Niruta Publications
  • Home
  • About Us
    • Ramesha's Profile
  • List Your Book for Free
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • List Your Book for Free
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಹಿಮನಾ ಸಮಗ್ರ ಕವನಗಳು

7/23/2017

0 Comments

 
Picture
ಸಂಪಾದಕರು : ಎಚ್.ಎಂ. ಹರ್ಷ
ಪುಟ : 256
ಕವಿ ಮಾತು
``ತುಂಬು ಅರಳಿದ ಬೇವು ನನ್ನ ಏಳನೆಯ ಕವನ ಸಂಗ್ರಹ. ಈ ಹಿಂದಿನ ಸಂಗ್ರಹಗಳಿಗೆ ದೊರೆತ ಪ್ರೋತ್ಸಾಹ ಮತ್ತು ಮೆಚ್ಚುಗೆಯಿಂದಾಗಿ, ಮತ್ತೊಂದು ಸಂಗ್ರಹವನ್ನು ಹೊರತರುವ ಪ್ರಯತ್ನ ಮಾಡಿದ್ದೇನೆ. ಕಾವ್ಯಕ್ಷೇತ್ರದಲ್ಲಿ, ಇತ್ತೀಚೆಗೆ, ಅನೇಕ ವರ್ಗಭೇದಗಳನ್ನು ಮಾಡಲಾಗಿದೆ. ನವೋದಯ, ನವ್ಯ, ಅತಿ ನವ್ಯ, ನವೋ-ನವ್ಯ, ಬಂಡಾಯ, ದಲಿತ, ಶೂದ್ರ-ಮೊದಲಾದ ಉಪ-ಪ್ರಕಾರಗಳನ್ನು ಸೃಷ್ಟಿಸಲಾಗಿದೆ. ಈ ವರ್ಗ ವಿಭೇದಗಳನ್ನು ಅರ್ಥೈಸುವ ಗೋಜಿಗೆ ನಾನು ಹೋಗುವುದಿಲ್ಲ. ಅದರ ಅಗತ್ಯವೂ ಇಲ್ಲ.
ಕಾವ್ಯಚೌಕಟ್ಟು ಬದಲಾದ ಮಾತ್ರಕ್ಕೆ ಭಾವಸ್ಪಂದನ ವ್ಯತ್ಯಾಸವಾಗುತ್ತದೆಂದು ಹೇಳಲು ಸಾಧ್ಯವಿಲ್ಲ. ಓದುಗನ ಅಭಿರುಚಿಯನ್ನು ಆಧರಿಸಿ, ಅಂದಂದಿಗೆ ಸಲ್ಲುವ ಪರಿಣಾಮಗಳಲ್ಲಿ ವ್ಯತ್ಯಾಸವಾಗಬಹುದು. ಆದರೆ, ಶಾಶ್ವತ ಮೌಲ್ಯದ ಮುಂದೆ ಕಾಲದ ಎಲ್ಲೆಕಟ್ಟು ನಿಲ್ಲುವುದಿಲ್ಲ.

ಮಾನವನ ಭಾವನೆಯ ಉತ್ತುಂಗ ಶಿಖರವನ್ನು ಹತ್ತಿ ನಿಲ್ಲುವ ಸಾಮರ್ಥ್ಯ ಕಾವ್ಯಕ್ಕೆ ಮಾತ್ರ ಉಂಟು ಎಂಬುದು ನನ್ನ ಭಾವನೆ. ಅನೇಕತೆಯಲ್ಲಿ ಏಕತೆಯನ್ನು ಕಾಣುವಂತೆ ಮಾಡುವ ಮತ್ತು ಬುದ್ಧಿಮತ್ತೆಗೆ ಸಂಸ್ಕಾರವನ್ನೀಯುವ ಸಾಮರ್ಥ್ಯ ಕಾವ್ಯಕ್ಕಿದೆ ಎಂಬುದು ನನ್ನ ಬಲವಾದ ನಂಬುಗೆ. ವಾತ್ಸಲ್ಯಗಳನ್ನು ವೃದ್ಧಿಗೊಳಿಸುವ ಮತ್ತು ಅವುಗಳನ್ನು ನಯಗೊಳಿಸುವ ಗುಣ ಕಾವ್ಯಕ್ಕಿದೆ. ಅದು ಕಲ್ಪನಾಶಕ್ತಿಯನ್ನು ವಿಸ್ತೃತಗೊಳಿಸುತ್ತದೆ; ಪರಿಜ್ಞಾನಕ್ಕೆ ಪ್ರಚೋದನೆಯನ್ನೀಯುತ್ತದೆ ; ಸಂವೇದನಾ ಶಕ್ತಿಯನ್ನು ವ್ಯಾಪಕಗೊಳಿಸುತ್ತದೆ ; ಮಾನಸಿಕ ಒತ್ತಡಗಳನ್ನು ನಿವಾರಿಸುತ್ತದೆ. ಇದು ಕಾವ್ಯದ ಯಾವ ಪ್ರಭೇದಕ್ಕೂ ಒಗ್ಗುವ ಮಾತು.

ಕಾವ್ಯದ ಗತಿ, ಕಲ್ಪನಾ ವಿಲಾಸ, ಪ್ರತಿಮಾ ವಿಧಾನ ಮೊದಲಾದವುಗಳು ಮನಸ್ಸಿಗೆ ಮುಟ್ಟುವ ಮುಖ್ಯ ಲಕ್ಷಣಗಳು. ಯಾವುದೇ ಒಂದು ಕಾವ್ಯ ಅದು ಸಣ್ಣದೇ ಇರಲಿ, ದೊಡ್ಡದೇ ಇರಲಿ-ಪರಿಪೂರ್ಣತೆಯನ್ನು ಸಾಧಿಸದಿದ್ದರೆ, ಅದು ಕಾವ್ಯಾಸಕ್ತರನ್ನು ತನ್ನೆಡೆಗೆ ಸೆಳೆದುಕೊಳ್ಳಲಾರದು.

ಕವಿಯು ತನ್ನ ಅನುಭವಕ್ಕೆ ನಿಲುಕಿದ ಸಂಗತಿಗಳನ್ನು, ಪರಿಣಾಮಕಾರಿಯಾಗಿ ನಿರೂಪಿಸಿ, ಅದು ಸಾರ್ವತ್ರಿಕ ಸಂಗತಿಯಾಗುವಂತೆ ಮರುಹೊಳಪನ್ನು ಕೊಟ್ಟಾಗ ಮಾತ್ರ ಸಾರ್ಥಕ ಸ್ವರೂಪದ ಕಾವ್ಯವಾಗಿ ಪರಿಣಮಿಸುತ್ತದೆ. ಕಾವ್ಯಕಲೆಯು ಪ್ರಜ್ಞಾಪೂರ್ವಕ ಸಾಧನೆಯನ್ನು ಪಡೆದಾಗ ಪರಿಪೂರ್ಣತೆಯತ್ತ ಸಾಗಲು ಸಮರ್ಥವಾಗುತ್ತದೆ; ಸಮಾಜದ ಕಿರಣಗಳಿಗೆ ಒಡ್ಡಿದಾಗ, ಸಹಸ್ರಮುಖವಾಗಿ ಕೆತ್ತಿದ ವಜ್ರದಂತೆ, ಥಳಥಳಿಸಿ, ವಿವಿಧ ವರ್ಣಗಳನ್ನು ಹೊರಚೆಲ್ಲುತ್ತದೆ.

ಅತ್ಯಂತ ಸೂಕ್ಷ್ಮವೂ ಪರಿಣಾಮಕಾರಿಯೂ ಆದ ಕಾವ್ಯಮಾರ್ಗವು ಮಾನವನ ಕೀಳು ಅಭಿರುಯಚಿಯ ಬೆನ್ನು ಹತ್ತಬೇಕೇ ಅಥವಾ ಮಾನವ ಸ್ವಭಾವದ ಸಂಸ್ಕಾರಕ್ಕೆ ಪ್ರಯತ್ನಿಸಿ, ಅಭಿರುಚಿಯನ್ನು ಪಳಗಿಸಬೇಕೇ ಎಂಬುದು, ಪ್ರಸ್ತುತ ಪರಿಸ್ಥಿತಿಯಲ್ಲಿ, ಕವಿಜನರ ಮುಂದಿರುವ ದೊಡ್ಡ ಪ್ರಶ್ನೆ. ಮಾನವ ಜೀವನದಲ್ಲಿ ಹತ್ತಾರು ಸಾವಿರ ವರ್ಷಗಳಲ್ಲಿ ಎಂದೂ ಸಂಭವಿಸದಂತಹ ಜಟಿಲತೆ, ಸಂಕೀರ್ಣತೆ ಕಳೆದ ನೂರಾರು ವರ್ಷಗಳಲ್ಲಿ ಇಣಿಕಿ ಹಾಕಿದೆ. ಇದರತ್ತ ಕವಿಗಳ ಗಮನ ಹರಿಯಬೇಕಾದುದು ಅಗತ್ಯ. ಮಾನವ ಜಗತ್ತನ್ನು ಸಾಹಿತ್ಯ ಸಂಪತ್ತು ಮಾತ್ರ ಉಳಿಸಬಲ್ಲುದೆಂಬುದನ್ನು ಅರಿತುಕೊಂಡು ವಿಶ್ವಪ್ರಜ್ಞೆಯನ್ನು ಎಚ್ಚರಿಸಬೇಕಾಗಿದೆ.

ಇಂದಿನ ಕವಿಜನರು, ತಾವು ಬಳಸುವ ಭಾಷೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸತ್ವಪೂರ್ಣವಾದ ಭಾಷೆಯು ಕವಿಜನಕ್ಕೆ ಕರಗತವಾದಾಗ, ತನ್ನಷ್ಟಕ್ಕೆ ತಾನು, ಸಹಜವಾಗಿಯೇ, ಕಾವ್ಯ ಮಾರ್ಗವನ್ನು ಕಂಡುಕೊಳ್ಳುತ್ತದೆ ; ಅಗತ್ಯವೆನಿಸಿದ ಕಡೆಗಳಲ್ಲೆಲ್ಲ ಹೊಸ ಮಾರ್ಗವನ್ನು ರೂಪಿಸಿಕೊಳ್ಳುತ್ತದೆ ; ಕಾವ್ಯಕ್ರಮವನ್ನು ಕಂಡುಕೊಳ್ಳುತ್ತದೆ. ಅಂಥದೊಂದು ಭಾಷೆಯನ್ನು ಬಳಸಿಕೊಳ್ಳುವ ಸಾಮರ್ಥ್ಯ ಕವಿಗೆ ಇರಬೇಕಾಗುತ್ತದೆ-ಅಷ್ಟೆ !

ಕಾವ್ಯದ ಗುರಿ ತುಂಬಾ ಘನತರವಾದದ್ದು. ಅದು ವ್ಯಕ್ತಿಯನ್ನು ಎತ್ತರಕ್ಕೆ ಏರಿಸಬೇಕು. ಘನತೆಯತ್ತ ಕೊಂಡೊಯ್ಯಬೇಕು. ಅವನಲ್ಲಿ ವೀಕ್ಷಕ ಮನೋವೃತ್ತಿಯನ್ನು ಕೆರಳಿಸಬೇಕು. ಅನ್ಯರೊಂದಿಗೆ ಅನುಸಂಧಾನ ಮಾಡುವಂತಹ ಮನೋಭೂಮಿಕೆಯನ್ನು ನಿರ್ಮಿಸಬೇಕು. ವ್ಯಕ್ತಿಗೆ ಅಂಟಿಕೊಂಡಿರಬಹುದಾದ ಮನೋಕ್ಷೊಭೆಯನ್ನು ಹೊರತಳ್ಳುವುದಕ್ಕೆ ಸಹಾಯಕವಾಗಬೇಕು. ಪ್ರಾಣಿ, ಪಕ್ಷಿ, ವನರಾಜಿಗಳಿಂದ ತುಂಬಿ ತುಳುಕುವ ಪ್ರಕೃತಿಯೊಡನೆ ವ್ಯಕ್ತಿ ಸಂಪರ್ಕವನ್ನು ಬೆಸೆಯುವಂತಹ ಮಧುರ ಸನ್ನಿವೇಶವನ್ನು ಕಲ್ಪಿಸಬೇಕು. ಸಾಮಾಜಿಕ ದೋಷಗಳಿಗೆ ನೈತಿಕ ತಳಹದಿಯ ಪರಿಹಾರಗಳನ್ನು ತೋರಿಸಿಕೊಡಬೇಕು. ಸಮಾಜಮಾರ್ಗದ ನಿತ್ಯ ನಿರ್ವಹಣೆಯಲ್ಲಿ ನೈತಿಕ ಮೌಲ್ಯಗಳನ್ನು ಒದಗಿಸಿಕೊಡಬೇಕು.

ಕಾವ್ಯವು ಸಾಮಾಜಿಕವಾಗಿ ಮಾಡಬಹುದಾದ ಪರಿಣಾಮಕ್ಕೂ ವ್ಯಕ್ತಿಗತವಾಗಿ ಮಾಡಬಹುದಾದ ಪರಿಣಾಮಕ್ಕೂ ಸ್ವಲ್ಪಮಟ್ಟಿನ ವ್ಯತ್ಯಾಸವಿದೆ. ವ್ಯಕ್ತಿ ಸಮಾಜದ ಒಂದು ಅವಿಭಾಜ್ಯ ಘಟಕವಾದುದರಿಂದ ಅವನ ಮೇಲೆ ಆಗಬಹುದಾದ ಪರಿಣಾಮವು, ಸಮಾಜದ ಒಳಿತಕ್ಕೂ ಸಾಧಕವಾಗಬಹುದು. ಆದರೆ ವ್ಯಕ್ತಿಯ ಮೇಲೆ ಆಗಬಹುದಾದ ``ವ್ಯಕ್ತಿಗತ ಪರಿಣಾಮವು ಆತನನ್ನು ಅಧ್ಯಾತ್ಮದ ಕಡೆಗೆ ಸರಿಸುತ್ತದೆ. ವ್ಯಕ್ತಿಯು ವಿಶ್ವವ್ಯಾಪಾರದೊಡನೆ ಅಥವಾ ಪ್ರಕೃತಿಯ ಚಲನವಲನದೊಡನೆ ಮತ್ತು ಅದರ ಅಸ್ತಿತ್ವದೊಡನೆ ಅನುಸಂಧಾನ ನಡೆಸಲು ಪ್ರಯತ್ನಿಸಿದಾಗ, ಅವನನ್ನು ರಹಸ್ಯದೆಡೆಗೆ ಕೊಂಡೊಯ್ಯುತ್ತದೆ. `ವಿಶ್ವ ವ್ಯಾಪಾರದ ಹಿನ್ನೆಲೆಯಲ್ಲಿ ನಿಂತಿರುವ ಅವ್ಯಕ್ತ ಶಕ್ತಿಯು ವ್ಯಕ್ತಿಯನ್ನು ಕಾರ್ಯೋನ್ಮುಖನನ್ನಾಗಿ ಮಾಡುತ್ತದೆ ಎಂಬ ಅರಿವನ್ನು ಅವನಲ್ಲಿ ಮೂಡಿಸುತ್ತದೆ. ವ್ಯಕ್ತಿ ಜೀವನವೇ ಒಂದು ಸಂದೇಶವಾಗಿ ಪರಿಣಮಿಸಬೇಕು ಎಂಬ ಪರಿಜ್ಞಾನವನ್ನು ಮೂಡಿಸುತ್ತದೆ. ಯಾವನೇ ಒಬ್ಬ ವ್ಯಕ್ತಿಯ ಜೀವನ ಸಹ್ಯವಾಗದಿದ್ದರೆ, ಅವನು ಮಾಡಬಹುದಾದ ಬಹಿರಂಗ ಆಚರಣೆಗಳು ಕಂದಾಚಾರದ ಕಂತೆಗಳಾಗಿ ಕಾಣಿಸಿಕೊಳ್ಳುತ್ತವೆ ; ಅರ್ಥಹೀನ ಪ್ರಯತ್ನಗಳಾಗಿ ಪರಿಣಮಿಸುತ್ತವೆ. ಆದ್ದರಿಂದ ಮಾನವನಲ್ಲಿ, ಈ ಬಗೆಗೆ, ಪ್ರಗತಿಪೂರ್ಣ ಚಿಂತನೆಯನ್ನು ಕೆರಳಿಸುವುದು ಕಾವ್ಯದ ಕೆಲಸವಾಗಬೇಕಾಗುತ್ತದೆ. ಅಂದರೆ, ಮನುಷ್ಯನ ಹೊರಗಿನ ಅಂಧಶ್ರದ್ಧೆ ಮತ್ತು ಮೂಢನಂಬಿಕೆಗಳಿಗಿಂತ ಒಳತೋಟಿಯ ನೈತಿಕ ನೆಲೆಗಟ್ಟು ಭದ್ರವಾಗಬೇಕೆಂಬ ಮೂಲ ಸಿದ್ಧಾಂತವನ್ನು ಮನವರಿಕೆ ಮಾಡಿಕೊಡಬೇಕಾಗುತ್ತದೆ. ಈ ರೀತಿ ಮಾಡಬಹುದಾದ ಕಾವ್ಯವನ್ನು ಪ್ರಗತಿಶೀಲ ಎಂದು ಕರೆಯಬೇಕಾಗುತ್ತದೆ. ಏಕೆಂದರೆ, ನೈತಿಕ ನೆಲೆಗಟ್ಟೇ ನಾಗರೀಕತೆಯ ಬೇರು ! ವ್ಯಕ್ತಿಗತವಾದ ಒಳಿತು ಜೀವನಮಾರ್ಗದಲ್ಲಿ ಹೊರಹೊಮ್ಮಿದಾಗ, ಅದು, ಸುಧಾರಿತ ಸಮಾಜಕ್ಕೆ ಪೂರಕ ಶಕ್ತಿಯಾಗಿ ಪರಿಣಮಿಸುತ್ತದೆ. ಮಾನವೀಯ ಮಾರ್ಗಾನುಸರಣೆ, ಉನ್ನತ ವ್ಯಕ್ತಿತ್ವದ, ಅನುದಿನದ ಎಚ್ಚರಿಕೆಯಾಗಿ ಮೂಡಿ ನಿಲ್ಲುತ್ತದೆ. ಕ್ರಮಬದ್ಧ ಜೀವನ ಮಾನವ ವರ್ತನೆಯ ಪ್ರಥಮ ಶಾಸನವಾಗಿ ಪರಿಣಮಿಸಬೇಕು. ಇಂಥದೊಂದು ದರ್ಶನವನ್ನು ಕಾವ್ಯ ಮಾಡಿಕೊಡಬೇಕಾಗುತ್ತದೆ. ಈ ಕಾರಣದಿಂದಲೇ ಕವಿಗಳನ್ನು ಅನಭಿಷಿಕ್ತ ಶಾಸಕರೆಂದು ಕರೆಯಲಾಗಿದೆ. ಒಬ್ಬ ವ್ಯಕ್ತಿ ಕೆಲವೊಂದು ಹೊರ ವ್ಯವಹಾರಗಳಿಂದ `ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳಬಹುದಾದರೂ, ಆತ, ಗುಣಾಧಿಕ್ಯವನ್ನು ಪಡೆದವನೆಂದು ಹೇಳುವುದಕ್ಕಾಗುವುದಿಲ್ಲ. ಆದ್ದರಿಂದ ಹೊರವ್ಯಕ್ತಿಗಿಂತ ಹೆಚ್ಚಾಗಿ, ಒಳ ವ್ಯಕ್ತಿಯನ್ನು ರೂಪಿಸುವ ಹೊಣೆಗಾರಿಕೆಯನ್ನು ಕಾವ್ಯ ಹೊರಬೇಕಾಗುತ್ತದೆ. ಮಾನವನ ಉಗಮದಂದಿನಿಂದಲೂ, ಅವನ ಒಳತೋಟಿಯನ್ನು, ಜಾಗರೂಕತೆಯಿಂದ, ಹೊರಹೊಮ್ಮಿಸಿದ ಕಾವ್ಯಶಕ್ತಿಯು ಸಮಾಜವನ್ನು, ಶತಶತಮಾನಗಳಿಂದ ಕ್ರಮಕ್ರಮವಾಗಿ ಹದಗೊಳಿಸುತ್ತಾ ಬಂದಿದೆ ಎಂಬುದನ್ನು ಗುರುತಿಸಬೇಕಾದುದು ಅಗತ್ಯ. ಸೃಷ್ಟಿಯ ವ್ಯಾಪಾರದ ಬಗೆಗೆ, ಭ್ರಾಮಕ ಅನಿಸಿಕೆಗಳಿಗಿಂತ, ಅದರ ಗಾಢ ಅನುಭವದಿಂದಾಗಿ ಮಾನವನಿಂದ ಮೂಡಿಬಂದ ಒಳದೃಷ್ಟಿ ಅಥವಾ ಒಳತೋಟಿ ಕಾವ್ಯೋದಯಕ್ಕೆ ಕಾರಣವಾಯಿತೆಂದು ಹೇಳಬಹುದಾಗಿದೆ. ಇಂಥದೊಂದು ಚಿಂತನೆಯ ಹಿನ್ನೆಲೆಯಲ್ಲಿಯೇ ನಾನೊಂದು ಪದ್ಯದಲ್ಲಿ ``ಕಾವ್ಯಕಸ್ತೂರಿಯಲಿ ಬೆರೆತ ಬದುಕಿನ ಗತಿಯಂ ಎಂದು ಬರೆದಿದ್ದೇನೆ.

ಮಾನವನ ಅನುಭವದ ಮರುಹುಟ್ಟಿನಂತೆ ಮೂಡಿಬಂದ ಕಾವ್ಯ ಅದೇ ಮಾನವನಲ್ಲಿ ಸುಪ್ತವಾಗಿರುವ ಪ್ರಜ್ಞೆಯನ್ನು ಎಚ್ಚರಿಸಬೇಕಾಗುತ್ತದೆ. ಕಾವ್ಯಕ್ಷೇತ್ರದಲ್ಲಿ ಬೌದ್ಧಿಕ ಪ್ರಯತ್ನಗಳಿಗಿಂತ ನೈತಿಕ ಔನ್ನತ್ಯದ ಸಾಧನೆ ಕೈಗೂಡಿ ಬರಬೇಕಾಗುತ್ತದೆ. ಈ ಕಾರಣದಿಂದಲೇ ಕವಿಗಳು ಕುಶಲ ಚಿಂತಕರಾಗಿ ಕಾಣಿಸಿಕೊಳ್ಳುತ್ತಾರೆ.

ತಮ್ಮತನವನ್ನು ಮತ್ತು ತಮ್ಮ ಕಾಲದ ಗತಿಯನ್ನು ತಮ್ಮದೇ ಆದ ರೀತಿಯಲ್ಲಿ ನಿರೂಪಿಸಿ, ಜನರಿಗೆ ತಿಳಿಸುವುದಕ್ಕಾಗಿ ಕವಿ ಬರೆಯುತ್ತಾನೆ-ಎಂಬ ಅಭಿಪ್ರಾಯವೊಂದಿದೆ. ಇದು ಸರಿಯಾದ ಅಭಿಪ್ರಾಯವೆಂದೇ ಭಾವಿಸುತ್ತೇನೆ. ಕವಿಗಳ ಅಂತರಾತ್ಮದ ಆಳದಲ್ಲಿ ಸಂಭವಿಸಬಹುದಾದ ಸಂಘರ್ಷಗಳ ಪರಿಣಾಮಕಾರಿ ನಿರೂಪಣೆಯು ಕಾವ್ಯವಾಗಿ ಪರಿಣಮಿಸುತ್ತದೆ. ತಮ್ಮ ಚಿಂತನೆಯ ಸರ್ವಸ್ವವನ್ನೂ ಸಮಾಜದ ಒಳಿತಿಗಾಗಿ ಧಾರೆ ಎರೆಯುವುದೇ ಕವಿಗಳ ಪ್ರಥಮ ಹಾಗೂ ಪರಮ ಗುರಿಯಾಗಿರುತ್ತದೆ. ಆದ್ದರಿಂದಲೇ ಕವಿಜನರನ್ನು ಔದಾರ್ಯಪೂರ್ಣರೆಂದು ಬಣ್ಣಿಸಲಾಗಿದೆ.

ಕವಿಯ ಧೀಶಕ್ತಿ ತನ್ನ ರಾಷ್ಟ್ರದ ಸಾಂಸ್ಕೃತಿಕ ಸಂಪತ್ತನ್ನು ಆಲಂಗಿಸಿಕೊಳ್ಳಬೇಕು. ಆಗ, ಅವನು, ತನ್ನ ಮಾತೃಭೂಮಿಯ ಬೆಳಕಾಗಿ ಮೂಡಿ ನಿಲ್ಲುತ್ತಾನೆ ; ಧ್ವನಿಯಾಗಿ ಕೇಳಿಸುತ್ತಾನೆ.

ಹೊಸ ಕಾಲವು ತನ್ನ ಪರಿಸರಕ್ಕೆ ತಕ್ಕ ಕಾವ್ಯ ವಿಧಾನವನ್ನು ಅಪೇಕ್ಷಿಸುವುದು ಸಹಜ. ಹೊಸ ಘಟನೆಗಳು, ಹೊಸ ಸಂಬಂಧಗಳು ಮತ್ತು ಹೊಸ ಭಾವನೆಗಳು ಹೊಸ ಕಾವ್ಯ ಶಕ್ತಿಯನ್ನು ಪ್ರಚೋದಿಸುವುದು ಅನಿವಾರ್ಯವಾಗುತ್ತದೆ. ಆದರೆ, ಹೊಸತನ ಮೂಡಿಬಂದ ಮಾತ್ರಕ್ಕೆ ಕಾವ್ಯದ ಮೂಲಸತ್ವ ಬದಲಾಗುವುದಿಲ್ಲ ; ಆಗಬಾರದು ! ಅನ್ಯ ನೆಲದಲ್ಲಿ ಹೊಮ್ಮಿದ ಭಾವನೆ ಮತ್ತು ಪ್ರಚೋದನೆಗಳನ್ನು ಅನುಕರಿಸುವುದು ಮಾನವ ಸಹಜ ಗುಣವಾದರೂ ಆಯಾ ಕವಿ, ತನ್ನ ನೆಲದ ಗುಣಕ್ಕೆ, ತನ್ನತನಕ್ಕೆ ಹಾಗೂ ತನ್ನ ಸಮಾಜದ ಜೀವನಸಿದ್ಧಾಂತಕ್ಕೆ ಸಾಮಾನ್ಯವಾಗಿ ಬದ್ಧನಾಗಿರಬೇಕಾಗುತ್ತದೆ. ಪ್ರಸಿದ್ಧ ರಷ್ಯನ್ ಕವಿಯೊಬ್ಬರು ಹೇಳಿದ ಹಾಗೆ. ``ಕವಿಗಳು ಸಂಚಾರೀ ಪಕ್ಷಿಗಳಲ್ಲ. ತನ್ನ ನಾಡು ಮತ್ತು ನೆಲದ ಗುಣಕ್ಕೆ ಹೊಂದಿಕೊಳ್ಳದ, ತನ್ನ ಜನಜೀವನದ ಕಾವು ಮತ್ತು ಮನೆಯ ಪರಿಸರದಿಂದ ಸಂಸ್ಕಾರಗೊಳ್ಳದ ಕಾವ್ಯ ಬೇರಿಲ್ಲದ ಮರವಿದ್ದಂತೆ ; ಗೂಡಿಲ್ಲದ ಹಕ್ಕಿ ಇದ್ದಂತೆ ! ಯಾವುದೇ ಕಾವ್ಯದ ಕೊಡುಗೆ ಅವರಿಗೆ ಕೂಡಿಬಂದಿರುವ ಕಾವ್ಯಸಂಪತ್ತಿಗೆ ಪೋಷಕವಾಗಿ ನಿಲ್ಲಬೇಕು. ಅತಿಯಾದ ಅನುಕರಣೆ ಕೃತಿ ಚೌರ್ಯಕ್ಕೆ ಅನುವು ಮಾಡಿಕೊಡುತ್ತದೆಂಬುದನ್ನು ಮರೆಯಬಾರದು.

ಕಾವ್ಯಕನ್ಯೆ, ಕೆಲವರಿಗೆ, ಮುಸುಕು ತೆರೆದು ಮುಖವನ್ನೇ ತೋರಿಸುವುದಿಲ್ಲ ! ಆದರೆ, ಕಾವ್ಯಕನ್ಯೆಯ ಬಟ್ಟೆಯನ್ನು ಕಿತ್ತು ಬಿಸುಟಿ, ಗೋಳಾಡಿಸುವ ಕವಿಗಳೂ ಇದ್ದಾರೆಂಬುದನ್ನು ಮರೆಯುವಂತಿಲ್ಲ. ಹೆಂಗಸರು, ಗಂಡಸರು, ಮಕ್ಕಳು-ಮುದುಕರು, ಹಳ್ಳಿಗರು-ಪಟ್ಟಣಿಗರು, ಪಂಡಿತರು-ಪಾಮರರು, ಯಾರೇ ಇರಲಿ, ಎಲ್ಲರ ಎದುರಿನಲ್ಲಿ ನಿಸ್ಸಂಕೋಚವಾಗಿ ಓದಿ ``ಸೈ ಎನಿಸಿಕೊಳ್ಳುವಂತಹುದೇ ಒಳ್ಳೆಯ ಕಾವ್ಯ ಎಂದು ಭಾವಿಸಿಕೊಳ್ಳಬೇಕಾಗುತ್ತದೆ. ಪ್ರತಿಭಾ ಪ್ರಕಾಶವು ಪುಂಖಾನುಪುಂಖವಾಗಿ ಹೊರಹೊಮ್ಮುವಂತಹ ಚಮತ್ಕಾರ ಕಾವ್ಯಕ್ಷೇತ್ರದಲ್ಲಿ ನಡೆಯಲಾರದು. ಕಾವ್ಯನಿರೂಪಣೆ ಜಾದುವಿದ್ಯೆ ಆಗಲಾರದು. ಕಾವ್ಯವೆಂಬುದು ದೊಂಬರಾಟವಂತೂ ಅಲ್ಲವೇ ಅಲ್ಲ !!
ಯಾವುದೇ ಒಂದು ಭಾಷೆಯ ಮೂಲಕ ಹೊರಹೊಮ್ಮುವ ಭಾವನಾಲಹರಿ, ಆಯಾ ಭಾಷೆಯ ಜನಕ್ಕಷ್ಟೇ ಮೀಸಲಾದುದೆಂದು ಹೇಳುವುದಕ್ಕಾಗುವುದಿಲ್ಲ. ಮೂಲತತ್ವದ ಆಧಾರವನ್ನು ಅವಲಂಬಿಸಿಕೊಂಡಿರುವ ಮಾನವ ಕುಲದ ಭಾವನಾ ಪ್ರಪಂಚ ಸರ್ವ ಭಾಷಾ ಜನರಿಗೂ ಸಮಾನ ಸ್ಪಂದನವನ್ನೊದಗಿಸುತ್ತದೆಂಬುದನ್ನು ಮರೆಯಬಾರದು. ಯಾವುದೇ ಒಂದು ಹೃದಯಸ್ಪಶರ್ಿಯಾದ ಗೀತೆಯು ಭಾಷಾ ಸೀಮೆಯನ್ನು ಮೀರಿ, ಎದ್ದು ನಿಲ್ಲುತ್ತದೆ. ಅದು, ಎಲ್ಲ ಹೃದಯಗಳನ್ನು ಮುಟ್ಟಿ, ಆನಂದೋಲ್ಲಾಸಗಳನ್ನು ಅನಂತವಾಗಿ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಯಾವನೇ ಒಬ್ಬ ನಿಜವಾದ ಕವಿ ತನ್ನ ಗಾಢ ಅನುಭವಗಳನ್ನು ಮತ್ತು ಉತ್ಕಟ ಭಾವನೆಗಳನ್ನು ಪರಿಣಾಮಕಾರಿಯಾಗಿ ಒಡಮೂಡಿಸಿದಾಗ ಅದು ಸಾರ್ವತ್ರಿಕ ಸ್ಪಂದನವನ್ನುಂಟುಮಾಡುತ್ತದೆ. ಯಾವನೇ ತನ್ನವಲ್ಲದ ಭಾವನೆಗಳನ್ನು, ತನ್ನ ಕಾವ್ಯದ ಮೂಲಕ ಹೊರಹೊಮ್ಮಿಸಲು ಹೊರಟಾಗ, ಸಾಮಾನ್ಯವಾಗಿ ಕಂದರಕ್ಕೆ ಬೀಳುತ್ತಾನೆ; ಅಥವಾ ಮೇಲೇಳಲಾರದಂತಹ ಭಾರದಡಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಮುಖ್ಯವಾಗಿ ಜೀವನ ಸಿದ್ಧಾಂತದ ಕಡೆಗೆ ಇರಬಹುದಾದ ಕವಿಯ ಭಾವನೆಯನ್ನು ಅನುಸರಿಸಿ ಆತನ ಕಾವ್ಯದ ಸತ್ವ ಮೂಡಿಬರುತ್ತದೆ. ಕಾವ್ಯವು ಮಾನವನ ಅಂತರಂಗದ ಮಿಡಿತವೇ ಹೊರತು ಪ್ರವಾಸಿಗರ ದಿನಚರಿಯಲ್ಲ. ಅಂಗಡಿಯ ಲೆಕ್ಕಪತ್ರವಲ್ಲ ; ವಾರದ ಪುರವಣಿಯಲ್ಲ! ಅಂದಿನಿಂದ ಇಂದಿನವರೆಗೆ ಸಾಗಿಬಂದಿರುವ ಮಾನವ ಸ್ವಭಾವದ ಹಾಗೂ ಭಾವನೆಯ ಹಿನ್ನೆಲೆಯಲ್ಲಿ ಫಳಕ್ಕನೆ ಹೊಳೆಯುವ ಅಮೃತಮಯ ಮಾತಿನ ಮೋಡಿಯೇ ಕಾವ್ಯ. ಸಮಾಜಜೀವನಕ್ಕೆ ತೀವ್ರವಾಗಿ ಸ್ಪಂದಿಸುವ ಕವಿಯ ಭಾವನಾ ಲಹರಿಯ ಆಧಾರದ ಮೇಲೆ ಅವನ ಆಳ-ಅಗಲಗಳನ್ನು ಅಳೆಯಲು ಸಾಧ್ಯವಿದೆ.

ಸಾಮಾಜಿಕ ಹಾಗೂ ಸಾಂಸಾರಿಕ ಸುಖ-ದುಃಖಗಳನ್ನು ಒಳ-ಹೊರಗೆ, ಎರಡೂ ಕಡೆ, ಅನುಭವಿಸಿದ ಕವಿಯ ಪರಿಪಕ್ವವಾದ ಅನುಭವದಿಂದ ಹೊರಹೊಮ್ಮಿದ ಕಾವ್ಯ, ಮೂಸೆಯಲ್ಲಿ ಬೆಂದು ಹೊರಬಂದ ಚಿನ್ನದ ಒಡವೆಯಂತೆ ಚೆಂದವಾಗಿರುತ್ತದೆ ; ಸಾಣೆಯಲ್ಲಿ ಸವೆದುಬಂದ ಶ್ರೀಗಂಧವಾಗುತ್ತದೆ. ಸಮಾಜಜೀವನದ ದುರ್ಭರವನ್ನು ಕಂಡ ಕವಿ ಅದರ ಬಗ್ಗೆ ಆಕ್ರೋಶ ತೋರದೆ, ತೀವ್ರ ಅನುಕಂಪವನ್ನು ವ್ಯಕ್ತಪಡಿಸಿದಾಗ ಅವನು ಅವರ್ಣನೀಯ ಶಕ್ತಿಯಾಗಿ ಮೂಡಿ ನಿಲ್ಲುತ್ತಾನೆ. ಮಾನವ-ಮನಸ್ಸಿನ ಪ್ರತಿಯೊಂದು ಹೆಜ್ಜೆಗೂ ಸೂಕ್ಷ್ಮವಾಗಿ ಮಿಡಿಯುವ ಕವಿಚೇತನ ಕತ್ತಲಲ್ಲಿ ಕಣ್ಣಾಗುತ್ತದೆ ; ಸಾಗರದಲ್ಲಿ ದೋಣಿಯಾಗುತ್ತದೆ; ಬಿಸಿಲಿನಲ್ಲಿ ಪಲ್ಲವಿತವನದಿಂಪಾಗುತ್ತದೆ ; ಮಾನಸಿಕ ಸಂಕಷ್ಟದಲ್ಲಿ ನೆಮ್ಮದಿಯ ನೆಲೆಯಾಗುತ್ತದೆ ; ದುಃಖದ ತಾಪದಲ್ಲಿ ಸಿಹಿನೀರಿನ ಸೆಲೆಯಾಗುತ್ತದೆ. ನೀಲಿಯಾಕಾಶದಲ್ಲಿ ಸಾಲುಗಟ್ಟಿ ಹಾರುವ ಬೆಳ್ವಕ್ಕಿಗಳಂತೆ, ಅನಂತ ಭಾವನಾವಿಸ್ತಾರದಲ್ಲಿ ಸ್ಪಂದಿಸಿ ಬಂದು ನೆಲೆನಿಲ್ಲುವ ಸುಂದರ ಪದಪಂಕ್ತಿಗಳು ಅವರ್ಣನೀಯ ಆನಂದದೆತ್ತರಕ್ಕೆ ಮಾನವ ಮನಸ್ಸನ್ನು ಕೊಂಡೊಯ್ಯುತ್ತವೆ. ಕನ್ನಡ ಕಾವ್ಯಲೋಕ ಅಂಥದೊಂದು ಮಿಡಿತವನ್ನು ಕಂಡುಕೊಂಡಾಗ ಕಲ್ಪತರುವಾಗಿ ಬೆಳೆದು ನಿಲ್ಲುತ್ತದೆ.

ಇತ್ತೀಚೆಗೆ, ಪ್ರತಿಭೆಗಿಂತ ಪ್ರದರ್ಶನವೇ ಹೆಚ್ಚಾಗಿ ಕಂಡುಬರುತ್ತದೆ. ಆದರೂ ಕಾವ್ಯಕ್ಷೇತ್ರ ವಿಸ್ತೃತವಾಗಿ ಬೆಳೆಯುತ್ತಿರುವುದರಿಂದ ಪ್ರತಿಭಾವಂತ ತರುಣ ಕವಿಗಳ ಸಂಖ್ಯೆ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಆದರೆ ಪ್ರತಿಭೆಗೆ ತಕ್ಕ ಪ್ರಾಮಾಣಿಕ ಪ್ರಯತ್ನ ನಡೆದರೆ ಕಾವ್ಯಕ್ಷೇತ್ರಕ್ಕೆ ಒಳ್ಳೆಯದಾಗಬಹುದು.

``ಮನಸ್ಸಿಗೆ ಬಂದ ಹಾಗೆ ಬರೆಯಬಾರದು - ಎಂಬ `ಸನಾತನ ಕವಿಗಳ ನಿಲುವನ್ನು ಅಲ್ಲಗಳೆಯುವುದು ಕಾಲ ಗುಣವಾಗಿ ಕಂಡುಬರುತ್ತಲಿದೆ. ಹೊಸ ಚೌಕಟ್ಟಿನತ್ತ ಸಾಗಿಬರುತ್ತಿರುವ ಈ ವಿಚಾರಧಾರೆ ವಿಶ್ವವ್ಯಾಪಿಯಾಗಿರುವುದು ಕಾವ್ಯಾಸಕ್ತರೆಲ್ಲರಿಗೂ ತಿಳಿದಿರುವ ವಿಚಾರ. ಇದು ಅನಿವಾರ್ಯ ಸಂಗತಿಯೂ ಆಗಿರಬಹುದು ! ಕಾವ್ಯ ನಿರ್ಮಿತಿಯ ಮಾರ್ಗದಲ್ಲಿ ವಿಚಾರಧಾರೆ ಬದಲಾಗುತ್ತಾ ಹೋಗುವುದು ಸಹಜವಾದರೂ ಕಾವ್ಯದ ಮುಖ್ಯ ಲಕ್ಷಣಗಳಾದ ರಸಭಾವ, ಪದನ್ಯಾಸ, ಮಾರ್ಗ, ಧಾತುಸ್ಥಿತಿ, ಕಾಂತಿ, ಭಾವಾನುಭಾವವಿಭಾವ-ಮೊದಲಾದವುಗಳು ಇರಬೇಕಾಗುತ್ತದೆ. ಕಾವ್ಯಕ್ರಮದಲ್ಲಿ ಹಳಬರನ್ನೇ ಅನುಸರಿಸಬೇಕೆಂದೇನೂ ಇಲ್ಲ ; ಭಾಷೆಗೆ ಹೊಸ ಮಾರ್ಗ ಕಲ್ಪನೆಯೂ ಕಾಲಗುಣಕ್ಕೆ ತಕ್ಕಂತೆ ಬರಬೇಕಾಗುತ್ತದೆ. ಆದರೆ, ಯಾವುದೇ ಬರವಣಿಗೆಯು ಸಾರ್ವತ್ರಿಕವಾಗಿಯೂ ಸಾರ್ವಕಾಲಿಕವಾಗಿಯೂ ಸಹ್ಯವಾಗಬೇಕು ಅಷ್ಟೆ !

ಗುಂಪುಗಾರಿಕೆ ಮತ್ತು ಅಗ್ಗದ ಪ್ರಚಾರದ ಆಧಾರದ ಮೇಲೆ ಬೆಳೆಯುವ ಕಾವ್ಯ ಬಹಳ ದಿನ ಉಳಿಯಲಾರದು. ಕಾವ್ಯದ ಕರ್ತೃ ಕೊನೆಗಂಡಮೇಲೂ ತನ್ನ ಅಸ್ತಿತ್ವವನ್ನು ತಾನೇ ಉಳಿಸಿಕೊಂಡು ಬರುವಂತಹ ಕಾವ್ಯಸೃಷ್ಟಿಯಾಗಬೇಕು. ಅರ್ಥಹೀನ ಬರವಣಿಗೆಗಳು ಅಗ್ಗದ ಪ್ರಚಾರದಿಂದಾಗಿ ``ಅದ್ಭುತ ಕಾವ್ಯಗಳಾಗಿ ಪರಿಣಮಿಸುತ್ತವೆ. ಗೊಬ್ಬರದ ತಿಪ್ಪೆಯ ಮೇಲೆ ಬುರಬುರನೆ ಬೆಳೆದು ನಿಂತ ಗೊಡ್ಡು ಪರಂಗಿ ಗಿಡವಾಗಬಾರದು ಕಾವ್ಯ !

ತುಂಬು ಅರಳಿದ ಬೇವು ಎಂದು ಹೆಸರಿಸಲ್ಪಟ್ಟಿರುವ ಈ ಪುಟ್ಟ ಹೊತ್ತಗೆಯಲ್ಲಿ ಬೆಳಕು ಕಂಡ ಕವನಗಳಿಗೂ ನನ್ನ ಈ ಮೇಲಿನ ಅಭಿಪ್ರಾಯಗಳಿಗೂ ಸಂಬಂಧವನ್ನು ಕಲ್ಪಿಸಿದ್ದೇನೆಂದು ಭಾವಿಸಿಕೊಳ್ಳುವ ಅಗತ್ಯವಿಲ್ಲ. ನನ್ನ ಮನಸ್ಸಿನ ಅಲೆಗಳ ಮೇಲೆ ತೇಲಿಬಂದ ಕೆಲವು ವಿಚಾರಗಳನ್ನು ಮಾತ್ರ ಇಲ್ಲಿ ಪೋಣಿಸಿದ್ದೇನೆ ಅಷ್ಟೆ !

ತುಂಬು ಅರಳಿದ ಬೇವು ಜನಮನವನ್ನು ಮುಟ್ಟಿದರೆ, ಸಹೃದಯ ಸಂಪತ್ತನ್ನು ಸಮೀಪಿಸಿದರೆ ಸಾಕು; ಅಷ್ಟಕ್ಕೆ ಅದು ಸಾರ್ಥಕ.
 
ಹಿ.ಮ. ನಾಗಯ್ಯ
26-1-1981
0 Comments



Leave a Reply.


    Categories

    All
    Academic Books
    Conference Books
    English Books
    HR Books
    Kannada Books
    Social Work Books

    Archives

    July 2022
    January 2022
    August 2020
    June 2020
    May 2020
    December 2019
    December 2018
    August 2018
    July 2018
    January 2018
    August 2017
    July 2017
    January 2017
    December 2016
    November 2016
    June 2016
    December 2015


    Picture
    For more details

    Picture
    For more details

    Picture
    For more details

    Picture
    For more details

    Picture
    For more details

    Picture
    For more details

    HR Books


    Social Work Books


    Niruta Publications

    Social Workers- Karnataka

    Leaders Talk
    Follow me on Academia.edu

    RSS Feed

Niruta Publications Books (Dec 2025)
File Size: 756 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG​
  • HR BLOG
  • PUBLICATION WITH US
  • NIRUTA PRINTS
  • ONLINE STORE
  • JOIN OUR ONLINE GROUPS
  • VIDEOS​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
For More Details
Picture
More Details

Copyright Niruta Publications 2021,    Website Designing & Developed by: www.mhrspl.com