|
ಲೇಖಕರು : ಡಾ. ಮು. ಹಾಲಪ್ಪ ಪುಟ : 48 ಈ ಪುಸ್ತಕದ E-book ಪ್ರತಿಯನ್ನು Google Books ನಲ್ಲಿ ಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. ಒಂದು ಸಮುದಾಯದ ಅಥವಾ ಹಳ್ಳಿಯ ಒಬ್ಬ ಲೆಜೆಂಡ್ ಆಗಿರುವ ವ್ಯಕ್ತಿಯನ್ನು ಕುರಿತು ಬೇರೆಯವರಿಗೆ ಸಮರ್ಥವಾಗಿ ಹೇಳಲು ಯಾರಿಂದ ಸಾಧ್ಯ? ಖಂಡಿತಾ ಅವರನ್ನು ಹತ್ತಿರದಿಂದ ಕಂಡವರು, ಅವರ ಮಾತುಗಳನ್ನು ಕೇಳಿದವರು, ಸುತ್ತಮುತ್ತಲಿನವರಿಂದ ಅವರ ಬಗ್ಗೆ ಕೇಳಿದವರು, ಜೊತೆಗೆ ಒಡನಾಡಿದವರಿಂದಲೇ ಅದು ಸಾಧ್ಯ. ಜೊತೆಗೆ ಬಾಲ್ಯದಲ್ಲೇ ಇಂತಹದೊಂದು ವ್ಯಕ್ತಿಯಿಂದ ಪ್ರಭಾವಿತರಾಗಿ, ಅವರ ನಡೆನುಡಿಗಳನ್ನು ಆದರ್ಶವೆಂದು ಎದುರಿಟ್ಟುಕೊಂಡು ಬೆಳೆದವರಾದರಂತೂ ತಮ್ಮ ಕಣಕಣದಲ್ಲೂ ತನ್ನ ಆರಾಧ್ಯ ವ್ಯಕ್ತಿ, ಲೆಜೆಂಡ್ ಅನ್ನು ರೂಢಿಸಿಕೊಂಡವರು ಬರೆದರಂತೂ ಅದರಲ್ಲಿ ಪ್ರೀತಿ, ಗೌರವ ತುಳುಕುತ್ತದೆ. ಪ್ರೊ. ಎಚ್.ಎಂ. ಮರುಳಸಿದ್ಧಯ್ಯನವರು ನನಗೂ ಪ್ರಾಧ್ಯಾಪಕರು. ನನ್ನ ಅಭ್ಯಾಸ, ಬದುಕು, ವೃತ್ತಿಯ ಮೇಲೆ ಸಾಕಷ್ಟು ಪ್ರಭಾವ ಬೀರಿರುವ ವ್ಯಕ್ತಿ. ಅವರನ್ನು ಕುರಿತು ಪುಸ್ತಕ ಬರೆಯುವ ಆಹ್ವಾನವನ್ನು ನನ್ನ ಗೆಳೆಯರ ಬಳಗ ಕೊಟ್ಟಾಗ, ಸ್ವಲ್ಪ ಅಧೀರನಾಗಿಯೇ ಕೆಲಸ ಆರಂಭಿಸಿದ್ದೆ. ಈಗಲೂ ಆ ಪುಸ್ತಕವನ್ನು ತಿರುವಿದಾಗ, ಅರೆಕೊರೆಗಳು ನನ್ನ ಕಣ್ಣಿಗೇ ಬೀಳುತ್ತದೆ. ಆದರೆ, ಪೊರಕೆ ಪ್ರೊಫೆಸರ್ ಎಂದು ತನ್ನ ಅಭಿಮಾನಿ ಪ್ರತಿಮೆಯನ್ನು ಕುರಿತು ಬರೆದಿರುವ ಡಾ. ಮು. ಹಾಲಪ್ಪ ಹಿರೇಕುಂಬಳಗುಂಟೆಯವರಿಗೆ ಆ ಆತಂಕ ಎಲ್ಲಿಯೂ ಬಂದಂತೆ ಕಾಣುವುದಿಲ್ಲ. ತನ್ನ ಆತ್ಮೀಯ ವ್ಯಕ್ತಿಯನ್ನು ಕುರಿತು ಸುಲಲಿತವಾಗಿ ಪರಿಚಯಿಸುತ್ತಾ ಹೋಗಿದ್ದಾರೆ. ಪುರಂದರ ದಾಸರು ಹಾಡಿದ, ದಂಡಿಗೆ ಬೆತ್ತ ಹಿಡಿಸಿದಳಯ್ಯಾ... ಎನ್ನುವುದಕ್ಕೆ ಸಮಾನವಾಗಿದೆಯೋ ಎಂಬಂತಿರುವ, ಈ ಪೊರಕೆ ಪ್ರೊಫೆಸರ್ ನಮಗೂ ಪೊರಕೆ ಹಿಡಿಯುವ ಆನಂದ ಹಿಡಿಸಿದ್ದನ್ನು ಲೇಖಕರು ಎಷ್ಟು ಖುಷಿಯಾಗಿ ಹೇಳಿದ್ದಾರೆ ಎನ್ನುವುದನ್ನು ಓದಿಯೇ ಆಸ್ವಾದಿಸಬೇಕು. ಪೊರಕೆ ಪ್ರೊಫೆಸರ್, ಒಂದೆಡೆ ಎಚ್.ಎಂ.ಎಂ. ಅವರನ್ನು ಕುರಿತು ಹೇಳುತ್ತಲೇ, ತನ್ನ ಊರು, ಪರಿಸರ, ಅಲ್ಲಿದ್ದ ಸಮಸ್ಯೆಗಳು, ಜನ, ಅವರೊಡನೆಯ ಸಂಬಂಧ, ಮರುಳಸಿದ್ಧಯ್ಯನವರ ಪೂರ್ವಜರ ಸಾಹಸಮಯ ಕತೆ, ಜಾತಿಗಳ ಮೇಲಾಟ, ಅದರಿಂದಾಗಿ ಬಡವರಿಗೆ ಹಿಂದುಳಿದವರಿಗೆ ಆಗುತ್ತಿದ್ದ ತೊಂದರೆಗಳು, ಅಂತಹವುಗಳನ್ನು ಜಾತಿಗಳನ್ನೇ ಮೀರಿ ನಿಂತಿದ್ದ ಪ್ರೊ.ಎಚ್.ಎಂ.ಎಂ. ಸಾವಧಾನದಿಂದ ಪರಿಹರಿಸಿದ್ದು, ಸಮಾನ ಮನಸ್ಸಿನ ವ್ಯಕ್ತಿಗಳನ್ನು ಹಳ್ಳಿಗಳಿಗೆ ಕರೆತಂದು ಅವರ ಗುಣಗಳನ್ನು ಪರಿಚಯಿಸಿದ್ದು, ಇತ್ಯಾದಿ, ಪುಸ್ತಕದ ಪ್ರಾಮುಖ್ಯತೆಯನ್ನು ನವಿರಾಗಿ ರೂಪಿಸುತ್ತದೆ. ಹಳ್ಳಿಗಾಗಿ, ಸುತ್ತಮುತ್ತಲ ಸಮುದಾಯಕ್ಕಾಗಿ ಎಷ್ಟೆಲ್ಲಾ ಚಿಂತನೆ ನಡೆಸಿದ ಈ ಪ್ರೊಫೆಸರ್ ಅವರಿಗೆ ಸರ್ಕಾರದ ಮನ್ನಣೆ ಇನ್ನೂ ಸಿಗದಿರುವ ಬಗ್ಗೆ ಲೇಖಕನ ಸಾತ್ವಿಕ ಕೋಪ ಸ್ಪಷ್ಟವಾಗಿ ಕಾಣುತ್ತದೆ. ಇಡೀ ಪುಸ್ತಕದಲ್ಲಿ ನನಗೆ ಬಹಳ ಇಷ್ಟವಾದ ನಿರೂಪಣೆ, ಪೊರಕೆ ಪ್ರೊಫೆಸರ್ (ಪುಟ 20-26). ಶೌಚಾಲಯ ಶುದ್ಧಿ ಮಾಡುವ, ಕಸ ಗುಡಿಸುವ, ಮೇಲ್ಜಾತಿ ಕೆಳಜಾತಿ ನೋಡದೆ ಎಲ್ಲರನ್ನೂ ಮುಟ್ಟಿ ಮಾತನಾಡಿಸುವ ಮರುಳಸಿದ್ಧಯ್ಯನವರು ಊರಿನ ಐನೋರು. ಹಬ್ಬಗಳಲ್ಲಿ ಅವರನ್ನು ಭಿನ್ನ ತೀರಿಸಲಿಕ್ಕೆ ಕರೆಯಬೇಕಾದ ಜನ, ಈ ಮನುಷ್ಯನನ್ನ ಕರೆಸುವುದು ಹೇಗಪ್ಪಾ ಎಂದು ಹಿಂದೆ ಮುಂದೆ ನೋಡುತ್ತಿದ್ದರು ಎನ್ನುವ ಪ್ರಕರಣ. ಆದರೆ, ಅದೇ ಜನ ಇವನ್ನೆಲ್ಲಾ ಮೀರಿ ಬೆಳೆಯುವಂತೆ ಪ್ರೊ. ಮಾಡಿದ್ದಾರೆ ಎನ್ನುವುದನ್ನು ನಾನೂ ಕೂಡಾ ಹಿರೇಕುಂಬಳಗುಂಟೆಯಲ್ಲೆ ನೋಡಿ ಅನುಭವಿಸಿದ್ದೇನೆ. ಜಾತಿಜಾತಿಗಳ ಸಂಘರ್ಷವನ್ನು ತಡೆಯಲು ಅಥವಾ ಅವರಲ್ಲಿ ಸಾಮರಸ್ಯವನ್ನು ಉಂಟು ಮಾಡಲು ಪ್ರೊ. ಶ್ರಮಿಸಿದ ಸಹಭೋಜನ ಕಾರ್ಯಕ್ರಮವಂತೂ ಜನರ ಮಧ್ಯದಲ್ಲೇ ಇದ್ದುಕೊಂಡು ಶರಣರಂತೆ ಕ್ರಾಂತಿ ನಡೆಸಿದ ಎಚ್.ಎಂ.ಎಂ. ಸಾಮಾಜಿಕ ಚಿಂತನೆಗೆ ಸದಾಕಾಲಕ್ಕೂ ಉದಾಹರಣೆಯಾಗಿದ್ದಾರೆ. ಲೇಖನಗಳೊಡನೆ ಮಿಳಿತವಾಗಿ ಬಂದಿರುವ ಮಂಜಣ್ಣ ನಾಯಕ ಎನ್.ಟಿ. ಅವರ ರೇಖಾ ಚಿತ್ರಗಳು ಪುಸ್ತಕಕ್ಕೆ ಮೆರಗು ತಂದಿದೆ. ಈ ಕಿರು ಪುಸ್ತಕದ ರಚನಕಾರರಾದ ಡಾ. ಹಾಲಪ್ಪನವರಿಗೂ, ಪ್ರಕಾಶಕರಾದ ನಿರುತದ ಶ್ರೀ ರಮೇಶ್ ಅವರಿಗೂ ಅಭಿನಂದನೆಗಳು. ವಾಸುದೇವ ಶರ್ಮಾ ಎನ್.ವಿ ಪರಿವಿಡಿ 1. ಪ್ರೊಫೆಸರ್ ಊರಿಗೆ ಬಂದರು 2. ನೀರಾಳ ಓಣಿ, ನಿರಾಳ ಓಣಿ 3. ಪೊರಕೆ ಪ್ರೊಫೆಸರ್ 4. ಮಾದಿಗರ ಸಿದ್ಧ 5. ಸ್ಥಳೀಯ ಏಳಿಗೆ ಜಾಗತೀಕರಣದ ಬಾಳಿಗೆ ಬೆಳಕು ಈ ಪುಸ್ತಕದ ಆಯ್ದ ಕೆಲವೇ ಕೆಲವು ಪುಟಗಳನ್ನು ಇಲ್ಲಿ ಪ್ರಸ್ತುತ ಪಡಿಸಲಾಗಿದೆ.
ಸಂಪೂರ್ಣ ಪುಸ್ತಕಕ್ಕಾಗಿ ಸಂಪರ್ಕಿಸಿ : ನಿರುತ ಪಬ್ಲಿಕೇಷನ್ಸ್ #326, 1ನೇ ಮಹಡಿ, ಸಿಂಡಿಕೇಟ್ ಬ್ಯಾಂಕ್ ಎದುರು, ಡಾ. ಅಂಬೇಡ್ಕರ್ ಕಾಲೇಜು ಹತ್ತಿರ, ಕೆಂಗುಂಟೆ, ಮಲ್ಲತ್ತಹಳ್ಳಿ, ಬೆಂಗಳೂರು-560056. ದೂ : 080-23213710 ಇಮೇಲ್ : [email protected]
0 Comments
Leave a Reply. |
Categories
All
Archives
July 2022
HR BooksSocial Work Books |
|
|
|
| ||||||||||||||||||||||||
SITE MAP
SiteNIRATHANKA |
POSHOUR OTHER WEBSITESSubscribe |
RSS Feed