ಡಾ. ಎಚ್.ಎಂ. ಮರುಳಸಿದ್ಧಯ್ಯ, ಪು. 274, ಬೆಲೆ : 150, ಐಬಿಎಚ್ ಪ್ರಕಾಶನ ‘ಕಪ್ಪು ಮೋಡದಲ್ಲೊಂದು ಬೆಳ್ಳಿರೇಖೆ’ ಮೂಡಿದ್ದುದು ಮೂವತ್ತೆರಡು ವರ್ಷಗಳ ಹಿಂದೆ (1973). ಇದಕ್ಕೆ ಹಿನ್ನೆಲೆಯಾಗಿ, ನೆಲೆಯಾಗಿ ಸಮಾಜಕಾರ್ಯ ಪ್ರಶಿಕ್ಷಣವು ಕರ್ನಾಟಕದಲ್ಲಿ ಮುಗುಳೊಡೆದದ್ದು ಇವಕ್ಕೆ ಹನ್ನೊಂದು ವರ್ಷಗಳ ಹಿಂದೆ (1962) ಸ್ನಾತಕೋತ್ತರ ಮಟ್ಟದಲ್ಲಿ, ವಿಶ್ವವಿದ್ಯಾಲಯದ ಕಕ್ಷೆಯಲ್ಲಿ. ಸಮಾಜಕಾರ್ಯ ಪ್ರಶಿಕ್ಷಣವು ಮೊಟ್ಟಮೊದಲು ಆರಂಭವಾದದ್ದು ಧಾರವಾಡದ ಪ್ರಶಾಂತ ವಾತಾವರಣದಲ್ಲಿ. ದೊರೆತ ಅನಿರೀಕ್ಷಿತ ಅವಕಾಶವನ್ನು ಉಪಯೋಗಿಸಿಕೊಂಡು ಸಮಾಜಕಾರ್ಯ ವೃತ್ತಿಯಲ್ಲಿ ತರಬೇತಿ ನೀಡಲು ನನಗೆ ಪ್ರೋತ್ಸಾಹದ ನೀರೆರೆದವರು ಮಾನವ ಮತ್ತು ಸಮಾಜಶಾಸ್ತ್ರ ಪ್ರವೀಣ ಡಾ. ಕೆ. ಈಶ್ವರನ್, ನಮ್ಮಿಬ್ಬರ ಯೋಜನೆಗೆ ಹಸಿರು ಬಾವುಟ ತೋರಿಸಿದವರು ಕರ್ನಾಟಕ ವಿಶ್ವವಿದ್ಯಾಲಯದ ಅಂದಿನ ಕುಲಪತಿ ರ್ಯಾಂಗ್ಲರ್ ಡಿ.ಸಿ. ಪಾವಟೆಯವರು (ಈ ಇಬ್ಬರು ಮಹನೀಯರು ಇಂದು ನಮ್ಮೊಡನಿಲ್ಲ). ಇವರ ನೆರವನ್ನು ನಾನು ಅತ್ಯಂತ ಕೃತಜ್ಞತೆಯಿಂದ ನೆನೆಯುತ್ತೇನೆ.
ಆರಂಭದ ವರ್ಷದಲ್ಲಿ ತರಬೇತಿಗೆ ಸೇರಿದ ಹತ್ತು ಯುವಜನರೊಡನೆ ಬೆರೆತು ಏಕಪಾತ್ರಾಭಿನಯ ಆಡಿದವನು ನಾನು : ಖೋಲಿಯೊಳಗೆ ಪಾಠ ಮಾಡುವುದು, ವ್ಯಕ್ತಿವೃಂದ ಗೋಷ್ಠಿಗಳ ಕಲಾಪದಲ್ಲಿ ನೆರವಾಗುವುದು ; ವರದಿ-ಲೇಖನಗಳನ್ನು ತಿದ್ದುವುದು; ಹೊರಗೆ-ಸಮುದಾಯದಲ್ಲಿ-ಕ್ಷೇತ್ರಕಾರ್ಯದಲ್ಲಿ ತೊಡಗಿದ್ದ ಪ್ರಶಿಕ್ಷಣಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು; ಕ್ಷೇತ್ರಕಾರ್ಯಕ್ಕೆ ನೆರವಾಗುವ ಕೇಂದ್ರಗಳ, ಸಂಘ ಸಂಸ್ಥೆಗಳ ಜೊತೆ ಕ್ರಿಯಾಸಂಬಂಧವನ್ನು ಸ್ಥಾಪಿಸಿ ಸಂಪೋಷಿಸಿಕೊಂಡು ಹೋಗುವುದು, ಇಇ., ಕಾರ್ಯಗಳಲ್ಲಿ ನಿರತನಾಗಿದ್ದುದನ್ನು ಈಗ ನೆನೆಸಿಕೊಂಡರೆ ಅದು ನನಗೆ ಹೇಗೆ ಸಾಧ್ಯವಾಯ್ತು ಅನ್ನಿಸುತ್ತದೆ. ಯಾಕೆಂದರೆ, ಈ ನಾಲ್ಕೂವರೆ ದಶಕಗಳಲ್ಲಿ ಸಮಾಜಕಾರ್ಯ ಪ್ರಶಿಕ್ಷಣ ಮತ್ತು ಆಚರಣೆಯ ಕ್ಷೇತ್ರಗಳಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸಿದಾಗ ಇಂಥ ಸೋಜಿಗ ಸಹಜವೇ. ಆ ಮೊದಲ ದಶಕದಲ್ಲಿ ಪಡೆದ ಅನುಭವಗಳನ್ನು ಸಂಗ್ರಹರೂಪದಲ್ಲಿ ಗೆಳೆಯ ಕೆ.ಎಸ್. ಸದಾಶಿವಯ್ಯ ಪ್ರಕಟಿಸಿದರು. (ಇಂದು ಇವರೂ ನಮ್ಮೊಡನಿಲ್ಲ, ವಿಷಾದವಾಗುತ್ತದೆ) ಈ ಪುಸ್ತಕಕ್ಕೆ ಸಮಾಜಶಾಸ್ತ್ರದ ಶ್ರೇಷ್ಠ ವಿದ್ವಾಂಸರಾದ ಡಾ|| ಕೆ. ಚಂದ್ರಶೇಖರಯ್ಯನವರು ಮುನ್ನುಡಿಯನ್ನು ಬರೆದು ಶೈಕ್ಷಣಿಕ ಜಗತ್ತಿನಲ್ಲಿ ಇದಕ್ಕೊಂದು ಸ್ಥಾನವನ್ನು ಕಲ್ಪಿಸಿಕೊಟ್ಟರು. ನನ್ನೀ ಲೇಖನಗಳ ಸಂಗ್ರಹ ಬಹುಜನರ ಗಮನವನ್ನು ಸೆಳೆದುದಲ್ಲದೆ ಮೆಚ್ಚುಗೆಗೂ ಪಾತ್ರವಾಯಿತು. ದಶಕಗಳುರುಳಿದರೂ ಇದು ಅನೇಕರ ಮನದಲ್ಲಿ ಇನ್ನೂ ಬೆಳ್ಳಿ ರೇಖೆಯಾಗಿ ಮಿನುಗುತ್ತಿದೆ. ಅದರಲ್ಲೂ ಸಮಾಜಶಾಸ್ತ್ರ ಮತ್ತು ಸಮಾಜಕಾರ್ಯದ ವಿದ್ಯಾರ್ಥಿ ಮಿತ್ರರಿಗಂತೂ ಇದು ಅವಶ್ಯಕ ಕೃತಿಯಾಗಿದೆ. ಮುದ್ರಣಗೊಂಡ ಎಲ್ಲ ಪ್ರತಿಗಳೂ ಖರ್ಚಾಗಿ ನನ್ನಲ್ಲಿ ಒಂದು ಪ್ರತಿಯೂ ಉಳಿಯಲಿಲ್ಲ. ಸಮಾಜಕಾರ್ಯದ ವಿದ್ಯಾರ್ಥಿಗಳಂತೂ ನನಗೆ ಪತ್ರ ಬರೆದು ತಮಗೆ ಈ ಪುಸ್ತಕದ ಅಗತ್ಯವನ್ನು ಒತ್ತಿಯೊತ್ತಿ ತಿಳಿಸಿ, ಇದರ ಮರುಮುದ್ರಣಕ್ಕೆ ಆಗ್ರಹಪಡಿಸಿದರು. ಇತ್ತೀಚೆಗಂತೂ ಸಮಾಜಕಾರ್ಯ ಶಾಲೆ-ಕಾಲೇಜುಗಳು ಸ್ಪರ್ಧಾತ್ಮಕವಾಗಿ ಹೆಚ್ಚುತ್ತಲಿವೆ. ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳ ಸಂಖ್ಯೆಯೂ ಏರುತ್ತಲಿದೆ. ಜಾಗತೀಕರಣದ ಬಿರುಗಾಳಿಯಲ್ಲೂ, ಆಂಗ್ಲ ಭಾಷೆಯ ಬಿರುಬಿಸಿಲ ಹಬ್ಬುವಿಕೆಯಲ್ಲೂ ಸಮಾಜಕಾರ್ಯ ಸಾಹಿತ್ಯವು ಕನ್ನಡದಲ್ಲಿ ಬೇಕೇ ಬೇಕೆಂಬ ಬೇಡಿಕೆಯು ಹೆಚ್ಚುತ್ತಲಿದೆ. ಇದು ನನ್ನಂಥವರಿಗೆ ಸಂತೋಷವೂ ಆಗುತ್ತಲಿದೆ. ಹೆಮ್ಮೆಯೂ ಆಗುತ್ತಲಿದೆ. ‘ಕಪ್ಪು ಮೋಡದಲ್ಲೊಂದು ಬೆಳ್ಳಿರೇಖೆ’ ಬೇಕೇ ಬೇಕು ಎಂಬ ಬೇಡಿಕೆಯನ್ನು ಶ್ರೀ ಸಂಜಯ ಅಡಿಗರ ಮುಂದೆ ಪ್ರಸ್ತಾಪಿಸಿದಾಗ ಅವರು ಈ ಪುಸ್ತಕದ ಪರಿಷ್ಕೃತ ಆವೃತ್ತಿಯನ್ನು ಪ್ರಕಟಿಸಲು ಮುಂದಾದರು. ಈ ಪರಿಷ್ಕೃತ ಆವೃತ್ತಿಯಲ್ಲಿ ಆಸ್ಪತ್ರೆಯಲ್ಲಿ ಕಾರ್ಯನಿರತವಾಗಿರುವ ಸಮಾಜಕಾರ್ಯಕರ್ತರ ಕರ್ತವ್ಯ-ಧ್ಯೇಯಗಳೇನಿರಬೇಕು ಎಂಬುದನ್ನು ಚಿಂತನೆ ಮಾಡಿ ಬರೆದು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಲೇಖನವನ್ನು ಸೇರಿಸಲಾಗಿದೆ; ಪಾರಿಭಾಷಿಕ ಶಬ್ದಕೋಶವನ್ನೂ ಹಿಗ್ಗಲಿಸಲಾಗಿದೆ; ಮೊದಲ ಮುದ್ರಣದಲ್ಲಿ ಇದ್ದ ಪ್ರಬಂಧಗಳ ಆದ್ಯತಾನುಕ್ರಮಣಿಕೆಯನ್ನು ಸರಿಪಡಿಸಲಾಗಿದೆ; ಶಬ್ದಸೂಚಿಯನ್ನು ತೆಗೆದುಹಾಕಲಾಗಿದೆ; ಆ ಮುದ್ರಣದಲ್ಲಿ ಬರೆದಿದ್ದ ನನ್ನ ‘ಆರಂಭದ ನಾಲ್ಕು ನುಡಿಗಳು’ ಕೆಲವು ಅಡಿ ಟಿಪ್ಪಣಿಗಳನ್ನು ಒಳಗೊಂಡಿವೆ; ಈ ಪುಸ್ತಕದಲ್ಲಿ ಬರುವ ಅಂಕೆ-ಸಂಖ್ಯೆಗಳು ಕೇವಲ ಉದಾಹರಣೆಗಳು ಎಂದು ತಿಳಿದುಕೊಳ್ಳಬೇಕೇ ಹೊರತು, ಇಂತೇದಿಸಲ್ಪಟ್ಟವು (updated) ಎಂದು ತಿಳಿಯಬಾರದು. ಎಚ್.ಎಂ. ಮರುಳಸಿದ್ಧಯ್ಯ 14 ಜನವರಿ 2005
0 Comments
Leave a Reply. |
20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. Categories![]()
|
![]()
|
![]()
|
![]()
|
![]()
|
SITE MAP
SitePOSH |
NIRATHANKAOUR OTHER WEBSITESSubscribe |
HR and Employment Law Classes - Every Fortnight
Stay updated and informed by joining our WhatsApp group for HR and Employment Law Classes - Every Fortnight.
The Zoom link for the sessions will be shared directly in the group. |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |