|
ಲೇಖಕರು : ಡಾ. ಮೌನೇಶ್ವರ ಶ್ರೀನಿವಾಸರಾವ್ ಪುಟ : 119 ಪರಿವಿಡಿ ಮುನ್ನುಡಿ ಸಂಪಾದಕರ ನುಡಿ ಪರಿವಿಡಿ
ಸಂಪಾದಕರ ನುಡಿ ವಿಶ್ವದಾದ್ಯಂತ ಮಹಾತ್ಮ ಗಾಂಧೀಜಿ ಎಂದೇ ಖ್ಯಾತ ನಾಮರಾದ ಮೋಹನ್ ದಾಸ್ ಕರಮ್ ಚಂದ್ ಗಾಂಧೀಜಿಯವರು ಭಾರತದ ರಾಷ್ಟ್ರಪಿತ ಎಂದು ಸಹ ಪ್ರಸಿದ್ಧಿಯನ್ನು ಪಡೆದಿದ್ದಾರೆ, ನನ್ನ ಜೀವನವೇ ನನ್ನ ಸಂದೇಶ ಎಂದಿರುವ ಗಾಂಧೀಜಿಯವರ ಚಿಂತನೆ ಆಲೋಚನೆ ಮತ್ತು ಕ್ರಿಯೆಯನ್ನು ಒಳಗೊಂಡಿರುವಂತಹದ್ದಾಗಿದೆ. ಅವರ ಅದ್ಭುತವಾದ ಸಂಘಟನೆಯನ್ನು ಅಖಂಡ ಭಾರತದ ಜನತೆ ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದರು. ಬ್ರಿಟೀಷ್ ವಸಾಹತುಶಾಹಿ ವಿರುದ್ದ ಹೋರಾಟ ಮಾಡಿದ ಮಹಾನ್ ವ್ಯಕ್ತಿಯಾಗಿದ್ದ ಅವರು ಇಡೀ ಭಾರತ ದೇಶದ ಜನರಲ್ಲಿ ಐಕ್ಯತೆಯನ್ನುಂಟು ಮಾಡಿದ ಮಹಾನ್ ಶಕ್ತಿಯೂ ಕೂಡ ಆಗಿದ್ದು, ಶಾಂತಿ ಮತ್ತು ಅಹಿಂಸೆ ಎಂಬ ಅಸ್ತ್ರಗಳಿಂದ ಭಾರತೀಯರನ್ನು ಒಗ್ಗೂಡಿಸಿದರು. ಸುಮಾರು ಐದು ದಶಕಗಳ ಕಾಲ ಇವರು ಭಾರತದ ಸ್ವಾತಂತ್ರ್ಯಕ್ಕಾಗಿ ಸತ್ಯ, ಧರ್ಮ, ನ್ಯಾಯ, ನೀತಿ ಹಾಗೂ ಅಹಿಂಸೆ ಎಂಬ ತತ್ವಗಳನ್ನು ಮುಂದಿಟ್ಟುಕೊಂಡು ಮಹತ್ವದ ಹೋರಾಟವನ್ನೆ ಮಾಡಿದರು, ಇವರು ರಾಜಕೀಯ ಸ್ವಾತಂತ್ರ್ಯ ಮತ್ತು ಬ್ರಿಟೀಷರ ದಮನಕಾರಿ ಚಟುವಟಿಕೆಗಳ ವಿರುದ್ದ ವ್ಯಾಪಕವಾಗಿ ಹೋರಾಟ ನಡೆಸಿದರು. ಈ ಹೋರಾಟವು ಮಾನವ ಸಮಾನತೆ, ಮಾನವ ಗೌರವ, ಆತ್ಮಗೌರವ, ದೌರ್ಜನ್ಯ ವಿರೋಧಿ, ಅನ್ಯಾಯ ವಿರೋಧಿ ಹಾಗೂ ಹಿಂಸಾ ವಿರೋಧಿ ತತ್ವಗಳನ್ನು ಒಳಗೊಂಡಿತ್ತು.
ಇಂದಿಗೂ ಜಗತ್ತಿನ ಯಾವುದೇ ದೇಶದಲ್ಲಿ ಶಾಂತಿಯುತ ಮಾರ್ಗದಲ್ಲೇ ಕ್ರಾಂತಿಗಳು ಅಥವಾ ಬದಲಾವಣೆಗಳು ನಡೆಯುತ್ತಿದ್ದರೆ ಅವುಗಳಿಗೆ ಗಾಂಧೀಜಿಯವರ ಜೀವನ ಸಂದೇಶ ಸ್ಪೂರ್ತಿಯಾಗಿರುತ್ತದೆ. ಪ್ರಸ್ತುತ ಪ್ರಪಂಚದಾದ್ಯಂತ ಅಸಂಖ್ಯಾತ ಜನರು ಅವರ ಜೀವನ ಮತ್ತು ಭೋದನೆಗಳ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಗಾಂಧೀಜಿಯವರು ಧಾರ್ಮಿಕ, ರಾಜಕೀಯ, ಸಾಮಾಜಿಕ ವಿಚಾರಗಳಲ್ಲಿ ಎಲ್ಲಾ ರೀತಿಯ ಮೋಹಗಳಿಂದ ದೂರವಾಗಿ ಜೀವಿಸಬೇಕು ಎಂದಿದ್ದರು. ಈಗಿನ ಜನಾಂಗಕ್ಕೆ ಗಾಂಧೀಜಿಯವರ ಜೀವನ ಶೈಲಿ ಆದರ್ಶಮಯವಾಗಿರುವುದರಿಂದ ತಮ್ಮ ಜೀವನವನ್ನು ಅವರ ಜೀವನ ಮಾರ್ಗಕ್ಕನುಗುಣವಾಗಿ ನಡೆಸಲು ಪ್ರಯತ್ನಿಸುವವರು ನಮ್ಮ ಮಧ್ಯೆ ಇದ್ದಾರೆ. ಏಕೆಂದರೆ ಗಾಂಧೀಜಿಯವರು ಸತ್ಯಾನ್ವೆಷಣೆಯನ್ನು ಮಾಡಿದರು, ಆ ಸತ್ಯವು ಇವತ್ತಿಗೂ ಮತ್ತು ಎಲ್ಲಾ ಕಾಲಕ್ಕೂ ಅನುಕರಣೀಯವಾಗಿದೆ, ದೇಶಕ್ಕೆ ಸ್ವಾತಂತ್ರ್ಯ ಪಡೆಯುವುದು ಗ್ರಾಮೀಣ ಜನರ ಜೀವನ ಸುಧಾರಣೆ ಮತ್ತು ಅಭಿವೃದ್ದಿಗೆ ಅಂದು ಬಹಳ ಅವಶ್ಯಕವಾಗಿತ್ತು, ಈ ಕಾರಣದಿಂದಲೇ ಗಾಂಧೀಜಿಯವರು ಸ್ವರಾಜ್ಯ ಪರಿಕಲ್ಪನೆಯನ್ನು ಮುಂದಿಟ್ಟರು. ಪ್ರಸ್ತುತ ಇರುವ ಜ್ವಲಂತ ಸಮಸ್ಯೆಗಳ ಹಿನ್ನೆಲೆಯಲ್ಲಿ, ಈ ಗ್ರಂಥವು ಗಾಂಧೀಜಿಯವರ ತತ್ವಜ್ಞಾನ ಮತ್ತು ಭಾರತದಲ್ಲಿನ ಇತ್ತೀಚಿನ ವಿದ್ಯಮಾನಗಳು, ಗಾಂಧೀಜಿ ಮತ್ತು ಅಧಿಕಾರ ವಿಕೇಂದ್ರಿಕರಣ, ಗಾಂಧೀಜಿಯವರ ತತ್ವ ಮತ್ತು ಎಂ. ಜಿ. ನರೇಗಾ, ಗಾಂಧೀಜಿಯವರ ದೃಷ್ಟಿಕೋನದಲ್ಲಿ ಮಹಿಳಾ ಸಾಮಾಜಿಕ ವಿಮೋಚನೆ, ಗಾಂಧೀಜಿಯವರ ದೃಷ್ಟಿಯಲ್ಲಿ ಮಹಿಳಾ ಸಬಲೀಕರಣ, ಪರಿಪೂರ್ಣತೆಯ ಬದುಕಿಗೆ ಗಾಂಧೀಜಿಯವರ ಪೂರ್ಣ ತತ್ವಗಳು, ಮಹಾತ್ಮ ಗಾಂಧೀಜಿಯವರ ತತ್ವಗಳು ಮತ್ತು ಜೀವನ ಮಾರ್ಗಸೂತ್ರಗಳು, ಗಾಂಧೀಜಿಯವರ ಚಿಂತನೆ ಹಾಗೂ ಭಾರತದಲ್ಲಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬದಲಾವಣೆಗಳು, 21ನೇ ಶತಮಾನದಲ್ಲಿ ಗಾಂಧಿ ತತ್ವಚಿಂತನೆಗಳ ಪ್ರಸ್ತುತತೆ, ಗಾಂಧೀಜಿ ವ್ಯಕ್ತಿತ್ವ ಮತ್ತು ಸಂದೇಶ ಎಂಬ ಪ್ರಮುಖ ಶೀರ್ಷಿಕೆಗಳಲ್ಲಿ ಅವರ ವಿಚಾರ ಧಾರೆಯನ್ನು ಪ್ರಸ್ತುತಪಡಿಸುತ್ತದೆ. ಹೀಗೆ, ಈ ಸಂಪುಟವು ಮೌಲ್ಯಯುತವಾದಂತಹ ಪ್ರಮುಖ ಶೀರ್ಷಿಕೆಗಳು ಹಾಗೂ ಉಪ ಶೀರ್ಷಿಕೆಗಳನ್ನು ಒಳಗೊಂಡಿದ್ದು, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ ಮುಂತಾದ ಸಮಾಜ ವಿಜ್ಞಾನ ನಿಕಾಯದ ಹಾಗೂ ಕನ್ನಡ, ಆಂಗ್ಲ, ಹಿಂದಿ ಮುಂತಾದ ಭಾಷೆಗಳ ಕಲಾ ನಿಕಾಯದ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಹಾಗೂ ಅಧ್ಯಾಪಕ ಮಿತ್ರರಿಗೆ, ಗಾಂಧಿ ತತ್ವ ಸಿದ್ಧಾಂತಗಳ ಅಧ್ಯಯನಕಾರರಿಗೆ ಹಾಗೂ ವಿಶೇಷವಾಗಿ, ಭಾರತ ಸಂವಿಧಾನದ ಭಾಗ-ಗಿರ ರಾಜ್ಯ ನೀತಿ ನಿರ್ದೇಶಕ ತತ್ವಗಳಲ್ಲಿ ಒಳಗೊಂಡಿರುವ ಗಾಂಧಿ ತತ್ವಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಬೇಕೆನ್ನುವ ಆಶಯವುಳ್ಳ ನೀತಿ ನಿರೂಪಕರಿಗೂ ಅತ್ಯಂತ ಹೆಚ್ಚಿನ ಸಂಪನ್ಮೂಲವನ್ನು ಒದಗಿಸಬಲ್ಲ ಗ್ರಂಥವಾಗಿದೆ ಎನ್ನುವ ನಂಬಿಕೆಯು ನನ್ನದಾಗಿದೆ. ಪ್ರಸಕ್ತ ಕಾರ್ಯಕ್ಕಾಗಿ, ಲೇಖನಗಳನ್ನು ಒದಗಿಸಿದ ಎಲ್ಲಾ ಲೇಖಕ ಮಿತೃರುಗಳಿಗೂ ವಿಶೇಷವಾಗಿ ಕರ್ನಾಟಕದ ಮಾಜಿ ಅಡ್ವೋಕೇಟ್ ಜನರಲ್ರಾಗಿರುವ ಪ್ರೊ. ರವಿವರ್ಮ ಕುಮಾರ್, ಪ್ರಸಿದ್ದ ಚಿಂತಕರು ಹಾಗೂ ವಿಮರ್ಶಕರಾಗಿರುವ ಪ್ರೊ. ಜಿ. ರಾಮಕೃಷ್ಣ ಅವರುಗಳಿಗೂ ಹಾಗೂ ಈ ಗ್ರಂಥಕ್ಕೆ ಮುನ್ನುಡಿ ಬರೆದು ಪ್ರೋತ್ಸಾಹಿಸಿದ ನನ್ನ ಗೌರವಾನ್ವಿತ ಗುರುಗಳು, ಮಾರ್ಗದರ್ಶಕರು ಆಗಿರುವ ಪ್ರೊ. ಎಸ್.ಎ. ಪಾಳೇಕರ್ರವರಿಗೂ ಚಿರಋಣಿಯಾಗಿರುವನು. ನನ್ನ ಜೀವನದಲ್ಲಿ ಪ್ರತಿಯೊಂದು ಕಾರ್ಯಕ್ಕೂ ಸದಾ ಕಾಲ ಬೆನ್ನೆಲುಬಾಗಿ ನಿಂತು ನನ್ನನ್ನು ಆಶೀರ್ವದಿಸುತ್ತಿರುವ ನನ್ನ ಪೂಜ್ಯ ತಂದೆಯವರಾದ ಶ್ರೀ ಶ್ರೀನಿವಾಸರಾವ್ ಹಾಗೂ ತಾಯಿಯವರಾದ ಶ್ರೀಮತಿ ಈಶ್ವರಮ್ಮ ಇವರಿಗೆ ಈ ಕೃತಿಯನ್ನು ಸಮರ್ಪಿಸುತ್ತಿದ್ದೇನೆ. ಡಾ. ಮೌನೇಶ್ವರ ಶ್ರೀನಿವಾಸರಾವ್
0 Comments
Leave a Reply. |
Categories
All
Archives
July 2022
HR BooksSocial Work Books |
|
|
|
| ||||||||||||||||||||||||
SITE MAP
SiteNIRATHANKA |
POSHOUR OTHER WEBSITESSubscribe |
RSS Feed