Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಕೊರೋನಾ ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ಸಮಾಜಕಾರ್ಯಕರ್ತರ ಪಾತ್ರ

3/29/2020

2 Comments

 
ಬಹುಶಃ ದ್ವಿತೀಯ ಮಹಾಯುದ್ಧದ ಬಳಿಕ ಇದೇ ಮೊದಲ ಬಾರಿಗೆ ವಿಶ್ವದ ಎಲ್ಲಾ ರಾಷ್ಟ್ರಗಳು ತಮ್ಮ ತಮ್ಮ ದೇಶಗಳ ನಾಗರಿಕರನ್ನು ಸಂರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿವೆ. ಎಲ್ಲೆಡೆ ಎಲ್ಲರ ಮನದಲ್ಲಿ ಭಯದ ಛಾಯೆ ಮನೆಮಾಡಿದೆ. ಮನೆಯಿಂದ ಹೊರ ಬರುವುದಕ್ಕೂ ಅಂಜುವಂತಹ ಭಯಾನಕ ಸನ್ನಿವೇಶದಲ್ಲಿ ನಾವಿದ್ದೇವೆ. ವೈದ್ಯರಾಧಿಯಾಗಿ, ಆರಕ್ಷಕ, ಮಿಲಿಟರಿ ಹಾಗೆಯೇ ಕೊಂಚ ಮಟ್ಟಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಿಬ್ಭಂಧಿಗಳೂ ಸಹ ಕೊರೋನವೆಂಬ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಸಲುವಾಗಿ ಪ್ರವರ್ಧಮಾನಕ್ಕೆ ಬಂದ ಸಮಾಜಕಾರ್ಯಕರ್ತರು ಮುನ್ನೆಲೆಗೆ ಬರಲೇ ಇಲ್ಲ. ಇದಾಗಲೇ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜಕಾರ್ಯಕರ್ತರನ್ನು ಹೊರತುಪಡಿಸಿದರೆ ಇತರೆ ಯಾರೂ ಸಹ ಸದರಿ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಉಪಶಮನ ಮಾಡುವ ನಿಟ್ಟಿನಲ್ಲಿ ಯಾವುದೇ ರೀತಿಯ ಗಮನಾರ್ಹ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದನ್ನು ನಾವು ಒಪ್ಪಲೇಬೇಕಾಗಿದೆ.
ಈ ಸಂದಿಗ್ಧ ಪರಿಸ್ಥಿತಿಯಲ್ಲಿ, ಸಮಾಜಕಾರ್ಯಕರ್ತರಾಗಿ ನಾವು ಏನು ಮಾಡಬಹುದು ಎಂಬ ಪ್ರಶ್ನೆ ಸಮಾಜಕಾರ್ಯಕರ್ತರು ಎನ್ನಿಸಿಕೊಂಡ ಬಹುಪಾಲು ಜನರ ಮನದಲ್ಲಿ ಮೂಡುವುದು ಸಾಮಾನ್ಯ. ಇದಕ್ಕೆ ಸೂಕ್ತ ಉತ್ತರ ಯಾರ ಬಳಿಯೂ ಇಲ್ಲ. ಕಾರಣ ಕೊರೋನಾದಂತಹ ಸೋಂಕು / ವ್ಯಾಧಿಯನ್ನು ಪ್ರಸ್ತುತ ಜಮಾನದ ಸಮಾಜಕಾರ್ಯಕರ್ತರು ತಮ್ಮ ಜೀವಮಾನದಲ್ಲಿ ಕಂಡಿರಲು ಸಾಧ್ಯವಿಲ್ಲ. ಈ ಹಿಂದೆಯೂ ಪ್ಲೇಗ್, ಕಾಲರಾ ಮಲೇರಿಯಾದಂತಹ ಮಹಾಮಾರಿಗಳು ಬಂದು ಜನರನ್ನು ಬಲಿತೆಗೆದುಕೊಂಡ ಉದಾರಣೆಗಳು ನಮ್ಮಲ್ಲಿವೆ. ಆದರೆ ಆ ಕಾಯಿಲೆ / ಸೋಂಕುಗಳಿಗಿಂತ ಕೊರೋನಾ ಸೃಷ್ಠಿಸಿಸುತ್ತಿರುವ ಅವಾಂತರ ಬಹಳ ಗಂಭೀರವೂ ಹಾಗೂ ವಿಷಮವೂ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಈ ಕಾರಣಕ್ಕಾಗಿಯೇ ವಿಶ್ವದ ಬಹುಪಾಲು ದೇಶಗಳು ಸಂಪೂರ್ಣವಾಗಿ ಲಾಕ್-ಡೌನ್ ಆಗಿವೆ. ಈ ಸೋಂಕು ಇಡೀ ವಿಶ್ವದ ಜನರ ಸ್ವಾಸ್ಥ್ಯವನ್ನು ಹಾಳುಮಾಡಿದ್ದಲ್ಲದೇ ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಸದ್ಯದ ಸರಿಸ್ಥಿತಿಯನ್ನು ಹತೋಟಿಗೆ ತರಲು ಇಡೀ ವಿಶ್ವವೇ ಹರಸಾಹಸ ಪಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಸಮಾಜಕಾರ್ಯಕರ್ತರ ಪಾತ್ರವೇನು? ಅವರ ನಡೆ ಏನೆಂಬುದು ಇನ್ನೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಭಾರತದಲ್ಲಿ ಇಂದಿಗೂ ಸಹ ಸಮಾಜಕಾರ್ಯವನ್ನು ಒಂದು ವೃತ್ತಿಯನ್ನಾಗಿ ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ ಎಂಬ ಕಹಿಸತ್ಯವನ್ನು ನಾವೆಲ್ಲರೂ ಒಪ್ಪಲೇಬೇಕಿದೆ. ಏಕೆಂದರೆ ಯು.ಜಿ.ಸಿ. ಇತ್ತೀಚೆಗೆ ಬಿಡುಗಡೆ ಮಾಡಿರುವ ವೃತ್ಯಾತ್ಮಕ ಕೋರ್ಸುಗಳ ಪಟ್ಟಿಯಲ್ಲಿ ಸಮಾಜಕಾರ್ಯ ಎಂಬ ವಿಷಯವೇ ಇಲ್ಲ. ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿ ಇತರೆ ವೃತ್ತಿಗಳಿಗೆ ಇರುವ ಹಾಗೆ ಸಮಾಜಕಾರ್ಯಕ್ಕೆ ಯಾವುದೇ ಕೌನ್ಸಿಲ್ ಇಲ್ಲ. ಬಿ.ಎಸ್.ಡಬ್ಲ್ಯೂ / ಎಂ.ಎಸ್.ಡಬ್ಲ್ಯೂ ವ್ಯಾಸಂಗ ಪಡೆದ ಪ್ರತಿಯೋರ್ವನೂ ಭಾರತದಲ್ಲಿ ಸಮಾಜಕಾರ್ಯಕರ್ತರೇ..! ಸಮಾಜಕಾರ್ಯದ ಮೂಲ ಪರಿಕಲ್ಪನೆಗಳು, ಆಚರಣಾ ವಿಧಾನಗಳು, ಉಪಯೋಗಿಸಬೇಕಿರುವ ಕಾರ್ಯತಂತ್ರಗಳು ಇವೇ ಮೊದಲಾದವುಗಳ ಬಗ್ಗೆ ಗಾಳಿ ಗಂಧ ಇಲ್ಲದವರೆಲ್ಲರೂ ಇಲ್ಲಿ ಸಮಾಜಕಾರ್ಯಕರ್ತರೇ..! ಬಿ.ಎಸ್.ಡಬ್ಲ್ಯೂ/ಎಂ.ಎಸ್.ಡಬ್ಲ್ಯೂ ಪದವಿ ಪಡೆದವರೆಲ್ಲರೂ ಸಮಾಜಕಾರ್ಯಕರ್ತರಾಗುತ್ತಿದ್ದಾರೆ..! ಈ ಕಾರಣಕ್ಕಾಗಿಯೇ ಇಂದಿಗೂ ಸಹ ಸಮಾಜಕಾರ್ಯವನ್ನು ಭಾರತದಲ್ಲಿ ಒಂದು ವೃತ್ತಿಪರ ಕೋರ್ಸು ಅಥವಾ ವೃತ್ತಿ ಎಂದು ಪೂರ್ಣಪ್ರಮಾಣದಲ್ಲಿ ಸ್ವೀಕರಿಸದಿರುವುದು. ಹಾಗಿದ್ದರೂ ಕಾರ್ಖಾನೆ, ಮನೋವೈದ್ಯಕೀಯ, ಅಭಿವೃದ್ಧಿ ಕೇತ್ರಗಳ ಜೊತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಮಾಜಕಾರ್ಯಕರ್ತರು ಪೂರ್ಣಪ್ರಮಾಣದಲ್ಲಿ ಕಾರ್ಯನಿರತರಾಗಿದ್ದಾರೆ ಎನ್ನುವುದು ಸತ್ಯವಾದರೂ ಸಹ ಇತರೆ ವೃತ್ತಿಗಳಂತೆ ಸಾಮಾಜಿಕ ಮಾನ್ಯತೆ ಪಡೆದಿದ್ದಾರೆ ಎಂಬುದು ಒಪ್ಪಲಾಗದು. ಹಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಸಮಾಜಕಾರ್ಯಕರ್ತರ ಕುರಿತಂತೆ ಉತ್ತಮ ಅಭಿಪ್ರಾಯಗಳು ಕೇಳಿ ಬರುತ್ತಿವೆ ಎಂಬುದೊಂದು ತೃಪ್ತಿ.

ಕೊರೋನಾ ಸೋಂಕಿಗೆ ಇಡೀ ವಿಶ್ವವೇ ತತ್ತರಿಸಿ ಹೋಗಿದ್ದು, ಕೆಲ ದೇಶಗಳು ಕೈಚೆಲ್ಲಿ ಕುಳಿತಿವೆ. ಭಾರತವನ್ನೊಳಗೊಂಡಂತೆ ವಿಶ್ವದ ಬಹುಪಾಲು ರಾಷ್ಟ್ರಗಳು ಕೊರೋನಾ ಸೋಂಕನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿವೆ. ಭಾರತದಲ್ಲಿ ವೈದ್ಯರಾಧಿಯಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ ಶಕ್ತಿಮೀರಿ ದುಡಿಯುತ್ತಿರುವುದು ಒಂದೆಡೆಯಾದರೆ ಹಗಲಿರುಳು ಶ್ರಮಿಸಿ ಸೋಂಕನ್ನು ತಡೆಗಟ್ಟುವಲ್ಲಿ ಆರಕ್ಷಕ ಇಲಾಖೆ ಹಾಗೂ ಮಿಲಿಟರಿ ಸಿಬ್ಬಂಧಿ ಪಾತ್ರ ಮಹತ್ವದ್ದಾಗಿದೆ. ಇವರೊಟ್ಟಿಗೆ ಗ್ರಾಮ ಪಂಚಾಯಿತಿ, ಆಶಾ ಕಾರ್ಯಕರ್ತೆಯರು, ಸ್ವಯಂಸೇವಕರು ಮುಂತಾದವರು ಸೋಂಕನ್ನು ಹತೋಟಿಗೆ ತರಲು ಕಾರ್ಯಪ್ರವೃತ್ತರಾಗಿದ್ದು, ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ರಾಷ್ಟ್ರಗಳ ನಾಯಕರು ತಮ್ಮ ನಾಗರಿಕರನ್ನು ರಕ್ಷಿಸಲು ಗೃಹ ದಿಗ್ಭಂದನವನ್ನು ವಿಧಿಸಿ, ತಮ್ಮ ತಮ್ಮ ದೇಶಗಳನ್ನು ನಿಗಧಿತ ಸಮಯದವರೆಗೆ ಲಾಕ್ ಡೌನ್ ಮಾಡಿದರೂ ಪರಿಸ್ಥಿತಿ ದಿನದಿಂದ ದಿನಕ್ಕೆ ವಿಷಮಸ್ಥಿತಿ ತಲುಪುತ್ತಿದೆಯೇ ಹೊರತು ಸೋಂಕನ್ನು ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಮಾಜಕಾರ್ಯಕರ್ತರ ಪಾತ್ರ ಅನಿವಾರ್ಯವಾಗಿದೆ ಎಂದು ಹೇಳುವ ಸಮಾಜಕಾರ್ಯಕರ್ತರು ಬಹಳಷ್ಟು ಮಂದಿ ಇದ್ದರೂ ಅವರ ಪಾತ್ರಗಳ ಬಗ್ಗೆ ನಿದರ್ಿಷ್ಟತೆ ಇಲ್ಲ. ಹೀಗಿರುವಾಗ ಸಮಾಜಕಾರ್ಯಕರ್ತರಾದವರು ಮಾಡಬೇಕಾದ ಕಾರ್ಯಗಳೇನು ಎಂಬುದನ್ನು ಸದರಿ ಲೇಖನದಲ್ಲಿ ವಿವರಿಸಲು ಪ್ರಯತ್ನಿಸಿದ್ದೇನೆ.
 
ಸಾಂಕ್ರಾಮಿಕ ರೋಗಗಳು ಮತ್ತು ಸಮಾಜಕಾರ್ಯ
ಸಾಂಕ್ರಾಮಿಕ ರೋಗ ಅಥವಾ ಸೋಂಕುಗಳನ್ನು ಹತೋಟಿಗೆ ತರುವಲ್ಲಿ ಸಮಾಜಕಾರ್ಯಕರ್ತರು ಈ ಹಿಂದೆ ಶ್ರಮಿಸಿದ್ದರು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಪ್ಲೇಗ್, ಕಾಲರಾ, ಮಲೇರಿಯಾ ನಂತಹ ಮಹಾಮಾರಿಗಳು ಪಾಶ್ಚಾತ್ಯ ರಾಷ್ಟ್ರಗಳನ್ನು ಬಾದಿಸಿದಾಗ, ಅಲ್ಲಿನ ಜನರ ಯೋಗಕ್ಷೇಮವನ್ನು ನೋಡಿಕೊಳ್ಳುವಲ್ಲಿ ಸಮಾಜಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಿದ್ದರೆಂಬುದು ಪ್ರಸ್ತುತ ಇತಿಹಾಸ. ಮೂಲತಃ ಸಮಾಜಕಾರ್ಯಕರ್ತರು ವೈದ್ಯರಲ್ಲ ಆದರೆ ಸಾಮಾಜಿಕ ಜೀವನದಲ್ಲಿ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯವೂ ಬಹಳ ಮಹತ್ವದ್ದಾಗಿದ್ದು, ಅದನ್ನು ಖಾತರಿಪಡಿಸುವಲ್ಲಿ ಸಮಾಜಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದೆ. ಪ್ರಸ್ತುತ ಎದುರಾಗಿರುವ ಕೊರೋನಾ ಬಿಕ್ಕಟ್ಟಿನಿಂದ ಶ್ರೀಸಾಮಾನ್ಯರನ್ನು ಪಾರು ಮಾಡಲು ಜಾಗೃತಿ ಮೂಡಿಸುವ ಕಾರ್ಯ ಕ್ರಮಬದ್ಧವಾಗಿ ಜರುಗಬೇಕಿದ್ದು, ಈ ಕಾರ್ಯಕ್ಕೆ ಸಮಾಜಕಾರ್ಯಕರ್ತರ ಮಧ್ಯಸ್ಥಿಕೆಯ ಅನಿವಾರ್ಯತೆಯನ್ನು ಸಕರ್ಾರ / ಸ್ಥಳೀಯ ಸಂಸ್ಥೆಗಳಿಗೆ ಮನವರಿಕೆ ಮಾಡಿಕೊಡುವ ಗುರುತರವಾದ ಜವಾಬ್ದಾರಿ ವೃತ್ತಿಪರ ಸಮಾಜಕಾರ್ಯಕರ್ತರ ಸಂಘಟನೆಗಳ ಮೇಲಿದೆ. ಲಭ್ಯವಿರುವ ಸಮಾಜಕಾರ್ಯಕರ್ತರನ್ನು ಸಮರ್ಥವಾಗಿ ಬಳಸಿಕೊಳ್ಳಲು ಹಾಗೂ ಅವರ ನಿಖರವಾದ ಪಾತ್ರಗಳನ್ನು ಸ್ಪಷ್ಟಪಡಿಸಿ ಅನಿವಾರ್ಯ ಪರಿಸ್ಥಿತಿಯಲ್ಲಿ ಒದಗಿಸಲ್ಪಡುವ ಸೇವೆಗಳ ನಿಖರ ಮತ್ತು ಪೂರ್ಣ ಮಾಹಿತಿ ಒದಗಿಸುವ ಪೂರಕ ರೂಪುರೇಷೆಗಳನ್ನು ಸಿದ್ಧಪಡಿಸಿ ಸಕರ್ಾರದ ಗಮನಕ್ಕೆ ತರುವ ಹೊಣೆ ವೃತ್ತಿಪರ ಸಂಘಟನೆಗಳದ್ದಾಗಬೇಕು. ಸಮಾಜಕಾರ್ಯ ವಿಷಯವನ್ನು ಬೋಧಿಸುವ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ವೃತ್ತಿಪರ ಸಂಘಟನೆಗಳಿಗೆ ಅನಿವಾರ್ಯವಾದ ಮಾಹಿತಿಯನ್ನು ನೀಡುವುದರೊಂದಿಗೆ ಮಧ್ಯಸ್ಥಿಕೆಯ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸಬೇಕು. ಸಮಾಜಕಾರ್ಯ ವಿಷಯಗಳನ್ನು ಬೋಧಿಸುವುದರ ಜೊತೆ-ಜೊತೆಗೆ ಸಂದಿಗ್ಧ ಪರಿಸ್ಥಿತಿಗಳನ್ನು ನಿಭಾಯಿಸಲು ಪ್ರಶಿಕ್ಷಣಾರ್ಥಿಗಳನ್ನು ಸಿದ್ಧಪಡಿಸುವ ಉದ್ದೇಶದಿಂದ ಇಂತಹ ಬಿಕ್ಕಟ್ಟಿನ ಪರಿಸ್ಥಿತಿಗಳನ್ನು ಸಮಾಜಕಾರ್ಯ ವಿಭಾಗಗಳು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಇದಕ್ಕೆ ಪೂರಕವಾಗಿ ವಿಶ್ವವಿದ್ಯಾಲಯಗಳು ಸರ್ಕಾರ / ಸ್ಥಳೀಯ ಸಂಸ್ಥೆಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಂಡು ಇಂತಹ ನೂತನ ಪ್ರಯೋಗಗಳಿಗೆ ಅವಕಾಶ ಮಾಡಿಕೊಡಬೇಕಿದೆ. ಪ್ರಶಿಕ್ಷಣಾರ್ಥಿಗಳಿಗೆ ಪ್ರಶಿಕ್ಷಕರೇ ಮಾದರಿಯಾಗಿ, ಸ್ವತಃ ಪ್ರಶಿಕ್ಷಕರೇ ಬಿಕ್ಕಟ್ಟನ್ನು ಉಪಶಮನ ಮಾಡುವ ಕಾಯಕದಲ್ಲಿ ನೇರವಾಗಿ ಬಾಗಿಯಾಗುವುದರ ಮೂಲಕ ಪ್ರಶಿಕ್ಷಣಾರ್ಥಿಗಳಲ್ಲಿ ಧೈರ್ಯ ಹಾಗೂ ಆತ್ಮವಿಶ್ವಾಸವನ್ನು ತುಂಬಬೇಕು. ಮೇಲ್ನೋಟಕ್ಕೆ ಇಲ್ಲಿ ಚರ್ಚಿಸಿರುವ ಬಹುಪಾಲು ವಿಚಾರಗಳು ಅಗತ್ಯವಿರುವವರಿಗೆ ನೇರವಾಗಿ ನೆರವಾಗುವುದಿಲ್ಲ ಆದರೆ ಸಮಾಜಕಾರ್ಯಕರ್ತರು ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಲು ತೀರಾ ಅನಿವಾರ್ಯ. ಆದ ಕಾರಣ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕೂ ಮುನ್ನ ಎದಿರಾಗುವ ಇಕ್ಕಟ್ಟುಗಳ ಬಗ್ಗೆ ಸಂಕ್ಷಿಪ್ತವಾಗಿ ಬೆಳಕುಚೆಲ್ಲುತ್ತಾ ಅವುಗಳನ್ನು ಪರಿಹರಿಸುವ ಮಾರ್ಗಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಗಿದೆ.
 
ಸಮಾಜಕಾರ್ಯಕರ್ತರು ಮತ್ತು ಸೋಂಕು ನಿಯಂತ್ರಣ
ನಿಜ, ಪ್ರಸ್ತುತ ಕೊರೋನಾ ಸೋಂಕು ಒಬ್ಬರಿಂದೊಬ್ಬರಿಗೆ ಬಹಳ ವೇಗವಾಗಿ ಹರಡುತ್ತಿದೆ. ದೇಶಗಳ ಎಲ್ಲೆಗಳನ್ನು ಮೀರಿ ಹರಡುತ್ತಿದೆ. ವಿಶ್ವದ ಬಹುಪಾಲು ರಾಷ್ಟ್ರಗಳು ಈ ಸೋಂಕಿನಿಂದ ತತ್ತರಿಸಿ ಹೋಗಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಮಾನ್ಯವಾಗಿ ಸಮಾಜಕಾರ್ಯಕರ್ತರಾದವರು ಮೊದಲು ತಮ್ಮನ್ನು ತಾವು ಸೋಂಕಿನಿಂದ ಸಂರಕ್ಷಿಸಿಕೊಳ್ಳಬೇಕು ಮತ್ತು ಅಗತ್ಯ ಪೂರಕ ಮುನ್ನೆಚ್ಚರಿಕಾ ಕ್ರಮಗಳನ್ನು ಚಾಚೂ ತಪ್ಪದಂತೆ ಪಾಲಿಸಬೇಕು. ಸರ್ಕಾರ ಅಥವಾ ಆರೋಗ್ಯ ಇಲಾಖೆಗಳು ಕಾಲಕಾಲಕ್ಕೆ ವಿಧಿಸುವ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದರ ಜೊತೆಗೆ ತಮ್ಮ ಕುಟುಂಬದ ಸದಸ್ಯರು ಹಾಗೂ ನೆರೆಹೊರೆಯವರಲ್ಲಿ ಜಾಗೃತಿ ಮೂಡಿಸಬೇಕು. ಹೀಗೆ ಮಾಡುವುದರಿಂದ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸೋಂಕು ಮುಕ್ತವನ್ನಾಗಿಸಬಹುದು. ಜನಜಂಗುಳಿಯಿಂದ ದೂರ ಉಳಿಯುವ ಸಲುವಾಗಿ ಸಾಮಾಜಿಕ ಕಾರ್ಯಕ್ರಮಗಳಿಂದ ಸಂಪೂರ್ಣವಾಗಿ ದೂರ ಉಳಿಯಬೇಕು ಇಲ್ಲವೇ ತಿರಸ್ಕರಿಸಬೇಕು. ನೆರೆ-ಹೊರೆಯವರಿಗೆ ಅಥವಾ ಶ್ರೀಸಾಮಾನ್ಯರಿಗೆ ಪುಕ್ಕಟೆ ಸಲಹೆಗಳನ್ನು ಕೊಡುವುದಕ್ಕೂ ಮುಂಚೆ ಆ ಎಲ್ಲಾ ಸಲಹೆ ಸೂಚನೆಗಳನ್ನು ನಾವು ಸ್ವತಃ ಪಾಲಿಸುತ್ತಿರುವುದನ್ನು ಖಾತರಿಪಡಿಸಬೇಕು. ಒಬ್ಬ ಸಾಮಾನ್ಯ ಮನುಷ್ಯನಾಗಿ ಇಲ್ಲವೇ ಸಮಾಜಕಾರ್ಯಕರ್ತರಾಗಿ ಈ ಮೇಲ್ಕಂಡ ಅಂಶಗಳನ್ನು ಪಾಲಿಸಿದರೆ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟಬಹುದು.

ಗೃಹ ದಿಬ್ಬಂದನದಂತಹ ಬಿಕ್ಕಟ್ಟಿನ ಸನ್ನಿವೇಶಗಳನ್ನು ಎದುರಿಸಲು ಶ್ರೀಸಾಮಾನ್ಯರನ್ನು ಸನ್ನದ್ದುಗೊಳಿಸುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ತುಂಬುವ ಗುರುತರವಾದ ಜವಾಬ್ದಾರಿಯನ್ನು ಸಮಾಜಕಾರ್ಯಕರ್ತರು ನಿರ್ವಹಿಸಬೇಕು. ಈ ಕಾರಣಕ್ಕೆ ವೃಂದ ಅಥವಾ ಸಮುದಾಯ ಸಮಾಲೋಚನಾ ತಂತ್ರಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಸಮುದಾಯದಲ್ಲಿ ಅಸ್ತಿತ್ವದಲ್ಲಿರುವ ಸಮುದಾಯಾಧಾರಿತ ಸಂಘಟನೆಗಳ ಮೂಲಕ ಎಲ್ಲಾ ಶ್ರೀಸಾಮಾನ್ಯರಿಗೆ ತಲುಪುವಂತೆ ಮಾಹಿತಿಯನ್ನು ಹಂಚಿಕೊಂಡು ಹಬ್ಬುತ್ತಿರುವ ಸೋಂಕನ್ನು ನಿಯತ್ರಿಸಲು ಅಥವಾ ಉಪಶಮನ ಮಾಡಲು ಎಲ್ಲರನ್ನೂ ತಯಾರುಗೊಳಿಸಬೇಕು. ಹೀಗೆ ಮಾಡುವುದರಿಂದ ಸೋಂಕು ಹರಡುವುದಕ್ಕಿಂತ ಮುಂಚೆಯೇ ನಿಯಂತ್ರಿಸಲು ಸಾಧ್ಯವಿದೆ.

ಭಾರತ ದೇಶಕ್ಕೆ ಸಂಬಂಧಿಸಿದಂತೆ ಕೊರೋನಾ ಸೋಂಕು ಇನ್ನೂ ಗ್ರಾಮೀಣ ಹಾಗೂ ಬುಡಕಟ್ಟು ಸಮುದಾಯಗಳಿಗೆ ಲಗ್ಗೆ ಇಟ್ಟಿರುವ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲದಿರುವುದರಿಂದ ಮೇಲಿನ ಕಾರ್ಯತಂತ್ರ ಕೇವಲ ಗ್ರಾಮೀಣ ಅಥವಾ ಬುಡಕಟ್ಟು ಸಮುದಾಯಗಳಿಗೆ ಮಾತ್ರ ಪ್ರಸ್ತುತವೆನಿಸುತ್ತದೆ. ಆದರೆ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಇದಾಗಲೇ ಹಲವು ಜನ ಸೋಂಕಿತರು ಪತ್ತೆಯಾಗಿದ್ದು, ಅವರು ಮತ್ತಷ್ಟು ಜನರಿಗೆ ಸೋಂಕನ್ನು ಹರಡಿರುವುದು ಖಾತರಿಯಾಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಗೃಹ ದಿಗ್ಭಂದನದಂತಹ ಸಾಧನಗಳು ಪರಿಣಾಮಕಾರಿಯಾಗುವುದಿಲ್ಲ. ಬದಲಿಗೆ ಸೋಂಕು ಪೀಡಿತರನ್ನು ಮತ್ತು ಶಂಕಿತರನ್ನು ವಿಶೇಷ ತೀವ್ರ ನಿಗಾ ಸ್ಥಳಗಳಿಗೆ ಸ್ಥಳಾಂತರಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಹಾಗೂ ಅವರ ಕುಟುಂಬ ಸದಸ್ಯರನ್ನು ನಿರ್ದಿಷ್ಟ ಸಮಯದವರೆಗೆ ವಿಶೇಷ ಸ್ಥಳಗಳಲ್ಲಿರಿಸಿ ನಿಗಾವಹಿಸಬೇಕು. ಸೋಂಕು ಪೀಡಿತರು, ಶಂಕಿತರು ಮತ್ತು ಅವರ ಕುಟುಂಬದ ಸದಸ್ಯರನ್ನು ವಿಂಗಡಿಸಿ ಪ್ರತ್ಯೇಕ ಸ್ಥಳಗಳಲ್ಲಿರಿಸಬೇಕು (ಈ ಸ್ಥಳ ಜನವಸತಿ ಕೇಂದ್ರದಿಂದ ದೂರದಲ್ಲಿರಬೇಕು, ಪಟ್ಟಣ/ನಗರ/ಗ್ರಾಮ ವ್ಯಾಪ್ತಿಗಳಿಂದ ದೂರವಿರುವ ವಸತಿ ಗೃಹ/ಕಲ್ಯಾಣ ಮಂಟಪ/ಸರ್ಕಾರಿ ಕಛೇರಿಗಳನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಬೇಕು) ಮತ್ತು ಪೂರಕ ಸೌಲಭ್ಯಗಳನ್ನು ಒದಗಿಸಬೇಕು. ಇಂತಹ ಸಂದರ್ಭದಲ್ಲಿ ಈ ಮೂರೂ ವರ್ಗಗಳ ಜನರಿಗೆ ವೈದ್ಯಕೀಯ ಸೌಲಭ್ಯಗಳ ಜೊತೆಗೆ ತಜ್ಞ ಸಮಾಜಕಾರ್ಯಕರ್ತರು ಸೂಕ್ತ ಸಲಹಾಲೋಚನೆ ನಿಯಮಿತವಾಗಿ ನೀಡಬೇಕು.

ಸೋಂಕು ಪೀಡಿತ ಅಥವಾ ಶಂಕಿತ ವ್ಯಕ್ತಿಗಳ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಪತ್ತೆಹಚ್ಚಲು ವಿಶೇಷ ಕಾರ್ಯತಂಡಗಳನ್ನು ರಚಿಸಬೇಕು ಇಲ್ಲವೇ ಸ್ವಯಂ ಘೋಷಿಸಿಕೊಳ್ಳಲು ಮನವಿ ಮಾಡಬೇಕು (ಬಹುಶಃ ಇದು ಕಷ್ಟಸಾಧ್ಯದ ಕೆಲಸ ಆದರೆ ನಿರ್ಲಕ್ಷಿಸಬಾರದು). ಪತ್ತೆಯಾದ ವ್ಯಕ್ತಿಗಳೊಂದಿಗೆ ಅವರ ಕುಟುಂಬದ ಸದಸ್ಯರನ್ನು ವೈದ್ಯಕೀಯ ತಪಾಸಣೆಗೊಳಪಡಿಸಬೇಕು. ಸೋಂಕಿನ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ತೀವ್ರ ನಿಗಾ ಘಟಕದಲ್ಲಿರಿಸಬೇಕು ಹಾಗೂ ಸೋಂಕಿತ ವ್ಯಕ್ತಿಗಳ ಸಂಪರ್ಕದಲ್ಲಿದ್ದೂ ಸೋಂಕಿನ ಯಾವುದೇ ಲಕ್ಷಣಗಳನ್ನು ಹೊಂದಿರದ ವ್ಯಕ್ತಿಗಳನ್ನೂ ನಿರ್ದಿಷ್ಟ ಸಮಯದವರೆಗೆ ಪ್ರತ್ಯೇಕ ಸ್ಥಳಗಳಲ್ಲಿ ಸೂಕ್ತ ವ್ಯವಸ್ಥೆಗಳೊಂದಿಗೆ ದಿಗ್ಬಂಧನದಲ್ಲಿರಿಸಬೇಕು. ಹೀಗೆ ಮಾಡುವುದರಿಂದ ಸೋಂಕು ಹರಡುವುದನ್ನು ಬಹಳ ಸುಲಭವಾಗಿ ನಿಯಂತ್ರಿಸಬಹುದು. ಹೀಗೆ ದಿಗ್ಬಂದನದಲ್ಲಿರುವ ವ್ಯಕ್ತಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಕಾಲಕಾಲಕ್ಕೆ ಸಲಹಾಲೋಚನೆ ನೀಡಬೇಕು. ಸಮಾಜಕಾರ್ಯಕರ್ತರು ದಿಗ್ಬಂದನದಲ್ಲಿರುವ ವ್ಯಕ್ತಿ ಹಾಗೂ ಕುಟುಂಬದ ಸದಸ್ಯರ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸಿ ಇಬ್ಬರಲ್ಲೂ ಆತ್ಮಸ್ಥೈರ್ಯವನ್ನು ತುಂಬುವ ಸ್ನೇಹ ಸಂದರ್ಶಕರಾಗಿ ಕಾರ್ಯನಿರ್ವಹಿಸಬೇಕು. ಅನಿವಾರ್ಯ ಪರಿಸ್ಥಿತಿಗಳಲ್ಲಿ ಗೃಹಭೇಟಿ ಮಾಡಿ ಪ್ರಕರಣದ ಹಿನ್ನೆಲೆಯೊಂದಿಗೆ ಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ವೈದ್ಯಕೀಯ ಉಪಯೋಗಕ್ಕಾಗಿ ಒದಗಿಸುವುದು.

ಇವುಗಳೊಟ್ಟಿಗೆ ಸೋಂಕಿತರ ಮತ್ತು ಶಂಕಿತರ ಕುಟುಂಬ ಸದಸ್ಯರು ಹಾಗೂ ಅವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳಿಗೆ ಸೂಕ್ತ ಚಿಕಿತ್ಸೆಯೊಂದಿಗೆ ಕಾಲಕಾಲಕ್ಕೆ ಆಪ್ತ ಸಮಾಲೋಚನೆ ನೀಡಬೇಕು. ಈ ಸಂದರ್ಭದಲ್ಲಿ ಸಮಾಜಕಾರ್ಯಕರ್ತರ ಪಾತ್ರ ನಿರ್ಣಾಯಕವೂ ಹಾಗೂ ಪರಿಣಾಮಕಾರಿಯೂ ಆಗಿರುವುದು. ಹದಿನೇಳನೇ ಶತಮಾನದಲ್ಲಿ ಬ್ರಿಟನ್ನಿನಲ್ಲಿ ತಲೆದೋರಿದ ಪ್ಲೇಗ್ ರೋಗ ಭಾದಿತರನ್ನು ಹಾಗೂ ಭಿಕ್ಷುಕರನ್ನು ಅವರ ಸಾಮರ್ಥ್ಯಕ್ಕೆ ಅನುಸಾರವಾಗಿ ಬೇರ್ಪಡಿಸಿದ ರೀತಿಯಲ್ಲಿ ಕರೋನಾ ಸೋಂಕಿತರ ಮತ್ತು ಶಂಕಿತರ ಕುಟುಂಬ ಸದಸ್ಯರು ಹಾಗೂ ಅವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ವಿಂಗಡಿಸಿ ಪ್ರತ್ಯೇಕ ವಸತಿ ಸೌಕರ್ಯವನ್ನು ಕಲ್ಪಿಸಬೇಕಾದ ಅನಿವಾರ್ಯತೆ ಇದೆ. ಈ ವಿಚಾರವನ್ನು ಸರ್ಕಾರಗಳು ಬಹಳ ಗಂಭೀರವಾಗಿ ಪರಿಗಣಿಸಿ, ಸೂಚಿಸಿದಂತೆ ಸೌಲಭ್ಯಗಳನ್ನು ಕಲ್ಪಿಸಿದರೆ ನಿರ್ದಿಷ್ಟ ಸಮಯದಲ್ಲಿ ಸೋಂಕನ್ನು ಹತೋಟಿಗೆ ತರಬಹುದಾಗಿದೆ.
 
ಸರ್ಕಾರ ಕೈಗೊಳ್ಳಬೇಕಾದ ಜರೂರು ಕ್ರಮಗಳು:
ಕಳೆದ ಒಂದು ತಿಂಗಳಿಂದ ಭಾರತಕ್ಕೆ ವಿದೇಶಗಳಿಂದ ಆಗಮಿಸಿದ ಎಲ್ಲ ಪ್ರಯಾಣಿಕರನ್ನು ಹಾಗೂ ಅವರ ಕುಟುಂಬದವರನ್ನು ಅವರವರ ಮನೆಗಳಿಂದ ಸ್ಥಳಾಂತರಿಸಿ ವಿಶೇಷ ಗೃಹಗಳಲ್ಲಿಡುವುದು. ಅವರಿಗೆ ಅನಿವಾರ್ಯವಾದ ವೈದ್ಯಕೀಯ ಸೌಲಭ್ಯಗಳೊಂದಿಗೆ ಇತರೆ ಅವಶ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವುದು. ಸೋಂಕನ್ನು ದೃಢಪಡಿಸುವ ವೈದ್ಯಕೀಯ ವಿಧಾನ ನಡೆಸುವ ಲ್ಯಾಬೋರೇಟರಿಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿರುವಂತೆ ನೋಡಿಕೊಳ್ಳುವುದು. ವಿಶೇಷ ಗೃಹಗಳಲ್ಲಿರುವ ಸೋಂಕಿತರ ಮತ್ತು ಶಂಕಿತರ ಆತ್ಮಸ್ಥೈರ್ಯ ಬಲಪಡಿಸುವ ಸಲುವಾಗಿ ಕಾಲಕಾಲಕ್ಕೆ ಸಲಹಾಲೋಚನೆ ನೀಡುವುದು. ಸೋಂಕಿತರ ಮತ್ತು ಶಂಕಿತರ ಕುಟುಂಬದ ಸದಸ್ಯರ ಬಗೆಗಿನ ಮಾಹಿತಿಯನ್ನು ಕಾಲಕಾಲಕ್ಕೆ ಒದಗಿಸುತ್ತಿರಬೇಕು ಹಾಗೂ ಅನಿವಾರ್ಯ ಪರಿಸ್ಥಿತಿಯಲ್ಲಿ ಅವರೊಂದಿಗೆ ಸಂವಹನ ನಡೆಸಲು (ದೂರವಾಣಿ ಮೂಲಕ) ಅನುವು ಮಾಡಿಕೊಡಬೇಕು. ಜೊತೆಗೆ ವಿಶೇಷ ಗೃಹಗಳಲ್ಲಿರುವ ಸೋಂಕಿತರ ಮತ್ತು ಶಂಕಿತರ ಬಗೆಗಿನ ಮಾಹಿತಿಯನ್ನೂ ಅವರ ಕುಟುಂಬ ಸದಸ್ಯರಿಗೆ ಕಾಲಕಾಲಕ್ಕೆ ತಲುಪಿಸುತ್ತಾ ಅವರಲ್ಲಿ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಬೇಕು. ಹೀಗೆ ಮಾಡುವುದರಿಂದ ಬಾಧಿತರನ್ನು ಅವರ ಕುಟುಂಬದ ಸದಸ್ಯದಿಂದ ದೂರವಿರಿಸಿ ಸೋಂಕು ಹರಡುವುದನ್ನು ನಿಯಂತ್ರಿಸಬಹುದಾಗಿದೆ. ಸೋಂಕು ಪೀಡಿತರಿಗೆ ವೈದ್ಯರು ನೀಡುವ ಚಿಕಿತ್ಸೆಯಷ್ಟೇ ಪರಿಣಾಮಕಾರಿಯಾಗಿ ಸಮಾಜಕಾರ್ಯಕರ್ತರು ಆಪ್ತ ಸಮಾಲೋಚನೆಯ ಒದಗಿಸಬೇಕು. ವೈದ್ಯರು ಸೋಂಕು ಪೀಡಿತ ಹಾಗೂ ಶಂಕಿತರಿಗೆ ಮಾತ್ರ ಚಿಕಿತ್ಸೆ ನೀಡಿದರೆ ಸಮಾಜಕಾರ್ಯಕರ್ತರು ಅವರ ಕುಟುಂಬದ ಸದಸ್ಯರಿಗೆ ಮತ್ತು ಅವರ ಸಂಪರ್ಕದಲ್ಲಿದ್ದ ವ್ಯಕ್ತಿಗಳಿಗೂ ಆಪ್ತಸಮಾಲೋಚನೆ ಒದಗಿಸಬೇಕು.
 
ಸೋಂಕು ಒಂದು ಸಮಸ್ಯೆಗಳು ಹಲವು - ಸಮಾಜಕಾರ್ಯಕರ್ತರ ಹೊಣೆ
ಪ್ರಸ್ತುತ ಸನ್ನಿವೇಶದಲ್ಲಿ ನಿರ್ದಿಷ್ಟ ಸಮಯದವರೆಗೆ ಗೃಹಬಂಧನ ಅನಿವಾರ್ಯವಾದರೂ, ಆ ಸಮಯದೊಳಗೆ ಮೇಲೆ ತಿಳಿಸಿದ ಹಾಗೆ ಸೋಂಕಿತರು, ಶಂಕಿತರು ಮತ್ತವರ ಕುಟುಂಬ ಸದಸ್ಯರು ಹಾಗೂ ಅವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಬೇರ್ಪಡಿಸಿ ವಿಶೇಷ ಗೃಹಗಳಲ್ಲಿಡುವುದು ಕಾರ್ಯಸಾಧುವಾಗಿದೆ. ಇದು ಬಂಧನದಂತೆ ಭಾಸವಾದರೂ ಸಹ ಕರೋನಾ ಸೋಂಕನ್ನು ಸಮರ್ಥವಾಗಿ ನಿಯಂತ್ರಿಸಲು ಉಳಿದಿರುವ ಏಕೈಕ ಮಾರ್ಗವಾಗಿದೆ. ಇಡೀ ದೇಶವೇ ಲಾಕ್-ಡೌನ್ ಆಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯಿಂದ ವರ್ತಿಸಲೇಬೇಕಾಗಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಉಲ್ಲಂಘಿಸಿದರೆ ಯಾವುದೇ ಮುಲಾಜಿಲ್ಲದೇ ಸೂಕ್ತ ಕಾನೂನು ಕ್ರಮವನ್ನು ಸಂಬಂಧಿಸಿದವರು ಕೈಗೊಳ್ಳಬೇಕು. ಆದರೆ ಹೀಗೆ ಕ್ರಮ ಕೈಗೊಳ್ಳುವುದಕ್ಕೂ ಮೊದಲು ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಶ್ರೀಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿ ಹೇಳಬೇಕು ಜೊತೆಗೆ ಕೆಲಸವನ್ನು ಹರಸಿ ದೂರದ ಪಟ್ಟಣಗಳಿಗೆ ವಲಸೆ ಹೋಗಿರುವ ವ್ಯಕ್ತಿಗಳು ತಮ್ಮ ತಮ್ಮ ಸ್ವಗ್ರಾಮಗಳಿಗೆ ಮರಳಲು ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಲು ಸಮಾಜಕಾರ್ಯಕರ್ತರನ್ನು ನಿಯೋಜಿಸಬೇಕು. ಇಂತಹ ಸಂದರ್ಭದಲ್ಲಿ ಸಮಾಜಕಾರ್ಯಕರ್ತರು ಅಗತ್ಯವುಳ್ಳವರಿಗೆ ಸೂಕ್ತ ನೆರವನ್ನು ನೀಡುವ ಸಲುವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಅವರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಾರೆ. ಅಗತ್ಯವಿದ್ದಲ್ಲಿ ಸರ್ಕಾರದ ಇಲಾಖೆಗಳ ನೆರವನ್ನು ಪಡೆಯಬಹುದಾಗಿದೆ.

ಗೃಹ ದಿಗ್ಭಂಧನ ಹೇರುವ ಮುನ್ನ ದೇಶ ವಾಸಿಗಳಿಗೆ ಗೃಹಗಳಿರುವುದನ್ನು ಖಾತರಿಪಡಿಸಬೇಕು ಇಲ್ಲವೇ ಕನಿಷ್ಟ ಪಕ್ಷ ತಾತ್ಕಾಲಿಕ ವಸತಿ ಗೃಹಗಳನ್ನಾದರೂ ಒದಗಿಸಬೇಕು, ಒಪ್ಪೊತ್ತಿನ ಊಟಕ್ಕಾಗಿ ದಿನಗೂಲಿ ಮಾಡುವ ನೌಕರರ ಜೀವನೋಪಾಯಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳು ಮತ್ತು ಶ್ರೀಸಾಮಾನ್ಯರು ದಿನಂಪ್ರತಿ ಬಳಸುವ ಎಲ್ಲಾ ಅಗತ್ಯ ಸರಕುಗಳು ಲಭ್ಯವಾಗುವಂತೆ ಎಚ್ಚರವಹಿಸಬೇಕು. ಫಲ-ಪುಷ್ಪ, ತರಕಾರಿ, ಹಾಲು, ದವಸ-ಧಾನ್ಯಗಳು ಇವೇ ಮೊದಲಾದ ಅಗತ್ಯ ದಿನಬಳಕೆಯ ಸರಕುಗಳನ್ನು ಬೆಳೆಯುವ ರೈತ ಅವುಗಳನ್ನು ಮಾರುಕಟ್ಟೆಗೆ ಸಾಗಿಸಲು ಹಾಗೂ ಸೂಕ್ತ ಸ್ಥಳಗಳಿಗೆ ರವಾನಿಸಿ ಫಲಾನುಭವಿಗಳಿಗೆ ತಲುಪಿಸಲು ಪೂರಕ ವ್ಯವಸ್ಥೆಯೊಂದಿಗೆ ಅನುಮತಿ ನೀಡಬೇಕು. ಇದು ಅತ್ಯಂತ ಕ್ರಮಬದ್ಧವಾಗಿಯೂ ಹಾಗೂ ಶಿಸ್ತುಬದ್ಧವಾಗಿಯೂ ಆಗಿರಬೇಕು ಮತ್ತು ಸೋಂಕು ಹರಡದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಇಲ್ಲವೇ ಸರ್ಕಾರವೇ (ಹಾಪ್ ಕಾಮ್ಸ್ ನಂತಹ ಮಳಿಗೆಗಳ ಮೂಲಕ) ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಅನಿವಾರ್ಯವಿರುವಲ್ಲಿ ಸಮಾಜಕಾರ್ಯಕರ್ತರ ಸೇವೆಯನ್ನು ಪಡೆಯಬಹುದು.

ಮೇಲ್ಕಂಡ ಎಲ್ಲಾ ವ್ಯವಸ್ಥೆಗಳನ್ನು ಕ್ರಮಬದ್ಧವಾಗಿ ನಿರ್ವಹಿಸಿದರೂ ಸಹ ಅಸಂಘಟಿತ ವಲಯದ ಕಾರ್ಮಿಕರ ಪ್ರಮುಖವಾಗಿ ಬೀದಿ ಬದಿಯ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು, ದಿನಗೂಲಿ ನೌಕರರು, ಕೃಷಿ ಕಾರ್ಮಿಕರು, ಗೃಹಕೃತ್ಯ ಕೆಲಸಗಾರರು, ಸ್ವಯಂ ಉದ್ಯೋಗಿಗಳು ಇವೇ ಮೊದಲಾದವರ ಸಮಸ್ಯೆಗಳು ಢಾಳಾಗಿ ಕಾಣುತ್ತವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅವುಗಳನ್ನು ಇಡಿಇಡಿಯಾಗಿ ನೋಡುವುದಕ್ಕಿಂತ ಇಡೀ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಹಿನ್ನೆಲೆಯಲ್ಲಿ ಅವರಿಗೆ ಅನಿವಾರ್ಯ ಸರಕುಗಳನ್ನು ತಲುಪಿಸುವ ವ್ಯವಸ್ಥೆ ಮಾಡಬೇಕು. ಈಗಾಗಲೇ ಭಾರತದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಉಚಿತ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದು ಸದ್ಯದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸದರಿ ವುವಸ್ಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸಹಯೋಗದೊಂದಿಗೆ ಆಹಾರ ಧಾನ್ಯಗಳ ಜೊತೆಗೆ ಅವಶ್ಯ ಸರಕುಗಳನ್ನು ಕುಟುಂಬಗಳಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಆಗಬೇಕಿದೆ. ಇದು ಅತ್ಯಂತ ಸುರಕಿತವೂ ಹಾಗೂ ಕಾರ್ಯಸಾಧುವಾದ ಮಾರ್ಗವೂ ಆಗಿದೆ. ಇಂತಹ ಸಂದರ್ಭದಲ್ಲಿ ವೃತ್ತಿಪರ ಸಮಾಜಕಾರ್ಯಕರ್ತರನ್ನು ಸಮರ್ಥವಾಗಿ ಬಳಸಿಕೊಳ್ಳಬಹುದಾಗಿದೆ.

 ಅಂತಿಮವಾಗಿ ಸಮಾಜಕಾರ್ಯಕರ್ತರು ನಿರ್ವಹಿಸುವ ಕಾರ್ಯಗಳ ಬಗ್ಗೆ ಸಮಾಜದಲ್ಲಿ ನಿರ್ದಿಷ್ಟತೆ ಇಲ್ಲದ ಕಾರಣ ಸಮಾಜಕಾರ್ಯವನ್ನು ಸಮಾಜಸೇವಾ ಕಾರ್ಯವೆಂಬ ತಪ್ಪು ಗ್ರಹಿಕೆ ಬಹುಪಾಲು ಜನರಲ್ಲಿದೆ. ಆದ ಕಾರಣವೇ ಸಮಾಜಕಾರ್ಯಕರ್ತರನ್ನು ಕೇವಲ ಸೇವಾ ಮನೋಭಾವನೆ ಕಾರ್ಯಗಳಿಗೆ ಮಾತ್ರ ಸೀಮಿತಗೊಳಿಸುತ್ತಿದ್ದಾರೆ. ಇದು ದುರಂತವೆನ್ನಿಸಿದರೂ ಅದೇ ಸತ್ಯ. ಸಮಾಜದಲ್ಲಿರುವ ಮನೋ-ಸಾಮಾಜಿಕ ಸಮಸ್ಯೆಗಳನ್ನು ಕ್ರಮಬದ್ಧವಾಗಿ ಅರ್ಥಮಾಡಿಕೊಂಡು ವೈಜ್ಞಾನಿಕ ಜ್ಞಾನದ ಆಧಾರದ ಮೇಲೆ ಅವುಗಳನ್ನು ಸಮರ್ಥವಾಗಿ ಉಪಶಮನ ಮಾಡುವ ಸಮಾಜಕಾರ್ಯಕರ್ತರು ಸದ್ಯ ಎದುರಾಗಿರುವ ಕೊರೋನಾ ಸೋಂಕನ್ನು ಹತೋಟಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಆದರೆ ಅವರಿಗೆ ಸರ್ಕಾರಗಳಾಧಿಯಾಗಿ ಆರೋಗ್ಯ ಇಲಾಖೆಗಳೂ ಅವಕಾಶಗಳೇ ಕೊಡುತ್ತಿಲ್ಲ ಇಲ್ಲವೇ ಅವಕಾಶಗಳನ್ನು ಸೃಷ್ಟಿಸುವಲ್ಲಿ ವಿಶ್ವವಿದ್ಯಾಲಯಗಳಾಧಿಯಾಗಿ ವೃತ್ತಿಪರ ಸಮಾಜಕಾರ್ಯ ಸಂಘಟನೆಗಳು ಸಂಪೂರ್ಣವಾಗಿ ವಿಫಲವಾಗಿವೆ. ಹಾಗಿದ್ದರೂ ಕೆಲ ಆಯ್ದ ಸಮಾಜಕಾರ್ಯಕರ್ತರು ತಮ್ಮ ಪಾಲಿನ ಕೆಲಸವನ್ನು ಎಲೆಮರೆಕಾಯಿಗಳಂತೆ ನಿಭಾಯಿಸುತ್ತಿದ್ದಾರೆ. ಒಂದು ವೇಳೆ ತರಬೇತಿ ಪಡೆದ ಆಸಕ್ತ ಸಮಾಜಕಾರ್ಯಕರ್ತರಿಗೆ ಕೊರೊನೋ ನಿಯಂತ್ರಿಸಲು ಅಣಿಯಾಗಿರುವ ವಿವಿಧ ತಂಡಗಳಲ್ಲಿ ಅವಕಾಶ ನೀಡಿದರೆ ಮತ್ತಷ್ಟೂ ಶೀಘ್ರವಾಗಿ ಸೋಂಕನ್ನು ಹತೋಟಿಗೆ ತರಲು ಸಾಧ್ಯವಿದೆ. ಸಮಾಜಕಾರ್ಯಕರ್ತರು ಸೂಚಿಸುವ ಕ್ರಿಯಾ ಯೋಜನೆಗಳನ್ನು (ಮೇಲೆ ಸೂಚಿಸಿದ) ಸರ್ಕಾರ ಗಂಭೀರವಾಗಿ ಪರಿಗಣಿಸಿ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದೇ ಆದರೆ ಸೋಂಕನ್ನು ನಿರ್ದಿಷ್ಟ ಸಮಯದಲ್ಲಿ ನಿಯಂತ್ರಿಸಬಹುದು. ಈ ಮೂಲಕ ಗೃಹ ದಿಗ್ಭಂದನ ಹಾಗೂ ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾದ ದೇಶವಾಸಿಗಳನ್ನು ಆದಷ್ಟು ಬೇಗ ತಮ್ಮ ಹಿಂದಿನ ಜೀವನಕ್ಕೆ ಮರಳುವಂತೆ ಮಾಡಬಹುದು.
​
ಸಮಾಜಕಾರ್ಯಕರ್ತರನ್ನು ನಿಯೋಜಿಸಿಕೊಳ್ಳಲು ಸದ್ಯ ಸರ್ಕಾರದ ಮುಂದಿರುವ ಆಯ್ಕೆಗಳು:
  1. ವೃತ್ತಿಪರ ಸಮಾಜಕಾರ್ಯ ಸಂಘಟನೆಗಳೊಂದಿಗೆ ಹಾಗೂ ಸಮಾಜಕಾರ್ಯ ವಿಭಾಗಗಳ ಮುಖ್ಯಸ್ಥರು ಮತ್ತು ಬೋಧಕ ವರ್ಗದವರಿಂದ ಸದ್ಯದ ಬಿಕ್ಕಟ್ಟನ್ನು ಉಪಶಮನ ಮಾಡಲು ಸಲಹೆ ಸೂಚನೆಗಳನ್ನು ಪಡೆಯುವುದು.
  2. ಸಮಾಜಕಾರ್ಯ ವಿಷಯವನ್ನು ವ್ಯಾಸಂಗ ಮಾಡಿರುವ ಎಲ್ಲಾ ಸರ್ಕಾರಿ ನೌಕರರನ್ನು ತುರ್ತಾಗಿ ಬಿಕ್ಕಟ್ಟು ಉಪಶಮನ ಕಾರ್ಯದಲ್ಲಿ ನಿಯೋಜಿಸುವುದು.
  3. ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆಸಕ್ತ ವೃತ್ತಿಪರ ಸಮಾಜಕಾರ್ಯಕರ್ತರನ್ನು ಗುರುತಿಸಿ ಸದರಿ ಕಾರ್ಯಕ್ಕೆ ನಿಯೋಜಿಸುವುದು.
  4. ಅವಶ್ಯವಿದ್ದಲ್ಲಿ ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದು (ಜಾಗೃತಿ ಮೂಡಿಸುವ ಕಾರ್ಯಕ್ಕೆ ಸೀಮಿತಗೊಳಿಸುವುದು ಒಳಿತು).
  5. ವಿಶ್ವವಿದ್ಯಾಲಯವಾರು ಹಾಗೂ ಜಿಲ್ಲಾವಾರು ಸಮಾಜಕಾರ್ಯಕರ್ತರನ್ನು ಗುರುತಿಸಿ ಅವರನ್ನು ತುರ್ತುಸೇವೆಗೆ ಆಮಂತ್ರಿಸುವುದು / ನಿಯೋಜಿಸುವುದು.
  6. ಸಾಮರ್ಥ್ಯಕ್ಕೆ ಅನುಗುಣವಾಗಿ ಅವರಿಗೆ ಕಾರ್ಯಭಾರವನ್ನು ಒದಗಿಸುವುದು.

ಗಂಗಾಧರ ರೆಡ್ಡಿ ಎನ್.

2 Comments
Dundayya P Hiremath
3/30/2020 01:37:06 am

Beautiful writing and skills

Reply
Dr.Lokesh.M.U
3/30/2020 03:47:28 am

These type of articles must be published in leading news papers. So that it will reach out to the general mass including government in a short time

Reply

Your comment will be posted after it is approved.


Leave a Reply.

    Categories

    All
    Conference
    English Books
    Kannada Articles
    Kannada Books
    Niruta Books
    Others
    Registration
    Social Work
    SWFP
    Women


    Picture

    Social Work Learning Academy

    Join WhatsApp Channel

    Niruta Publications

    Social Workers- Karnataka

    Leaders Talk

    Ramesha Niratanka

    More Details

    Picture

    MHR LEARNING ACADEMY

    Get it on Google Play store
    Download App
    Online Courses

    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups



    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com