Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಗೆಳೆತನ

1/17/2022

0 Comments

 
ಬಾಲ್ಯದಿಂದ ಹತ್ತಾರು ಗೆಳೆಯರು ನಮ್ಮ ಜೀವನದಲ್ಲಿ ಬಂದು ಹೋಗುತ್ತಾರೆ. ಶಾಲಾ ದಿನಗಳಲ್ಲಿ ನನಗೊಬ್ಬ ಅತ್ಯಂತ ಆತ್ಮೀಯ ನವೀನ್ ಎಂಬ ಗೆಳೆಯನಿದ್ದ. ಬಾಲ್ಯದ ಆತ್ಮೀಯ ಗೆಳೆತನದಲ್ಲಿ ಇರುವಂತೆ ಅತ್ಯಂತ ನಿಷ್ಕಲ್ಮಷ ಬಾಂಧವ್ಯವಿತ್ತು. ಜೊತೆಗೆ ನಾವು ಶಾಲೆಗೆ ಹೋಗುವುದು, ಆಟವಾಡುವುದು, ಒಟ್ಟಿಗೆ ಕಾಲಕಳೆಯುವುದು ಸಾಮಾನ್ಯವಾಗಿತ್ತು. 7ನೇ ತರಗತಿ ಪಾಸಾದ ನಂತರ ನಾನು ಬೇರೆ ಶಾಲೆಗೆ ಸೇರಿಕೊಂಡೆ. 10ನೇ ತರಗತಿಯ ತನಕವೂ ನವೀನನ ಒಡನಾಟದಲ್ಲಿ ಇರುತ್ತಿದ್ದೆ. ನಂತರದ ದಿನಗಳಲ್ಲಿ ಅವನನ್ನು ಕಾಣಲು ಆಗುತ್ತಿರಲಿಲ್ಲ. 
ಇತ್ತೀಚೆಗೆ ನನ್ನ ಇನ್ನೊಬ್ಬ ಸ್ನೇಹಿತನಿಂದ ತಿಳಿಯಿತು. 10ನೇ ತರಗತಿಯಲ್ಲಿ ನವೀನನಿಗೆ ಅತ್ಯಂತ ಉತ್ತಮ ಅಂಕಗಳು ಬಂದು ಪಾಸಾಗಿದ್ದನು. ಆದರೂ ಬಡತನದ ಕಾರಣದಿಂದ ಕಾಲೇಜಿಗೆ ಸೇರಲಾಗಲಿಲ್ಲ ಹಾಗೂ ಅವನು ಹತ್ತು ಸಾವಿರ ಸಾಲ ಮಾಡಿಕೊಂಡು ತೀರಿಸಲಾಗದೆ, ನೇಣು ಬಿಗಿದುಕೊಂಡು ಸತ್ತು ಹೋದನಂತೆ. ​
ಆಗ ಕೇವಲ ಹತ್ತು ಸಾವಿರ ಹಣಕ್ಕೆ ಸಾವು ತಂದುಕೊಂಡನಲ್ಲ ಎಂದು ಮರುಕಪಟ್ಟೆ. ಅವನು ನಮ್ಮ ಸಂಪರ್ಕದಲ್ಲಿ ಇದ್ದಿದ್ದರೆ ಹತ್ತು ಸಾವಿರ ಹಣವನ್ನು ತೀರಿಸುವುದು ದೊಡ್ಡ ವಿಷಯವಾಗುತ್ತಿರಲಿಲ್ಲ ಎಂದು ಅನಿಸಿತು. ಆದರೆ ನವೀನನಿಗೆ ಹತ್ತು ಸಾವಿರ ಹಣವೇ ಜೀವಕ್ಕಿಂತ ದೊಡ್ಡದಾಗಿ ಕಂಡಿತ್ತು.

ಶಾಲೆಯಲ್ಲಿ ಓದಿದ ಬಹುಪಾಲು ನನ್ನ ಗೆಳೆಯರ ಜೊತೆ ಸಂಪರ್ಕ ಕಳೆದುಕೊಂಡು ಬಿಟ್ಟಿರುತ್ತೇವೆ. ಕೆಲವೊಮ್ಮೆ ಸಿಕ್ಕರೂ ಮೇಲ್ನೋಟಕ್ಕೆ ಮಾತನಾಡುತ್ತೇವೆ ಹಾಗೂ ಬದುಕಿನ ಓಟದಲ್ಲಿ ಮತ್ತೆ ಓಡಲು ಶುರು ಮಾಡುತ್ತೇವೆ. ನಮ್ಮ ಗೆಳೆಯರ ಆಲೋಚನೆಗಳೇ ಬೇರೆಯಾಗಿರುತ್ತವೆ, ನಮ್ಮ ಅಭಿರುಚಿಗಳೇ ಬೇರೆ ಬೇರೆಯಾಗಿರುತ್ತವೆ. ಹಾಗಾಗಿ ಆತ್ಮೀಯತೆ ಬೆಳೆಸಿಕೊಳ್ಳುವುದೇ ಕಷ್ಟಕರವಾಗುತ್ತಾ ಸಾಗುತ್ತದೆ. ಕೇವಲ ಶಾಲಾ ದಿನಗಳು ಮಾತ್ರವಲ್ಲ, ಕಾಲೇಜು ದಿನಗಳಲ್ಲಿಯೂ ಸಹ ಹತ್ತಾರು ಗೆಳೆಯರಿದ್ದರು. ಕಬ್ಬನ್ ಪಾರ್ಕ್, ಲಾಲ್ ಬಾಗ್ ಅಲೆಯುತ್ತಿದ್ದೆವು. ಜೊತೆಗೆ ಹತ್ತು ಹಲವು ಸಿನಿಮಾ ನೋಡುತ್ತಿದ್ದೆವು. ಹಲವಾರು ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಿದ್ದೆವು. ಒಟ್ಟಿಗೆ ಹಾಸ್ಟೆಲ್ ನಲ್ಲಿ ಅಡಿಗೆ ಮಾಡುತ್ತಿದ್ದೆವು. ಒಟ್ಟಿಗೆ ಊಟ ಮಾಡುತ್ತಿದ್ದೆವು. ಒಮ್ಮೆ ಸ್ನಾತಕೋತ್ತರ ಪದವಿ ಪಡೆದು ಕೆಲಸ ಹುಡುಕಲು ಹೊರಟ ಮೇಲೆ ಕೆಲಸದ ಬಗ್ಗೆಯೇ ಹೆಚ್ಚು ಗಮನಹರಿಸಿ ನಮ್ಮ ಸ್ನೇಹದ ಮಹತ್ವ ದಿನೇದಿನೇ ಕುಗ್ಗುತ್ತಾ ಹೋಯಿತು. ಬದುಕಿನ ಹೋರಾಟದಲ್ಲಿ ನಾವು ವಿಭಿನ್ನ ವ್ಯಕ್ತಿಗಳಾಗಿ ವಿಭಿನ್ನ ಅನುಭವಗಳನ್ನು ಹೊತ್ತು ಬೇರೆ ಬೇರೆಯದೇ ವ್ಯಕ್ತಿತ್ವಗಳನ್ನು ಬೆಳೆಸಿಕೊಂಡೆವು.
​
ಸುಮಾರು 15 ವರ್ಷಗಳು ಕಳೆದ ನಂತರ ಈಗ Whatsapp ಗುಂಪುಗಳಲ್ಲಿ ಎಲ್ಲಾ ಗೆಳೆಯರನ್ನು ಒಟ್ಟಿಗೆ ಕೂಡಿಹಾಕಿದ್ದೇವೆ. ಶಾಲಾ ಗೆಳೆಯರದೊಂದು Whatsapp ಗ್ರೂಪ್, ಕಾಲೇಜು ಗೆಳೆಯರದೊಂದು Whatsapp ಗ್ರೂಪ್, Birthday ಸಂದೇಶ ಹಾಗೂ ಅವರವರ ಅಭಿರುಚಿ, ವ್ಯಕ್ತಿತ್ವಕ್ಕೆ ತಕ್ಕಂತೆ ಸಂದೇಶಗಳ ಸುರಿಮಳೆಗೈಯುತ್ತಾರೆ. ಕೆಲವೊಮ್ಮೆ ಸಂದೇಶಗಳನ್ನು ನೋಡುವುದಕ್ಕೂ ಕಷ್ಟವಾಗುತ್ತದೆ. ಒಬ್ಬ Birthday ಸಂದೇಶ ಕಳುಹಿಸಿದರೆ ಗುಂಪಿನಲ್ಲಿರುವ ಎಲ್ಲರೂ ವಿಶ್ ಮಾಡಲೇಬೇಕಾದ ಅನಿವಾರ್ಯತೆಗೆ ಸಿಕ್ಕು ಗೆಳೆಯ ಇಷ್ಟವಿರಲಿ, ಇಲ್ಲದಿರಲಿ ಒಂದು ಸಂದೇಶವನ್ನು ಕಳುಹಿಸಿ ನಾಟಕೀಯತೆಯನ್ನು ಪ್ರದರ್ಶಿಸುತ್ತೇವೆ ಅನಿಸುತ್ತದೆ. 
ಗೆಳೆತನದಲ್ಲಿ ಕಷ್ಟಗಳಿಗೆ ಸ್ಪಂದಿಸುವ ನಮ್ಮ ಅಧಿಕಾರ, ಹಣ, ಅಹಂ ಅನ್ನು ಪಕ್ಕಕ್ಕಿಟ್ಟು ಗೆಳೆತನವನ್ನು ಗೆಳೆತನದಂತೆ ನೋಡುವ ಮನಸ್ಥಿತಿ ಹಾಗೂ ಪ್ರಬುದ್ಧತೆಯ ಹಂತಕ್ಕೆ ನಾವು ತಲುಪಿರುವುದೇ ಇಲ್ಲ. ನಮ್ಮ ಎಷ್ಟೋ ದೌರ್ಬಲ್ಯಗಳನ್ನು ಮುಚ್ಚಿಡುತ್ತಾ ಸಮಾಜ ನಿರೀಕ್ಷಿಸಲ್ಪಟ್ಟ ರೀತಿಯಲ್ಲಿ ಅತ್ಯಂತ ಚಾಣಾಕ್ಯತೆಯಿಂದ ತಲೆಯಲ್ಲಿರುವ ಬುದ್ಧಿಯನ್ನೆಲ್ಲಾ ಖರ್ಚು ಮಾಡಿ ನಮ್ಮ ಘನತೆಯನ್ನು ಪ್ರದರ್ಶಿಸುತ್ತಾ ನಟಿಸುತ್ತೇವೆ. ನಮ್ಮ ಗೆಳೆತನದಲ್ಲಿ ನಾವು ನಟಿಸುವ ಹಾಗೂ ಸಮಾಜ ನಿರೀಕ್ಷಿಸುವ ವ್ಯಕ್ತಿತ್ವಗಳ ಪರಿಚಯವಾಗುತ್ತದೆ. ಆದರೆ ನಮ್ಮ ಒಳಗಿನ ಅಂತರಾತ್ಮವನ್ನು (ಅಂತರ್ ವ್ಯಕ್ತಿತ್ವ) ಒಂಟಿಯಾಗಿ ಬಂಧಿಯಾಗಿರಿಸುತ್ತೇವೆ. ಕೆಲವೊಮ್ಮೆ ನಮ್ಮ ಒಳಗಿನ ವ್ಯಕ್ತಿಯೇ ಬೇರೆ, ನಾವು ನಮ್ಮ ಸ್ನೇಹಿತರಿಗೆ ಪ್ರದರ್ಶಿಸುತ್ತಿರುವ ವ್ಯಕ್ತಿತ್ವವೇ ಬೇರೆ ಎಂಬ ಅರಿವು ನಮಗಿರುವುದಿಲ್ಲ. ಕೇವಲ ಗೆಳೆತನದಲ್ಲಿ ಮಾತ್ರವಲ್ಲದೆ ನಮ್ಮ ಕುಟುಂಬ, ಅಣ್ಣ, ತಮ್ಮ, ಅಪ್ಪ, ಅಮ್ಮ, ಅಕ್ಕ, ತಂಗಿಯರಿಗೂ ನಮ್ಮ ವಿಭಿನ್ನ ವ್ಯಕ್ತಿತ್ವಗಳನ್ನು ಪರಿಚಯಿಸಿರುತ್ತೇವೆಯೇ ಹೊರತು ನಮ್ಮ ಆಂತರಿಕ ವ್ಯಕ್ತಿತ್ವದ ಪರಿಚಯ ಮಾಡಿಕೊಟ್ಟಿರುವುದಿಲ್ಲ. ನಮ್ಮೊಳಗಿನ ನಾವೇ ಬೇರೆ ನಾವು ಬೇರೆಯವರಿಗೆ ನಮ್ಮನ್ನು ನಾವು ಪ್ರದರ್ಶಿಸಿಕೊಳ್ಳುವ ನಮ್ಮ ವ್ಯಕ್ತಿತ್ವವೇ ಬೇರೆಯಾಗಿರುತ್ತದೆ.
ಕೆಲವೊಮ್ಮೆ ಅಪರೂಪಕ್ಕೆಂಬಂತೆ ನಮ್ಮ ದೌರ್ಬಲ್ಯಗಳನ್ನು ಕೇಳಿಸಿಕೊಳ್ಳುವ, ನಮ್ಮ ತಪ್ಪುಗಳನ್ನು ತಿದ್ದುವ, ನಮಗೆ ಆದ ಅವಮಾನಗಳನ್ನು ಹೇಳಿಕೊಳ್ಳುವ, ಕಷ್ಟವೆಂದಾಗ ಹಣ ಸಹಾಯವನ್ನು ಮಾಡಿ ಯಾವುದೇ ನಿರೀಕ್ಷೆ ಪಡದ ಗೆಳೆಯರೂ ಸಿಗುತ್ತಾರೆ. ಪ್ರಾಮಾಣಿಕ ಸ್ನೇಹಿತರು ಸಿಗಬೇಕಾದರೆ  ಪ್ರಾಮಾಣಿಕವಾಗಿ ನಾವು ನಮ್ಮ ವ್ಯಕ್ತಿತ್ವದಲ್ಲಿ ಪ್ರಬುದ್ಧತೆ ಹಾಗೂ ಅರಿವು ಹೊಂದಿರಬೇಕಾಗುತ್ತದೆ. ನಮ್ಮ ವ್ಯಕ್ತಿತ್ವ, ನಡೆ ಕಳ್ಳನಂತೆ ಇದ್ದರೆ, ಕಳ್ಳರೇ ನಮಗೆ ಸ್ನೇಹಿತರಾಗುತ್ತಾರೆ. ಲಂಚಕೋರರಾದರೆ ಲಂಚಕೋರರೇ ನಮ್ಮ ಸ್ನೇಹಿತರಾಗುತ್ತಾರೆ. ತಿಳಿದವರು ಹೇಳುತ್ತಾರೆ ನಮ್ಮ ಮನಸ್ಸಿನ ಆಲೋಚನೆಗಳು ಆಯಸ್ಕಾಂತದಂತೆ ಇತರೆ ಸಮಾನ ಆಲೋಚನೆಯುಳ್ಳ ಮನಸ್ಸುಗಳನ್ನು ನಮ್ಮ ಸುತ್ತ ಆಕರ್ಷಿಸುತ್ತದೆ ಎಂದು.
​
ಬದುಕಿನ ಕೊನೆಯವರೆಗೂ ಒಬ್ಬನೇ ಒಬ್ಬ ಆತ್ಮೀಯ ಗೆಳೆಯನಿರದೆ ಬದುಕಿದರೆ ಬದುಕಿನ ಅರ್ಥ ಕಳೆದುಕೊಳ್ಳುತ್ತದೆ. ಕೆಲವೊಮ್ಮೆ ಗೆಳೆಯರಿದ್ದಾರೆ ಎಂದುಕೊಳ್ಳುತ್ತಾ ಭ್ರಮೆಯಲ್ಲಿರುತ್ತೇವೆ. ಆದರೆ ಸಂಕಟದ ಸಮಯದಲ್ಲಿ ಗೆಳೆಯರನ್ನು ಅಗ್ನಿ ಪರೀಕ್ಷೆಗೆ ಒಳಪಡಿಸಿದಾಗ ನಮಗೆಷ್ಟು ಗೆಳೆಯರಿದ್ದಾರೆ ಎಂಬ ಅರಿವು ನಮಗೆ ಬರುತ್ತದೆ. ನನಗೊಬ್ಬ ಡಾ. ಅಭಿರಾಮ್ ಎಂಬ ಸ್ನೇಹಿತರಿದ್ದಾರೆ. ಅವರು ಹೇಳಿದರು, 
"ರಮೇಶ್, ನಾನು ಅಕಸ್ಮಾತ್ತಾಗಿ ನನ್ನ ಕೆಲಸವನ್ನು 38ನೇ ವಯಸ್ಸಿನಲ್ಲಿ ಕಳೆದುಕೊಂಡೆ. ನಾನು ಕೆಲಸ ಕಳೆದುಕೊಂಡೆ ಎಂಬುದು ಬಹುಪಾಲು ನನ್ನ ಗೆಳೆಯರಿಗೆ ಹಾಗೂ ಕುಟುಂಬದ ಸದಸ್ಯರಿಗೆ ಗೊತ್ತಾಗಿತ್ತು. ಅಷ್ಟೊತ್ತಿಗಾಗಲೇ ನಾನು ಮದುವೆಯಾಗಿ, 2 ಮಕ್ಕಳಿದ್ದವು. ಹೊಸ ಕ್ಲಿನಿಕ್ ತೆರೆಯಲು ನಿರ್ಧರಿಸಿದ್ದೆ. ಕ್ಲಿನಿಕ್ ಗಾಗಿ ಸುಮಾರು 10 ಲಕ್ಷ ಹಣ ಬೇಕಾಗಿತ್ತು. ಒಂದು ಪುಸ್ತಕ, ಪೆನ್ನು ಹಿಡಿದು ಯಾರು ಯಾರನ್ನು ಹಣ ಕೇಳಬಹುದು ಎಂದು ಬರೆದುಕೊಂಡೆ. ನಾನು ಬರೆದುಕೊಂಡಿದ್ದರಲ್ಲಿ 115 ಜನ ಕುಟುಂಬದ ಸದಸ್ಯರು ಹಾಗೂ ಗೆಳೆಯರಿದ್ದರು. 115 ಜನರಲ್ಲಿ ಹಣ ನೀಡುತ್ತೇನೆ ಎಂದವರು ಇಬ್ಬರು ಗೆಳೆಯರು ಮಾತ್ರ. ನನ್ನ ಕುಟುಂಬದ ಸದಸ್ಯರು ಯಾರು ಹಣ ನೀಡಲು ಮುಂದೆ ಬರಲಿಲ್ಲ. ಅಂದು ನಾನು ಕರೆ ಮಾಡಿದ ಅಷ್ಟೂ ಜನರ ಹೆಸರುಗಳನ್ನು ಬರೆದಿಟ್ಟಿದ್ದ ಡೈರಿ ನನ್ನ ಬಳಿ ಇದೆ. ಅದನ್ನು ಈಗಲೂ ಆಗೊಮ್ಮೆ, ಈಗೊಮ್ಮೆ ತಿರುವು ಹಾಕುತ್ತೇನೆ ಎಂದರು."
"ಇತ್ತೀಚೆಗೆ ಸರ್ಕಾರಿ ಸೇವೆಯಲ್ಲಿರುವ ನನ್ನ ಆತ್ಮೀಯ ಗೆಳೆಯ ಮಂಜುನಾಥ್ ಭೇಟಿ ಆಗಿದ್ದ. ಅವರ ಶಾಲಾ ದಿನಗಳಲ್ಲಿ ಓದಿದ ಒಬ್ಬ ಗೆಳೆಯ ಅತ್ಯಂತ ಕಡುಬಡವನಾಗಿದ್ದ. ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದ. ಇನ್ನೇನು ಕೆಲವೇ ದಿನಗಳಲ್ಲಿ ಉನ್ನತ ಹುದ್ದೆಗೆ ಆಯ್ಕೆಯಾಗಲು ಸಂದರ್ಶನ ನಿಗದಿಯಾಗಿತ್ತು. ಆತನ ತಂಗಿಗೆ ಇತ್ತೀಚೆಗೆ ಮದುವೆ ನಿಶ್ಚಯವಾಗಿತ್ತು. ಮದುವೆಗಾಗಿ ಸುಮಾರು 15 ಲಕ್ಷ ಹಣ ಬೇಕೆಂದು ಮಂಜುನಾಥ್ ಗೆ ತಿಳಿಯಪಡಿಸಿದ. ಅದಕ್ಕಾಗಿ ನಮಗೆ ಇದ್ದ ಒಂದು ಮನೆಯನ್ನು ಮಾರಾಟ ಮಾಡಲು ಸಿದ್ಧತೆ ನಡೆಸಿದ್ದ. ಇದನ್ನು ಕೇಳಿಸಿಕೊಂಡ ಗೆಳೆಯ ಮಂಜುನಾಥ್ ನಿನ್ನ ಮನೆ ಮಾರಾಟ ಮಾಡುವುದು ಬೇಡ, ಸಾಧ್ಯವಾದರೆ ನಿನ್ನ ಕಷ್ಟವನ್ನು ಶಾಲಾ ದಿನಗಳ ಗೆಳೆಯರ Whatsapp ಗ್ರೂಪ್ ನಲ್ಲಿ ಹಾಕು. ಯಾರು ಯಾರು ಎಷ್ಟು ಸಹಾಯ ಮಾಡುತ್ತಾರೋ ಮಾಡಲಿ. ಉಳಿಕೆ ಹಣವನ್ನು ಸಾಲದ ರೂಪದಲ್ಲಿ ನಾನು ಕೊಡುತ್ತೇನೆ ಎಂದನು. Whatsapp ಗ್ರೂಪಿನಲ್ಲಿ ಸುಮಾರು 5 ಲಕ್ಷ ರೂ.ಗಳ ಹಣ ಸಾಲದ ರೂಪದಲ್ಲಿ ಕೊಡಲು ಸ್ನೇಹಿತರು ಒಪ್ಪಿಕೊಂಡರು. ಉಳಿಕೆ 10 ಲಕ್ಷ ರೂ.ಗಳನ್ನು ಮಂಜುನಾಥ್ ತನ್ನ ಗೆಳೆಯನಿಗೆ ನೀಡಿದ. ಮನೆ ಮಾರಾಟ ಮಾಡುವುದು ತಪ್ಪಿತು. ಮದುವೆ ನಡೆಯಿತು. 5 ವರ್ಷಗಳ ನಂತರ ತನ್ನ ಸಂಪೂರ್ಣ ಸಾಲವನ್ನು ಆತನ ಗೆಳೆಯ ಮರುಪಾವತಿಸಿದ."  ಗೆಳೆತನವೆಂದರೆ ಹೀಗೂ ಇರಬಹುದಲ್ಲವೇ!
ಚರ್ಚಿನಲ್ಲಿ ಕನ್ಫೆಷನ್ ಬಾಕ್ಸ್ ಗೆ ಹೋಗಿ ಕಷ್ಟ, ನೋವು, ಅವಮಾನ, ಸಂಕಟ ಹಾಗೂ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ. ಕನ್ಫೆಷನ್ ಬಾಕ್ಸ್ ನ ಒಳಗೆ ಕುಳಿತ ಪಾದ್ರಿ ಆ ಕಷ್ಟ, ನೋವುಗಳಿಗೆ ಸ್ಪಂದಿಸುತ್ತಾರೆ ಹಾಗೂ ಸಲಹೆ ಕೊಡುತ್ತಾರೆ. ಗೆಳೆತನದಲ್ಲಿಯೂ ಯಾವುದೇ ಮುಚ್ಚು ಮರೆಯಿಲ್ಲದೆ ಎಲ್ಲವನ್ನೂ ಹೇಳಿಕೊಳ್ಳುವುದಕ್ಕೆ ಅವಕಾಶವಿರಬೇಕು. ಎದುರಿಗಿದ್ದ ಗೆಳೆಯ ಎಲ್ಲವನ್ನೂ ಕೇಳಿಸಿಕೊಂಡು ಪರಿಹಾರ ನೀಡುವ ಆಪ್ತತೆ ತೋರಬೇಕು.

ಈ ಮೇಲ್ಕಂಡ ಲೇಖನದ ಕುರಿತಾಗಿ ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ Comment Box ನಲ್ಲಿ ತಿಳಿಸಿ ಹಾಗೂ ನಿಮ್ಮ ಇದೇ ರೀತಿಯಾದಂತಹ ಅನುಭವಗಳಾಗಿದ್ದಲ್ಲಿ ಅವುಗಳನ್ನು ಬರೆದು ಕಳುಹಿಸಿಕೊಡಿ. ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು. ಇಲ್ಲಿ ಪ್ರಕಟಿಸುವುದರಿಂದ ಸಾವಿರಾರು ಜನಕ್ಕೆ ಈ ಲೇಖನವು Whatsapp ಹಾಗೂ ಅಂತರ್ಜಾಲ ತಾಣದಲ್ಲಿ ತಲುಪಿ ಹಲವರಿಗೆ ಉಪಯುಕ್ತವಾಗಬಹುದು.


ರಮೇಶ ಎಂ.ಎಚ್.
ನಿರಾತಂಕ
0 Comments



Leave a Reply.

    Categories

    All
    Others
    Personality Developement
    Quotes
    YouTube ವಿಡಿಯೋಸ್
    ಕಥೆಗಳು
    ಕವನಗಳು
    ಪುಸ್ತಕ ಪರಿಚಯ

    Picture

    RAMESHA NIRATANKA ​

    NATIONAL ASSOCIATION OF PROFESSIONAL SOCIAL WORKERS IN INDIA 
    ( NAPSWI ) 
    YOUNG ACHIEVERS AWARDEE-2019​

    Read More

    Picture

    Ramesha for Ullal Ward

    Join WhatsApp Channel

    Niruta Publications

    Social Workers- Karnataka

    Leaders Talk

    Ramesha Niratanka

    RSS Feed


Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com