Niruta Publications
  • Home
  • About Us
    • Ramesha's Profile
  • List Your Book for Free
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • List Your Book for Free
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಪರಿವರ್ತನೆ

5/21/2020

0 Comments

 
Picture
ಲೇಖಕರು : ಕೆ.ವಿ. ರಾಮ್
ಪುಟ : 240
Buy
ಅಂದು ಭಾರತ ಸ್ವಾತಂತ್ರ್ಯ ದಿನಾಚರಣೆ. ಪರದಾಸ್ಯ ಕಳೆದು ಐದು ವರ್ಷಗಳಾಗಿದ್ದವು. ಎಲ್ಲಿ ನೋಡಿದರೂ ಜನಗಳಲ್ಲಿ ನವಚೇತನ ಉತ್ಸಾಹ ಕಾಣುತ್ತಿತ್ತು. ಸ್ವಾತಂತ್ರ್ಯ ದಿನಾಚರಣೆ ಎಲ್ಲೆಡೆ ನಡೆಯುತ್ತಿತ್ತು. ವಿದ್ಯಾಸಂಸ್ಥೆಗಳಲ್ಲಿ ಕಚೇರಿಗಳಲ್ಲಿ ಸರ್ಕಾರದ ಎಲ್ಲಾ ಸಂಸ್ಥೆಗಳಲ್ಲಿ ವೈಯಕ್ತಿಕ ಸಂಘ, ಸಂಸ್ಥೆಗಳಲ್ಲೂ ನಡೆಯುತ್ತಿದ್ದವು. ರಾಜಕೀಯ ಪಕ್ಷಗಳು ಪ್ರಾಥಃಕಾಲದಲ್ಲಿಯೇ, ದ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿ, ಸ್ವಾತಂತ್ರ್ಯ ಸಂಗ್ರಾಮದ ನೆನಪು ಮಾಡಿಕೊಂಡು, ನವಭಾರತದ ನಿರ್ಮಾಣ ಯಾವ ರೀತಿ ಮಾಡಬೇಕೆಂದು ಅಭಿಪ್ರಾಯಗಳು ಹೇಳಿ, ಸಿಹಿತಿಂದು ತಮ್ಮ ನಿವಾಸಗಳಿಗೆ ತೆರಳುತ್ತಿದ್ದರು. ಮೈಸೂರಿನಲ್ಲಿ ಪ್ರಮುಖ ವಿದ್ಯಾಸಂಸ್ಥೆಯಾದ ಮಹಾರಾಜ ಕಾಲೇಜಿನಲ್ಲಿ  ಅದ್ವೀತಿಯವಾದ ಸ್ವಾತಂತ್ರ್ಯ ದಿನಾಚರಣೆ ಅತಿ ಸಂಭ್ರಮದಿಂದ ನಡೆದಿತ್ತು.
ದೇಶದ ನಾನಾ ಭಾಗಗಳಿಂದ ಉಚ್ಚ ಶಿಕ್ಷಣಕ್ಕೆ ಬಂದಿದ್ದ ಅನೇಕ ವಿದ್ಯಾರ್ಥಿಗಳು, ಎಲ್ಲಾ ಅಧ್ಯಾಪಕ ವರ್ಗದವರೂ ಈ ಸಮಾರಂಭದಲ್ಲಿ ಬಾಗವಹಿಸಿದರು. ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಧ್ವಜಾರೋಹಣ ಮಾಡಿ, ನಮಗೆ ಸ್ವಾತಂತ್ರ್ಯ ತರಲು ಹೇಗೆ ಇಡೀ ಭಾರತದಾದ್ಯಂತ ಲಕ್ಷಾಂತರ ಮಂದಿ ಭಾರತೀಯರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ, ಊಹೆಗೂ ಮೀರಿದ ಕಷ್ಟ ನಷ್ಟಗಳು ಅನುಭವಿಸಿ, ಬ್ರಿಟಿಷರ ಆಳ್ವಿಕೆ ಕೊನೆ ಮಾಡಿದರೆಂದು ಸಂಕ್ಷಿಪ್ತವಾಗಿ ಹೇಳಿ, ನವ ಭಾರತದ ನಿರ್ಮಾಣ ಮಾಡಲು ವಿದ್ಯಾರ್ಥಿಗಳು ತರುಣರು ಧ್ಯೇಯದಾರಿಗಳು ನಿಸ್ವಾರ್ಥದಿಂದ ದುಡಿಯಬೇಕೆಂದು ಕರೆಕೊಟ್ಟರು. ನಂತರ ವಿದ್ಯಾರ್ಥಿ ವೃಂದದಿಂದ. ನವಭಾರತದ ನಿರ್ಮಾಣ ಯಾವ ರೀತಿ ಆಗಬೇಕೆಂದು ಮಾತನಾಡಲು ನಾಲ್ವರು ವಿದ್ಯಾರ್ಥಿಗಳನ್ನು ಆಹ್ವಾನಿಸಿದರು. ಮೊದಲು ಬಂದವನೇ ಭಾರದ್ವಾಜ. ಇವನು ಉಡಿಗೆ ತೊಡಿಗೆಗಳಲ್ಲಿ ಆಧುನಿಕ ವಿದ್ಯಾರ್ಥಿಯಂತಿರಲಿಲ್ಲ. ಸುಮಾರು ಆರು ಆಡಿ ಎತ್ತರ, ಕೃಶವಾದ ದೇಹ, ಕೆಂಪು ಬಿಳುಪುಗಳ ಮಿಶ್ರವರ್ಣ, ವಿಶಾಲವಾದ  ಹಣೆ, ಪ್ರಜ್ವಲಿಸುವ ಕಣ್ಣುಗಳು, ತಲೆಯ ಮೇಲೆ ಶಿಖೆ, ಹಣೆಯ ಮೇಲಿನ ಕುಂಕುಮದ ಬೊಟ್ಟು, ಉಟ್ಟಿದ್ದು ಕದರಿನ ದಟ್ಟ ಪಂಚೆ ಅರ್ಧ ತೊಳಿನ ಅಂಗವಸ್ತ್ರ, ನೋಡಿದವರಿಗೆ ಇನ್ನು ಆಧುನಿಕ ಮಟ್ಟದಲ್ಲಿಲ್ಲದ ಯಾವುದೋ ಒಂದು ಸಣ್ಣ ಹಳ್ಳಿಯ ಬಡ ಕುಟುಂಬದಿಂದ ಬಂದವನಂತೆ ಕಾಣುತ್ತಿದ್ದ. ಇಂಥಹವನು ಏನು ಮಾತನಾಡಬಲ್ಲನೆಂದು ಅನೇಕರು ಉದಾಸೀನರಾಗಿದ್ದರು. ಆದರೆ ಅವರೇ ಆಶ್ಚರ್ಯಪಡುವಂತಾಯಿತು. ವೇದಿಕೆಯ ಮೇಲೆ ಬಂದ ಭಾರದ್ವಾಜ ಗಂಭೀರವಾಗಿ ನಿಂತು ಮುಖ್ಯಮಂತ್ರಿಯವರಿಗೂ, ಉಪಕುಲಪತಿಗಳಿಗೂ, ಪ್ರಾಧ್ಯಾಪಕರಿಗೂ ನಮಿಸಿ ನವಭಾರತ ನಿರ್ಮಾಣವೆಂದರೆ ಸಮಾಜದ ಪುನರ್ರಚನೆ ಮತ್ತು ಆರ್ಥಿಕ ಪ್ರಗತಿ ಜೊತೆಯಲ್ಲಾಗಬೇಕು. ಒಂದು ಕಾಲದಲ್ಲಿ ಭಾರತ ಸಂಪದ್ಭರಿತ ದೇಶವಾಗಿತ್ತು. ತನ್ನ ಜನಗಳಿಗೆ ಬೇಕಾದುದಕ್ಕಿಂತ ಹೆಚ್ಚು ಧಾನ್ಯ ಬೆಳೆದು, ಅಂಗವಸ್ತ್ರಗಳು ತಯಾರಿಸಿ ವಿದೇಶಗಳಿಗೆ ರಫ್ತು ಮಾಡುತ್ತಿತ್ತು. ಬೆಳ್ಳಿ, ಬಂಗಾರ, ವಜ್ರಗಳು ಎಷ್ಟು ಹೇರಳವಾಗಿತ್ತೆಂದರೆ ನಾಲ್ಕು ಶತಮಾನಗಳಷ್ಟು ಈಚೆಗೂ ವಿಜಯನಗರದ ಸಾಮ್ರಾಜ್ಯದಲ್ಲಿ ರಸ್ತೆಗಳು ಎರಡೂ ಕಡೆಯೂ ವರ್ತಕರು ಮಾರುತ್ತಿದ್ದರು. ಸಂಗೀತ, ಸಾಹಿತ್ಯ, ಕಲೆ ದೇಶದಾದ್ಯಂತ ರಾರಾಜಿಸುತ್ತಿದ್ದವು. ಜ್ಞಾನಪೀಠಗಳು, ವಿದ್ಯಾಸಂಸ್ಥೆಗಳು ಬಹಳ ಉನ್ನತ ಸ್ಥಿತಿಯಲ್ಲಿದ್ದು ವಿದೇಶಗಳಲ್ಲಿ ಕೀರ್ತಿಪ್ರಾಯವಾಗಿದ್ದವು. ಅನೇಕ ವಿದೇಶ ವಿದ್ಯಾರ್ಥಿಗಳು ಭಾರತದ ವಿದ್ಯಾಲಯಗಳಲ್ಲಿ ವಿದ್ಯೆ ಪಡೆಯುತ್ತಿದ್ದರು. ಇವೆಲ್ಲಾ ಎರಡು, ಮೂರು, ನಾಲ್ಕು ಶತಮಾನಗಳಿಂದ ಅದೃಶ್ಯವಾಗಿದೆ. ಈ ಇತಿಹಾಸ ವಿಷಯಗಳಿಗೆ ದುಃಖಿಸದೇ ಪುನಃ ನಾವು ಸುವರ್ಣ ಭಾರತವನ್ನು ನಿರ್ಮಿಸಬಲ್ಲೆವೆಂದು ದೃಢ ಸಂಕಲ್ಪದಿಂದ, ಆತ್ಮ ವಿಶ್ವಾಸದಿಂದ ಏಕಾಗ್ರಚಿತ್ತದಿಂದ ದುಡಿಯಬೇಕೆಂದ ಭಾರದ್ವಾಜ. ಇದೇ ಸಮಯದಲ್ಲಿ ನಮಗೆ ದುರ್ಗತಿಗೆ ಕಾರಣಗಳೇನೆಂಬುದನ್ನು ಇತಿಹಾಸವನ್ನು ಪರಾಂಬರಿಸಿ ಅವಲೋಕನ ಮಾಡಬೇಕು.

ಸಾಮಾನ್ಯವಾಗಿ ಅನೇಕ ವಿದೇಶಿಯರು ಆಳ್ವಿಕೆ ದಂಡಯಾತ್ರೆಗಳು ಹಾಗೂ ಅವರಿಂದ ಸಂಪತ್ತಿನ ದರೋಡೆ ನಮಗೆ ದುರ್ಗತಿ ಬಂದಿತ್ತೆಂದು ಹೇಳುತ್ತಾರೆ. ಇದು ಸ್ವಲ್ಪ ಮಟ್ಟಿಗೆ ನಿಜ. ಸತ್ಯಾಂಶವೇನೆಂದರೆ ನಮ್ಮ ಅನೈಕತೆ. ನಾವು ಭಾರತೀಯರೆಲ್ಲರೂ ಒಂದೇ ಎಂಬ ಮನೋಭಾವ ನಮ್ಮಲ್ಲಿ ಬರದಿರುವುದೇ ನಮ್ಮ ದುರ್ಗತಿಗೆ ಮುಖ್ಯ ಕಾರಣ. ರಾಜಕೀಯ ದುರಾಚಾರ ಭಾರತದ ರಾಜರಲ್ಲಿ ಅನ್ಯೋನ್ಯತೆ ಐಕ್ಯತೆ ಇಲ್ಲದಿರುವುದು, ವಿದೇಶಿಯ ಶತ್ರುಗಳು ಭಾರತವನ್ನು ಮುತ್ತಿಗೆ ಹಾಕಿದಾಗಲು ಒಟ್ಟಿಗೆ ಅವರನ್ನು ಎದುರಿಸದೇ ಇದ್ದದ್ದು, ತಮ್ಮ ಸ್ವಾರ್ಥಕ್ಕಾಗಿ ಒಬ್ಬರನ್ನೊಬ್ಬರು ಬಿಟ್ಟುಕೊಟ್ಟಿದ್ದು, ವಿದೇಶಿಯರಿಗೆ ತಲೆಬಾಗಿ ಸ್ವಾತಂತ್ರ್ಯ ಕಳೆದುಕೊಂಡವರ ಮುಖ್ಯ ಅಂಶಗಳು. ಇದಕ್ಕೆ ಮೂಲಭೂತ ಕಾರಣ ನಮ್ಮ ಸಮಾಜದಲ್ಲಿರುವ ಅಸ್ಪೃಶ್ಯತೆ ಅಸಮಾನತೆ.

ಚತುರ್ವರ್ಣಗಳಾಗಿ ಅಥವಾ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ನಾಲ್ಕು ಭಾಗಗಳಾಗಿರುವುದು. ನಮ್ಮ ಸಮಾಜದಲ್ಲಿ ಮೇಲಿನ ಒಂದು ವರ್ಣ ಇನ್ನೊಂದಕ್ಕಿಂತ ಉಚ್ಚವೆಂದು ಒಂದರೊಡನೆ ಇನ್ನೊಂದು ಊಟ ತಿಂಡಿ ವಿವಾಹ ಸಂಬಂಧಗಳು ಮಾಡಿಕೊಳ್ಳದೆ ಸಮಾಜ ಒಡೆಯಿತು. ಏಕೀಕರಣ ಅಸಾಧ್ಯವಾಯಿತು. ಸುಮಾರು ಐದು ಸಾವಿರ ವರ್ಷಗಳ ಮುಂಚೆ ಇಂಥಹ ಅನೈತಿಕ ಅಸ್ಪೃಶ್ಯತೆ ಇರಲಿಲ್ಲ. ಚತುರ್ವರ್ಣಗಳಿಗೆ ಆದಾರ ಗುಣ ಮತ್ತು ಕೆಲಸ. ಗೀತೆಯಲ್ಲಿ ಕೃಷ್ಣ ಹೇಳಿದಂತೆ ಚತುರ್ವರ್ಣ ಮಾಯಾಕೃತಂ ಗುಣ ಕರ್ಮ ವಿಭಾಗಶಃ. ಇದು ಸಮಾಜದ ಒಳ್ಳೆಯದಕ್ಕೆ ನಿರ್ಮಿಸಲಾಯಿತೆಂದು ಕಾರ್ಯಕ್ರಮ ಪ್ರಾಯಶಃ ಇದಕ್ಕೆ ವೈಜ್ಞಾನಿಕ ಆಧಾರವಿದ್ದಿರಬಹುದು. ತಂದೆಯ ಕಸುಬು ಮಗನು, ಅವನ ಮಗನು ತಂದೆ ತಾತಂದಿರಿಂದ ಬಂದಿರುವ ಕಸುಬು ಮಾಡಿದರೆ ಸುಲಭವಾಗಿ ಅದರಲ್ಲಿ ಪರಿಣಿತೆ ವಿಶೇಷವಾಗಿ ಬರುತ್ತದೆ. ಈಗಿನ ಕಾಲದಲ್ಲಿ ಇದನ್ನು heredity ಎನ್ನುತ್ತೇವೆ. ಬೇರೆ ಬೇರೆ ಕಸುಬು ಮಾಡಿದರೆ ಒಂದು ವರ್ಣ ಇನ್ನೊಂದು ವರ್ಣದೊಡನೆ ಬಾಂಧವ್ಯ ಮಾಡಕೂಡದೆಂದು ಎಲ್ಲೂ ಹೇಳಿಲ್ಲ. ಆದರೆ ಐತಿಹಾಸಿಕ ಕಾರಣಗಳಿಂದಲೂ ಮೇಲಿನ ವರ್ಣಗಳು ಹುಟ್ಟಿನಿಂದಲೇ ಜಾತಿ, ಮೇಲಿನ ವರ್ಣದವರು ಕೆಳಗಿನ ವರ್ಣದವರೊಡನೆ ನಿರಾತಂಕವಾಗಿ ವಿವಾಹ ಮಾಡಕೂಡದೆಂದು ಸಮಾಜ ಒಡೆದರು. ಅಸ್ಪೃಶ್ಯತೆ ಕೊನೆಗಾಣಿಸಬೇಕು. ಇದನ್ನು ಮಾಡಲು ಯುವಕ ಯುವತಿಯರು ಮುಂದೆ ಬರಬೇಕು. ತಾವು ಅಂತರ್ಜಾತಿ ವಿವಾಹ ಮಾಡಿಕೊಂಡು ಇತರ ಯುವಕ ಯುವತಿಯರಿಗೆ ಆದರ್ಶಗಳಾಗಬೇಕು. ಸಮಾಜದ ಅಂಧತ್ವ ನಿವಾರಣೆ ಮಾಡಬೇಕು. ರಾಜ್ಯಾಂಗದಲ್ಲಿ ಹೇಳಿರುವಂತೆ ಎಲ್ಲರೂ ಸಮಾನರು ಎಂದರೆ ಸಾಲದು. ಇದು ಘೋಷಿಸಿ ಕೆಲವು ವರ್ಷಗಳಾದರೂ ಇದು ಆಚರಣೆಗೆ ಬಂದಿಲ್ಲ. ಈ ಪರಿವರ್ತನೆ ಆಗದಿದ್ದರೆ ಭಾರತದಲ್ಲಿ ನಿಜವಾದ ಐಕ್ಯತೆ ಬರುವುದಿಲ್ಲ. ಇದು ಬರುವವರೆಗೂ ಭಾರತ ನಿಜವಾಗಿ ಶಕ್ತಿಶಾಲಿ ರಾಷ್ಟ್ರವಾಗಲು ಕಷ್ಟ. ನವಭಾರತ ಪುನರ್ ನಿರ್ಮಾಣದಲ್ಲಿ ಇನ್ನು ಅನೇಕ ವಿಚಾರಗಳಿವೆ. ಧರ್ಮ ಶಾಂತಿಗಳ ಅವಲಂಬನೆ ಅನೀತಿವಂತರಾದ ರಾಜಕಾರಣಿಗಳ ದೇಶದ ಸಂಪತ್ತು ಕೊಳ್ಳೆ ಹೊಡೆಯುತ್ತಿರುವವರ ದಮನ ದೇಶ ಸೇವಕರ ಜ್ಞಾನವಂತರ ಉತ್ತೇಜನ, ಎಲ್ಲಾ ಪ್ರಜೆಗಳಿಗೂ ಆರೋಗ್ಯ ಮತ್ತು ವಿದ್ಯಾಭ್ಯಾಸದ ಸೌಲಭ್ಯ ಮುಂತಾದವು ಮುಖ್ಯ ಈ ವಿಚಾರಗಳನ್ನು ಇತರ ಭಾಷಣಕಾರರು ನಿರೂಪಿಸಿಕೊಳ್ಳುತ್ತಾರೆ ಎಂದ ಭಾರದ್ವಾಜ. ಈ ಸ್ಫೂರ್ತಿದಾಯಕ ಭಾಷಣ ಎಲ್ಲರನ್ನು ವಿಸ್ಮಯಗೊಳಿಸಿತು. ನೀವು ಮಾತನಾಡಿದ ವಿಷಯ ಅತಿ ಮುಖ್ಯವಾದದ್ದು ಬಹಳ ಚೆನ್ನಾಗಿ ಮಾತನಾಡಿದರು ಎಂದು ಜಯಕಾರ ಮಾಡಿದರು. ನೋಡಿದರೆ ಭಾರದ್ವಾಜ ಗ್ರಾಮದಿಂದ ಮಡಿವಂತರಾದ ಬ್ರಾಹ್ಮಣ ಕುಟುಂಬದಿಂದ ಬಂದಿರುವಂತೆ ಕಾಣುತ್ತಿದ್ದೆ. ಆದರೆ ಎಂಥಹ ಕ್ರಾಂತಿಕಾರಕ ಮನೋಭಾವ, ಎಂಥಹ ಧೈರ್ಯ ಎಂದು ಅನೇಕರು ಶ್ಲಾಘಿಸಿದರು. ಆಶ್ಚರ್ಯಪಟ್ಟರು. ಮುಖ್ಯಮಂತ್ರಿಗಳು ಭಾರದ್ವಾಜನನ್ನು ನೋಡಿ ಆಶ್ಚರ್ಯಪಟ್ಟು ಶ್ಲಾಘಿಸಿದರು. ಇವನಂತೆ ವಿದ್ಯಾರ್ಥಿಗಳು ದೇಶಸೇವಕರು ಧ್ಯೇಯಪರರಾಗಬೇಕೆಂದರು. ಸಾಮಾಜಿಕವಾಗಿ ಅನೇಕ ಬದಲಾವಣೆಗಳು ಅವಶ್ಯಕವೆಂದೂ ರೀತಿ ನೀತಿಗಳು ನಿರ್ಧರಿಸಿ ಕ್ರಿಯಾಶೀಲರಾಗಬೇಕೆಂದರು. ಮುಖ್ಯಮಂತ್ರಿಗಳ ಭಾಷಣದಿಂದ ಭಾರದ್ವಾಜನಿಗೆ ಸಂತೋಷವಾದರೂ ತಾನು ಭಾಷಣದಲ್ಲಿ ಹೇಳಿದ ವಿಚಾರಗಳನ್ನು ಕಾರ್ಯಗತ ಮಾಡಲು ಎಷ್ಟು ಅಡಚಣೆಗಳು ಎದುರಿಸಬೇಕೆಂಬ ವಿಚಾರ ಬಾಧಿಸುತ್ತಿತ್ತು. ಭಾರದ್ವಾಜ ಕಿರಿಯನಾದರೂ ಸಂಪ್ರದಾಯಗಳ ಮಾರ್ಪಾಡಿಗೆ ಎಂಥಹ ಪ್ರಬಲವಾದ ವಿರೋಧ ಅನುಭವಿಸಬೇಕೆಂಬ ಅನುಭವ ಅವನಿಗಿತ್ತು.

ಭಾರದ್ವಾಜನ ಕುಟುಂಬ. ಅವನ ಊರು ಶಿಡ್ಲಘಟ್ಟದಲ್ಲಿ ಹೆಸರು ಪಡೆದಿತ್ತು. ದಾನ ಧರ್ಮ ಮತ್ತು ಸಂಪತ್ತಿಗೆ ಹೆಸರು ಪಡೆದಿತ್ತು. ಅವರನ್ನು ಊರಿನ ಜನರು ಗೌರವಿಸುತ್ತಿದ್ದರು. ಅವನ ತಂದೆ ಕೃಷ್ಣತೀರ್ಥರು ಸ್ವಲ್ಪಮಟ್ಟಿಗೆ ವಿದ್ಯಾವಂತರು. ಕನ್ನಡ, ಉರ್ದು, ತೆಲುಗು ಮತ್ತು ಆಂಗ್ಲ ಭಾಷೆಗಳ ಜ್ಞಾನವಿತ್ತು. ಕಾನೂನಿನಲ್ಲಿ ಪರಿಣಿತೆ ಹಾಗೂ ನ್ಯಾಯಾಲಯ, ಸರ್ಕಾರದ ವ್ಯವಹಾರಗಳಲ್ಲಿ ಜ್ಞಾನ ಮತ್ತು ಕುಶಲತೆಯಿತ್ತು. ಊರಿನ ಜನ ತಮ್ಮ ನ್ಯಾಯಾಂಗ ಹಾಗೂ ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರಗಳಲ್ಲಿ ಕೃಷ್ಣತೀರ್ಥರ ಬುದ್ಧಿವಾದ ಹಾಗೂ ಸಹಾಯ ಪಡೆದು ಮುಂದುವರಿಯುತ್ತಿದ್ದರು. ಕೃಷ್ಣತೀರ್ಥರು ಜನಸೇವೆಯೇ ಜನಾರ್ಧನ ಸೇವೆಯೆಂದು ನಂಬಿ ಜನಗಳಿಂದ ಹಣ ಪಡೆಯದೆ ಸಹಾಯ ಮಾಡುತ್ತಿದ್ದರು. ಅವರು ಅಜಾತಶತ್ರು. ಎಲ್ಲರಿಗೂ ಸ್ನೇಹಿತರು. ಎಷ್ಟೋ ಸಲ ಬಡ ಬಗ್ಗರ ವ್ಯವಹಾರಗಳನ್ನು ತಮ್ಮ ಹಣದಿಂದಲೇ ನಡೆಸಿಕೊಡುತ್ತಿದ್ದರು. ಅವರನ್ನು ಎಲ್ಲರೂ ಗೌರವಿಸುತ್ತಿದ್ದರು. ಆದರೆ ಅವರದು ಹಳೆಯ ಸಂಪ್ರದಾಯ, ಶಿಷ್ಟಾಚಾರ. ಪ್ರಾರ್ಥಕಾಲದಲ್ಲಿ ಆಹ್ನೀಕ ಸಂಧ್ಯಾವಂದನೆ, ದೇವರಪೂಜೆ ಬಿಡದೆ ಮಾಡುತ್ತಿದ್ದರು. ಎಲ್ಲಾ ಹಬ್ಬಗಳು ಹರಿದಿನಗಳನ್ನು ಶಾಸ್ತ್ರೋಕ್ತವಾಗಿ ನಡೆಸುತ್ತಿದ್ದರು. ಆದರೆ ಅವರು ಚಾತುರ್ವರ್ಣಗಳು ಭಗವಂತ ಮಾಡಿದ್ದೆಂದೂ ಇದನ್ನು ಉಲ್ಲಂಘಿಸುವುದು ಮಹಾಪಾಪವೆನ್ನುತ್ತಿದ್ದರು. ಹರಿಜನರನ್ನು ದೇವಾಲಯಗಳಿಗೆ ಪ್ರವೇಶ ಕೊಡಬಾರದೆಂಬುದು ಅವರ ಅಚಲವಾದ ನಂಬಿಕೆ. ಇದು ಉಲ್ಲಂಘಿಸಿದರೆ ರೌರವ ನರಕ ಬರುತ್ತೆಂದು ಹೇಳುತ್ತಿದ್ದರು. ಆದರೆ ಹರಿಜನರನ್ನಾಗಲಿ, ಇತರ ವರ್ಣಗಳಾನ್ನಾಗಲಿ ಕೀಳು ಭಾವನೆಯಿಂದ ನೋಡುತ್ತಿರಲಿಲ್ಲ. ತಮ್ಮ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದವರನ್ನು ಸಂಸಾರಗಳೊಡನೆ ಆಹ್ವಾನಿಸಿ ತಮ್ಮ ಮನೆಯ ಹಿಂಭಾಗದಲ್ಲಿ ಅವರಿಗೆ ಊಟ ಹಾಕಿ ತಿಂಡಿ ಬಟ್ಟೆ ಕೊಡುತ್ತಿದ್ದರು. ಆದರೆ ಮನೆಯೊಳಗೆ ಪ್ರವೇಶ ಮಾಡಲು ಬಿಡುತ್ತಿರಲಿಲ್ಲ. 80 ವರ್ಷಗಳ ಹಿಂದೆ ಈ ರೀತಿಯ ಆಚಾರ ಪ್ರವರ್ತನೆ ಸಾಮಾನ್ಯ. ಅವರನ್ನು ಯಾರೂ ಟೀಕಿಸುತ್ತಿರಲಿಲ್ಲ. ಶ್ರೀ ಕೃಷ್ಣತೀರ್ಥರ ತಂದೆ ರಾಮತೀರ್ಥರು ಬಹಳ ಬಡ ಕುಟುಂಬದಿಂದ ಬಂದವರು. ಅವರ ತಂದೆ ವಿದ್ಯಾತೀರ್ಥರು ಸಂಸ್ಕೃತ ಪಂಡಿತರು. ವೇದಾಧ್ಯಯನ ಸಂಪನ್ನರು. ಶೃಂಗೇರಿ ಜಗದ್ಗುರುಗಳು ಆಂಧ್ರ ಪ್ರದೇಶದಲ್ಲಿ ಪಾದಯಾತ್ರೆ ಮಾಡುತ್ತಿದ್ದಾಗ ವಿದ್ಯಾತೀರ್ಥರನ್ನು ನೋಡಿ, ಅವರ ವಿದ್ವತ್ತನ್ನು ಮೆಚ್ಚಿ ಶೃಂಗೇರಿಗೆ ಬಂದು ನೆಲಸುವಂತೆ ಆಹ್ವಾನಿಸಿದರು. ಅವರಿಗೆ ಪ್ರತಿ ತಿಂಗಳೂ ಮಠದಿಂದ ಸ್ವಲ್ಪ ಹಣ ಕೊಡುತ್ತಿದ್ದರು. ಇದೇ ಅವರ ಸ್ಥಿರ ವರಮಾನ. ಇದರ ಜೊತೆಗೆ ಅವರ ಗದ್ದೆಯಿಂದ ಬರುತ್ತಿದ್ದ ಅಕ್ಕಿ ಅವರ ಜೀವನಕ್ಕೆ ಆಧಾರ. ಇಂತಹ ಬಡ ಕುಟುಂಬದಲ್ಲಿ ಬೆಳೆದ ರಾಮತೀರ್ಥರು ಅತಿ ಚಿಕ್ಕ ವಯಸ್ಸಿನಿಂದಲೇ ಉನ್ನತ ಸ್ಥಿತಿಗೇರಲು ಬಹಳ ಪ್ರಯತ್ನಿಸಿ ನಾಲ್ಕು ಸಂಬಂಧಗಳಿಂದ ಮಿತ್ರರಿಂದ ಸ್ವಲ್ಪ ಹಣ ಪಡೆದು ಲೇವಾದೇವಿ ಪ್ರಾರಂಭ ಮಾಡಿದರು. ಈ ಕಸುಬನ್ನು ಬಹಳ ಕುಶಲತೆಯಿಂದ ನಡೆಸಿ ಕೆಲವೇ ವರ್ಷಗಳಲ್ಲಿ ಸುಮಾರು ಹಣ ಸಂಗ್ರಹಿಸಿದರು. ಆದರೆ ವೈಯಕ್ತಿಕ ಲೇವಾದೇವಿ ಮಾಡುವವರಲ್ಲಿ ಆಸೆ ಕಡಿಮೆಯಾಯಿತು. ಮೈಸೂರು ಬೆಂಗಳೂರಲ್ಲಿ ಬ್ಯಾಂಕ್ ವ್ಯವಹಾರದಲ್ಲಿದ್ದ ಮಿತ್ರರೊಡನೆ ಮಾತನಾಡಿ ತಮ್ಮ ಊರಲ್ಲೇ ಒಂದು ಬ್ಯಾಂಕ್ ತೆಗೆಯಲು ನಿರ್ಧರಿಸಿ ಶ್ರೀನಿಧಿ ಎಂಬ ಬ್ಯಾಂಕ್ ಸ್ಥಾಪಿಸಿದರು. ತಾವೇ ಅದರ ಸ್ಥಾಪಕ ಅಧ್ಯಕ್ಷರಾಗಿ ರೀತಿ ನೀತಿಗಳನ್ನು ರೂಪಿಸಿ ಎರಡು ದಶಕಗಳ ಕಾಲದಲ್ಲಿ ಬಹಳ ಉನ್ನತ ಸ್ಥಿತಿಗೆ ತಂದರು. ರಾಮತೀರ್ಥರು ಧರ್ಮನಿಷ್ಠರಾಗಿ, ಧಾರ್ಮಿಕರಾಗಿ ವ್ಯವಹಾರ ನಡೆಸಿದರು. ಸಾಲಕ್ಕೆ ಕೊಟ್ಟ ಹಣ ವಸೂಲು ಮಾಡುವಾಗ ಅನುಕಂಪವಾಗಲಿ ರಿಯಾಯಿತಿಯಾಗಲಿ ಯಾರಿಗೂ ತೋರಿಸುತ್ತಿರಲಿಲ್ಲ. ಆದರೆ ಬಡ ರೈತರು ಬ್ಯಾಂಕಿನ ಸಾಲ ಪಡೆಯಲು ತಮ್ಮ ಜಮೀನು ಆಧಾರ ಮಾಡಿದ್ದರೂ, ಅವರ ಜೀವನೋಪಾಯಕ್ಕೆ ಬೇಕಾದ ಆ ಜಮೀನು ತೆಗೆದುಕೊಳ್ಳುತ್ತಿರಲಿಲ್ಲ. ಸಾಲಗಾರರಿಗೆ ಹೆಚ್ಚು ಕಾಲಾವಕಾಶ ಕೊಟ್ಟು ಸಣ್ಣ ಕಂತುಗಳಲ್ಲಿ ಆದಷ್ಟು ಬೇಗ ಸಾಲ ತೀರಿಸಿ ತಮ್ಮ ಜಮೀನನ್ನು ಉಳಿಸಿಕೊಳ್ಳಲು ಪ್ರೇರೇಪಿಸುತ್ತಿದ್ದರು. ವೈಯಕ್ತಿಕವಾಗಿ ತಮ್ಮ ಸಹಾಯ ನಿಧಿಯಿಂದ ಬಡಬಗ್ಗರ ಮಕ್ಕಳ ವಿದ್ಯಾಭ್ಯಾಸಕ್ಕೆ, ಮದುವೆ ಕಾರ್ಯಗಳಿಗೆ ಉಚಿತವಾಗಿ ಹಣ ಕೊಟ್ಟು ಸಹಾಯ ಮಾಡುತ್ತಿದ್ದರು. ಅವರು ವೈಯಕ್ತಿಕ ಜೀವನದಲ್ಲಿ ಬಹಳ ಧರ್ಮಿಷ್ಠರು ಹಾಗೂ ಸಂಪ್ರದಾಯಸ್ಥರೂ ಆಗಿದ್ದರು. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆಯಲ್ಲೂ ದೇವರ ಪೂಜೆ ಮತ್ತು ಪ್ರಸಾದ ವಿನಿಯೋಗ ಮಾಡುತ್ತಿದ್ದರು. ಮಧ್ಯಾಹ್ನ ಯಾರಾದರೂ ಅತಿಥಿಗಳಿಗೆ ಊಟ ಕೊಡದೆ ತಾವು ಊಟ ಮಾಡುತ್ತಿರಲಿಲ್ಲ. ಆ ಊರಿಗೆ ಬಂದು ಹೋಗುವ ಅನೇಕ ಪ್ರಯಾಣಿಕರಿಗೆ ಅವರ ಮನೆಯೇ ಅನ್ನ ಛತ್ರ್ರವಾಗಿತ್ತು. ಪ್ರತಿ ವರ್ಷ ಅವರು ರಾಮನವಮಿಯನ್ನು ಬಹಳ ಭಕ್ತಿಯಿಂದ, ವೈಭವದಿಂದ ನಡೆಸುತ್ತಿದ್ದರು. ಅವರ ತಾಲ್ಲೂಕಿನಿಂದ, ಡಿಸ್ಟ್ರಿಕ್ಟ್‍ನಿಂದ ಪ್ರಾಂತ್ಯದ ಅನೇಕ ಭಾಗಗಳಿಂದ ನೂರಾರು ಮಂದಿ ಇದರಲ್ಲಿ ಪಾತ್ರವಹಿಸಲು ಬರುತ್ತಿದ್ದರು. ಇದು ಒಂಬತ್ತು ದಿವಸಗಳ ಸಮಾರಂಭ. ತಾವೇ ಕಟ್ಟಿಸಿದ ರಾಮ, ಸೀತಾ, ಲಕ್ಷ್ಮಣರನ್ನು, ಗೋಪಾಲ ಸ್ವಾಮಿಯನ್ನು ಪ್ರತಿಷ್ಠಾಪಿಸಿದ್ದ ದೇವಸ್ಥಾನದಲ್ಲಿ ಈ ಒಂಬತ್ತು ದಿವಸಗಳ ಕಾರ್ಯಕ್ರಮ ಬಹಳ ವೈಭವದಿಂದ ನಡೆಯುತ್ತಿತ್ತು. ಪ್ರತಿ ಮಧ್ಯಾಹ್ನ ಮಂಗಳಾರತಿ ನೈವೇದ್ಯದ ನಂತರ ಬಂದ ಬಂದ ಭಕ್ತರಿಗೆಲ್ಲಾ ಅಲ್ಲೇ ಊಟದ ಸಂತರ್ಪಣೆ ನಡೆಯುತ್ತಿತ್ತು. ಪ್ರತಿ ಸಂಜೆ ಹರಿಕಥೆ ಅಥವಾ ಸಂಗೀತ ಕಾರ್ಯಕ್ರಮ ಪ್ರಸಾದ ವಿನಿಯೋಗ ನಡೆಯುತ್ತಿತ್ತು. 11 ನೇ ದಿವಸ ರಾಮ ಪಟ್ಟಾಭಿಷೇಕದ ನಂತರ ಈ ಕಾರ್ಯಕ್ರಮ ಮುಗಿಯುತ್ತಿತ್ತು.

ರಾಮತೀರ್ಥರ ಭಾರ್ಯೆ ಜಾನಕಮ್ಮ ಬಹಳ ಆಚಾರವಂತರು. ಗಂಡನೊಡನೆ ಆಸಕ್ತಿಯಿಂದ ಅವರು ಎಲ್ಲಾ ವ್ರತಗಳನ್ನು ಮಾಡುತ್ತಿದ್ದರು. ಹಬ್ಬದ ದಿವಸಗಳಲ್ಲಿ ಅನೇಕ ಬಡ ವಿದ್ಯಾರ್ಥಿಗಳಿಗೆ ರೈತರಿಗೆ ತೋಟದಲ್ಲಿ ಮನೆಯಲ್ಲಿ ಕೆಲಸ ಮಾಡಿದವರಿಗೆ ತಾವೇ ಮಾಡಿದ ಅಡಿಗೆ ಭಕ್ಷ್ಯಗಳನ್ನು ಬಡಿಸಿ ಸಂತೋಷಪಡುತ್ತಿದ್ದರು. ಆದರೆ ಅವರದು ವಿಪರೀತ ಮಡಿ, ತಾವೇ ಶುದ್ಧ ಮಾಡಿ ಒಣಗಿಸಿದ ಸೀರೆ ಕುಪ್ಪಸಗಳನ್ನು ಉಡುತ್ತಿದ್ದರು. ಯಾರು ಅದನ್ನು ಮುಟ್ಟಲು ಬಿಡುತ್ತಿರಲಿಲ್ಲ. ಮನೆಯಲ್ಲೂ ಸಹ ಹೆಜ್ಜೆ ಹೆಜ್ಜೆಗೆ ಮಡಿ ನೀರು ಪ್ರೋಕ್ಷಿಸಿ ನಡೆಯುತ್ತಿದ್ದರು. ಅವರು ಊಟ ಮಾಡುತ್ತಿದ್ದದ್ದು ಒಂದು ಗುಂಡು ಬೆಳ್ಳಿ ತಟ್ಟೆಯಲ್ಲಿ. ಊಟದ ನಂತರ ತಾವೇ ಶುದ್ಧ ಮಾಡಿ ದೇವರ ಮನೆಯ ಒಂದು ಮೂಲೆಯಲ್ಲಿಡುತ್ತಿದ್ದರು. ಯಾರೂ ಅದನ್ನು ಮುಟ್ಟಲು ಬಿಡುತ್ತಿರಲಿಲ್ಲ. ಊಟದ ನಂತರ ವಿಶ್ರಮಿಸಿಕೊಳ್ಳಲು ಒಂದು ಮಡಿ ಚಾಪೆ ಇಟ್ಟುಕೊಂಡಿದ್ದರು. ಊಟದ ಮನೆಯ ಮೂಲೆಯಲ್ಲಿ ಅದನ್ನು ಹಾಸಿ ವಿಶ್ರಮಿಸಿಕೊಳ್ಳಲು ರಾತ್ರಿ ಮಲಗುವವರೆಗೂ ಹಾಸಿಗೆ ಮುಟ್ಟುತ್ತಿರಲಿಲ್ಲ. ಊಟ ಮುಗಿಸುವವರೆಗೂ ಮೊಮ್ಮಕ್ಕಳನ್ನು ಹತ್ತಿರ ಬರಲು ಬಿಡುತ್ತಿರಲಿಲ್ಲ. ಸಂಜೆಯಿಂದ ರಾತ್ರಿವರೆಗೂ ಮಕ್ಕಳೊಡನೆ ಮಾತನಾಡುತ್ತಾ ರಾಮಾಯಣ, ಭಾಗವತ, ಮಹಾಭಾರತದ ಕಥೆಗಳನ್ನು ಹೇಳುತ್ತಿದ್ದರು. ಇವರ ವಿಪರೀತ ಮಡಿಯಿಂದ ಚಿಕ್ಕ ವಯಸ್ಸಿನ ಮೊಮ್ಮಕ್ಕಳಾದ ಭಾರದ್ವಾಜ, ತುಳಸಿ, ಭಾಗೀರಥಿಗೆ ದೇವರ ಮನೆ ಊಟದ ಮನೆಗಳಲ್ಲಿ ಆರಾಮವಾಗಿ ಓಡಾಡಲು ಅವಕಾಶ ಕೊಡುತ್ತಿರಲಿಲ್ಲ. ಚಿಕ್ಕ ಮಕ್ಕಳಿಗೆ ಅಜ್ಜಿಯ ಮಡಿವಂತಿಕೆ ಹೇಗೆ ತಿಳಿಯಬೇಕು.

ಅಜ್ಜಿ ತನಗಾಗಿ ಮಡಿಯಲ್ಲಿಟ್ಟಿದ್ದ ತಿಂಡಿ ಮುಟ್ಟುವುದು, ಮಡಿ ನೀರಿನ ಪಾತ್ರೆಯಿಂದ ನೀರು ತೆಗೆದುಕೊಳ್ಳುವುದು, ಮಡಿ ಅಜ್ಜಿಯಿಂದ ಕಠಿಣ ಮಾತುಗಳನ್ನು ಕೇಳಬೇಕಾಗಿತ್ತು. ತುಳಸಿ, ಬಾಗೀರಥಿ ಅಜ್ಜಿ ಬೈಗಳಿಗೆ ನಕ್ಕು ಓಡಿ ಹೋಗುತ್ತಿದ್ದರು. ಆದರೆ ಹತ್ತು ವರ್ಷದ ಭಾರದ್ವಾಜ ಅಜ್ಜಿಯ ಮಡಿ ಸಹಿಸುತ್ತಿರಲಿಲ್ಲ. ಅಜ್ಜಿಯ ಬೈಗಳಿಗೆ ಸರಿಯಾದ ಉತ್ತರ ಕೊಟ್ಟು ಗೇಲಿ ಮಾಡುತ್ತಿದ್ದ. ಯಾಕಜ್ಜಿ ಯಾವಾಗಲು ಮಡಿ ಮಡಿ ಎಂದು ಕೂಗಾಡುತ್ತೀಯಾ ಮಡಿಯೆಂದರೆ ಅಸ್ಪೃಶ್ಯತೆಯೇ ? ನಮ್ಮ ರಂಗಣ್ಣ ಮೇಸ್ಟ್ರು ಹೇಳುತ್ತಾರೆ ಮಡಿ ಎಂದರೆ ಉಟ್ಟ ಬಟ್ಟೆ ಶುದ್ಧವಾಗಿರಬೇಕೆಂದು ನಾವೂ ಸ್ನಾನ ಮಾಡಿ ಅಮ್ಮ ಒಗೆದುಕೊಟ್ಟಿರುವ ಬಟ್ಟೆ ಹಾಕಿಕೊಂಡರೆ ಮಡಿಯಲ್ಲವೇ ? ಅಜ್ಜಿ ನೀನ್ಯಾಕೆ ನಮ್ಮನ್ನು ಮಡಿ ಮಡಿ ಎಂದು ದೂರವಿಡುತ್ತೀಯಾ. ನಾವು ನೀನೆ ಬಿಂದಿಗೆಯಲ್ಲಿಟ್ಟಿರುವ ನೀರು ಕುಡಿದರೆ ಅಡುಗೆ ಮನೆಯ ಗೂಡಿನಲ್ಲಿರುವ ಹಣ್ಣು ತಿನ್ನಲು ಹೋದರೆ ನೀನು ಅವನ್ನು ಮುಟ್ಟಬಾರದೆನ್ನುತ್ತೀಯಾ. ಸರಿಯಾದ ಉತ್ತರ ಹೊಳೆಯದೆ ಅಜ್ಜಿ ಭಾರದ್ವಾಜ ನೀನು ಚಿಕ್ಕ ಹುಡುಗ ಇದೆಲ್ಲಾ ನಿನಗೆ ಅರ್ಥವಾಗುವುದಿಲ್ಲ. ದೊಡ್ಡವರು ಹೇಳಿದಂತೆ ಮಾಡಿ ಒಳ್ಳೆಯ ಮಗುವಾಗಿರು. ನೀನು ಬೆಳೆದ ಮೇಲೆ ಮಡಿ ಏನೆಂದು ಅರ್ಥವಾಗುತ್ತೆ ಎಂದರು. ನೋಡು ದೇವರಿಗೆ ಪೂಜೆ ಮಾಡುವಾಗ ನಿಮ್ಮ ಅಪ್ಪ, ಅಜ್ಜ ದೇವರಿಗೆ ಮಡಿಯಲ್ಲಿ ಮಾಡಿದ ಅನ್ನ ಭಕ್ಷ್ಯಗಳ ನೈವೇದ್ಯ ಮಾಡುತ್ತಾರೆ. ದೇವರಿಗೂ ಮಡಿ ಇಷ್ಟ ಎಂದಳು ಅಜ್ಜಿ. ಅಜ್ಜಿ ಹಾಗಾದರೆ ದೇವರಿಗೆ ಇಡುವ ಹೂವು, ಹಣ್ಣು, ಹಾಲು ಮಡಿಯಾ ? ಅದನ್ನು ಬೆಳೆದವರು ಹಾಲು ಹಿಂಡುವವರೂ, ತರುವವರೂ ಮಡಿಯಾ ಅಜ್ಜಿ ? ನೋಡೋ ಬಾರದ್ವಾಜ, ಗೋಮಾತೆಯಿಂದ ಬರುವ ಹಾಲು ಬಹಳ ಪವಿತ್ರ. ಗೋವಿನಲ್ಲಿ ಮೂವತ್ತು ಮೂರು ಕೋಟಿ ದೇವತೆಗಳಿದ್ದರಂತೆ. ಹಾಲು ಬಹಳ ಪವಿತ್ರವಾದದ್ದು ಅದನ್ನು ಕ್ಷೀರ ಎನ್ನುತ್ತಾರೆ. ಮಹಾವಿಷ್ಣು ಹಾಲಿನ ಸಮುದ್ರದ ಮೇಲೆಯೇ ಮಲಗಿರುತ್ತಾನೆ. ಅವನನ್ನು ಕ್ಷೀರ ಸಾಗರ ಶಯನ ಎನ್ನುತ್ತಾರೆ. ಇನ್ನು ಹಣ್ಣುಗಳು ಭೂಮಿಯಿಂದ, ಭೂದೇವಿಯಿಂದ ಬಂದದ್ದು. ಭೂಲಕ್ಷ್ಮಿ ಮಹಾಲಕ್ಷ್ಮಿಯೇ ಮಗು ಅರ್ಥವಾಯಿತೆ? ಎಂದು ತಾವು ಗೆದ್ದರೆಂಬ ಭಾವನೆಯಿಂದ ಮಾತನಾಡಿದರು. ಆದರೆ ಅಷ್ಟು ಸುಲಭವಾಗಿ ಬಾರದ್ವಾಜ ಅಜ್ಜಿಯನ್ನು ಬಿಡಲಿಲ್ಲ. ಈ ಮಡಿ ಎನ್ನುವುದು ಅರ್ಥವಿಲ್ಲದ ಆಚಾರ. ನಮ್ಮ ರಂಗಣ್ಣ ಮೇಸ್ಟ್ರು ಹೇಳಿದಂತೆ ಕನ್ನಡ ಸಾಹಿತ್ಯದ ಹೆಸರಾಂತ ಕವಿ ಹೇಳಿದ್ದು ಕೇಳಿ-

 ಮಡಿ ಮಡಿಯೆಂದು ಅಡಿಗಡಿಗೆ ಹಾರುವೆ
 ಮಡಿ ಎಲ್ಲಿ ಬಂತೇ ಬಿಕನಾಶಿ
 ಹುಟ್ಟುತ ಸೂತಕ, ಸಾಯುತ ಸೂತಕ
 ನಟ್ಟ ನಡುವಿನಲ್ಲಿ ನಿಂತೆ ಬಿಕನಾಶೀ ಎಂದ ಭಾರದ್ವಾಜ.

ಅಜ್ಜಿಗೆ ಕೋಪ ಬಂದು, ಬಿಡೋ ಭಾರದ್ವಾಜ ಸಾಕು ಸಾಕು ಬರೆದವನಿಗೆ, ಹೇಳಿದವನಿಗೆ ನರಕ ತಪ್ಪಿದಲ್ಲ, ಬ್ರಾಹ್ಮಣಿಕೆ ಹಾಳು ಮಾಡುವ ಜನ ಅವರು. ಅವರ ಮಾತು ಕೇಳಿ ಹಾಳಾಗಬೇಡ ಹೋಗು ನನ್ನ ಮುಂದೆ ನಿಲ್ಲಬ್ಯಾಡ ಎಂದರು. ನಗುತ್ತಾ ಸಿಳ್ಳುಹಾಕುತ್ತಾ ಭಾರದ್ವಾಜ ಓಡಿಹೋದ. ಸದಾ ಮಡಿಯೆಂದು ತನ್ನ ಮೇಲೆ ತಾನೇ ಅಸ್ಪೃಶ್ಯತೆ ಹೇರಿಕೊಂಡು ಬಾಳುವ ಅಜ್ಜಿ, ಭಗವಂತನೇ ಚತುರ್ವರ್ಣಗಳನ್ನು ನಿರ್ಮಿಸಿದ್ದಾನೆ. ಅದನ್ನು ಚಾಚೂ ತಪ್ಪದೇ ಪಾಲಿಸದಿದ್ದರೆ ಘೋರ ನರಕ ಬರುವುದೆಂದು ನಂಬಿ ಅಂತರ್ಜಾತಿಯ ಸಂಪರ್ಕ ಯಾವಾಗಲೂ ಆಗಬಾರದೆಂದು ದೃಢವಾಗಿ ನಂಬಿರುವ ತಾತ, ತಂದೆ, ತಮ್ಮ ತಮ್ಮ ಜಾತಿಗಳ ಚೌಕಟ್ಟಿನಿಂದ ಹೊರಗೆ ಹೋಗಲು ತಯಾರಿಲ್ಲದ ಹಳ್ಳಿಯ ಸಮಾಜ ಇಂತಹ ವಾತಾವರಣದಲ್ಲಿ ಹುಟ್ಟಿದರೂ, ಬಾಲ್ಯದಿಂದಲೇ ಇಂತಹ ಮೂಢನಂಬಿಕೆಗಳನ್ನು, ಗೊಡ್ಡು ಆಚಾರಗಳನ್ನು ನಂಬದ ಭಾರದ್ವಾಜ ನೂತನ ಸಮಾಜ ರಚಿಸಬೇಕೆಂದು ಆಶಿಸುತ್ತಿದ್ದ.
0 Comments



Leave a Reply.


    Categories

    All
    Academic Books
    Conference Books
    English Books
    HR Books
    Kannada Books
    Social Work Books

    Archives

    July 2022
    January 2022
    August 2020
    June 2020
    May 2020
    December 2019
    December 2018
    August 2018
    July 2018
    January 2018
    August 2017
    July 2017
    January 2017
    December 2016
    November 2016
    June 2016
    December 2015


    Picture
    For more details

    Picture
    For more details

    Picture
    For more details

    Picture
    For more details

    Picture
    For more details

    Picture
    For more details

    HR Books


    Social Work Books


    Niruta Publications

    Social Workers- Karnataka

    Leaders Talk
    Follow me on Academia.edu

    RSS Feed

Niruta Publications Books (Dec 2025)
File Size: 756 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG​
  • HR BLOG
  • PUBLICATION WITH US
  • NIRUTA PRINTS
  • ONLINE STORE
  • JOIN OUR ONLINE GROUPS
  • VIDEOS​

NIRATHANKA

  • ​CSR
  • TREE PLANTATION PROJECT
  • MIGRANT WORKER RESIDENTIAL FACILITY & WELFARE MANAGEMENT SERVICES

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
For More Details
Picture
More Details

Copyright Niruta Publications 2021,    Website Designing & Developed by: www.mhrspl.com