು ಭೂಪ್ರದೇಶದಲ್ಲಿ ಅಥವಾ ಭೂಪ್ರದೇಶಗಳಲ್ಲಿ ವ್ಯಾಪಿಸಿಕೊಂಡಿರುತ್ತಾರೆ. ಇದಕ್ಕೆ ನಾಗಾ ಜನಾಂಗದವರು ನಾಗಾಲ್ಯಾಂಡ್ನಲ್ಲಿ, ಗೊಂಡರು ಹಾಗೂ ಭಿಲ್ಲರು ಮಧ್ಯಪ್ರದೇಶದಲ್ಲಿ, ತೊಡವರು ನೀಲಗಿರಿಯಲ್ಲಿ ವಾಸಿಸುವುದನ್ನು ಉದಾಹರಿಸಬಹುದಾಗಿದೆ. ಈ ಎಲ್ಲಾ ಬುಡಕಟ್ಟು ಸಮುದಾಯಗಳು ಇರುವುದು ಗುಡ್ಡಗಾಡು ಪ್ರದೇಶಗಳಲ್ಲಿ.
    ಅದರಂತೆಯೇ ಕರ್ನಾಟಕದಲ್ಲಿಯೂ ಕೆಲ ಬುಡಕಟ್ಟು ಜನಾಂಗಗಳು ಕೆಲವು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಾರೆ. ಹಕ್ಕಿಪಿಕ್ಕಿ ಜನಾಂಗ, ಜೇನು ಕುರುಬರು, ಕಾಡು ಕುರುಬರು ಪಶ್ಚಿಮಘಟ್ಟ ವ್ಯಾಪಿಸಿರುವ ಜಿಲ್ಲೆಗಳಲ್ಲಿ, ಕೊರಗರು ಕರಾವಳಿ ಜಿಲ್ಲೆಗಳಲ್ಲಿ, ಗೊಲ್ಲರು, ಹೆಳವರು, ಬಳ್ಳಾರಿ, ಚಿತ್ರದುರ್ಗ ಮುಂತಾದ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಆಧುನೀಕರಣ, ಕೈಗಾರಿಕೆ, ಶಿಕ್ಷಣ, ಸಂಚಾರ ವ್ಯವಸ್ಥೆ ಮುಂತಾದ ಕಾರಣಗಳಿಗಾಗಿ ಈ ಬುಡಕಟ್ಟು ಜನಾಂಗಗಳ ಸದಸ್ಯರು ಬೇರೆ ಜಿಲ್ಲೆಗಳಲ್ಲಿಯೂ ವಾಸವಾಗಿದ್ದಾರೆ.
  2. ವಿಶಿಷ್ಟ ಹೆಸರು - ಪ್ರತಿಯೊಂದು ಬುಡಕಟ್ಟು ಸಮುದಾಯಕ್ಕೂ ಅವರದೇ ಆದ ಒಂದು ಹೆಸರಿರುತ್ತದೆ. ಅಂತಹ ಹೆಸರುಗಳು ಆ ಜನಾಂಗಗಳ ಹೆಸರುಗಳಾಗಿರುತ್ತವೆ, ಅವರ ವೃತ್ತಿಯಿಂದ ಬಂದ ಹೆಸರುಗಳಾಗಿರುತ್ತವೆ. ಇಲ್ಲವೇ ಬೇರೆ ಕಾರಣಗಳಿಗಾಗಿ ಆ ಸಮುದಾಯಕ್ಕೆ ಅಂತಹ ಹೆಸರುಗಳು ಬಂದಿರುತ್ತವೆ. ತೊಡವರು, ಹಕ್ಕಿಪಿಕ್ಕಿಗಳು, ಕಾಡು ಕುರುಬರು, ಜೇನು ಕುರುಬರು ಮುಂತಾದವುಗಳನ್ನು ಇದಕ್ಕೆ ಉದಾಹರಿಸಬಹುದಾಗಿದೆ. ಕೆಲವು ಬುಡಕಟ್ಟು ಜನಾಂಗಗಳ ಹೆಸರುಗಳು ಇತರರಿಗೆ ವಿಚಿತ್ರವಾಗಿ ಕಾಣಿಸುವುದೂ ಉಂಟು.
  3. ಜನಾಂಗದ ಪೂರ್ವಜರಲ್ಲಿ ನಂಬಿಕೆ :- ಬುಡಕಟ್ಟು ಜನಾಂಗದ ಸದಸ್ಯರಲ್ಲಿ ತಮ್ಮ ಜನಾಂಗವನ್ನು-ಸಮುದಾಯವನ್ನು ಪ್ರಾರಂಭಿಸಿದ ವ್ಯಕ್ತಿಗಳಲ್ಲಿ ಅಪಾರ ಗೌರವವನ್ನು ಇಟ್ಟುಕೊಂಡಿರುತ್ತಾರೆ. ಇಂತಹ ವ್ಯಕ್ತಿಗಳು ಚಾರಿತ್ರಿಕ ವ್ಯಕ್ತಿಯಾಗಿರಬಹುದು, ಇಲ್ಲವೆ ಸಮುದಾಯಕ್ಕೆ ಒಳಿತನ್ನು ಮಾಡಿ ಮಡಿದಿರಬಹುದು. ಲಂಬಾಣಿಗಳ ಸಂತ ಸೇವಾಲಾಲ್ ಇದಕ್ಕೊಂದು ಉದಾಹರಣೆ. ಬೇರೆ ಹಿಂದೂ ಜಾತಿಗಳಲ್ಲಿರುವಂತೆ, ಬುಡಕಟ್ಟು ಜನಾಂಗದ ಸದಸ್ಯರು, ಅವರ ಪೂರ್ವಜರ ಇಲ್ಲವೆ ನಾಯಕರ ಹೆಸರಿನಲ್ಲಿ ಗುಡಿ ಕಟ್ಟಿ ಪೂಜಿಸುವ ಪದ್ಧತಿಗಳಿವೆ. ಸಮುದಾಯದಲ್ಲಿ ನಡೆಯುವ ಎಲ್ಲಾ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೊದಲು ಅವರಿಗೆ ಪೂಜೆ ಸಲ್ಲಿಸಿ, ಆನಂತರ ಉಳಿದ ಕೆಲಸ ಮಾಡುತ್ತಾರೆ.
  4. ಧಾರ್ಮಿಕ ನಿಷ್ಟೆ :- ಬುಡಕಟ್ಟು ಸಮುದಾಯಗಳಲ್ಲಿ ಧಾರ್ಮಿಕ ನಿಷ್ಟೆ ಅಚಲ. ಎಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ, ಬಡತನದಲ್ಲಿಯೂ ಧಾರ್ಮಿಕ ನಂಬಿಕೆಗಳನ್ನು ಬಿಟ್ಟುಕೊಡುವುದಿಲ್ಲ. ತಮ್ಮ ದೇವರು, ದೇವತೆಗಳು, ಚಾರಿತ್ರಿಕ ನಾಯಕರು ಮುಂತಾದವರಿಗೆ ಅಚಲವಾದ ನಿಷ್ಟೆಯನ್ನು ವ್ಯಕ್ತಪಡಿಸುತ್ತಾರೆ. ತಮ್ಮದೇ ಆದ ದೇವರುಗಳನ್ನು, ಕುಲದೇವತೆಗಳನ್ನು, ಜನಾಂಗದ ಮೂಲ ಪುರುಷರನ್ನು (ಪಿತೃಪೂಜೆ) ಪೂಜಿಸುತ್ತಾರೆ. ಕೆಲವು ಬುಡಕಟ್ಟು ಜನಾಂಗಗಳಲ್ಲಿ ಪ್ರಕೃತಿಯನ್ನು (ಭೂಮಿ, ಗಿಡ, ನದಿಗಳು, ಪರ್ವತಗಳು, ಸೂರ್ಯ, ಚಂದ್ರ, ಗಾಳಿ, ಆಕಾಶ ಇತ್ಯಾದಿ) ಪೂಜಿಸುವುದುಂಟು. ಕೆಲವು ಜನಾಂಗಗಳಲ್ಲಿ ಪ್ರಾಣಿ, ಪಕ್ಷಿಗಳನ್ನು ಪೂಜಿಸುತ್ತಾರೆ. ಕಲ್ಲಿನ ತುಂಡು, ಹಕ್ಕಿಯ ಗರಿ, ಪ್ರಾಣಿಯ ಕೊಂಬು, ಕಟ್ಟಿಗೆಯ ಕೋಲು, ಶಂಖ, ಡಮರುಗ ಮುಂತಾದ ವಸ್ತುಗಳನ್ನು ಪೂಜಿಸುತ್ತಾರೆ. ಒಟ್ಟಾರೆಯಾಗಿ ಬುಡಕಟ್ಟು ಸಮುದಾಯಗಳಲ್ಲಿ ದೇವರ ಮೂರ್ತಿಗಳು, ದೇವತೆಯ ಮೂರ್ತಿಗಳು, ಪ್ರಕೃತಿಯ ವಿಭಿನ್ನ ರೂಪಗಳು, ಕೆಲವು ವಸ್ತುಗಳನ್ನು ಪೂಜಿಸುವುದರ ಜೊತೆಗೆ ತಮ್ಮ ಜನಾಂಗದ ಪ್ರವರ್ತಕರನ್ನೂ ಹಾಗೂ ಪಿತೃದೇವತೆಗಳನ್ನೂ ಪೂಜಿಸುತ್ತಾರೆ.
  5. ರಕ್ತಸಂಬಂಧ ಮತ್ತು ಬಾಂಧವ್ಯ :- ಬುಡಕಟ್ಟು ಜನಾಂಗಗಳಲ್ಲಿ ರಕ್ತ ಸಂಬಂಧಕ್ಕೆ ಹೆಚ್ಚಿನ ಆದ್ಯತೆ ಇದೆ. ಕುಟುಂಬ, ವಂಶ, ಕುಲ, ಗೋತ್ರ, ಬೆಡಗು ಮುಂತಾದವುಗಳು ರಕ್ತ ಸಂಬಂಧದ ಆಧಾರದ ಮೇಲೆಯೇ ನಿಂತಿರುತ್ತವೆ. ಪ್ರತಿಯೊಂದು ಬುಡಕಟ್ಟು ಸಮುದಾಯವೂ ಅನೇಕ ಪಂಗಡ-ಉಪ ಪಂಗಡಗಳಾಗಿ ವಿಭಾಗಿಸಲ್ಪಟ್ಟಿರುತ್ತದೆ. ಬಾಂಧವ್ಯವನ್ನು ಬೆಳೆಸುವಾಗ ತಮ್ಮ ಪಂಗಡ-ಉಪಪಂಗಡಗಳನ್ನು ಬಿಟ್ಟು, ಬೇರೆ ಪಂಗಡ-ಉಪಪಂಗಡಗಳನ್ನು ಅವಲಂಬಿಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ತಮ್ಮ ಬುಡಕಟ್ಟಿನಿಂದ ಹೊರಗೆ ಬಾಂಧವ್ಯವನ್ನು ಬೆಳೆಸುವುದಿಲ್ಲ. ವಂಶಗಳು ಹಾಗೂ ಬೆಡಗುಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟರೂ ಇತರ ವಂಶ-ಬೆಡಗುಗಳ ವ್ಯಕ್ತಿಗಳನ್ನು ಸೋದರಭಾವದಿಂದ ಕಾಣುತ್ತಾರೆ.
  6. ಭಾಷೆ :- ಪ್ರತಿಯೊಂದು ಬುಡಕಟ್ಟು ಜನಾಂಗಕ್ಕೂ ತಮ್ಮದೇ ಆದ ಒಂದು ಭಾಷೆ ಇದೆ. ಈ ಭಾಷೆ ಇತರೆ ನಾಗರೀಕ ಭಾಷೆಗಳಿಗಿಂತ ಭಿನ್ನವಾಗಿರುತ್ತದೆ. ಅವರ ಭಾಷೆ ಇತರರಿಗೆ ಸ್ವಲ್ಪ ವಿಚಿತ್ರವಾಗಿ ಕಾಣಿಸುತ್ತದೆ. ಇಂತಹ ಬುಡಕಟ್ಟು ಭಾಷೆಗಳ ಮೇಲೆ ಪ್ರಾದೇಶಿಕ ಭಾಷೆಗಳ ಪ್ರಭಾವವೂ ಇರಬಹುದಾಗಿದೆ. ಇಂತಹ ಉಪ ಸಂಸ್ಕೃತಿಯ ಭಾಷೆಗಳು ಅಕ್ಷರಪೂರ್ವ ಸಂಸ್ಕೃತಿಯ ಭಾಗವಾಗಿರುವುದರಿಂದ, ಅವುಗಳಿಗೆ ಲಿಪಿ ಇರುವುದಿಲ್ಲ. ಪ್ರತಿಯೊಂದು ಬುಡಕಟ್ಟಿನ ಭಾಷೆಯೂ ಆಯಾ ಬುಡಕಟ್ಟಿನ ಐಕ್ಯತೆಯ ಸಂಕೇತವಾಗಿರುತ್ತವೆ.
  7. ಸಂಸ್ಕೃತಿ :- ಪ್ರತಿಯೊಂದು ಬುಡಕಟ್ಟು ಜನಾಂಗಕ್ಕೂ ತನ್ನದೇ ಆದ ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಹಿನ್ನೆಲೆ ಇರುತ್ತದೆ. ಅಂತಹ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಅವರ ಸಂಪ್ರದಾಯ, ಆಚಾರ-ವಿಚಾರ, ನಂಬಿಕೆ, ಪದ್ಧತಿಗಳು ರೂಪುಗೊಂಡಿರುತ್ತವೆ. ಈ ಸಾಂಸ್ಕೃತಿಕ ಅಂಶಗಳು ಅಂತಹ ಸಮುದಾಯಗಳಿಗೆ ಮಾತ್ರಾ ಸೀಮಿತವಾಗಿರುತ್ತವೆ. ಸಾಮಾನ್ಯವಾಗಿ ಆಯಾ ಬುಡಕಟ್ಟಿನ ಜನರು ತಮ್ಮ ಸಂಪ್ರದಾಯ-ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.
  8. ಐಕ್ಯತಾ ಭಾವನೆ :- ಬುಡಕಟ್ಟು ಸಮುದಾಯಗಳಲ್ಲಿ `ನಾವೆಲ್ಲಾ ಒಂದು ಎನ್ನುವ ಐಕ್ಯತಾ ಭಾವನೆ ಸದಾ ಜಾಗೃತವಾಗಿರುತ್ತದೆ. ಸಮಯ ಬಂದಾಗಲೆಲ್ಲಾ ಅದನ್ನು ಪ್ರದರ್ಶಿಸುತ್ತಾರೆ. ಸಮುದಾಯದ ಯಾವುದೇ ಗುಂಪಿಗೆ ಸಮಸ್ಯೆ ಎದುರಾದಾಗ ಇಡೀ ಸಮುದಾಯದವರು ಒಂದಾಗಿ ಅದನ್ನು ಎದುರಿಸುತ್ತಾರೆ. ಅದರಂತೆಯೇ ಹಬ್ಬ-ಹುಣ್ಣಿಮೆ, ಮದುವೆ, ಉತ್ಸವಗಳ ಸಂದರ್ಭಗಳಲ್ಲಿಯೂ ಒಟ್ಟಾಗಿ ಕಲೆತು ಆಚರಿಸಿ ಸಂಭ್ರಮಿಸುತ್ತಾರೆ. ಸಮುದಾಯದ ಒಳಿತಿಗಾಗಿ ಯಾವ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ.
  9. ಸ್ವಯಂಪೂರ್ಣ ಆರ್ಥಿಕ ವ್ಯವಸ್ಥೆ :- ಬುಡಕಟ್ಟು ಜನಾಂಗಗಳು ಪ್ರಾಚೀನ ಸಮುದಾಯಗಳಾಗಿರುವುದರಿಂದ ಒಂದು ಸುಸಜ್ಜಿತ ಆರ್ಥಿಕ ವ್ಯವಸ್ಥೆ ಇರದಿದ್ದರೂ, ತಮ್ಮ ಸಂಪನ್ಮೂಲಗಳ ಆಧಾರದ ಮೇಲೆ ಒಂದು ಸ್ವಯಂಪೂರ್ಣ ಆರ್ಥಿಕ ವ್ಯವಸ್ಥೆ ಇತ್ತು ಎಂದು ನಂಬಲಾಗಿದೆ. ಪ್ರಾರಂಭದ ದಿನಗಳಲ್ಲಿ ಬುಡಕಟ್ಟು ಜನರು ಅಲೆಮಾರಿಗಳಾಗಿದ್ದು ಗೆಡ್ಡೆಗೆಣಸು, ಮೀನು, ಪ್ರಾಣಿಗಳ ಮಾಂಸ ಮುಂತಾದವುಗಳನ್ನು ಅವಲಂಬಿಸಿರುವುದು ಚರಿತ್ರೆಯಲ್ಲಿ ದಾಖಲಾಗಿದೆ. ಗುಡ್ಡಗಾಡು ಪ್ರದೇಶ, ಅರಣ್ಯ ಪ್ರದೇಶ, ಹಳ್ಳ-ಕೊಳ್ಳಗಳ ಹತ್ತಿರ ಇವರು ವಾಸಿಸುತ್ತಿರುವುದರಿಂದ ಅಲ್ಲಿ ಸಿಗುವ ಹಣ್ಣು-ಹಂಪಲ, ಜೇನು, ಗೆಡ್ಡೆಗೆಣಸು, ಮುಂತಾದವುಗಳನ್ನು ಸಹಜವಾಗಿ ಅವಲಂಬಿಸಿದ್ದಾರೆ. ತಮ್ಮ ಅನಾರೋಗ್ಯದ ಸಮಸ್ಯೆಗಳಿಗೆ ಅಲ್ಲಿ ಸಿಗುವ ಔಷಧ ಸಸ್ಯಗಳು, ಬೇರುಗಳು, ಅಂಟು ಮುಂತಾದವುಗಳನ್ನು ಅವಲಂಬಿಸಿರಬಹುದಾಗಿದೆ. ಆನಂತರದ ದಿನಗಳಲ್ಲಿ ಅಲೆಮಾರಿ ಜೀವನವನ್ನು ಬಿಟ್ಟು ಕೃಷಿ ಮಾಡಲು ಪ್ರಾರಂಭಿಸಿದ್ದಾರೆ ಹಾಗೂ ಕೃಷಿ ಸಂಬಂಧಿ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಂದ ಉತ್ಪಾದನೆಯನ್ನು ಹಂಚಿಕೊಂಡು ಬದುಕಿದ್ದಾರೆ. ಆಗ ಸಾಟಿ ವ್ಯಾಪಾರ (ವಿನಿಮಯ ವ್ಯಾಪಾರ)ಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಟ್ಟಿದ್ದಾರೆ. ಅವರ ಜೀವನದ ಅವಶ್ಯಕತೆಗಳು (ಆಹಾರ, ಬಟ್ಟೆ, ವಸತಿ) ಬಹಳ ಕಡಿಮೆ ಇದ್ದವು. ಇವೆಲ್ಲವುಗಳ ಪರಿಣಾಮವಾಗಿ ಅವರು ಒಂದು ಸರಳ ಸ್ವಯಂಪೂರ್ಣ ಆರ್ಥಿಕ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದರು.
  10. ರಾಜಕೀಯ ವ್ಯವಸ್ಥೆ :- ಬುಡಕಟ್ಟು ಸಮುದಾಯದ ಸದಸ್ಯರು ತಮ್ಮದೇ ಆದ ಒಂದು ರಾಜಕೀಯ ವ್ಯವಸ್ಥೆಯನ್ನು ಹೊಂದಿರುತ್ತಾರೆ. ರಾಜ್ಯಗಳು (ಸಣ್ಣ ಭೌಗೋಲಿಕ ಪ್ರದೇಶಗಳು) ಇರಬಹುದು. ಇಲ್ಲವೇ ಇರದಿರಬಹುದು. ಆದರೆ ಒಂದು ರಾಜಕೀಯ ವ್ಯವಸ್ಥೆಯಂತೂ ಇರುತ್ತದೆ. ಸಾಮಾನ್ಯವಾಗಿ ಪ್ರತಿಯೊಂದು ಬುಡಕಟ್ಟು ಸಮುದಾಯಕ್ಕೂ ಒಬ್ಬ ನಾಯಕ ಇರುತ್ತಾನೆ. ಈ ನಾಯಕತ್ವ ವಂಶಪಾರಂಪರ್ಯದಿಂದ ಬಂದಿರುತ್ತದೆ. ನಾಯಕನಿಗೆ ಗಂಡು ಮಕ್ಕಳಿಲ್ಲದಿದ್ದರೆ ನಾಯಕನನ್ನು ತಮ್ಮ ಸಮುದಾಯದಲ್ಲಿ ಆರಿಸಿಕೊಳ್ಳುತ್ತಾರೆ. ನಾಯಕ ಆಡಳಿತಕ್ಕೆ ಅನುಕೂಲವಾಗುವಂತೆ ಕಾರ್ಯದರ್ಶಿ, ಪಂಚರು, ಸಹಾಯಕರು ಮುಂತಾದವರನ್ನು ನಿಯೋಜನೆ ಮಾಡಿಕೊಳ್ಳುತ್ತಾನೆ. ಕೆಲವು ಸಮುದಾಯಗಳಲ್ಲಿ ಅವರನ್ನೂ ನಾಯಕನಂತೆ ಆರಿಸುವುದುಂಟು. ಕಷ್ಟದ ಸಮಯ, ಸಂತೋಷದ ಸಂದರ್ಭಗಳು, ಹಬ್ಬ, ಉತ್ಸವ ಮುಂತಾದ ಸಮಯಗಳಲ್ಲಿ ಇವರು ಸಮುದಾಯದ ಆಡಳಿತವನ್ನು ನೋಡಿಕೊಳ್ಳುತ್ತಾರೆ. ಬುಡಕಟ್ಟು ಸಮುದಾಯಗಳಲ್ಲಿ ನಾಯಕನಿಗೆ ಹೆಚ್ಚಿನ ಗೌರವಾದರಗಳು ಇರುತ್ತವೆ. ಅವನ ಮಾತೇ ಶಾಸನವಾಗುತ್ತದೆ. ನಾಯಕನೂ ಸಮುದಾಯದ ಒಳಿತಿಗಾಗಿ ಶ್ರಮಿಸುತ್ತಾನೆ.
  11. ರಕ್ಷಣೆ :- ಬುಡಕಟ್ಟು ಸಮುದಾಯಗಳಲ್ಲಿ ರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ತಾವು ವಾಸ ಮಾಡುವ ಹಟ್ಟಿ, ದೊಡ್ಡಿ, ಹಾಡಿ, ಪಾಳ್ಳ, ತಾಂಡ ಮುಂತಾದ ವಸತಿ ಪ್ರದೇಶಗಳ ಸುತ್ತ ಬೇಲಿ ಕಟ್ಟಿಕೊಂಡು, (ಪೂರ್ವದಿಕ್ಕಿಗೆ ಒಂದು ಬಾಗಿಲನ್ನು ಮಾಡಿಕೊಂಡು) ತಮ್ಮನ್ನು ರಕ್ಷಿಸಿಕೊಳ್ಳುತ್ತಾರೆ. ಇದರ ಜೊತೆಗೆ ರಕ್ಷಣೆಗಾಗಿಯೇ ಕೆಲವು ಯುವಕರನ್ನು ನಿಯೋಜಿಸಿಕೊಳ್ಳುತ್ತಾರೆ.
  12. ಹೆಚ್ಚಿನ ಬುಡಕಟ್ಟು ಸಮುದಾಯದ ಸದಸ್ಯರು ಸೌಂದರ್ಯೋಪಾಸಕರು. ಹಾಡು, ನೃತ್ಯ, ಕೆತ್ತನೆ, ಕಲೆ, ಹಚ್ಚೆ, ಉಡಿಗೆ-ತೊಡಿಗೆಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸುತ್ತಾರೆ. ಬಿಲ್ಲು-ಬಾಣ, ಭರ್ಜಿ, ಕೋಲು, ಕವಣೆ, ಕ್ಯಾಟರಬಿಲ್ಲು, ಮುಂತಾದ ರಕ್ಷಣಾ ಸಾಮಗ್ರಿಗಳನ್ನು ಅವರು ಹಿಡಿದುಕೊಂಡು ತಿರುಗಾಡುತ್ತಿರುತ್ತಾರೆ. ಬಣ್ಣಬಣ್ಣದ, ರಂಗುರಂಗಿನ ಉಡುಪುಗಳನ್ನು ತೊಟ್ಟುಕೊಳ್ಳುತ್ತಾರೆ. ಮೈಮೇಲೆ ವಿವಿಧ ರೀತಿಯ ಹಚ್ಚೆ ಹಾಕಿಕೊಳ್ಳುತ್ತಾರೆ. ತಲೆಬಾಚಿ ದುಂಡಗೆ ಕಟ್ಟಿ, ನವಿಲುಗರಿ, ಪುಕ್ಕ, ಕೊಂಬು ಮುಂತಾದವುಗಳನ್ನು ಸಿಕ್ಕಿಸಿಕೊಂಡಿರುತ್ತಾರೆ. ಅದರಂತೆಯೇ ಹಬ್ಬ-ಹರಿದಿನ, ಜಾತ್ರೆ-ಉತ್ಸವಗಳಲ್ಲಿ ಹಾಡಿ, ಕುಣಿದು ನಲಿಯುತ್ತಾರೆ.
ಇವು ಬುಡಕಟ್ಟು ಸಮುದಾಯದ ವೈಲಕ್ಷಣ್ಯಗಳಾದರೂ, ಶಿಕ್ಷಣ, ಬೇರೆ ಬೇರೆ ವೃತ್ತಿಗಳು, ಆಧುನೀಕರಣ, ಸಂಚಾರ, ಆರ್ಥಿಕ-ಸಾಮಾಜಿಕ ಪ್ರಗತಿ, ಸರಕಾರಿ ಕಾರ್ಯಕ್ರಮದ ಅನುಷ್ಟಾನ ಮುಂತಾದ ಕಾರಣಗಳಿಗಾಗಿ ಅವರಲ್ಲಿಯೂ ಕಾಲಕ್ಕೆ ತಕ್ಕಂತೆ ಅನೇಕ ಬದಲಾವಣೆಗಳನ್ನು ಕಾಣುವಂತಾಗಿದೆ.
 
ಅಡಿಟಿಪ್ಪಣಿಗಳು
  1. ವಿವರಗಳಿಗೆ ನೋಡಿ - ಪ್ರೊ. ಮುರ್ರೇ ಜಿ ರೋಸ್, ಕಮ್ಯೂನಿಟಿ ಆರ್ಗನೈಸೇಷನ್-ಥಿಯರಿ ಅಂಡ್ ಪ್ರಾಕ್ಟೀಸ್, ಪು. 23-25.
  2. ವಿವರಗಳಿಗೆ ನೋಡಿ - ಪ್ರೊ. ಆರ್ಥರ್ ಡನ್ಹ್ಯಾಮ್, ಕಮ್ಯೂನಿಟಿ ವೆಲ್ಫೇರ್ ಆರ್ಗನೈಸೇಷನ್, ಪು. 15-16.
  3. ವಿವರಗಳಿಗೆ ನೋಡಿ - ಪ್ರೊ. ಕೆ.ಡಿ. ಗಂಗ್ರಾಡೆ, ಕಮ್ಯೂನಿಟಿ ಆರ್ಗನೇಸೈಷನ್ ಇನ್ ಇಂಡಿಯಾ, ಪಾಪುಲರ್ ಪ್ರಕಾಶನ್, ಬಾಂಬೆ, 1971, ಪು. 10-12.
  4. ಎ.ಡಬ್ಲ್ಯು. ಗ್ರಿನ್-(ಉ) ಪ್ರೊ. ಜಿ. ಸುಬ್ರಹ್ಮಣ್ಯ-ಸಮಕಾಲೀನ ಸಮಾಜಶಾಸ್ತ್ರ, ಸ್ವಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು-9, 2015, ಪು. 287.
  5. ಪ್ರೊ. ಜಿ. ಸುಬ್ರಹ್ಮಣ್ಯ, ಪು. 328.
  6. ವಿವರಗಳಿಗೆ ನೋಡಿ-(ಉ) ಪ್ರೊ. ಜಿ. ಸುಬ್ರಹ್ಮಣ್ಯ, ಪು. 329 ಮತ್ತು ಪ್ರೊ. ಚ.ನ. ಶಂಕರರಾವ್, ಸಮಾಜಶಾಸ್ತ್ರ ಸಂಪುಟ 2, ಜೈಭಾರತ್ ಪ್ರಕಾಶನ, ಮಂಗಳೂರು, 2008, ಪು. 135-136.
  7. ವಿವರಗಳಿಗೆ ನೋಡಿ-1. ಪ್ರೊ. ಜಿ. ಸುಬ್ರಹ್ಮಣ್ಯ, ಪು. 330-335, 2. ಪ್ರೊ. ಚ.ನ. ಶಂಕರರಾವ್, ಪು. 136-143.
  8. ಆರ್.ಸಿ. ವರ್ಮ-ಇಂಡಿಯನ್ ಟ್ರೈಬ್ಸ್ ತ್ರೂ ದಿ ಏಜಸ್, ಪ್ರಕಟಣಾ ವಿಭಾಗ, ವಾರ್ತಾ ಮತ್ತು ಪ್ರಚಾರ ಇಲಾಖೆ, ಭಾರತ ಸರಕಾರ, ನ್ಯೂ ಡೆಲ್ಲಿ, 1990, ಪು. 11.
  9. ಚ.ನ. ಶಂಕರರಾವ್, ಪು. 114.
 
ಡಾ. ಸಿ.ಆರ್. ಗೋಪಾಲ್
ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸ್ಮಯೋರ್ (SMIORE)
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9



    Six-Days
    Labour Laws & Labour Codes Certification Program

    Know More

    Picture
    Know More

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    30,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    Social Work Foot Prints


    RSS Feed


SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • EDITOR'S BLOG
  • HR BLOG
  • PUBLICATION WITH US
  • TRANSLATION & TYPING
  • VIDEOS

TRAINING

  • CERTIFICATE TRAINING COURSES
  • TRAINING PROGRAMMES

nIRATHANKA cLUB hOUSE

  • NIRATHANKA CLUB HOUSE

JOB

  • CURRENT JOB OPENINGS
  • FIND FREELANCE JOBS​
  • FREELANCE SPOKEN ENGLISH TRAINER
  • FREELANCE TRANSLATOR

HR SERVICES

  • ​COMPLIANCE SUPPORT
  • CONSULTING
  • CONTRACT LABOUR
  • CONTRACT LABOUR LICENCE & CONSULTING
  • DOMESTIC ENQUIRY
  • DRAFTING OF LEGAL DOCUMENTS
  • HR AND COMPLIANCE AUDIT
  • HUMAN RESOURCE PROCESS AND POLICY FORMULATION
  • ISO CERTIFICATION​
  • LEGAL ASSISTANCE
  • ORGANISATIONAL AND JOB DESIGNS
  • PAYROLL
  • RECRUITMENT & STAFFING SERVICES
  • STAFFING - WHITE & BLUE COLLAR
  • ​STANDING ORDERS CERTIFICATION
  • ​TRADEMARK

OTHER SERVICES

  • ​APARTMENT RESIDENTS WELFARE ASSOCIATION REGISTRATION
  • LICENCES AND NOCs FROM FIRE, AGRICULTURE, STATE EXCISE DEPARTMENTS
  • MSME REGISTRATION
  • ​NGO / TRUST / SOCIETY / ASSOCIATION, COOPERATIVE SOCIETY & PVT. LTD. COMPANY REGISTRATION
  • ​SHOPS & ESTABLISHMENT REGISTRATION​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe



JOIN OUR ONLINE GROUPS


JOIN WHATSAPP BROADCAST


ONLINE STORE


Copyright Niruta Publications 2021,    Website Designing & Developed by: www.mhrspl.com